Friday, November 25, 2022

ಕಾಂತಾರಕ್ಕೂ ಭೂತ ಬಾಧೆ

 



"ಲಜ್ಜಾವತಿಯೇ ನಿಂದೆ ಕಳ್ಳಕಡಕಣ್ಣಿಲ್....."  ಕೆಲವು ವರ್ಷಗಳ ಹಿಂದೆ ಮಲಯಾಳಿಗರಲ್ಲಿ ಸಂಚಲನ ಮೂಡಿಸಿದ ಹಾಡು. ಪಾರ್ ದ ಪೀಪಲ್ ಎಂಬ ಸಿನಿಮಾದ ಈ ಹಾಡು ಬಹಳ ಜನಪ್ರಿಯವಾಗಿತ್ತು. ಯುವಜನಾಂಗ ಹುಚ್ಚೆದ್ದು ಕುಣಿದಿತ್ತು.   ಅದು ಕೇವಲ ಮಲಯಾಳಕ್ಕೆ ಸೀಮಿತವಾಗಿತ್ತು. ಆದರೆ ಕನ್ನಡದಲ್ಲಿ ಗಣೇಶ್ ನಾಯಕನಾದ ಒಂದು ಸಿನಿಮಾದಲ್ಲೂ ಅದನ್ನು ಯಥಾವತ್ ಆಗಿ ಬಳಸಿಕೊಳ್ಳಲಾಯಿತು. ಹೀಗೆ ಚರ್ಚೆ ಮಾಡುವಾಗ ಒಬ್ಬರಲ್ಲಿ ಹೇಳಿದೆ ಇದು ಲಜ್ಜಾವತಿಯೆ ಎಂಬ ಮಲಯಾಳಂ ಸಿನಿಮಾದ ಹಾಡು ಯಥಾವತ್ ನಕಲು ಮಾಡಿದ್ದಾರೆ. ಆತ ಒಪ್ಪಿಕೊಳ್ಳಲೇ ಇಲ್ಲ. ಆತ ಹೇಳಿದ ಯಾಕೆ ಕನ್ನಡದಿಂದ ಅವರು ನಕಲು ಮಾಡಿರಬಾರದು? ಆಗ ಅದರ ನಿರ್ಮಾಣದ ಬಿಡುಗಡೆಯ ದಿನಾಂಕವನ್ನು ದಾಖಲೆ ಸಹಿತ ಆತನ ಮುಂದಿಟ್ಟೆ.  ಆದರೆ ಇಲ್ಲಿ ಯಾರೂ ಅದರ ಬಗ್ಗೆ ಯೋಚಿಸಲಿಲ್ಲ. ಅದು ಹಕ್ಕು ಪಡೆದು ಉಪಯೋಗಿಸಿದರೂ ಮೂಲ ಸಿನಿಮಾದ ಉಲ್ಲೇಖ ಎಲ್ಲೂ ಇಲ್ಲದೆ ಅಮಾಯಕ  ಕನ್ನಡ ಪ್ರೇಕ್ಷಕ ಮಾತ್ರ ಅದು ಇಲ್ಲಿನದೇ ಕೃತಿ ಎಂದುಕೊಂಡ.  ರವಿಚಂದ್ರನ್ ನಟನೆಯ ರಣಧೀರ ಸಿನಿಮಾದಲ್ಲಿ ಒಂದಾನೊಂದು ಕಾಲದಲ್ಲಿ ಎಂಬ ಕೊಳಲಿನ ನಾದವಿತ್ತು. ಅದು ಕನ್ನಡದ್ದೇ ಟ್ಯೂನ್ ಅಂತ ತಿಳಿದಿದ್ದೆವು. ಸಂಪೂರ್ಣ ಹಕ್ಕು ಪಡೆದು ಚಿತ್ರ ನಿರ್ಮಿಸಿದ್ದರೂ ಕನ್ನಡದ ಬಹು ಪಾಲು ಪ್ರೇಕ್ಷಕರಿಗೆ ಇದು ಮೂಲದಲ್ಲಿ ಹಿಂದಿಯಲ್ಲಿ ಇತ್ತು ಎಂದು ತಿಳಿದಿರಲಿಲ್ಲ. ಆದರೆ ಹೀರೋ ಸಿನಿಮಾದ ಹಾಡು ಕೇಳಿದ ನಂತರ ಕನ್ನಡದಲ್ಲಿ ಅದು ಪುನರ್ ನಿರ್ಮಿಸಲಾಗಿದೆ ಎಂದು ತಿಳಿದು ಬಂತು. ಮೂಲ ಹಿಂದಿ ಸಿನಿಮಾಕ್ಕಿಂತಲೂ ಇದರಲ್ಲಿ ಉತ್ತಮವಾಗಿ ಬಳಸಲಾಗಿತ್ತು.  