Friday, March 22, 2024

ಸುಪ್ರಜಾ ರಾಮ

                    ನಮ್ಮತಪ್ಪುಗಳನ್ನು, ನಮ್ಮ ಜವಾಬ್ದಾರಿಗಳನ್ನು ಮತ್ತೊಬ್ಬರ ಮೇಲೆ ನಾವು ನಮಗರಿಯದೇ ಹೊರಿಸಿಬಿಡುತ್ತೇವೆ. "ಕೌಸಲ್ಯಾ ಸುಪ್ರಜಾರಾಮ ಪೂರ್ವಾ ಸಂಧ್ಯಾ ಪ್ರವರ್ತತೆ. ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ"  ಈ ಶ್ಲೋಕದ ಅಂತರಾರ್ಥ  ಹಲವು ಇರಬಹುದು. ಆದರೂ ಕೌಸಲ್ಯಾ ಸುಪ್ರಜಾ ರಾಮ.... ಯೋಚಿಸಿ ರಾಮ ಅರಸನಾಗಿ ರಾಮ ರಾಜ್ಯದ ಒಡೆಯನಾಗಿ ಇರುವಾಗ ಅತನನ್ನು ಸುಪ್ರಜಾ ರಾಮ ಅಂತ ಕೊಂಡಾಡುವುದು ಅಲ್ಲೊಂದು ನಮ್ಮ ಜವಾಬ್ದಾರಿಯ ಉಲ್ಲೇಖವೂ ಸೂಕ್ಷ್ಮವಾಗಿ ಇದೆ. ಸುಪ್ರಜಾ ರಾಮ ಎನ್ನುವಾಗ ಅಲ್ಲಿ ರಾಮ ನೊಬ್ಬನೇ ಮಹಾ ಪುರುಷ ಅಲ್ಲ ಪ್ರಜೆಗಳೂ ಸುಪ್ರಜೆಗಳಾಗಿರುತ್ತಾರೆ. ರಾಮ ರಾಜ್ಯದಲ್ಲಿದ್ದ ಪ್ರಜೆಗಳೂ ಸುಪ್ರಜೆಗಳಾಗಿರುವಾಗ ಪರೋಕ್ಷವಾಗಿ ನಮಗೆ ರವಾನೆಯಾಗುವ ಸಂದೇಶವಾದರೂ ಏನು? ರಾಮನೊಬ್ಬ ಆದರ್ಶ ಪುರುಷನಾಗಿದ್ದ, ಜತೆಯಲ್ಲಿ ಪ್ರಜೆಗಳೂ ಸುಪ್ರಜೆಗಳಾಗಿದ್ದರು. ಅಂದರೆ ಈಗ ನಾವು ರಾಮ ರಾಜ್ಯ ಅಂತ ಬಯಸುತ್ತೇವೆ. ಅದೊಂದು ಆದರ್ಶ ರಾಜ್ಯ ಅಂತ ಯೋಚಿಸುತ್ತೇವೆ. ಆದರೆ ಅಲ್ಲಿ ನಾವು ಸುಪ್ರಜೆಗಳಾಗಿರುವ ಬಗ್ಗೆ ಯೋಚಿಸುವುದಿಲ್ಲ. ಕೇವಲ ಅರಸನೊಬ್ಬ ರಾಮನಂತೆ ಇದ್ದರೆ ಸಾಕು ಎಂದು ನಮ್ಮ ಚಿಂತನೆ ಸಂಕುಚಿತವಾಗಿಬಿಡುತ್ತದೆ. ಪ್ರಜೆಗಳು ಸುಪ್ರಜೆಗಳಾಗಿರುವಾಗ ರಾಜ್ಯವೂ ರಾಮ ರಾಜ್ಯವಾಗುತ್ತದೆ ಎಂಬುದು ಇಲ್ಲಿ ಪರೋಕ್ಷ ಸಂದೇಶ. 

