Tuesday, December 31, 2019

ಬಿChi...ಭಯಾಗ್ರಫಿ

ಬಾಲ್ಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಹಲವು ಕಾದಂಬರಿಗಳನ್ನು ಓದುತ್ತಿದ್ದೆ. ಎಲ್ಲಿ ಹೋಗುತ್ತಿದ್ದರೂ  ಕೈ ಚೀಲದಲ್ಲಿ ಒಂದೆರಡು ಕಾದಂಬರಿ ಪುಸ್ತಕವಾದರೂ ಇರುತ್ತಿತ್ತು. ತರಾಸು, ಕೆಟಿ ಗಟ್ಟಿ, ಟಿ ಕೆ ರಾಮ ರಾವ್, ಅ ನ ಕೃ , ಬಿchi   ಯಂಡಮೂರಿ   ಮೊದಲಾದವರ ಕಾದಂಬರಿ ಪುಸ್ತಕಗಳನ್ನು ಓದುವುದೆಂದರೆ ಸಮಯ ಕಳೆದುದೇ ಅರಿವಿರುತ್ತಿರಲಿಲ್ಲ. ಈ ಎಲ್ಲ ಪುಸ್ತಕಗಳ ಸಾಲಿನಲ್ಲಿ ಅತ್ಯಂತ ವಿಶಿಷ್ಟವಾಗಿ ನಿಲ್ಲುತ್ತಿದ್ದುದು ಬಿ.chi. ಯವರ ಪುಸ್ತಕಗಳು. ಹಲವುಸಲ ಒಂದು ಸಲದ ಓದಿನಿಂದ ಅರ್ಥವಾಗದೆ ಪುನಃ ಪುನಃ ಓದಿ ಅರ್ಥವಾಗುವವರೆಗೂ ಕಾಡುತ್ತಿದ್ದ ಬಿchi ಯವರ ಪುಸ್ತಕಗಳು ಅದರ ಬರಹಗಳು ವಿಚಿತ್ರವಾಗಿ ಭಾಸವಾಗುತ್ತಿತ್ತು. ತೀವ್ರವಾದ ಆಸಕ್ತಿ ಇದ್ದಲ್ಲಿ ಮಾತ್ರವೇ ಬಿchiಯವರ ಪುಸ್ತಕಗಳನ್ನು ಓದಬಹುದು. ಕೇವಲ ಪಂಚರಂಗಿ ಪ್ರಣಯದ ಕಥೆಗಳ ಓದುಗರಿಗೆ ಇವುಗಳು ರುಚಿಸುವುದಿಲ್ಲ. ಆದರೆ ಮೌಲ್ಯಗಳ ಸಿದ್ದಾಂತಗಳ ಅನ್ವೇಷಣೆ ವಿಡಂಬನೆಗಳನ್ನು ಆಸ್ವಾದಿಸುವವರಿಗೆ  ಬಿchi ಯ ಬರಹಗಳು ಅಪ್ಯಾಯಮಾನವಾಗುತ್ತವೆ. ಕಂಡು ಕೇಳರಿಯದ ವಿಚಾರಗಳೂ ಸರಳ ಹಾಸ್ಯದಿಂದ ಮನಸ್ಸಿಗೆ ಹತ್ತಿರವಾಗುತ್ತದೆ. ಗೂಢಾರ್ಥ ದ್ವಂದ್ವಾರ್ಥಗಳ ವಿಚಾರಗಳು ನಾವು ಕಂಡು ಕೇಳರಿಯದ ಶಬ್ದಗಳ ಸರ್ಕಸ್ ಗಳು ಆಶ್ಚರ್ಯ ಹುಟ್ಟಿಸುತ್ತಿತ್ತು. 

