Sunday, December 22, 2019

ಹೋರಾಟ ಯಾರಿಗಾಗಿ?


ನಾವು ಊರಲ್ಲಿರುವಾಗ ನಮ್ಮ ಮನೆಗೆ  ಕೂಲಿಕೆಲಸಕ್ಕೆ ಒಬ್ಬಾತ ಮುಸ್ಲಿಂ ಹುಡುಗ ಬರುತ್ತಿದ್ದ. ಆತ ಹೇಳಿದ ಕಥೆ ಪ್ರಸ್ತುತ ಬಹಳ ನೆನಪಾಗುತ್ತಿದೆ. ಬಹಳ ಸಾಧು ಸಭ್ಯ ವಿದ್ಯಾವಂತ ಪದವೀಧರ ಹುಡುಗ ಕೂಲಿಯಾಳಾಗಿ ಮಣ್ಣಿನ ಕೆಲಸಕ್ಕೆ ಹೋಗುತ್ತಾನೆ ಎಂದರೆ ಆಶ್ಚರ್ಯವಾಗಬಹುದು. ಆದರೆ ಕೇರಳದಲ್ಲಿ ಇದು ಸಾಮಾನ್ಯ. ಗಾರೆ ಕೆಲಸದ ಮೇಸ್ತ್ರಿಯೂ ಕನಿಷ್ಠ ಪಕ್ಷ ಕಾಲೇಜ್ ಮೆಟ್ಟಲು ತುಳಿದಿರುತ್ತಾನೆ.

ಇದೇ ಹುಡುಗ ಒಂದು ದಿನ ಕಾಸರಗೋಡಿನ ಹಳೆ ಬಸ್ ಸ್ಟಾಂಡ್ ಪರಿಸರದಲ್ಲಿ ಪುಟ್ ಪಾತ್ ನಲ್ಲಿ ಹೋಗುತ್ತಿರಬೇಕಾದರೆ ಅಲ್ಲೇ ಯಾವುದೋ ರಾಜಕೀಯ ಪಕ್ಷದ ಸಭೆಯೊಂದು ನಡೆಯುತ್ತಿತ್ತು. ಯಾವ ಪಕ್ಷ ಎಂಬುದು ಇಲ್ಲಿ ಅಪ್ರಸ್ತುತ. ಪಕ್ಷದ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಒಟ್ಟು ಸೇರಿದ್ದರು. ಹುಡುಗನ ಮಿತ್ರನೊಬ್ಬ ಅದೇ ಗುಂಪಿನಲ್ಲಿ ಇರುವುದನ್ನು ಕಾಣುತ್ತಾನೆ. ಇಬ್ಬರೂ ಬಹಳ ಆತ್ಮೀಯ ಮಿತ್ರರು. ಆತನೂ ಹತ್ತಿರ ಬಂದು ಇವನಲ್ಲಿ ಮಾತನಾಡುತ್ತಾನೆ. ಬಹಳ ಅಪರೂಪಕ್ಕೆ ಸಿಕ್ಕಿದ ಮಿತ್ರ ಎಂದಾಗ ಮಾತನಾಡಿದಷ್ಟೂ ಸಂಗತಿಗಳು ಮುಗಿಯುವುದಿಲ್ಲ. ಅಲ್ಲಿ ಪಕ್ಷದ ಸಭೆ ನಡೆಯುತ್ತಿದ್ದಂತೆ ಏನೋ ಗದ್ದಲ ಶುರುವಾಗುತ್ತದೆ.  ಇವರಿಬ್ಬರೂ ಇಲ್ಲೇ ಮಾತನಾಡುತ್ತಿದ್ದಂತೆ ಲಾಠೀ ಪ್ರಹಾರ ಕಿರುಚಾಟ ಎಲ್ಲರೂ ಚೆಲ್ಲಾ ಪಿಲ್ಲಿ ಓಡುತ್ತಿದ್ದಂತೆ ಈ ಇಬ್ಬರು ಮಿತ್ರರು ಸಿಕ್ಕ ಸಿಕ್ಕಲ್ಲಿ ಓಡುತ್ತಾರೆ. ಆದರೆ ಪೋಲೀಸ್ ವಾಹನ ಅದು ಹೇಗೋ ಇವರನ್ನು ಹಿಂಬಾಲಿಸುತ್ತದೆ. ಎಲ್ಲರ ಜತೆಗೆ ಇವರೂ ಬಂಧನಕ್ಕೆ ಒಳಗಾಗುತ್ತಾರೆ. ಪಾಪ ಪುಟ್ ಪಾತ್ ನಲ್ಲಿ ಸುಮ್ಮನೇ ಓಡಾಡುತ್ತಿದ್ದವನೂ ನೂರಾರು ಕಾರ್ಯಕರ್ತರೊಂದಿಗೆ ಬಂಧಿಸಲ್ಪಟ್ಟ. ಕಥೆ ಅಲ್ಲಿಗೇ ನಿಲ್ಲುವುದಿಲ್ಲ. ಹಲವು ಸಲ ಹೀಗೆ ಬಂಧಿಸಿದವರನ್ನು ಗಲಾಟೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಹೆಸರು ವಿಳಾಸ ಬರೆದು ಹಾಗೇ ಬಿಟ್ಟು ಬಿಡುತ್ತಾರೆ. ದುರಂತವೆಂದರೆ  ಈ ಸಲ ಹಾಗಾಗಲೇ ಇಲ್ಲ.

