Friday, December 9, 2022

ಬ್ರಾಹ್ಮಣೋ ಸ್ಯಮುಖ ಮಾಸೀತ್

ಇತ್ತೀಚೆಗೆ ಒಂದು ಸಲ ಶಿವಮೊಗ್ಗದಿಂದ ಬೆಂಗಳೂರಿಗೆ ರೈಲಿನಲ್ಲಿ ಪಯಣಿಸುವಾಗ ಭದ್ರಾವತಿಯಿಂದ  ಒಬ್ಬರು ವ್ಯಕ್ತಿ ಬಂದು ಪಕ್ಕದಲ್ಲೇ ಕುಳಿತರು. ಬಹಳ ಸಾಧು ಮನುಷ್ಯ. ಅದು ಇದು ಲೋಕಾಭಿರಾಮ ಮಾತನಾಡುತ್ತ ನನ್ನಲ್ಲಿ ಕೇಳಿದರು ನೀವು ಮಂಗಳೂರಿನವರಾ?   ಬ್ರಾಹ್ಮಣರ? ಕಾರಣ  ನಾನು ಪಂಚೆ ಉಟ್ಟುಕೊಂಡಿದ್ದೆ. ಎಂದಿನಂತೆ ಮುಖದಲ್ಲಿ ಗಂಧದ ತಿಲಕ ಇತ್ತು. ಬಹುಶಃ ಇದನ್ನು ನೋಡಿ ಸ್ವತಃ ಬ್ರಾಹ್ಮಣರಾಗಿದ್ದ ಅವರು ಪ್ರಶ್ನೆ ಕೇಳಿದ್ದರಲ್ಲಿ ಅಚ್ಚರಿ ಏನೂ ಇರಲಿಲ್ಲ. ನಾನು ಸಹಜವಾಗಿ ಹೌದು ಎಂದು ಉತ್ತರಿಸಿದೆ. ಜಾತಿಯ ಬಗ್ಗೆ ಹೇಳಿಕೊಳ್ಳುವುದು ಮತ್ತು ತೋರಿಸಿಕೊಳ್ಳುವುದು  ಹಲವು ಸಲ ಇದು ಮುಜುಗರ ಉಂಟುಮಾಡುವ ವಿಷಯವಾಗುತ್ತದೆ. ಬಾಲ್ಯದಿಂದಲೂ ಈ ಸಂಕೋಚ ಅಂಟಿಕೊಂಡಿತ್ತು. ಸಾರ್ವಜನಿಕವಾಗಿ ಒಂದು ವಿಧದ ಹಾಸ್ಯ ವಿಡಂಬನೆಯ ವಿಷಯವಾಗಿ  ಜಾತಿಯ ಪ್ರಶ್ನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿತ್ತು. ಎಷ್ಟೋ ಸಲ ಜಪ ಮಾಡಿದಾಗ ಹಾಕುವ ಭಸ್ಮವನ್ನೂ ಉಜ್ಜಿಕೊಂಡು ಹೊರಗೆ ಹೋಗುತ್ತಿದ್ದ ನೆನಪು ಈಗಲೂ ಇದೆ. ಗೇಲಿ ಮಾಡುತ್ತಿದ್ದವರೇ ದಪ್ಪ ನಾಮ ಎಳೆದು ಕಪ್ಪು ವಸ್ತ್ರ ಧರಿಸಿ ಅಯ್ಯಪ್ಪ ಸ್ವಾಮಿಗಳಾಗಿ ಅವತರಿಸಿದಾಗ ವಿಚಿತ್ರ ಎನಿಸುತ್ತಿತ್ತು. ಅದೇನಿದ್ದರೂ ಅವರವರ ನಂಬಿಕೆ ಎಂದು ಅರಿವಾದ ಮೇಲೆ ಇದು ಸ್ವಾಭಿಮಾನದ ಸಂಕೇತವಾಗಿ ಬದಲಾದೆ. ಬೆಳಗ್ಗೆ ಹಾಕಿದ ತಿಲಕ ಸಾಯಂಕಾಲ ಪುನಃ ಸ್ನಾನ ಮಾಡುವ ತನಕವೂ ಇರುತ್ತಿತ್ತು.  