Tuesday, September 26, 2023

ಸನಾತನ ಸಲ್ಲದು ಸಣ್ಣತನ

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಂ

ಧರ್ಮ-ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥


ಭೂಮಿಯ ಮೇಲೆ ಗಾಳಿ ಇಲ್ಲದೇ ಇದ್ದರೆ ಏನಾಗಬಹುದು? ಹೀಗೆ ಒಂದು ಪುಟ್ಟ ಮಗುವಿನಲ್ಲಿ ಕೇಳಿದರೆ ಅದರೆ ಉತ್ತರ "ಚಿಪ್ಸ್ ಪ್ಯಾಕೆಟ್ ನಲ್ಲಿ ಗಾಳಿಯೇ ಇರುತ್ತಿರಲಿಲ್ಲ"  ಎಂದು ಹೇಳಬಹುದು.  ಸಮಸ್ಯೆಯನ್ನು ಆ ಮಗು ಕಾಣುವ ರೀತಿಯದು. 

ತಾತ್ವಿಕ ವಿಚಾರಗಳ  ಮಂಡನೆಯಲ್ಲಿ ಮೇಲೆ ಹೇಳುವ  ಒಂದು ಶ್ಲೋಕ ಸಾಮಾನ್ಯವಾಗಿರುತ್ತದೆ. ಒಂದಷ್ಟು ಸಂಸ್ಕೃತ ಪದಗಳು ಸೇರಿಕೊಂಡರೆ ತಾತ್ವಿಕ ವಿಚಾರಗಳು ಗಂಭೀರವಾಗಿಬಿಡುತ್ತವೆ. ಅದು ಸಂಸ್ಕೃತದ ಶಕ್ತಿ . ಇಷ್ಟಿದ್ದರೂ ಸಂಸ್ಕೃತ ಎಂದೊಡನೆ ಒಂದು ಮಡಿವಂತಿಗೆ, ಹಳದಿ ದೃಷ್ಟಿ ಇದ್ದೇ ಇರುತ್ತದೆ. ಮೇಲೆ ಹೇಳಿದ ಭಗವದ್ಗೀತೆಯಲ್ಲಿ ಭಗವಂತ ಉಲ್ಲೇಖಿಸುವ ಧರ್ಮ ಯಾವುದು? ಹಾಗೆ ವಿಶ್ಲೇಷಣೆ ಮಾಡುತ್ತಿದ್ದರೆ, ಸಮಗ್ರ ಭಗವದ್ಗೀತೆಗೆ ಹಲವಾರು ಅರ್ಥಗಳು ಹುಟ್ಟಿಕೊಳ್ಳುತ್ತವೆ. ನೋಡುವ ದೃಷ್ಟಿಕೋನದಲ್ಲಿ ನಮ್ಮ ದೃಷ್ಟಿ ಸಾಮಾರ್ಥ್ಯ ಎಷ್ಟಿದೆಯೋ ಅದನ್ನು ಅವಲಂಬಿಸಿ ಅದು ವಿಶಾಲವಾಗುತ್ತಾ ಹೋಗುತ್ತದೆ. ಹಾಗೆ ಕಾಣಿಸಿಕೊಳ್ಳದೇ ಇದ್ದರೆ ಅದು ಭಗವದ್ಗೀತೆ ಎಂದಾಗುವುದಾದರೂ ಹೇಗೆ? ಆದರೂ ಧರ್ಮ ಎಂದು ಭಗವಂತ ಯಾವುದನ್ನು ಹೇಳಿರಬಹುದು. ಸಾಮಾನ್ಯ ತರ್ಕಕ್ಕೆ ಒಡ್ಡಿಕೊಳ್ಳುತ್ತಾ ಹೋದರೆ ಮಹಾಭಾರತದಲ್ಲಿ ಭಗವಂತನ ಅವತಾರ ಯಾವ ಧರ್ಮ ಉದ್ದರಿಸುವುದಕ್ಕೆ ಆಗಿರಬಹುದು? ಮಹಾ ಭಾರತದಲ್ಲಿ ಯಾವ ಧರ್ಮ ನಿರ್ದಿಷ್ಟವಾಗಿ ಸ್ಥಾಪನೆಯಾಯಿತು?  ಆ ಧರ್ಮ ನಾವು ಈಗ ಯಾವುದನ್ನು ಧರ್ಮ ಎಂದು ಕಾಣುತ್ತೇವೆಯೋ ಆ ಧರ್ಮ ಖಂಡಿತ ಆಗಿರಲಿಕ್ಕಿಲ್ಲ. ಮಹಾಭಾರತದಲ್ಲಿ ಭಗವಂತ ಉದ್ದರಿಸಿದ ಧರ್ಮ ಯಾವುದು? ಬ್ರಾಹ್ಮಣ ಧರ್ಮವೇ? ಕ್ಷಾತ್ರ ಧರ್ಮವೇ? ಅಥವಾ ಇನ್ನಿತರ ವರ್ಣರೂಪದ ಧರ್ಮಗಳೇ? ಯಾವ ಬ್ರಾಹ್ಮಣನನ್ನೂ ಭಗವಂತ ನಿರ್ದಿಷ್ಟವಾಗಿ ಉದ್ದರಿಸಲಿಲ್ಲ. ಒಂದು ವೇಳೆ ಭಗವಂತ ಬ್ರಾಹ್ಮಣಧರ್ಮವನ್ನು ಉದ್ದರಿಸುತ್ತೇನೆ ಎಂದಿದ್ದರೆ  ಈಗಿನ ವಿರೋಧಿ ಮನಸ್ಸುಗಳ ಪ್ರತಿಕ್ರಿಯೆಗಳು ಹೇಗಿರುತ್ತಿದ್ದವು?  ಅದರೂ ನಾವು ಒಂದು ಪೂರ್ವಾಗ್ರಹದ ಧರ್ಮದ ದೃಷ್ಟಿಕೋನದದಿಂದಲೇ ಭಗವದ್ಗೀತೆಯನ್ನು ಕಾಣುವಾಗ ಈ ಉತ್ತರ ಕೊಡಲಾಗದ ಪ್ರಶ್ನೆಗಳು ಎದುರಾಗುತ್ತವೆ. 

