Tuesday, October 25, 2022

ದೈವದ ಅರಿವು

 

       ಕಾಂತಾರ ಚಲನ ಚಿತ್ರ ಎಷ್ಟು ಜನ ನೋಡಿಲ್ಲ? ನಾಯಕ ಕನಸಿನಿಂದ ಪ್ರಚೋದನೆಗೊಳ್ಳುತ್ತಾನೆ. ಭೂತ ಅಂದರೆ ದೈವ ಪ್ರತ್ಯಕ್ಷವಾಗುತ್ತದೆ. ಎಲ್ಲವೂ ನೈಜ ಘಟನೆ ಎಂಬಂತೆ  ಭಾಸವಾಗುತ್ತದೆ. ಇಲ್ಲೂ ಒಂದು ಅಧ್ಯಾತ್ಮದ ಸಂದೇಶವಿದೆ. ಭಗವಂತ ಅಥವಾ  ದೇವರು ಅದು ಎಲ್ಲೂ ಕಾಣಿಸುವುದಿಲ್ಲ. ಅದು ನಮ್ಮ ಅನುಭವ ಮಾತ್ರ. ಕನಸಿನಂತೆ  ಮನಸ್ಸು ಅನುಭವಿಸುತ್ತದೆ. ಅದರೆ ಅದು ಸತ್ಯವಾಗಿರುವುದಿಲ್ಲ.  ನಾವು ಕಾಣುವ ಕನಸು,  ಇದು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ತಮಗೆ ಬೇಕಾದ ಕನಸು ಯಾರೂ ಎಂದಿಗೂ ಕಾಣುವುದಕ್ಕೆ ಸಾಧ್ಯವಿಲ್ಲ. ಹಾಗಾದರೆ ಈ ಕನಸನ್ನು ತೋರಿಸುವವನು ಯಾರು? ಅದೇ ರೀತಿ ನಮ್ಮ ಭಯ. ಮನಸ್ಸು ಭಯಗೊಳ್ಳುತ್ತದೆ. ನಾಯಕನೂ ಭೂತ ಕಂಡು ಬೆಚ್ಚಿ ಬೀಳುತ್ತಾನೆ. ವಾಸ್ತವದಲ್ಲಿ ಅಲ್ಲಿ ಭೂತ ಕಣ್ಣೆದುರಿಗೆ ಇರುವುದಿಲ್ಲ. ಅದೊಂದು ದಿವ್ಯ ಅನುಭವ ಮಾತ್ರ.


          ಭಗವಂತನ ಅಸ್ತಿತ್ವ ಇರುವುದು ನಮ್ಮ ಅನುಭವದಲ್ಲಿ. ಯಾವುದೇ ಅನುಭವವಾಗಿರಬಹುದು. ಪ್ರತ್ಯಕ್ಷವಾಗಿ ದೇವರು ಎಂದೂ ಕಾಣಿಸಲಾರ. ಒಂದು ವೇಳೆ ಕಾಣಿಸಿದರೆ ಅವನು  ಭಗವಂತನಾಗಲಾರ. ನಮಗಾದ ಅನುಭವವನ್ನು ನಾವು ಹೇಳುತ್ತೇವೆ. ಬಿಸಿಯಾದ ಕಬ್ಬಿಣದ ಬಿಸಿಯ ಅನುಭವವಾಗಬೇಕಿದ್ದರೆ ಮುಟ್ಟಿ ನೋಡಬೇಕು.  ವಿದ್ಯುತ್ ಹರಿವ ತಂತಿ ಅದರಲ್ಲಿರುವ ವಿದ್ಯುತ್ತಿನ ಅರಿವಾಗಬೇಕಾದರೆ ಅದನ್ನು ಮುಟ್ಟಿ ನೋಡಬೇಕು. ಇಲ್ಲ ವಿದ್ಯುತ್ ಉಪಯೋಗಿಸುವ ಉಪಕರಣದ ಸಂಪರ್ಕಕ್ಕೆ ಆ ತಂತಿ ಸಿಕ್ಕಿಬಿಡಬೇಕು. ಯಾರೋ ಹೇಳುತ್ತಾರೆ ಅದರಲ್ಲಿ ವಿದ್ಯುತ್ ಇದೆ. ಅದು ಅವರ ಅನುಭವ. ಮನುಷ್ಯ ತನ್ನೊಳಗಿನ ದೇವರನ್ನು ಸ್ವತಃ ಅರಿತಾಗ ತಾನೂ ದೇವರಾಗುತ್ತಾನೆ.