ಖಂಡಿತವಾಗಿ  ಇದು ಕೃತಿ ಚೌರ್ಯ ಅಲ್ಲದೇ ಇರಬಹುದು. ಆದರೂ ಪ್ರೇಕ್ಷಕನ ಕ್ಷಣದ ತಿಳುವಳಿಕೆ ಹೇಗಿರುತ್ತದೆ ಎಂಬುದಕ್ಕೆ ಇದು ನಿದರ್ಶನ.  ಸಿನಿಮಾದ ಜಾಹಿರಾತಿನಲ್ಲಿ ಎಲ್ಲೂ ಇದು ಇಂತಹ ಸಿನಿಮಾದ ಅವತರಣಿಕೆ ಎಂದು ಎಲ್ಲೂ ಉಲ್ಲೇಖಿಸುವುದಿಲ್ಲ. 


ಇದು ಕೇವಲ ಒಂದು ನಿದರ್ಶನ ಅಷ್ಟೇ. ಇಂತಹುದು ಬೇಕಾದಷ್ಟು ಸಿಗುತ್ತದೆ. ಹಲವು ಸಲ  ಮೂಲ ಕರ್ತೃವಿಗೆ ಸಿಗಬೇಕಾದ ಗೌರವ ಸಿಗುವುದೇ ಇಲ್ಲ.  ಕೆಲವರು ಇದು ಇದರ ಪ್ರೇರಣೆ ಅಂತ ಮೊದಲಾಗಿ ಹೇಳಿ ಗೌರವಿಸುತ್ತಾರೆ.  ಗೌರವ ಎಂದರೆ ಕೇವಲ ಹಕ್ಕುಗಳನ್ನು ಪಡೆಯುವುದಕ್ಕೆ ಸೀಮಿತವಾಗಿರುವುದಿಲ್ಲ. ಅದನ್ನು ಯಾವ ರೀತಿ ತೋರಿಸಿಕೊಡುತ್ತೇವೆ ಎನ್ನುವುದರಲ್ಲೂ ಇದೆ.  ಒಂದು ಕಡೆಯಲ್ಲಿ ಭಕ್ತಿ ಗೀತೆಯಾಗಿ ಉಪಯೋಗಿಸಿದ ಹಾಡನ್ನು, ಇನ್ನೊಂದು ಕಡೆಯಲ್ಲಿ ಹಕ್ಕು ಸ್ವಾಮ್ಯ ಪಡೆದು ಕ್ಯಾಬರೆಗೆ ಬಳಸಿಕೊಂಡರೆ ಹೇಗೆ?  ಏನಿದ್ದರೂ ಮೂಲದಲ್ಲಿ ಕೃತಿಯನ್ನು ಸೃಷ್ಟಿಸಿದವನ ಪ್ರತಿಭೆಗೆ ಹೆಚ್ಚು ಮೌಲ್ಯ. ಸ್ವಂತವಾಗಿ ಪ್ರತಿಭೆ ಇಲ್ಲದೇ ಇರುವಾಗ ಯಾವುದೋ ಕಾರಣಕ್ಕೆ ಮತ್ತೊಬ್ಬನ ಪ್ರತಿಭೆಯನ್ನು ಎರವಲು ಪಡೆದು ಇನ್ನೂ ಮುಂದಕ್ಕೆ ಹೋಗಿ ಕಳ್ಳತನ ಮಾಡಿ ತಮ್ಮದೇ ಪ್ರತಿಭೆ ಎಂದು ಮೀಸೆ ಮೇಲೆ ಕೈ ಹಾಕುವವರಿಗೆ ಏನೂ ಕಡಿಮೆ ಇಲ್ಲ.  ಹಲವು ಸಲ ಹಕ್ಕುಗಳನ್ನು ಪಡೆದರೂ ಹಕ್ಕುಗಳ ಉಲ್ಲಂಘನೆಯು ಆಗಿರುತ್ತದೆ. 


