Thursday, May 17, 2018

ರಾಜಕಾರಣಗಳು....



ಒಂದು ಸಭ್ಯ ಕುಟುಂಬ, ಅಥವಾ ಸಭ್ಯ ಅಪ್ಪ ಅಮ್ಮ ತಮ್ಮ ಮನೆಯ ಮಕ್ಕಳು ತಾವು ಹೆತ್ತ ಮಗು ಏನು ಆಗ ಬೇಕು ಎಂದು ಕನಸು ಕಟ್ಟಿ ನಿರೀಕ್ಷೆ ಇಟ್ಟುಕೊಳ್ಳುವುದನ್ನು ಗ್ರಹಿಸುವುದು ಕಷ್ಟ. ಒಬ್ಬೊಬ್ಬರದೂ ಒಂದೊಂದು ನಿರೀಕ್ಷೆಗಳು ಇರುತ್ತವೆ. ಅದನ್ನು ಕಲ್ಪಿಸುಕೊಳ್ಳುವುದು ಕಷ್ಟ. ಆದರೆ ತಮ್ಮ ಮಕ್ಕಳು ಏನು ಆಗಬಾರದು ಎಂದು ಬಯಸುತ್ತಾರೋ ಅದಕ್ಕೆ ಒಂದನ್ನಂತೂ ಖಂಡಿತವಾಗಿ  ಹೇಳಬಹುದು. ಏನದು?  ನಮ್ಮ ಮಕ್ಕಳು ಏನಾಗಬಾರದು ಎಂಬುದನ್ನು ಸಭ್ಯರಾದ ಅಪ್ಪ ಅಮ್ಮ ಸುಲಭದಲ್ಲಿ ಹೇಳಬಹುದು. ಅಥವಾ ಒಪ್ಪಿಕೊಳ್ಳಬಹುದು. ಅದೆಂದರೆ ಭಾರತದ “ರಾಜಕಾರಿಣಿ”.  ಹೌದು ನಮ್ಮ ಮಕ್ಕಳು ರಾಜಕಾರಿಣಿಯಾಗಬೇಕೆಂದು ಯಾವೊಬ್ಬ ಅಪ್ಪ ಅಮ್ಮನೂ ಬಯಸಲಾರರು. ಇದು ಒಂದು ಸಭ್ಯ ಸಮಾಜದಲ್ಲಿ ರಾಜ ಕಾರಿಣಿಗೆ ಹಿಡಿದಿರುವ ಕನ್ನಡಿ. ಇದಕ್ಕೆ ಹಲವು ಆಕ್ಷೇಪಗಳು ಸಮಜಾಯಿಷಿಗಳು ಸ್ಪಷ್ಟೀಕರಣಗಳು ಇರಬಹುದು. ಏನಿದ್ದರೂ ರಾಜಕಾರಿಣಿಯಾಗಬಬೇಕೆಂದು ಸ್ವತಹ ಮಗ ಮಗಳು ಬಯಸಬಹುದು. ಆದರೆ ಅಪ್ಪ ಅಮ್ಮ ಬಯಸಲಾರರು. ಇದು ಕಠೋರ ಸತ್ಯ.

ಯಾಕೆ ಹೀಗೆ ಯೋಚಿಸಿದರೆ ಹಲವು ಕಾರಣಗಳು ಸಿಗಬಹುದು. ಅದರೂ ಯಾರೂ ಈ ಕಾರಣದ ಬಗ್ಗೆ ಯೋಚಿಸುವುದಿಲ್ಲ. ಒಮ್ಮೆ ರಾಜಕಾರಿಣಿಯಾದರೆ ಬದಲಾಗುವ ಜೀವನ ಶೈಲಿಯಲ್ಲಿ ಎಲ್ಲ ಕಾರಣಗಳು ಕೆಲವೊಮ್ಮೆ ಮುಚ್ಚಿಹೋಗುತ್ತವೆ. ಸಮಾಜ ಸೇವೆ ಪರೋಪಕಾರ ಹೀಗೆ ತೊಡಗುವುದು ಬಹುತೇಕ ಅಂತ್ಯವಾಗುವುದು ಅಥವಾ  ಗುರಿ ಸೇರುವುದು ಪವಿತ್ರ ಕಡಲಿಗಲ್ಲ,  ರಾಜಕೀಯವೆಂಬ ಕೊಚ್ಚೆಗುಂಡಿಗೆ . ಇದಕ್ಕೆ ಬಹಳಷ್ಟು ನಿದರ್ಶನಗಳು ಸಿಗಬಹುದು. ಒಂದೆರಡು ಅಪವಾದಗಳಿದ್ದರೂ ಅದು ಬಹಳ ಕ್ಷೀಣ.