            ಕಾಂತಾರ ನೋಡಿದಾಗ ಹಳೆಯ ಪ್ರವಚನ ಬಹಳಷ್ಟು ನೆನಪಾಯಿತು. ಪ್ರವಚನದಲ್ಲಿ ದೈವತ್ವ ಅಥವಾ ದೇವರನ್ನು ಅನುಭವಕ್ಕೆ ಸಮೀಕರಿಸುತ್ತಾರೆ. ದೇವರು ಎಂದಿಗೂ ಬರುವುದಿಲ್ಲ. ಬಂದ ಅನುಭವ ಮಾತ್ರ ನಮ್ಮದಾಗುತ್ತದೆ. ಆ ಅನುಭವ ಅರಿಯ ಬೇಕಿದ್ದರೆ ಮನಸ್ಸು ಎಲ್ಲವನ್ನು ಮೀರಿ ನಿಲ್ಲಬೇಕು. ಕತ್ತಲೆಯ ಕೋಣೆಯೊಳಗೆ ಹೋಕ್ಕಿದಾಗ, ಬಲ್ಬನ್ನು ಎಲ್ಲರೂ  ತೋರಿಸಬಹುದು. ಬಲ್ಪು ನೋಡಿದರೆ ಬೆಳಕು ಸಿಗುವುದಿಲ್ಲ. ಬಲ್ಬ್ ತೋರಿಸಿದಂತೆ ಅದರ ಸ್ವಿಚ್ ನ್ನು ತೋರಿಸಬೇಕು. ಬಲ್ಪ್ ಎಲ್ಲರೂ ತೋರಬಹುದು, ಆದರೆ ಸ್ವಿಚ್ ನ್ನು  ತೋರಿಸುವರು ಇರುವುದಿಲ್ಲ. ಸ್ವಿಚ್ ಹಾಕಿದರೆ ಬಲ್ಪು ಉರಿಯುತ್ತದೆ. ಆಗ ವಿದ್ಯುತ್ ಇರಬೇಕು. ಅಂದರೆ ಯೋಗ ಇರಬೇಕು. ಅದಕ್ಕೇ ದೈವ ದರ್ಶನದ ಹಾದಿ ಅತ್ಯಂತ ದುರ್ಗಮ.

         ಒಂದು ಕತ್ತೆಗೆ ಒಂದು ಬಡಿಗೆ ಕಟ್ಟಿ ಬಡಿಗೆಯ ತುದಿಗೆ ಹುಲ್ಲನ್ನು ಕಟ್ಟಿದ ಚಿತ್ರವನ್ನು ಕಂಡಿರಬಹುದು. ಅದು ಕತ್ತೆ. ಅದಕ್ಕೆ ಬುದ್ದಿಯ ಅರಿವಿಲ್ಲ. ಒಂದು ನಾಯಿಗೂ ಇದೇ ರೀತಿ ಒಂದು ಬಡಿಗೆಯನ್ನು ಕಟ್ಟಿ ಅದರ ತುದಿಗೆ ಏನಾದರೂ ತಿನಿಸು ಇಟ್ಟರೆ, ಕತ್ತೆಯಾಗಲೀ ನಾಯಿಯಾಗಲೀ ಅದನ್ನು ತಿನ್ನುವುದಕ್ಕೋಸ್ಕರ ಬಡಿಗೆಯ ತುದಿಯನ್ನೇ ನೋಡುತ್ತಾ ಮುಂದೆ ಮುಂದೆ ಹೋಗುತ್ತದೆ. ವಾಸ್ತವದಲ್ಲಿ ಈ ತಿನಿಸನ್ನು ನಾನೇ ದೂರ ತಳ್ಳುತ್ತಾ ಇದ್ದೇನೆ ಎಂದು ಅದಕ್ಕೆ ಅರಿವಿರುವುದಿಲ್ಲ ! ಅದು ಮುಂದೆ ಹೋದಂತೆಲ್ಲಾ ತಿನ್ನುವ ಆಹಾರ ಮುಂದಕ್ಕೆ ಸೆಳೆಯಲ್ಪಡುತ್ತದೆ. ಇದೂ ಅಷ್ಟೇ ಆ ಸೆಳೆತಕ್ಕೆ ಒಳಗಾಗುತ್ತದೆ. ವಾಸ್ತವದಲ್ಲಿ ಅಲ್ಲಿರುವ ಆಹಾರವನ್ನು ಅದೇ ಹಿಡಿದುಕೊಂಡಿರುತ್ತದೆ.   ಹೀಗೆ  ಭಗವಂತ ಅಥವಾ ಪರಮಾತ್ಮ ನಮ್ಮೊಳಗೆ ಇರುತ್ತಾನೆ. ನಾವು ಎಲ್ಲೋ ಹುಡುಕುತ್ತಾ ಮುಂದೆ ಮುಂದೆ ಹೋಗುತ್ತಾ ಇರುತ್ತೇವೆ. ನಾವು ಮುಂದೆ ಮುಂದೆ ಹೋದಂತೆ ದೇವರೂ ಮುಂದೆ ಮುಂದೆ ಕೈಗೆ ಕಣ್ಣಿಗೆ ಸಿಗದಂತೆ  ಹೋಗುತ್ತಾನೆ. ನಮ್ಮ ಅಂತರಾತ್ಮದಲ್ಲಿರುವ  ಪರಮಾತ್ಮನನ್ನು ನಾವು ಗುರುತಿಸುವುದಿಲ್ಲ. ಹೊರಗೆಲ್ಲೋ ಹುಡುಕುತ್ತೇವೆ ಹಿಂಬಾಲಿಸುತ್ತೇವೆ, ಕತ್ತೆ ನಾಯಿಯಂತೆ ಅರಿವಿಲ್ಲದೆ.  ಕಾಂತಾರದ ನಾಯಕನಿಗೂ ಇದೇ ಅನುಭವ. ಕೊನೆಗೆ ಆತ ದೇವರಾಗುವುದು . ಇದೇ ಅನುಭವದಲ್ಲಿ. ಆಗಲೇ ನಾಯಕ ಬಂದು ಹೇಳುತ್ತಾನೆ ನಾನು ಪರಿಶುಧ್ದಿಯಾದೆ. ಮಳೆಯಿಂದ ನೀರಲ್ಲಿ‌ಮುಳುಗಿ ಶುಧ್ದವಾಗುವುದು ಬೇರೆ,  ಅಂತರಂಗದಿಂದ ಶುದ್ಧವಾಗುವುದು ಪರಿಪೂರ್ಣತೆ. ದೇಹಕ್ಕೆ ನೀರೆರೆದು ಸ್ನಾನ ಮಾಡಿದರೆ ದೇಹ ಶುದ್ದೀಕರಣವಾಯಿತು. ತಂಬಿಗೆಯನ್ನು ಹೊರಗಿಂದ ತೊಳೆದು ಇಟ್ಟಂತೆ, ಅದರಲ್ಲಿ ಹಾಲು ಹಾಕಬೇಕಾದರೆ ಪಾತ್ರೆಯನ್ನು ಒಳಗಿನಿಂದ ತೊಳೆಯಬೇಕು. ಪರಿಶುದ್ದತೆ ಎಂದರೆ ದೈವ ಸಾನ್ನಿಧ್ಯ.

