Sunday, March 1, 2020

ಅನುದಾನ



ಎಪ್ಪರದ ದಶಕದ ಮಳೆಗಾಲದ ಒಂದು ದಿನ ನಾವು ನಾಲ್ಕೈದು ಜನ ಮಾಣಿಗಳು  ಗುಂಪೆಯ ಆ ಕಡೆಯ ಯಾವುದೋ ಒಂದು ಮನೆಯ ಕಾರ್ಯಕ್ರಮಕ್ಕೆ ಹೊರಟಿದ್ದೆವು. ಇಲ್ಲಿ ಮಾಣಿಗಳು ಎನ್ನುವುದೇ ಸೂಕ್ತ. ಆಗಷ್ಟೇ ಬ್ರಹ್ಮೋಪದೇಶವಾಗಿ ನಾಮ ಎಳೆದುಕೊಂಡ ಹುಡುಗರು.  ಮನೆಯ ಕಾರ್ಯಕ್ರಮ ಎಂದರೆ ಅದು ಔರ್ಧ್ವದೇಹೀ ಕಾರ್ಯಕ್ರಮ. ವೈಕುಂಠ ಸಮಾರಾಧನೆ. ಬೆಳಗ್ಗೆ ಹೊರಟು ಸುರಿಯುವ ಮಳೆಗೆ ಒದ್ದೆಯಾಗಿ ತೊಡು ಗದ್ದೆಯಲ್ಲಿ ನೀರಾಟವಾಡಿ ಗುಡ್ಡೆ ತೋಟ ಸುತ್ತಿ ಮಧ್ಯಾಹ್ನದ ಹೊತ್ತಿಗೆ ಮನೆಯಂಗಳಕ್ಕೆ ಕಾಲಿಡುತ್ತಿದ್ದೆವು. ಅಂದು ಎರಡು ಕಡೆಯಲ್ಲಿ ಕಾರ್ಯಕ್ರಮ ಇರುವುದನ್ನು ಮನೆಯಲ್ಲಿ ಹಿರಿಯರು ಹೇಳಿದ್ದರು. ಮನೆಯಲ್ಲಿ ಕುಳಿತರೆ ಗಂಜಿ ಸಿಗುವುದೂ ಸಹ ಅನುಮಾನ ಎಂದಿರುವಾಗ ಹೊಟ್ಟೆತುಂಬದ ಆ ಊಟಕ್ಕಿಂತ ಹೊಟ್ಟೆ ತುಂಬುವ ಸಮಾರಾಧನೆಯ ಊಟದ ಆಯ್ಕೇಯೆ ಸುಲಭ ಅನ್ನಿಸುತ್ತಿತ್ತು. ನಾಲ್ಕೈದು ಮೈಲಿ ನಡೆದು ಹೋಗಬೇಕು.  ಎರಡು ಮನೆಯ ಕಾರ್ಯಕ್ರಮದಲ್ಲಿ ಯಾವ ಮನೆಗೆ ಹೋಗಬೇಕು ? ನಮ್ಮೊಳಗೇ ಚರ್ಚೆ. ನಮ್ಮಲ್ಲೊಬ್ಬ ಇದ್ದ. ಆತ ವಯಸ್ಸಿನಲ್ಲಿ ಎಲ್ಲರಿಗಿಂತಲೂ ಹಿರಿಯವನು. ಸ್ವಲ್ಪ ಭೀಮ ಗಾತ್ರದವನು.  ಸ್ವಭಾವವೂ ಹಾಗೆ. ಎಲೆಯ ಎದುರು ಕುಳಿತರೆ ಎರಡು ಬಗೆಯ ಪಾಯಸವನ್ನು ಮೂರು ಸಲ ಹಾಕಿಸಿ ತಿಂದು ತೇಗುತ್ತಿದ್ದ. ಅವನೊಂದು ಮನೆಯನ್ನು ಮೊದಲೇ  ಆಯ್ಕೆ ಮಾಡಿದ್ದ. ಆದಕ್ಕೆ ಅವನು ಕೊಟ್ಟ ಕಾರಣ ಬಹಳ ಸರಳವಾಗಿತ್ತು. 

