Friday, March 29, 2024

ಅತಿಥಿ ಸತ್ಕಾರ

        ಒಂದು ಬಾರಿ ಉತ್ತರ ಭಾರತದ ಯಾರಾದರು ಒಬ್ಬರ ಮನೆಯ ಕಾರ್ಯಕ್ರಮಕ್ಕೆ ಹೋಗಿ ನೋಡಿ, ಅಲ್ಲಿ ನಮಗಾಗಿ ಅನ್ನ ಸಾಂಬಾರ್ ಮಾಡುವುದಿಲ್ಲ. ಬದಲಿಗೆ ಪೂರಿ ಕಚೋರಿ ರೋಟಿಯಷ್ಟನ್ನೇ ತಂದಿಡುತ್ತಾರೆ. ಸಾಂಬಾರ್ ಬದಲಿಗೆ ಸಬ್ಜಿ ಕರಿಗಳಷ್ಟೇ ಇರುತ್ತವೆ. ಆದರೆ ನಮ್ಮಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅವರೆಲ್ಲ ಒಬ್ಬಿಬ್ಬರು ಇದ್ದರೆ ಸಾಕು ಎಲ್ಲರಿಗೂ ಪೂರಿ ಪಲಾವ್ ತಿನ್ನಿಸಿಬಿಡುತ್ತೇವೆ. ಇದು ಅತಿಥಿ ಸತ್ಕಾರದ ಉತ್ತಮ ಗುಣವಿರಬಹುದು. ಆದರೆ ನಮ್ಮ ಪರಂಪರೆಯ ಭೋಜನ ಖಾದ್ಯಗಳು ನಮ್ಮ ನಡುವೇ ಇದ್ದು ಬಿಡುತ್ತದೆ. ನಮ್ಮ ಮಕ್ಕಳಿಗೇ ಅದು ಬೇಡವಾಗುತ್ತದೆ. 

ಈಗಿನ್ನು ಸಮಾರಂಭಗಳ ಸಮಯ. ಮದುವೆ ಮುಂಜಿ ಹೀಗೆ ಶುಭಕಾರ್ಯಗಳ ಸರದಿ. ಜತೆಗೆ ಅನಿರೀಕ್ಷಿತ ಎರಗುವ ಅಪರಕಾರ್ಯಗಳು. ಮತ್ತೆ ಎಂದಿನಂತೆ ವರ್ಷಾವಧಿ ಶ್ರಾಧ್ದ ಮುಂತಾದ ಅಪರ ಕಾರ್ಯಗಳು. ಹೆಚ್ಚಿನ ಕಾರ್ಯಕ್ರಮಗಳು ನಿರೀಕ್ಷಿತ. ಆಮಂತ್ರಣದ ಖಾತರಿ ಇದ್ದೇ ಇರುತ್ತದೆ. ಹೀಗಾಗಿ ಮೊದಲೇ ಸಿದ್ಧತೆಗಳು ಇದ್ದರೂ ಹೋಗುವುದಕ್ಕೆ ಬಹಳ ಕಷ್ಟ ಪಡಲೇ ಬೇಕಾದ ಅನಿವಾರ್ಯತೆ ಇದ್ದರೂ ,  ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಪ್ರತಿ ಕಾರ್ಯಕ್ರಮಕ್ಕೂ ಹಾಜರಾಗಲೇ ಬೇಕು ಎನ್ನುವ ಕಾಳಜಿಯಲ್ಲಿ ಹಾಜರಾಗುತ್ತಾರೆ.  ಇನ್ನು ಒಂದೆರಡು ಘಳಿಗೆಯಾದರೂ ಒಂದು ಸಲ ಮುಖ ತೋರಿಸಿ ಹಾಜರಾಗುವ ಹರಕೆಯನ್ನು ಸಲ್ಲಿಸುವವರು ಅಧಿಕ.ಹಲವು ಸಲ ಹಲವು ಕಾರ್ಯಕ್ರಮಗಳಿಗೆ ಒಂದೇ ದಿನ ಹಾಜರಾಗುವ ಇಕ್ಕಟ್ಟಿನ ಪರಿಸ್ಥಿತಿ. ಇದೆಲ್ಲದರ ನಡುವೆ ಕಾರ್ಯಕ್ರಮ ಹೋಗುವುದೆಂದರೆ ಈಗ ಯಾಂತ್ರಿಕತೆಯಾಗಿ ಬದಲಾಗಿದೆ. ಊಟದ ಒಂದೆರಡು ಘಳಿಗೆ ಮೊದಲು ಹೋಗಿ  ಸೌಖ್ಯವಾ?  ಆರಾಮಾನ? ಅಂತ ಕುಶಲ ಸಮಾಚಾರ ವಿಚಾರಿಸುವಷ್ಟು ಹೊತ್ತಿಗೆ ಊಟಕ್ಕೆ ಸಮಯವಾಗುತ್ತದೆ. ಇನ್ನು  ಊಟದ ಹರಕೆಯಾದ ಕೂಡಲೇ ಇನ್ನು ಕಾಣುವ ಅಂತ ಕಲ್ಯಾಣ ಮಂಟಪದವರು ಖಾಲಿ  ಮಾಡಿಸುವ ಮೊದಲೆ ಜಾಗ ಖಾಲಿ ಮಾಡಿ ಬಿಡುತ್ತೇವೆ. ಇಂದು ಕಾರ್ಯಕ್ರಮಗಳಲ್ಲಿ ಸಂಭ್ರಮ ಮರೆಯಾಗಿ ಯಾಂತ್ರಿಕತೆ ಹೆಚ್ಚು ಎದ್ದು ಕಾಣುತ್ತದೆ. ಈ ನಡುವೆ ಬಂದವರ ಬಗ್ಗೆ ವಿಚಾರಿಸುವ,  ಜತೆಗೆ ಯಾರು ಬರಲಿಲ್ಲ ಎಂದು ಗಮನಿಸುವ ಕೊಂಕುತನವೂ ಇಣುಕಿಬಿಡುತ್ತದೆ. ನಾವು ಹೋಗಿದ್ದೇವೆ ಅವರು ಬರಲಿಲ್ಲ ಎಂಬ ಲೆಕ್ಕಾಚಾರ ಕೂಡ ಆರಂಭವಾಗುತ್ತದೆ. ಕಾರ್ಯಕ್ರಮದ ಯಾಂತ್ರಿಕತೆ ಸರಿಯೋ ತಪ್ಪೋ ಅಂತೂ ನಮ್ಮ ಜೀವನ ಶೈಲಿಗಳಿಗೆ ಮತ್ತು ಮನೋಭಾವಕ್ಕೆ ಇದು ಅನಿವಾರ್ಯವಾಗಿದೆ.  ಕೊಡುವ ಕೊಳ್ಳುವ ತೂಕದ ಲೆಕ್ಕಾಚಾರದಲ್ಲಿ ನಮ್ಮ ಬಾಂಧವ್ಯ ಸ್ನೇಹ ಸಲುಗೆಗಳು ಕೇವಲ ಪ್ರಹಸನವಾಗಿಬಿಡುತ್ತದೆ. 