ಭಗವಂತ ಹೇಳಿದ ಧರ್ಮ ಯಾವುದು? ಅಥವ ಧರ್ಮ ಎಂಬುದರ ಅರ್ಥವೇನು? ಅದನ್ನು ಯೋಚಿಸದೇ ನಾವು ಧರ್ಮವನ್ನು ಯಾವ ದೃಷ್ಟಿಕೋನದಿಂದ ಕಾಣುತ್ತೇವೆಯೋ ಅದೇ ದೃಷ್ಟಿಯಲ್ಲಿ ನಂಬಿಬಿಡುತ್ತೇವೆ. ಮುಖ್ಯವಾಗಿ ನಮ್ಮ ಕಣ್ಣಿಗೆ ಬಣ್ಣದ ಪರೆಯನ್ನು ಹಿಡಿದು ಅದೇ ಬಣ್ಣದ ಬೆಳಕಿನಲ್ಲಿ ಧರ್ಮವನ್ನು ಕಂಡು ಅದೇ ಬಣ್ಣ ಎಂದು ಹೇಳುವ ಒಂದು ಬಗೆಯ ಪಾಮರ ಸ್ವಭಾವವನ್ನು ಪ್ರದರ್ಶಿಸುತ್ತೇವೆ.  ಭೂಮಿ ಮೇಲೆ ಗಾಳಿ ಎಂಬುದು ಇಲ್ಲದಿದ್ದರೆ ಏನಾಗಬಹುದು ಎಂದು ಈಗಿನ ಮಗುವಿನಲ್ಲಿ ಕೇಳಿದರೆ ಆ ಮಗು ಉತರಿಸುತ್ತದೆ, " ಗಾಳಿ ಇಲ್ಲದೇ ಇದ್ದರೆ ಚಿಪ್ಸ್ ಪ್ಯಾಕೆಟ್ ನಲ್ಲಿ ಗಾಳಿಯೇ ಇರುತ್ತಿರಲಿಲ್ಲ"  ಬಹಳ ವಿಡಂಬನೆಯಾಗಿರಬಹುದು ಈ ಉತ್ತರ. ಆ ಮಗುವಿನ ಅರಿವಿನ ಪ್ರಪಂಚದ ವಿಸ್ತಾರ ಅದು. ಹಾಗೆಂದು ಭೂಮಿಯ ಮೇಲಿನ ಗಾಳಿಯ ಅಸ್ತಿತ್ವದ ಬಗೆಗಿನ ಜ್ಞಾನ ಶೂನ್ಯವಾಗುವುದಿಲ್ಲ. ಆ ಮಗುವಿನ ದೃಷ್ಟಿ ಕೋನ ದೃಷ್ಟಿ ಸಾಮಾರ್ಥ್ಯ ಅಷ್ಟಕ್ಕೆ ಸೀಮಿತ. ಹಾಗಾಗಿ ಈಗ ಧರ್ಮ ಎಂಬುದು ಅನರ್ಥವನ್ನು ಕಲ್ಪಿಸಿಕೊಂಡಲ್ಲಿ ಧರ್ಮದ ಸ್ಥಾನ ಭ್ರಷ್ಟವಾಗುವುದಿಲ್ಲ, ಬದಲಿಗೆ ಮನುಷ್ಯನ ಬುದ್ಧಿ ಭ್ರಷ್ಟವಾಗುತ್ತದೆ. 