ಜಗವೇ ನಾಟಕರಂಗ ಅಂತ ಕವಿಯೊಬ್ಬ ಹಾಡಿದರೆ, ನಾಟಕದ ಒಳಗೆ ನಾಟಕವನ್ನು ಆಡುವುದು ರಾಜಕೀಯದಲ್ಲಿ.  ಯಾವ ಕೆಟ್ಟ ದೂರಾಲೋಚನೆ ಇದ್ದರೆ ಅದಕ್ಕೆ ಅಡ್ಡ ಹೆಸರೇ ರಾಜಕೀಯ, ರಾಜ ಕಾರಣ. ಯಾಕೇ ಹೀಗೆ?  ಒಂದು ಪವಿತ್ರವಾದ ಆದರ್ಶಮಯವಾದ ಸಮಾಜ ಮುಖವನ್ನು ಕಲುಷಿತಗೊಳಿಸುವ ಪ್ರಮೇಯ ಯಾಕೆ ಬಂತು? ಊಹಿಸುವುದು ಕಷ್ಟ. ಸ್ವಾತಂತ್ರ್ಯ ಪೂರ್ವದಲ್ಲಿ ರಾಜಕಾರಣವೆಂದರೆ ಅದಕ್ಕೆ ಬಹಳಷ್ಟು ಗೌರವವಿರುತ್ತಿತ್ತು. ಯಾರು ತನ್ನ ನೆಲದ ಬಗ್ಗೆ ದೇಶದ ಬಗ್ಗೆ ಅಭಿಮಾನವಿರುಸುತ್ತಾನೋ ಅಂತಹವನು ಮಾತ್ರವೇ ಪವಿತ್ರವಾದ ರಾಜಕಾರಣಕ್ಕೆ ಅರ್ಹನಾಗಿಬಿಡುತ್ತಿದ್ದ. ವಿದ್ಯಾವಂತನಾದವನು ಮಾತ್ರವೇ ರಾಜಕೀಯಕ್ಕೆ ಇಳಿದು ಬಿಡುತ್ತಿದ್ದ. ಆದರೆ ಇಂದು ವಿದ್ಯಾಭ್ಯಾಸದ ಅಗತ್ಯವೇ ಇರುವುದಿಲ್ಲ.   ಸ್ವಾತಂತ್ರ್ಯ ನಂತರ ಭಾರತದ ಉದ್ದಗಲಕ್ಕೂ ಹರಿಯುವ ಗಂಗೆಯಾಗಲೀ ಕಾವೇರಿಯಾಗಲಿ ಕಲುಷಿತ ಗೊಂಡಿತು. ಅದನ್ನಾದರೂ ಶುದ್ಧೀಕರಿಸಿ ಮನುಷ್ಯ ಜೀವದ ತೃಷೆಯನ್ನು ನೀಗಿಸಬಹುದು. ಆದರೆ ಈ ರಾಜಕಾರಣ ಶುದ್ದವಾಗುವುದು ಕನಸಿನಲ್ಲೂ ಸಾಧ್ಯವಾಗದ ಮಾತು.

ಈಗ ಹಳ್ಳಿಯ ಸರಕಾರಿ ಶಾಲೆಗಳಿಗೆ ಮಕ್ಕಳೇ ಹೋಗುವುದಿಲ್ಲ. ಮಕ್ಕಳಿಲ್ಲದೆ ಶಾಲೆಯ ದೊಡ್ಡ ಕಟ್ಟಡ ಭಿಕೋ ಎನ್ನುತ್ತಿರಬಹುದು. ಆದರೆ ಚುನಾವಣೆ ಬಂತೆಂದರೆ ಆ ಒಂದು ದಿನವಾದರೂ ಊರವರೆಲ್ಲ ಅಲ್ಲಿಗೆ ಹೋಗುತ್ತಾರೆ. ಬಹುಶಃ ಶಾಲೆಯ ಮೆಟ್ಟಲು ತುಳಿಯದ ರಾಜಕಾರಿಣಿಗಳೂ ಸಹ ಇದಕ್ಕಾಗಿಯಾದರೂ ಆ ಒಂದು ದಿನ  ಶಾಲೆಯ ಮೆಟ್ಟಲು ತುಳಿಯುತ್ತಾರೆ. ಉಳಿದಂತೆ ಈ ಶಾಲೆ ಯಾಕಾಗಿ ಇದೆ ಎಂಬುದೇ ಮರೆತು ಹೋಗುತ್ತದೆ. ಇಲ್ಲಿ ವಾಹನ ಪರವಾನಿಗೆ ತೆಗೆದುಕೊಳ್ಳುವುದಕ್ಕೂ....ಎಲ್ಲಾದರೂ ಚಪ್ರಾಸಿ ಕೆಲಸ ಮಾಡುವುದಕ್ಕೂ ಹೋಗಲಿ ಯಾವುದೋ ಕಛೇರಿಯಲ್ಲಿ ಚಹಾ ಕಾಪಿ ತಂದುಕೊಟ್ಟು  ಪರಿಚಾರಕನ ಕೆಲಸ ಮಾಡುವುದಕ್ಕೂ  ಕೊಂಚ ವಿದ್ಯಾಭ್ಯಾಸದ ಅರ್ಹತೆ ಇರಲೇ ಬೇಕು. ಆದರೆ ರಾಜಕಾರಿಣಿಯಾಗುವುದಕ್ಕೆ?  ಸಮಾಜಕ್ಕೆ ತೀರ ಅನಿವಾರ್ಯವಾಗುವುದಕ್ಕೆ ಯಾವ ಅರ್ಹತೆಯೂ ಬೇಡ. ಕೈಯಲ್ಲಿ ದಮ್ಮಡಿ ಇದ್ದರೆ ಸಾಕು.

