Sunday, January 1, 2023

ಸಂಕಲ್ಪ ಶುದ್ದಿ

                 ಹತ್ತಿರದ  ಸಂಭಂಧಿಗಳೊಬ್ಬರು ವಾರಣಾಸಿಗೆ ಯಾತ್ರೆ ಹೋಗುತ್ತಾರೆ ಎಂದು ತಿಳಿದುಬಂತು. ಆಗ ನನ್ನಮ್ಮ ಹಲವು ವರ್ಷಗಳಿಂದ ಕಾಶಿಗೆ ಹೋಗುವುದಕ್ಕೆ  ಹಂಬಲಿಸುವುದು ನೆನಪಿಗೆ ಬಂತು. ಅವರು ಹೋಗುತ್ತಾರೆ ಎಂದು ಮೊದಲೇ  ತಿಳಿದಿದ್ದರೆ ಅಮ್ಮನನ್ನು ಕಳುಹಿಸಬಹುದಾಗಿತ್ತು. ಆದರೆ ಅವರಾಗಲೇ ಎಲ್ಲವನ್ನು ನಿಗದಿ ಪಡಿಸಿಯಾಗಿತ್ತು. ಕೊನೆಗೆ ಅವರ ಮುಖಾಂತರ ಅವರು ಹೋಗುವ ವಿವರ ಪಡೆದ ನಂತರ ರಾಷ್ಟ್ರ ಜಾಗ್ರತಿಯಾನದ ಅಂಗವಾಗಿ  ಆಯೋಜಿಸುವ ಪ್ರವಾಸ ಎಂದು ತಿಳಿದು ಬಂತು. ಮೊದಲಿಗೆ ಇದರ ರೂಪು ರೇಷೆಯ ಬಗ್ಗೆ ಏನೂ ಅರಿವಿರಲಿಲ್ಲ. ಆದರೆ ಇವರ ಪೂರ್ವಭಾವಿ ಸಭೆಗೆ ಹಾಜರಾದ ಮೇಲೆ ಸ್ಥೂಲವಾದ ಪರಿಚಯವಾಯಿತು. ಮೊದಲೂ ಏನೋ ಎಂದು ತಿಳಿದುಕೊಂಡಿದ್ದೆ. ಯವುದೋ  ಪ್ರವಾಸದ ಪ್ಯಾಕೆಜ್  ಇರಬಹುದು ಎಂಬ ಕಲ್ಪನೆಯಲ್ಲಿದ್ದ ನನಗೆ ಇದರ ಧ್ಯೇಯ ಉದ್ದೆಶ ಸಂಕಲ್ಪ ಶುದ್ದಿ ತಿಳಿದುಈ ಬಗೆಯ ಕಲ್ಪನೆ ಆಶ್ಚರ್ಯವನ್ನು ಉಂಟುಮಾಡಿತು. ನಿಜಕ್ಕೂ ಇದು ಕೇವಲ ರಾಷ್ಟ್ರ ಜಾಗೃತಿ ಅಭಿಯಾನವಲ್ಲ ಜೀವನದ ಪರಮಾರ್ಥವಾದ ಆತ್ಮ ಜಾಗೃತಿ ಅಭಿಯಾನ. ಜಾಗೃತಿ ಎಂದರೆ ಎಚ್ಚರಿಸುವುದು. ಮರೆವನ್ನು ಜ್ಞಾಪಿಸುವುದು. ನಾವು ನಮ್ಮನ್ನು ನಿದ್ರಿಸುವವರನ್ನು ನೋಡುವುದಕ್ಕಿಂತಲೂ ಎಚ್ಚರಿಸುವವರತ್ತ ದೃಷ್ಟಿ ಹರಿಸಬೇಕು.  ಬದುಕಿನ ಪರಮಾರ್ಥ ಅರ್ಥವಾದರೆ ಈ ಧ್ಯೇಯೋದ್ದೇಶದ ಸಂಕಲ್ಪ ಶುದ್ದಿಯ ಅರಿವಾಗುತ್ತದೆ.  ಇದು ಕೇವಲ ಪ್ರವಾಸವಲ್ಲ, ಇದೊಂದು ಯಾತ್ರೆ , ಜೀವನ ಯಾತ್ರೆ. ಮನುಷ್ಯನ ಹುಟ್ಟು ಒಂದು ಯಾತ್ರೆಯ ಆರಂಭ. ಆನಂತರ ಇದು ಯಾತ್ರೆ ಎಂದು ತಿಳಿಯದೆ ಮುಂದೆ ಹೋಗವುದು. ಗಮ್ಯವಲ್ಲದ ಕಡೆಗೆ ಹೋಗುವುದು. ಆದರೆ ಗಮ್ಯದ ಅರಿವಾಗುವುದು ಎಂದರೆ ಎಚ್ಚರವಾಗುವುದು ಎಂದರೆ ಎಚ್ಚರವಾಗುವುದು ಎಂದರ್ಥ. ಪ್ರಕೃತಿ ಪರಿಸರ ನಮ್ಮನ್ನು ಸದಾ ಎಚ್ಚರಿಸುತ್ತದೆ. ನಾವು ಎದ್ದೇಳಬೇಕು. ಈ ಜಾಗೃತಿ ಎಂದರೆ ಅದು ಪ್ರಕೃತಿಯ ಕೆಲಸ. 


                ಕಾಮರೂಪಿ ಶಿವನ ಸ್ಥಾನವೇ ಕಾಶಿ. ಕಾ ಎಂದರೆ ಕಾಮ ಜತೆಯಲ್ಲಿ ಸೇರುವುದೇ ಶಿವ.  ಅದೇ  ಕಾಮನನ್ನು ಜಯಿಸಿದವನು ಕಾಮ ಇವನೆದುರು ಬಂದಾಗ ಅದೇ ಸುಟ್ಟು ನಾಶವಾಯಿತು.  ಹಾಗಾಗಿಯೆ ಕಾಶಿಗೆ ಬಂದಾಗ ನಮ್ಮ ಆಶೆಗಳನ್ನು ತ್ಯಾಗ ಮಾಡಬೇಕು. ಯಾಕೆಂದರೆ ಕಾಮಕ್ಕೂ ಶಿವನಿಗೂ ಜತೆಯಾಗುವುದಿಲ್ಲ. ಅಲ್ಲಿ ಕಾಮರೂಪಿಯನ್ನು ಮಾತ್ರವೇ ಕಾಮಿಸಬೇಕು. ಕಾಮರೂಪಿಯ ಎದುರು ನಮ್ಮ ಕಾಮನೆಗಳು ಶೂನ್ಯವಾಗಬೇಕು. ಶೂನ್ಯದಲ್ಲೆ ಎಲ್ಲವನ್ನೂ ಕಂಡ ಪೂರ್ವಜರು ಅಲ್ಲಿ ಕಾಮವನ್ನೂ ಕಳೆದು ಶೂನ್ಯವನ್ನು ಮಾತ್ರ ಗುರುತಿಸಿದ್ದರು. ಅಲ್ಲಿ ನಮ್ಮ ಆಶೆಗಳನ್ನು ಕಳೆದು ದಿಗಂಬರ ಚಿತ್ತವಾಗಿರಬೇಕು. ಅದು ಸುಲಭವಲ್ಲ. ಕಾಮನೆಗಳು ಶೂನ್ಯವಾದಾಗ ಕಾಮರೂಪಿಯ ದರ್ಶನವಾಗುತ್ತದೆ. ಹಾಗಾಗಿಯೇ ಕಾಶೀ ಯಾತ್ರೆ ಎಂಬುದು ಬದುಕಿನ ಪರಮಾರ್ಥವಾಗುತ್ತದೆ. ಅಲ್ಲಿ ಅದಕ್ಕಿಂತ ಉತ್ಕೃಷ್ಟತೆ ಯಾವುದಕ್ಕೂ ಲಭ್ಯವಾಗುವುದಿಲ್ಲ. ಪರಮ ಉತ್ಕೃಷ್ಟತೆಯೆ ಕಾಶಿಯ ಶಿವನ ಸಾನಿಧ್ಯ. ಕಾಶಿಗೆ ಹೋಗುವುದೆಂದರೆ ಅದೊಂದು ವಾನ ಪ್ರಸ್ಥ. ನಮ್ಮ ಆಶೆಗಳನ್ನು ಅಂದರೆ ಕಾಮನೆಗಳನ್ನು ಕಳೆಯುವುದಕ್ಕಿರುವ ಏಕ ಮಾತ್ರ ಕ್ಷೇತ್ರವೇ ಕಾಶಿ. 

