Wednesday, November 21, 2018

ಆರಾಧಿಸುವೆ ಮದನಾರಿ....

"ಆರಾಧಿಸುವೆ ಮದನಾರಿ ಆದರಿಸೂ ನೀ ದಯೆ ತೋರಿ...", ಈ ಜನಪ್ರಿಯ ಗೀತೆಯನ್ನು ಇತ್ತೀಚೆಗೆ   ರಿಯಾಲಿ
ಟಿ ಶೋ ಒಂದರಲ್ಲಿ ಗಾಯಕನೊಬ್ಬ ಹಾಡಿದ. ಹಾಡು ಮುಗಿಯುತ್ತಿದ್ದಂತೆ ಕಿವಿಗಡಚಿಕ್ಕುವಂತೆ ಚಪ್ಪಾಳ ಶಿಳ್ಳೆ ಮೊಳಗಿತು. ಜನಪ್ರಿಯವಾದ ಹಾಡೆಂದರೆ ಟಿ. ವಿ ಯಲ್ಲಿ ಇದು ಸಾಮಾನ್ಯ. ಕೆಲವೊಮ್ಮೆ ಈ ಚಪ್ಪಾಳೆ ದೃಶ್ಯವನ್ನು ಮಾತ್ರಾ ಚಿತ್ರೀಕರಿಸಿ ಅದನ್ನು ಬೇಕಾದಲ್ಲಿಗೆ ಜೋಡಿಸಿ ಪ್ರಸಾರ ಮಾಡುತ್ತಾರೆ. ಇದನ್ನು ತಿಳಿಯದ ಪ್ರೇಕ್ಷಕ ಮೂರ್ಖನಾಗುತ್ತಾನೆ. ಹೀಗಿದ್ದರೂ ಈ ಹಾಡು ಅತ್ಯಂತ ಸರ್ವಾಂಗ ಸುಂದರ ಅನುಮಾನವಿಲ್ಲ.  ಇದು ಹೆಸರಾಂತ ಚಲನಚಿತ್ರ "ಬಬ್ರುವಾಹನ" ಚಿತ್ರದ ಜನಪ್ರಿಯ ಗೀತೆ. ಹಿನ್ನೆಲೆಯಲ್ಲೂ ಮುನ್ನೆಲೆಯಲ್ಲೂ ಅಂದರೆ ಚಿತ್ರದಲ್ಲೂ ಡಾ| ರಾಜ್ ಕುಮಾರ್ ಹಾಡಿದ್ದಾರೆ. ಅಧ್ಬುತವಾಗಿ ಚಿತ್ರಿಸಲ್ಪಟ್ಟ ಈ ಗೀತೆ ಅಂದು ಬಹಳ ಜನಪ್ರಿಯವಾಗಿತ್ತು.  ಈದೀಗ ಯುವ ಗಾಯಕನೊಬ್ಬ ಸುಂದರವಾಗಿ ಹಾಡಿದ. ಸಹಜವಾಗಿ ಕಾರ್ಯಕ್ರಮದ ನಿರ್ಹಾಕಿ ಕೇಕೆ ಹಾಕಿ ಅಭಿನಂದನೆ ಸಲ್ಲಿಸುತ್ತಾಳೆ. ಜತೆಗೆ ಅಲ್ಲಿದ್ದ ತೀರ್ಪುಗಾರರೂ ತಮ್ಮ ಅಭಿಪ್ರಾಯವನ್ನು ಹರಿಯಬಿಡುತ್ತಾರೆ. ಆದರೆ,