ಕಾಂತಾರ ಇದೀಗೆ ಅಂತರ್ಜಾಲದಲ್ಲಿ ಬಿಡುಗಡೆಯಾಗಿದೆ. ಮತ್ತೊಮ್ಮೆ ಮನೆಯವರೆಲ್ಲರೂ ಕಂಡಾಯಿತು. ಮೊದಲು ಕಂಡಿರುವುದರಿಂದ ಅದರ ಪ್ರಭಾವವೇ ಅಧಿಕವಾಗಿರುವುದರಿಂದ ವಿಶೇಷವೇನೂ ಅನಿಸಲಿಲ್ಲ. ಮತ್ತೊಮ್ಮೆ ಮರುಕಳೆಯಾಯಿತು ಅಷ್ಟೆ. ಕೊನೆಯಲ್ಲಿ ಅತೀ ಪ್ರಮುಖವೆನಿಸಿದ ಹಾಡು ಬದಲಾವಣೆಯಾಗಿರುವುದು ಎಲ್ಲರಿಗೂ ಒಂದು ಅಸಮಾಧಾನವಾಯಿತು. ಆದರೂ ಮತ್ತೆ ಜೋಡಿಸಿದ ಹಾಡು ಕಳಪೆ ಏನಲ್ಲ. ಮೊದಲ ಹಾಡಿನ ನೆಶೆ ಇದಕ್ಕಿಂತಲೂ ಗಾಢವಾಗಿರುವುದರಿಂದ ಇದರ ಪ್ರಭಾವ ಬಹಳಷ್ಟು ಕಡಿಮೆಯಾಯಿತು. ಇದೆಲ್ಲ ಮನರಂಜನೆಯ ಒಂದು ಭಾಗ. ಆದರೂ ಇಲ್ಲಿ ಗಮನಿಸಬೇಕಾದ ಅಂಶಗಳು ಹಲವು. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಇನ್ನೂ ಜೀವಂತವಾಗಿ ಮತ್ತು ಬಲಿಷ್ಠವಾಗಿದೆ.  ಹೀಗಿದ್ದರೂ ಕಾಂತಾರ ಮಾಡುವಷ್ಟು ಪ್ರಭಾವ ಸಮ್ಮೋಹನ ಅದಾಗಲೇ ಮಾಡಿಯಾಗಿರುವುದರಿಂದ ಈಗಿನ ಪ್ರೇಕ್ಷಕ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. 