ಬೀಜ ಮೊಳಕೆಯೊಡೆಯುತ್ತದೆ, ಗಿಡವಾಗುತ್ತದೆ,ಮರವಾಗುತ್ತದೆ, ಹೂ ಅರಳುತ್ತದೆ, ಕಾಯಿ ಹಣ್ಣಾಗುತ್ತದೆ. ಇದು ಪ್ರಕೃತಿ ಧರ್ಮ.  ಈ ಜೀವರಾಶಿಗಳು ಚರಾಚರವಸ್ತುಗಳು ಸಹಜವಾದ ಒಂದು ಧರ್ಮದ ಅಸ್ತಿತ್ವವನ್ನು ಹೊಂದಿದೆ. ಆ ಆವರಣದ ಒಳಗೆ ಇರುವುದೇ ಜಗತ್ತು. ಈ ಸಹಜ ಧರ್ಮಗಳನ್ನು ಮೀರುವುದೇ ಧರ್ಮಗ್ಲಾನಿ ಎನಿಸಲ್ಪಡುತ್ತದೆ. ಪುರಾಣದಲ್ಲಿ ಶ್ರೀಕೃಷ್ಣ ಕಾಳಿಂಗ ಮರ್ದನ ಮಾಡುವ ಕಥೆ ಇದೆ. ಕಾಳಿಂಗ ಮರ್ದನ ಆತ ಮಾಡಿದ್ದಾನೆ ಎಂದರೆ ಇದ್ದ ಎಲ್ಲ ಸರ್ಪಗಳನ್ನು ಕೊಂದು ನಾಶ ಮಾಡಬೇಕೆಂದು ಅರ್ಥವಲ್ಲ. ಉಳಿದ ಜೀವಸಂಕುಲಗಳನ್ನು ಭಗವಂತ ಹೇಗೆ ಕಾಣುತ್ತಾನೋ  ಅದನ್ನೆ ಸರ್ಪದಲ್ಲು ಕಾಣುತ್ತಾನೆ. ಹಾಗಾದರೆ ಕಾಳಿಂಗ ಮರ್ದನ ಯಾಕಾಯಿತು? ಇದರ ಆಳವನ್ನು ತಿಳಿದರೆ ಧರ್ಮಾಧರ್ಮದ ಅರಿವು ಸಾಧ್ಯವಾಗುತ್ತದೆ. ಅಧರ್ಮ ಎಷ್ಟು ಆಳದಲ್ಲಿದ್ದರೂ ಭಗವಂತ ಅದರ ಅಸ್ತಿತ್ವವನ್ನು ಬಯಸುವುದಿಲ್ಲ. ಹಾಗಾಗಿ ಆಳದಲ್ಲಿದ್ದ ಸರ್ಪದ ಮರ್ದನವಾಗುತ್ತದೆ. 

ಧರ್ಮ ಎಂದರೆ ಏನು? ಸಕಲ ಜೀವರ ರಾಶಿಗಳಲ್ಲಿ ಶ್ರೇಷ್ಠ ಮನುಷ್ಯ. ಆತ ನಗುತ್ತಾನೆ, ಅಳುತ್ತಾನೆ, ಮಾತನಾಡುತ್ತಾನೆ. ಹೀಗೆ ಉಳಿದೆಲ್ಲ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಅದು ಧರ್ಮ.  ನಾಯಿ ನಿಕೃಷ್ಟವಾಗಿ ಹೇಳಿದರೂ, ಒಂದು ಬೀದಿ ನಾಯಿಕೂಡ ವ್ಯಕ್ತ ಪಡಿಸುವ ಭಾವನೆಯನ್ನು ಬೇರೆ ಪ್ರಾಣಿಗಳು ವ್ಯಕ್ತ ಪಡಿಸುವುದಿಲ್ಲ. ಸಂತಸವಾಗುವಾಗ ಬಾಲ ಅಲ್ಲಾಡಿಸುತ್ತದೆ. ಅದು ಅನುಭವಿಸುವ ಭಾವನೆಗಳನ್ನು ತನ್ನ ಕಣ್ಣು ಕಿವಿಯಿಂದ ಅದು ವ್ಯಕ್ತ ಪಡಿಸುವ ರೀತಿ ಬೇರೆ ಪ್ರಾಣಿಗಳಿಗೆ ಇರುವುದಿಲ್ಲ. ಹುಲಿ ಸಿಂಹ ಎಂದಾದರೂ ನಗುವುದನ್ನು ನೋಡುವುದಕ್ಕೆ ಸಾಧ್ಯವೇ? ಎಂತಹ ರುಚಿಕರ ಮಾಂಸಾಹರ ಸಿಕ್ಕರೂ ಅವುಗಳು ವ್ಯಗ್ರತೆಯಿಂದಲೇ ನೋಡುತ್ತದೆ. ಅದಕ್ಕೆ ಸಂತೋಷವಾದರೂ ಮುಖ ವ್ಯಗ್ರವಾಗಿಯೇ ಇರುತ್ತದೆ. ಅದು ಅದರ ಸಹಜ ಧರ್ಮ. ಒಂದು ವೇಳೆ ಅದು ನಗುವುದಕ್ಕೆ ತೊಡಗಿದರೆ ವಿಚಿತ್ರ ಎನಿಸಬಹುದು.   ಇದನ್ನೇ ಪ್ರಕೃತಿ ಧರ್ಮ ಎನ್ನುವುದು. ಈ ಪ್ರಕೃತಿ ಸಾರುವ ಧರ್ಮಕ್ಕೆ ಗ್ಲಾನಿಯಾಗುವಾಗ ಮೇಲೆ ಹೇಳಿದಂತೆ ಸಂಭವಾಮಿ ಯುಗೇ ಯುಗೇ ಎಂದಾಗುತ್ತದೆ. ನಾವು ಇವತ್ತು ಹುಲಿ ಸಿಂಹಗಳನ್ನು ನಗಿಸುವುದಕ್ಕೆ ಪ್ರಯತ್ನಿಸುತ್ತೇವೆ. ಪ್ರಕೃತಿಯ ಧರ್ಮಗಳನ್ನು ಮೀರಿ ಬದುಕುತ್ತೇವೆ. ಇಂತಹ ಜೀವನ ಕ್ರಮದಲ್ಲಿ ಸನಾತನ ಎಂಬುದು ರೋಗಗ್ರಸ್ಥವಾಗಿ ಕಾಣುತ್ತದೆ. ಅದು ಸನಾತನದ ದೋಷವಲ್ಲ. 