ತಮ್ಮ ತಮ್ಮ ಮನೆಯ ಕುಟುಂಬದ ಕಾರ್ಯಕ್ರಮದ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ನಿರೀಕ್ಷೆಗಳು ಇದ್ದೇ ಇರುತ್ತದೆ. ಸಾಕಷ್ಟು ಯೋಜನೆ ಮಾಡಿ ತಮ್ಮ ಕಾರ್ಯಕ್ರಮಗಳನ್ನು ಹೀಗೆಯೇ ಮಾಡಬೇಕು ಎನ್ನುವ ಕನಸನ್ನು ಕಟ್ಟಿಕೊಂಡಿರುತ್ತಾರೆ. ಬಂಧುಗಳನ್ನು ಹಿತೈಷಿಗಳನ್ನು ಮಿತ್ರರನ್ನು  ಸಾಕಷ್ಟು ಜ್ಞಾಪಿಸಿ  ಆಮಂತ್ರಣ ಕೊಡುತ್ತಾರೆ. ಬಂದವರನ್ನು ಮಾತನಾಡಿಸಿ ಉಪಚಾರ ಮಾಡಿ ಕಳುಹಿಸುವ ತನಕವೂ ಕಾರ್ಯಕ್ರಮದ ಒತ್ತಡ ಮುಗಿಯುವುದಿಲ್ಲ. ಅತಿಥಿ ಸತ್ಕಾರ ಎಂಬುದು ಯಾವುದೇ ಕಾರ್ಯಕ್ರಮದ ಅತಿ ಮುಖ್ಯ ಅಂಗವಾಗುತ್ತದೆ. ಪೂಜೆ ಪುನಸ್ಕಾರ, ವೈದಿಕ ಕ್ರಿಯಾಭಾಗಗಳು ಹರಕೆ ಸಲ್ಲಿಸುವ ಯಾಂತ್ರಿಕ ಕ್ರಿಯೆಯಾಗಿ ಬದಲಾದರೂ, ಅತಿಥಿ ಸತ್ಕಾರ ಹರಕೆ ಸಲ್ಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಯಾಕೆಂದರೆ ಇದೊಂದು ಪ್ರತಿಷ್ಠೆಯ ಪ್ರಶ್ನೆಯಾಗಿರುತ್ತದೆ. ಹಾಗಾಗಿ ಸತ್ಕಾರದ ಹಲವು ಮುಖಗಳನ್ನು ಕಾಣಬಹುದು. ಹಲವು ಸಲ ಪುರೋಹಿತರು ಗಂಟಲು ಶೋಷಣೆ ಮಾಡುವುದಷ್ಟೇ ಉಳಿದು, ಕರ್ತೃ ಅಥವಾ ಯಜಮಾನ ಅತಿಥಿಗಳ ನಡುವೆ ಇರಬೇಕಾದ ಅನಿವಾರ್ಯತೆ ಇರುತ್ತದೆ. 