ಆರಾಧಿಸುವೆ ಮದನಾರಿ ಎಂಬ ಹಾಡು... ವರನಟ, ಪದ್ಮಭೂಷಣ   ಡಾ . ರಾಜ್ ಕುಮಾರ್ ಎಂದು  ಒಂದಷ್ಟು ಹೊಗಳಿಕೆ ಹಿರಿಯ ನಟನಿಗೆ ಸಲ್ಲಿಸುತ್ತಾಳೆ. ಒಂದು ಐದಾರು ಸಲವಾದರೂ ರಾಜ್ ಕುಮಾರ್ ಎಂದು ಹೊಗಳುತ್ತಾಳೆ.  ರಾಜ್ ನಟಿಸಿರುವ ಬಬ್ರುವಾಹನ  ಚಲನ ಚಿತ್ರ ಎಂಬುದಾಗಿಯೂ ಹೊಗಳುತ್ತಾಳೆ. ಜನಪ್ರಿಯ ನಟನ ಹೆಸರು ಹೇಳಿದಂತೆಲ್ಲ ಮತ್ತೆ ಚಪ್ಪಾಳೆಯ ಸುರಿಮಳೆ.  ಈ ಯಥಾವತ್ ಚಪ್ಪಾಳೆಯೂ ಪ್ರತ್ಯೇಕವಾಗಿ ಚಿತ್ರಿಕರಿಸಿರುವುದು ಹಲವು ಸಲ ವ್ಯಕ್ತವಾಗುತ್ತದೆ. ಇರಲಿ  ಇದರ ಬಗ್ಗೆ ಆಕ್ಷೇಪವೇನಿಲ್ಲ. ಹೊಗಳ ಬೇಕಾದ ವಿಷಯಗಳು ಹೊಗಳಲೇಬೇಕು. ಪ್ರಶಂಸಾರ್ಹವಾದ ವಿಚಾರಗಳನ್ನು ಮುಕ್ತವಾಗಿ ಪ್ರಶಂಸಿಸುವುದು ಪ್ರಾಮಾಣಿಕತೆಯ ಲಕ್ಷಣ. ಆದರೆ ಒಂದು ವಿಚಾರದ ಬಗ್ಗೆ ಹೊಗಳುವಾಗ ಆ ವಿಚಾರದ ಬಗ್ಗೆ ಗಹನವಾಗಿ ತಿಳಿದುಕೊಳ್ಳಬೇಕು. ಮತ್ತು ಅದಕ್ಕೆ ಪ್ರಾಮಾಣಿಕವಾದ ನ್ಯಾಯವನ್ನು ಒದಗಿಸಬೇಕು. ಇಲ್ಲವಾದರೆ ನಮ್ಮ ಹೊಗಳಿಗೆ ಎಂಬುದು ಪೂರ್ವಾಗ್ರಹ ಪ್ರೇರಿತವಾಗಿ ಯಾವುದೋ ಒಂದು ಸ್ವಾರ್ಥದಿಂದ ಕೂಡಿರುತ್ತದೆ ಎಂಬುದೇ ಸತ್ಯ.