ಈ ಪ್ರಪಂಚದ ಉಗಮ ಅಸ್ತಿತ್ವ ಯಾವಾಗಿನಿಂದ ಆರಂಭವಾಯಿತು. ಈ ಭೂಮಿ ಈ ಬಾಹ್ಯಾಕಾಶ ಈ ಸೂರ್ಯನಂತೆ ಮತ್ತೊಂದು ಸೂರ್ಯ ಇದೆಯೋ ಇಲ್ಲವೋ ಎಂಬಷ್ಟರ ಮಟ್ಟಿಗೆ ತೆರೆದುಕೊಂಡ ಆ ಜ್ಞಾನದ ಹರಿವಿನ ಮೂಲದಲ್ಲೇ ಇದೆ ಸನಾತನ. ಅದು ಈಗ ತಿಳಿಯುವಂತೆ ಒಂದು ಧರ್ಮಕ್ಕೆ ಸೀಮಿತವಾಗಿ ಉಳಿದಿದೆ ಎಂದನಿಸುವುದಿಲ್ಲ. ಉಳಿದೆಲ್ಲ ಧರ್ಮಗಳಿಗೆ ಉಗಮದ ಕಲ್ಪನೆ ಇರಬಹುದು. ಆದರೆ ಈ ಸನಾತನ  ಇನ್ನೂ ನಿಗೂಢವಾಗಿರುವುದೇ ಅದರ ವೈಶಿಷ್ಟ್ಯ.  ಆ ಸನಾತನವನ್ನು ನಮ್ಮ ಅಳತೆಗೋಲಲ್ಲಿ ಅಳೆಯುವ ಪ್ರಯತ್ನ ಅದು ಮೂರ್ಖತನವಾಗುತ್ತದೆ.  ಜೇಸುದಾಸ್, ಬಾಲ ಮುರಳಿ ಕೃಷ್ಣ ಭೀಮಸೇನ ಜೋಷಿ ಹೀಗೆ ಸಂಗೀತರತ್ನಗಳ ಬಗ್ಗೆ ಹೇಳುವಾಗ ಅವರು "ಗಾಯಕ"  ಎಂದಷ್ಟೇ ಹೇಳಿದರೆ ಅದು ನಾವು ಕಂಡ ಅಳತೆ ಗೋಲಾಗುತ್ತದೆ. ಹೊರತು ನಿಜವಾದ ಮಾನದಂಡವಾಗುವುದಿಲ್ಲ. ಹಾಡುವವರೆಲ್ಲ ಗಾಯಕರು. ಆದರೆ ಈ ಪ್ರತಿಭೆಗಳು ಅಷ್ಟಕ್ಕೇ ಸೀಮಿತವಲ್ಲ. ಯಾವುದು ಹೇಗೆ ಹಾಡಿದರೂ ಆತ ಗಾಯಕ. ಹಾಗಿದ್ದರೆ ಇವರ ಸಾಧನೆ ಪ್ರತಿಭೆಗೆ  ಕೇವಲ ಗಾಯಕ ಎಂದರೆ ಸಾಕೇ?   ಸನಾತನ ಅರಿವು ಇರುವುದೇ ಇಂತಹ ಜ್ಞಾನದಲ್ಲಿ. ಅದನ್ನು ಅರಿಯಬೇಕಾದರೆ ಅದರ ಆಳವನ್ನು ಇಳಿಯಬೇಕು. 

