Sunday, March 3, 2024

ಭಾರವಾಗುವ ಮತ್ಸರ



ಅತ್ಯಂತ ಭಾರವಾದ ಸರ ಯಾವುದು? ಹೀಗೊಂದು ಪ್ರಶ್ನೆಗೆ ಯಕ್ಷಗಾನದ ವಿದೂಷಕ, ಶ್ರೀ ನಯನ ಕುಮಾರ್ ಒಂದು ಕಡೆಯಲ್ಲಿ ಹೇಳಿದ್ದ ನೆನಪು, ಭಾರವಾದ ಸರ ಎಂದರೆ ಅದು ಗಂಗಸರ. ಅಂದರೆ ಸಾರಾಯಿ. ನಮ್ಮ ಊರ ಭಾಷೆಯಲ್ಲಿ ಸಾರಾಯಿ ಅಂದರೆ ಗಂಗಸರ ಹಾಕಿದರೆ ಅತ್ಯಂತ ಭಾರವಾಗಿರುತ್ತದೆ ಅಂತ ಬೇರೆ ಹೇಳಬೇಕಾಗಿಲ್ಲ. ಇದು ವಿಡಂಬನೆ ಅಥವಾ ಹಾಸ್ಯಕ್ಕೆ ಪರಿಗಣಿಸಿದರೂ ಅದರಲ್ಲಿ ಚಿಂತನೆಗಳಿವೆ. ಭಾರವಾದ ವಸ್ತು ನಮ್ಮ ತಲೆಯಲ್ಲಿ ತುಂಬಿದಾಗ ನಾವು ಆ ಭಾರವನ್ನು ಮಾತ್ರವೇ ಯೋಚಿಸುತ್ತೇವೆ. ಬೇರೆ ಯೋಚನೆ ಬರುವುದಿಲ್ಲ. ಅಥವಾ ಯಾವ ಯೋಚನೆಗಳಾದರೂ ಅದರಿಂದ ಪ್ರೇರೇಪಿಸಲ್ಪಡುತ್ತವೆ. ಒಂದು ಸಲ ಈ ಭಾರ ಇಳಿಸಿದರೆ ಸಾಕಪ್ಪ ಎಂದು ಅನಿಸಿದರೂ  ಮನುಷ್ಯ ಭಾರವನ್ನು ತನ್ನ ಮೇಲೆ ಎಳೆದುಕೊಳ್ಳುವ ಪ್ರವೃತ್ತಿಯೇ ಅಧಿಕ.  

ಹಾಸ್ಯಗಾರರು ಯಾವ ದೃಷ್ಟಿಕೋನದಲ್ಲಿ ಹೇಳಿದರೂ ಅದು ವಾಸ್ತವಕ್ಕೆ ಹತ್ತಿರವಾಗಿರುತ್ತದೆ. ಆದರೂ ನನ್ನ ಅನಿಸಿಕೆಯಂತೆ, ಅತ್ಯಂತ ಭಾರವಾದ ಸರ ಎಂದರೆ ಅದು ’ಮತ್ಸರ’  ಈ ಸರ ಧರಿಸಿರುವಷ್ಟು ಸಮಯ ನಮ್ಮ ಮನಸ್ಸು ಬೇರೆಯದನ್ನು ಯೋಚಿಸುವುದಿಲ್ಲ. ಮತ್ಸರ ಅಂದರೆ ನಮ್ಮ ಭಾಷೆಯಲ್ಲಿ ಮುಂದೆ ಹೋಗಲಾಗದೇ ಇದ್ದ ಸ್ಥಿತಿ. ಅದು ಇದ್ದಲ್ಲೇ ಇರುತ್ತದೆ. ಹಾಗಾಗಿ ಇದು ಇದ್ದಷ್ಟು ಹೊತ್ತು ನಮ್ಮ ಚಿಂತನೆಗಳು ಮುಂದೆ ಹೋಗುವುದಿಲ್ಲ. ಅದಕ್ಕೆ ಹೊಂದಿಕೊಂಡು ನಾವು ನಿಂತಲ್ಲೇ ನಿಂತುಬಿಡುತ್ತೇವೆ. ಮತ್ಸರ ಯಾವ ಮನಸ್ಸಿನಲ್ಲಿದೆಯೋ ಆ ಮನಸ್ಸು ಬೇರೆಯದನ್ನು ಚಿಂತಿಸುವುದಿಲ್ಲ. ಸವತಿ ಮಾತ್ಸರ್ಯವಾಗಬಹುದು, ಭಾತೃ ಮಾತ್ಸರ್ಯವಾಗಬಹುದು ಯಾವಾಗ ಮನಸ್ಸನ್ನು ಅವರಿಸಿಬಿಡುತ್ತದೆಯೋ ಅಲ್ಲಿ ಅನ್ಯರ ಬಗ್ಗೆ ಸಚ್ಚಿಂತನೆಗಳು ಹುಟ್ಟಿಕೊಳ್ಳುವುದಿಲ್ಲ. ಯಾರು ಏನು ಮಾಡಿದರೂ ಅದರಲ್ಲಿ ಕೆಡುಕನ್ನೇ ಹುಡುಕುವ ಕೊಂಕು ತನಕ್ಕೆ ಅದು ಪ್ರಚೋದನೆ ಕೊಡುತ್ತದೆ.  ಮನೆಗೆ ಬಂದಾಗ ಬಾಗಿಲು ಮುಚ್ಚಿದ್ದರೆ , ಮತ್ಸರದ ಮನಸ್ಸು ಯೋಚಿಸುತ್ತದೆ ಯಾಕೆ ಬಾಗಿಲು ಮುಚ್ಚಿದ್ದಾರೆ? ಸರಿ ಬಂದರು ಎಂದು ಬಾಗಿಲು ತೆರೆದರೆ, ಯಾಕೆ ಬಾಗಿಲು ತೆರೆದರು? ಹೀಗೆ ದ್ವಂದ್ವಮಯ ಚಿಂತನೆ ಮತ್ಸರ ಎಂಬ ಭಾರದಿಂದ ಪ್ರಚೋದಿಸಲ್ಪಡುತ್ತದೆ. 