ಬ್ರಾಹ್ಮಣೋ  ಭೋಜನ ಪ್ರಿಯ ಅಂತ ಭೋಜನದ ಬಗ್ಗೆ ತಿಳಿಯದವರು ಗೇಲಿ ಮಾಡಬಹುದು. ಭೋಜನವು ಪರಮಾತ್ಮ ಸದೃಶ ಎಂಬುದು ಅವರಿಗೆ ತಿಳಿಯದು.  ನಮ್ಮ ಭೀಮ ಗಾತ್ರದವನಿಗೆ ಭೋಜನ ಪ್ರಿಯವಾಗುವುದು ಕೈ ಭಾರವಾಗುವಾಗಲೇ ಎಂಬುದು ಬೇರೆ ಮಾತು. ಅಂದು ಆತನ ನಿರ್ಣಯದ ಹೊಲಬು  ಆವಾಗ ನಮಗೆ ಹೊಳೆಯಲಿಲ್ಲ. ನಾವು ಹೋಗುವ ಮನೆಯ ತಾತನಿಗೆ ಹನ್ನೆರಡು ಜನ ಮಕ್ಕಳು. ಇನ್ನೊಂದು ಮನೆಯಲ್ಲಿ ಸತ್ತು ಹೋದ ವ್ಯಕ್ತಿಗೆ ಒಬ್ಬನೇ ಒಬ್ಬ ಮಗನಿರುವುದರಿಂದ ಆ ಮನೆಯನ್ನು ಬಿಟ್ಟು ಈ ಮನೆಯನ್ನು ಆಯ್ಕೆ ಮಾಡಿಕೊಂಡದ್ದು ಹನ್ನೆರಡು ಮಕ್ಕಳು ಕೊಡುವ ದಕ್ಷಿಣೆಗಾಗಿ!!  ಇಂದು ಇದು ಕೇಳಿದರೆ ಹಾಸ್ಯಾಸ್ಪದವಾಗಬಹುದು. ನಂಬುವುದು ಕಷ್ಟವಾಗಬಹುದು. ಅದರೆ ಅದು ವಾಸ್ತವ.  ಆ ಬಡತನ ವೇಷವಲ್ಲದ  ನಿಜವಾದ ಪಾತ್ರ.   ಇಂದಿನ ಪಿಜಾ ಬರ್ಗರು ಕಾಲದಲ್ಲಿ ಹಸಿವೆಂದರೆ ಏನು ಎಂಬುದೇ ಅರಿವಿಗೆ ಬಾರದಿರುವಾಗ ಸಮಾರಾಧಾನೆಯ ಊಟವನ್ನು ಹಿಡಿದಿಡಬಲ್ಲ ಸಾಮಾರ್ಥ್ಯ ಇಲ್ಲ ಅಂತಲೇ ಹೇಳಬೇಕು.  ಹಸಿವೆಂದರೆ ಆರೋಗ್ಯದ ಲಕ್ಷಣ. ಆರೋಗ್ಯವಂತ ಹಸಿವು ಇಂದಿನ ಜನಾಂಗ ಮರೆತು ಹೋಗಿದೆ.  ಮಾತ್ರವಲ್ಲ ಸಿಗುವ ಚಿಲ್ಲರೆ ದಕ್ಷಿಣೆ,  ಇಂದಿನ ಮಕ್ಕಳು ಎಲೆಯ ಹತ್ತಿರವೇ ಚೆಲ್ಲಿ ಹೋಗುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅಷ್ಟೂ ನಿರ್ಲಕ್ಷ್ಯ. 

ಇಂದು ಬ್ರಾಹ್ಮಣೊ ಭೋಜನ ಪ್ರಿಯವೂ ಇಲ್ಲ ದಕ್ಷಿಣ ಪ್ರಿಯನೂ ಅಲ್ಲ. ಹಾಗಿದ್ದರೆ ಇಂದಿನ ಬ್ರಾಹ್ಮಣ ಆವಶ್ಯಕತೆಯಾದರೂ ಏನು? ಪ್ರಶ್ನೆ ಸಹಜ. 