ಭೋರ್ಗರೆಯುವ ಸಾಗರದ ಬದಿಯಲ್ಲಿ  ನಿಂತು ನೋಡಿದರೆ ಕೇವಲ ಕೆಲವು ಅಲೆಗಳನ್ನಷ್ಟೇ ನಾವು ಕಾಣಬಹುದು.  ದೂರದಿಂದ ಕಂಡವರು ಹೇಳಬಹುದು ಸಮುದ್ರ ಅದು . ಇಳಿಯಬೇಡ? ನಾಶವಾಗುತ್ತಿ. ಸಮುದ್ರ ಅದು ಮರಣ ಸದೃಶ.  ಹೀಗೆ ಭಯ ಹುಟ್ಟಿಸುವವರು ಇರಬಹುದು. ಆದರೆ ಸಾಧಕ ಸಾಗರದ ಆಳವನ್ನು ಅರಿಯುವ ಪ್ರಯತ್ನ ಮಾಡುತ್ತಾನೆ. ಆಳದ ಮುತ್ತು ರತ್ನಗಳನ್ನು ಗುರುತಿಸುತ್ತಾನೆ. ಸಾಗರ ಗರ್ಭದ ಪ್ರಪಂಚವನ್ನು ಕಾಣುತ್ತಾನೆ. ಮೇಲೆ ನಿಂತವನು ಅದು ಮರಣ ಸದೃಶ ಎಂದು ಹೇಳಿ ತನ್ನ ರೋಗ ಗ್ರಸ್ಥ ಮನಸ್ಸನ್ನು ಅಲ್ಲಿ ಆರೋಪಿಸುತ್ತಾನೆ.  ಸನಾತನ ಎಂದರೆ ಅದು ಸಾಗರದಂತೆ. ಅಳತೆ ಕಣ್ಣಿಗೆ ಕಾಣಬಹುದು. ಆದರೆ ಅದು ಸತ್ಯವಾಗುವುದಿಲ್ಲ. ಅದು ಅಂತಿಮವಾಗುವುದಿಲ್ಲ. ಇನ್ನೂ ಇದೆ ಭಾವವನ್ನು ಕೆರಳಿಸುತ್ತ ಪ್ರಚೋದಿಸುತ್ತಾ ಸಾಗುತ್ತದೆ. ಇದರ ಬಗ್ಗೆ ತಿಳಿಯದವರು ಅದನ್ನು ಢೆಂಗ್ಯೂ ಕೊರೋನಕ್ಕೆ ಹೋಲಿಸುತ್ತಾರೆ. ಆದರೆ ಸನಾತನ ತೋರಿಸಿಕೊಡುತ್ತದೆ ಈ ಸಾಂಕ್ರಾಮಿಕಗಳು ಕೇವಲ ದೇಹವನ್ನು ಬಾಧಿಸುತ್ತದೆ, ಅದಕ್ಕೆ ಮಿಕ್ಕಿದ ಭವರೋಗಗಳು ಇದೆ. ಆ ಭವರ ರೋಗವನ್ನು ಕಳೆಯುವ ಮಂತ್ರ ಇದ್ದರೆ ಅದು ಸನಾತನದಲ್ಲಿ.ಅಲ್ಲಿ ಕೇವಲ ಈ ಮಾರಕ ರೋಗಗಳಿಗೆ ಸೀಮಿತವಲ್ಲ. ಅದಕ್ಕೂ ಮಿಕ್ಕಿದ ಭವರೋಗದ ಅರಿವಾಗುವಾಗ ಸನಾತನ ಎಂಬುದು ರೋಗಗ್ರಸ್ಥ ಎಂದನಿಸುವುದಿಲ್ಲ. ದೇಹದ ಮೇಲೆ ಪ್ರೀತಿ ಇದ್ದವನಿಗೆ ಹಸಿವು ಎಂಬುದು ಬ್ರಹ್ಮಾಂಡ ಸಮಸ್ಯೆಯಾಗುತ್ತದೆ. ಆದರೆ ಅದನ್ನು ಮೀರಿದವನಿಗೆ ಹೊಟ್ಟೆಯ ಹಸಿವು ಹಸಿವಾಗಿ ಕಾಣುವುದಿಲ್ಲ. ಅದು ಪರೀಕ್ಷೆಯಾಗಿ ಕಾಣುತ್ತದೆ. ಕೇವಲ ಲೌಕಿಕ ಜ್ಞಾನದ ಪರಿಧಿಯಲ್ಲಿ ಹೊರಳಾಡುವವನು ಈ ಹಸಿವು ಮುಕ್ತವಾಗಬೇಕು ಎಂದು ಕನವರಿಸುತ್ತಾನೆ. ಇದೆಲ್ಲವನ್ನು ಮೀರಿದ ಹಸಿವು ಇದೆ ಎಂದು ತೋರಿಸುವುದೇ ಸನಾತನ. ಜಗತ್ತು ಇಂದು ಈ ಸನಾತನದ ಹಿಂದೆ ಓಡಿ ಬರುತ್ತದೆ. ಹಿಂದೂ ಸಂಸ್ಕೃತಿ ಇದನ್ನೇ  ಜಗತ್ತಿಗೆ ತೋರಿಸಿ ಕೊಡುತ್ತಿರುವುದು.  ಇದನ್ನು ರೋಗ ಗ್ರಸ್ಥ ಎಂದರೆ ಅದು ಕಾಣುವ ದೃಷ್ಟಿ ರೋಗಿಷ್ಠವಾಗಿರುತ್ತದೆ. 