ಬಂಧಿಸಿದ ಅಷ್ಟೂ ಮಂದಿಯ ಮೇಲು ಎಪ್ ಐ ಆರ್  ದಾಖಲಾಯಿತು. ನ್ಯಾಯಾಯಲಯಕ್ಕೆ ಹಾಜರು ಪಡಿಸಿ ಜಾಮೀನು ಸಿಕ್ಕಿತು.   ಸಾಮಾನ್ಯವಾಗಿ ರಾಜಕೀಯದಲ್ಲಿ ಜಾಮೀನು ಸಿಕ್ಕಿದರೆ ಬಿಡುಗಡೆ ಸಿಕ್ಕಿದಂತೆ ಎಂಬ ತಪ್ಪು ಕಲ್ಪನೆ ಇರುತ್ತದೆ. ಒಂದು ಸಲ ಪೋಲೀಸ್ ಕೇಸ್ ಆಯಿತು ಎಂದರೆ ಅದು ಚರಿತ್ರೆಯ ದಾಖಲೆಯಾಗುತ್ತದೆ. ಮೊದಲ ಒಂದೆರಡು ತಿಂಗಳು ಪಕ್ಷದ ವಕೀಲನೊಬ್ಬ ನ್ಯಾಯಾಲಯಕ್ಕೆ ಬರುತ್ತಿದ್ದ. ಕ್ರಮೇಣ ಆತ ಬಾರದೇ ಇವರಷ್ಟೇ ನ್ಯಾಯಾಲಯಕ್ಕೆ ಹಾಜರಾಗಬೇಕಾಯಿತು. ಒಂದು ದಿನ ಕೋರ್ಟ್ ಕೇಸ್ ಗೆ ಅದೂ ಕ್ರಿಮಿನಲ್ ಕೇಸ್ ಗೆ ಒಂದು ದಿನ ವ್ಯರ್ಥ ಕಳೆದಂತೆ. ಸರಿಯಾಗಿ ಊಟ ಮಾಡುವುದಕ್ಕೂ ಸಾಧ್ಯವಿಲ್ಲದಂತೆ ನ್ಯಾಯಾಲಯ ಬೆಂಚ್ ಮೇಲೆ ಕುಳಿತುಕೊಳ್ಳಬೇಕು. ಹೆಸರು ಯಾವಾಗ ಕೂಗುತ್ತಾರೋ ಎಂದು ಕಾಯಬೇಕು. ಮೂತ್ರ ಮಾಡುವುದಕ್ಕೂ ಹೋಗುವ ಹಾಗಿಲ್ಲ. ಹಾಗೇ ಕೇಸು ವಾಯಿದೆ ಅಂತ ಒಂದು ವರ್ಷ ಕಳೆಯಿತು. ಹುಡುಗ ಈ ನಡುವೆ ಹಲವು ಬಾರಿ ಕೋರ್ಟ್ ಮೆಟ್ಟಲು ಹತ್ತಿದ್ದ. ಹಲವು ಸಲ ಪಕ್ಷದ ನೇತಾರರ ಮನೆ ಬಾಗಿಲು ಬಡಿದ. ಒಂದು ಸಲ ಇದರಿಂದ ಮುಕ್ತಿ ಸಿಗುವಂತೆ ಕಾಡಿದ ಬೇಡಿದ.

