Wednesday, December 25, 2019

ಪೌರತ್ವದ ಲೆಕ್ಕಾಚಾರ. ..

ಮಧ್ಯಾಹ್ನದ ಊಟಕ್ಕೆ ಅನ್ನಕ್ಕೆ ಪಾತ್ರೆ ಇಡಬೇಕಾದರೆ ಮನೆಯಾಕೆ ಲೆಕ್ಕ ಹಾಕುತ್ತಾಳೆ, ಮನೆಯಲ್ಲಿ ಯಾರೆಲ್ಲ ಇರುತ್ತಾರೆ? ಎಷ್ಟು ಮಂದಿ ಊಟ ಮಾಡಬೇಕು? ಅದನ್ನು ಹೊಂದಿಕೊಂಡು ಆಕೆ ಪಾತ್ರೆಗೆ ಅಕ್ಕಿ ಸುರಿಯುತ್ತಾಳೆ. ಇದು ಒಂದು ಮನೆಯ ಲೆಕ್ಕಾಚಾರ.  ಒಂದು ಮದುವೆ ಪೂಜೆ ಇನ್ನಿತರ ಸಮಾರಂಭದಲ್ಲೂ ಅಷ್ಟೇ ಊಟ ತಿಂಡಿಗೆ ಎಷ್ಟು ಜನ ಸೇರಬಹುದು ಅಂತ ಲೆಕ್ಕ ಹಾಕುತ್ತಾರೆ. ಹೋಗಲಿ ದೇವರ ಪೂಜೆಗೆ ಪ್ರಸಾದ ನೈವೇದ್ಯ ಇಡುವುದು ದೇವರಿಗಾದರೂ ಭಕ್ತರು ಎಷ್ಟು ಸೇರುತ್ತಾರೆ ಎಂಬುದನ್ನು ಲೆಕ್ಕ ಹಾಕುತ್ತಾರೆ. ಹಾಗಿರುವಾಗೆ ದೇಶದೊಳಗೆ ರಾಜ್ಯ ಗ್ರಾಮದೊಳಗೆ ಎಷ್ಟು ಜನ ಇದ್ದಾರೆ ಎಂದು ಲೆಕ್ಕ ಹಾಕಬೇಡವೇ? ಒಂದು ಸುಸ್ಥಿರ ಆಢಳಿತಕ್ಕೆ , ಅಭಿವೃದ್ಧಿಗೆ ಇದು ಜನಗಣತಿ ಅನಿವಾರ್ಯ.  ಮಾತ್ರವಲ್ಲ ನಮ್ಮ ಮನೆಯಲ್ಲೇ ಆಗಲಿ ಯಾರೆಲ್ಲ ಇದ್ದಾರೆ ಎಂಬಲ್ಲಿ ನಮ್ಮ ಮನೆಯ ಡಾಟಾ ಬೇಸ್ ಸಿದ್ದವಾಗುತ್ತದೆ. ಹಾಗಿರುವಾಗ ಊರಿಗೆ ದೇಶಕ್ಕೆ ಅದು ಬೇಡ ಎನ್ನುವ ತೀರ್ಮಾನಕ್ಕೆ ಬರುವುದು ಮೂರ್ಖತನವಾಗುತ್ತದೆ. ವಾಸ್ತವದಲ್ಲಿ ಬೇಡ ಎಂದು ತೀರ್ಮಾನಕ್ಕೆ ಯಾವಾಗ ಬರುತ್ತಾರೆ? ಊರನ್ನು ಮನೆಯನ್ನು ನೋಡಿಕೊಳ್ಳುವವ ಬೇರೆ ಯಾವನೋ ಒಬ್ಬನಾಗಿದ್ದರೆ ಆತನಿಗೆ ಮನೆಯೊಳಗಿನ ಮಂದಿಯ ಲೆಕ್ಕ ಬೇಕು ಎನ್ನುವುದಕಿಂತ ಅದನ್ನು ಆತ ಅಲಕ್ಷಿಸುತ್ತಾನೆ. ಮಧ್ಯಾಹ್ನ ಹತ್ತು ಜನ ಊಟಕ್ಕಿದ್ದರೆ ಈತ ಲೆಕ್ಕ ಪುಸ್ತಕದಲ್ಲಿ ಹೈದಿನೈದು ಮಂದಿ ಇದ್ದರು ಎಂದು ತೋರಿಸಿ ಐದು ಊಟದ ಹೆಚ್ಚುವರಿ ಖರ್ಚನ್ನು ಲೆಕ್ಕದಲ್ಲಿ ತೋರಿಸಿ ಸ್ವಂತ ಜೇಬಿಗೆ ಇಳಿಸಬಹುದು. ಆಂದರೆ ಭ್ರಷ್ಟಾಚಾರ ಅಲ್ಲೇ ಆರಂಭವಾಗಿಬಿಡುತ್ತದೆ. ಕದಿಯುವವರಿಗೆ ನಿಖರ ಲೆಕ್ಕ ಯಾವಾಗಲೂ ತೊಂದರೆಯನ್ನು ಕೊಡುತ್ತದೆ.  