ಕೇವಲ ಸನಾತನ ಎಂಬ ಶಬ್ದದ ಅರ್ಥ  ವಿವರಿಸಿದರೆ ಅದು ಅಷ್ಟಕ್ಕೇ ಸೀಮಿತವಾಗುವುದಿಲ್ಲ. ಸನಾತನ ಅದು ಮತ್ತೂ ವಿಶಾಲವಾಗಿದೆ. ಅದು ಎಷ್ಟು ಕಾಣಲು ಸಾಧ್ಯವಾಯಿತೋ ಅದು ನಮ್ಮ ದೃಷ್ಟಿಯ ಪರಿಧಿ. ಆದರೆ ಸನಾತನ ಅದು ಇನ್ನೂ ವಿಶಾಲವಾಗಿದೆ. ಸನಾತನದಲ್ಲಿ  ಜಾತಿ ಭೇದ, ಅಸ್ಪೃಶ್ಯತೆ ಕಂದಾಚಾರ ಮೂಢನಂಬಿಕೆ ಇಷ್ಟನ್ನು ಮಾತ್ರ ಕಾಣುವುದು ಅದು ಸಣ್ಣಮನಸ್ಸು. ಸನಾತನ ತೋರಿಸುವ ಆಧ್ಯಾತ್ಮ ಜಗತ್ತನ್ನು ಕಾಣಬೇಕಾದರೆ ಅದಕ್ಕೆ ನಿರಂತರ ಸಾಧನೆ ಅವಶ್ಯ. ಅದನ್ನು ಕಾಣುವುದಕ್ಕೆ ಕೈಲಾಗದವರು ಆಡುವ ಮಾತು ಅಲ್ಲಿ ಮೌಢ್ಯವಿದೆ, ವರ್ಣ ಭೇದವಿದೆ. ಆದರೆ ಆಧ್ಯಾತ್ಮದ ಹಾದಿಯಲ್ಲಿ ನಡೆದು ಹೋಗಬೇಕು ಆಗ ಅರಿವಿಗೆ ಬರುತ್ತದೆ ಅಲ್ಲಿ ಯಾವುದೇ ಧರ್ಮವಿಲ್ಲ. ಬ್ರಾಹ್ಮಣ, ಶೂದ್ರ ಈ ವೈಪರೀತ್ಯಗಳಿಲ್ಲ. ಪ್ರಪಂಚವೇ ಇಂದು ಈ ಆಧ್ಯಾತ್ಮಿಕ ಜ್ಞಾನಕ್ಕೆ ಬೆರಗಾಗಿ ಹೋಗಿದೆ. ಇಲ್ಲವಾದರೆ ಇಲ್ಲಿಯ ಯೋಗ ಧ್ಯಾನ ಈ ಜೀವನ ಯಾಕೆ ಜಗತ್ತು ಅಂಗೀಕರಿಸುತ್ತದೆ? ಪುರಾಣದ ಋಷಿಗಳ ತಪ್ಪಸ್ಸು ಗಮನಿಸಿದರೆ ಅರಿವಾಗುತ್ತದೆ. ಅವರು ಯಾಕಾಗಿ ತಪಸ್ಸು ಮಾಡುತ್ತಾರೆ? ಅದರ ಘನ ಉದ್ದೇಶ ಏನು? ಯಾವ ಮೂರ್ತಿಯನ್ನು ಇಟ್ಟು ಪೂಜೆ ಮಾಡುತ್ತಾರೆ? ಇದಕ್ಕೆಲ್ಲ ಉತ್ತರ ಕಾಣುತ್ತಾ ಹೋದರೆ ಈ ಜ್ಞಾನದ ಅರಿವಿನ ವಿಸ್ತಾರ ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಒಬ್ಬ ಋಷಿ ಅಥವಾ ಸನ್ಯಾಸಿ ತನಗಾಗಿ ಏನನ್ನು ಕೇಳುವುದಿಲ್ಲ. ಯಾಕೆಂದರೆ ಲೌಕಿಕವಾದ ಯಾವ ವಸ್ತು ಅವನು ಬಯಸಿದರೂ ಆತ ಸನ್ಯಾಸಿಯಾಗಲಾರ. ಯಾವುದೇ ಧರ್ಮಕ್ಕೆ ಸೀಮಿತವಾದರೂ ಆತ ಸನ್ಯಾಸಿಯಾಗಲಾರ. ಕೇವಲ ಕೃಪಣನಾಗುತ್ತಾನೆ. ಸನ್ಯಾಸಿ ಎಂಬ ಪದವಿಯ ಅರ್ಹತೆಯದು. ಕ್ಷತ್ರಿಯನಾಗಿ  ಬ್ರಹ್ಮ ತೇಜಸ್ಸನ್ನು ಗಳಿಸಿದ  ವಿಶ್ವಾಮಿತ್ರ, ನಿಕೃಷ್ಟನಾದರೂ  ರಾಮನಾಮದ ಹಿಂದೆ ಹೋದ ವಾಲ್ಮೀಕಿ...ಇಲ್ಲೆಲ್ಲೂ ವರ್ಣ ಭೇದದ ಸೋಂಕಿಲ್ಲ.  ಅವರೆಲ್ಲ  ಕಂಡ ಆಧ್ಯಾತ್ಮಿಕ ಲೋಕ ಎಂಬುದು ಕೇವಲ ಕಥೆಯಲ್ಲ. 