         ನಾಯಕ ತನ್ನೊಳಗಿನ ದೇವರನ್ನು ಕಂಡಾಗ ಆತ ದೈವವೇ ಆಗಿ ಬದಲಾಗುತ್ತಾನೆ. ದೈವತ್ವ ಅದು ಹೊರಗೆಲ್ಲೂ ಇರುವುದಿಲ್ಲ. ಯಾವ ದೇವಾಲಯದಲ್ಲೂ ಇರುವುದಿಲ್ಲ. ಅದು ನಮ್ಮೊಳಗೆ ಇರುತ್ತದೆ. ಹೊರಗೆಲ್ಲ ಇರುವುದು ಬಡಿಗೆ ಅಂದರೆ ಮಾಧ್ಯಮ. ನಾವು ಅದನ್ನು ಗುರುತಿಸದೇ ಇದ್ದರೆ ಜೀವನ ಪರ್ಯಂತ ದೇವರ ದರ್ಶನವಾಗುವುದಕ್ಕೆ ಸಾಧ್ಯವಿಲ್ಲ. ಇದುವೆ ಅಂತರಂಗ ದರ್ಶನ. ತನ್ನ ಬಗಲಲ್ಲೇ ಪರಮಾತ್ಮನಿದ್ದರೂ ಅದನ್ನು ಗುರಿತಿಸದವನು ಹೊರಗೆಲ್ಲೋ ಹುಡುಕಿ ಸಿಗದೆ ಆದಾಗ ತನಗೆ ಹೇಳಿಕೊಳ್ಳುವುದು ಕಲಿಯುಗದಲ್ಲಿ ದೇವರು ಕಾಣುವುದಿಲ್ಲ. ತನ್ನ ಅನುಭವ ಏನಿದೆಯೋ ಅದೇ ಎಲ್ಲರ ಅನುಭವ ಎಂದು ತಿಳಿದುಕೊಳ್ಳುವುದು.

            ಕಾಡಿನಲ್ಲಿದ್ದ ಮಂಗನನ್ನು ಬಲವಂತದಿಂದ ಹಿಡಿದು ತಂದು ಮನುಷ್ಯ ಕಟ್ಟಿ ಹಾಕುತ್ತಾನೆ.  ಒಂದು ದಿನ ಮನುಷ್ಯ ಕರುಣೆ ತೋರಿ ಬಂಧ ಮುಕ್ತ ಗೊಳಿಸಿ ಮಂಗನನ್ನು ಕಾಡಿಗೆ ಬಿಟ್ಟು ಬಿಡಬಹುದು. ಆದರೆ ಉಳಿದ ಮಂಗಗಳು ಆವಾಗ ಅದನ್ನು ಸೇರಿಸುವುದಿಲ್ಲ. ಹೊಡೆದು ಕೊಂದು ಹಾಕಿಬಿಡುವ ಪ್ರಮೇಯವೂ ಇರುತ್ತದೆ. ಯಾಕೆಂದರೆ ಅದುವರೆಗೆ ಆ ಮಂಗ ಮನುಷ್ಯನ ಸಹವಾಸದಲ್ಲಿತ್ತು!   ಮನುಷ್ಯನ ಸಹವಾಸ ಎಷ್ಟು ಕೆಟ್ಟದು ಎಂದು ಪ್ರಾಣಿಗಳು ಈ ಮೂಲಕ ತೋರಿಸಿಕೊಡುತ್ತವೆ.  