ಈ ವಿಚಾರಗಳ ವಸ್ತುನಿಷ್ಠತೆ ಯಾವಾಗಲೂ ಕಠಿಣವಾಗಿರುತ್ತದೆ. ಬ್ರಾಹ್ಮಣ ಎಂದರೆ ದೇವಸ್ಥಾನಗಳಿಗೆ ಇನ್ನಿತರ ಸ್ಥಳಗಳಿಗೆ ಹೋಗದೇ ಇದ್ದಲ್ಲಿಗೇ ದೈವಾನುಗ್ರಹವನ್ನು ಪ್ರಸನ್ನೀಕರಿಸುವ ಶಕ್ತಿ. ಅದು ಜಾತಿಯಲ್ಲ. ಅದು ಪ್ರಕೃತಿಯೊಂದಿಗೆ ಒಂದಾಗಿ ಬದುಕುವ ಪ್ರಕೃತಿ ಧರ್ಮ. ಅದನ್ನು ಜಾತಿಯಾಗಿ ಕಂಡು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವಾಗ ಅನ್ನಿಸುತ್ತದೆ, ಹಾಲಿಗೆ ಜೇನು ಮತ್ತೀತರ ಸುವಸ್ತುಗಳನ್ನು ಹಾಕಿ ಅದನ್ನು ಅಮೃತ ತುಲ್ಯವಾಗಿ ಸೇವಿಸುತ್ತಾರೆ. ಅದಕ್ಕೆ ಕಾಫಿ ಎಂಬ ವಿಷವನ್ನು ಸೇರಿಸಿ ವಿಷವಾಗಿಸಿಯೂ ಸೇವಿಸುತ್ತಾರೆ. ಇಲ್ಲಿ ಹಾಲು ಎಂದಿಗೂ ಕೆಟ್ಟದಾಗುವುದಿಲ್ಲ. ಅದನ್ನು ಉಪಯೋಗಿಸುವ ಮನೋಭಾವವೇ ಕೆಟ್ಟದಾಗಿ ಅದು ಒಟ್ಟು ಪಾನೀಯದ ಮೇಲೆಯೇ ಅರೋಪಿಸಲಾಗುತ್ತದೆ. ಹಾಗೆಯೇ ಬ್ರಾಹ್ಮಣ್ಯ ಅದು ಎಂದಿಗೂ ಕೆಟ್ಟದಾಗುವುದಿಲ್ಲ, ಅದನ್ನು ಉಪಯೋಗಿಸುವ ಬಗೆಯಲ್ಲಿ ಅದು ಕೆಟ್ಟದಾಗುತ್ತದೆ. ಮನೋಭಾವ ವಿಕೃತವಾಗುವಾಗ ಉಪಯೋಗಿಸುವ ರೀತಿಯೂ ವಿಕೃತಿಯಾಗುತ್ತದೆ.  ಹಾಗೆ ನೋಡಿದರೆ ಪ್ರತಿಯೊಂದು ಧರ್ಮಗಳೂ ಹಾಗೆ. ನಮ್ಮ ಮನಸ್ಸು ಕೆಟ್ಟದಾದಂತೆ ಪ್ರಕೃತಿಯೂ ವಿಕೋಪವಾಗಿ ಪರಿಣಮಿಸುತ್ತದೆ. 