ಇದು ಬಹಳ ಸಾಮಾನ್ಯ ಜ್ಞಾನ. ಇದನ್ನು ಅರಿಯುವುದಕ್ಕೆ ಆತ ದೊಡ್ಡ ಪದವಿ ಪಡೆದ ವಿದ್ಯಾವಂತನಾಗಬೇಕಿಲ್ಲ. ಹಾಗೇ  ನಮ್ಮ ಮನೆಯಲ್ಲಿ ಯಾರೋ ಒಬ್ಬ ಪರಿಚಯ ಇಲ್ಲದವನು ಇರುತ್ತಾನೆ ಎಂದರೆ ಊಹಿಸಿ ರಾತ್ರಿ ಮಲಗಿದರೆ ನಿರಾಳವಾದ ನಿದ್ದೆ ಸಾಧ್ಯವೇ?  ಮಲಗುವ ಮೊದಲು ಆತನ ಪರಿಚಯ ಸಂಬಂಧಿಸಿದವನು ಎಲ್ಲರಿಗೂ ಮಾಡಿಕೊಡಬೇಕು. ಇಲ್ಲವಾದರೆ ಉಳಿದುಕೊಳ್ಳುವ ಅಪರಿಚಿತ ತನ್ನ ಪರಿಚಯವನ್ನು ಎಲ್ಲರಿಗೂ ಮಾಡಿಕೊಡಲೇ ಬೇಕು.  ಇದು ಯಾರೂ ಅರ್ಥ ಮಾಡಿಕೊಳ್ಳಬಲ್ಲ ಸರಳ ತತ್ವಗಳು ರಾಜಕೀಯ ಮಂದಿಗೆ ಅರ್ಥವಾದರೂ ಅದು ಬೇಕಾಗಿಲ್ಲ ಎಂದರೆ ಆಶ್ಚರ್ಯವಾಗುತ್ತದೆ. 

ಇಂದು ದೇಶಾದ್ಯಂತ ಗಲಭೆ ಎಬ್ಬಿಸುವ CAB  ಅಂದರೆ ಪೌರತ್ವ ಕಾಯಿದೆ ಉಳಿದಂತೆ NCR ಮತ್ತು NPR(National Population Register) ಇವುಗಳ  ಬಗೆಗಿನ  ವಿರೋಧ ನೋಡಿದರೆ ಮೂರ್ಖತನದ ಅರಿವಾಗುತ್ತದೆ.  ಯಾಕಾಗಿ ವಿರೋಧಿಸಬೇಕು ಎನ್ನುವುದೇ ಸ್ಪಷ್ಟವಿಲ್ಲದ ಎಡಬಿಡಂಗಿ ಮನೋಭಾವ ಒಂದೆಡೆಯಾದರೆ, ಇದಕ್ಕೆ ಧರ್ಮಾಂಧತೆಯ ಬಣ್ಣ ಹಚ್ಚುವುದು ಮತ್ತೊಂದೆಡೆ. ಸರಕಾರ ಇದೇ ಗಣತಿಯನ್ನು ತೆಗೆದು ಲೆಕ್ಖ ಹಾಕಿ ಯೋಜನೆಯನ್ನು ರೂಪಿಸಿ ಅದರ ಫಲವನ್ನು ಪಡೆಯುವಲ್ಲಿ ಅಡ್ದಿಯಾಗದ ಧರ್ಮ, ಒಂದು ಕಾಯಿದೆ ರೂಪಿಸುವಾಗ ಧರ್ಮ ಅಡ್ಡಿಯಾಗುತ್ತದೆ. ಕುಂಬಳ ಕಾಯಿ ಕಳ್ಳ ಎಂಬಂತೆ ತಮ್ಮ ಹೆಗಲನ್ನು ತಾವೆ ಮುಟ್ಟಿನೋಡುತ್ತಾರೆ. 