ಚುನಾವಣೆ ಬಂದಾಗ ರಾಜಕಾರಣಿಗಳು ಪರಮ ಭಕ್ತರಂತೆ ಉದ್ದ ನಾಮ ಬಳೆದು ದೇವಸ್ಥಾನಕ್ಕೆ ಹೋಗುತ್ತಾರೆ. ದೇವರ ಮುಂದೆ ಭಕ್ತಿಯಿಂದ ಕೈ ಮುಗಿಯುತ್ತಾರೆ . ಇದನ್ನು ನೋಡಿದರೆ  ರಾತ್ರಿ ಕದಿಯುವುದಕ್ಕೆ ಹೋಗುವ ಕಳ್ಳನೂ ಸಹ ಊರ ಗುಡಿಯ ಬಾಗಿಲಿಗೆ ಬಂದು ಕೈ ಮುಗಿಯುವ ನೆನಪಾಗುತ್ತದೆ. ಯಾಕೆಂದರೆ ಹೆಚ್ಚು ಕಮ್ಮಿ ಎರಡು ಕಡೆಯ  ಪ್ರಾರ್ಥನೆ ಒಂದೇ ಆಗಿರುತ್ತದೆ. ತಾನು ಮಾಡುವ ಕೆಲಸದಲ್ಲಿ ಜಯ ಸಿಗಲಿ ಎಂದು ಪರಮ ಚೋರನೂ ದೇವರಲ್ಲಿ ಪ್ರಾರ್ಥಿಸಿ ಹರಕೆ ಹೊರುತ್ತಾನೆ. ರಾಜಕಾರಿಣಿಯ ಪ್ರಾರ್ಥನೆ ದೇವರಿಗೂ ಅರ್ಥವಾಗದು.

ಮೈಕ್ ನಲ್ಲಿ ನಿಮ್ಮ ಅಮೂಲ್ಯವಾದ ಮತ, ಮುತ್ತಿನಂತಹ ನವರತ್ನದಂತಹ ಮತ.....ಮತದಾರನ ಬೆರಳ ತುದಿಯ ಕೆಲಸಕ್ಕೆ ಪವಿತ್ರವಾದ ಮೌಲ್ಯವನ್ನು ಕಟ್ಟುವ ರಾಜಕಾರಿಣಿ ಹಿಂಬಾಗಿಲ ಮೂಲಕ ಯಾವುದೇ ನಾಚಿಕೆ ಇಲ್ಲದೇ  ಅದೇ ಮತಕ್ಕೆ ಐನೂರು ಸಾವಿರ ಬೆಲೆ ನಿಗದಿ ಮಾಡುತ್ತಾನೆ.  ಒಬ್ಬ ಸಭ್ಯ ಮನುಷ್ಯ ತನ್ನನ್ನು ಇನ್ನೊಬ್ಬರಿಗೆ ಆಗದೇ ಇದ್ದರೆ  ಅವರ ಹತ್ತಿರ ಸುಳಿಯುವುದಿಲ್ಲ. ಅವರ ಸಹವಾಸಕ್ಕೆ ಹೋಗುವುದಿಲ್ಲ. ತನ್ನ ಪಾಡಿಗೆ ತಾನಿರುತ್ತಾ ತನ್ನನ್ನು ಯಾರು ಒಪ್ಪಿಕೊಳ್ಳುತ್ತಾರೋ ಅವರ ಜತೆಯಲ್ಲಿ ಇರುತ್ತಾನೆ. ಆದರೆ ರಾಜಕಾರಿಣಿ?  ತನ್ನನ್ನು ಯಾರೂ  ಒಪ್ಪದೇ ಇದ್ದರೂ ಪರವಾಗಿಲ್ಲ ಸ್ವಾರ್ಥ ಒಂದೇ ಪರಮ ಗುರಿಯಾಗುತ್ತದೆ.  

