Tuesday, November 8, 2022

ಉತ್ಕೃಷ್ಟ ಸಂದೇಶ

 

 ಮಂತ್ರಾಲಯದಲ್ಲಿ ಮುಂಜಾನೆ ಹೀಗೆ ಹರಿಯುವ ತುಂಗೆಯ ನಡುವೆ ಬಂಡೆಯ ಮೇಲೆ ಸುತ್ತಾಡಬೇಕಾದರೆ ಸುತ್ತಲೂ ಸುಂದರ ಬಯಲು ಸೀಮೆಯ ಪ್ರಕೃತಿಯಾದರೆ ಅಲ್ಲೇ ಗುಟುರು ಹಾಕುತ್ತಾ ಮೇಯುವ ಹಂದಿಯ ಹಿಂಡು ಕಾಣುತ್ತಿದ್ದಂತೆ ಮಗನಿಗೆ ಕಾಂತಾರ ಸಿನಿಮದ ಪಂಜುರ್ಲಿ ಸ್ಮರಣೆಗೆ ಬಂತು. ಹಂದಿ ಕಾಣುವುದಕ್ಕೆ ನಿಕೃಷ್ಟ ಪ್ರಾಣಿ ಆದರೆ ಆಗ ಅಲ್ಲಿ ಮನುಷ್ಯನ ವಿಕೃತಿ ನಿಕೃಷ್ಟತೆಯ ಪ್ರತೀಕದಂತೆ ಬಂಡೆಯ ಮೇಲೆ ಎಸೆದ ಕಸ ಆಹಾರದ ಮುದ್ದೆಗಳನ್ನು ಸ್ವಚ್ಛ ಮಾಡಿ ತನ್ನ ಉತೃಷ್ಟತೆಯನ್ನು ಪೂರ್ವ ದಲ್ಲಿ ಉದಿಸಿದ ಸೂರ್ಯನಿಗೆ ತೋರುಸುತ್ತಿತ್ತು.

ಕೇವಲ ಇಷ್ಟೇ ಅಲ್ಲ,
ನಗ್ನತೆ  ಹೊರಗೆ ಕಂಡಾಗ  ಸ‌ಭ್ಯತೆಯ ಮನಸ್ಸು  ವಸ್ತ್ರವನ್ನು ಧರಿಸಿಬಿಡುತ್ತದೆ.  ಕಣ್ಣು ಮುಚ್ಚಿಕೊಳ್ಳುತ್ತದೆ. ಅದು ಸಭ್ಯತೆ. ಅದು ಮೀರಿದರೆ ಹೊರಗೆ ವಸ್ರ ಧರಿಸಿದರೂ  ಮನಸ್ಸು ನಗ್ನತೆಯನ್ನೇ  ಕಾಣುತ್ತದೆ.  ಮನುಷ್ಯ ಮನಸ್ಸು ಅಮೀಬದಂತೆ ಯಾವರೂಪವನ್ನು ಕ್ಷಣದಲ್ಲಿ ಪಡೆಯಬಲ್ಲುದು. ಇದನ್ನೆ ಮನೋವಿಕಾರ ಎನ್ನುವುದು.  ಕ್ಷೇತ್ರ ಪರಿಸರದ ಮೌಲ್ಯ ಅರಿಯದೆ ಮನೋವಿಕಾರವನ್ನು ಪ್ರಚೋದಿಸುವ ಒಂದು ವರ್ಗವಿದ್ದರೆ, ಮನೋವಿಕಾರವನ್ನೇ ಭಂಡವಾಳ ಮಾಡಿಕೊಂಡ ಇನ್ನೊಂದು ವರ್ಗ. ಸಭ್ಯತೆಯ ತಕ್ಕಡಿ ಸಂತುಲನೆಯನ್ಮು ಕಳೆದುಕೊಂಡಂತೆ ನೇತಾಡುತ್ತಿದೆ. ನೇತಾರನೇ ನೇತಾಡಿದರೆ ಉಳಿದವರೂ ಅದೇ ಬಳ್ಲಿಗೆ ನೇತಾಡುತ್ತಾರೆ.