                    ನಾವೊಬ್ಬರು ಉತ್ತಮರು ಮಿಕ್ಕವರೆಲ್ಲ ನಮ್ಮಷ್ಟು ಉತ್ತಮರಲ್ಲ. ನಾವು ಚಿಂತಿಸುವ ರೀತಿ ಇದು.   ನಮ್ಮ ದೌರ್ಬಲ್ಯಗಳನ್ನು ನಮ್ಮ ತಪ್ಪುಗಳನ್ನು ನಾವು ಆತ್ಮ ವಿಮರ್ಶೆ ಮಾಡುವ ಬದಲಾಗಿ ನಮ್ಮ ಎಲ್ಲ ಋಣಾತ್ಮಕ ವಿಷಯಗಳನ್ನು ಮತ್ತೊಬ್ಬರ ಮೇಲೆ ಹೊರಿಸಿ ನಾವು ಜವಾಬ್ದಾರಿಯಿಂದ ದೂರ ನಿಂತು ಬಿಡುತ್ತೇವೆ. ಕೇವಲ ರಾಮ ರಾಜ್ಯದ ಕಲ್ಪನೆಯಲ್ಲಿ ಆ ಕನಸಿನಲ್ಲಿ ನಾವು ಸುಪ್ರಜೆಗಳಾಗಬೇಕಾದ ಅನಿವಾರ್ಯತೆಯನ್ನು ಬದಿಗೆ ಸರಿಸಿ ರಾಮ ರಾಜ್ಯದ ಚಿಂತನೆಯನ್ನು ಮಾಡುವಾಗ ನಮ್ಮ ಜವಾಬ್ದಾರಿಗಳು ನಮಗೆ ಅರಿವಿಗೆ ಬರುವುದಿಲ್ಲ. ಸುಪ್ರಜೆಗಳ ಒಡೆಯ ರಾಮನನ್ನು ಎಚ್ಚರಿಸುವಾಗ  ಪೂರ್ವಾ ಸಂಧ್ಯಾ ಪ್ರವರ್ತತೆ ಎಂದು ಎಬ್ಬಿಸುವಾಗ, ಅಲ್ಲಿ ಸಂಧ್ಯೆ ಅಂದರೆ ಕತ್ತಲು ಮತ್ತು ಬೆಳಕಿನ ನಡುವಿನ ಸಮಯದಿಂದ ಮೊದಲಿನ ಕಾಲ ಪ್ರವರ್ತಿಸುವಾಗ ನಾವು ನಮ್ಮ ಕರ್ತವ್ಯವಾದ ನಿತ್ಯ ಆಹ್ನಿಕಗಳನ್ನು ಪೂರೈಸಿಕೊಳ್ಳಬೇಕು. ಆದರೆ ನಾವು ನಮ್ಮ ಕರ್ತ್ಯವ್ಯವನ್ನು ಮರೆತು ಯಾವುದೋ ಕಾಲದಲ್ಲಿ ಎದ್ದು ಉತ್ತಿಷ್ಠ ನರಶಾರ್ದೂಲ ಎಂದು ಪರಮಾತ್ಮನ ಮೇಲೆ ಜವಾಬ್ದಾರಿಯನ್ನು ಹೇರಿ ಆತನನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತೇವೆ. ಇಲ್ಲಿ ಪರಮಾತ್ಮನ ಎಚ್ಚರಕ್ಕಿಂತಲೂ ಮೊದಲು ನಮ್ಮದಾದ ಜವಾಬ್ದಾರಿಗಳನ್ನು ನಾವು ಮರೆಯುತ್ತಿದ್ದೇವೆ. 

                    ನಮ್ಮ ತಪ್ಪುಗಳು ನಮ್ಮ ಜವಾಬ್ದಾರಿಗಳು ಯಾವಾಗ ನಮಗೆ ಅರಿವಾಗುವುದಿಲ್ಲವೋ ಮತ್ತೊಬ್ಬರ ತಪ್ಪು ಜವಾಬ್ದಾರಿಗಳು ನಮಗೆ ಹೇಗೆ ಅರಿವಾಗಬೇಕು. ಹತ್ತಿರ ಇದ್ದ ಹೊಂಡ ಕಾಣದೇ ಇದ್ದರೆ ದೂರ ಇರುವ ಹೊಂಡ ಕಂಡರೂ ಫಲವೇನು. ಆ ಹೊಂಡದ ಬಳಿಗೆ ತಲುಪುವ ಮೊದಲು ಹತ್ತಿರದ ಹೊಂಡದಲ್ಲಿ ಬಿದ್ದು ಹೊರಳಾಡುತ್ತೇವೆ.  

No comments:

Post a Comment