ನಕಲಿ ಕೃತಿಚೌರ್ಯ ಹಲವು ಸಲ ವಂಚನೆ ಎಂದನಿಸುವುದೇ ಇಲ್ಲ. ಕದ್ದ ವಸ್ತುವಿನಲ್ಲಿ ಆರ್ಥಿಕವಾಗಿಯೋ ಅಥವ ಬೇರೆ ಯಾವುದೇ ರೂಪದಲ್ಲಿ ಲಾಭವಾದಾಗ ಅದು ಚೌರ್ಯದ ಸಾಲಿಗೆ ಸೇರಿಬಿಡುತ್ತದೆ. ಚೌರ್ಯ ಗಂಭೀರವಾಗುವುದು ಆವಾಗಲೇ. ದಾರಿಯಲ್ಲಿ ಸುಮ್ಮನೇ ಬಿದ್ದಿರುವ ವಸ್ತುವನ್ನು ತಿಳಿಯದೇ ತೆಗೆದುಕೊಂಡು ಹೋದರು, ತೆಗೆದುಕೊಂಡವರು ಅದರಲ್ಲಿ ಎಷ್ಟು ಲಾಭ ಗಳಿಸುತ್ತಾರೆ ಅದರ ಮೇಲೆಯೆ ವಂಚನೆಯ ಪ್ರಮಾಣ ಅಳಿಯುವುದು ಮಾತ್ರ ವಿಚಿತ್ರ ಅನಿಸುತ್ತದೆ. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ. ನಮ್ಮದಲ್ಲದ ವಸ್ತುವನ್ನು ಯಾರೇ ಕೈವಶ ಮಾಡಿಕೊಂಡರೂ ಒಂದೋ ಅದು ಅತಿಕ್ರಮಣವಾಗುತ್ತದೆ. ಇಲ್ಲ ಕಳ್ಳತನವಾಗುತ್ತದೆ. ನಮ್ಮ ಮನೋಭಾವಕ್ಕೆ ಹೊಂದಿಕೊಂಡು ಅದು ಗಂಭೀರತೆಯನ್ನು ಪಡೆಯುತ್ತದೆ.  ಇಲ್ಲವಾದರೇ ಎಲ್ಲೋ ಒಂದು ಯಾವುದೋ ಕಾಲದಲ್ಲಿ ಬಿಡುಗಡೆಯಾದ ಆಲ್ಬಂ ನ ಹಾಡಿನ ನೆರಳು ಈ ರೀತಿಯಾಗಿ ವಿವಾದ ಸೃಷ್ಟಿ ಮಾಡುತ್ತದೆ ಎಂದು ಯಾರುಬಲ್ಲರು. ಚೌರ್ಯ ಹೌದೋ ಅಲ್ಲವೋ ಅದು ನ್ಯಾಯಾಲಯಲದಲ್ಲಿ ಕಾನೂನಾತ್ಮಕವಾಗಿ ನಿರ್ಣಯವಾದರೂ ಈ ಚೌರ್ಯ ವೆಂಬುದು ಅಂತರಾತ್ಮದ ನಿರ್ಧಾರದ ಮೇಲೆಯೇ ನಿಂತಿರುತ್ತದೆ. ಅದನ್ನು ಇದರ ಸಂಗೀತ ನಿರ್ದೇಶಕ ಪ್ರಾಮಾಣಿಕವಾಗಿ ಸ್ಪಷ್ಟ ಪಡಿಸಬೇಕು. ಒಂದಿಷ್ಟಾದರೂ ಮೂಲ ಹಾಡಿನಿಂದ ಪ್ರಭಾವಿತನಾಗಿದ್ದರೆ ಅದು ಖಂಡಿತ ಕೃತಿ ಚೌರ್ಯವಾಗುತ್ತದೆ. ನ್ಯಾಯಾಲಯ ಏನೇ ಹೇಳಲಿ, ಏನೇ ನಿರ್ಣಯವಾಗಲಿ ಆತ್ಮ ವಂಚನೆ ಎಂಬುದು ಪ್ರಾಮಾಣಿಕತೆಯನ್ನು ನಿರ್ಣಯಿಸುತ್ತದೆ.  ಪ್ರಾಮಾಣಿಕತೆ ಇದ್ದರೆ ಒಂದು ಸಣ್ಣ ವಿಷಯಕ್ಕೂ ಮನ್ನಣೆ ಕೊಡುವ ಮನೋಭಾವ ಇರುತ್ತದೆ. ಅದರಲ್ಲಿ ಇರುವ ನಿರಾಳತೆ ಅದನ್ನು ಅನುಭವಿಸುವವರಿಗಷ್ಟೇ ತಿಳಿದಿರುತ್ತದೆ. 