ನಮ್ಮ ಸುತ್ತ ಮುತ್ತ ಕೆಟ್ಟವರು ಇರುತ್ತಾರೆ, ಒಳ್ಳೆಯವರೂ ಇರುತ್ತಾರೆ.  ಯಾವಾಗಲೂ ಎಲ್ಲವೂ ಒಳ್ಳೆಯದೇ ಎಂದು ನಿರೀಕ್ಷಿಸುವುದೂ ತಪ್ಪು. ಕೆಟ್ಟದ್ದು ಅಂತ  ಅದನ್ನು ಚಿಂತಿಸಿಕೊಳ್ಳುತ್ತಾ ಇರುವುದು ತಪ್ಪು. ಕೆಟ್ಟದ್ದನ್ನು ದೂರವಿಡುತ್ತ ಒಳ್ಳೆಯದರ ಬಗ್ಗೆ ಯೋಚಿಸುತ್ತಾ ಇದ್ದರೆ ಮನಸ್ಸು ಮತ್ತಷ್ಟು ವಿಶಾಲಾವಾಗುತ್ತದೆ. ಯೋಚನೆಗೆಳು ಹಗುರವಾಗುತ್ತದೆ. ಇಕ್ಕಟ್ಟಾದ ಕಣಿವೆಯಲ್ಲಿ ರಭಸವಾಗಿ ಹರಿದನೀರು, ವಿಶಾಲವಾದ ಬಯಲಿಗಿಳಿದಂತೆ ತನ್ನ ರಭಸವನ್ನು ಕಡಿಮೆ ಮಾಡಿಕೊಳ್ಳುತ್ತದೆ. ಅದರಂತೆ ನಮ್ಮ ಯೋಚನೆಗಳು, ಮನಸ್ಸಿನ ವಿಶಾಲತೆ ಕಡಿಮೆಯಾದಂತೆ ಚಿಂತನೆಗಳ ಒತ್ತಡ ಅಧಿಕವಾಗುತ್ತಾ ಹೋಗುತ್ತದೆ. ಮತ್ಸರ ತುಂಬಿದ ಮನಸ್ಸು ಸಂಕುಚಿತವಾಗುತ್ತಾ ಮನಸ್ಸಿನ ಒತ್ತಡ ಹೆಚ್ಚಿಸುತ್ತ ಹೋಗುತ್ತದೆ. ಒಂದು  ಸಲ ಮತ್ಸರದ ಭಾವವನ್ನು  ದೂರವಿಟ್ಟು ಚಿಂತಿಸಿದಾಗ ಮತ್ಸರದ ಭಾರ ಅರಿವಾಗುತ್ತದೆ. ನಮ್ಮೊಳಗಿನ ಮತ್ಸರ ಮೇಲ್ನೋಟಕ್ಕೆ ಹೊರಗಿನವರಿಗೆ ತೊಂದರೆ ಕೊಟ್ಟರೂ ಅದರಿಂದ ಹೆಚ್ಚಿನ ತೊಂದರೆ ಅನುಭವಿಸುವುದು ನಾವುಗಳೇ ಆಗಿರುತ್ತೇವೆ. ಮತ್ಸರವೆಂದರೆ ಅದು ರೋಗವಿದ್ದಂತೆ, ಈ ರೋಗ ಬಾಧೆ ಇರುವಷ್ಟು ದಿನ ಮನಸ್ಸು ಮುಂದಕ್ಕೆ ಯೋಚಿಸುವುದಿಲ್ಲ. ಮಾತ್ರವಲ್ಲ ನಮ್ಮ ಬೆಳವಣಿಗೆಯೂ ಸಾಧ್ಯವಾಗುವುದಿಲ್ಲ. 

No comments:

Post a Comment