ಜಗತ್ತಿನಲ್ಲಿ ಮನುಷ್ಯನಷ್ಟು ಸುಳ್ಳು ಹೇಳುವ ಪ್ರಾಣಿ ಇನ್ನೊಂದಿಲ್ಲ. ಕಾಗೆ ಒಂದು ಅಗುಳು ಕಂಡರೆ ಮಾತ್ರ ತನ್ನ ಬಳಗವನ್ನು ಕರೆಯುತ್ತದೆ. ಅದು ಎಂದಿಗೂ ಸುಳ್ಳು ಹೇಳುವುದಿಲ್ಲ. ಪ್ರಾಣಿ ಪಕ್ಷಿಗಳು ಎಂದಿಗೂ ಸುಳ್ಳು ಹೇಳುವುದಿಲ್ಲ. ಮನುಷ್ಯ ಮಾತ್ರ ಸುಳ್ಳು ಹೇಳುತ್ತಾನೆ. ಯಾಕೆಂದರೆ ಸತ್ಯದಿಂದ ದೂರವಾಗುವುದನ್ನು ಆತ ಕಾಣುತ್ತಾನೆ. ಸತ್ಯ ಅಂದರೆ ಏನು ಅದೇ ಭಗವಂತ. ದೇವರಿಗೆ ಏನೇನೋ ಅಲಂಕಾರ ಮಾಡಿ ಚಿನ್ನ ಬೆಳ್ಳಿಯ ಕವಚ ಪ್ರಭಾವಳಿ ಹೀಗೆ ಆಡಂಬರದಿಂದ ಭಗವಂತನನ್ನು ಕಾಣುತ್ತೇವೆ. ನಾವು ನಿಜಕ್ಕೂ ಭಗವಂತನನ್ನು ಕಾಣುವುದಿಲ್ಲ. ಕೇವಲ ಆಡಂಬರವನ್ನುಕಂಡು ಅನುಭವಿಸುತ್ತೇವೆ.  ನಮ್ಮ ಮನಸ್ಸಿಗೆ ನಾವು ಸುಳ್ಳನ್ನೇ ಹೇಳಿಬಿಡುತ್ತೇವೆ.  ಪ್ರವಚನ ಒಂದರಲ್ಲಿ ವಿದ್ವಾಂಸರು ಹೇಳಿದ ಮಾತು, ವರ್ಷಕ್ಕೊಮ್ಮೆ ಗಣೇಶನನ್ನು ತಂದು ಕೂರಿಸುತ್ತೇವೆ. ಪೂಜೆ ಮಾಡುತ್ತೇವೆ. ಆದರೆ ಕೊನೆಗೆ ನೀರಿಗೆ ಹಾಕುವಾಗ ಕೇಕೆ ಹಾಕಿ ಕುಣಿದು ಕುಪ್ಪಳಿಸುತ್ತೇವೆ. ನಿಜಕ್ಕು ಇದು ಯಾಕೆ ಎಂದೆ ಅರಿವಾಗುವುದಿಲ್ಲ. ಯಾಕೆ ನಾವು ದೇವರಿಂದ ದೂರವಾಗುವುದನ್ನು ಸಂಭ್ರಮಿಸುತ್ತೇವೆ?
ಪೂಜೆಗೆ ಸ್ನಾನ‌ ಮಾಡಿ ಮಡಿಉಟ್ಟು ತಯಾರಾಗುತ್ತೇವೆ. ಆದರೆ ಮನಸ್ಸು!!  ಆ ಪೂಜೆಯನ್ನು ಮುಗಿಸಿ ಮಡಿಯನ್ನು ಕಳಚಿ ಸಹಜ ಸ್ಥಿತಿಗೆ ಬರಲು ಹಾತೊರೆಯುತ್ತದೆ. ಪರಿಶುಧ್ದತೆ ಎಂಬುದೇ ಅಸಹಜವಾಗಿ ಭಾಸವಾಗುತ್ತದೆ. ಪರಿಶುಧ್ದತೆ ಎಂಬುದೇ ಪರಮಾತ್ಮ. ಪರಿಶುದ್ಧ ಮನಸ್ಸು ಅದರ ಸಂಕೇತ.