ಪಕ್ಷದವರು ಮೊದ ಮೊದಲು ಸಭ್ಯತೆಯಿಂದ ವ್ಯವಹರಿಸಿದರೂ ಮತ್ತೆ ಮತ್ತೆ ಧ್ವನಿಯ ಶೈಲಿ ಬದಲಾಗುತ್ತಿತ್ತು. ಈತನಿಗೂ ಅಲೆದಾಟ ಸಾಕಾಗಿತ್ತು. ಹಲವರ ಕಾಲು ಹಿಡಿದ. ಅವರಿಗಾಗಿ ಒಂದಷ್ಟು ಹಣವನ್ನೂ ಖರ್ಚು ಮಾಡಿದ. ಆದರೆ ಕೋರ್ಟ್ ಕೇಸು ಮಾತ್ರ ಹಾಗೇ ಮುಂದುವರೆಯುತ್ತಿತ್ತು. ಒಂದು ವರ್ಷ ಎರಡು ವರ್ಷ ಅದು ಮುಗಿಯಲೇ ಇಲ್ಲ. ಈ ನಡುವೆ ಆತನಿಗೆ ಗಲ್ಫ್ ಗೆ ಹೋಗುವ ಅವಕಾಶ ಸಿಕ್ಕಿತು. ಸಂಬಂಧಿಗಳು ಯಾರೋ ವೀಸಾ ಸಿದ್ದ ಪಡಿಸಿ ಈತನನ್ನು ಕರೆದರೆ ಕ್ರಿಮಿನಲ್  ಕೇಸ್ ಇದ್ದ ಇವನಿಗೆ ಅನುಮತಿಯೇ ಸಿಗಲಿಲ್ಲ. ಯಾವ ರಾಜಕೀಯ ವ್ಯಕ್ತಿಗಳೂ ಸಹಾಯಕ್ಕೆ ಬರಲಿಲ್ಲ. ಅಲ್ಲಿ ಪಕ್ಷಕ್ಕಾಗಿ ಜೈಕಾರ ಹಾಕಿದವರು ಮುಖ ಮರೆಸಿ ಓಡಾಡಿದರು. ಪರಿಚಯದ ಮಿತ್ರ ನಂತರ ಮಿತ್ರನಾಗಿ ಉಳಿಯಲಿಲ್ಲ. ಮನೆಯ ಬಡತನನಿರುದ್ಯೋಗಈ ಕೋರ್ಟ್ ಕೇಸ್ ನ ಖರ್ಚು ಸಣ್ಣ ಪ್ರಾಯದ ಹುಡುಗ ನಿಜಕ್ಕೂ ಹೈರಾಣಾಗಿ ಹೋದ. ಉತ್ತಮ ಬದುಕು ಕಟ್ಟಿ ಮನೆ ಸಂಸಾರ ಅಂತ ಕನಸು ಕಟ್ಟಿದವನ ಕನಸು ಭಗ್ನವಾಯಿತು.  ಸರಿ ಸುಮಾರು ಐದು ವರ್ಷ ಆ ಕೇಸ್ ಮುಂದುವರೆಯಿತು.  ಹೇಗಾಗಬೇಡ ಯೋಚಿಸಿ.  ಮಣ್ಣಿನ ಬುಟ್ಟಿ ತಲೆಯಲ್ಲಿಟ್ಟು ಈ ಕಥೆಯನ್ನು ಆತ ವಿಷಾದಿಂದ ಹೇಳುತ್ತಿರಬೇಕಾದರೆ ಆತನಿಗೆ ಕಣ್ಣಲ್ಲಿ ನೀರು ಬರುತ್ತಿತ್ತು.

