Friday, November 7, 2025

ಆವಳ ಮಠಾನ್ನು ಜವಣ ಗಮ್ಮತ

  "ಆವಳ ಮಠಾನ್ನು ಜವಣ ಗಮ್ಮತ.." ಮೊದಲು ನಮ್ಮೂರಲ್ಲಿ ಜನಜನಿತವಾದ ಮಾತು. ಅಂದರೆ ಆವಳ ಮಠದಲ್ಲಿ ಊಟ ಚೆನ್ನಾಗಿತ್ತು ಎಂದರ್ಥ. ಕರಾಡ ಬ್ರಾಹ್ಮಣರ ಮರಾಠ ಭಾಷೆ ಅದು. ಜವಣ ಹೇಳಿದರೆ ಕೊಂಕಣಿ ಭಾಷೆಯಂತೆ ಊಟ. ಆದರೆ ಹಲವರ ಕಲ್ಪನೆಯಲ್ಲಿ ಅದು ಕೇವಲ ಊಟ ಅಲ್ಲ. ಭರ್ಜರಿ ಭೂರಿ ಭೋಜನ. ಜವಣ ಅಂತ ಹೇಳಿದ ಕೂಡಲೇ ಹಲವರ ಬಾಯಲ್ಲಿ ಈಗಲೂ ನೀರು ಒಸರಿಬಿಡುತ್ತದೆ.  ಆ ದೇವಸ್ಥಾನದ ಮಹಿಮೆ ಅದು ಎಂದುಕೊಂಡರೂ, ನಮ್ಮ ವಿಪ್ರ ವೃಂದ ಊಟಕ್ಕೆ ಕೊಡುವ ಪ್ರಾಮುಖ್ಯತೆ ಅದು. ಪೂಜೆಯಂತೆ  ಊಟವೂ ಒಂದು ಸೇವೆಯಂತೆ.‌ ನಮ್ಮೂರಿನ ಹಲವು ದೇವಸ್ಥಾನದಂತೆ ನಮ್ಮ ಆವಳ ಮಠದ ಊಟಕ್ಕೂ ಒಂದು ವೈಶಿಷ್ಟ್ಯತೆ ಇದೆ. ಹೇಳಿ ಕೇಳಿ ಇದು ದುರ್ಗಾಪರಮೇಶ್ವರಿ ಸನ್ನಿಧಾನ, ಅಂದರೆ ಸಾಕ್ಷಾತ್ ಅನ್ನ ಪೂರ್ಣೆಯ ಕ್ಷೇತ್ರ. ಹಾಗಿರುವಾಗ ಅಲ್ಲಿ ಅನ್ನ ಎಂದರೆ ಅದು ನೈವೇದ್ಯ. ಇಲ್ಲಿ ಬಾಳೆ ಎಲೆಗೆ ಬಡಿಸುವಾಗಲೂ ಕೇಳುವುದು, ನೈವೇದ್ಯ ಬೇಕೆ? ಅಂತ  ಕೇಳುತ್ತಾರೆ. ಇಲ್ಲಿ ನಿತ್ಯದಲ್ಲೂ ಮಧ್ಯಾಹ್ನ ಮತ್ತು ರಾತ್ರಿಯ  ಮುಖ್ಯ ನೈವೇದ್ಯವೇ ಅನ್ನ. ಹಾಗಾಗಿ ಇಲ್ಲಿ‌ ಪ್ರತಿನಿತ್ಯವೂ ಊಟ ಇರಲೇಬೇಕು. 