ಎರಡು ದಿನ ಮೊದಲು ಅಂತರ್ಜಾಲದ ಮಾಧ್ಯಮಗಳಲ್ಲಿ ಬಿchi ಯ ಆತ್ಮಕಥೆಯನ್ನು ಆಧರಿಸಿದ ನಾಟಕದ ಪ್ರಕಟನೆಯನ್ನು ನೋಡಿ ಬಾಲ್ಯದ ಆಶೆ ಮತ್ತೊಮ್ಮೆ ಗರಿಗೆದರಿತು. ಮೊನ್ನೆ ಶನಿವಾರ ಸಾಯಂಕಾಲ ಮಲ್ಲೇಶ್ವರಂ ಸೇವಾಸದನದ ರಂಗ ಮಂದಿರದಲ್ಲಿ , ಶ್ರೀ ಬಸವರಾಜ ಎಮ್ಮಿಯವರ  ರಚನೆ ನಿರ್ದೇಶನದಲ್ಲಿ ಮಾನಸಪುತ್ರ ಎಂಬ ನಾಟಕ ಪ್ರದರ್ಶನಗೊಳ್ಳುವುದಿತ್ತು. ಸಮಯಕ್ಕೆ ತುಸು ಮುಂಚಿತವಾಗಿ ನಾಟಕದ ಪ್ರೇಕ್ಷಕನಾದೆ. 

’ಮಾನಸ ಪುತ್ರ’ ಬಿChi ಯವರ ಆತ್ಮಕಥೆಯನ್ನು ಆಧರಿಸಿ ಹಲವು ರಸವತ್ತಾದ ಘಟನೆಗಳೊಂದಿಗೆ ಹೆಣೆದ ನಾಟಕ. ರಚನೆ ನಿರ್ದೇಶನ ಬಸವರಾಜ ಎಮ್ಮಿಯವರ, ಬೆಂಗಳೂರಿನ ಕಲಾವಿಲಾಸಿ ತಂಡದವರು ಈ ನಾಟಕವನ್ನು ಪ್ರದರ್ಶಿಸಿದರು. 

ಖ್ಯಾತ ಸಾಹಿತಿಯ ಅದು ಅವಧೂತ ವ್ಯಕ್ತಿತ್ವದ ಸಾಹಿತಿಯೊಬ್ಬರ ಆತ್ಮಕಥೆಯನ್ನು ಆಧರಿಸಿದ ಕಥೆಯನ್ನು ರಂಗಕ್ಕೆ ಅಳವಡಿಸುವುದು ಬಹಳ ಸಾಹಸದ ಕೆಲಸ. ಬಹಳ ಶ್ರಮ ವಹಿಸಿ ಇದನ್ನು ಉತ್ತಮವಾಗಿ ನೆರವೇರಿಸಿದ್ದಾರೆ.  ಉಚಿತವಾದ ರಂಗ ಪರಿಕರಗಳು ದೃಶ್ಯ ಜೋಡಣೆಗಳು ನಾಟಕದ ಆಕರ್ಷಕ ಅಂಶಗಳಾಗಿ ಗೋಚರಿಸಿದವು.  