Sunday, July 9, 2023

ಸತ್ಯ ಪ್ರತಿಜ್ಞೆ

         ಮಹಾ ಭಾರತದಲ್ಲಿ ಭೀಷ್ಮ ಪ್ರತಿಜ್ಞೆ ಕೇಳಿರಬಹುದು. ಪ್ರತಿಜ್ಞೆ ಎಂದಾಕ್ಷಣ ಮೊದಲು ಭೀಷ್ಮ ನೆನಪಿಗೆ ಬರುತ್ತಾನೆ. ಯಾಕೆಂದರೆ ಆ ಪ್ರತಿಜ್ಞೆಯಿಂದ ಆತನ ಅಪ್ಪ ಇಟ್ಟ ಹೆಸರು ಬದಲಾಗಿಬಿಡುತ್ತದೆ. ಮೂಲ ಹೆಸರೇ ಮರೆತು ಹೋಗುವಷ್ಟು ಬದಲಾಗಿಬಿಡುತ್ತದೆ.   ಪ್ರತಿಜ್ಞೆ ಎಂದರೆ ಹೇಗಿರಬೇಕು ಎಂಬುದನ್ನು ಬದುಕಿನಾದ್ಯಂತ ತೋರಿಸಿಕೊಟ್ಟ ಪುರಾಣದ ಮಹಾ ಪುರುಷ ಭೀಷ್ಮ. ಈತನ ಕಥೆಯನ್ನು ಶಾಲೆಯ ತರಗತಿಯ ಒಳಗೆ ಕುಳಿತು ಓದುತ್ತೇವೆ. ಎಲ್ಲವೂ ಚೆನ್ನಾಗಿರುತ್ತದೆ. ರೋಚಕವಾಗಿರುತ್ತದೆ. ಪ್ರತಿಜ್ಞೆ...ನಾವು ಕೆಲವೊಮ್ಮೆ ಆವೇಶದಲ್ಲಿ ಮಾಡಿಬಿಡುತ್ತೇವೆ. ಪ್ರತಿಜ್ಞೆ ಅದು ದೃಢ ನಿರ್ಧಾರದ ಪ್ರತೀಕ. ಗಟ್ಟಿಮನಸ್ಸಿನ ಕಾಠಿಣ್ಯದ ಪರೀಕ್ಷೆ ಅದು. ಯಾವುದು ಅಸಾಧ್ಯವೋ ಅದು ಸಾಧ್ಯವಾಗುವ ಕರ್ತೃತ್ವ ಶಕ್ತಿ ಅದರಲ್ಲಿದೆ.

 "ಭಾರತವು ನನ್ನದೇಶ, ಬಾರತೀಯರೆಲ್ಲರೂ ನನ್ನ ಸಹೋದರ ಸಹೋದರಿಯರು. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ...."

        ನನಗಿನ್ನೂ ನೆನಪಿದೆ ನಮ್ಮ ಕೇರಳದ ಶಾಲೆಗಳಲ್ಲಿ ಬೆಳಗ್ಗೆ ಪ್ರಾರ್ಥನೆ ಮಾಡಿದ ನಂತರ ಶಾಲಾ ನಾಯಕ ಪ್ರತಿಜ್ಞೆಯನ್ನು ಓದಿ ಹೇಳುತ್ತಾನೆ. ಮಿಕ್ಕ ಉಳಿದ ವಿದ್ಯಾರ್ಥಿಗಳು ಅಧ್ಯಾಪಕರೊಂದಿಗೆ  ಈ ಪ್ರತಿಜ್ಞೆ ಶಾಲೆಯಲ್ಲಿ ಮೊಳಗುತ್ತದೆ. ಅದೊಂದು ಸಮ್ಮೋಹನ. ಬೆಳಗ್ಗೆ ಶಾಲೆ ಆರಂಭವಾಗುವ ಒಂದು ಗೌರವದ ಸಮಯ. ಮೊನ್ನೆ ಒಂದು ಬಾರಿ ನಮ್ಮ ಕಾಯರ್ ಕಟ್ಟೆ ಹೈಸ್ಕೂಲಿಗೆ ಹೋಗಿದ್ದೆ. ಧ್ವಜ ಸ್ಥಂಭದ ಎದುರು ಶಾಲಾ ಅಂಗಣ. ಅದರ ತುದಿಯಲ್ಲಿ ನಿಂತು ನೋಡಿದಾಗ ಬಾಲ್ಯದಲ್ಲಿ ಹೇಳಿದ ಈ ಪ್ರತಿಜ್ಞೆ ನೆನಪಾಯಿತು. ದಿನವೂ ಮಾಡುತ್ತಿದ್ದ ಪ್ರತಿಜ್ಞೆ ಎಲ್ಲರಿಗೂ ಬಾಯಿ ಪಾಠವಾಗಿಬಿಡುತ್ತಿತ್ತು. ಶಾಲಾ ನಾಯಕ ನೆಪ ಮಾತ್ರಕ್ಕೆ ಪ್ರತಿಜ್ಞೆ ಬರೆದ ಕಾಗದವನ್ನು ಎದುರು ಹಿಡಿದಿರುತ್ತಿದ್ದ. ನಾವೆಲ್ಲ ಅಷ್ಟೇ ಯಾಂತ್ರಿಕವಾಗಿ ಆ ಪ್ರತಿಜ್ಞೆ ಹೇಳುತ್ತಿದ್ದೆವು. ಕ್ಷಮಿಸಿ ಪ್ರತಿಜ್ಞೆ ಮಾಡುತ್ತಿರಲಿಲ್ಲ. ಯಾಕೆಂದರೆ ಆ ಪ್ರತಿಜ್ಞೆಯ ಗಂಭೀರತೆ ಆಗ ಅರಿವಿಗೆ ಬರಲೇ ಇಲ್ಲ.  ಬಾಲ್ಯದಲ್ಲೆ ಸುಳ್ಳು ಹೇಳುವುದಕ್ಕೆ ಇಲ್ಲಿಂದಲೇ ಆರಂಭವಾಗಿಬಿಡುತ್ತದೆ. ಯಾಕೆಂದರೆ  ಬಾರತೀಯರೆಲ್ಲ ನನ್ನ ಸಹೋದರ ಸಹೋದರಿಯರು ಎಂಬುದನ್ನು ಆ ಅಂಗಣ ಬಿಡುವಾಗಲೆ ಮರೆತು ಬಿಟ್ಟ ಸನ್ನಿವೇಶಗಳು ಹೆಚ್ಚು. 