ಹಂದಿ ತುಳುವರ ಪಂಜಿ...ನೋಡುವುದಕ್ಕೆ ಭೀಭತ್ಸವಾದರೂ ಅದೇಕೊ ಅದರ ಪ್ರವೃತ್ತಿಯ ಬಗ್ಗೆ ಗೌರವ ಮೂಡಿತು. ಪವಿತ್ರ ಪಾವನ ತುಂಗೆ ಮನಷ್ಯನ ಅಪವಿತ್ರ ಧಾಳಿಗೆ ನಲುಗಿ ಎಲ್ಲೆಂದರಲ್ಲಿ ಎಸೆದ ಕಸ,  ಭಾಟಲಿ,  ಹರುಕು ಬಟ್ಟೆ ಇನ್ನೂ ಏನೇನೊ ನೋಡುವುದಕ್ಕೂ ಅಸಹ್ಯ ಎನಿಸುವಂತಹ ವಸ್ತುಗಳನ್ನು ಮೈಯೆಲ್ಲಾ ತುಂಬಿ, ಗುಣವಾಗದ ವೃಣದಿಂದ ರೋಧಿಸುವಂತೆ ಭಾಸವಾಯಿತು. ಇದರ ನಡುವೆ ಈ ಕಸದ ಸಂಹಾರವನ್ನು ಸಾಧು ವರಾಹ ರೂಪ ಸಂಹಾರ ಮಾಡುತ್ತಿತ್ತು. ಇದು ಸಾವಿರ ಪಂಜುರ್ಲಿಗಳು ಅವತಾರ ಎತ್ತಿದರೂ ಮನುಷ್ಯ ಪ್ರಬುದ್ದನಾಗುವುದಿಲ್ಲ ಎಂಬುದರ ಸಂಕೇತ.

ಹಂದಿಯನ್ನು ನೋಡುವಾಗ ಪೂಜ್ಯ ಪಂಜುರ್ಲಿಯ ನೆನಪಾಗಬೇಕಾದರೆ  ಕಾಂತಾರ ಪ್ರಚೋದಿಸಿದ ಆ ಭಾವನಾತ್ಮಕ ಭಕ್ತಿ ಏನಿರಬಹುದು? ನಮ್ನ ಸನಾತನ ಸಂಸ್ಕೃತಿಯ ಮೌಲ್ಯಗಳೇ ಹೀಗೆ. ಅದು ನಿಕೃಷ್ಟತೆಯಲ್ಲೂ ಉತ್ಕರ್ಷವನ್ನು ತೋರಿಸಿ, ಲೌಕಿಕ ಪ್ರಪಂಚದ ಉತ್ಕೃಷ್ಟತೆಯ ನಿಕೃಷ್ಟತೆಯನ್ನು ಆಧ್ಯಾತ್ಮಿಕ ದಲ್ಲೇ ತೋರಿಸುತ್ತವೆ. ಜಗತ್ತು ಇದನ್ನು‌ಕಾಣಬೇಕು. ಹಾಗಾಗಿಯೇ ಕಾಂತಾರ ಜಗತ್ತಿಗೆ ಕೊಡುವ ಸಂದೇಶದಲ್ಲಿ ಇದೂ ಒಂದು ಉತ್ಕೃಷ್ಟ ಸಂದೇಶ.

ನಾವು ಪ್ರಕೃತಿಯನ್ನು ಗೌರವಿಸಿ ಪೂಜಿಸಿದಷ್ಟು ಬೇರೆ ಯಾವ ಧರ್ಮವೂ ಪ್ರಕೃತಿಯನ್ನು ಕಂಡದ್ದಿಲ್ಲ. ಇಲ್ಲಿ ಮರಗಿಡಗಳೂ ಪಕ್ಷಿ ಪಶುಗಳೂ ಪೂಜಿಸಲ್ಪಡುವುದು ಮಾತ್ರವಲ್ಲ....ಹಂದಿಯೂ ದೈವಾಂಶವಾಗುತ್ತದೆ.  ಇದರ ಮೌಲ್ಯಗಳನ್ನು ತಿಳಿಯದೇ ಇದ್ದರೆ ಮನುಷ್ಯನೇ ಪ್ರಕೃತಿಯ ಎದುರು ಬೆತ್ತಲಾಗಿ ನಿಕೃಷ್ಟನಾಗುತ್ತಾನೆ.

No comments:

Post a Comment