    ಇಲ್ಲಿ ಆ ವ್ಯಕ್ತಿ  ಬ್ರಾಹ್ಮಣರ ಹಲವಾರು ಸಮಸ್ಯೆಗಳು ಪ್ರಕೃತ ಘಟನೆಗಳು ಇದರ ಬಗ್ಗೆ ತುಸು ಹೆಚ್ಚು ಎನ್ನುವಂತೆ ವಿಷಯ ಹಂಚಿಕೊಂಡರು. ಅವರು ಹೇಳಿದ ಹಲವಾರು ವಿಚಾರಗಳಲ್ಲಿ ಒಂದು ವಿಚಾರಕ್ಕೆ ನಾನು ಸ್ವಲ್ಪ ನಿಷ್ಠೂರವಾಗಿ ಪ್ರತಿಕ್ರಿಯೆ ಕೊಡಬೇಕಾಯಿತು. ಪ್ರಸ್ತುತ ಬ್ರಾಹ್ಮಣರ ಸಮಸ್ಯೆಗಳಲ್ಲಿ ಒಂದು ವೈದಿಕ ಕಾರ್ಯಗಳಿಗೆ ಅಂದರೆ ಅಪರ ಕ್ರಿಯೆ ಸಂಸ್ಕಾರಗಳಿಗೆ ಬ್ರಾಹ್ಮಣರೇ ಸಿಗುತ್ತಿಲ್ಲ. ಅದರ ಬದಲಿಗೆ ಚಟ್ಟಕ ( ಎಳನೀರು ವಸ್ತ್ರ ಇತ್ಯಾದಿ ಬ್ರಾಹ್ಮಣರ ಸ್ಥಾನದಲ್ಲಿಡುವುದು) ಇಟ್ಟು ಸುಧಾರಿಸಿಕೊಳ್ಳುವ ಅನಿವಾರ್ಯತೆ ಇದೆ.  ನಾನು ಹೇಳಿದೆ, " ಒಂದು ವೇಳೆ ಯಾರಾದರೊಬ್ಬ ಬಡ ಬ್ರಾಹ್ಮಣ (ಬಡವನೇ ಬರಬೇಕು) ಆ ಕಾರ್ಯಕ್ಕೆ   ಬಂದರೂ ಅವರಿಗೆ ಎಷ್ಟು ಗೌರವ ಸಿಗುತ್ತದೆ?"  ಆ ವ್ಯಕ್ತಿ ಒಂದು ಕಿರುನಗುವನ್ನು ಬೀರಿದರೂ ನನ್ನ ಮಾತಿಗೆ ಅವರದ್ದು ಪೂರ್ಣ ಸಹಮತವಿರಲಿಲ್ಲ.  ಅವರು ಎಂದಲ್ಲ ಹಲವರು ಇದನ್ನು ಒಪ್ಪಿಕೊಳ್ಳುವುದಿಲ್ಲ.  ನಮಗೆ ತೀರ ಅವಶ್ಯವಿರುವುದನ್ನು ಮತ್ತೆ ನಿಕೃಷ್ಟವಾಗಿ ಕಾಣುವ ಪ್ರಕ್ರಿಯೆ ಸದಾ ಇದ್ದೇ ಇರುತ್ತದೆ. 

ಕಾಲ ಬಹಳ ಬದಲಾಗಿದೆ. ಅವರು ಹೇಳಿದ ಸಮಸ್ಯೆ ಬಹಳ ಗಂಭೀರವಾದದ್ದು. ನನಗೆ ಈ ಸಮಸ್ಯೆಯ ಅರಿವಿದೆ. ಇದರ ಗುಣಾವಗುಣಗಳು ಏನೇ ಇದ್ದರು ಕಾಲ ಈಗ ಬದಲಾಗಿದೆ. ದೇವರನ್ನು ತೆಂಗಿನಕಾಯಿ ಇಟ್ಟು ಆವಾಹನೆ ಮಾಡಿದಂತೆ ಬ್ರಾಹ್ಮಣ ತನ್ನ ಸ್ಥಾನಕ್ಕೂ ಜಡವಸ್ತುವಿನ ಮೊರೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆ ವ್ಯಕ್ತಿಗೆ ಪ್ರತಿಕ್ರಿಯೆಯಾಗಿ ನಾನು ಹೇಳಿದೆ, ಬ್ರಾಹ್ಮಣರು ಪುರೋಹಿತರು ಸಿಗುವುದಿಲ್ಲ ಸತ್ಯ. ಆದರೆ ಈ ಸಮಸ್ಯೆ ಸೃಷ್ಟಿಯಾಗುವುದಕ್ಕೆ,   ಆ ವೃತ್ತಿನಿರತ ಬ್ರಾಹ್ಮಣರ ಕೊರತೆಯೇ ಬಹಳ ಮುಖ್ಯ ಕಾರಣ. ಈ ನಡುವೆ ಮನುಷ್ಯ ಸ್ವಭಾವ ಬದಲಾಗಿರುವುದೂ ಒಂದು ಕಾರಣ. ಒಂದು ವೇಳೆ ಯಾರಾದರೊಬ್ಬ ಬ್ರಾಹ್ಮಣ ಸಾಮಾನ್ಯವಾಗಿ ಆ ಸ್ಥಾನಕ್ಕೆ ಬಡ ಬ್ರಾಹ್ಮಣನೇ ಬರುವುದು, ಆ ಬ್ರಾಹ್ಮಣನಿಗೆ ಗೌರವ ಸಲ್ಲುವುದು ಅಲ್ಲಿ ಕುಳಿತಾಗ ಮಾತ್ರ. ಉಳಿದಂತೆ ಅವರಿಗೆ ಎಲ್ಲೂ ಮನ್ನಣೆ ಸಿಗುವುದಿಲ್ಲ. ಹಲವು ಕಡೆ ಸಹಪಂಕ್ತಿ ಕೂಡ ಸಿಗದೇ ಇರುವುದನ್ನು ಕಣ್ಣಾರೆ ಕಂಡಿದ್ದೇನೆ. ಆತ ತಿನ್ನುವ ಒಂದೊಂದು ತುತ್ತಿಗೂ ಆತನ ಬಡನವನ್ನು ಸಾಕ್ಷಿಯಾಗಿಸಿ ಕಾಣುವುದನ್ನು ಕಂಡಿದ್ದೇನೆ.   ಬಡತನದಿಂದ ಇದು ವರೆಗೆ ಎಲ್ಲವು ನುಂಗಿಕೊಂಡು ಇದ್ದವರು  ಈಗ ಸ್ವಾಭಿಮಾನದಿಂದ ಬದುಕುವ ದಾರಿ ಕಂಡುಕೊಂಡಿದ್ದಾರೆ.  ಈ ಪರಿಸ್ಥಿತಿಗೆ ಯಾರೆಲ್ಲ ಕಾರಣರಾಗುತ್ತಾರೆ? ವಿಶ್ಲೇಷಣೆ ಮಾಡಿದಂತೆ ಹಲವಾರು ಕಾರಣ ಸಿಗುತ್ತದೆ.  ಕಾರಣಗಳನ್ನು ಪರಿಹಾರಗಳನ್ನು ಹೇಳುವುದಕ್ಕೆ ಹೋಗುವುದಿಲ್ಲ. ಆದರೆ ತುಳಿತ ಎಂಬುದು ಕೇವಲ ಒಂದು ವರ್ಗಕ್ಕೆ ಅಥವಾ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ ಎಂಬುದು ಸತ್ಯ.  ಮನೆಯಲ್ಲಿ ವೈದಿಕ ಶ್ರಾದ್ಧ ಅಪರಕ್ರಿಯೆಗಳು  ಇದ್ದರೆ ಇವರು ಹಿಂದಿನ ಬಾಗಿಲಿನಿಂದ ಬಂದು,  ಹೆಚ್ಚಾಗಿ ಉತ್ತರ ಕ್ರಿಯೆಗಳು ಮರೆಯಲ್ಲೇ ಕತ್ತಲ ಕೋಣೆಯಲ್ಲೇ ನಡೆಯುವುದರಿಂದ ಅಲ್ಲಿ ಕುಟುಂಬಸ್ಥರು ಪುರೋಹಿತರಲ್ಲದೆ ಬೇರೆ ಯಾರೂ ಹೋಗುವುದಿಲ್ಲ. ಕ್ರಿಯೆ ಮುಗಿದು ಬಂದ ವಿಪ್ರರು ಹಿಂದಿನ ಬಾಗಿಲಿನಿಂದಲೇ ಹೋಗಿ ಮರೆಯಾಗಿಬಿಡುತ್ತಾರೆ. ಅರ್ಥಾತ್ ಹೊರಗೆ ಬಂದು ಯಾರಿಗೂ ಮುಖವನ್ನೂ ತೋರಿಸುವುದಿಲ್ಲ.  ಇದನ್ನು ಹಲವು ಸಲ ಕಣ್ಣಾರೆ ಕಂಡವನು ನಾನು. ಆದರೆ ಈಗ ಸ್ಥಿತಿ ಬದಲಾಗಿದೆ. ಈಗ ಹೊಸ ತಲೆಮಾರಿನವರು ಹೆಚ್ಚು ಸ್ವಾಭಿಮಾನಿಗಳಾಗಿ ವೃತ್ತಿಯನ್ನೆ ಬದಲಿಸಿಕೊಂಡಿದ್ದಾರೆ.  ಆದರೆ ಇಂದು ಮನೋಭಾವ ಹೇಗಾಗಿದೆ ಎಂದರೆ ಬಡ ಬ್ರಾಹ್ಮಣ ಸ್ವಾಭಿಮಾನವನ್ನು ಹೊಂದಿವುರುವುದೇ ಅಪರಾಧ ಎಂಬಂತೆ ಭಾಸವಾಗುತದೆ. 