           ಗಣ್ಯದಲ್ಲೂ ಶೂನ್ಯದಲ್ಲೂ ಭಗವಂತನಿದ್ದಾನೆ. ಹುಣಿಸೇ ಬೀಜ, ಚಿಕ್ಕದಾಗಿ ಬೆರಳ ತುದಿಯ ಗಾತ್ರದಲ್ಲಿರುತ್ತದೆ. ನಮ್ಮೂರಲ್ಲಿ ಇದಕ್ಕೆ ಅಡ್ಡ ಹೆಸರು ಇದೆ ’ಪುಳಿಂಕಟೆ’. ಕೇಳುವುದಕ್ಕೆ ವಿಚಿತ್ರವಾಗಿದೆ. ಕೈಯಲ್ಲಿ ಏನೂ ಇಲ್ಲದಾಗ ಹೇಳುವ ಮಾತುಂಟು....ಕೈಯಲ್ಲಿ ಏನುಂಟು ಪುಳಿಕಂಟೆಯೂ ಇಲ್ಲ. ಅವನಲ್ಲಿ ಎಂತ ಇರುವುದು ಪುಳಿಕಂಟೇಯಾ? ಹೀಗೆ ಏನೂ ಇಲ್ಲದ ಒಂದು ನಿಕೃಷ್ಟ ಸ್ಥಿತಿಯನ್ನು ಇದಕ್ಕೆ ಹೋಲಿಸಿ ಹೇಳುವುದುಂಟು.  ಆ ಹುಣಿಸೆ ಹಣ್ಣಿನ ಒಳಗೆ ಬೀಜ ಇರುತ್ತದೆ. ಬೀಜಕ್ಕೆ ಒಂದು ಸಿಪ್ಪೆ ಇರುತ್ತದೆ. ಆ ಸಿಪ್ಪೆಯನ್ನು ತೆಗೆದು ನೋಡಿದಾಗ ಒಳಗೆ ಒಂದು ತಿರುಳು ಇರುತ್ತದೆ. ಮತ್ತೂ ಅದನ್ನು ಗುದ್ದಿ ತೆರೆದರೆ ಒಳಗೆ ಏನೂ ಇಲ್ಲ. !! ಏನೂ ಇಲ್ಲದ ನಿಕೃಷ್ಟವಾಗಿರುವ ಬೀಜದಲ್ಲಿ ಅಷ್ಟು ದೊಡ್ಡ ಹುಣಿಸೆ ಮರ ಅಲ್ಲಿ ಹುಟ್ಟಿಕೊಳ್ಳುವುದಾದರೂ ಹೇಗೆ? ಪ್ರಕೃತಿ ವಿಸ್ಮಯ.  ಸಮುದ್ರದ ಬದಿಯಲ್ಲಿ ನಿಂತು ನೋಡಿದರೆ ಕಣ್ಣು ಹಾಯುವಷ್ಟು ದೂರವೂ ನೀರು ಬರೇ ನೀರನ್ನೇ ಕಾಣುತ್ತೇವೆ. ನಮ್ಮ ಕಣ್ಣಿಗೆ ಎಟುಕದಷ್ಟೂ ದೂರದಲ್ಲೂ ಇರುವುದು ನೀರು. ಅಷ್ಟು ನೀರು ಬರೀ ಉಪ್ಪು. ನೀರು ಕಾಣುತ್ತದೆ. ಉಪ್ಪು ಕಾಣುವುದೇ ಇಲ್ಲ. ಆದರೂ ಉಪ್ಪ ಇರುವುದರ ಅನುಭವ ಅಗುತ್ತದೆ. ಮತ್ತದನ್ನು ನಾವು ನಂಬುತ್ತೇವೆ. ಕಣ್ಣಿಗೆ ಕಾಣುವ ಈ ಪ್ರಕೃತಿಯನ್ನು ಕಣ್ಣಿಗೆ ಕಾಣಿಸದವನು ಮುಂದೆ ಇಟ್ಟಿದ್ದಾನೆ. ಅಷ್ಟಾಗಿಯೂ ಕಣ್ಣಿಗೆ ಕಾಣಿಸುವುದನ್ನು ಮಾತ್ರ ನಾವು ನಂಬುತ್ತೇವೆ.  ಮತ್ತೆ ಹುಡುಕುತ್ತೇವೆ. ನಿಜಕ್ಕಾದರೆ  ಕಣ್ಣಿಗೆ ಕಾಣದ ಶಕ್ತಿಯಿಂದ ಕಣ್ಣಿಗೆ ಕಾಣುವ ಈ ಪ್ರಪಂಚ ಸೃಷ್ಟಿಯಾಗಿದೆ.
