Saturday, September 29, 2018

ನಮ್ಮ ಬೋಳಂಗಳ


        
            ಪರಮಾತ್ಮನ ನಿಯಮಗಳಿಗೆ ಮನುಷ್ಯ ಬದ್ದನಾಗಿರುತ್ತಾನೋ ಹೇಳುವುದು ಕಷ್ಟ,   ಆದರೆ ಪರಮಾತ್ಮನನ್ನೇ ತನ್ನ ನಿಯಮಗಳಿಗೆ ಒಳಪಡುವಂತೆ ಮಾಡುವಲ್ಲಿ ಮನುಷ್ಯ ಪ್ರಯತ್ನ ನಿರಂತರವಾಗಿರುತ್ತದೆ.  ಒಂದು ಸೇರು ಅನ್ನ ಕೊಡುವಲ್ಲಿ ಒಂದು ಮುಷ್ಟಿ ಅಕ್ಕಿ ಕೊಟ್ಟು ಪರಮಾತ್ಮನನ್ನು ತೃಪ್ತಿ ಪಡಿಸಿ ತಾನು ತೃಪ್ತನಾಗುವಾಗ ಮನುಷ್ಯ ಯೋಚಿಸುವುದು ಎಲ್ಲದಕ್ಕಿಂತಲೂ ಭಕ್ತಿ ಮುಖ್ಯ. ಹಲವು ಸಲ ತನ್ನಲ್ಲಿಲ್ಲದ ವಸ್ತುವಿನ ಮೇಲೆ ಮನುಷ್ಯನಿಗೆ ಅಚಲ ವಿಶ್ವಾಸ.  ಹಾಗಾಗಿ ಭಕ್ತಿಭಾವ ಇಲ್ಲದವನೂ ಸಹ  ಭಕ್ತಿಯೇ ಮುಖ್ಯ ಎಂದುಕೊಂಡು ಒಂದು ಮುಷ್ಟಿ ಅಕ್ಕಿ ಇಟ್ಟು ಭಗವಂತ ನನ್ನಿಂದ ಇಷ್ಟೇ ಸಾಧ್ಯ ಎಂದು ಪರಮಾತ್ಮನನ್ನು ತನ್ನ ನಿಯಮಗಳಿಗೆ ಒಳಪಡಿಸುತ್ತಾನೆ. ದೇವರೇನು ಬಂದು ನಿಂತು ನ್ಯಾಯ ಕೇಳುವುದಿಲ್ಲ. ಆದರೆ ಮನುಷ್ಯ ತನ್ನ ಜೀವನಾನುಭವದಿಂದ ನ್ಯಾಯ ಅನ್ಯಾಯ  ತನ್ನ ತಿಳುವಳಿಕೆಯಲ್ಲಿ ಕಂಡುಕೊಳ್ಳುತ್ತಾನೆ.  ಭಕ್ತಿ ಎಂಬುದು ಆಳ ಅಗಲ ವಿಸ್ತಾರ ವರಿಯದ ಒಂದು ಭಾವ. ಅದರ ಪರೀಕ್ಷೆಯಿರುವು ಅಂತರಂಗದಲ್ಲಿರುವ ಪ್ರಾಮಾಣಿಕತೆಯಲ್ಲಿ
  ಬೋಳಂಗಳ ಭೂತಸ್ಥಾನ  ಚಿತ್ರ ಕೃಪೆ ಹರ್ಷರಾಜ್ 
ಮಾತ್ರ. ಹಾಗೆ ನೋಡಿದರೆ ಭಗವದ್ಗೀತೆಯಲ್ಲಿ ಪರಮಾತ್ಮ ಹೇಳುತ್ತಾನೆ. ಯಾವುದೇ ಭಾವವಿಲ್ಲದೆ ಉದ್ವೇಗ ದುಃಖ ಸಂತೋಷ ರಹಿತ ಮನಸ್ಸಿನಿಂದ ಆರಾಧಿಸಿದಲ್ಲಿ ಮಾತ್ರವೇ ಅಲ್ಲಿ ನನ್ನ ಅನುಗ್ರಹವಿರುತ್ತದೆ. ಭಕ್ತಿ ಭಾವ ಅತಿಯಾಗಿ ಉದ್ವೇಗದಿಂದ ಕಣ್ಣೀರು ಹಾಕಿ ಪರಮಾತ್ಮನಿಗೆ ನಮಸ್ಕರಿಸಿದರೂ ಅದು ಭಕ್ತಿಯೂ ಆಗುವುದಿಲ್ಲ. ನಿಜಾರ್ಥದ ಪರಮಾತ್ಮನ ಸಾಕ್ಷಾತ್ಕರವೂ ಸಾಧ್ಯವಾಗುವುದಿಲ್ಲ.