        ಒಂದು ಸಲ ನಾನು ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ಕೊಟ್ಟಿದ್ದೆ. ಮಧ್ಯಾಹ್ನ ನಾನು ಪಯಣಿಸಿದ ಬಸ್ಸು ಅಲ್ಲಿಗೆ ತಲಪುವುದಕ್ಕೆ ತುಸು ವಿಳಂಬವಾಯಿತು. ಕೊನೆಯ ನಿಲ್ದಾಣದಲ್ಲಿ ಇಳಿಯ ಬೇಕಾದರೆ ಎಲ್ಲರಿಗೂ ಆತಂಕ ಗಡಿಬಿಡಿ. ಎಲ್ಲರಿಗೂ ಆತುರ. ಇನ್ನೇನು ದರ್ಶನದ ಸಮಯ ಮೀರುವ ಹೊತ್ತು. ಹಾಗಾಗಿ ಗಡಿಬಿಡಿಯಿಂದ ದರ್ಶನದ ಸರದಿಯಲ್ಲಿ ನಿಂತುಕೊಂಡರು. ಸರದಿಯಲ್ಲಿ ನಿಲ್ಲುವಾಗಲೂ ತವಕ ಆತಂಕ ಸರದಿಯಲ್ಲಿ  ಯಾವಾಗ ಮುಂದೆ ಸರಿಯುವುದಿಲ್ಲ ಎಂಬ ತುಡಿತ. ಸರದಿಯನ್ನು ಒತ್ತರಿಸಿ ಮುಂದೆ ಹೋಗುವ ತುಡಿತ.  ನಾವು ಮುಂದೆ ಹೋಗಬೇಕು. ಮುಂದೆ ಹೋಗದಿರುವುದಕ್ಕೆ ಸಾಧ್ಯವಿಲ್ಲ. ಹಾಗೆಂದು ಎದುರಿದ್ದ ವ್ಯಕ್ತಿಯನ್ನು ಹಿಂದಿಕ್ಕುವುದಕ್ಕೆ ನಾವು ಮುಂದೆ ಹೋಗುವುದಲ್ಲ.  ನಾನು ಬಸ್ ಇಳಿಯುವಾಗಲೇ ಯೋಚಿಸಿದ್ದೆ ದರ್ಶನದ ಯೋಗ ಇದ್ದರೆ ಸಾಧ್ಯವಾಗುತ್ತದೆ. ಹಾಗಾಗಿ ಆತಂಕವಿರಲಿಲ್ಲ. ನನ್ನ ಹಿಂದಿರುವವರಿಗೆ ನನ್ನನ್ನು ಹಿಂದಿಕ್ಕಿ ಮುಂದುವರೆಯುವ ತವಕ. ಹಾಗೂ ಹೀಗು ಗರ್ಭಗುಡಿಯ ಎದುರು ದೇವರ ದರ್ಶನಕ್ಕೆ ನಿಂತಾಯಿತು. ಅಲ್ಲಿ ಪ್ರದಕ್ಷಿಣೆ ಬರುವಾಗಲೂ ದೇವರ ದರ್ಶನದಲ್ಲೂ ನಿಲ್ಲದ ಅವಸರ. ಅದಾಗಲೇ ಭೋಜನದ ಸಮಯ ಮೀರುವುದರಲ್ಲಿತ್ತು!   ಊಟವಾದರೆ ಮನೆಯಲ್ಲಿ ಇದ್ದೇ ಇರುತ್ತದೆ. ದೇವರ ದರ್ಶನ ?  ಅಂತ್ಯವಿಲ್ಲದ ಧಾವಂತ.  ತೀರ್ಥ ಪ್ರಸಾದ ಕೊಳ್ಳುವಾಲೂ ಅವಸರ. ಹಾಗೂ ಹೀಗೂ ದರ್ಶನವಾಗಿ ಪ್ರಸಾದ ಪಡೆದು ಭೋಜನ ಶಾಲೆಗೆ ದೌಡಾಯಿಸುವುದು ನಂತರ  ಅಲ್ಲಿ ಕುಳಿತುಕೊಳ್ಳುವುದಕ್ಕೆ ಅವಸರ.  