ಸಾಂಪ್ರದಾಯಿಕವಾಗಿ , ಕೊಪ್ಪರಿಗೆಯಲ್ಲಿ ತಯಾರಿಸುವ ಇಲ್ಲಿನ ನೈವೇದ್ಯದ ಸುವಾಸನೆಯೇ ಹಸಿವನ್ನು ಕೆರಳಿಸಿ ಬಿಡುತ್ತದೆ.  ಉತ್ಸವಾದಿಗಳಲ್ಲಿ ವಿಶೇಷವಾಗಿ ಸಿದ್ದಪಡಿಸುವ ಊಟದ ವೈಶಿಷ್ಟ್ಯತೆ ಒಂದಾದರೆ,   ಇಲ್ಲಿನ ನಿತ್ಯದ ಅಡುಗೆಯ ರುಚಿಯೇ ಹಲವು ಸಲ ಅದರ ಸರಳತೆಯಿಂದ ಬೇರೆ ರೀತಿಯಲ್ಲಿ ಇಷ್ಟವಾಗುತ್ತದೆ. ಕೇವಲ ಚಟ್ನಿ ತಂಬುಳಿ ಅಥವಾ ತುಂಬ ಸರಳವಾದ ಸಾರು ಇವುಗಳ ರುಚಿಗೆ ಮಾರು ಹೋಗದವರಿಲ್ಲ. ಆಡಂಬರದ ಭೂರಿ ಭೋಜನಕ್ಕಿಂತಲೂ ಈ ಸರಳ ಸಾತ್ವಿಕ ಆಹಾರವನ್ನು ಸವಿಯುವುದೆಂದರೆ ಅದು ನಿಜವಾಗಿಯೂ ಅನ್ನ ಪೂರ್ಣೆಯ ಪ್ರಸಾದ. ಇದರ ವೈಶಿಷ್ಟವೆಂದರೆ ಹೊಟ್ಟೆ ತುಂಬ ಉಂಡರೂ ದೇವಸ್ಥಾನದ ಹೊರಾವರಣ ದಾಟಿ ಮುಂದೆ ಬರಬೇಕೆಂದರೆ ಅದು ಕರಗಿ ಬಿಟ್ಟಿರುತ್ತದೆ. ಒಂದಿಷ್ಟೂ ಕರುಳಿಗೆ ಶ್ರಮವೆನಿಸದ ಈ ಅನ್ನ ನೈವೇದ್ಯವೂ ಒಂದು ಮಹಿಮಾನ್ವಿಶೇಷವಾಗಿರುತ್ತದೆ. 