ಕೆಲವು ದಿನಗಳ ಹಿಂದೆ ನಮ್ಮ ಪರಿಚಯದವರೊಬ್ಬರು ಮದುವೆ ದಲ್ಲಾಳಿ ಕೆಲಸ ಮಾಡುತ್ತಿದ್ದವರು. ಈಗ ಮದುವೆ ದಲಾಳಿಯಲ್ಲೂ ಅತ್ಯಂತ ವೈವಿಧ್ಯವಿದೆ  ಎಂಬುದು ಆಶ್ಚರ್ಯ. ಮದುವೆಯಾಗುವವರ, ಆಗಬೇಕಾದವರ ಕಾನೇಷುಮಾರಿ ಇವರ ದಿನಚರಿಯಲ್ಲಿರುತ್ತದೆ. ದಲ್ಲಾಳಿಗಳು ಒಂದಿಷ್ಟು ಖರ್ಚಿನ ಹಣ ಅಂತ ಕಮೀಷನ್ ಪಡೆಯುವುದನ್ನು ಕಂಡಿರಬಹುದು. ಆದರೆ ಇದು ಹಾಗಲ್ಲ. ಮದುವೆಯಾಗಬೇಕಾದ ಮಾಣಿ (?) ಯನ್ನು ಕರೆದು ಕೊಂಡು ಉತ್ತರಕರ್ನಾಟಕದ ಯಾವುದೋ ಊರಿಗೆ ಹೋಗುತ್ತಾರೆ.  ಒಂದು ಬ್ರಾಹ್ಮಣ ಹೆಣ್ಣನ್ನು ತೋರಿಸಿ ಹೆಣ್ಣಿನ ಅಪ್ಪ ಅಮ್ಮನಿಗೆ ಒಂದಿಷ್ಟು ದುಡ್ದು ಕೈಗೆ ಹಾಕಿದರೆ ಮದುವೆ ಹೆಣ್ಣು ಸಿದ್ಧ. ವಧು ದಕ್ಷಿಣೆ ಅಂತ ಗೌರವದಲ್ಲಿ ಹೇಳಬಹುದಾದರೂ  ವ್ಯವಹಾರ ಕುದುರುವ ರೀತಿ ನೋಡಿದರೆ ಆ ಗೌರವ ಅದು ಉಳಿಸಿಕೊಂಡಿರುವುದಿಲ್ಲ ಎಂದು ಅರ್ಥವಾಗುತ್ತದೆ. ಹೆಣ್ಣು ತೋರಿಸುವ ಮೊದಲೇ ಮುಂಗಡ ಅಂತ ಒಂದಷ್ಟು ದೊಡ್ಡ ಮೊತ್ತವೇ ಜೇಬಿಗಿಳಿಸಿಬಿಡುತ್ತಾರೆ. ನಂತರ  ಆ ಹೆಣ್ಣು ಒಪ್ಪಿಗೆಯೋ ಇಲ್ಲವೋ ಅದು ವಾಪಾಸು ಸಿಗುವ ಭರವಸೆಯಿಲ್ಲ. ಅಕ್ಷರಶಃ ಮಾರುಕಟ್ಟೆಯ ವ್ಯವಹಾರ.  ಹಲವು ಸಲ ತೋರಿಸುವುದು ಒಂದು ಹೆಣ್ಣಾದರೆ,  ನಂತರ ಮದುವೆಯಾಗುವಾಗ ಹೆಣ್ಣು ಬದಲಾಗುವ ಸಂಭವವೂ ಇರುತ್ತದೆ. ಡೆಮೋ ಪೀಸ್ ಒಂದು ಬೇರೆಯೇ ಇರುತ್ತದೆ!!!   