ಅತಿಥಿ ಸತ್ಕಾರದಲ್ಲಿ ಅತಿ ಮುಖ್ಯ ಅಂಶವೆಂದರೆ ಭೋಜನ ಸತ್ಕಾರ. ಈಗೀಗ ಇದೊಂದು ಹೊಸ ಹೊಸ ಅವಿಷ್ಕಾರ ಪ್ರಯೋಗಗಳಿಗೆ ತುತ್ತಾಗುತ್ತಲೇ ಇದೆ. ಭೋಜನ ಆಹಾರ ಕ್ರಮ ಎಂಬುದು ದೇಶಾಚರದ ಜತೆಗೆ ಅದರಲ್ಲಿ ಒಂದು ಸಂಸ್ಕಾರ ಇರುತ್ತದೆ. ಇವತ್ತು ಈ ಸಂಸ್ಕಾರಗಳನ್ನುನಾವು ಮರೆಯುತ್ತಿದ್ದೆವೆ. ಮೊದಲೆಲ್ಲ ಹಳ್ಳಿಯ ಮನೆಗಳ ಕಾರ್ಯಕ್ರಮಗಳೆಂದರೆ ಒಂದು ಸಂಭ್ರವಿರುತ್ತಿತ್ತು. ಈಗ ಈ ಅವಿಷ್ಕಾರ ಪ್ರಯೋಗಗಳ ನಡುವೆ ಈ ಸಹಜವಾದ ಸಂಭ್ರಮ ಮರೆಯಾಗುತ್ತಿವೆ. ಅದಕ್ಕೆ ಹಲವಾರು ಕಾರಣಗಳಿವೆ ಅದು ಬೇರೆ. ಹಳ್ಳಿ ಹಳಿಯಲ್ಲಿಯೂ ಈಗ ಕಾರ್ಯಕ್ರಮಗಳು ಮನೆಯಂಗಳದಲ್ಲಿ ನಡೆಯುತ್ತಿಲ್ಲ.ಒಂದು ತಿಂಗಳ ಮೊದಲೇ ಕಾರ್ಯಕ್ರಮಕ್ಕೆ ಸಿದ್ದತೆ ಮಾಡುವಾಗ, ಮನೆಯಂಗಳವನ್ನು ಸಮತಟ್ಟು ಮಾಡಿ ಅಡಿಕೆ ಮರದ ಕಂಬ ನೆಟ್ಟು ಮಡಲು ಹಾಕಿ ಚಪ್ಪರ ಹಾಕುವಲ್ಲಿಂದ ತೊಡಗುವ ಸಂಭ್ರಮ ಮರೆಯಾಗಿದೆ.  ಮೊದಲೇ ಹಾಕುವ ಚಪ್ಪರದಲ್ಲಿ ಮನೆಯವರೆಲ್ಲ ಒಮ್ದೇ ಕಡೆ ಸೇರಿ ಅಲ್ಲೆ ಊಟ ಅಲ್ಲೆ ಜತೆಯಾಗಿ  ನಿದ್ರೆ ಅದೊಂದು ವಿಶಿಷ್ಟ ಸಂಭ್ರಮಗಳು ಇಂದಿನ ಜನಾಂಗಕ್ಕೆ ಅರಿವೆ ಇಲ್ಲ.  ಈಗಿನ ಮಕ್ಕಳಲ್ಲಿ ಹೇಳಿದರೆ ’ಹೌದಾ’  ಎಂದು ಉದ್ಗಾರ ತೆಗೆಯುತ್ತಾರೆ.  ಕಾರ್ಯಕ್ರಮದ ಮುನ್ನಾದಿನ ಪೆಂಡಾಲ್ ನವರು ಬಂದು ಶಾಮಿಯಾನ ಎಳೆದು ಬಿಗಿದರೆ ಚಪ್ಪರ ಸಿದ್ಧವಾಗಿಬಿಡುತ್ತದೆ. ಮರುದಿನ ಕಾರ್ಯಕ್ರಮದ ಗಡಿಬಿಡಿಯಲ್ಲಿ ಸಂಭ್ರಮಕ್ಕೆ ಸಮಯವೇ ಇರುವುದಿಲ್ಲ. 