ಈ ಮದನಾರಿ ಹಾಡನ್ನು ಶ್ರೀ ಡಾಕ್ಟರ್ ರಾಜ್ ರವರು ಅಧ್ಬುತವಾಗಿ ಸುಂದರವಾಗಿ ಹಾಡಿದ್ದಾರೆ ಅನುಮಾನವೇ ಇಲ್ಲ. ಇಂದಿಗೂ ಆ ಹಾಡನ್ನು ಕೇಳುವಾಗ ತುಂಬ ಸಂತೋಷವಾಗುತ್ತದೆ. ಆದರೆ ಹೊಗಳಿಕೆ ಎಂಬುದು ಕೇವಲ ರಾಜ್ ಕುಮಾರ್ ಗೆ ಮಾತ್ರ ಮೀಸಲಾಗಿರಿಸಿದರೆ ಆ ಹಾಡಿಗೆ ಸಂಪೂರ್ಣ ನ್ಯಾಯ ಸಲ್ಲುವುದಿಲ್ಲ.   ಈ ಹಾಡನ್ನು ರಚಿಸಿದವರು ಶ್ರೀ  ಹುಣಸೂರು ಕೃಷ್ಣ ಮೂರ್ತಿಯಾದರೆ ಈ ಹಾಡನ್ನು ಸಂಗೀತ ನೀಡಿ ಸಂಯೋಜಿಸಿದವರು ಪ್ರಸಿದ್ದ ಸಂಗೀತ ನಿರ್ದೇಶ ಟಿ. ಜಿ. ಲಿಂಗಪ್ಪ ಅವರು.  ಅಲ್ಲಿ ಸೇರಿದ ಅಷ್ಟು ಜನ ತೀರ್ಪುಗಾರರಾಗಲಿ, ಕಾರ್ಯಕ್ರಮದ ನಿರ್ವಾಹಕಿಯಾಗಲಿ ಇತರರೇ ಆಗಲಿ ಒಂದೇ ಒಂದು ಸಲವೂ ಹಾಡಿನ ಸಂಗೀತ ನಿರ್ದೇಶಿಸಿದ ಟಿ. ಜಿ ಲಿಂಗಪ್ಪ ಅವರ ಹೆಸರನ್ನು ಹೇಳಲಿಲ್ಲ. ಮಾತ್ರವಲ್ಲ ಹಾಡನ್ನು ರಚಿಸಿದ ಕವಿ ಹುಣಸೂರು ಅವರ ಹೆಸರನ್ನೂ ಹೇಳಲಿಲ್ಲ. ಇನ್ನೊಂದು ಪ್ರಮುಖ ಅಂಶವೆಂದರೆ ಅಲ್ಲಿ ಸೇರಿರುವವರು ಅಷ್ಟೂ ಮಂದಿ ಸ್ವತಃ ಗಾಯಕರು ಮತ್ತು ಸಂಗೀತಗಾರರೂ ಆಗಿರುತ್ತಾರೆ. ಹಾಗಾದರೆ ಇವರ ಹೊಗಳಿಕೆಯ ಹಿಂದೆ ಒಂದು ಸ್ವಾರ್ಥವಿದೆ ಎಂದರೆ ಅದನ್ನು ತಪ್ಪು ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಸ್ವತಹ ಕಲಾವಿದರೇ ಹೀಗೆ ಪೂರ್ವಾಗ್ರಹ ಪ್ರೇರಿತರಾಗಿ ವರ್ತಿಸಿದರೆ ಅವರು ಅನುಸರಿಸುವ ಆರಾಧಿಸುವ ಕಲಾಮಾತೆಗೆ ಗೌರವ ಸಲ್ಲಿಸಿದಂತಾಗುವುದೇ?

ಒಬ್ಬ ಗಾಯಕ ಒಂದು ಹಾಡನ್ನು ಹಾಡುತ್ತಾನೆ ಎಂದಾದರೆ ಆ ಹಾಡಿನ ಹಿಂದೆ ಹಲವರ ಪರಿಶ್ರಮವಿರುತ್ತದೆ. ಎಲ್ಲರನ್ನೂ ಸ್ಮರಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಆ ಹಾಡಿನ ಸಂಗೀತವನ್ನು ಸಂಯೋಜನೆ ಮಾಡಿ ನಿರ್ದೇಶಿಸಿದ ಕಲಾವಿದನಿಗೆ ಒಂದು ಗೌರವ ಸಲ್ಲಿಸದೇ ಇರುವುದು ನ್ಯಾಯವೆನಿಸುವುದಿಲ್ಲ. ಯಾರೋ ಓರ್ವ ಸಾಮಾನ್ಯ ಮನುಷ್ಯ ಕೇಳುಗನಾದವನು  ಹೀಗೆ ಮಾಡಿದರೆ ಮನ್ನಿಸಬಹುದು ಆದರೆ, ಸ್ವತಃ ಕಲಾವಿದರಾಗಿರುವ ವ್ಯಕ್ತಿಗಳು ಹೀಗೆ ವರ್ತಿಸುವುದು ಸರಿಯಲ್ಲ. 