ರಾಜಕೀಯದ ಚಕ್ರವ್ಯೂಹವೇ ಹಾಗೇ. ಒಂದು ತಣ್ಣಗಿನ ವಿಷದಂತೆ.  ಮೊದ ಮೊದಲು ಹೆಗಲಿಗೆ ಕೈ ಹಾಕುವ ಪಕ್ಷದ ಸೇವಕರು ನಂತರ ಸಿಗುವುದಿಲ್ಲ. ಆ ಗಲಭೆಯಲ್ಲಿ ಪಕ್ಷದ ಯಾವ ಲೀಡರ್ ಗೆ ಸ್ವಾರ್ಥ ಸಾಧನೆಯಾಗಿದೆಯೋ , ಆದರೆ ಈ ಹುಡುಗನಂತಹ ಹಲವಾರು ಬದುಕುಗಳ ಕನಸು ಕರಗಿ ವಾಸ್ತವ ಅವರನ್ನು ಜೀವಿಸುವುದಕ್ಕೆ ಬಿಡುವುದಿಲ್ಲ. ಇದು ನೈಜ ಕಥೆ. ಒಂದು ಸಲ ಆವೇಶದಲ್ಲಿ ಪಕ್ಷದ ಲೀಡರ್ ಗೆ ಖುಷಿಯಾಗುವುದಕ್ಕೆ ಗಲಭೆ ಎಬ್ಬಿಸುತ್ತಾರೆ. ಕಲ್ಲು ಎಸೆಯುತ್ತಾರೆ. ಆ ಆವೇಶ ಕೇವಲ ಘಳಿಗೆಯ ಅವಧಿಗೆ. ಒಂದು ಹೊತ್ತಿನ ಊಟ ಮತ್ತೆ ಚಿಲ್ಲರೆ ದುಡ್ಡು ಇವಿಷ್ಟು ಅಷ್ಟನ್ನು ಮಾಡಿರುತ್ತದೆ. ಆದರೆ ಪೋಲೀಸ್ ಕೇಸು ಅಂತ ಕೊರಳಿಗೆ ಸುತ್ತಿಕೊಂಡರೆ ಅದು ವೈಯಕ್ತಿಕ ಬದುಕನ್ನು ಸುಡುತ್ತಾ ಹೋಗುತ್ತದೆ. ಪಕ್ಷದ ಧ್ವಜ ಗಾಳಿಯಲ್ಲಿ ಮೇಲೇರಿ ಮೇಲೆರಿ ಹಾರಾಡಿದರೆ ಇವರಿಗೆ ತುಂಡು ಬಟ್ಟೆಗೂ ಅಲೆದಾಡುವ ಸ್ಥಿತಿ ಬರುತ್ತದೆ. ಪಕ್ಷದ ನಾಯಕರು ಕಣ್ಣು ಮುಚ್ಚಿ ದೃಷ್ಟಿ ಬದಲಿಸುತ್ತಾರೆ. ಇದು ಒಂದು ಪಕ್ಷಕ್ಕೆ ಸೀಮಿತವಲ್ಲ

 ಕೌಟುಂಬಿಕವಾಗಿ ಸಾಮಾಜಿಕವಾಗಿ ರಾಜಕೀಯ ವ್ಯಕ್ತಿಗಳೆಂದರೆ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಒಂದು ಕುಟುಂಬದ ಮದುವೆ ಮುಂತಾದ  ಕಾರ್ಯಕ್ರಮವಾದರೂ ಸರಿಅ ಕುಟುಂಬದಲ್ಲಿ ರಾಜಕೀಯ ವ್ಯಕ್ತಿ ಇದ್ದಾನೆ ಎಂದರೆ ಆ ಪ್ರತ್ಯೇಕವಾಗಿ ನಿಲ್ಲುತ್ತಾನೆ. ಕುಟುಂಬದ ಮಂದಿ ಮನೆ ಮಂದಿ ಆತನೊಡನೆ ಸಹಜವಾಗಿ ಬೆರೆಯುವುದಿಲ್ಲ. ಸೂಕ್ಷ್ಮವಾಗಿಯಾದರೂ ಕಣ್ಣಿಗೆ ಕಾಣದ ಅಡ್ಡ ಗೋಡೆಯೊಂದು ಮಧ್ಯೆ ತಡೆಯಾಗಿ ನಿಂತಿರುತ್ತದೆ. ಸಾರ್ವಜನಿಕ ಜೀವನವಾದರೂ ಹಾಗೆ. ರಾಜಕೀಯ ವ್ಯಕ್ತಿಗಳು ಪ್ರತ್ಯೇಕವಾಗಿರುತ್ತಾರೆ. ಎದುರಿಗೆ ಗೌರವ ಇದ್ದರು ಮನಸ್ಸಿನಲ್ಲಿ ಒಂದು ಅಸಹನೆ ಇದ್ದೇ ಇರುತ್ತದೆ.  ಹಲವು ಸಲ ಇದು ಅರಿವಿಗೆ ಬರುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಅರಿವಾಗುತ್ತದೆ. ಒಂದರ್ಥದಲ್ಲಿ  ಹೇಳುವುದಾದರೆ ಈ ಸಮಾಜದಲ್ಲಿ ಯಾವುದೋ ಒಂದು ಜಾತಿ ಪಂಗಡ ಅಸ್ಪೃಶ್ಯವಾಗಿ ಉಳಿಯುವುದಿಲ್ಲಬದಲಿಗೆ ರಾಜಕೀಯ ವ್ಯಕ್ತಿಗಳೇ ಅಸ್ಪ್ರ್ ಶ್ಯರಾಗಿ ಬಿಡುತ್ತಾರೆ. ಅವರೊಂದಿಗೆ ಬೆರೆಯುವುದೂ ಸಹ ಕೃತ್ರಿಮವಾಗಿ ಬಿಡುತ್ತದೆ. ರಾಜಕೀಯದವರಿಗೆ ಇದು ಅರ್ಥವಾದರೂ ಸ್ವಾರ್ಥ ಸಾಧನೆಯ ಹಾದಿಯಲ್ಲಿ ಇದನ್ನು ಬದಿಗೆ ತಳ್ಳಿಬಿಡುತ್ತಾರೆ.