  ಇಷ್ಟೆಲ್ಲ ಒಂದು ಬದಲಾವಣೆಯಾದರೆ ಆಹಾರ ಸತ್ಕಾರದ ರೂಪವೇ ಬದಲಾಗಿ ಹೋಗಿದೆ. ನಮ್ಮ ಸಾಂಪ್ರದಾಯಿಕ ಆಹಾರಗಳಾದ, ಅನ್ನ ಸಾರು ಪಲ್ಯ ಪಾಯಸಗಳು ನಾಮ್ಕೇ ವಾಸ್ತೆಯಾಗಿರುವುದು ಮಾತ್ರವಲ್ಲ ಹಲವು ಕಡೆ ಅದು ಮಾಯವಾಗಿದೆ. ಇಂದಿನ ಜನಾಂಗಕ್ಕೆ ಬಾಳೆ ಎಲೆಯಲ್ಲಿ ಪಾಯಸ ತಿನ್ನುವುದಕ್ಕೆ ಬರುವುದಿಲ್ಲ. ಅನ್ನ ಸಾಂಬಾರ್ ನ ಬದಲಾಗಿ ಇಂದು ಪಲಾವ್, ಪೂರಿ ಪರೋಟಗಳು  ರೋಟಿ ಇತರ ಉತ್ತರ ಭಾರತದ ತಿಂಡಿಗಳನ್ನು ಕಾಣಬಹುದು.  ಕುಳಿತು ತ್ ಇದಕ್ಕೆ ಕಾರಣ ಮೊದಲೆಲ್ಲ ನಮ್ಮೂರವರೇ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು. ಈಗ ಹಾಗಲ್ಲ ಉತ್ತರ ಭಾರತದವರು ಕೆಲವು ಮಂದಿಯಾದರೂ ಅವರಿಗೋಸ್ಕರ ಪೂರಿ ಪರೋಟಗಳನ್ನು ಮಾಡಿ ಅದನ್ನು ಉಳಿದವರಿಗೂ ಬಲವಂತದಿಂದ ತಿನ್ನಿಸುವುದನ್ನು ಕಾಣಬಹುದು. ಅಂದವಾಗಿ ಸಾವಕಾಶವಾಗಿ ಕುಳಿತು ಊಟ ಮಾಡುವ ಕ್ರಮ ಬದಲಾಗಿ ಒಂದು ಕೈಯಲ್ಲಿ ತಟ್ಟೆ ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದು ಸರ್ಕಸ್ ಮಾಡಿಕೊಂಡು ತಿನ್ನುವ ಪರಿಪಾಠ ಹೆಚ್ಚಾಗಿದೆ. ಇಂಥವರಿಗೆ ನೂರಾರು ಬಗೆಯ ಭಕ್ಷ್ಯ ತಿನಿಸುಗಳು. ಆಶ್ಚರ್ಯವಾಗುತ್ತದೆ.  ಈ ರೀತಿಯಲ್ಲಿ ನಮ್ಮದಲ್ಲದ ಸಂಸ್ಕಾರ, ಯಾವುದೋ ಊರಿನ ಆಹಾರ ಪದಾರ್ಥಗಳ ಬಳಕೆ ನಮ್ಮಲ್ಲಿ ಮಾತ್ರವೇ ಎಂದನಿಸುತ್ತದೆ. ಹಲವು ಸಲ ನಾನು ಗೋವ ಮುಂತಾದ ಕಡೆಗೆ ಹಲವು ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ನಾವು ದಕ್ಷಿಣ ಭಾರತದವರು ಅಂತ ಅಲ್ಲೇನು ನಮಗೆ ಪ್ರತ್ಯೆಕ ಅನ್ನ ಸಾಂಬಾರು ಮಾಡುವುದಿಲ್ಲ. ಅಲ್ಲಿನವರು ಏನು ವಾಡಿಕೆಯಲ್ಲಿ ತಿನ್ನುತ್ತಾರೋ ಅದನ್ನೆ ನಮಗೂ ಕೊಡುತ್ತಾರೆ. ಅಲ್ಲಿ ಕೊಡುವ ಸೂಪನ್ನು ಸಾರು ಅಂತ ತಿಂದು ತೃಪ್ತಿ ಪಟ್ಟುಕೊಂಡದ್ದೂ ಇದೆ. 