ಪ್ರತಿಯೊಂದು ವರ್ಗ ಪಂಗಡಗಳಿಗೂ ಈಗ ಸಂಘಟನೆಗಳಿವೆ. ಸಮಾಜ ಸಂಘಟನೆಗಳು ನೋಂದಾಯಿಸಿಕೊಂಡು ಕಾರ್ಯ ಪ್ರವೃತ್ತವಾಗಿದೆ. ಹಲವು ಸಂಘಟನೆಗಳು ಆರ್ಥಿಕವಾಗಿಯೂ ಸುದೃಢವಾಗಿದೆ. ಇವುಗಳ ಧ್ಯೇಯೋದ್ದೇಶ ಉತ್ತಮವಾಗಿದ್ದರೂ ಇಂತ ಸಂಕೀರ್ಣ ಸಮಸ್ಯೆಗಳತ್ತ ಯಾವ ಸಮಾಜ ಸಂಘಗಳೂ ಗಮನ ಹರಿಸುತ್ತಿಲ್ಲ ಎಂಬುದು ಸತ್ಯ. ವಾರ್ಷಿಕವಾಗಿ ಏನೋ ಒಂದು ಧಾರ್ಮಿಕ ಕಾರ್ಯಕ್ರಮ ಮಾಡಿ ವಿಜ್ರಂಭಣೆಯಿಂದ ಭೋಜನ ಸಂತರ್ಪಣೆ ಮಾಡಿ ಯಾಗ  ಯಜ್ಞಕ್ಕೇ ಕಾರ್ಯಕ್ಶೇತ್ರ ಸೀಮಿತವಾಗಿಬಿಡುತ್ತದೆ. ಹೆಚ್ಚೆಂದರೆ, ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅನುದಾನವೊ, ಬಡವರಿಗೆ ಒಂದಷ್ಟು ಧನಸಹಾಯವೋ, ವೈದ್ಯಕೀಯ ಸಹಾಯವೋ  ಹೀಗೆ ಚಟುವಟಿಕೆ ಇರುತ್ತದೆ. ಇಂತಹ ಸಾಮಾನ್ಯ ಕಾರ್ಯಗಳನ್ನು ಮಾಡುವುದಕ್ಕೆ ಹಲವಾರು ಸಂಘಟನೆಗಳಿವೆ. ಆದರೆ ಬ್ರಾಹ್ಮಣ ಸಂಸ್ಕಾರಗಳು ನೆಲೆನಿಲ್ಲುವ ಇಂತಹ ಸಂಕೀರ್ಣ ಸಮಸ್ಯೆಗಳಿಗೆ ಎಲ್ಲಾ ಸಂಘಟನೆಗಳು ದಿವ್ಯ ನಿರ್ಲಕ್ಷವನ್ನು ತಳೆದಿವೆ ಎಂದರೆ ತಪ್ಪಾಗಲಾರದು. ಸಮಾಜ ಸಂಸ್ಕಾರ ಪರಂಪರೆಯಿಂದ ಬಹಳ ದೂರ ಸಾಗುತ್ತಾ ಇದೆ. ವೃತ್ತಿ ಪರವಾದ ಜೀವನ ಶೈಲಿ ಇದಕ್ಕೆ ಕಾರಣವಾದರೂ, ಕೆಲವೆಲ್ಲ ಶಾಸ್ತ್ರಕ್ಕೆ ಸಾಕು ಎಂಬಂತೆ ಕಾಟಾಚಾರಕ್ಕೆ ಸೀಮಿತವಾಗಿಬಿಡುತ್ತದೆ. ಸಂಧ್ಯಾವಂದನೆಯಲ್ಲಿ ನೂರ ಎಂಟು ಗಾಯತ್ರಿಮಂತ್ರ ಜಪ ಮಾಡಬೇಕು ಎಂದಿದ್ದರೆ, ಕೊನೆ ಪಕ್ಷ ಹತ್ತಾದರೂ ಮಾಡಿ ಅನುಷ್ಠಾನದಲ್ಲಿರಬೇಕು. ಆದರೆ ಸಮಯವಿಲ್ಲ ಎಂಬ ನೆವನದಿಂದ ಹತ್ತಕ್ಕಿಂತ ಒಂದು ಮೀರದಂತೆ ಕಾಟಾಚಾರಕ್ಕೆ ಗಡಿಬಿಡಿಯ ಜಪ ಮಾಡುವವರೂ ಇಲ್ಲದಿಲ್ಲ. ಪ್ರತಿಯೊಂದು ಸತ್ಕಾರ್ಯದಲ್ಲೂ ನಮ್ಮದೊಂದು ಸಿದ್ಧ ಮಂತ್ರವಿದೆ ಅಷ್ಟಾದರು ಮಾಡುತ್ತಾರಲ್ಲಾ? ತೀರ ಅನಿವಾರ್ಯ ಎನ್ನುವಂತಹ ಕ್ರಿಯೆಗಳು ಅಷ್ಟಾದರೂ ಮಾಡುವ ಹೊಂದಾಣಿಕೆಗೆ ಸೀಮಿತವಾಗುವುದು ನಮ್ಮ ಸಂಸ್ಕಾರದಲ್ಲಿನ ಅಗೌರವವನ್ನೇ ತೋರಿಸುತ್ತದೆ. ಹಲವು ಸಲ ಗಡಿಬಿಡಿಯಲ್ಲಿ ಜಪ ಮುಗಿಸಿ ವೃಥಾ ಪಟ್ಟಾಂಗ ಹೊಡೆಯುವುದಕ್ಕೋ ಇನ್ನೋಂದು ಕಾಲಹರಣಕ್ಕೋ ಸಮಯವನ್ನು ಒದಗಿಸುತ್ತದೆ.  ಭಗವಂತನಿಗೆ ನಾವು ಲೆಕ್ಕಾಚಾರ ತೋರಿಸುವಾಗ ಪ್ರತಿ ಭಗವಂತನು ಅದೇ ಲೆಕ್ಕಾಚಾರದಲ್ಲಿರುತ್ತಾನೆ. ಅಲ್ಲಿ ಒದಗಿ ಬರುವ ಕಾಟಾಚಾರ ನಮ್ಮಲ್ಲಿನ ಅತೃಪ್ತಿಯನ್ನು ನಮಗರಿವಿಲ್ಲದೇ ಹೆಚ್ಚಿಸುತ್ತದೆ.   ಜಾತಿ ಧರ್ಮಗಳು ಉಳಿಯುವುದು ಅದರಲ್ಲೂ ಬ್ರಾಹ್ಮಣ ಧರ್ಮ ಉಳಿಯುವುದು ಧಾರ್ಮಿಕ ಆಚರಣೆಗಳಿಂದ. ಧಾರ್ಮಿಕ ನಂಬಿಕೆಗಳಿಂದ. ಆದರೆ ಅದನ್ನು ಆಚರಿಸುವುದಕ್ಕೆ ಒಂದು ಸೂಕ್ತ ವಾತಾವರಣ ಕಲ್ಪಿಸುವುದರಲ್ಲಿ ಇಂದಿನ ಸಮಾಜ ಸಂಘಟನೆಗಳು ಔದಾಸಿನ್ಯವನ್ನು ತೋರಿಸುತ್ತವೆ,  ಇಲ್ಲ ಇದು ಒಂದು ಆದ್ಯತೆಯ ವಿಷಯವಾಗಿ ಗಮನಾರ್ಹವೆನಿಸಿಲ್ಲ. 

ಬ್ರಾಹ್ಮಣರು ಸಮಾಜದ ಮುಖಗಳು ಅಂತ ಹಿಂದಿನ ರಾಜರು ತಿಳಿದುಕೊಂಡಿದ್ದರಂತೆ.  ಇಂದು ರಾಜರಾಗಲೀ ಅಧಿಕಾರಿವರ್ಗವಾಗಲೀ ತಿಳಿದುಕೊಳ್ಳಬೇಕೆಂದು ಬಯಸುವ ಬದಲು ನಮ್ಮ ಮುಖವನ್ನು ನಾವು ಸ್ವಚ್ಛವಾಗಿಸಬೇಕು. ಹಾಗಂತ ಮಲಿನವಾಗಿದೆ ಎಂದಲ್ಲ. ಬ್ರಾಹ್ಮಣ್ಯ ಎಂಬುದು ಪರಿಶುದ್ದತೆಯ ಸಂಕೇತ. ಅಲ್ಲಿ ದೇಹ ಮನಸ್ಸು ಜೀವನ ಎಲ್ಲವೂ ಪರಿಶುದ್ದತೆಯತ್ತ ಸಾಗುವಂತಿರಬೇಕು. ತುಂಬ ಕಲ್ಮಷವಿದ್ದಲ್ಲಿ ಪರಿಶುದ್ದತೆಯು ಅಪವಾದವಾಗುವುದು ಸಹಜ. ಅಲ್ಲಿಗೆ ಅದು ಹೊಂದಿಕೊಳ್ಳುವುದಿಲ್ಲ. ಹಾಗೆಂದು ಅದನ್ನು ತೊರೆದು ಮಾಲಿನ್ಯವನ್ನು ಮೈಮೇಲೆ ಆವಾಹಿಸಿಕೊಳ್ಳುವುದಲ್ಲ. 