ಮಾಜಿ ಮಂತ್ರಿಯೊಬ್ಬರು ಈ ಕಾಯಿದೆ ಯಾಕೆ ಬೇಡ ಎಂಬುದಕ್ಕೆ ಕಾರಣ ಕೊಡುತ್ತಾರೆ.  ಈ ಕಾನೂನಿನಂತೆ ಒಬ್ಬ ಪೌರನಿಗೆ ದಾಖಲಾತಿಗಳನ್ನು ಕೇಳಿದಾಗ, ಈ ದೇಶದ ಬುಡಕಟ್ಟು ಜನಾಂಗ ಅವಿದ್ಯಾವಂತರು, ದೀನ ದಲಿತರು ಈ ದಾಖಲೆಯನ್ನು ಒದಗಿಸಲು ಎಲ್ಲಿ ಹೋಗಬೇಕು? ಈ  ಕಾರಣ ಮೇಲ್ನೋಟಕ್ಕೆ ನ್ಯಾಯಯುತವಾದದ್ದು ಸರಿಯಾಗಿದ್ದದ್ದು ಎಂದು ಅನ್ನಿಸಿದರು ಅದನ್ನುಆಳವಾಗಿ ಯೋಚಿಸಿದಾಗ ಆ ಕಾರಣ ಎಷ್ಟು ಮೂರ್ಖತನದ್ದು ಎಂಬುದು ಅರಿವಾಗುತ್ತದೆ.  ಯೋಚಿಸಿ,  ಹಿರೋಶಿಮಾ ನಾಗಸಾಕಿಯಲ್ಲಿ  ಬಾಂಬ್ ಸುರಿದಾಗ ಆ ದೇಶ ಸಂಪೂರ್ಣವೆಂಬಂತೆ ನಾಶವಾದರೂ ಜಪಾನಿಗಳ ಬದ್ದತೆ ಕಾರ್ಯ ಕ್ಷಮತೆ ಆ ರಾಷ್ಟ್ರ ನಿರ್ಮಾಣದಲ್ಲಿ ಮುಖ್ಯ ಪಾತ್ರವಾಗುತ್ತದೆ. ಮಾತ್ರವಲ್ಲ ಬಹುರಾಷ್ಟ್ರಗಳಿಗೆ ಸಡ್ಡು ಹೊಡೆವಂತೆ ಜಪಾನ್ ಮತ್ತೆ ಎದ್ದು ನಿಲ್ಲುತ್ತದೆ. ಆ ರಾಷ್ಟ್ರವನ್ನು ನೋಡಿಯಾದರೂ ನಮ್ಮನ್ನು ಎಪ್ಪತ್ತು ವರ್ಷ ಆಳಿದವರು ನೋಡಿ ಕಲಿಯಬೇಕಿತ್ತು. ಜಪಾನಿನಷ್ಟು ಅಲ್ಲವಾದರು ಒಂದಿಷ್ಟು ನಾವು ಎದ್ದು ನಿಲ್ಲಬೇಕು ಎನ್ನುವ ಇಚ್ಛಾ ಶಕ್ತಿ ಪ್ರಜೆಗಳಲ್ಲಿ ಮೂಡಿಸಬೇಕಿತ್ತು. ಆದರೆ ಆದದ್ದೇನು ಬುಡಕಟ್ಟು ಜನಾಂಗ ಇನ್ನೂ ಕಾಡಲ್ಲೇ ಇದೆ.  ಎಪ್ಪತ್ತು ವರ್ಷವಾದರೂ ಊರು ಅವರಿಗೆ ಅರಿವಿಗೆ ಬಂದಿಲ್ಲ ಎಂದರೆ ಅದರ ವೈಫಲ್ಯ ಆಳಿದ ಮಂದಿಗಳ  ವೈಫಲ್ಯ ಯಾಕೆ ಆಗುವುದಿಲ್ಲ?  