ಯಾವುದೋ ಊರಿನಿಂದ ಯಾರೋ ಬರುತ್ತಾರೆ, ಅತಿಥಿ ಸತ್ಕಾರದಲ್ಲಿ ಅವರಿಗೆ ಬೇಕಾದಂತೆ ಮಾಡಿ ಅವರನ್ನು ತೃಪ್ತಿಪಡಿಸಬೇಕು ಹೌದು, ಆದರೆ  ನಮ್ಮ ಆಹಾರ ಕ್ರಮಗಳನ್ನು ಸಂಪ್ರದಾಯಗಳನ್ನು ನಾವು ಅವರಂತೆ ಯಾಕೆ ತೋರಿಸುವುದಿಲ್ಲ?  ಎಲ್ಲದರಲ್ಲೂ ಅನುಕರಣೆ ಮಾಡಿ ನಮ್ಮತನವನ್ನು ನಾವೇಕೆ ದೂರ ಮಾಡಬೇಕು.? ಅದರಲ್ಲೂ ನಮ್ಮ ಬ್ರಾಹ್ಮಣರ ಊಟದದ ಅಪಸವ್ಯಗಳು ಬೇರೆ, ನಮ್ಮಲ್ಲಿ ಈರುಳ್ಳಿ ಬೆಳ್ಳುಳ್ಳಿ ಉಪಯೋಗಿಸುವುದಿಲ್ಲ.  ಹಾಗಾಗಿ ಅದೇ ಮುಖ್ಯವಾಗಿರುವ ಪಲಾವ್ ಮತ್ತು ಇತರ ಉತ್ತರದ ಕರಿಗಳು ಅದಿಲ್ಲದೇ ಮಾಡುವಾಗ ಇದನ್ನು ಯಾಕಾದರೂ ತಿನ್ನಬೇಕು ಎಂದು ಅನ್ನಿಸಿದರೆ ಅದು ದೌರ್ಭಾಗ್ಯ ಎನ್ನಬೇಕು. ಇಷ್ಟಾದರೂ ನಮ್ಮನ್ನು ನಾವು ಮೆಚ್ಚಿಕೊಳ್ಳಬೇಕು. ಇವುಗಳ ನಡುವೆಯು ಉತ್ತರ ಭಾರತದ ಶೈಲಿಯನ್ನು ನಾಚುವಂತೆ ನಮ್ಮದೇ ಸಂಪ್ರದಾಯಗಳನ್ನು ಪಾಲಿಸುವವರು ಅನೇಕರಿದ್ದಾರೆ. ಏನಿದ್ದರು ಬಂದ ಅತಿಥಿಗಳಿಗೆ ಅವರಿಗೆ ಬೇಕಾದ ಉತ್ತಮ ಆಹಾರ ಉಪಚಾರಗಳನ್ನು ಒದಗಿಸಿ ಅವರನ್ನು ತೃಪ್ತಿ ಪಡಿಸಬೇಕು, ಇದು ಉತ್ತಮ ಆತಿಥೇಯದ ಕರ್ತವ್ಯ. ನಮ್ಮಲ್ಲಿ ಬಂದು ಅವರು ಹಸಿದು ಹೋಗಬಾರದು ಎನ್ನುವುದು ನಿಜ. ಆದರೆ ನಮ್ಮದಲ್ಲದ ಅಹಾರಕ್ರಮಗಳನ್ನು ಪುರಸ್ಕರಿಸುವಾಗ ನಮ್ಮದೇ ಆದ ಆಹಾರ ಕ್ರಮಗಳಿಗೆ ತಿರಸ್ಕಾರ ಸಲ್ಲದು. ಅದನ್ನು ನಾವು ಗೌರವಿಸದೇ ಇದ್ದರೆ....ಮತ್ತೆ ಉತ್ತರದವರ ಅಭಿರುಚಿಗಳು ಮಾತ್ರವೇ ಉಳಿದುಕೊಳ್ಳಬಹುದು. 

        ಆದರು ನಮ್ಮಲ್ಲಿ ಉತ್ತಮ ರೀತಿಯ ಭೋಜನವನ್ನು ಉತ್ತಮ ಉಪಚಾರವನ್ನು ನೀಡಿ ಗೌರವಿಸುವವರು ಇದ್ದಾರೆ. ಅವರೆಲ್ಲ ಅನುಕರಣೀಯರು ಎಂಬುದರಲ್ಲಿ ಎರಡು ಮಾತಿಲ್ಲ. 


No comments:

Post a Comment