ದೇವಸ್ಥಾನದಲ್ಲಿ ಬಲಿವಾಡು ಸೇವೆ ಅತ್ಯಂತ ಮಹತ್ವ.  ಅಕ್ಕಿ ತೆಂಗಿನಕಾಯಿ  ಕಾಣಿಕೆಯನ್ನು ಸಲ್ಲಿಸಿ ಅನ್ನ ಪ್ರಸಾದ ಸ್ವೀಕರಿಸುವುದೆಂದರೆ ಅದೊಂದು ಮಹತ್ವದ ಸರಳ ಸೇವೆ. ಮೊದಲೆಲ್ಲ ದೇವಸ್ಥಾನದ ಪರಿಸರದಲ್ಲಿ ಅಥವಾ ತೋಟದಲ್ಲಿ ಸಿಗುವ ಗೆಡ್ಡೆ ಗೆಣಸು ಸೊಪ್ಪು ತರಕಾರಿಗಳೇ ಇಲ್ಲಿ ಅಡುಗೆಗೆ ಬಳಸುತ್ತಿದ್ದರು. ಹಲವು ಸಲ ಬರುವ ಭಕ್ತರಿಗೆ ಇಂತಹ ಅಡುಗೆ ಮತ್ತು ಅದರ ರುಚಿ ಸ್ವಾದಕ್ಕೆ ಅಚ್ಚರಿಯಾಗುತ್ತಿತ್ತು. ಈ ಗೆಡ್ಡೆಗೆಣಸಿನಲ್ಲೂ ಹಸಿರೆಲೆ ಚಿಗುರಲ್ಲಿ  ಈ ಬಗೆಯ ರುಚಿ ಸಾಧ್ಯವಾ ಅಂತ ಅಚ್ಚರಿಪಡುತ್ತಿದ್ದರು. ಮೊದಲೆಲ್ಲ ಇಲ್ಲಿ ಸಾಂಪ್ರದಾಯಿಕ ತರಕಾರಿಗಳೇ ಅಡುಗೆಗೆ ಉಪಯೋಗಿಸುತ್ತಿದ್ದರು. ಇಲ್ಲೇ ಪರಿಸರದಲ್ಲಿ ಅಥವಾ ದೇವಸ್ಥಾನದ ಭಕ್ತರ ಮನೆಗಳಲ್ಲಿ ಬೆಳೆಸುತ್ತಿದ್ದ ಕುಂಬಳ ಬಾಳೆ, ತೊಂಡೆ ಬೆಂಡೆ ಹೀಗೆ ಇವುಗಳನ್ನು ಮೀರಿ ವಾಣಿಜ್ಯ ತರಕಾರಿಗಳಾದ ಬಟಾಟೆ ಟೊಮೆಟೊಗಳನ್ನು ಇಲ್ಲಿ ಕಾಣುವುದಕ್ಕೆ ಸಾಧ್ಯವಿರಲಿಲ್ಲ. ಯಾಕೆಂದರೆ ಆ ಕಾಲದಲ್ಲಿ ಇದು ಸುಲಭದಲ್ಲಿ ಲಭ್ಯವೂ ಇರಲಿಲ್ಲ, ಮತ್ತೊಂದು ಇದಕ್ಕೆ ಅನಾವಶ್ಯಕ ವೆಚ್ಚ.  ಮಾತ್ರವಲ್ಲ ಆ ಕಾಲದ ಜನರಿಗೆ ಇದರಲ್ಲಿ ಯಾವ ವೈಶಿಷ್ಟ್ಯವೂ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಹಲವು ಕಾರಣಗಳಿಂದ ಅದು ಅನಿವಾರ್ಯವೂ ಹೌದು. ನವರಾತ್ರಿಯ ಒಂಭತ್ತು ದಿನಗಳಲ್ಲಿ ಬೇರೆ ಬೇರೆ ಮನೆತನದವರು ಆ ಒಂದು ದಿನದ ಖರ್ಚು ವೆಚ್ಚಗಳನ್ನು ನೋಡಿ ಬೇಕಾದ ಅಕ್ಕಿ ತೆಂಗಿನ ಕಾಯಿ ತರಕಾರಿ ಒದಗಿಸುತ್ತಿದ್ದರು. ಈಗಲೂ ಅದೇ ಪದ್ಧತಿ ಅಷ್ಟೋ ಇಷ್ಟು ಇದ್ದರೂ  ಈಗ ತರಕಾರಿಗಾಗಿ ಸಾಕಷ್ಟು ಹಣವನ್ನು ವ್ಯಯಿಸುವ ಅನಿವಾರ್ಯತೆ ಇದೆ. ಕಾರಣ ಈಗ ಕೃಷಿ ಮಾಡುವ ಹೊಲ ತೋಟದ ವಿಸ್ತಾರ ಕಡಿಮೆಯಾಗಿದೆ. ಮನೆ ಮನೆಗಳಲ್ಲಿ ತರಕಾರಿ ಬೆಳೆಯುವ ಪರಿಸ್ಥಿತಿ ಎಂದೋ ದೂರಾಗಿದೆ. ಆದರೂ ಇಲ್ಲಿನ ಊಟದ ಮಹತ್ವ ಮೊದಲಿಗಿಂತಲೂ ಅಧಿಕವಾಗಿದೆ. ಹಾಗಾಗಿ ಇಲ್ಲಿ ಬರುವವರ ಭಕ್ತವೃಂದವೇ ಕಾರಣ.  ಬಾಲ್ಯದಲ್ಲಿ ಈ ದೇವಸ್ಥಾನಕ್ಕೆ ಹೋಗಬೇಕಾದರೆ ಸುತ್ತಲಿನ ಹೊಲ ಗದ್ದೆ ತೋಟ ಹಾದು ಹೋಗಬೇಕಿತ್ತು. ಆಗ ಈ ಗದ್ದೆಯ ಹಸುರಿನ ನಡುವೆ ಹೆಜ್ಜೆ ಹಾಕಿ ನಡೆದುಕೊಂಡು ಹೋಗುವುದೇ ಒಂದು ಸಂಭ್ರಮ. 