ಆ ಕಾಲದ ಹಲವು ಘಟನೆಗಳು ಅದನ್ನು ಬಿChiಯವರು ಕಂಡರೀತಿ ಅದಕ್ಕೆ ಅನುಯೋಜ್ಯವಾಗುವಂತೆ ದೃಶ್ಯ ಸಂಯೋಜನೆ ಉತ್ತಮವಾಗಿತ್ತು. ಪ್ರತಿಯೋಂದು ಸನ್ನಿವೇಶದಲ್ಲೂ ಒಂದೊಂದು ಸಂದೇಶವನ್ನು ಒದಗಿಸುತ್ತಿತ್ತು. ಉದಾಹರಣೆಗೆ: ಮುದುಕನನ್ನು ಮದುವೆಯಾದ ಹುಡುಗಿಯೊಬ್ಬಳು ರಾತ್ರೋ ರಾತ್ರಿ ಕೆಲಸದಾಳಿನ ಜತೆ ಓಡಿ ಹೋದಾಗ ಊರವರು ಸೇರಿ ಇಬ್ಬರನ್ನು ಹಿಡಿದು ಬೈಯುವ ಸನ್ನಿವೇಶವಿದೆ. ಆಗ  ಉತ್ತಮ ಜಾತಿಯ ಹುಡುಗಿ ನೀಚ  ಜಾತಿಯವನೊಂದಿಗೆ ಹೋದದನ್ನೇ ಆಕ್ಷೆಪಿಸುತ್ತಾನೆ. ಇಲ್ಲಿ ಬಿChiಯವರು ಒಂದು ಮಾತು ಹೇಳುತ್ತಾರೆ, ಮಾಡುವ ಅನೈತಿಕಕ್ಕಿಂತ ಜಾತಿಯೇ ಮುಖ್ಯವಾಗುತ್ತದೆ. ತಪ್ಪು ಮಾಡಿದರೂ ಆದೀತು, ಅದು ಜಾತಿ ನೋಡಿ ಮಾಡಬೇಕು.  ಹಾಗೆ ಮದುವೆಗೆ ಒಪ್ಪದ ಮಗನನ್ನು ಮದುವೆಯಾಗುವಂತೆ ಪೀಡಿಸುವ ಅಪ್ಪ, ಆತ ಹೇಳುವ ಮಾತು  ಎಲ್ಲರೂ ಇರುವಾಗ ಆತ ಮದುವೆಯಾಗದೆ ಸುಖದಲ್ಲಿ ಇರಬಾರದು ಎಂಬ ಒಕ್ಕಣಿಕೆ ಬಹಲ ಇಷ್ಟವಾಗುತ್ತದೆ. ಮದುವೆಯಾದವರು ಸುಖದಲ್ಲಿರುವುದಕ್ಕೆ ಸಾಧ್ಯವೇ ಇಲ್ಲ.