            ನಮ್ಮೂರು ಪೈವಳಿಕೆ ಗ್ರಾಮದಲ್ಲಿ ಚಿಕ್ಕ ಹಳ್ಳಿಯೊಂದಿದೆ. ಬೋಳಂಗಳ. ಹೆಸರೇ ಸೂಚಿಸುವಂತೆ ಇಲ್ಲಿ ಜನವಾಸವಿಲ್ಲ. ಬೋಳಾದ ದೊಡ್ಡ ಮೈದಾನದಂತಹ ಪ್ರದೇಶ ಅದರಂಚಿಗೆ ತಾಗಿಕೊಂಡಂತೆ ಒಂದು ಭೂತಸ್ಥಾನ. ತೀರ ನಿರ್ಜನ ಪ್ರದೇಶ. ಆಕಡೆ ಈಕಡೆ ಅಡ್ಡಾಡುವವರೂ ಸಹ ಸಿಗುವುದು ಕಡಿಮೆ. ಎಂದಾದರೊಮ್ಮೆ ಇಲ್ಲಿರುವ ಕಾಣಿಕೆ ಡಬ್ಬಿಗೆ ಹರಕೆ ಒಪ್ಪಿಸಲು ಕೆಲವರು ಬರುವುದುಂಟು.  ಅತ್ಯಂತ ಪುರಾತನ ಭೂತಸ್ಥಾನ. ಇದರ ಐತಿಹ್ಯ ಚರಿತ್ರೆಯ ಬಗ್ಗೆ ಅರಿವಿರದಿದ್ದರೂ ಬಾಲ್ಯದಿಂದಲೇ ನಮಗೆ ಭೂತ ಎಂದರೆ ಭಯ ಭಕ್ತಿಯನ್ನು ಹುಟ್ಟುಹಾಕಿಸಿದಂತಹ ಸ್ಥಳವಿದು.  ಉಪ್ಪಳ ಕನ್ಯಾನ ರಸ್ತೆಯಲ್ಲಿ ಕವಲೊಡೆಯುವ ಚಿಪ್ಪಾರು ರಸ್ತೆಯ ಒತ್ತಿನಲ್ಲೇ ಈ ಕ್ಶೇತ್ರ ಸಿಗುತ್ತದೆ.  ಬೋಳಂಗಳವಾದರೂ ಇದು ನಯನ ಮನೋಹರ ಜಾಗವೆಂಬುದರಲ್ಲಿ ಅನುಮಾನವಿಲ್ಲ. ಸಾಯಂಕಲ ಇಲ್ಲ ಮುಂಜಾನೆ ಹೊತ್ತು ಇಲ್ಲಿ ಹೋಗಿ ಪಕ್ಕದಲ್ಲೇ ಇರುವ ಗುಡ್ಡದ ತುದಿಯಲ್ಲಿ ನಿಂತು ದೂರದ ಪಡುವಣ ಕಡಲನ್ನು ಕಾಣುವಾಗ ನಿಜಕ್ಕೂ ಇಲ್ಲಿ ಪರಮಾತ್ಮನ  ಪ್ರಕೃತಿಯ ಅಸ್ತಿತ್ವ ಇದೆ ಅಂತ ಅನ್ನಿಸುತ್ತದೆ.  ಅದು ಭಾವಜೀವಿಗಳಿಗಾದರೆ ಜನ ಸಾಮಾನ್ಯರಿಗೆ ಇರುವ ವಿಶೇಷ ಒಂದಿದೆ.  ಇಲ್ಲಿ ವರ್ಷಕ್ಕೊಮ್ಮೆ ನೇಮ (ಉತ್ಸವ) ಬಿಟ್ಟರೆ ಬಹುತೇಕ ಇಲ್ಲಿ ಚಟುವಟಿಕೆಗಳೇ ಇರುವುದಿಲ್ಲ. ಆದರೂ ಈ ಕ್ಷೇತ್ರದ ಬಗ್ಗೆ ಊರ ಪರ ಊರಿನವರು ಇರಿಸಿಕೊಂಡ ವಿಶ್ವಾಸ ಮಾತ್ರ ಆಶ್ಚರ್ಯ ಹುಟ್ಟಿಸುತ್ತದೆ. ಜಾತಿ ಭೇದವಿಲ್ಲದೆ  ಈ ವಿಶ್ವಾಸ ಇಂದಿಗೂ ನೆಲೆ ನಿಂತಿದೆ. ಅದಕ್ಕೊಂದು ನಿದರ್ಶನವಿದೆ.

