Sunday, December 25, 2022

ಉಜ್ಜಾಯಿ ಪ್ರಾಣಾಯಾಮ

         ದಿನವೂ ಸುರಿವ ಬೆವರಿನ ನಾಡು ನಮ್ಮೂರು. ಸುಮ್ಮನೇ ಕುಳಿತರೂ ಸುರಿವ ಬೆವರು ಒರೆಸಿಕೊಳ್ಳುವುದಕ್ಕೇ ಒಂದು ಅಂಗವಸ್ತ್ರ ಸದಾ ಕೈಯಲ್ಲಿರಬೇಕು. ಸದಾ ಉರಿವ ಬಿಸಿಲು ಮಳೆಗಾಲದಲ್ಲೂ ನಮ್ಮೂರು ಬೆವರ ಹನಿಯನ್ನೇ ನೀಡುತ್ತದೆ ಎಂಬ ಅನಿಸಿಕೆ. ಸದಾ ಚಲನ ಶೀಲವಾಗಿ ಚಟುವಟಿಕೆಯಿಂದ ಇರುವುದರ ರಹಸ್ಯ ಈ ಊರಿನ ಬಿಸಿಲ ವಾತಾವರಣವೇ ಕಾರಣ. ಯಾಕೆಂದರೆ ಜಡತ್ವ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ.   ಅಂತಹ ಊರನ್ನು ಬಿಟ್ಟು ಜೀವನವನ್ನು ಕಟ್ಟುವುದಕ್ಕೆ ಬೆಂಗಳೂರಿಗೆ ಬಂದ ಮೊದಲು ಎಲ್ಲ ಹೊಸದರ ನಡುವೆ ಅಂಟಿಕೊಂಡ ಸ್ನೇಹಿತನಂತೆ ಅಪ್ಪಿಕೊಂಡು ಬಿಡದೇ ಕಾಡಿದ್ದು ಈ ಅಲರ್ಜಿ ಎಂಬ ಸಮಸ್ಯೆ. ಅದು ಅಲರ್ಜಿ ಎಂದು ಅರಿವಿಗೆ ಬರಬೇಕಾದರೆ ಬಹಳ ಸಮಯಗಳೇ ಬೇಕಾಯಿತು. ಎಲ್ಲೋ  ಯಾರಿಗೋ  ಇದೆ ಎಂದುಕೊಂಡು ಅಷ್ಟೂ ದಿನ ಇದ್ದೆ.  ನನಗೂ ಅದು ಇದೆ ಎಂದು ಹತಾಶೆ ನೋವನ್ನು ಅನುಭವಿಸಿದ್ದೆ.   ಮನೆಯಿಂದ ಒಂದಷ್ಟು ಹೊರ ಹೋಗಬೇಕೆಂದರೆ ಅರ್ಧ ಮುಖವನ್ನು ಮುಚ್ಚಿಕೊಂಡು ಸರಿಯಾಗಿ ಉಸಿರಾಡದಂತೆ ಮುಸುಕನ್ನು ಮೂಗಿಗೆ ಕಟ್ಟಿಕೊಳ್ಳುವಂತಾಗಿದ್ದು ಬಹಳ ಕಿರಿಕಿರಿಯನ್ನು ಉಂಟುಮಾಡುತ್ತಿತ್ತು. ಅಲರ್ಜಿ ಬಾಧೆ ಅದು ಅನುಭವಿಸಿದವನಿಗೆ ಮಾತ್ರ ಅದರ ನೋವು ಅರಿವಾಗುವುದು. ಎಲ್ಲರಂತೆ ತಾನಿಲ್ಲ ಎಂಬುದು ಪ್ರತಿಕ್ಷಣವೂ ಕೀಳರಿಮೆಯನ್ನು ತಂದು ಆತ್ಮ ಸ್ಥೈರ್ಯವನ್ನೇ ಕುಗ್ಗಿಸಿ ಬಿಡುತ್ತದೆ. ಇದು ಯಾವ ಯಾವ ವಿಧದಲ್ಲಿ ಬಾಧಿಸುತ್ತದೆ ಎಂದು ವಿವರಿಸುವುದು ಕಷ್ಟ. ಇದ್ದಕ್ಕಿದ್ದಂತೆ ಜ್ವರ ಬರುವುದು ಚಳಿಯಾಗುವುದು ಎದೆನೋವು ನೆಗಡಿ ಕಫ ಜೀವವೇ ಕಳಚಿ ಹೋಗುವಂತಹ ಸೀನು ಎಲ್ಲದಕ್ಕಿಂತಲೂ ಸಹನೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. 