ಹಸಿವಿನ ಶಮನಕ್ಕೆ ನಮ್ಮಲ್ಲಿ ವಿಶೇಷ ಮಹತ್ವವಿದೆ. ಹಾಗೆ ನೋಡಿದರೆ ನಮಗೆ ಬಾಧಿಸುವ ಪ್ರತೀ ಬಾಧೆಯ ಶಮನವೂ ನಮ್ಮ ಸಂಸ್ಕೃತಿಯಲ್ಲಿ ಪ್ರಾಧಾನ್ಯತೆಯನ್ನು ಪಡೆದಿದೆ. ರೋಗ ಬಾಧೆಯಾಗಿರಬಹುದು, ದಾಹ ಬಾಧೆಯಾಗಿರಬಹುದು ಇವುಗಳನ್ನು ಶಮನ ಮಾಡುವುದನ್ನು ದಾನರೂಪದಲ್ಲಿ ಸೇವಾ ರೂಪದಲ್ಲಿ ಕಂಡುಕೊಂಡ ಸಂಸ್ಕೃತಿ ನಮ್ಮದು. ಮಲಯಾಳಂ ನಲ್ಲಿ ಒಂದು ಮಾತಿದೆ ಅತ್ತಾಯ ಪಟ್ಟಿನಿಕ್ಕಾರ್ ಉಂಡೋ ಅಂತ . ಇದನ್ನು ರಾತ್ರಿ ಮನೆಯ  ಹೊರಗಿನ ಬಾಗಿಲು ಹಾಕುವಾಗ ಕೇಳುವ ಸಂಪ್ರದಾಯ. ಅಂದರೆ ಹೊರಗೆ ಯಾರಾದರೂ ಹಸಿವಾದವರು ಇದ್ದಾರೆಯೇ ? ನಮ್ಮ ಹಸಿವನ್ನು ನೀಗಿಸುವ ಮೊದಲು ಬೇರೆ ಹಸಿವಿನಿಂದ ಬಳಲುವವರ ಬಾಧೆಯನ್ನು ಮೊದಲು ಪರಿಹರಿಸಬೇಕು. ಇದು ನಮ್ಮ ನಮ್ಮ ಸಂಸ್ಕಾರ. ಹಾಗಾಗಿಯೇ ನಮ್ಮ ದೇವಸ್ಥಾನಗಳಲ್ಲಿ  ಹೊತ್ತು ಹೊತ್ತಿಗೆ ಪ್ರತಿ ನಿತ್ಯವೂ ಭೋಜನ ಪ್ರಸಾದವಿರುತ್ತದೆ.  ತೀರಾ ಹಿಂದುಳಿದ ಒಂದು ಸಣ್ಣ ಹಳ್ಳಿಯ ಈ ದೇವಸ್ಥಾನದಲ್ಲೂ ಇದು ಹಿಂದಿನಿಂದಲೂ ಆಚರಣೆಯಲ್ಲಿ ಇದೆ. 

ಸುಮಾರು ಅರ್ಧ ಶತಮಾನಗಳ ಕಾಲ ಇಲ್ಲಿನ ಭೋಜನ ಪ್ರಸಾದವನ್ನು ಸ್ವೀಕರಿಸಿದ್ದೇನೆ. ಪ್ರತಿ ಬಾರಿಯೂ ಇಲ್ಲಿ ಒಂದು ಹಿಡಿಯಷ್ಟಾದರೂ ಪ್ರಸಾದವನ್ನು ಸ್ವೀಕರಿಸುವಲ್ಲಿ ಸಿಗುವ ತೃಪ್ತಿಯನ್ನು ಅನುಭವಿಸಿದ್ದೇನೆ. ಬುದ್ದಿ ಬಲಿಯುವ ಮೊದಲಿನ ಬಾಲ್ಯದಲ್ಲಿ ಇಲ್ಲಿ ಉಂಡ ಊಟದಂತೆ ಅದು ಈಗಲೂ ಅದೇ ಅನುಭವನ್ನು ನೀಡುತ್ತ ಬಂದಿದೆ. ಈಗಲೂ ಇಲ್ಲಿನ ನೈವೇದ್ಯವನ್ನು ಉಂಡಮೇಲೆ ಅದೇ ಬಗೆ ತೃಪ್ತಿಯನ್ನು ಅನುಭವಿಸುವಾಗ ಆವಳ ಮಠದ ಊಟ ಗಮ್ಮತ್ತಾಗಿದೆ ಎನ್ನುವಲ್ಲಿ ಯಾವ ಅತಿಶಯವೂ ಇರುವುದಿಲ್ಲ. ಅದು ಇಲ್ಲಿ ಸಹಜವಾದ ಕ್ಷೇತ್ರಗುಣ. ದಿವ್ಯ ಪ್ರಸಾದದ ಮಹಿಮೆ ಅಂದಿನಿಂದ ಇಂದಿನವರೆಗೂ ಅದರ ಅನುಭವ ಅವರ್ಣನೀಯ.  ಎಲ್ಲ ವೈಶಿಷ್ಟ್ಯಗಳಂತೆ ಇಲ್ಲಿನ ಅನ್ನ ಪ್ರಸಾದದ ಊಟವೂ ಒಂದು ದೊಡ್ಡ ಆಕರ್ಷಣೆ. ಒಂದು ಹೊತ್ತು ಗೋಪುರದಲ್ಲಿ ಕುಳಿತು ಉಂಡು ತೃಪ್ತರಾಗುವುದೆಂದರೆ ಅದು ಪೂರ್ವ ಜನ್ಮದ ಸುಕೃತದ ಫಲ. 