            ಬಾಲ್ಯದಲ್ಲಿರುವಾಗ ಭೂತ ಎಂದರೇನು ಎಂಬ ಪ್ರಶ್ನೆಗೆ ನಮಗೆ ಉತ್ತರವಾದದ್ದು ಈ ಬೋಳಂಗಳದ ದೈವ.  ಇದರ ಉತ್ಸವವೂ ಬಹಳ ವಿಚಿತ್ರ. ಇದು ವರ್ಷಕ್ಕೊಮ್ಮೆ ಸಾಮಾನ್ಯವಾಗಿ ಪೆಬ್ರವರಿ ತಿಂಗಳಲ್ಲಿ ಜರಗುತ್ತದೆ. ಊರ ಉತ್ಸವವಾದರೂ ಇದರ ಸರಳತೆ ಅತ್ಯಂತ ವಿಶಿಷ್ಟ. ಎಲ್ಲ ಭೂತ ನೇಮದಂತೆ ಇದಲ್ಲ. ಸಾಯಂಕಾಲ ನಾಲ್ಕುಘಂಟೆಯ ಸುಮಾರಿಗೆ ಆರಂಭವಾಗುವ ಉತ್ಸವ ಸೂರ್ಯಾಸ್ತವಾಗುತ್ತಿದ್ದಂತೆ ಮುಗಿದು ಹೋಗುತ್ತದೆ. ಕೆಲವೇ ಘಳಿಗೆಗಳಷ್ಟು ಹೊತ್ತು ನಡೆಯುವ ಈ ಊರ ಜಾತ್ರೆ ಅತ್ಯಂತ ವಿಶಿಷ್ಟವಾಗುವುದು ಇನ್ನೊಂದು ವಿಚಾರಕ್ಕೆಕ್. ಇದು ಅತ್ಯಂತ ರೋಚಕ ವಿಷಯ. ಬಹುಶಃ ಇದುವೇ  ಬೋಳಂಗಳದ ವಿಶೇಷ ಮತ್ತು ವಿಚಿತ್ರ .
           
            ಉತ್ಸವದ ದಿನ ಮಧ್ಯಾನದ ಸುಡು ಬಿಸಿಲು ಕಡಿಮೆಯಾಗುತ್ತಿದ್ದಂತೆ ಅಕ್ಕ ಪಕ್ಕದ ಊರವರು ಬೋಳಂಗಳದತ್ತ ಆಗಮಿಸುತ್ತಾರೆ. ಸರಿ ಸುಮಾರು ಐನೂರು ಜನ ಸೇರಬಹುದೇನೋ. ಇಲ್ಲಿರುವುದು ಸಣ್ಣದಾದ ಒಂದು ಅವರಣ ಅದರೊಳಗೊಂದು ಗುಡಿ. ಗುಡಿ ಬಹಳ ಹಳೆಯದಾಗಿದೆ. ಸ್ವಲ್ಪ ಶಿಥಿಲವೂ ಆಗಿದೆ.  ಸಾಯಂಕಾಲವಾಗುತ್ತಿದ್ದಂತೆ  ಸಂತೆ ಇಡುವವರು ಜಾತ್ರೆಗೆ ಸೇರುವ ಊರವರು ಬ್ಯಾಂಡು ವಾದ್ಯದ ಗದ್ದಲ ಇಷ್ಟರಲ್ಲೇ ಭೂತದ ನೇಮ ಮುಗಿದು ಹೋದರು ಜನರ ಭಕ್ತಿ ವಿಶ್ವಾಸ ಇದಕ್ಕಿಂತಲೂ ಮಿಕ್ಕಿ ಅಗಾಧವಾದೆ. ಶುರುವಾಗಿ ಕೇವಲ ಎರಡು ಮೂರು ಘಂಟೆಯಲ್ಲಿ ಮುಗಿಯುವ ಉತ್ಸವ ಇಷ್ಟಕ್ಕೆ ಇದರ ಮಹತ್ವ ಸೀಮಿತವಾಗುವುದಿಲ್ಲ. ಇಲ್ಲಿರುವ ಮತ್ತೊಂದು ವಿಚಿತ್ರವೆಂದರೆ ಈಗಿನ ಕಾಲದಲ್ಲೂ ಇದನ್ನು ನಂಬುವುದು ಕಷ್ಟ ಆದರೂ ಇದು ಅಸ್ತಿತ್ವದಲ್ಲಿದೆ.