        ಕೆಲವು ವರ್ಷಗಳ ಹಿಂದೆ ತೆರಿಗೆ ಕಛೇರಿಗೆ ವೃತ್ತಿಯ ಕಾರಣದಿಂದ ಹೋಗಬೇಕಾಯಿತು.  ನಮ್ಮ ವರ್ತಕರೊಬ್ಬರಿಗೆ ಯಾವುದೋ ವಸ್ತುವಿಗೆ ತೆರಿಗ ಹಾಕಿ ಅದರ ಜತೆಗೆ ದಂಡವನ್ನು ಸೇರಿಸಿ ನೋಟೀಸು ನೀಡಿದ್ದರು. ವಾಸ್ತವದಲ್ಲಿ ಆ ವಸ್ತುವಿಗೆ ತೆರಿಗೆ ವಿನಾಯಿತು ಇರುವುದು ಎಲ್ಲೋ ಉಲ್ಲೇಖವಾಗಿರುವುದು ನಮ್ಮ ಗಮನಕ್ಕೆ ಬಂತು. ಹಾಗಾಗಿ ನೋಟಿಸಿನೊಂದಿಗೆ ನಾನು ಸಂಬಂಧಿಸಿದ ಕಛೇರಿಗೆ ಹೋಗಿದ್ದೆ.  ಅಲ್ಲಿ ಸಂಬಂಧಿಸಿದ ಅಧಿಕಾರಿಯ ಕೋಣೆಗೆ ಹೋಗಿ ಎಲ್ಲ ವಿವರಿಸಿದೆ ಸದರಿ ವಸ್ತುವಿಗೆ ತೆರಿಗೆ ವಿನಾಯಿತಿ ಇದೆ ಎಂದು ಹೇಳಿದೆ. ಆ ಅಧಿಕಾರಿ ಸ್ವಲ್ಪ ಪರಿಚಿತರು. ಹಲವಾರು ಸಂದರ್ಭಗಳಲ್ಲಿ ಅವರನ್ನು ಭೇಟಿಯಾಗಿದ್ದೆ.  ಕೆಲವು ಸಲ ಎಂತ ಭಟ್ರೆ ಅಂತ ಮಂಗಳೂರು ಭಾಷೆಯಲ್ಲಿ ಮಾತನಾಡುತ್ತಿದ್ದರು. ಆದಿನ ಮಾತ್ರ ಅವರು ಮೊದಲಿಗೆ ಒಪ್ಪಿಕೊಳ್ಳಲಿಲ್ಲ. ಹಾಗೆ ಹೀಗೆ ಎಂದು ಆಕ್ಷೇಪಿಸುತ್ತಾ ಹೋದರು. ಅದು ಅವರ ಕರ್ತವ್ಯ. ಸರಕಾರದ ಆದಾಯದ ದುಡ್ಡು ಯಾರೂ ವಂಚಿಸುವ ಹಾಗಿಲ್ಲ. ನಾನು ಮತ್ತೂ ವಿನಂತಿಸಿಕೊಂಡು ಮಾರಾಟ ತೆರಿಗೆಯ ನಿಯಮ ಪುಸ್ತಕದ ಯಾವುದೋ ಪುಟದಲ್ಲಿ ಉಲ್ಲೇಖಿಸಿದ ವಿನಾಯಿತಿಯನ್ನು  ತೋರಿಸಿದೆ. ಅವರಿಗೆ ಸ್ವಲ್ಪ ಸಂದೇಹ ಬಂತು. ಕೊನೆಗೆ ಕೆಲವರಿಗೆ ಕರೆ ಮಾಡಿ ಆ ನಿಯಮದ ಬಗ್ಗೆ ವಿಚಾರಿಸಿದರು. ಕೊನೆಗೆ ನನ್ನ ವಿನಂತಿಗೆ ಒಪ್ಪಿಕೊಳ್ಳದೆ ವಿಧಿ ಇಲ್ಲದಾಯಿತು. ಹಾಗೆ ಸಮಸ್ಯೆ ಪರಿಹರಿಸಿ ಅವರ ಕೋಣೆಯಿಂದ ಹೊರಬರಬೇಕಾದರೆ, ಅಲ್ಲೆ ಇದ್ದ ಸಹಾಯಕರಿಗೆ ಏನೋ ಗೊಣಗಿ ಹೇಳುವುದು ಕಿವಿಗೆ ಬಿತ್ತು." ಪುಳಿಚಾರ್ ಭಟ್ರು ಏನೋ ಓದಿಕೊಂಡು ಬಂದಿದ್ದಾರೆ....."