ಈಗೀಗ ಪಕ್ಷದ ಪ್ರತಿಭಟನೆಗಳು ವರ್ಷಕ್ಕೆ ಒಂದು ಎರಡರಂತೆ ನಡೆಯುತ್ತದೆ. ಎಲ್ಲೋ ಇದ್ದ ಕಲ್ಲು ತಲೆಗೆ ಬಂದು ಬಡಿಯುತ್ತದೆ. ನಮ್ಮ ನಿಮ್ಮ ಸೊತ್ತು ನಾಶವಾಗುತ್ತದೆ.  ಎಲ್ಲಾ ತೆರಿಗೆಯನ್ನು ನ್ಯಾಯಯುತವಾಗಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸಲ್ಲಿಸುವ ಜನಸಾಮಾನ್ಯನಿಗೆ ಸ್ವತಂತ್ರ ಭಾರತದ ರಸ್ತೆಯಲ್ಲಿ ಸಂಚರಿಸುವುದಕ್ಕೆ ಭಯವಾಗುತ್ತದೆ. ಆಸ್ಪತ್ರೆಯಲ್ಲಿರುವ ರೋಗಿಗೆ ಔಷಧಿ ಸಿಗುವುದಿಲ್ಲ. ಕಷ್ಟ ಪಟ್ಟು ಜೀವನಾಧಾರವಾಗಿ ಕಟ್ಟಿ ಬೆಳೆಸಿದ ಅಂಗಡಿ ಮುಂಗಟ್ಟುಗಳು ನಮ್ಮ ಕಣ್ಣೆದುರೇ ಎಸೆದ ಕಲ್ಲಿಗೆ ಹಚ್ಚಿದ ಬೆಂಕಿಗೆ ಬಲಿಯಾಗುತ್ತವೆ. ಕಾಲ ಕೆಳಗಿನ ಮಣ್ಣು ಜರೆದು ಹೊಂಡವಾದರೂ ಈಗಿನ ರಾಜಕೀಯ ಹಿಂಬಾಲಕರಿಗೆ ಅರ್ಥವಾಗುವುದಿಲ್ಲ. ಮತ್ತಷ್ಟು ಉದ್ವಿಗ್ನರಾಗಿ ಹೋರಾಟ ಮಾಡುತ್ತಾರೆ. ಪ್ರಜಾಪ್ರಭುತ್ವದ ಹಕ್ಕು ಅವರಿಗೆ ಮಾತ್ರ ಸೀಮೀತವಾಗುವಂತೆ ವರ್ತಿಸುತ್ತಾರೆ. ಮನೆಯಲ್ಲಿದ್ದ ಹೆತ್ತಮ್ಮ ಅಪ್ಪ ಅಣ್ಣ ತಂಗಿ ಕುಟುಂಬವನ್ನು ಕ್ಷಣ ಕಾಲ ಮರೆಯುತ್ತಾರೆ.

ಹೋರಾಟ ಪಕ್ಷದ ವಿರುದ್ಧ ಅಲ್ಲ ಸರಕಾರದ ವಿರುದ್ದ ಅಲ್ಲ. ಯಾವುದೋ ಕಾಯಿದೆ ಕಾನೂನಿನ ವಿರುದ್ದ ಅಲ್ಲ. ನಮ್ಮ ಮನೋಭಾವದ ವಿರುದ್ಧ ಹೋರಾಡಬೇಕಾಗಿದೆ. ಬದುಕುವ ಹಕ್ಕು ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಪ್ರಾಣಿಗೂ ಇರುತ್ತದೆ. ಸಾಯುವುದಕ್ಕಾಗಿ ಯಾರೂ ಹುಟ್ಟುವುದಿಲ್ಲ. ಆದರೆ ಸಾವನ್ನು ತಾವೇ ಆಹ್ವಾನಿಸುವುದು ಮಾತ್ರವಲ್ಲ ಮತ್ತೊಬ್ಬರ ಬದುಕನ್ನು ನಾಶ ಮಾಡುತ್ತಾರೆ.






No comments:

Post a Comment