        ಅಲರ್ಜಿಯಿಂದ ಹೊರಬರಬೇಕು, ಎಲ್ಲರಂತೆ ನಾನೂ ಮುಕ್ತವಾಗಿ ಉಸಿರಾಡಬೇಕು ಎಂದು ಬಯಸುತ್ತಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ವೈದ್ಯರ ಬಳಿಗೆ ಹೋದರೆ ಏನೋ ಒಂದು ಮಾತ್ರೆ ಕೊಡುತ್ತಿದ್ದರು. ಅದು ಒಂದೆರಡು ದಿನ ನಿರಾಳವನ್ನು ತಂದುಕೊಟ್ಟಂತೆ ಅನಿಸಿದರೂ ಆನಂತರ ಮೊದಲಿಗಿಂತಲೂ ಹೆಚ್ಚಿನ ಬಾಧೆ ಅನುಭವಿಸುವಂತಾಗುತ್ತಿತ್ತು. ಅಲರ್ಜಿಯ ಬಾಧೆ ಎಂದರೆ ವಿಚಿತ್ರ, ಹೊರಗಿನವರಿಗೆ ನೋಡಿದರೆ ಆರೋಗ್ಯವಂತ ಎಂದು ಕಂಡರೂ ನಾವು ಸರಿ ಇಲ್ಲ ಅಂತ ಕೀಳರಿಮೆ ಸದಾ ಇರುತ್ತದೆ. ಒಂದಿಷ್ಟು ಮೋಡ ಮುಸುಕಿದ ವಾತಾವರಣ ಮಬ್ಬು ಕವಿದರೆ ಅಲರ್ಜಿ ಬಾಧೆಯಲ್ಲಿ ಚಿತ್ರ ವಿಚಿತ್ರವಾದ ನೋವು ಅನುಭವಿಸುವಂತಾಗುತ್ತದೆ. ಮೈ ಕೈ ನೋವಿನಿಂದ ಹಿಡಿದು ನಗಡಿ ಕಫ ಯಾರಲ್ಲೂ ಹೇಳುವಂತಿಲ್ಲ,  ಬಿಡುವಂತಿಲ್ಲ.  ಅಲರ್ಜಿಯ ಬಾಧೆಯಲ್ಲಿ ಜೀವನ ಹೀಗೆ ಕಳೆದು ಬಿಡುತ್ತದೆ ಎಂಬ ಹತಾಶೆ ಸಂಕಟ ಅದು ಅನುಭವಿಸಿದವರಿಗೆ ಗೊತ್ತು. ಇಂತಹ ಅಲರ್ಜಿಯಿಂದ ಹೊರಬಂದದ್ದು ನನ್ನ ಅಪ್ರತಿಮ ಸಾಧನೆ ಎಂದು ನನಗೆ ಭಾಸವಾಗುತ್ತದೆ.  ಅದಕ್ಕೆ ಕಾರಣವಾದ ಯೋಗಭ್ಯಾಸ ಅದರಲ್ಲೂ ಕೆಲವು ತಿಂಗಳ ಹಿಂದೆ ಆರಂಭಿಸಿದ ಉಜ್ಜಾಯಿ ಪ್ರಾಣಾಯಾಮ. ಇದು ಇಷ್ಟೊಂದು ಪರಿಣಾಮಕಾರಿಯಾಗಬಹುದೆಂದು ಕಲ್ಪನೆಯೇ ಇರಲಿಲ್ಲ. ನನ್ನ ಅಲರ್ಜಿ ಬಾಧೆಗೆ ಇದು ರಾಮಬಾಣದಂತೆ ಕೆಲಸ ಮಾಡಿ ಬಿಟ್ಟಿತು. ಅದೂ ಕೇವಲ ಮೂರು ತಿಂಗಳಲ್ಲಿ! ಯಾವುದೇ ಔಷಧಿ ಕಷಾಯಕ್ಕೂ ಜಗ್ಗದ ಅಲರ್ಜಿ  ಬಾಧೆಯಿಂದ ನಾನು ಮುಕ್ತನಾಗಿದ್ದೇನೆ ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ. 

