Saturday, May 12, 2018

“ಜನ ಮರುಳೋ ಜಾತ್ರೆ ಮರುಳೋ...”


            “ಜನ ಮರುಳೋ ಜಾತ್ರೆ ಮರುಳೋ...” ಇದೊಂದು ನಾಣ್ಣುಡಿ ಸಾಮಾನ್ಯವಾಗಿ ಹೇಳುವುದುಂಟು. ಲೋಕಾಭಿರಾಮವಾಗಿ ಹಾಗೆ ಬಂದು ಹೀಗೆ ಹೋಗುವ ಮಾತು ಇದು. ಇದರ ಬಗ್ಗೆ ಯೋಚಿಸುವಾಗ ಗಹನವಾದ ವಿಚಾರಗಳು ಯೋಚನೆಗೆ ಬರುತ್ತವೆ.

            ಮುಖ್ಯವಾಗಿ ಮನುಷ್ಯನಿಗೆ ತನ್ನ ಮೇಲೆ ವಿಶ್ವಾಸ ಇಲ್ಲದಿರುವುದೇ ಇದಕ್ಕೆ ಕಾರಣ.  ಬೇರೆ ಊರಿಗೆ ಪ್ರಯಾಣಿಸುವುದಕ್ಕೆ ಬಸ್ಸು ನಿಲ್ದಾಣದಲ್ಲಿ ಬಂದು ನಿಲ್ಲುತ್ತೇವೆ.  ಆ ಊರಿಗೆ ಹೋಗುವ ಹಲವಾರು ಬಸ್ಸುಗಳು ಬಂದು ನಿಲ್ಲುತ್ತವೆ. ಆದರೆ ಅದರಲ್ಲಿ ಏರುವುದಕ್ಕೆ ಮನಸ್ಸಾಗುವುದಿಲ್ಲ. ಕಾರಣ, ಜನಜಂಗುಳಿ ಕುಳಿತುಕೊಳ್ಳುವುದಕ್ಕೆ ಬಿಡಿ ನಿಲ್ಲುವುದಕ್ಕೂ ಜಾಗವಿಲ್ಲ ಎಂದುಕೊಂಡು ನಂತರದ ಬಸ್ಸಿಗೆ ಕೊರಳುದ್ದ ಮಾಡುತ್ತೇವೆ.  ಎಲ್ಲೋ ಒಂದು ದೇವಸ್ಥಾನವಿದೆ. ಊರು ಪರ ಊರಿನಿಂದ ಹಲವಾರು ಜನರು ಬಂದು ಸೇರುತ್ತಾರೆ. ನಿತ್ಯವೂ ಅಲ್ಲಿ ಜಾತ್ರೆ. ದೇವರ ದರ್ಶನಕ್ಕೆ ಸರತಿಯಲ್ಲಿ ನಿಲ್ಲಬೇಕಾಗುತ್ತದೆ. ಹಾಗಿದ್ದರೂ ಅಲ್ಲಿ ಹೋಗುವ ಕುತೂಹಲ ಮೂಡುತ್ತದೆ. ದೇವರ ದರ್ಶನ ಮಾಡಿಯೇ ತೀರುವ ಎಂದು ಸರದಿಯಲ್ಲಿ ನಿಂತುಬಿಡುತ್ತೇವೆ.