ಹೀಗೆ ತಮ್ಮ ಆತ್ಮ ಕಥೆಯನ್ನು ಬಿChiಯವರು ಬರೆಯುತ್ತಾ ಅಲ್ಲಿನ ಘಟನೆಗಳಿಗೆ  ಸ್ವತಃ ಅವರೇ ದಂಗಾಗಿ ಬಿಡುತ್ತಾರೆ. ಹಾಗಾಗಿಯೆ ಅವರ ಆತ್ಮ ಕಥೆಯನ್ನು ಅವರು ಭಯಾಗ್ರಫಿ ಅಂತಲೇ ಕರೆಯುತ್ತಾರೆ.


ನಿರೀಕ್ಷೆಯಂತೆ ಬಿChi ಯವರ  ಗೂಡಾರ್ಥದ ದ್ವಂದ್ವಾರ್ಥ ಶಬ್ದಗಳ ರಸಮಾಲೆಯೇ ಸಂಭಾಷಣೆಯಲ್ಲಿ ಹಾಸು ಹೊಕ್ಕಾಗಿತ್ತು. ಇಲ್ಲಿ ದ್ವಂದ್ವಾರ್ಥವೆಂದರೆ ವಾಡಿಕೆಯ ದ್ವಂದ್ವಾರ್ಥವಲ್ಲ. ಬದಲಿಗೆ ಒಂದು ಶಬ್ದಕ್ಕೆ ವಕ್ರವಾದ ಅರ್ಥವೋ ಉಚ್ಚಾರವೋ ಒಳಗೊಂಡಿರುವುದು ಬಿChiಯವರ ಸಾಹಿತ್ಯದ ವೈಶಿಷ್ಟ್ಯ. ಯಾರೂ ಕಾಣದೆ ಇದ್ದ ಅಂಕುಡೊಂಕುಗಳನ್ನು ಬಿChi ಯವರು ಉಲ್ಲೇಖಿಸಿದಂತೆ ಅದನ್ನು ಯಥೇಚ್ಛವಾಗಿ  ಉತ್ತಮವಾಗಿ  ಬಳಸಿಕೊಂಡಿದ್ದರು. ಇದಕ್ಕಾಗಿಯೇ ಪ್ರೇಕ್ಷಕ ಜಾಗ್ರತನಾಗಿರುತ್ತಿದ್ದ. ಕೇಳದೇ ಎಲ್ಲಿ ಕಳೆದು ಹೋಗಿಬಿಡಬಹುದೋ ಎಂಬ ಆತಂಕ. ಆ ರೀತಿಯಲ್ಲಿ ಬಿChi ಸಾಹಿತ್ಯದ ರಸ ಸೃಷ್ಟಿಯಾಗಿತ್ತು. ಪ್ರಧಾನ ಭೂಮಿಕೆಯಲ್ಲಿ ಬಿChiಯ ಪಾತ್ರ ನಿರ್ವಹಣೆ ಉತ್ತಮವಾಗಿತ್ತು. ಆದರೂ ಇನ್ನೂ ಕೆಲವು ಅಂಶಗಳನ್ನು ಸೇರಿಸಿಬಿಡಬಹುದಿತ್ತೋ ಏನೋ ಅಂತ ಅನ್ನಿಸಿತು. ಮುಖ್ಯವಾಗಿ ಬಿChiಯವರು ಸಿಗರೇಟ್ ಸೇದುತ್ತಿದ್ದರು, ಧೂಮ ಪಾನದ ತೀವ್ರ ವ್ಯಸನಿಯಾಗಿದ್ದರು ಎಂದು ಕೇಳಿದ್ದೆ.  ಅದನ್ನು ಸಂಕೇತವಾಗಿಯಾದರೂ ಅಳವಡಿಸಿದರೆ ಬಿChi ಸಹಜತೆಗೆ ಹತ್ತಿರವಾಗುತ್ತಿದ್ದರು. ಈ  ಋಣಾತ್ಮಕ ಅಂಶಗಳ ಕೊರತೆ ಕಾಣುತ್ತಿತ್ತು.  ಆದರೂ ಬಿChiಯ ಪಾತ್ರ ಆಕರ್ಷಕವಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ.    ಮತ್ತುಳಿದಂತೆ ಶರೀರ ಭಾಷೆಯಲ್ಲಿ ಕೆಲಸದಾಳುವಾಗಿದ್ದ ಕಲಾವಿದ ನಿರ್ವಹಣೆ ಉತ್ತಮವಾಗಿತ್ತು. ಅದಕ್ಕೆ ಕಾರಣ ಕೆಲಸದಾಳಿನಂತೆ ಆಕೆಯ ವಸ್ತ್ರವಿನ್ಯಾಸ. ಇದು ಅವರು ಬಾಣಂತಿಯಾಗಿ ನಿರ್ವಹಿಸುವಾಗಲೂ ಎದ್ದು ಕಾಣುತ್ತಿತ್ತು. ಪಾತ್ರದ ಸಹಜತೆಗೆ ಇದು ಅನಿವಾರ್ಯ.  ಇದರ ಜತೆಯಲ್ಲಿ ಮೊದಲು ಶಾಸ್ತ್ರಿಗಳಾಗಿ ನಿರ್ವಹಿಸಿದ ಪಾತ್ರಾಭಿನಯವೂ ಇಷ್ಟವಾಯಿತು.