ಕೃತಿ ಚೌರ್ಯದ ಬಗ್ಗೆ ಕೇಳುವಾಗ ಹಾಸ್ಯಾಸ್ಪದವೆನಿಸುತ್ತದೆ. ಆದರೆ ಎಲ್ಲಾ ಕಳ್ಳತನಕ್ಕಿಂತಲೂ ಇದು ಅತ್ಯಂತ ಗಂಭೀರ. ಒಬ್ಬನ ಪ್ರತಿಭೆಯನ್ನು ಉಪಯೋಗಿಸಬಹುದು, ಆದರೆ ಆ ಪ್ರತಿಭೆಗೆ ಗೌರವ ಕೊಡದೇ ಇರುವಾಗ ಅದು ವಂಚನೆಯಾಗುತ್ತದೆ. ಆದರೆ ಸಿನಿಮಾರಂಗ ಅದರಲ್ಲು ಇತ್ತೀಚಿಗಿನ ಕನ್ನಡ ಚಿತ್ರರಂಗ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದನಿಸುವುದೇ ಇಲ್ಲ.  ಹಲವು ಸಲ ಅತ್ಯಂತ ಹೆಚ್ಚು ಸುದ್ದಿ ಮಾಡಿದ ಸಿನಿಮಾ ನೋಡುವ ಮನಸ್ಸಾಗುತ್ತದೆ. ಮಾಧ್ಯಮಗಳಲ್ಲಿ ಅದರ ಬಗ್ಗೆ ಕೇಳುವಾಗ ಕುತೂಹಲದಿಂದ ನೋಡುತ್ತಿದ್ದಂತೆ  ಇದು ಎಲ್ಲೋ ನೋಡಿದ್ದೇನಲ್ಲ ಎಂದು ತಲೆಕೆರೆದುಕೊಳ್ಳುವಂತಾಗುತ್ತದೆ. ಮತ್ತೆ ತಿಳಿಯುತ್ತದೇ ಓಹ್ ಇದು ಅದೇ ಸಿನಿಮ, ಮೊದಲು ಯಾವುದೋ ಭಾಷೆಯಲ್ಲಿ ಬಂದ ಸಿನಿಮಾ ರೀ ಮೆಕ್ ಆಗಿ ಪುನಃ ಬಂದಿರುತ್ತದೆ. ಇಷ್ಟಾದರು ಮಾಧ್ಯಮದ ಯಾವುದೇ ಜಾಹಿರಾತಿನಲ್ಲೂ ಮೂಲ ಸಿನಿಮಾದ ಉಲ್ಲೇಖವೇ ಇರುವುದಿಲ್ಲ ! ಕಾನೂನು ಪ್ರಕಾರ ಹಕ್ಕುಗಳನ್ನು ಪಡೇದಿದ್ದರೂ ಸಹ ಅದನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳದೇ ನಮ್ಮದೇ ಬೆನ್ನನ್ನು ನಾವು ತಟ್ಟಿಕೊಳ್ಳುವ ಮನೋಭಾವ ಕಾಣಬಹುದು. 


ಕೆಲವು ವರ್ಷಗಳ ಹಿಂದೆ ಯಕ್ಷಗಾನ ವಲಯದಲ್ಲೂ ಇದೇ ರೀತಿ ಕೃತಿಯ ಹಕ್ಕು ಸ್ವಾಮ್ಯದ ಬಗ್ಗೆ ಒಂದು ವಿವಾದ ಉಂಟಾಗಿತ್ತು. ಆ ವಿವಾದ ಬಗೆಹರಿಯಲ್ಪಟ್ಟರೂ, ಕೃತಿ ಸ್ವಾಮ್ಯದ ಬಗ್ಗೆ ಯಕ್ಷಗಾನದಲ್ಲಿ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಯಾರೋ ಪ್ರಸಂಗ ಬರೆಯುತ್ತಾರೆ. ಅದು ಎಲ್ಲೋ ಆಡಲ್ಪಡುತ್ತದೆ. ಹಲವು ಸಲ ಒಂದು ಪ್ರಸಂಗದ ಕೆಲವು ಪದಗಳನ್ನು ಭಾಗವತರ, ಕಲಾವಿದರ ಮರ್ಜಿಗೆ ಅನುಸಾರವಾಗಿ ಆಯ್ಕೆ ಮಾಡಿ ಹೊಸ ತಳಿಯನ್ನು ಕಸಿ ಮಾಡುವಂತೆ ಪ್ರಸಂಗ ಸೃಷ್ಟಿಯಾಗುತ್ತದೆ. ಇಲ್ಲೆಲ್ಲ ಮೂಲ ಕೃತಿಯವನ ಪರಿಶ್ರಮಕ್ಕೆ ಯಾವ ಮೌಲ್ಯವೂ ಇರುವುದಿಲ್ಲ. ಇನ್ನು ಈಗಿನ ಅಂತರ್ಜಾಲ ಮಾಧ್ಯಮದಲ್ಲಿ ಬೇಕಾಬಿಟ್ಟಿ ಎಂಬಂತೆ ಯಕ್ಷಗಾನ ವೀಡಿಯೋ ಆಡಿಯೋಗಳನ್ನು ಪ್ರಸಾರ ಮಾಡಲಾಗುತ್ತದೆ. ಹಲವು ಹಳೆಯ ಧ್ವನಿಮುದ್ರಣಗಳನ್ನು ಅದರ ನಿರ್ಮಾತೃಗಳ ಶ್ರಮಕ್ಕೆ ಬೆಲೆಯೇ ಇಲ್ಲದಂತೆ ಪ್ರಸಾರ ಮಾಡುತ್ತಾರೆ. ಹಲವಾರು ಹಳೆಯ ಧ್ವನಿ ಸುರುಳಿಗಳನ್ನು ಕಷ್ಟದಿಂದ ಸಂಗ್ರಹಿಸಿ ದುರಸ್ತಿಗೊಳಿಸಿ ಅದನ್ನು ಅದನ್ನು ಪರಿವರ್ತಿಸಿದ ನನಗೆ ಮೊದಲಿಗೆ ಕೃತಿಯ ಹಕ್ಕು ಸ್ವಾಮ್ಯದ ಬಗ್ಗೆ ಅಷ್ಟಾಗಿ ಅರಿವಿರಲಿಲ್ಲ. ನಾನೇ ಖುದ್ದಾಗಿ ಹಂಚಿದ ಧ್ವನಿಮುದ್ರಣಗಳು ಪುನಃ ನನ್ನ ಬಳಿಗೆ ಯಾರದೋ ಹೆಸರಿನಲ್ಲಿ ಬಂದಾಗ ಸಹಜವಾಗಿ ನನಗೆ ನೋವಾಗಿತ್ತು. ಆಗಲೇ ಇದರ ಮೂಲ ನಿರ್ಮಾಣದವರಿಗೆ ಹೇಗಾಗಬೇಡ ಎಂದು ಅರಿವಾಗಿತ್ತು. ಈ ಪ್ರಚಲಿತಲ್ಲಿ ಪ್ರಚಾರದಲ್ಲಿರಲು ಹೆಸರಿನ ಹಿಂದೆ ಹೋಗುವಾಗ ಮೂಲ ಕೃತಿ ಸ್ವಾಮ್ಯಕ್ಕೆ ಯಾರೂ ಗೌರವಿಸುವುದಿಲ್ಲ. ಇಲ್ಲಿ ಕೃತಿಚೌರ್ಯವೇ ಒಂದು ರೀತಿಯಲ್ಲಿ ಸಹಜ ಪ್ರಕ್ರಿಯೆಯಾಗಿದೆ. ಯಕ್ಷಗಾನದಲ್ಲಿ ಪ್ರತಿ ಸನ್ನಿವೇಶಗಳಿಗೂ ಪ್ರಸಂಗ ಕರ್ತ ಪದಗಳನ್ನು ರಚಿಸಿರುತ್ತಾನೆ. ಹಾಗಿದ್ದರೂ ದೇವೆಂದ್ರ ಒಡ್ಡೋಲಗಕ್ಕೆ ಅನಾದಿಕಾಲದಿಂದಲೂ ಅದೇ ಪದ ಬಳಕೆಯಾಗುವುದು ನಿಜಕ್ಕೂ ಪ್ರಸಂಗ ಕರ್ತನ ಶ್ರಮಕ್ಕೆ ನಾಗರೀಕತನದ ಗೌರವ ಒದಗಿಸುವುದರಲ್ಲಿ ಎಡವಿದೆ ಎಂದು ಹೇಳಬಹುದು. 