ಅವಿದ್ಯಾವಂತರಿಗೆ ಎಪ್ಪತ್ತು ವರ್ಷದಲ್ಲಿ ಸ್ವಲ್ಪವಾದರೂ  ವಿದ್ಯೆಯನ್ನು ಒದಗಿಸದ ಸ್ವಾತಂತ್ರ್ಯಾ ನಂತರದ ಆಢಳಿತ ಅದು ಎಂತದ್ದು?  ಸಂಗ್ರಹವಾದ ತೆರಿಗೆ ರಾಜ ದರ್ಬಾರಿಗೆ ಬಳಕೆ ಯಾಗುತ್ತಿದೆ ಎಂಬುದಕ್ಕೆ ಬೇರೆ ನಿದರ್ಶನ ಬೇಡ.  ಇನ್ನೂ ಅವಿದ್ಯಾವಂತರು ಸ್ವಂತ ದಾಖಲೆ ಇಟ್ಟುಕೊಳ್ಳದಷ್ಟು ಅರಿವಿಲ್ಲದ ಪ್ರಜೆಗಳು ಇದ್ದಾರೆ ಎಂದರೆ ಅದಕ್ಕೆ  ಎಪ್ಪತ್ತು ವರ್ಷದ ಆಢಳಿತ ಯಾಕೆ ಕಾರಣವಾಗುವುದಿಲ್ಲ?  ಬೇಡಾ ಅಂತ ಆಕ್ಷೇಪಿಸಿ ಕಾರಣಗಳನ್ನು ಒದಗಿಸುವಾಗ ಅದು ತಮ್ಮ ವೈಫಲ್ಯಗಳಾಗಿ ತಮ್ಮ ಕಾಲ ಬುಡಕ್ಕೆ ಬರುತ್ತದೆ ಎಂಬ ಪರಿಜ್ಞಾನ ಇಲ್ಲವೇ? 

ಎಪ್ಪತ್ತು ವರ್ಷ ಎಂದರೆ ಮನುಷ್ಯನ ಎರಡು ತಲೆಮಾರು ಎನ್ನಬಹುದು. ಈ ಎರಡು ತಲೆಮಾರಿನಲ್ಲಿ ಕೊನೆಯ ವ್ಯಕ್ತಿ ಇನ್ನೂ ತನ್ನ ಸ್ವಂತ ಅಸ್ತಿತ್ವಕ್ಕೆ ದಾಖಲೆಯನ್ನು ಒದಗಿಸುವುದಕ್ಕೆ ವಿಫಲನಾಗುತ್ತಾನೆ ಎಂದಾದರೆ ಅದರ ಹೊಣೆ ಯಾರದ್ದು? ಇಂದು ರಾಜಕೀಯದಲ್ಲಿ ವಿರೋಧಿಸುವುದಕ್ಕೆ ಕಾರಣ ಬೇಕಿಲ್ಲ? ಮಾಡುವುದು ’ಆತ’   ಎಂಬ ಒಂದೇ ಕಾರಣ ಸಾಕಾಗುತ್ತದೆ. ಅದನ್ನೆ ನಾನು ಮಾಡಿದರೆ ಅದು ಪರಮ ಪವಿತ್ರ ಕೆಲಸವಾಗುತ್ತದೆ. ಸ್ವಾತಂತ್ರ್ಯ ನಂತರ ಭಾರತದ ರಾಜಕೀಯ ಬೆಳೆದು ಬಂದ ರೀತಿ ಇದು. ಕೇವಲ ಮತಗಳಿಸುವುದು ಅಧಿಕಾರ ಉಳಿಸುವುದು ಸ್ವಜನ ಪಕ್ಷಪಾತ ಇವಿಷ್ಟೇ ರಾಜಕೀಯ ಎಂಬಂತಾಗಿ ಇಂದು ಭಾರತದ ಸಜ್ಜನ ಪ್ರಜೆ ರಾಜಕೀಯವನ್ನು ಛೀ ಥೂ ಅಂತ ದೂರವಿಡುವುದಕ್ಕೆ ಕಾರಣ ಹುಡುಕಿದರೆ,  ಅದೇ ಎಪ್ಪತ್ತುವರ್ಷದ ಇತಿಹಾಸ ಅತ್ಯಂತ ಹೀನಾಯವಾಗಿ ತೆರೆದುಕೊಳ್ಳುತ್ತದೆ.  