ಹಿಂದೂ ಅಂದರೆ ಮೂರ್ತಿ ಪೂಜೆ, ಅಸಂಖ್ಯ ದೇವರುಗಳು ರಾಮ ಕೃಷ್ಣ ಈಶ್ವರ ಗಣಪತಿ....ಮೂಢನಂಬಿಕೆಗಳು. ಆದರೆ ಇದಕ್ಕೆಲ್ಲ ಮೂಲವಾದ ಧ್ಯಾನ ಅಥವಾ ತಪಸ್ಸಿನಲ್ಲಿ ಯಾವ ಮೂರ್ತಿಯನ್ನು ಪೂಜಿಸುವುದಿಲ್ಲ. ಯಾವ ದೇವರನ್ನೂ ಆರಾಧಿಸುವುದಿಲ್ಲ. ಕೇವಲ ಅಂತರಂಗದಲ್ಲಿರುವ ಪರಮಾತ್ಮ ದರ್ಶನ. ಈ ಪರಮಾತ್ಮ ಎಂಬ ಕಲ್ಪನೆಯನ್ನು ಕೊಟ್ಟದ್ದೇ ಸನಾತನ ಧರ್ಮ. ಮೂರ್ತಿ ಎಂಬುದು ಕೇವಲ ಸಂಕೇತ. ಅದರಾಚೆಗಿರುವ ಭಾವನೆಗೆ ಮಿತಿ ಇರುವುದಿಲ್ಲ. ಇಲ್ಲಿ ಕೇವಲ ಮೂರ್ತಿಯಲ್ಲಿ ಮಾತ್ರ ದೇವರನ್ನು ಕಾಣುವುದಿಲ್ಲ. ಗಿಡ ಮರ ಪ್ರಾಣಿ ನದಿ ಸಮುದ್ರ ಭೂಮಿ ಹೀಗೆ ಪ್ರಕೃತಿಯನ್ನೇ ದೇವರಾಗಿ ಕಾಣುವ ಭಾವನೆ ಇದೆ. ಬೇರೆ ಯಾವ ಧರ್ಮದಲ್ಲಿ ಈ ಭಾವನೆ ಇರುವುದಕ್ಕೆ ಸಾಧ್ಯ.? ಹೀಗೆ ಅಂತರಂಗದ ದೈವಸ್ವರೂಪವನ್ನು ತೋರಿಸಿಕೊಟ್ಟದ್ದೇ ಸನಾತನ ಧರ್ಮ. ಅದು ಪರಮಾತ್ಮ ಹೇಳುವ ಪ್ರಕೃತಿ ಧರ್ಮ. ಅದು ಒಂದು ಜಾತಿಯಲ್ಲ. ನಿರ್ಧಿಷ್ಟವಾಗಿ ಹೇಳಿ ಅಷ್ಟಕ್ಕೆ ಸೀಮಿತವಾಗಿಸುವ ವಿಷಯವೂ ಇದಲ್ಲ. ಇದರ ಬಗ್ಗೆ ತಿಳಿಯಬೇಕಾದರೆ ಅದರಲ್ಲಿ ಇಳಿದು ನೋಡಬೇಕು. ಇಲ್ಲವಾದರೆ ಸಮುದ್ರದ ಬದಿಯಲ್ಲಿ ನಿಂತು ಕೊಂಡು ಅದನ್ನು ಅಳತೆ ಮಾಡಿದಂತೆ, ಅದು ಮೂರ್ಖತನವಾಗುತ್ತದೆ. 

ಹಿಂದೆ ಮುಂದೆ ನೋಡದೆ ಬ್ರಾಹ್ಮಣ್ಯವನ್ನು ಜರಿಯುವುದನ್ನು ಕಾಣುತ್ತೇವೆ. ವಾಸ್ತವದಲ್ಲಿ ಬ್ರಹ್ಮ ಎಂದರೆ ಏನು? ಅದು ಅರ್ಥವಿಲ್ಲದ ಪದವಲ್ಲ. ಆ ಅರ್ಥಕ್ಕಿರುವ ವಿಶಾಲತೆ ತಿಳಿದರೆ ಬ್ರಾಹ್ಮಣ್ಯದ ಪವಿತ್ರತೆ ಅರಿವಾಗುತ್ತದೆ. ಯಾವುದು ಜಗತ್ತಿನಲ್ಲಿ ಅತ್ಯಂತ ದೊಡ್ಡದು ಅದೇ ಬ್ರಹ್ಮ. ಹಾಗಾಗಿ ಜಗತ್ತನ್ನು ಬ್ರಹ್ಮಾಂಡಕ್ಕೆ ಹೋಲಿಸುವುದು. ಅದೇ ಮುಂದು ವರೆದು ಬ್ರಾಹ್ಮಣನಾದವನು ಮುಂಜಾನೆ ಎದ್ದು ಸಂಧ್ಯಾ ಕರ್ಮವನ್ನು ಆಚರಿಸುತ್ತಾನೆ. ಇಲ್ಲಿ ಯಾವ ಮೂರ್ತಿಯೂ ಇಲ್ಲ. ಯಾವ ಸಂಕಲ್ಪವೂ ಇರುವುದಿಲ್ಲ. ಕೇವಲ ತನ್ನ ಪಾಪಕ್ಷಯ, ದುರಿತ ಪರಿಹಾರಕ್ಕೆ ಆತ ಆಚರಿಸುವ ಕರ್ಮ. ಪಾಪ ಏನು?  ದುರಿತ ಏನು? ಅದು ಮನುಷ್ಯನ ಹುಟ್ಟಿನಲ್ಲೇ ಇರುತ್ತದೆ. ಈ ಜ್ಞಾನ ಲಭ್ಯವಾಗಬೇಕಾದರೆ ಅದರ ಆಳಕ್ಕೆ ಇಳಿಯಬೇಕು. ಅದು ತಿಳಿಯದೇ ಸನಾತನ ಎಂಬುದುನ್ನು ತುಚ್ಛವಾಗಿ ಕಂಡರೆ ಅದು ಸನಾತನ ಧರ್ಮದ ರೂಪವೂ ಅಲ್ಲ, ವಿಸ್ತಾರವೂ ಅಲ್ಲ. ಸನಾತನ ಧರ್ಮ ಯಾವ ಜಾತಿಭೇದ ವರ್ಣಭೇದವನ್ನು ಬೋಧಿಸುವುದಿಲ್ಲ. ಅವುಗಳೆಲ್ಲವೂ ನಂತರ ಅದರ ಮೇಲೆ ಬಳಿದ ಬಣ್ಣಗಳು. ಹಿಂದೂ ಧರ್ಮ ಇದೆಲ್ಲವನ್ನು ಕಳೆದುಕೊಂಡು ಕಾಲ ಕಾಲಕ್ಕೆ ಬದಲಾಗುತ್ತಾ ಪ್ರಕೃತಿ ಧರ್ಮಕ್ಕೆ ಸ್ಪಂದಿಸುತ್ತಾ ಎಲ್ಲ ಧರ್ಮಗಳನ್ನು ತನ್ನಲ್ಲಿ ಸೇರಿಸುತ್ತಾ ಬಂದಿದೆ. ಜಗತ್ತಿನ ಬೇರೆ ಯಾವ ಧರ್ಮವೂ ಬದಲಾಗದಂತೆ ಇದು ಬದಲಾಗಿದೆ. ಯಾಕೆಂದರೆ ಇದರ ಮೂಲದಲ್ಲಿ ಯಾವುದು ಇದೆಯೋ ಅದು ಬಣ್ಣ ಕಳಚಿ ಮತ್ತೆ ಮುನ್ನೆಲೆಗೆ ಬಂದಿದೆ. ಜಗತ್ತಿನಲ್ಲಿ ಬೇರೆ ಯಾವ ಧರ್ಮವೂ ತೋರಿಸದೇ ಇರುವ ನಾಗಾರೀಕತೆಯೆನ್ನು ಹಿಂದು ಧರ್ಮ ತೋರಿಸುತ್ತದೆ.  ಅದಕ್ಕೆ ನಿದರ್ಶನವೇ ಯೋಗ ಜೀವನ ಮತ್ತು  ಅಧ್ಯಾತ್ಮ ಲೋಕ ದರ್ಶನ. 