            ಎಲ್ಲೋ ಒಂದು ಮೂಲೆಯ ಅಥವಾ ನಮ್ಮ ಪಕ್ಕದ ಪುಟ್ಟ ಗುಡಿ ಅಥವಾ  ದೇವಾಲಯಕ್ಕೆ ಹೋಗುವುದಕ್ಕೆ ಮನಸ್ಸಾಗುವುದಿಲ್ಲ. ಸರದಿ ಸಾಲಿನಲ್ಲಿ ನಿಲ್ಲುವ ದೇವಾಲಯವೇ ಪ್ರಿಯವಾಗುತ್ತದೆ. ಒಂದೇ ಊರಿಗೆ ಹೋಗುತ್ತಿರುವ ಬಸ್ಸನ್ನು ಜನಜಂಗುಳಿ ಎಂದು ಬಿಟ್ಟು ಬಿಡುತ್ತೇವೆ. ಜನ ಜಂಗುಳಿ ಹೆಚ್ಚಿದೆ ಎಂದು ದೇವಾಲಯದ ಸರದಿಯಲ್ಲಿ ನಿಂತುಬಿಡುತ್ತೇವೆ.  ಎಲ್ಲಾ ಬಸ್ಸುಗಳೂ ಒಂದೇ ಗುರಿಯತ್ತ ನಮ್ಮನ್ನು ಕರೆದೊಯ್ಯುತ್ತವೆ. ಎಲ್ಲಾ ದೇವಾಲಯದ ಮೂಲ ತತ್ವ ಒಂದೇ. ಎಲ್ಲವೂ ನಮ್ಮನ್ನು ಮೋಕ್ಷದೆಡೆಗೆ ಕರೆದೊಯ್ಯುವ ಮಾಧ್ಯಮಗಳು. ಕಾರಣವಿಷ್ಟೇ ನಮ್ಮಲ್ಲಿನ ವಿಶ್ವಾಸದ ಕೊರತೆ. ನಮ್ಮೊಳಗಿನ ಆತ್ಮಕ್ಕೆ ಎಸಗುವ ವಂಚನೆ ಇದು.  ಭಕ್ತರು ಸೇರದ  ನಮ್ಮ ಪಕ್ಕದ ದೇವಾಲಯದ ದೇವರಲ್ಲಿ ಇರದ ವಿಶ್ವಾಸ ದೂರದ ಎಲ್ಲೋ ಜನಜಂಗುಳಿಯ ನಡುವೆ ಇರುವ ದೇವರಲ್ಲಿ ಮೂಡುತ್ತದೆ. ಅದರಂತೆ  ನಮ್ಮೊಳಗಿನ ಆತ್ಮದಲ್ಲಿ ಸ್ಥಿರವಾಗಿ ನಿಂತಿರುವ ಪರಮಾತ್ಮನನ್ನು ಕಾಣುವುದಿಲ್ಲ. ಕಾರಣವಿಷ್ಟೇ  ನಮ್ಮ ಸ್ವಾರ್ಥ. ದೇವರೆಂದರೆ ವರವನ್ನು ಕೊಡುವುದಕ್ಕಾಗಿಯೇ ಇರುವವನು.  ದೂರದ ದೇವಸ್ಥಾನಕ್ಕೆ ಹೋದರೆ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸ. ಏನನ್ನೋ ಪಡೆದುಕೊಳ್ಳುವ ಹಂಬಲ. ನಮ್ಮಲ್ಲಿ ಇಲ್ಲದೇ ಇರುವುದನ್ನು ಹೊರಗೆ ಹುಡುಕುವುದು ಸಹಜ.

ನಮ್ಮಲ್ಲಿ ಇರದೇ ಇರುವ  ಅಗತ್ಯದ ವಸ್ತುಗಳನ್ನು ನಾವು ಹೊರಗೆ ಅರಸುತ್ತೇವೆ. ಅದಕ್ಕಾಗಿ ಅಲೆಯುತ್ತೇವೆ. ನಮ್ಮಲ್ಲಿ ಇಲ್ಲವಲ್ಲಾ ಎಂದು ಹಪ ಹಪಿಸುತ್ತೇವೆ. ಹಾಗಾಗಿ ಸದ್ಗುಣ ಸನ್ಮಸ್ಸು ಸದ್ಬಾವನೆ ಇವುಗಳನ್ನೇಲ್ಲ ನಾವು ಹೊರಗೆ ಪರರಲ್ಲಿ ಅರಸುವುದು. ನಮ್ಮಲ್ಲಿ ಅದು ಇಲ್ಲ. ನಮಗೆ ಅದರ ಆವಶ್ಯಕತೆ ಇರುವಾಗ ಹೊರಗೆ ಸಿಗಬೇಕೆಂಬ ಹಂಬಲ. ಒಂದು ವೇಳೆ ನಮ್ಮಲ್ಲಿ ಇವುಗಳೆಲ್ಲ ಇದ್ದರೂ ,  ನಮ್ಮಲ್ಲಿರುವ ಒಳ್ಳೆಯ ಗುಣದಿಂದ ಇನ್ನೊಬ್ಬರಿಗೆ ಒಳಿತಾಗುತ್ತದೆ ಎಂದಾಗ ಕೆಲವೊಮ್ಮೆ ಅದನ್ನು ಪ್ರಕಟ ಪಡಿಸಲೂ ಸ್ವಾರ್ಥ ಬಿಡುವುದಿಲ್ಲ.