ಒಬ್ಬ ರಾಜಕಾರಣಿ ಇಂದು ಒಂದು ಮಾತು ಘಂಟಾ ಘೋಷವಾಗಿ ಸಾರುತ್ತಾನೆ. ಆದರೆ ಆತನಿಗೆ  ಅರಿವಿದೆ, ತನ್ನ ಮಾತು  ಯಾರೂ ನಂಬುವುದಿಲ್ಲ ಎಂದು. ಆದರೂ ಹೇಳಿಬಿಡುತ್ತಾನೆ. ವರ್ತಮಾನದಲ್ಲಿ ಹೇಳಿದ ಮಾತು ಮತ್ತೊಂದು ಕ್ಷಣಕ್ಕೆ ಬದಲಾಗಬಹುದು. ಸುಳ್ಳು  ಸತ್ಯಗಳ ವೆತ್ಯಾಸದ ಗೆರೆಯನ್ನೇ ಇಲ್ಲಿ ಅಳಿಸಲಾಗುತ್ತದೆ. ತನ್ನಲ್ಲೊಬ್ಬನಲ್ಲಿ ಬಿಟ್ಟು ಮಿಕ್ಕುಳಿದವರಲ್ಲಿ ಅರಸುವುದೇ ನೈತಿಕತೆ.

ಎಂತಹ ವಂಚಕನಾದರೂ ತನ್ನ ವಂಚನೆ ಬಯಲಾದಾಗ ಮುಖ ಮರೆಸಿಕೊಳ್ಳುತ್ತಾನೆ. ಪೋಲೀಸರು ಖೈದಿಗಳನ್ನು ಕರೆದುಕೊಂಡು ಹೋಗುವಾಗ ಗಮನಿಸಬಹುದು. ಆದರೆ ರಾಜ ಕಾರಣದಲ್ಲಿ ವಂಚನೆ ಬಯಲಾದರೂ ಅಳುಕಿಲ್ಲದೆ ಮುಖ ತೋರಿಸಿಬಿಡುತ್ತಾರೆ.  ಮುಖವೆಲ್ಲಿಂದ ಬಂತು  ಕ್ಷಣ ಕ್ಷಣಕ್ಕೂ ಆಕಾರ ಬದಲಿಸುವ ಅಮೀಬದ ಶರೀರದಲ್ಲಿ?  ಆತ್ಮ ಕಥೆಯಲ್ಲಿ ಆತ್ಮದ  ಬಗ್ಗೆ  ಹೇಗೆ ಇರುವುದಿಲ್ಲವೋ ಹಾಗೆ ಎಲ್ಲವೂ ಇಲ್ಲಿ ದ್ವಂದ್ವಗಳು. ಅಸಲಿಯತ್ತು ತಿಳಿದೋ ತಿಳಿಯದೆಯೋ ಹೇಗೆ ನಡೆಯಬೇಕೆಂಬ ಅನಧಿಕೃತ ನಿಯತಿಯೊಂದು ಇರುತ್ತದೆ. ಅದೇ ರೀತಿಯಲ್ಲಿ ನಡೆದು ಹೋಗುತ್ತದೆ.  ಸಿನಿಮಾ ನೋಡುವಾಗ ನೈಜವೋ ಏನೋ ಎಂದು ಭ್ರಮಾಧೀನನಾಗುವ ಪ್ರೇಕ್ಷಕ ಚಿತ್ರಮಂದಿರದಿಂದ ಹೊರಗೆ ಬರುತ್ತಿದ್ದಂತೆ ಇದು ನಿಜವಲ್ಲ ಎಂದು ಒಪ್ಪಿಕೊಳ್ಳುತ್ತಾನೆ. ನಿಜವಲ್ಲ ಎಂದು ತಿಳಿದಿದ್ದರೂ ಮತ್ತೂ ಮತ್ತೂ ಸಿನಿಮಾ ಮಂದಿರದಲ್ಲಿ ಹೋಗಿ ಕುಳಿತುಕೊಳ್ಳುವಂತೆ ಮತದಾರ ತಿಳಿದೂ ತಿಳಿದೂ ಮತ್ತೂ ಮತದಾನಿಯಾಗುತ್ತಾನೆ. ಆ ಏಕ್ ದಿನ್ ಕಾ ಬಾದ್ ಷಾ ಆಗುವುದರಲ್ಲೇ ಎನೋ ಸುಖವನ್ನು ಕಾಣುತ್ತಾನೆ.

No comments:

Post a Comment