ಇದು ಕೇವಲ ಬ್ರಾಹ್ಮಣರಲ್ಲಿ ಮಾತ್ರ ಅಂತ ನನ್ನ ಭಾವನೆ. ಯಾಕೆಂದರೆ ಬ್ರಾಹ್ಮಣ ಕನ್ಯಾಮಣಿಗಳೇ ಇಲ್ಲ. ಗಂಡು ಯಾವ ವಂಚನೆಗೂ ಸಿದ್ಧವಾಗಿರಬೇಕು.  ಪಕ್ಕಾ ವ್ಯವಹಾರಿಯಾಗಿರಬೇಕು. ಇಲ್ಲೂ ಅಂತೇ ಕರೆದು ಕೊಂಡು ಹೋದ ಹುಡುಗಿ ನಂತರ ಮದುವೆಗೆ ಹೆಣ್ಣೇ ಬೇರೆ ಎಂದು ಅರಿವಾದಾಗ ಗಂಡು ಬುದ್ಧಿವಂತನಂತೆ ಹೆಣ್ಣನ್ನು ನಿರಾಕರಿಸುತ್ತಾನೆ. ಮಧ್ಯವರ್ತಿ ಇಷ್ಟಕ್ಕೇ ಒಪ್ಪಂದದ ಪೂರಾ ಹಣ ಕೊಡುವಂತೆ ದುಂಬಾಲು ಬೀಳುತ್ತಾನೆ. ಬ್ರಾಹ್ಮಣ ಪಕ್ಕಾ ವ್ಯವಹಾರಿಯಾಗುತ್ತಾನೆ. 

ಮದುವೆ ಎಂಬುದು ಒಂದು ಭಾವನಾತ್ಮ ಸಂಬಂಧ. ಅದರಲ್ಲೂ ಒಂದು ಬ್ರಾಹ್ಮಣ ಕನ್ಯೆ ಗೃಹಿಣಿಯಾದ ಮೇಲೆ ಕರ್ಮಾಂಗದಲ್ಲಿ ವಾಮಭಾಗದಲ್ಲಿ ಸಹಭಾಗಿಯಾಗಬೇಕಾದವಳು ಇಲ್ಲಿ ವಿಕ್ರಯದ ಸಾಮಾಗ್ರಿಯಂತಾಗುತ್ತಾಳೆ. ಇಲ್ಲಿ ಮಾರಾಟದ ವಸ್ತು ಗಂಡೋ ಹೆಣ್ಣೋ ಅಂತ ಸಂದೇಹ ಬಂದರೂ ವೈಶ್ಯರಿಗಿಂತ ವ್ಯವಹಾರ ಕುಶಲಿ ಬ್ರಾಹ್ಮಣನೇ ಆಗಿರುತ್ತಾನೆ. ಬೀದಿ ಬದಿಯ ಮಾರಾಟಕ್ಕೂ ಇದಕ್ಕು ಹೆಚ್ಚಿನ ವೆತ್ಯಾಸವೇನೂ ಇರುವುದಿಲ್ಲ. ಅಲ್ಲಿ ಕೊಳೆತ ತರಕಾರಿಯಾದರೆ, ಇಲ್ಲಿ ಹಚ್ಚ ಹಸಿರು ಸಿಗಬಹುದು. ಆದರೆ ವ್ಯವಹಾರದ ರೂಪ ಮಾತ್ರ ಒಂದೇ.  ಹೆಣ್ಣನ್ನು ಗಂಡು ಕೊಳ್ಳುವುದೋ ಗಂಡನ್ನು ಹೆಣ್ಣು ಕೊಳ್ಳುವುದೋ ಹೇಳುವುದು ಕಷ್ಟ. ಹೆಣ್ಣು ಸಿಗದ ಗಂಡು ಯಾವುದಕ್ಕೂ ಸಿದ್ದನಿದ್ದಾನೆ. ಹಲವು ಸಲ ಹೆಣ್ಣಿನ ಅಪ್ಪ ದುಡ್ದಿನೊಂದಿಗೆ ಷರತ್ತುಗಳನ್ನೂ ಹೇಳುತ್ತಾನೆ. ನಂತರದಲ್ಲಿ ಅದು