ನಾವು ಬಾಲ್ಯದಲ್ಲಿರುವಾಗ ಪ್ರತಿ ದಿನವೂ ಒಂದು ಆಶಾವಾದವನ್ನು ಹೊಂದಿಕೊಳ್ಳುತ್ತಿದ್ದೆವು. ಕೆಟ್ಟು ನಿಂತ ರಸ್ತೆ, ಬಾರದ ವಿದ್ಯುತ್, ಕಲ ಬೆರೆಕೆ ಅಹಾರ, ಹೀಗೆ ಎಲ್ಲವನ್ನು ನೋಡಿದಾಗ ಇಂದಲ್ಲ ನಾಳೆ ಒಳ್ಳೆದಾಗುತ್ತದೆ ಎಂಬ ಆಶಾವಾದ ಇಟ್ಟು ನಿರೀಕ್ಷೆಯಲ್ಲಿ ದಿನ ಕಳೆದು ಕಳೆದು ಇದೀಗ ಐವತ್ತು ವರ್ಷ ಕಳೆದರೂ ನಿರೀಕ್ಷೆ ಸತ್ತು ಹೋಗಿದೆ. ಅದಕ್ಕೆ ಯಾರನ್ನು ಕಾರಣ ಮಾಡಬೇಕು. ಆಳುವ ಮಂದಿಗೆ ಒಂದಿಷ್ಟು ಸಾರ್ವಜನಿಕ ಇಚ್ಛಾ ಶಕ್ತಿ ಇಲ್ಲ ಎಂದಾದಾಗ ಅದು ಜನತೆಯ ಕೊರತೆಯೇ ಆಗಿ ಪರಿಣಮಿಸುತ್ತದೆ. 

  ಒಂದು ಮನೆಯ ಯಜಮಾನ ಪ್ರತಿಯೊಂದಕ್ಕೂ ಸರಿಯಾದ ಲೆಕ್ಕ ಇಡಬೇಕಾದದ್ದು ಆತನ ಅನಿವಾರ್ಯತೆಯಾಗುತ್ತದೆ. ಆದರೆ ಹಾಗೆ ಆತ ಪ್ರತಿಯೊಂದಕ್ಕು ಲೆಕ್ಕ ಇಡುವಾಗ ಆ ಮನೆಯಲ್ಲಿ ಕದಿಯುವವರು ವಂಚಿಸುವವರು ಇದ್ದರೆ ಅವರಿಗೆ ಸರಿಯಾದ ಲೆಕ್ಕ ಒದಗಿಸುವುದು ಕಷ್ಟವಾಗುತ್ತದೆ. ಸಹಜವಾಗಿ ತಳಮಳ ಶುರುವಾಗುತ್ತದೆ.  ನಾವು ಚಿಕ್ಕವರಿದ್ದಾಗ ಪಟ್ಟಿ ಬರೆದು, ಕೈಗೆ ಹಣ ಇಟ್ಟು ಅಂಗಡಿಗೆ ಕಳುಹಿಸುತ್ತಿದ್ದರು. ನಾವು ಮಾಡಿದ ಖರ್ಚನ್ನು ಸರಿಯಾಗಿ ಲೆಕ್ಕ ಒದಗಿಸಬೇಕಿತ್ತು.  ಕೈಯಲ್ಲಿದ್ದ ಹಣ ಕಡಿಮೆ ಬಂದಾಗ ಹಣ ಏನು ಮಾಡಿದೆ?  ಅಂತ ಜೋರು  ಮಾಡಿ ಗದರಿಸಿ ಕೇಳುತ್ತಿದ್ದರು .  ಮಧ್ಯೆ ಗೊತ್ತಿಲ್ಲದೆ ಬಿಸ್ಕತ್ತು ಚಾಕಲೇಟ್ ಗೆ ಖರ್ಚು ಮಾಡುವುದಿದ್ದರೂ ನಮಗೆ ತಳಮಳವಾಗುತ್ತಿತ್ತು.  