ಕೊನೆಯಲ್ಲಿ ಧರ್ಮೋ ರಕ್ಷತಿ ಎನ್ನುವ ಹಾಗೆ ಸನಾತನದ ವಾದ ಬರುವಾಗ, ಅದರ ಬಗ್ಗೆ ಏನು ಪ್ರತಿಕ್ರಿಯೇ ಕೊಡದೇ ಇರುವುದರಲ್ಲೇ ಅದಕ್ಕೆ ಉತ್ತರವಿರುತ್ತದೆ. ಯಾಕೆಂದರೆ ಅದು ಯಾರಿಂದಲೂ ನಾಶವಾಗುವುದಿಲ್ಲ. ಸರೋವರ ಸುಂದರವಾಗಿದೆ ಅದರ ಒಳಗೆ ಇಳಿದು ನೋಡಿ ಅನುಭವಿಸುವವರು ಕಡಿಮೆ. ಸನಾತನ ಸುಂದರವಾಗಿದೆ , ಅದನ್ನು ತಿಳಿಯಬೇಕಾದರೆ ಅದರ ಆಳಕ್ಕೆ ಇಳಿಯಬೇಕು. ಸನಾತನದ ರಕ್ಷಣೆ ಯಾರೂ ಮಾಡಬೇಕಾದ ಅವಶ್ಯಕತೆ ಇಲ್ಲ. ಅದು ಅಂದಿನಿಂದ ಇಂದಿನವರೆಗೂ ತನ್ನನ್ನು ತಾನು ರಕ್ಷಿಸುತ್ತಾ ಬಂದಿದೆ. ಅದು ಈವರೆಗೆ ಉಳಿದಿರುವುದೇ ಇದಕ್ಕೆ ನಿದರ್ಶನ.  ನಾವು ಯಾವುದೇ ಮತವನ್ನು ಮತಾಂತರ ಮಾಡಿ ಅಂಗೀಕರಿಸಬಹುದು, ಆದರೆ ಅಂತರಾತ್ಮ ಅದನ್ನು ಬದಲಿಸುವುದಕ್ಕೆ ಸಾಧ್ಯವಿಲ್ಲ. ಅದೆಂದು ಬದಲಾಗುವುದೂ ಇಲ್ಲ. ಬಹಿರಂಗದಲ್ಲಿ ಯಾವುದನ್ನೋ ಹೇಳಬಹುದು, ಆದರೆ ಅಂತರಂಗದಲ್ಲಿ ಅದು ಶಿವನೋ ರಾಮನೋ ಅದೇ ಮೂಲ ಸ್ವರೂಪದಲ್ಲಿರುತ್ತದೆ.  


ಮಂಗಲಂ ಭಗವಾನ್ ವಿಷ್ಣು ಮಂಗಲಂ ಮಧು ಸೂದನ 

ಮಂಗಲಂ ದೇವಕೀ ಪುತ್ರೋ ಮಂಗಲಂ ಗರುಡ ಧ್ವಜ

ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರ

ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಚತಿ.

ಪ್ರತಿ ಬಿಂದು ನೀರು ಸಾಗರದ ಕಡೆಗೆ ಸಂಚರಿಸುವಂತೆ ಯಾವ ದೇವರನ್ನು ನಮಸ್ಕರಿಸಿದರೂ ಅದು ಸೇರುವುದು ಒಂದೇ ಪರಮಾತ್ಮನಲ್ಲಿಗೆ. 




No comments:

Post a Comment