ಕೃತಿ ಚೌರ್ಯ,  ಇದು ಕಳ್ಳತನ ಎಂದು,  ಕದಿಯುವವನೇ ಮೊದಲು ನಿರ್ಣಯಿಸುತ್ತಾನೆ. ಆತನಿಗೆ ಅದು ತಿಳಿದಿರುತ್ತದೆ.  ಆದರೆ ಪ್ರಾಮಾಣಿಕತೆ ಇದ್ದರೆ ಇದು ಸೌಹಾರ್ದವಾಗಿ ಪರಿಹರಿಸಲ್ಪಡುತ್ತದೆ. ಹೆತ್ತವರು ಮಗುವಿಗೆ  ಜನ್ಮ ಕೊಡುತ್ತಾರೆ, ಆದರೆ ಆನಂತರ ಗುರುವಾದವನ್ನು  ಆ ಮಗುವಿಗೆ ವಿದ್ಯೆ ಕಲಿಸಿ ಒಂದು ಸಂಸ್ಕಾರವನ್ನು ಒದಗಿಸಿ ಅದನ್ನು ಉತ್ತಮವಾಗಿ ರೂಪಿಸುತ್ತಾನೆ.  ಮಗುವಿನ ಕರ್ತ್ರು  ಇಬ್ಬರೂ ಆಗಿರುತ್ತಾರೆ. ಇಲ್ಲಿ ಇದು ನನ್ನ ಮಗು ಅಂತ ಹೆತ್ತವರು ಅಭಿಮಾನ ಪಟ್ಟುಕೊಂಡರೆ ಕಲಿಸಿದ ಗುರು ತನ್ನ ಶಿಷ್ಯ ಎಂದು ಅಭಿಮಾನ ಗಳಿಸುತ್ತಾನೆ.  ಮುಖ್ಯವಾಗಿ ಒಂದು ಮಗು ಹುಟ್ಟಿದ ನಂತರ ಹೇಗೆ ಮತ್ತೆ ರೂಪವನ್ನು ಪಡೆಯುತ್ತದೆ ಎಂಬುದೇ ಮುಖ್ಯವಾಗುತ್ತದೆ. ಮಗು ಎಷ್ಟೇ ಸುಂದರವಾಗಿದ್ದರೂ ಆ ಮಗುವನ್ನು ನಂತರ ಹೇಗೆ ಉಪಯೋಗಿಸಿಕೊಳ್ಳುವುದು ಅತ್ಯಂತ ಮುಖ್ಯವಾಗುತ್ತದೆ.  ಇಲ್ಲಿ ತನ್ನದು ಎಂಬುದು ಸೌಹಾರ್ದಯುತವಾಗಿರುತ್ತದೆ. ಯಾವುದೇ ವಸ್ತುವಾದರು ನಿರ್ಮಿಸಿದ ನಂತರ ಅದು ಹೇಗೆ ಉಪಯೋಗಿಸಲ್ಪಡುತ್ತದೇ ಎಂಬುದೂ ಮುಖ್ಯ.  ಒಬ್ಬನಲ್ಲಿದ್ದ ಮರವನ್ನು ಕದ್ದು ತಂದು ಕೆತ್ತಿ ಸುಂದರ ಶಿಲ್ಪವನಾಗಿಸಿ ದೇವರ ಗುಡಿಯಲ್ಲಿಟ್ಟು ಪೂಜಿಸಿದರೆ, ಆ ಮರದ ಮಾಲೀಕ ಒಂದು ಸಮಾಧಾನ ಪಟ್ಟುಕೊಳ್ಳ ಬಹುದು, ಕದ್ದರೂ ನನ್ನ ವಸ್ತು ಉತ್ತಮ ಕಾರ್ಯಕ್ಕೆ ಬಳಕೆಯಾಯಿತಲ್ಲ? ಯಾರದೋ ತೋಟದ ಹೂವನ್ನು ತಂದು ದೇವರ ಪೂಜೆಗೆ ಬಳಸಿದರೆ  ತೋಟದವನು ಸಂತಸ ಪಡಬಹುದು, ತನ್ನ ತೋಟದ ಹೂವಿನ ಬಗ್ಗೆ ಸದ್ಬಳಕೆಯ ಬಗ್ಗೆ  ಅಭಿಮಾನ ಪಟ್ಟುಕೊಳ್ಳಬಹುದು.  