        ಉಜ್ಜಾಯಿ ಪ್ರಾಣಾಯಾಮ, ಇದೊಂದು ವಿಚಿತ್ರ ಬಗೆಯ ಪ್ರಾಣಾಯಾಮ. ಸಾಮಾನ್ಯವಾಗಿ ಪ್ರಾಣಾಯಾಮವನ್ನು ಖಾಲಿ ಹೊಟ್ಟೆಯಲ್ಲಿ ಅದರಲ್ಲೂ ಮುಂಜಾನೆ ಮಾಡುವುದು ಸೂಕ್ತ. ಆದರೆ ಉಜ್ಜಾಯಿ ಪ್ರಾಣಾಯಾಮ ಯಾವಾಗ ಬೇಕು ಆವಾಗ ಅಭ್ಯಾಸ ಮಾಡಬಹುದು. ನಡೆದಾಡುವಾಗ ಕೆಲಸ ಮಾಡುವಾಗ ಇದನ್ನು ಪರಿಣಾಮಕಾರಿಯಾಗಿ ಮಾಡಬಹುದು. 

            ಘನವಾದ ಯಾವುದೇ ಆರೋಗ್ಯದ ಸಮಸ್ಯೆ ಬಾಧಿಸಿದಾಗ ನಾನು ವೈದ್ಯರಿಗಿಂತ ಮೊದಲು ಕರೆ ಮಾಡುವುದು ಮಿತ್ರ ಹಾಗು ಯೋಗ ಗುರು ಹರೀಶನಿಗೆ. ನನ್ನ ಯೋಗಾಭ್ಯಾಸಕ್ಕೆ ಅದಮ್ಯವಾದ ಪ್ರೇರಣೆ ಕೊಟ್ಟ ಸನ್ಮಿತ್ರ. ಸಲುಗೆಯಿಂದ ಸ್ನೇಹದಿಂದ ಸದಾ ಸಂಪರ್ಕದಲ್ಲಿರುವ  ಈತ ನೀಡುವ ಪರಿಹಾರ ಅತ್ಯಂತ ಸರಳ ಹಾಗು ಅಧ್ಬುತ ಪರಿಣಾಮಕಾರಿಯಾಗಿರುತ್ತದೆ. ಒಂದು ಸಲ ಮಂಗಳೂರಿಗೆ ಹೋದಾಗ ಭೇಟಿಯಾದಾಗ ಹೇಗೆ ಮಾಡಬೇಕು ಎಂದು ಒಂದಷ್ಟು ತೋರಿಸಿಕೊಟ್ಟು ಅದನ್ನು ಅಭ್ಯಾಸ ಮಾಡಿ ನೋಡುವಂತೆ ಸಲಹೆ ಕೊಟ್ಟರು. ಆದರೆ ಅದನ್ನು ಇನ್ನಷ್ಟು ತಿಳಿದು ಸರಿಯಾಗಿ ಅಧ್ಯಯನ ಮಾಡಿ ಮಾಡಬೇಕು ಎಂದುಕೊಂಡು   ಇನ್ನೊಬ್ಬ ಮಿತ್ರ ಹೃಷೀಕೇಶ ಪೆರ್ನಡ್ಕ ಅವರನ್ನು ಸಂಪರ್ಕಿಸಿದೆ. ಇವರು ಮೂಲತಃ ನಮ್ಮೂರಿನವರು. ಯುವ ಪ್ರತಿಭಾವಂತ. ವಿದೇಶದಲ್ಲಿದ್ದು ಈಗ ಬೆಂಗಳೂರಲ್ಲಿದ್ದಾರೆ. ಯೋಗ ರೀತಿಯ ಚಿಕಿತ್ಸೆಯನ್ನೆ ವೃತ್ತಿಯನಾಗಿಸಿಕೊಂಡ ಸಹೃದಯಿ. ಒಂದು ದಿನ ವಿಡೀಯೋ ಕಾಲ್ ಮಾಡಿ ಉಜ್ಜಾಯಿ ಪ್ರಾಣಾಯಾಮ ಹೇಗೆ ಮಾಡಬೇಕು ಎಂದು ಕಲಿಸಿಬಿಟ್ಟರು. ನಿಜವಾಗಿ ಇದನ್ನು ಗುರುಗಳ ಸಮ್ಮುಖದಲ್ಲೇ ಮಾಡಬೇಕು. ಆದರೆ ಈ ಯೋಗಾಭ್ಯಾಸದಲ್ಲಿ ನಿರತನಾದ ನನಗೆ ಅವರು ಸುಲಭದಲ್ಲಿ ಕಲಿಸಿಕೊಟ್ಟರು. ಅದರ ಉಪಯೋಗಗಳನ್ನು ತಿಳಿಸಿದರು. 