           
            ಕೆಲವು ಘಳಿಗೆಯ ಉತ್ಸವಕ್ಕೆ ಹೆಂಗಸರು ಅಂದರೆ ಸ್ತ್ರೀಯರು ಹೋಗುವಂತಿಲ್ಲ. ಯಾರೂ ಸಹ ಹೋಗುವುದೂ ಇಲ್ಲ. ಈ ಭೂತದ ನೇಮೋತ್ಸವವನ್ನು ಹೆಂಗಸರು ಹೆಣ್ಣು ಮಕ್ಕಳು ನೋಡುವಂತಿಲ್ಲ. ಹಾಗಾಗಿ ಇಲ್ಲಿ ಕೇವಲ ಪುರುಷರು ಮಾತ್ರವೇ ಬರುತ್ತಾರೆ. ಇದು ಕೇವಲ ಹಿಂದುಗಳ ನಂಬಿಕೆಯಲ್ಲ ಮುಸ್ಲಿಮ್  ಕ್ರಿಶ್ಚನ್ ಎಲ್ಲರೂ ಭಯ ಭಕ್ತಿಯಿಂದ  ಈ ನಿಯಮವನ್ನು ಪಾಲಿಸುತ್ತಾ ಬಂದಿದ್ದಾರೆ. ಹಾಗಾಗಿಯೆ ಉತ್ಸವದ ದಿನ ಬೆಳಗ್ಗಿನಿಂದಲೆ ಇಲ್ಲೇ ಹಾದು ಹೋಗುವ ದಾರಿಯಲ್ಲೂ ಸಹ ಯಾವುದೇ ಸ್ತ್ರೀಯರು ಸಂಚರಿಸುವುದಿಲ್ಲ.  ಹೆಣ್ಣುಗಳು ಈ ಭೂತವನ್ನು ನೋಡಿದರೆ ಏನಾಗುತ್ತದೆ ಎಂದು ಪೆದಂಬು ಪ್ರಶ್ನೆಸುವವರಿಗೆ ಉತ್ತರ ಒಂದೇ ಕಲ್ಲಾಗಿ ಹೋಗುತ್ತಾರೆ. ಬಹಳ ಹಿಂದೆ ಒಬ್ಬಾಕೆ ಭೂತ ಕಟ್ಟುವವನ ಹೆಂಡತಿಯೇ ಕಲ್ಲಾಗಿ ಹೋದ ಕಥೆಯನ್ನು ಊರ ಹಿರಿಯರು ಹೇಳುತ್ತಾರೆ. ಹೆಣ್ಣುಗಳಿಂದ ದೂರವಿರುವ ಈ ದೈವ ವೆಂದರೆ ಬಾಲ್ಯದಿಂದಲೇ ನಮಗೆ ಭಯ ಭಕ್ತಿಯನ್ನು ಮೂಡಿಸಿದ್ದಂತೂ ಸತ್ಯ. ನಮಗೆಂದೇನು ಊರಲ್ಲಿ ಎಲ್ಲರಿಗೂ  ಈ ಭಯ ಭಕ್ತಿ ನಂಬಿಕೆ ಇಂದಿಗೂ ಅಚಲವಾಗಿ ಅಸ್ತಿತ್ವದಲ್ಲಿದೆ.   ಎಷ್ತೇ ಕುತೂಹಲವಿದ್ದರೂ ಇದನ್ನು ಪರೀಕ್ಷಿಸುವ ಸಾಹಸ ಯಾರೂ ಮಾಡಿಲ್ಲ.

            ಇದೀಗ ಶಬರಿಮಲೆಯ ಸ್ತ್ರೀ ಪ್ರವೇಶ ವಿಚಾರ ಬಹಳ ಚರ್ಚಿತ ವಿಷಯ. ಶಬರಿಮಲೆ ಕೇವಲ ಇಷ್ಟಕ್ಕೇ ಅಲ್ಲ ಇಂತಹ ಇನ್ನೂ ಹಲವು ವಿಚಾರಗಳಿಗು ಕಥೆಗಳಿಗೂ ಪ್ರಸಿದ್ದ. ಆದರು ನಂಬುಗೆ ವಿಶ್ವಾಸಗಳು ಅದು ಮನುಷ್ಯನ ಭಾವನೆಗೆ ಸೀಮಿತವಾಗಿರುತ್ತದೆ. ಅದಕ್ಕೆ ನಿದರ್ಶನ ಈ ಸ್ತ್ರೀ ಪ್ರವೇಶ.  ಯಾವುದು ಸರಿ ಯಾವುದು ತಪ್ಪು ಎಂದು ವಿಶ್ಲೇಷಿಸುವುದು ನಮ್ಮ ಜ್ಞಾನಕ್ಕೂ ನಂಬುಗೆಗೂ ಸೀಮಿತವಾಗಿರುತ್ತದೆ. ನ್ಯಾಯಾಲಯ ಇದೀಗ ಎಲ್ಲ ಸ್ತ್ರೀಯರೂ ಪ್ರವೇಶಿಸಬಹುದು ಎಂದು ತೀರ್ಪನ್ನು ಇತ್ತಿದೆ. ಸ್ತ್ರೀಯರಿಗೆ ಪ್ರವೇಶವಿಲ್ಲ ಎಂಬ ನಿಯಮವನ್ನಷ್ಟೇ ನ್ಯಾಯಾಲಯ ತೆಗೆದು ಹಾಕಿದೆ. ಹೊರತು ಯಾವುದೇ ಸ್ತ್ರೀಯನ್ನು ಶಬರಿಮಲೆಯ ಬಾಗಿಲಲ್ಲಿ ನಿಲ್ಲಿಸಿ ಒಳಗೆ ತಳ್ಳಲಿಲ್ಲ. ಇದು ಗಮನಾರ್ಹ. ಅಥವಾ ಸ್ತ್ರೀಗಳು ಹೋಗಲೇ ಬೇಕು ಎಂಬ ನಿಯಮವನ್ನು ಮಾಡಲಿಲ್ಲ .  ಅಥವಾ ಮಾಡುವಂತೆಯೂ ಇಲ್ಲ. ವಿಷಯ ವಿವಾದ ಉಂಟುಮಾಡಿ ರೋಚಕತೆಯನ್ನು ಸೃಷ್ಟಿಸುವಾಗ ಈ ವಿಚಾರಗಳು ಗಮನಾರ್ಹವಾಗುತ್ತದೆ.  ಶಬರಿಮಲೆಯಲ್ಲಿ ಸ್ತ್ರೀ ಯರು ಹೋಗಬಹುದು ಬಿಡಬಹುದು, ಹೋದರೆ ಏನು ಎಂದು ಪರೀಕ್ಷಿಸಲೂ ಬಹುದು. ಬ್ರಹ್ಮಚಾರಿಯಾಗಿಯೇ ಇರುತ್ತೇನೆ ಎಂದ ಅಯ್ಯಪ್ಪನಿಗೆ ಸವಾಲನ್ನೂ ಎಸೆಯಬಹುದು. ಆದರೆ ಪ್ರಕೃತಿಯೇ ವಿಧಿಸುವ ನಿಯಮಗಳನ್ನು ಮನುಷ್ಯ ಅರ್ಥವಿಸಿಕೊಳ್ಳುವುದಿಲ್ಲ. ಅರ್ಥವಿಸಿಕೊಂಡರೂ ಅದು ತನಗೆ ಬೇಕಾದಂತೆ ರೂಪಿಸಿಕೊಳ್ಳುತ್ತಾನೆ.  