        ಮನುಷ್ಯ ದೇವಸ್ಥಾನಕ್ಕೆ ಬರುವುದು ಮನಸ್ಸಿನ ಶಾಂತಿ ಸಮಾಧಾನ ಪಡೆಯುವುದಕ್ಕೆ. ಜೀವನದ ಪರಿಹರಿಸಲಾಗದ ಕಷ್ಟಗಳ ನಡುವೆ ಒಂದಷ್ಟು ದೈವ ದರ್ಶನದಿಂದ ಎಲ್ಲವನ್ನು ಮರೆತು ನೆಮ್ಮದಿಯನ್ನು ಪಡೆಯುವುದಕ್ಕೆ ದೇವರ ಬಳಿಗೆ ಬಂದರೆ ಅಲ್ಲೂ ನಿಲ್ಲದ ಆತಂಕ ಅವಸರವಾದರೆ ಬರುವ ಉದ್ದೇಶವಾದರೂ ಏನು? ನಿಜಕ್ಕಾದರೆ ಶಾಂತಿ ಸಮಾಧಾನ ಎಂಬುದು ನಮ್ಮ ಪ್ರವೃತ್ತಿಯನ್ನೇ ಹಲವು ಸಲ ಅವಲಂಬಿಸಿರುತ್ತದೆ.  ಇದನ್ನೇ ಸಂಕಲ್ಪ ಶುದ್ದಿ ಎನ್ನುವುದು. ನಾನಂತೂ ಯಾವ ಆತಂಕವೂ ಇಲ್ಲದೆ ದರ್ಶನ ಪ್ರಸಾದ ಪಡೆದು ಕೊನೆಯಲ್ಲಿ ಭೋಜನಪ್ರಸಾದವನ್ನು ಯಾವುದೇ ಅವಸರವಿಲ್ಲದೆ ಮುಗಿಸಿದೆ. ಮನಸ್ಸಿನಲ್ಲಿ ಇದ್ದ ಸಂಕಲ್ಪ ಒಂದೇ ಯೋಗವಿದ್ದರೆ ಎಲ್ಲವೂ ಲಭ್ಯವಾಗುತ್ತದೆ. ಅದು ಇಲ್ಲದಿದ್ದರೆ ಅದಿಲ್ಲ ಎಂದು ಕೊಂಡು ಹೊರಗಿನಿಂದಲೇ ನಮಸ್ಕರಿಸಿ ಬರುತ್ತಿದ್ದೆ. ಅಷ್ಟಕ್ಕೇ ಅಷ್ಟು ದೂರ ಹೋಗಬೇಕೆ ಎನ್ನುವುದೇನೋ ಸತ್ಯ. ಯಾವುದೇ ಆದರೂ ನಮಗೆ ಪಡೆಯುವುದಕ್ಕೆ ಯೋಗ ಎನ್ನುವುದು ಇರಬೇಕು. ನಮ್ಮ ಕರ್ತವ್ಯ ಎನಿದೆಯೋ ಅದನ್ನು ಮಾಡುವುದಷ್ಟೆ ನಮ್ಮ ಕರ್ತ್ಯವ್ಯ.  ಯೋಗ ಎಂದರೆ,  ಅಲಭ್ಯವಾಗಿರುವುದನ್ನು ಹೊಂದುವುದೇ ಯೋಗ.  ಯೋಗ ಎಂದರೆ ಆಯಾಚಿತವಾಗಿ ಲಭ್ಯವಾಗುವುದೇ ಯೋಗ. ಅದನ್ನು ಸೆಳೆದು ಅಥವ ಕೇಳಿ ಪಡೆಯುವಹಾಗಿಲ್ಲ. ಒಂದು ವೇಳೆ ಬಲವಂತದಲ್ಲಿ ನಾವು ಗಳಿಸಿದರೂ ಅದು ಯೋಗವಾಗುವುದಿಲ್ಲ. ಹಾಗಾಗಿ ಭಗವಂತನನ್ನು ಯೋಗೇಶ್ವರ ಎಂದು ಕರೆಯುವುದು. ಯಾರಿಗೆ ಯೋಗ ಇದೆಯೋ ಅವರಿಗೆ ಆತ ಲಭ್ಯವಾಗುತ್ತಾನೆ.  ಇದನ್ನು ತಿಳಿಯದವನು ಹಿಮಾಲಯದಲ್ಲಿ ತಪಸ್ಸಿಗೆ ಕುಳಿತರೂ ಆತನಿಗೆ ನೆಮ್ಮದಿ ಸಾಧ್ಯವಾಗದು.   ಯೋಗವು ಕರ್ಮದಿಂದ ಸಾಧಿಸಲ್ಪಡುವುದಾದರೂ ಕರ್ಮ ಸಂಕಲ್ಪ ಶುದ್ದಿಯಿಂದ ಕೂಡಿರಬೇಕು. ಸಂಕಲ್ಪ ಶುದ್ದಿ ಇಲ್ಲದೇ ಇದ್ದರೆ  ಆತ್ಮ ತೃಪ್ತಿ ಪೂರ್ಣವಾಗಿ ಅನುಭವಿಸುವುದಕ್ಕೆ ಸಾಧ್ಯವಿರುವುದಿಲ್ಲ. ಯಾರೋ ಏನೋ ಮಾಡುತ್ತಾರೆ ನಾವೂ ಮಾಡಿಬಿಡಬೇಕು ಎನ್ನುವ ಹಪ ಹಪಿಕೆ. ಪಕ್ಕದ ಮನೆಯವ ಮದುವೆ ವಿಜ್ರಂಭಣೆಯಿಂದ ಮಾಡಿದ ಎಂದು ಕೊಂಡು ನಾವು ಸ್ಪರ್ಧೆಗೆ ನಿಂತು ಆಡಂಬರದಿಂದ ಮಾಡುವುದಕ್ಕೆ ತೊಡಗಿದರೆ ನಾವು ನಮಗಾಗಿ ಮಾಡುವುದಿಲ್ಲ, ಪರರಿಗೋಸ್ಕರ ಮಾಡುತ್ತಿದ್ದೇವೆ. ಆತ ನೂರು ಜನಕ್ಕೆ ಊಟ ಹಾಕಿದರೆ ನಾವು ಇನ್ನೂರು ಜನಕ್ಕೆ ಊಟಹಾಕುತ್ತೇವೆ. ಇಲ್ಲಿ ಉದ್ದೇಶ ಇನ್ನೂರು ಜನಕ್ಕೆ ಹಾಕುತ್ತಿದ್ದೇವೆ ಎಂಬುದಷ್ಟೆ ಇದ್ದು...ಯಾಕೆ ಹಾಕಬೇಕು ಎಂಬುದು ಸ್ಪಷ್ಟವಾಗುವುದಿಲ್ಲ.  ಹೀಗೆ ಮಾಡುವ ಕರ್ಮದಲ್ಲಿ ಸಂಕಲ್ಪ ಶುದ್ದಿ ಇರುವುದಿಲ್ಲ. ದೇವರ ಮುಂದೆ  ನಿಂತು ಎಲ್ಲರೂ ನೋಡುತ್ತಾರೆ ಎಂದು  ನಾವು ನಮಸ್ಕರಿಸುವುದೂ ಅಭಿನಯವಾಗುತ್ತದೆ. 