ಅದಕ್ಕೆ ಸೌಹಾರ್ದಯುತ ಮನಸ್ಸು ಬೇಕು. ತಾನು ಹೆತ್ತ ಮಗು ಯಾರದೋ ಆಸರೆ ಉತ್ತಮ ಭವಿಷ್ಯ ರೂಪಿಸಿಕೊಂಡರೆ ಕಿಂಚಿತ್ತಾದರು ಸಂತಸವಾಗುವುದಿಲ್ಲವೇ?  ಈ ನಿಟ್ಟಿನಲ್ಲಿ ನೋಡಿದರೆ ಕಾಂತಾರದಲ್ಲಿ ಮೊದಲು ಸೇರಿಸಿದ ಹಾಡು ಚೌರ್ಯವಾದರು ಅದು ಚೌರ್ಯವಾಗುವುದಿಲ್ಲ. ಯಾಕೆಂದರೆ ಆ ಹಾಡಿಗೆ ಆ ಸಂಗೀತಕ್ಕೆ ಅದ್ಭುತವಾದ ಗೌರವವನ್ನು ಅಲ್ಲಿ ಒದಗಿಸಲಾಗಿದೆ. ಸೌಹಾರ್ದಯುತವಾಗಿ ಕಾಣುವುದಿದ್ದರೆ ಅದರ ಕೃತಿಯನ್ನು ರಚಿಸಿದವನೂ ಸಂತೋಷ ಪಟ್ಟುಕೊಳ್ಳಬಹುದಿತ್ತು. ತನ್ನ ಹಾಡು ಯಾವುದೋ ಕ್ಯಾಬರೆಗೆ ಬಳಕೆಯಾಗಿಲ್ಲವಲ್ಲಾ ಎಂದು. ಎಷ್ಟೇ ಉತ್ತಮ ಕೆಲಸವಾದರು ಕೃತಿ ಚೌರ್ಯ ಅದು ಕಳ್ಳನವೇ....ಅದಕ್ಕೆ ಬೇರೆ ಹೆಸರು ಇಲ್ಲ. ಆದರೂ ಒಂದು ಸೌಹಾರ್ದತೆಯ ಸದ್ಭಾವನೆ ಇದ್ದರೆ....ಕೊನೇ ಪಕ್ಷ ಈ ಸಂಗೀತಗಾರ ಮೂಲ ಸಂಗೀತದವನಿಗೆ ಒಂದಕ್ಷರದ ಸ್ಮರಣೆಯನ್ನಾದರೂ ಸೌಹಾರ್ದದಿಂದ ಪ್ರಾಮಾಣಿಕತೆಯಿಂದ ಸಲ್ಲಿಸಿದ್ದರೆ.....ಇಂದಿನ ಕಾಂತಾರ ಮಿಶ್ರತಳಿಯಾಗಿ ಹೊಸ ಅಲಂಕಾರ ಪಡೆಯುವ ಸ್ಥಿತಿಗೆ ಬರುತ್ತಿರಲಿಲ್ಲ. ಕೃತಿ ಚೌರ್ಯ ಎಂಬ ಭೂತ ಕಾಂತಾರದಲ್ಲೂ  ಬಾಧೆಯಾಗಿ ಕಾಡುತ್ತದೆ.  ಕಲಾವಿದ ಕಲಾವಿದನನ್ನುಮೊದಲು ಗೌರವಿಸಬೇಕು. ಆದರೂ ಒಂದು,  ಮುಂದಿನ ಶುಭ ನಿರೀಕ್ಷೆಯಲ್ಲಿ ನಾವಿರಬೇಕು.  ಕಾಂತಾರ ಮೂಲ ಹಾಡಿನೊಂದಿಗೆ ಪುನಃ ಬರಲಿ ಮತ್ತು ಅದೇ ರೀತಿ ಯಾವುದೇ ವೈಕಲ್ಯ ವಿಲ್ಲದೆ ನಮ್ಮ ನಡುವೆ ಇರಲಿ ಎಂಬ ಆಶಯ. 


No comments:

Post a Comment