ಬಾಲ್ಯದ ದಿನಗಳಲ್ಲಿ ದೇವಸ್ಥಾನ ಎಂದು ಕಲ್ಪನೆಗೆ ಬಂದರೆ ಚಿತ್ತಭಿತ್ತಿಯಲಿ ಮೊದಲು ಚಿತ್ರಣವಾಗುವುದು ನಮ್ಮ ಆವಳ ಮಠ. ದೇವಸ್ಥಾನ ಎಂದು ಹಿರಿಯರು ತೋರಿಸಿದ್ದೇ ಇಲ್ಲಿಯ ಗರ್ಭಗುಡಿ ಗೋಪುರಗಳನ್ನು. ಪ್ರಸಾದವೆಂದರೆ ಇಲ್ಲಿನ ಸರಳ ಸಾತ್ವಿಕ ಅನ್ನ ನೈವೇದ್ಯವನ್ನು. ಇಂದಿಗೂ ಆ ಪಾವಿತ್ರ್ಯತೆ ಆ ಗೌರವ ಹಾಗೇ ಉಳಿದುಕೊಂಡಿದೆ ಎಂದರೆ ಅದು ನಡೆದುಕೊಂಡು ಬಂದ ರೀತಿಯಲ್ಲಿದೆ. ತಲೆ ಮಾರು ಬದಲಾಗಿರಬಹುದು. ಇಲ್ಲಿನ ವ್ಯವಸ್ಥೆಗಳು ಹಾಗೆ ಹೀಗೆ ಅಂತ ಬದಲಾಗಿರಬಹುದು. ಆದರೆ ಅನ್ನ ಪ್ರಸಾದದ ಪಾವಿತ್ರ್ಯತೆ ಅದು ಬದಲಾಗಿಲ್ಲ. 