         ಪರಮಾತ್ಮನ ಮುಂದೆ ನಾವು ಹಲವು ವೇಷಗಳನ್ನು ತೊಡಬಹುದು. ಧನಿಕನಾದವ ಆಡಂಬರದಲ್ಲಿ ಒಡವೆ ವಸ್ತ್ರ ತೊಡಬಹುದು, ಬಡವನಾದವನು ಏನು ಇಲ್ಲದೇ ಕೇವಲ ಹರುಕು ಬಟ್ಟೆಯಲ್ಲಿ ದೇವರ ಮುಂದೆ ನಿಲ್ಲಬಹುದು. ಆದರೆ ಇಲ್ಲಿ ವೇಷವೆಂಬುದು ಪರಮಾತ್ಮನಿಗಾಗಿ ಅಲ್ಲ, ಅದು ಕೇವಲ ನಮಗಾಗಿ, ನಮ್ಮ ಮನಸ್ಸಿನ ಭಾವನೆಗಾಗಿ. ಹಾಗಾಗಿ ಇಲ್ಲಿ ಸಮೀಕರಿಸಬೇಕಾಗಿರುವುದು ನಮ್ಮ ಭಾವನೆಯನ್ನು ಹೊರತು ದೇವರ ಭಾವನೆಗಳನ್ನಲ್ಲ. ದೇವರು ಭಾವರಹಿತನಾಗಿರುವಾಗ ದೇವರ ಭಾವನವನ್ನು ಹೀಗೆ ಅಂತ  ಕಲ್ಪಿಸುವುದು ನಮ್ಮ ಮನಸ್ಸಿನ ಮೂರ್ಖತನ. ಪರಮಾತ್ಮನಿಗೆ ಯಾವುದು ಸಲ್ಲುವುದಿದ್ದರೂ ಅದು ನಮ್ಮ ಭಾವದಿಂದ. ಅದು ಪರಿಶುದ್ದವಾಗಬೇಕು. ಅಲ್ಲಿ ಮತ್ತೊಬ್ಬರನ್ನು ಸೋಲಿಸುವ ಹಿಂದಿಕ್ಕುವ ಮನೋಭಾವ ಇದ್ದರೆ ಅದು ಸಂಕಲ್ಪ ಶುದ್ದಿಯಾಗುವುದಿಲ್ಲ.  ದನ ಹಾಲು ಕೊಡುವುದು ನಮಗಾಗಿ ಅಲ್ಲ ಕರುವಿಗಾಗಿ. ಬೆಕ್ಕು ಇಲಿಯನ್ನು ಹಿಡಿಯುವುದು ನಮಗಾಗಿ ಅಲ್ಲ ಅದರ ಹಸಿವಿಗಾಗಿ. ಅದು ಪ್ರಕೃತಿ. ನಾವು ಅದರ ಲಾಭವನ್ನು ಪಡೆಯುವಾಗ ಅದು ನಮಗಾಗಿ ಅಲ್ಲ ಎಂಬ ಭಾವ ಇರಬೇಕು. ಆಗ ಅದನ್ನು ಪಡೆಯುವಲ್ಲಿ ನಮಗೆ ಸಂತೃಪ್ತಿ ಇರುತ್ತದೆ. ಸಂತೃಪ್ತಿ ಎಂಬುದು ಶಾಂತಿಯನ್ನು ತರುತ್ತದೆ. 