ಕಾಂತಾರದಲ್ಲಿ ಪೋಲೀಸಪ್ಪನೊಬ್ಬನಿದ್ದಾನೆ..ಮೊದಲಿಗೆ ಆತ ಖಳನಂತೆ ಮೇಲೆರಗುತ್ತಾನೆ. ನಂತರ ಭೂತದ ಮಹಿಮೆ ಇಲ್ಲಾ ಭಯದಿಂದ ಸಾತ್ವಿಕನಾಗುತ್ತಾನೆ ಇರಬೇಕು. ಇಲ್ಲೂ ಆತನಿಗೆ ಆಗುವುದು ಅನಭವ. ಆ ಅನುಭವವನ್ನು ದೈವ ಹುಟ್ಟಿಸುತ್ತದೆ. ಭಯ ಭಕ್ತಿಯನ್ನು ಹುಟ್ಟಿಸುತ್ತದೆ, ಭಕ್ತಿ ಸಾತ್ವಿಕತೆಯ ಜ್ಞಾನವನ್ನು ಅರಿವನ್ನೂ ಹುಟ್ಟಿಸುತ್ತದೆ. ಆದರೂ ಭಕ್ತಿ ಎಂದರೇನು ಎಂದು ಯೋಚಿಸುವಂತಾಗುತ್ತದೆ. ಭಕ್ತಿಯ ಬಗ್ಗೆ ಯೋಚಿಸುವಾಗ ಅದು ಮತ್ತಷ್ಟು ವಿಶಾಲವಾಗುತ್ತದೆ.
ಭಯದಿಂದ ಭಕ್ತಿ ಹುಟ್ಟಬಹುದು. ಭಯ ಭಕ್ತಿಯಾಗುವುದು  ಒಂದು ಪರಿವರ್ತನೆ ಯಾಗಬಹುದು, ಆದರೆ ಭಯ ಶಾಶ್ವತವಾದರೆ ಭಕ್ತಿ ಪ್ರಾಮಾಣಿಕವಾಗುವುದಿಲ್ಲ.  ಭಯ ದೂರವಾದಾಗ ಭಕ್ತಿಯೂ ದೂರವಾಗುತ್ತದೆ. ಭಕ್ತಿ ದೂರವಾದರೆ ಮತ್ತೆ ಪರಿವರ್ತನೆಗೆ ಮೌಲ್ಯ ಸಿಗುವುದಿಲ್ಲ. ಪಾಪಭಯ ಇರಬೇಕು ಸತ್ಯ.  ಆದರೆ ಭಕ್ತಿ ಭಯಮುಕ್ತವಾಗಬೇಕು.‌

         ಬೆಟ್ಟ ಗುಡ್ಡಗಳನ್ನು ಹತ್ತುವಾಗ ಉಕ್ಕುವ ಪರಮಾತ್ಮನ‌ ಭಕ್ತಿ ‌ ಬೆಟ್ಟ ಇಳಿದಾಗ ಭಕ್ತಿಯೂ ದೂರವಾಗುವುದನ್ನು ಕಾಣಬಹುದು. ಗುಡಿಯ ಮುಂದೆ ಪ್ರತಿಮೆಯ ಮುಂದೆ ನಿಲ್ಲುವಾಗ ಮಾತ್ರ ಮೂಡಿದ ಭಕ್ಕಿ ಹೊರ ಬಂದಾಗ ತೀರ ವ್ಯಾವಹಾರಿಕವಾಗುತ್ತದೆ. ಹಲವುಸಲ ನಾಗನ‌ ಕಲ್ಲು ನೋಡಿದಾಗ ಹುಟ್ಡುವ ಭಕ್ತಿ ನಿಜವಾದ ನಾಗನನ್ನು ನೋಡಿದಾಗ ಭಯ ಮಾತ್ರವೇ ಉಳಿಯುತ್ತದೆ.  ದೇವರ ಎದುರು ನಿಂತಾಗ ಮಾತ್ರಾ ಪರಮ‌ ಧಾರ್ಮಿಕನಾಗಿ ಧರ್ಮ‌ ಜಾಗೃತವಾಗುತ್ತದೆ. ಹೊರಬಂದಾಗ ಮತ್ತದೇ ವ್ಯವಹಾರ ಸುಳ್ಳನ್ನು ಹೇಳಿಸಿ ವಂಚನೆಯನ್ಯ ಪ್ರಚೋದಿಸುತ್ತದೆ. ಜೀವನ ಎಂದರೆ ವ್ಯಾಪಾರ ಎಂದು ಹೇಳುತ್ತಾರೆ. ವ್ಯಾಪಾರ ಎಂದರೆ ಅಲ್ಲಿ ಸುಳ್ಳು ವಂಚನೆ ಇದ್ದೇ ಇರುತ್ತದೆ. ಲಾಭವಿದ್ದರೆ ಮಾತ್ರ ವ್ಯಾಪಾರ.  ಲೌಕಿಕತೆ ಭಕ್ತಿ ಯನ್ನು ದೂರವಿಡುತ್ತದೆ.  ಭಕ್ತಿ ಪರಿಶುಧ್ಧಿಯನ್ಮು ತಂದು ಪಾವಿತ್ರತೆಯತ್ತ ಒಯ್ಯಬೇಕು. ಮತ್ತೂ ಪಾಪಗಳಿಗೆ ದುರಿತಗಳಿಗೆ ವಶವಾದರೆ ಭಯದಿಂದ ಹುಟ್ಟಿದ ಭಕ್ತಿಯ ಅಗತ್ಯವನ್ನು ಪ್ರಶ್ನಿಸುತ್ತದೆ.