ಎಷ್ಟು ನೆರವೇರುತ್ತದೋ ಯಾರಿಗೆ ಗೊತ್ತು. ಆ ಕ್ಷಣಕ್ಕೆ ಅದು ಕೇವಲ ಒಪ್ಪಿಕೊಳ್ಳಬೇಕಾದ ಷರತ್ತುಗಳು. ಹೆಣ್ಣಿಗೆ ಅಡುಗೆ ಬರುವುದಿಲ್ಲ, ಮನೆಗೆಲಸ ಅಭ್ಯಾಸ ಇಲ್ಲ. ಹೀಗೆ  ಅಸಹಜ ಬೇಡಿಕೆಗಳು. ಭಾವಾನಾತ್ಮಕ ವಿಷಯಗಳಿಗೆ ಮನ್ನಣೆಯೇ ಇಲ್ಲದಲ್ಲಿ ಈ ಶರತ್ತುಗಳನ್ನು ಗಂಡು ಒಪ್ಪಿಕೊಳ್ಳುತ್ತಾನೆ. ಮದುವೆಯಾಗಿ ಕೆಲವು ತಿಂಗಳು ಜ್ಯಾರಿಯಲ್ಲಿದ್ದರೆ ಸಾಕು. ನಂತರ ....? ಇದನ್ನೆಲ್ಲ ಯೋಚಿಸುವುದಿಲ್ಲ. ಆದರೆ ಷರತ್ತು ಮಾತ್ರ ಇದ್ದೇ ಇರುತ್ತದೆ. ಕೊನೆಯಲ್ಲಿ ಆಕೆ ಏನೂ ಮಾಡದೇ ಇದ್ದರೂ ಆದೀತು. ಎಲ್ಲವನ್ನು ಮಾಡುವ ಹುಮ್ಮಸ್ಸು ಗಂಡಿಗೆ ಒಟ್ಟಿನಲ್ಲಿ ಗೃಹಸ್ಥನಾಗಿ ಬರಿದಾಗಲಿರುವ ವಾಮಭಾಗದ ಆಸನ ಭರ್ತಿಯಾಗಬೇಕು.  ಒಂದು ಹೆಣ್ಣು ಬೇಕು. 

ಮೊನ್ನೆ ಮಾಜಿ ಮಂತ್ರಿಗಳೊಬ್ಬರು ಹೇಳಿದ್ದರು. ಎಲ್ಲರಿಗಿಂತಲೂ ಹೆಚ್ಚಿಗೆ ಬ್ರಾಹ್ಮಣರಿಗೆ ಸರಕಾರೀ ಅನುದಾನ ಒದಗಿಸಿದ್ದು ನಾನೆ ಅಂತ. ಇರಬಹುದು, ಅದಕ್ಕೆ ನಿಜವಾಗಿಯೂ ಧನ್ಯವಾದ ಹೇಳಬೇಕು.  ರಹಸ್ಯವಾಗಿಯೋ ಬಹಿರಂಗವಾಗಿಯೋ ಮಹಾಯಾಗವನ್ನು ಮಾಡಿ ಕೆಲವಾದರೂ ಬ್ರಾಹ್ಮಣರಿಗೆ ಭೂರಿ ದಕ್ಷಿಣೆಯನ್ನು ಕೊಡುತ್ತಾರೆ. ಆದರೆ ಸಾಮಾಜಿಕವಾಗಿ ಬ್ರಾಹ್ಮಣನಿಗೆ ಸಲ್ಲುವುದು ಇಷ್ಟೇ ಅಂತ ಇದೆ. ಸರಕಾರದ ಲೆಕ್ಕದಲ್ಲಿ ಬ್ರಾಹ್ಮಣ ಮುಂದುವರೆದವನು ಮಾತ್ರವಲ್ಲ ಇನ್ನೂ ಮುಂದೆ ಓಡಿ ಹೋದವನು. ಅನುದಾನ ಸಿಗದ ನತದೃಷ್ಟ.  