            ನಮ್ಮ ನೆರೆಯ ಮನೆಯಾತ ಹಲವು ವರ್ಷಗಳಿಂದ ಮಾಲಾಧಾರಿಯಾಗಿ ವೃತ ಹಿಡಿದು ಶಬರಿಮಲೆಗೆ ಹೋಗುತ್ತಿದ್ದ. ಅಯ್ಯಪ್ಪನ ಮೇಲೆ ಅಪರಿಮಿತ ಭಕ್ತಿ. ಹೌದು ಭಕ್ತಿ ಎಂದರೆ ವಿರಕ್ತಿಯ ಸಂಕೇತವಾಗಬೇಕು. ವಿರಕ್ತ ಎಂದರೆ ರಕ್ತನಾಗದೇ ಇರುವುದು. ರಕ್ತ ಎಂದರೆ ಆಸಕ್ತಿ. ಯಾವಾಗ ಎಲ್ಲದರಲ್ಲೂ ಆಸಕ್ತಿಯನ್ನು ಕಳೆದುಕೊಳ್ಳುತ್ತೇವೋ ಆಗ ನಾವು ವಿರಕ್ತರಾಗುತ್ತೇವೆ. ಶಬರಿಮಲೆ ಯಾತ್ರೆ ಎಂಬುದು ಎಲ್ಲದರಲ್ಲಿಯೂ ಆಸಕ್ತಿಯನ್ನು ಕಳೆದು ವಿರಕ್ತ ಭಾವವನ್ನು ತರಬೇಕು. ನೆರೆ ಮನೆಯಾತನಿಗೆ ಕೇಳಿದೆ, ಶಬರಿ ಮಲೆಯಲ್ಲಿ ದೇವಾಲಯದ ತುದಿಯಲ್ಲಿ ಒಂದು ಬರೆದಿದ್ದಾರೆ ಏನದು? ಆತನಿಗೆ ತಿಳಿಯಲಿಲ್ಲ. ಅವನಿಗೆ ಅದನ್ನು ಗಮನಿಸುವ ವಿರಕ್ತಿ ಬಂದಕಾರಣ ನೋಡಿಲ್ಲ ಎಂದಲ್ಲ. ಅದು ನೋಡಿ ಅದರ ಅರ್ಥವಾದರೆ ವಿರಕ್ತಿ ಬರಬೇಕು.  ಆತನಿಗೆ ಅದು ಏನು ಎಂಬುದೇ ತಿಳಿದಿಲ್ಲ. ದೇವಾಲಯದ ತುದಿಗೆ ದೊಡ್ಡದಾಗಿ ಬರೆದಿದೆ ’ತತ್ವ ಮಸಿ’. ಏನದು ಎಂದು ಕೇಳಿದೆ ...ಗೊತ್ತಿಲ್ಲ. ಅಷ್ಟು ಬಾರಿ ಹೋದರೂ ತತ್ವಮಸಿ ಎಂದರೆ ಏನು ತಿಳಿಯದಿರುವುದು ತಪ್ಪಲ್ಲ. ಆದರೆ ನಾವು ಏನು ಯಾಕೆ ಮಾಡುತ್ತೇವೆ ಎನ್ನುವ ಸಂಕಲ್ಪ ಇಲ್ಲದೇ ಇರುವುದು ತಪ್ಪು.  ಭಗವದ್ಗೀತೆಯಲ್ಲಿ ಬರುವ ಶಬ್ದವದು. ತತ್ವ ಮಸಿ. ಅದು ಎಲ್ಲವೂ ನೀನೆ. ಅಲ್ಲಿ ಅದು ಎಂಬುದು ಬೇರೆ ಇಲ್ಲ. ಇದನ್ನು ತಿಳಿಯದೇ ಯಾತ್ರೆ ಮಾಡಿದರೆ ಅದರೆ ಪೂರ್ಣಾನುಭವ ಹೊಂದುವುದಕ್ಕೆ ಸಾಧ್ಯವೇ? ಒಂದು ಬಾರಿಯಾದರು ಭಗವದ್ಗೀತೆ ಓದಿದರೆ ಅರಿವಾಗಬಹುದು. ಓದಿದರೆ ಮಾತ್ರವಲ್ಲ ಭಗವದ್ಗೀತೆಯ ಪಠಣವನ್ನು ಕೇಳಿದರೂ ಸಾಕು. ಆದರೆ ನಮ್ಮ ಧರ್ಮ ಯಾವುದನ್ನೂ ಗಂಭೀರವಾಗಿ ಆದೇಶಿಸುವುದಿಲ್ಲ. ಈ ಸೌಮ್ಯ ಸಂದೇಶ ಅರ್ಥವಿಸುವ ಜ್ಞಾನವೂ ಇರುವುದಿಲ್ಲ. ಆಗ ಈ ಜಾಗೃತಿಯ ಅವಶ್ಯಕತೆ ಇರುತ್ತದೆ. ಭಗವದ್ಗೀತೆ...