ಇನ್ನು ಸೇರಿದ ಕಲಾವಿದರಲ್ಲಿ ಎಷ್ಟು ಮಂದಿ ಬಿChiಯವರ ಸಾಹಿತ್ಯಗಳನ್ನು ಓದಿದ್ದಾರೋ ತಿಳಿಯದು ಆದರೆ ರಂಗದಲ್ಲಿ ಪಾತ್ರವಾಗುವಾಗ ಅದರ ಕೊರತೆ ಎದ್ದುಕಾಣುತ್ತಿತ್ತು.  ಪಾತ್ರ ನಿರ್ವಹಣೆಯಲ್ಲಿ ಸಹಜತೆಯ ಕೊರತೆ ಇರುತ್ತಿತ್ತು. ವೃತ್ತಿಪರ ಕಲಾವಿದ ತನ್ನ ಪಾತ್ರಕ್ಕೆ ನ್ಯಾಯ ಒದಗಿಸುವುದಕ್ಕೆ ಬಿChi ಅವರ ಸಾಹಿತ್ಯದ ಅವಲೋಕನವೂ ಅತ್ಯವಶ್ಯ. ಇದು ವೃತ್ತಿ ಪರತೆ.  ಆಗ ಇನ್ನಷ್ಟು ಕಥೆಗೆ ಹತ್ತಿರವಾಗುವುದಕ್ಕೆ ಸಾಧ್ಯವಾಗುತ್ತದೆ. ಇದು ನನ್ನ ಅನಿಸಿಕೆ.  ಉದಾಹರಣೆ. ಬಿChiಯವರು ಮತ್ತು ಸಹಾಯಕ ತಮ್ಮದೇ  ಮನೆಯಲ್ಲಿ ಕುಳಿತು ಮಾತನಾಡುವ ಸನ್ನಿವೇಶವಿದೆ. ಅಲ್ಲಿ ಅವರು ಕುಳಿತ ಭಂಗಿಯಲ್ಲೆ ಒಂದು ಅಸಹಜತೆ ಇರುತ್ತಿತ್ತು. ತಮ್ಮದೇ ಮನೆಯಲ್ಲಿ ಬಂದ ನೆಂಟರಂತೆ ಶಿಸ್ತಿನಲ್ಲಿ ಕುಳಿತು ಮಾತನಾಡುವುದು ರಂಗ ತನ್ನದೂ ಎನ್ನುವ ಕೊರತೆ ಕಾಣುತ್ತಿತ್ತು. ತಮ್ಮ ಮನೆಯಲ್ಲಿ ಕುಳಿತುಕೊಳ್ಳುವಾಗ ಒಂದಷ್ಟು ಸ್ವೇಚ್ಛೆ ಸಹಜವಾಗಿ ಇರುತ್ತದೆ. ಕಾಲು ಮೇಲೆ ಹಾಕಿಯೋ ಕುಕ್ಕರಗಾಲಿನಲ್ಲೋ ಹೇಗೆ ಬೇಕೋ ಹಾಗೆ ನಮ್ಮ ಮನೆಯಲ್ಲಿ ಕುಳಿತು ಬಿಡುತ್ತೇವೆ. ಆ ನೈಜತೆ ಇಲ್ಲಿ ಕಂಡುಬಲಿಲ್ಲ. ಬಂದರೆ ಒಂದಷ್ಟು ಮಾರ್ಮಿಕವಾಗುತ್ತಿತ್ತೋ ಅಂತ ಅನ್ನಿಸುತ್ತದೆ.  ಅಂತಹ ಅಂಶಗಳು ಹಲವಾರನ್ನು ಇಲ್ಲಿ ಗುರುತಿಸಬಹುದು. ಬಹಳಷ್ಟು ಪಾತ್ರಗಳು ಸಂಭಾಷಣೆಯನ್ನು ಒಪ್ಪಿಸುವಾಗ ಸಂಭಾಷಣೆಯ ಗಂಭೀರತೆಯ ಬಗ್ಗೆ ಅನಗತ್ಯವಾಗಿ ಯೋಚಿಸುವಂತೆ ಕಂಡು ಬರುತ್ತಿತ್ತು. ಇದು ಸಹಜತೆಗೆ ಶರೀರ ಭಾಷೆಯ ನೈಜತೆಗೆ ಆಡ್ಡಿಯಾದಂತೆ ಭಾಸವಾಗುತ್ತಿತ್ತು. ನಾವು ಅಭಿನಯಿಸುತ್ತಿದ್ದೇವೆ ಎಂಬ ಭಾವನೆಯಿಂದ ಪಾತ್ರಗಳು ಹೊರಬಂದ್ರೆ ಸೂಕ್ತ.  ಆದರು ಕೆಲವು ಪಾತ್ರಗಳು ಉತ್ತಮವಾಗಿ ನಿರ್ವಹಿಸಿದ್ದನ್ನು ತಳ್ಳುವಹಾಗಿಲ್ಲ.  ಹೆಚ್ಚಿನ ಎಲ್ಲಾ ಪಾತ್ರಗಳು ಗರಿ ಗರಿ ಇಸ್ತ್ರಿ ಮಾಡಿದ  ಶುಭ್ರವಾದ  ವಸ್ತ್ರಗಳನ್ನು ಧರಿಸಿದ್ದು ಅದು ಅಸಹಜವಾಗಿತ್ತು. ಮನೆಯಲ್ಲಿರುವಾಗಲೂ ಶಿಸ್ತಿನ ಉಡುಗೆಯ ಆವಶ್ಯಕತೆ ಇರುತ್ತದೆಯೇ?

ಇತಿಹಾಸದ ವ್ಯಕ್ತಿಗಳನ್ನು ರಂಗದ ಮೇಲೆ ತರುವಾಗ ಜಾಗರೂಕರಾಗಿ ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ತುಸು ಎಚ್ಚರ ತಪ್ಪಿದರೂ ಇತಿಹಾಸಕ್ಕೆ ಅಪಚಾರವೆಸಗಿದಂತೆ.  ಆ ವಿಚಾರದಲ್ಲಿ ಬಹಳ ಗಮನ ಹರಿಸಿದ್ದು ಪ್ರತಿ ಸನ್ನಿವೇಶದಲ್ಲೂ ಅರಿವಿಗೆ ಬರುತ್ತಿತ್ತು. ಇದೊಂದು ಆತ್ಮಕಥೆಯಾಧಾರಿತವಾದರೂ ಇದು ಆತ್ಮಕಥೆ ಎಂದು ಪ್ರೇಕ್ಷಕ ಎಚ್ಚರಿಕೆಯಿಂದ ಗಮನಿಸುವಂತೆ ಮಾಡುತ್ತಿತ್ತು. ಯಾಕೆಂದರೆ ಪ್ರತೀ ಸನ್ನಿವೇಶವೂ ಒಂದು ಸುಂದರ ಕಥೆಯಂತೆ ಭಾಸವಾಗುತ್ತಿತ್ತು. 

ತುಂಬಿದ ರಂಗ ಮಂದಿರದಲ್ಲಿ ಪ್ರೇಕ್ಷಕ ಪ್ರತಿಕ್ರಿಯೆ ಅಧ್ಬುತವಾಗಿತ್ತು ಕರತಾಡನದ  ಪೂರ್ಣ ಅಂಕ ಅದು ಬಿChiಯವರಿಗೆ ಸಲ್ಲುತ್ತದೆ. ಅಷ್ಟು ಅಧ್ಬುತವಾದ ಮಾತುಗಳು ಇಡೀ ನಾಟಕದ ಜೀವಾಳಎಂದರೆ ತಪ್ಪಿಲ್ಲ.

ನಾಟಕವನ್ನು ಒದಗಿಸಿದ ಅದರಲ್ಲಿ ಪರಿಶ್ರಮ ವಹಿಸಿದ ಎಲ್ಲಾ ಕಲಾವಿದ ವರ್ಗದವರಿಗೂ ಸಂಘದ ಸದಸ್ಯರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಇನ್ನು ಇನ್ನೂ ಉತ್ತಮವಾದ ಸೇವೆ ಒದಗಿಸುವಂತೆ ಚೈತನ್ಯ ಮೂಡಿಬರಲಿ ಎಂಬ ಆಶಯ. ಶ್ರಮ ವಹಿಸಿದ ಕಲಾವಿದನ ಶ್ರಮ ಸಾರ್ಥಕವಾಗಬೇಕಾದರೆ ಪ್ರೇಕ್ಷಕನೂ  ಬದ್ದತೆಯನ್ನೂ ತೊರಬೇಕು.  ತನ್ನ ಅನಿಸಿಕೆ ವ್ಯಕ್ತ ಪಡಿಸಿದಾಗ ಅದು ಇನ್ನಷ್ಟು ಚೈತನ್ಯವನ್ನು ಒದಗಿಸುತ್ತದೆ. ಮುಂದಿನ ಹೆಜ್ಜೆ ಇಡುವಲ್ಲಿ ಒಂದಷ್ಟು ಬೆಳಕನ್ನು ಒದಗಿಸುತ್ತದೆ. ಒಬ್ಬ ಸಾಮಾನ್ಯ ಪ್ರೇಕ್ಷಕನಾದ ನನ್ನ ಅನಿಸಿಕೆಗಳು ಇದು. ಇದರಲ್ಲಿ ಮಿಥ್ಯೆಗಳು ಇದ್ದರೂ ಇರಬಹುದು. ಇದು ಕೇವಲ ನನ್ನ ಅನಿಸಿಕೆಗಳಿಗೆ ಸೀಮಿತ.  

2 comments:

  1. ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ.

    ReplyDelete
  2. Thank you for your valuable feedback.

    ReplyDelete