        ಅಲ್ಲಿಂದ ನಂತರ  ನನ್ನ ಆರೋಗ್ಯದಲ್ಲಿ ಮತ್ತಷ್ಟು ಸುಧಾರಣೆಯಾಯಿತು. ಕೋವಿಡ್ ಸಮಯವಲ್ಲದೇ ಇದ್ದರೂ ಹೊರಗೆ ಓಡಾಡಬೇಕಾದರೆ ಸದಾ ಮಾಸ್ಕ್ ಧರಿಸಿ ಓಡಾಡುವ ನನಗೆ ಈಗ ಮಾಸ್ಕ್ ಅವಶ್ಯಕತೆ ಬೀಳುವುದಿಲ್ಲ. ಮಾತ್ರವಲ್ಲ ರಕ್ತದೊತ್ತಡದಿಂದ ಸಂಪೂರ್ಣ ಮುಕ್ತನಾಗಿಬಿಟ್ಟೆ. ಈಗ ಅನುಭವಿಸುವ ಸಂತೋಷ ಸಂತೃಪ್ತಿ ಅನೂಹ್ಯವಾದದ್ದು. ಇಷ್ಟು ಮಾತ್ರವಲ್ಲ ಪ್ರಾಣಾಯಾಮದಲ್ಲಿ ಮತ್ತಷ್ಟು ಸುಧಾರಣೆಯಾಗಿ ಧ್ಯಾನ ಏಕಾಗ್ರತೆ ದಿನನಿತ್ಯದ ಯೋಗಾಭ್ಯಾಸ ಹೊಸ ಮಜಲಿಗೆ ತಲುಪಿದ ಅನುಭವವಾಗತೊಡಗಿತು. 

        ಉಜ್ಜಾಯಿ ಪ್ರಾಣಾಯಾಮದ ಪರಿಣಾಮ ಉಪಯೋಗಗಳನ್ನು ಅಂತರ್ಜಾಲದಲ್ಲಿ ನೋಡಬಹುದು. ಹಲವಾರು ಆರೋಗ್ಯ ಸಮಸ್ಯೆಗೆ ಉಸಿರಾಟದ ಸಮಸ್ಯೆಗಳಿಗೆ ಇದು ಅತ್ಯಂತ ಸೂಕ್ತ ಪರಿಹಾರವನ್ನು ಒದಗಿಸುತ್ತದೆ. ಅಲರ್ಜಿಯ ಭಾಧೆಯಿಂದ ದೂರವಾಗುವಾಗ ಇದಕ್ಕೆ ಪ್ರೇರಣೆಕೊಟ್ಟ ಹರೀಶ್ ಯೋಗ ಮತ್ತು ಅದನ್ನು ಸರಳವಾಗಿ ತಿಳಿಸಿಕೊಟ್ಟ ಹೃಷಿಕೇಶ್ ಪೆರ್ನಡ್ಕ ಅವರ ನೆನಪು ಸದಾ ಪ್ರೇರಕವಾಗಿ ಪ್ರಚೋದಿಸಲ್ಪಡುತ್ತದೆ. ಅವರಿಗೆ ಈ ಮೂಲಕ ಹೃತ್ಪೂರ್ವಕ ಕೃತಜ್ಞತೆಗಳು. ಹಲವು ವರ್ಷದ ಬಾಧೆ, ಹಲವು ಔಷಧಿಗಳಿಗೆ ಜಗ್ಗದ ಸಮಸ್ಯೆ ಇಂದು ನನ್ನಿಂದ ಬಹಳಷ್ಟು ದೂರವಾಗಿದೆ. ಸಮರ್ಪಕ ಉಸಿರಾಟ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. 


No comments:

Post a Comment