ನಮಗೆ ತಟ್ಟಿ ಪ್ರಮಾಣಮಾಡುವುದಕ್ಕಷ್ಟೇ ಸೀಮಿತ. ಒಳಗೆ ಏನು ಇದೆ ಎಂಬುದರ ಬಗ್ಗೆ ಯೋಚನೆ ಇಲ್ಲ. ಒಳಗೆ ಯಾವುದೋ ಉತ್ತಮವಾದದ್ದು ಇದೆ ಎಂದಷ್ಟೆ ಗೊತ್ತು. ಹಾಗಾಗಿ ಮುಟ್ಟಿ ಪ್ರತಿಜ್ಞೆ ಮಾಡುತ್ತೇವೆ. ವಚನ ಬದ್ದರಾಗುತ್ತೇವೆ. ಒಳಗೆ ಇದ್ದದ್ದು ತಿಳಿದರೆ ಆ ವಚನಕ್ಕೆ ಇನ್ನಷ್ಟು ಸಂಕಲ್ಪ ಶುದ್ದಿ ಒದಗಿಬರುತ್ತದೆ. ನಾವು ಪ್ರಮಾಣ ಮಾಡುವುದು ಎದುರಿದ್ದವನನ್ನು ನಂಬಿಸುವುದಕ್ಕೆ. ಅವನಿಗೆ ನಮ್ಮಲ್ಲಿ ವಿಶ್ವಾಸ ಮೂಡುವುದಕ್ಕೆ. ಎದುರಿದ್ದವನು ತಿಳಿದಿರಬಹುದೇ, ತಿಳಿಯದೇ ಇದ್ದರೆ ನಾವು ಅದನ್ನು ನಮ್ಮ ಸ್ವಾರ್ಥಕ್ಕೊಸ್ಕರ ಬಳಸಿಕೊಳ್ಳುತ್ತಿದ್ದೇವೆ.  ಎದುರಿದ್ದವನಲ್ಲಿ ವಿಶ್ವಾಸ ಮೂಡಿಸುವ ಸ್ವಾರ್ಥ. ಇದು ಆತ್ಮ ವಂಚನೆಯಾಗುತ್ತದೆ. ಇದರಲ್ಲಿ ಸಂಕಲ್ಪ ಶುದ್ದಿ ಇರುವುದಿಲ್ಲ. 

    ಒಂದು ಸಲ ನಾನು ಬೆಂಗಳೂರಿನ ರಸ್ತೆಯೊಂದರಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿರುವಾಗ ಜೋರು ಮಳೆ ಬಂದು ಬಿಟ್ಟಿತು. ಆ ಮಳೆಗೆ ಮುಂದೆ ಹೋಗುವುದಕ್ಕೆ ಸಾಧ್ಯವಾಗದೆ ರಸ್ತೆ ಬದಿಗೆ ನಿಲ್ಲಬೇಕಾಯಿತು. ಆದರೆ ಅಲ್ಲಿ ಒಂದು ಆಸರೆಯೂ ಇಲ್ಲದ. ರಸ್ತೆ ಬದಿಯಲ್ಲಿ ಮನೆಗಳೇನೋ ಇತ್ತು. ಎಲ್ಲವೂ ಆವರಣದ ಒಳಗೆ. ಗೇಟ್ ತೆಗೆದು ಒಳಗೆ ಹೋಗುವುದು ಹೇಗೆ? ನಿಲ್ಲುವುದಕ್ಕೆ ಜಾಗವಿಲ್ಲದೆ ಹಾಗೆ ಒಂದು ಮನೆಯ ಗೇಟ್ ಗೆ ಚಿಕ್ಕ ಮಾಡು ಒಂದಿತ್ತು.  ಅಲ್ಲಿ ಹೋಗಿ ನಿಂತುಕೊಂಡೆ. ಜೋರಾದ ಮಳೆ. ಛೇ ಈ ಮಳೆಗೆ ಸಿಕ್ಕಿ ಹಾಕಿಕೊಂಡೆನಲ್ಲಾ ಎಂದು ಹಪ ಹಪಿಸಿದೆ. ಆ ಮನೆಯ ವೃದ್ದರೊಬ್ಬರಿಗೆ  ನಾನು ನಿಂತಿರುವುದು ಒಳಗಿನಿಂದ ಕಂಡಿತು. ಅವರು ಹೊರಬಂದು ಹೇಳಿದ ಒಳಗೆ ಬನ್ನಿ ಎಂದು ಕರೆದರು. ನಾನೂ ನಿರ್ವಾಹವಿಲ್ಲದೆ ಗೇಟ್ ತೆಗೆದು ಒಳ ಹೋದೆ. ಅವರು ಮನೆಯ ಬಾಗಿಲು ತೆಗೆದು ಕುರ್ಚಿಯೊಂದನ್ನು ತೋರಿಸಿ ಕುಳಿತುಕೊಳ್ಳುವಂತೆ ಹೇಳಿದರು. ನಾನೂ ಅವರಿಗೆ ಅಪರಿಚಿತ, ಅವರೂ ಸಹ ನನಗೆ ಅಪರಿಚಿತರು.  