( ಇದೇ ಅರ್ಥ ಬರುವ ಯಾವುದೋ ಶಬ್ದಗಳು ಅದು ನೆನಪಿಲ್ಲ)   ಅದು ಬಹಳ ಕ್ಷೀಣವಾದ ಧ್ವನಿಯಲ್ಲಿ ಹೇಳಿದ್ದರು.  ಒಂದು ಸಲ ತಿರುಗಿ ನೋಡಿದ್ದೆ. ಅವರಲ್ಲಿ ಆ ಬಗ್ಗೆ ಮಾತನಾಡುವುದು ವ್ಯರ್ಥ ಎನಿಸಿತ್ತು. ನನ್ನ ಬ್ರಾಹ್ಮಣ್ಯದ ಬಗ್ಗೆ ಅವರಿಗೆ ಸಮರ್ಥನೆ ಕೊಡುವ ಅವಶ್ಯಕತೆ ನನಗಿಲ್ಲ.  ಒಂದು ನಿಯಮ ಪುಸ್ತಕವನ್ನು ಓದುವುದು ಬ್ರಾಹ್ಮಣರು ಮಾತ್ರವಾ ಎಂಬ ಸಂದೇಹ ನನಗೆ ಬಂದು ಬಿಟ್ಟಿತು. ಎಲ್ಲರೂ ತಮಗೆ ಬೇಕಾಗಿರುವುದನ್ನು ಚರ್ಚಿಸುವುದು ಹಕ್ಕು. ಆದರೆ ಬ್ರಾಹ್ಮಣ ಚರ್ಚಿಸಿದರೆ ಅದು ನಿಂದನೆಯಾಗುತ್ತದೆ. ಒಬ್ಬ ಓದಿದ್ದಾನೆ ಎಂದರೆ ಅದು ಆತನ ದೃಷ್ಟಿಯಲ್ಲಿ ಬ್ರಾಹ್ಮಣನೇ ಆಗಿರುತ್ತಾನೆ. ಆತ ಹೇಳಿದ್ದು ನಿಂದನೆಯಾಗಲಿ, ಅಥವಾ ವ್ಯಂಗ್ಯವಾಲಿ ಅದಕ್ಕೆ ಆತನಿಗೆ ಧನ್ಯವಾದ ಹೇಳಬೇಕು ಎನಿಸಿತ್ತು. ಸಮಾಜದಲ್ಲಿ ಬ್ರಾಹ್ಮಣ ಎಂದರೆ ವಿದ್ಯಾವಂತ ಎಂಬ ಭಾವನೆ ದಟ್ಟವಾಗಿದೆ. ಸುಸಂಸ್ಕೃತ ಸಂಸ್ಕಾರ  ಎಂಬುದು ಸಮಾಜ ಎಂದೋ ಅಂಗೀಕರಿದೆ. ಇದು ವ್ಯಕ್ತವಾಗಿಯೋ ಅವ್ಯಕ್ತವಾಗಿಯೋ ಕೆಲವೊಮ್ಮೆ ಎದುರು ಬಂದು ಬಿಡುತ್ತದೆ. ಹೀಗಿರುವಾಗ ಬ್ರಾಹ್ಮಣ ಸ್ಥಾನ ಎಂಬುದು ಬಹಳ ಜವಾಬ್ದಾರಿಯುತ ಸ್ಥಾನ. ಅದು ಕೇವಲ ಪರಿಶುದ್ದಿಯ ಸಂಕೇತ ಮಾತ್ರವಲ್ಲ ಅರಿವಿನ ಜ್ಞಾನದ ಸಂಕೇತವೂ ಹೌದು. 



No comments:

Post a Comment