ಹಾಗಾಗಿ ಅನುದಾನವೇನೋ ಸಿಕ್ಕಿದೆ.  ಆದರೆ ಅದನ್ನು ಯಾವ ಬಗೆಯಲ್ಲಿ ಉಪಯೋಗಿಸುವುದು?  ಬ್ರಾಹ್ಮಣರಿಗೆ ಯಾವ ಸೌಲಭ್ಯವನ್ನು ರಾಜ್ಯಾಡಳಿತದಲ್ಲಿ ಒದಗಿಸಬೇಕು? ವಿದ್ಯಾಭ್ಯಾಸವೇ? ಬ್ರಾಹ್ಮಣರು ಮೊದಲೇ ವಿದ್ಯಾವಂತರು. ಹಣ? ಜೀವನಾಧಾರ? ಯಾವುದೂ ಅಲ್ಲ.  ಯಾವುದು ಇಲ್ಲವೋ ಅದನ್ನು ಒದಗಿಸಬೇಕು ಎಂದು ಯೋಚಿಸಿದರೆ  ಇಂದು ಬ್ರಾಹ್ಮಣ್ಯಕ್ಕೆ  ಬೇಕಾಗಿರುವುದು ಸಂಸ್ಕಾರಗಳು. ಹೌದು ಬ್ರಾಹ್ಮಣ ಸಂಸ್ಕಾರ ಒದಗಿಸಬೇಕು.  ಮೇಲೆ ಹೇಳಿದ ಎರಡು ನಿದರ್ಶನಗಳಿಂದ  ಬ್ರಾಹ್ಮಣ ಬದಲಾದ ರೀತಿ ತಿಳಿಯಬಹುದು. ಹಾಗೆ ನೋಡಿದರೆ ಪ್ರತಿಯೊಂದು ಜಾತಿ ಪಂಗಡಗಳಲ್ಲೂ ಈ ಸಮಸ್ಯೆ ಇರಬಹುದು. ಆದರೆ ಅದು ಉಳಿದವರಿಗೆ ಅರಿವಿಗೆ ಬರುವುದಿಲ್ಲ.  ಉಳಿದ ಕಡೆ ಕ್ರಾಂತಿಯಾದಾಗ ಅದು ಅಲ್ಲೇ ಆ ಜಾತಿಯೊಳಗೇ ಇರುತ್ತದೆ.  ವಿಚಿತ್ರ ಎಂದರೆ ಬ್ರಾಹ್ಮಣ ಸಂಸ್ಕಾರ ದೂರವಾದಾಗ ಅದು ಪ್ರಪಂಚಕ್ಕೆ ತಿಳಿದುಬಿಡುತ್ತದೆ. ಬ್ರಾಹ್ಮಣ್ಯದ ಮಹತ್ವ ಅದು. ಬ್ರಾಹ್ಮಣ ಬ್ರಾಹ್ಮಣನಾಗಿ ಇರಬೇಕಾದದ್ದು ಉಳಿದ ಜಾತಿಗೂ ಅನಿವಾರ್ಯ ಎಂದನಿಸುತ್ತದೆ. ಬ್ರಾಹ್ಮಣ ಬದುಕು ಬಿಳೀ ವಸ್ತ್ರದಂತಿರುವ ಬದುಕು.  ಬಹಳ ಎಚ್ಚರಿಕೆ ಬೇಕು. ಬ್ರಾಹ್ಮಣನ್ನು  ಬ್ರಾಹ್ಮಣನಿಗಿಂತಲೂ ಹೆಚ್ಚಾಗಿ ಸಮಾಜವೇ ಗಮನಿಸುತ್ತದೆ.  ಮುಖ್ಯವಾಗಿ ಸಂಸ್ಕಾರ ಅದು ಜನ್ಮದಿಂದಲೇ ಬರುವಂತದ್ದು. ಯಾರೋ ದಾನ ಮಾಡಿ ಒದಗಿಸುವದ್ದಲ್ಲ.   