        ಪ್ರತಿಜ್ಞೆ ಅದೆಷ್ಟು ಪವಿತ್ರವಾದದ್ದುಎಂದರೆ ಅದು ನಮ್ಮ ವಿಶ್ವಾಸ ನಮ್ಮ ಭಾವನೆ ಆಶೋತ್ತರಗಳಿಗೆ ಸೀಮಿತವಾಗಿ ಉಳಿಯುತ್ತದೆ. ನಮ್ಮ ಬದ್ದತೆ ಪ್ರಾಮಾಣಿಕತೆ ಆ ಪ್ರತಿಜ್ಞೆಯ ಪಾವಿತ್ರ್ಯತೆಯನ್ನೂ ಗೌರವನ್ನು ಉಳಿಸುತ್ತದೆ. ಅದಕ್ಕೊಂದು ಮೌಲ್ಯ ನಮ್ಮ ನಡೆ ನುಡಿಗಳಿಂದ ನಿರ್ಧಾರವಾಗುತ್ತದೆ. ಪುರಾಣದಲ್ಲಿನ ಭೀಷ್ಮ ಪ್ರತಿಜ್ಞೆ ಅದಕ್ಕೊಂದು ಘನತೆ ತಂದದ್ದು ಭೀಷ್ಮನ ಜೀವನ. ಪ್ರತಿಜ್ಞೆ ಅದೊಂದು ಆತ್ಮ ವಿಶ್ವಾಸದ ಸಂಕೇತ. ನಮ್ಮಲ್ಲಿ ಆತ್ಮ ವಿಶ್ವಾಸದ ಕೊರತೆ ಇದ್ದರೆ ಅದೂ ವ್ಯರ್ಥವಾಗಿಬಿಡುತ್ತದೆ. ದೇವರು ಎಂಬುದು ಸರ್ವಶ್ರೇಷ್ಠ. ಸರ್ವ ಉತ್ಕೃಷ್ಟ. ಅದೆಲ್ಲವೂ ನಮ್ಮ ಮನೋಭಾವದಿಂದ ವ್ಯಕ್ತವಾಗುವ ಸೀಮಿತ ಸಂಭಂಧ. ನಾವು ದೇವರನ್ನು ಎಲ್ಲಿ ಇರಿಸುತ್ತೇವೆ ಅದಕ್ಕೆ ಹೊಂದಿಕೊಂಡಿರುತ್ತದೆ. ನಮ್ಮ ದೇವರು ಪವಿತ್ರವಾಗುವುದು ಅಪವಿತ್ರವಾಗುವುದು ಎಲ್ಲವೂ ನಮ್ಮ ವರ್ತನೆಯಲ್ಲಿರುತ್ತದೆ. ಪ್ರತಿಜ್ಞೆಯೂ ಅದೇ ರೀತಿ. ಖಡ್ಗ ರಕ್ಷಣೆಗೆ ಹೇಗೆ ಪೂರಕವಾಗುತ್ತದೆಯೋ ಅದೇ ರೀತಿ ವಿಧ್ವಂಸಕ್ಕೂ ಕಾರಣವಾಗುತ್ತದೆ. ಪ್ರತಿಜ್ಞೆ ಕೇವಲ ಸತ್ಕಾರ್ಯಕ್ಕೆ ಸೀಮಿತವಾಗುವುದಿಲ್ಲ ಅದು ದುಷ್ಟ ಕೃತ್ಯಗಳಿಗೂ ಪ್ರತಿಜ್ಞೆ ಬಳಕೆಯಾಗುತ್ತದೆ. 

        ಶಾಲೆಯಿಂದ ಆರಂಭವಾಗುವ ಈ ಪ್ರತಿಜ್ಞೆ ಮತ್ತೆ ಹಲವು ಸ್ಥರಗಳಲ್ಲಿ ಉಪಯೋಗವಾಗುತ್ತದೆ. ಶಾಲಾ ದಿನದ ಪ್ರತಿಜ್ಞೆ ಮತ್ತೆ ಹಲವು ವಿಧಗಳಲ್ಲಿ ಎದುರಿಗೆ ಬರುತ್ತದೆ. ರಾಜಕೀಯ ಅಥವ ಅಧಿಕಾರ ಪದವಿಗಳಲ್ಲಿ ಇದು ಒಂದು ಯಾಂತ್ರಿಕವಾಗಿರುತ್ತದೆ. ಯಾವುದೇ ಸರಕಾರ ಅಧಿಕಾರಕ್ಕೆ ಬರುತ್ತಿದ್ದರೂ ರಾಷ್ಟ್ರಪತಿ  ಅಥವಾ ರಾಜ್ಯಪಾಲರು ಪ್ರತಿಜ್ಞೆಯನ್ನು ಬೋಧಿಸುತ್ತಾರೆ. ಅದಕ್ಕೆ ಬೇರೆ ಸತ್ಯ ಪ್ರತಿಜ್ಞೆ ಎಂದು ಕರೆಯುತ್ತಾರೆ. ಪ್ರತಿಜ್ಞೆ ಎಂಬುದು ಅದು ಸತ್ಯವಾಗಿರಲೇ ಬೇಕು. ಪಂಚಾಮೃತದಲ್ಲಿ ಹಾಲು ಬೆರೆತಂತೆ. ಹಾಲು ಹಾಕಿದ ಪಂಚಾಮೃತ ಎಂದು ಹೇಳುವುದು ಎಷ್ಟು ಅಸಂಭದ್ದವೋ ಪ್ರತಿಜ್ಞೆ ಸತ್ಯ ಪ್ರತಿಜ್ಞೆ ಎಂದು ಕರೆಯುವುದೂ ಹಾಸ್ಯಾಸ್ಪದ. ಮಂತ್ರಿ ಅಧಿಕಾರಿಗಳು ಪ್ರತಿಜ್ಞೆ ಸ್ವೀಕರಿಸುವಾಗ ಅದು ಸತ್ಯ ಪ್ರತಿಜ್ಞೆ ಎಂದಾಗಬೇಕಾದರೆ ಅದರ ಅಕ್ಷರಾಕ್ಷರವೂ ಪಾಲನೆಯಾಗಬೇಕು. ಆದರೆ ವಾಸ್ತವ ಮಾತ್ರ ಬೇರೆಯೇ ಆಗಿರುತ್ತದೆ. ಹೀಗಿರುವುದರಿಂದಲೇ ಪ್ರತಿಜ್ಞೆ ಅದನ್ನು ಸತ್ಯ ಪ್ರತಿಜ್ಞೆ ಎಂದು ಕರೆದ ಮಾತ್ರಕ್ಕೆ  ಅದು ಗಂಭೀರವಾಗುವುದಿಲ್ಲ.  ಅದು ಸತ್ಯವಾಗಬೇಕು. ಶಾಲಾ ಜೀವನದಲ್ಲಿ ಭಾರತವು ನನ್ನದೇಶ , ಹೀಗೆ ಏನೋ ಯಾಂತ್ರಿಕವಾಗಿ ಹೇಳಿದಂತೆ ಇಂದು ಪ್ರತಿಜ್ಞೆಗಳು ಯಾಂತ್ರಿಕವಾಗಿದೆ. ಮತ್ತೂ ಹಾಸ್ಯಾಸ್ಪದವಾಗಿದೆ. ಇದು ಪ್ರತಿಜ್ಞೆ ಎಂಬ ಶಬ್ದಾರ್ಥವನ್ನೇ ಹಾಸ್ಯಾಸ್ಪದವನ್ನಾಗಿ ಮಾಡಿದೆ. 


No comments:

Post a Comment