ಒಂದು ಹಾಡಿಗೆ ಸಂಬಂಧಿಸಿದಂತೆ ಸಂಗೀತ ನಿರ್ದೇಶಕ ಮತ್ತು ಹಾಡನ್ನು ಬರೆದ ಕವಿ ತಂದೆ ತಾಯಿ ಸ್ಥಾನದಲ್ಲಿರುತ್ತಾರೆ. ಆನಂತರದ  ಮಗುವಿನ  ಸ್ಥಾನ ಗಾಯಕನಿಗೆ.  ಮಗು ತನ್ನ ಹೆತ್ತವರನ್ನು ಹೇಗೆ ಶಾಶ್ವತ ಗೊಳಿಸುತ್ತದೆಯೋ ಹಾಗೆ ಗಾಯಕ . ಆ ಹಾಡನ್ನು ಸುಂದರವಾಗಿ ಹಾಡಿ ಅಪ್ಪ ಅಮ್ಮನ ಹೆಸರನ್ನು ಶಾಶ್ವತಗೊಳಿಸಬೇಕು. ಆದರೆ ಇಲ್ಲಿ ಮಗುವನ್ನು ಹೊಗಳಿ ಅಟ್ಟಕ್ಕೇರಿಸಿದರೆ ಹುಟ್ಟಿಗೆ ಕಾರಣವಾದ ಅಪ್ಪ ಅಮ್ಮನನ್ನೇ ಮರೆತುಬಿಡುತ್ತಾರೆ. ಅಲ್ಲಿ ಹಾಡಿದ ಸ್ಪರ್ಧಿಯಾದ ಗಾಯಕನೊಬ್ಬ ತನಗೊದಗಿದ ಆ ಅವಕಾಶಕ್ಕೆ ತನ್ನ ಅಪ್ಪ ಅಮ್ಮನನ್ನು ಸ್ಮರಿಸುವಾಗ ತಾನು ಹಾಡಿದ ಹಾಡಿನ ನೈಜ ಅಪ್ಪ ಅಮ್ಮನನ್ನು ಮರೆತಿರುತ್ತಾನೆ.  ಯಾಕೆಂದರೆ ಗಾಯಕನನ್ನು ಹೊಗಳಿದರೆ ಪ್ರೇಕ್ಷಕನ ಭಾವನೆ ಕೆರಳುತ್ತದೆ. ಪ್ರೇಕ್ಷಕ ಹುಚ್ಚೆದ್ದು ಕೆರಳಿದರೆ ಕಾರ್ಯಕ್ರಮ ಯಶಸ್ವಿಯಾದಂತೆ. ವಾಸ್ತವದಲ್ಲಿ ಇವರು ಆ ಗಾಯಕ ರಾಜ್ ಕುಮಾರ್  ಪ್ರತಿಭೆಗೂ ಗೌರವ ಸಲ್ಲಿಸಿದಂತಾಗುವುದಿಲ್ಲ. ಆದರ ಪರಿಜ್ಞಾನ ಅವರಿಗಿಲ್ಲ ಎಂದು ವಿಷಾದಿಸಬೇಕಾಗುತ್ತದೆ. 