ಕೊನೆಗೆ ಲೆಕ್ಕ ಸರಿ ಹೊಂದದೇ ಇದ್ದಾಗ ತಂದ ಅಕ್ಕಿ ಬೇಳೆಯ ಬೆಲೆಯನ್ನೇ  ವೆತ್ಯಾಸ ಮಾಡಿ ಹೇಳಿ ಬಚಾವ್ ಆಗುವ ಕುಟಿಲ ಉಪಾಯವೂ ನಮ್ಮಲ್ಲಿರುತ್ತಿತ್ತು. ಈ ನಡುವೆ ಅನಧಿಕೃತವಾಗಿ ನಮ್ಮ  ಕೈಯಲ್ಲಿ ಚಾಕಲೇಟ್ ಕಂಡರೆ ದುಡ್ಡು ಎಲ್ಲಿಂದ ಸಿಕ್ಕಿತು?  ನಾವು ಮನೆಯ ಒಳಗೆ ಕದ್ದೆವಾ?  ಇಲ್ಲ ಹೊರಗೆ ಕದ್ದೆವಾ? ಹಿರಿಯರ ಆತಂಕದ ಅರ್ಥ ವಾಗಬೇಕಾದರೆ ನಮ್ಮಲ್ಲೂ ಜವಾಬ್ದಾರಿ ಬರಬೇಕು.  ತರುವ ಸಾಮಾನಿಗೆ ದುಡ್ಡು ಮನೆಯ ಯಜಮಾನ ಕೊಡುತ್ತಾನೆ ಎಂದಾಗ ಅಂಗಡಿಯ ಸಾಮಾನಿನ ಬೆಲೆಯೂ ನಮಗೆ ಮುಖ್ಯವಾಗುವುದಿಲ್ಲ. ಅದೇ ನಾವೇ ನಮ್ಮ ಜೇಬಿನ ಹಣದಿಂದ ಏನಾದರೂ ಕೊಳ್ಳಬೇಕಿದ್ದರೆ ಹತ್ತು ಸಲ ಯೋಚಿಸುವುದಿತ್ತು. ಹಲವು ಅಂಗಡಿ ಸುತ್ತುವುದಿತ್ತು. ಇಂತಹ ಸಾಮಾನ್ಯ ಜ್ಞಾನವು ಇಂದು ಕಾಯಿದೆಯನ್ನು ಪ್ರಶ್ನಿಸುವವರಿಗೆ  ಅರ್ಥವಾಗುವುದಿಲ್ಲ. ಹೋಗಲಿ ಕಾಯಿದೆ ಕಾನೂನು ನಿಯಮಗಳು ರೂಪಿಸುವಾಗ ಅದರಲ್ಲಿ ಕುಂದುಕೊರತೆಗಳು ಸಾಮಾನ್ಯ. ಅದರ ಅನುಭವ ಬೇರೆಯೇ ಆಗಿರುತ್ತದೆ. ಹಾಗಂತ ಅದನ್ನು ವಿರೋಧಿಸುವುದಕ್ಕೂ ಒಂದು ನಿಯಮ ಇರುತ್ತದಲ್ಲವೆ? ವಿರೋಧಿಸುವುದೆಂದರೆ ಅದು ಏಳು ಜನ್ಮದ ವೈರಿಯೊಂದಿಗೆ ಯುದ್ದಕ್ಕೆ ಇಳಿದಂತೆ ಮಾಡಬೇಕೆ. ಮರು ದಿನ ನಾವುಗಳೇ ಇಲ್ಲಿ ಪರಸ್ಪರ ಮುಖ ನೋಡಿಕೊಂಡು ಬದುಕಬೇಕು ಎಂಬ ಸಾಮಾನ್ಯ ಅರಿವು ಇಲ್ಲದಂತೆ ಗಲಭೆ ಎಬ್ಬಿಸಬೇಕೆ. ಪ್ರಜಾ ಪ್ರಭುತ್ವದಲ್ಲಿ ನ್ಯಾಯಾಂಗ ವ್ಯವಸ್ಥೆ ಇದೆ ಎಂಬುದನ್ನೇ ಮರೆತು ಪ್ರತಿಭಟನೆ ವಿರೋಧ ಮಾಡುತ್ತಿದ್ದರೆ ಈ ದೇಶದಲ್ಲಿ ಅನಾಗರಿಕರು ಅವಿದ್ಯಾವಂತರು ಯಾರು ಎಂದು ಪ್ರಶ್ನೆ ಮಾಡುವ ಹಾಗಾಗುತ್ತದೆ.  ಆದಾಯ ತೆರಿಗೆಯ ನಿಯಮದಂತೆ ಲಾಭವಾದರೂ ನಷ್ಟವಾದರೂ ಅದಕ್ಕೊಂದು ಲೆಕ್ಕ ಬೇಕು. ಆದರೆ ರಾಜಕೀಯ ಮಂದಿಗಳು ಈ ಲೆಕ್ಕ ಮೊದಲು ತಪ್ಪಿಸುತ್ತಾರೆ. ಎಪ್ಪತ್ತು ವರ್ಷದ ರಾಜಕೀಯ ನಡೆದು ಬಂದ ರೀತಿ ಇದು. 

ಎಪ್ಪತ್ತು ವರ್ಷದ ಆಳ್ವಿಕೆ ಪ್ರಜೆಗಳಲ್ಲಿ ಜವಾಬ್ದಾರಿಯನ್ನು ತುಂಬಲಿಲ್ಲ. ಸಾಮಾನ್ಯ ಅರಿವನ್ನೂ ಮೂಡಿಸಲಿಲ್ಲ. ಪ್ರಜಾ ಕರ್ತವ್ಯದ ಅರಿವನ್ನು ಮೂಡಿಸಲಿಲ್ಲ. ದಿಕ್ಕು ತಪ್ಪಿಸುವ ರಾಜಕೀಯವನ್ನಷ್ಟೇ ಬಾರತ ಕಂಡದ್ದು. ಇನ್ನಾದರೂ  ನಮ್ಮಲ್ಲಿ ಉತ್ತಮ ಪ್ರಜಾ ಲಕ್ಷಣದ ಜವಾಬ್ದಾರಿ ಅರಿವು ಮೂಡಬೇಕು. ಭಾರತ ಜಪಾನಿನಂತೆ ಅಲ್ಲವಾದರು ಒಂದಿಷ್ಟು ಎದ್ದು ನಿಲ್ಲ ಬೇಕು ರಾಜಕೀಯ ಇಚ್ಛಾಶಕ್ತಿಗಳು ಬದಲಾಗಬೇಕು. ಇದು ಪ್ರತಿಯೊಬ್ಬ ಭಾರತೀಯನ ಬಯಕೆ. ಹಾಗಾಗಿ ಈ ಪೌರತ್ವ ಕಾಯಿದೆ ವಿರೋಧವಿಲ್ಲದೆ ಜಾರಿಗೆ ಬರಬೇಕು. ನಮ್ಮ ಲಾಭ ನಷ್ಟದ ಲೆಕ್ಕ ಇಲ್ಲಿಂದಲೇ ಆರಂಭವಾಗಬೇಕು. ನಮ್ಮ ಮನೆಯಲ್ಲಿ ಯಾರೆಲ್ಲ ಇದ್ದಾರೆ ಎಂಬ ಅರಿವು ನಮಗಾಗಬೇಕು. ಇಲ್ಲವಾದರೆ ಹಾವು ಹೆಗ್ಗಣ ಬಂದು ವಾಸವಾದರೂ ನಮ್ಮ ಅರಿವಿಗೆ ಬಾರದೆ ಇರಬಹುದು. ಒಮ್ಮೆ ಯೋಚಿಸೋ ಶಕ್ತಿ ನಮ್ಮಲ್ಲಿ ಮೂಡಲಿ. 



No comments:

Post a Comment