           ದೇವರು ಎಂದರೆ ನಾವು ಭಯವನ್ನು ಹುಟ್ಟಿಸುತ್ತೇವೆ. ದೇವರು ಶಪಿಸಬಹುದು ಎಂಬ ಭಯದಲ್ಲಿ ಹುಟ್ಟಿದ ಭಕ್ತಿ ಕೇವಲ ಭಯವನ್ನು ಮಾತ್ರಾ ಹೆಚ್ಚಿಸಿದರೆ  ಭಕ್ತಿ ಪರಿಪೂರ್ಣವಾಗುವುದಿಲ್ಲ. ಶಪಿಸುವ ದೇವರು ಎಂದೂ ದೇವರಲ್ಲ. ಗೌರವ ಮತ್ತು ಪ್ರೀತಿ ಎರಡೂ ನೋಡುವುದಕ್ಕೆ ಒಂದೇ ಇರಬಹುದು ಅದರೆ ಎರಡಕ್ಕೂ ವೆತ್ಯಾಸವಿದೆ. ಅಮ್ಮನ ಮೇಲೆ ನಮಗೆ ಗೌರವಕ್ಕಿಂತ ಹೆಚ್ಚು ಪ್ರೀತಿ ಇದೆ. ಆ ಪ್ರೀತಿ ಸಲುಗೆಯಾಗಿ ಭಕ್ತಿ ಎಂಬುದು ಇಲ್ಲಿ ಭಯದಿಂದ ಮುಕ್ತವಾಗಿರುತ್ತದೆ. ಭಕ್ಕಿಯ ಭಾವದಲ್ಲಿ ನಮ್ಮೊಳಗಿನ ದೈವದ ಅರಿವಾಗಬೇಕು. ಒಳಗಿನ ದೇವರನ್ನು ಅರಿತಾಗ ಮನುಷ್ಯನೂ ದೇವರಾಗುತ್ತಾನೆ. ಇದೇ ಕಾಂತಾರದ ನವಿರಾದ ತತ್ವ.
ದೇವರು ಸರ್ವಂತರ್ಯಾಮಿ  ಜ್ಞಾನದಲ್ಲೂ ಅಜ್ಞಾನದಲ್ಲೂ ಇರುತ್ತಾನೆ‌ ದೈವದ ಬಗ್ಗೆ ಯೋಚಿಸುವುದೇ ತಪಸ್ಸು.. ದೈವದ ಅರಿವೆ ಗಮ್ಯ.
      ಭಕ್ತಿ ಸ್ತಾಯಿಯಾಗಿ ಉಳಿಯಬೇಕಾದರೆ ಭಯ ದೂರವಾಗಬೇಕು. ಭಕ್ತಿ ಹೆಚ್ಚು ಹೃದಯಸ್ಪರ್ಶಿಯಾಗಬೇಕು. ಭಯವಿಲ್ಲದ ಪರಮಾತ್ಮ ಸ್ನೇಹಿತನಂತೆ ಬಳಿಯಲ್ಲೇ ಇರುತ್ತಾನೆ.

No comments:

Post a Comment