ಆರಾಧಿಸುವೇ ಮದನಾರಿ ಎಂಬ ಹಾಡಿನ ರಚನೆ ಸುಂದರವಾದ ಕನ್ನಡ ಕಾವ್ಯಸೃಷ್ಟಿಯಂತೆ ಮೂಡಿ ಬಂದಿರುತ್ತದೆ.  ಅದರ ಪ್ರತಿಯೊಂದು ಶಬ್ದಗಳ ಅರ್ಥ ಆಳ ವಿಸ್ತಾರವನ್ನು ಅ ಶಬ್ದಗಳನ್ನು ಸುಂದರವಾಗಿ ಉಪಯೋಗಿಸಿ ಹಾಡನ್ನು ಶ್ರೀಮಂತ ಗಾನವಾಗುವಂತೆ ಮಾಡಿದ್ದನ್ನು ನಾವು ಸ್ಮರಿಸಲೇಬೇಕು.  ಕವಿಯ ಸೌಂದರ್ಯ ಪ್ರಜ್ಞೆ ರಸಿಕತೆ ಪ್ರತೀ ಪದದಲ್ಲೂ ವ್ಯಕ್ತವಾಗುತ್ತದೆ. " ಮೈದೋರಿ ಮುಂದೆ ಸಹಕರಿಸು ಆ ಮಾರನುರವಣೇ ಪರಿಹರಿಸು" ಎಂಬ ವಾಕ್ಯವಿದೆ. ಅಲ್ಲಿ ಸೇರಿದ ಏಷ್ಟು ಮಂದಿಗೆ ಈ ವಾಕ್ಯದ ಅರ್ಥವನ್ನು ವಿವರಿಸುವುದಕ್ಕೆ ಸಾಧ್ಯವಿದೆಯೋ ದೇವರೆ ಬಲ್ಲ. ಅಷ್ಟಿದೆ ಕನ್ನಡ ಭಾಷಾ ಜ್ಞಾನ. "ಆ ಮಾರನುರವಣೇ ..." ಎಂದರೆ ಅರ್ಥವೇನು? ಈ ರೀತಿಯ ಪದಗಳ ಅರ್ಥ ಸೂಕ್ಷ್ಮವನ್ನು ಅರಿತರೆ ಆ ಕವಿಯ ಶ್ರಮವೂ ಪ್ರತಿಭೆಯೂ ಅರ್ಥವಾಗಬಹುದು.  ಆ ಪ್ರತಿಭೆಗೆ ತಕ್ಕ ಮನ್ನಣೆಯೂ ಸಿಗಬಹುದು. ಆದರೆ ಕೇವಲ ಭಾಷಾಭಿಮಾನ ಇದ್ದರೆ ಸಾಲದು.  ಅದನ್ನು ಅರ್ಥವಿಸುವ ಭಾಷಾಜ್ಞಾನವೂ ಇರಬೇಕು.ಕನ್ನಡ ಸರಳ ಸುಂದರ ಭಾಷೆ, ಅದರ ಸೌಂದರ್ಯ ಅರ್ಥವಾಗಬೇಕಾದರೆ ಅದನ್ನು ತುಸುವಾದರು ಇಂತಹ ಪದಗಳನ್ನು ಹಾಡುಗಳನ್ನು  ಅರ್ಥವಿಸುವಷ್ಟು ಕನ್ನಡ ಭಾಷೆ ಗೊತ್ತಿರಬೇಕು.   ಅದರಂತೆ ಈ ಹಾಡಿನ ಅಂಗುಲ ಅಂಗುಲದುದ್ದಕ್ಕೂ ಬೆಸೆಯುವ ಸಂಗೀತ ಅದೆಷ್ಟು ಶ್ರೀಮಂತವಾಗಿದೆ ಎಂದರೆ ಅದನ್ನು ರಸಿಕನಾದವನು ಅರ್ಥವಿಸಿಯಾನು. ಕೇವಲ ಪೂರ್ವಾಗ್ರಹದಿಂದ ನಮ್ಮ ಅಭಿಮಾನವನ್ನು ಒತ್ತೆ ಇಡುವ ಅರಸಿಕರಿಗೆ ಇದು ಅರ್ಥವಾಗಲಾರದು. ಇಂದಿಗೂ ಆ ಹಾಡು ಪ್ರತಿಸಲ ಕೇಳುವುದಕ್ಕೆ ಮನಸ್ಸು ಬಯಸುತ್ತಿದ್ದರೆ ಅದಕ್ಕೆ ಮುಖ್ಯವಾಗಿ ಹಾಡಿನ ಸಂಗೀತ ಮತ್ತು ರಚನೆಯೇ ಕಾರಣ. ಆನಂತರದ ಗೌರವ ಗಾಯಕನಿಗೆ  ಸಲ್ಲಿಕೆಯಾಗುತ್ತದೆ.

ನಮ್ಮಲ್ಲಿ ಪ್ರತಿಭೆಯಿದೆ ಜ್ಞಾನವಿದೆ. ಅದನ್ನು ಅನುಭವಿಸುವ ರಸಿಕತೆಯೂ ಇದೆ. ಆದರೆ ಇದೆಲ್ಲವೂ ಗ್ರಹಿಸಿಕೊಳ್ಳಬೇಕಾದರೆ ಪೂರ್ವಾಗ್ರಹ ಪೀಡಿತ ಮನಸ್ಸನ್ನು ಶುದ್ದೀಕರಿಸಿಕೊಳ್ಳಬೇಕಾಗಿದೆ.  ಕೊನೆಯಲ್ಲಿ ಒಂದು ಪ್ರಶ್ನೆ   "ಮೈದೋರಿ ಮುಂದೆ ಸಹಕರಿಸು ಆ ಮಾರನುರವಣೇ ಪರಿಹರಿಸು"  ಎಂಬ ವಾಕ್ಯಾರ್ಥ  ಹೇಳಬಹುದೇ?


No comments:

Post a Comment