ಅವರು ಮತ್ತೂ ಹೇಳಿದರು, ಕುಳಿತುಕೊಳ್ಳಿ, ಮಳೆ ನಿಂತಮೇಲೆ ಹೋಗಬಹುದು. ಕುಳಿತುಕೊಂಡೆ. ಅವರು ಬಾಯಾರಿಕೆ ಬೇಕಾ ಎಂದು ಕೇಳಿದರು.  ಹದಿನೈದು ನಿಮಿಷ ಬಿಡದೇ ಸುರಿದ ಮಳೆ ನಿಂತ ಮೇಲೆ ಧನ್ಯವಾದ ಹೇಳಿದೆ ಹೊರ ಬರುವಾಗ ಹೇಳಿದೆ ನಾನೂ ಅಪರಿಚಿತ ನೀವು....ಹೀಗೆ ಆಸರೆ ಕೊಡುವುದಕ್ಕೆ ಆತಂಕವಿಲ್ಲವೆ?  ಅವರು ಹೇಳಿದರು, ಹಾಗೇನಿಲ್ಲ, ನಿಮ್ಮನ್ನು ಕಾಣುವಾಗ ಹಾಗೆ ಅನಿಸಲಿಲ್ಲ.  ಈ ಅಪರಿಚಿತತ್ವ ಎಂಬುದು ನನಗೂ ಅವರಿಗೂ ಏಕ ಪ್ರಕಾರ. ಅವರೂ ಕರೆಯಬಾರದಿತ್ತು. ನಾನೂ ಒಳಗೆ ಹೋಗಬಾರದಿತ್ತು.  ಅವರು ಆಸರೆ ಕೊಟ್ಟರು , ಕೇವಲ ಮಳೆಗಷ್ಟೇ ಈ ಆಸರೆಯನ್ನು ನಾನು ಉಪಯೋಗಿಸಬೇಕು. ಅದು ಮೀರಿದರೆ ಅದು ದುರುಪಯೋಗವಾಗುತ್ತದೆ. ಈ ಕಾಶಿ ಯಾತ್ರೆಯೂ ಯಾರದೊ ಆಸರೆಯಲ್ಲಿ ಸಾಧ್ಯವಾಗುತ್ತದೆ. ಈ ಆಸರೆಯ ಭಾವವನ್ನು ಅರ್ಥವಿಸಿಕೊಳ್ಳಬೇಕು. ಅಲ್ಲಿ ನಮ್ಮ ಸ್ವಾರ್ಥ ಸಾಧನೆ, ನಮ್ಮ ಮನೋವಿಕಾರಗಳಿಗೆ ಅವಕಾಶ ಇರಬಾರದು. ಇದ್ದರೆ ಅದು ಆಸರೆಯನ್ನು ನೀಡಿದವನಿಗೆ, ಸತ್ಕರಿಸಿದವನಿಗೆ ವಂಚನೆಯನ್ನು ಮಾಡಿದಂತೆ. ಆತ ಇನ್ನು ಮುಂದೆ ಯಾರಿಗೂ ಆಸರೆಯನ್ನು ಕೊಡದ ಸ್ಥಿತಿಯನ್ನು ನಾವು ನಿರ್ಮಾಣ ಮಾಡಿದಂತೆ. 

         ಯಾವುದೇ ಕಾರ್ಯದಲ್ಲೂ ಒಂದು ಸದುದ್ದೇಶ ಇರಬೇಕು. ಅದನ್ನು ಈಡೇರಿಸುವುದಕ್ಕೆ ಸತ್ಸಂಕಲ್ಪ ಇರಬೇಕು. ಹೀಗೆ ಉದ್ದೇಶಶುದ್ದಿ ಸಂಕಲ್ಪ ಶುದ್ದಿ ಇರುವಾಗ ಇಡುವ ಹೆಜ್ಜೆ ಸ್ಥಿರವಾಗಿರುತ್ತದೆ. ಅಲ್ಲಿ ಅಂಜಿಕೆ ಇರುವುದಿಲ್ಲ. 






No comments:

Post a Comment