ಅಂತಾರಾಷ್ತ್ರೀಯವಾಗಿ ಸುದ್ದಿ ಮಾಡಿ ವಿವಾದ ಸೃಷ್ಟಿಸಿದ  ಈ ಎಲ್ಲ  ವಿಚಾರಗಳ ಮಧ್ಯೆಯೂ ನಮ್ಮ ಬೋಳಂಗಳ ನನಗೆ ವಿಚಿತ್ರವಾಗಿ ಕಾಣುತ್ತದೆ.   ಶಬರಿ ಮಲೆ ಪ್ರವೇಶಕ್ಕೆ ಹಾತೊರೆದ ಮಹಿಳಾ ಮಣಿಗಳು ನಮ್ಮ ಬೋಳಂಗಳದ ದೈವಕ್ಕೂ ಪ್ರಶ್ನೆಯಾಗುತ್ತಾರೋ ಗೊತ್ತಿಲ್ಲ. ಆದರೆ ನಮ್ಮ ನಂಬಿಕೆ ವಿಶ್ವಾಸಗಳ ಆವರಣದಲ್ಲೇ ಬದುಕುವ ಮನುಷ್ಯ ಇದರ ಬಗ್ಗೆ ಗಂಭೀವಾಗಿ  ಯೋಚಿಸುವ ಅಗತ್ಯವಿಲ್ಲ. ದೈವೇಚ್ಚೇ ಹೇಗೋ ಯಾರಿಗೆ ಗೊತ್ತು?  ಭೂತ ನೋಡಿ ದೇಹದಿಂದ ಕಲ್ಲಾಗುತ್ತಾರೋ ಗೊತ್ತಿಲ್ಲ. ಆದರೆ ಮನಸ್ಸಿನಿಂದ ಕಲ್ಲಾಗಿ ಮನಸ್ಸೇ ಕಲ್ಲಾಗಿ ಬಿಡುತ್ತಾರೆ.  ಯಾಕೆಂದರೆ ನಂಬಿಕೆಗಳು ನಂಬಿಕೆಗಳಾಗಿ ಮನುಷ್ಯನ ಜೀವನ ದಾರಿಯನ್ನು ನಿರ್ಣಯಿಸುತ್ತವೆ. ಅದನ್ನು ಬದಲಿಸುವುದೆಂದರೆ ಅದು ಕಲ್ಲು ಮನಸ್ಸಿನಿಂದ ಮಾತ್ರ ಸಾಧ್ಯ.  ಯಾಕೆಂದರೆ ಬೋಳಂಗಳದಲ್ಲಿ ಅಂಗಳ ಮಾತ್ರ ಬೋಳಾಗಿರಬಹುದು. ಭಾವನೆಗಳಲ್ಲ ಅದು ಯಥೇಚ್ಛವಾಗಿದೆ.
           

1 comment:

  1. ತುಳುನಾಡಿನ ದೈವಗಳ ಬಗ್ಗೆ ಮಾಹಿತಿ ಸಂಗ್ರಹ ನನ್ನ ಆಸಕ್ತಿಯ ಅಧ್ಯಯನದ ಕ್ಷೇತ್ರ,ಸುಮಾರು 580 ದೈವಗಳ ಬಗ್ಗೆ ಈಗಾಗಲೇ ಮಾಹಿತಿ ಸಂಗ್ರಹ ಮಾಡಿರುವೆ
    ನನಗೆ ಬೋಳಂಗಳದಲ್ಲಿನ ದೈವದ ಬಗ್ಗೆ ಮಾಹಿತಿ ಬೇಕಿತ್ತು
    ನಿಮ್ಮ ಫೋನ್ ನಂಬರ್ ಕೊಡುವಿರಾ
    ನನ್ನ ಮೊಬೈಲ್ ಸಂಖ್ಯೆ 9480516684
    ಡಾ.ಲಕ್ಷ್ಮೀ ಜಿ ಪ್ರಸಾದ ,

    ReplyDelete