ಊರೂರು ಸುತ್ತುವ  ಭಕ್ತನೊಬ್ಬ ಮನೆಗೆ ಬಂದಾಗ ಮನೆಯ ಹಿರಿಯ ಅಜ್ಜಿಯೊಬ್ಬಳು ಅಂಗಳದಲ್ಲಿ ಏನನ್ನೋ ಹುಡುಕುತ್ತಿರುತ್ತಾಳೆ. ಬಂದ ಭಕ್ತ ಅಜ್ಜಿಯಲ್ಲಿ ಕೇಳುತ್ತಾನೆ. “ ಏನನ್ನು ಹುಡುಕುತ್ತಿರುವೆ?  ಅಜ್ಜಿ ಹೇಳುತ್ತಾಳೆ,
“ಚಿನ್ನದ ಮೂಗುತಿ ಕಳೆದು ಹೋಗಿದೆ ಹುಡುಕುತ್ತಿರುವೆ.”
ಭಕ್ತ ಕೇಳುತ್ತಾನೆ...” ಎಲ್ಲಿ ಕಳೆದುಹೋಯಿತು?”
“ ಅಡಿಗೆ ಮನೆಯಲ್ಲಿ ಏನೋ ಕೆಲಸ ಮಾಡುತ್ತಿರಬೇಕಾದರೆ ಬಿದ್ದು ಹೋಯಿತು. ಅದನ್ನು ಹುಡುಕುತ್ತಾ ಇದ್ದೇನೆ ಅಲ್ಲಿ ಕತ್ತಲೆ ಏನೂ ಕಾಣಿಸುವುದಿಲ್ಲ ಅದಕ್ಕೆ ಇಲ್ಲಿ ಹುಡುಕುತ್ತಿದ್ದೇನೆ. ”
ಅಜ್ಜಿಯ ಮೂರ್ಖತನಕ್ಕೆ  ಭಕ್ತನಿಗೆ ನಗು ಬರುತ್ತದೆ. ಆತ ಅಜ್ಜಿಯಲ್ಲಿ ಹೇಳುತ್ತಾನೆ. “ ಒಳಗೆ ಕಳೆದು ಹೋದ  ಮೂಗುತಿಯನ್ನು ಇಲ್ಲಿ ಹೊರಗೆ ಬಂದು ಹುಡುಕುವೆಯಲ್ಲ. ಒಳಗೆ ಬೆಳಕು ಉರಿಸಿ  ಹುಡುಕ ಬಹುದಲ್ಲಾ?”
ಆಗ ಅಜ್ಜಿ ಹೇಳುತ್ತಾಳೆ, “ ನೀನಾದರೂ ಅಷ್ಟೇ ನಿನ್ನೊಳಗಿನ ದೇವರನ್ನು ಕಾಣುವುದಿಲ್ಲ. ಎಲ್ಲೋ ಊರೂರು ಸುತ್ತಿ ಅಲ್ಲಿ ದೇವರನ್ನು ಹುಡುಕುತ್ತಿರುವೆ. ನಿನ್ನೊಳಗಿನ ದೇವರನ್ನು ನೋಡುವುದಕ್ಕೆ ನಿನಗೆ ಸಾಧ್ಯವಾಗುವುದಿಲ್ಲ. ಅದನ್ನು ನೋಡುವುದಕ್ಕೆ ಬೆಳಕು ಇರಬೇಕು.” ಇಲ್ಲಿ ಬೆಳಕು ಅಂದರೆ  ಜ್ಞಾನ. ಆದರೆ ಈ ಜ್ಜಾನ ಮೂಡಬೇಕಾದರೆ ನಮ್ಮಲ್ಲಿ ಸನ್ಮಸ್ಸು ಸದ್ಭಾವನೆ ಮೂಡಬೇಕು. ಅದನ್ನೆಲ್ಲ ಮೂಡಿಸುವ ವಿಶ್ವಾಸವೂ ಜಾಗ್ರತವಾಗಬೇಕು.

No comments:

Post a Comment