ಆದರೆ ಜನ್ಮದಿಂದಲೇ ಲಭಿಸಿದ್ದು ಅದು ಉಳಿದಿಲ್ಲ. ಗಿಡಮರಗಳಿಗೆ ಕಸಿ ಕಟ್ಟಿದಂತೆ ತನ್ನ ಸಂಸ್ಕಾರಗಳಿಗೂ ಮನುಷ್ಯ ಕಸಿಕಟ್ಟಿಕೊಂಡು ಏನೋ ಆಗಿದ್ದವನು ಇನ್ನೇನೋ ಆಗಿ ಸಮಾಜದಲ್ಲಿ ಗುರುತಿಸಲ್ಪಡುತ್ತಾನೆ.  ಬ್ರಾಹ್ಮಣನಿಗೆ ಉಚಿತ ಶಿಕ್ಷಣದ ಅವಶ್ಯಕತೆಯಾಗಲೀ ಅನುದಾನದ ಅವಶ್ಯಕತೆ ಇದೆ ಎಂದನ್ನಿಸುವುದಿಲ್ಲ. ಉತ್ತಮ ಸಂಸ್ಕಾರ ಯುಕ್ತ ಬದುಕಿನ ಕೊರತೆ ಇದೆ. ಸಂಧ್ಯ ಜಪ ತಪ ಕರ್ಮಾನುಷ್ಠಾನಗಳ ಪ್ರಜ್ಞೆ ಜಾಗ್ರತವಾಗಬೇಕಿದೆ. ಅನಗತ್ಯ ಆಡಂಬರದ ಉತ್ಸವಕ್ಕಿಂತಲೂ ಇದರ ಅರಿವಿನ ಬಗ್ಗೆ ಅಭಿಯಾನವಾಗಬೇಕಿದೆ. ಸರಳವಾದ ಜೀವನ ಶೈಲಿಯ  ಸಾರ್ಥಕತೆಯ ಅರಿವಾಗಬೇಕಿದೆ. 
ಮನುಷ್ಯನಲ್ಲಿ  ಸಂಸ್ಕಾರದ ತಳಹದಿ ಅಂತ ಗುರುತಿಸುವುದು ಆತನಲ್ಲಿರುವ  ಆತ್ಮ ವರ್ಚಸ್ಸಿನಿಂದ.   ಪರಮಾತ್ಮನನ್ನು ಗುರುತಿಸುವಲ್ಲಿ ಲಭ್ಯವಾಗಬೇಕಾದ  ಜಾತಿ ಸಂಸ್ಕಾರಗಳು   ಇಂದು ಅದು ಮನುಷ್ಯನನ್ನುವರ್ಗೀಕರಿಸುವುದಕ್ಕೆ ಉಪಯೋಗವಾಗುತ್ತಿದೆ.  ಹಾಗಾಗಿ ಸಂಸ್ಕಾರದ ಕೊರತೆ, ಮಾನವೀಯ ಮೌಲ್ಯಗಳ ಕೊರತೆ ಸಮಾಜವನ್ನು ಬಾಧಿಸುತ್ತದೆ.  ಹಲವರಲ್ಲಿ  ಮಿತ್ರತ್ವ,  ವ್ಯವಹಾರ  ಈ ಎಲ್ಲ  ಸೌಹಾರ್ದತೆಯಿದ್ದರೂ ಜಾತಿ ಯಾವುದು ಅಂತ,  ಮತ್ತೊಬ್ಬರ ಸಂಸ್ಕಾರ ತಿಳಿಯುವ ಕುತೂಹಲ. ಆದರೆ ಸ್ವತಃ ತಮ್ಮ ಸಂಸ್ಕಾರ ಉಳಿಸಿಕೊಳ್ಳುವುದರಲ್ಲಿ ಕಾಳಜಿಯೇ ಇರುವುದಿಲ್ಲ.  








No comments:

Post a Comment