ಈಗ ಕಾಲ ಬಹಳಷ್ಟು ಬದಲಾಗಿದೆ. ನಮ್ಮ ಕಣ್ಣೆದುರೇ ಎರೆಡೆರಡು ತಲೆ ಮಾರು ಸಂದು ಹೋಗಿದೆ. ಹಾಗಂತ ಸಂದು ಹೋದವರು ಬಿಂಬಿಸಿ ಹೋದ ನೆನಪುಗಳು ಹಾಗೇ ಉಳಿದಿವೆ. ಅನ್ನ ಪ್ರಸಾದದ ಮುಷ್ಠಿಯೊಳಗಿನ ತುತ್ತುಗಳಂತೆ ಅವುಗಳೂ ಅಸಂಖ್ಯ. ತಿನ್ನುವ ಪ್ರತಿ ಧಾನ್ಯದಲ್ಲೂ ತಿನ್ನುವಾತನ ಹೆಸರು ಇರುತ್ತದೆಂಬ ನುಡಿಯಂತೆ, ಇಲ್ಲಿ ತಿನ್ನುವ ಪ್ರತಿ ತುತ್ತಿನಲ್ಲಿ ಸಂದು ಹೋದ ನೆನಪುಗಳು ಬರೆಯಲ್ಪಟ್ಟಿದೆ. ತಿಂದ ಅನ್ನ ಕರಗಿ ಹೋದರೂ ನೆನಪು ಅದೆಂದಿಗೂ ಮಾಸುವುದಿಲ್ಲ. ಮೊದಲು  ಒಂದು ಹೊತ್ತಿನ ಊಟ ಮಾಡುವುದಕ್ಕೂ ತತ್ವಾರ ಇತ್ತು. ಆಗ ಇಂತಹ ದೇವಾಲಯಗಳು ಅಷ್ಟೋ ಇಷ್ಟೋ ಹಸಿವನ್ನು ನೀಗಿಸುತ್ತಿತ್ತು. ಇಂದು ಅಂತಹ ಪರಿಸ್ಥಿತಿ ಬಹಳ ಕಡಿಮೆ. ಆದರೆ ವಿಪರ್ಯಾಸವೆಂದರೆ ಇಂದು ದೇವಸ್ಥಾನದ ಇಂತಹ ವ್ಯವಸ್ಥೆಗಳ ವ್ಯವಹಾರ ಬಹಳ ಪರಿಶ್ರಮದಿಂದ ಕೂಡಿರುತ್ತದೆ. ನಿತ್ಯ ಪೂಜೆ ಅಥವಾ ಇನ್ನಿತರ ಕೆಲಸಗಳ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದೆಂದರೆ ಹಲವಾರು ತ್ಯಾಗಗಳಿಗೆ ಸಿದ್ದರಾಗಬೇಕಾಗಿದೆ. ನಿತ್ಯ ಪೂಜೆಯನ್ನು ಒಪ್ಪಿಕೊಂಡ ಅರ್ಚಕನಿಗೆ ತನ್ನ ಸ್ವಂತ ಕುಟುಂಬದ ಹಲವು ಕಾರ್ಯಗಳಿಗೆ ಗಮನಹರಿಸುವುದಕ್ಕೆ ಅದಕ್ಕೆ ಸಮಯವನ್ನು ವಿನಿಯೋಗಿಸುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಇದಕ್ಕೆ ರಜೆ ಇಲ್ಲ. ಮೂರು ಹೊತ್ತು ಪೂಜೆ ಅದಕ್ಕೆ ಹೊಂದಿಕೊಂಡ ಕಾರ್ಯಗಳು ನಡೆಯಬೇಕಾಗಿರುವುದು ದೇವತಾ ಕಾರ್ಯದ ಅಗತ್ಯವಾಗಿರುತ್ತದೆ. ಹಾಗಾಗಿ ಇದನ್ನು ಒಪ್ಪಿಕೊಳ್ಳುವವರೂ ಇರುವುದಿಲ್ಲ. ಯಾವುದೋ ಸಂಬಂಧಗಳಿಂದ ಶ್ರಧ್ದಾ ಭಕ್ತಿಯಿಂದ ಅದನ್ನು ಕರ್ತವ್ಯ ಎಂಬಂತೆ ನಿರ್ವಹಿಸುವ ಕಾರಣ ಸೂಕ್ತವಾಗಿ ಇವುಗಳು ನಿರಂತರ ನಡೆದುಕೊಂಡು ಹೋಗುತ್ತವೆ. ಇದು ಆದಾಯದ ಮೂಲವಾಗಿ ಪರಿಗಣಿಸಲ್ಪಡುವುದೇ ಇಲ್ಲ. ಹೆಚ್ಚಿನ ಕಡೆಗಳಲ್ಲಿ ತಟ್ಟೆಕಾಸು ಎಂಬ ಪ್ರತೀತಿ ಇದೆ. ಅದು ಅರ್ಚಕರ ಆದಾಯ. ಆದರೆ ಇಲ್ಲಿ ಬರುವ ಎಲ್ಲಾ ಸಂಗ್ರಹವೂ ನಿಷ್ಕಾಮ ಕರ್ಮದ ಪ್ರತೀಕವಾಗಿ ದೇವಸ್ಥಾನದ ಭಂಡಾರವನ್ನು ಸೇರುತ್ತದೆ. ಈ ಕ್ಷೇತ್ರದ ವೈಶಿಷ್ಟ್ಯತೆಗಳಲ್ಲಿ ಇದೂ ಒಂದು. ಎಲ್ಲರೂ ಸೇರಿಕೊಂಡು ಎಲ್ಲರೂ ಒಂದಾಗಿ ಕೇವಲ ದೈವಾನುಗ್ರಹದ ಫಲಾಪೇಕ್ಷೆಯನ್ನು ಮಾತ್ರ ಬಯಸಿ ನಡೆಸಿಕೊಡುವ ಸೇವೆಯಲ್ಲಿ ಒಂದು ಧನ್ಯತೆ ಇದೆ. ಈ ಧನ್ಯತೆಗೆ ಒಂದು ಬಳಗವೇ ಇದೆ. 


Sunday, November 2, 2025

ದೇವರು ಎಂಬ ವಿಶ್ವಾಸ



 " ದೇವರು ಧರ್ಮವನ್ನು ಏನೆಂದು ತಿಳಿಯದೇ ಅದಕ್ಕೆ ಹೋರಾಡುತ್ತೇವೆ. "


ಮೊನ್ನೆ ನಮ್ಮ ಗ್ರಾಹಕರೊಬ್ಬರನ್ನು, ನಮ್ಮ ವೃತ್ತಿ ರೀತಿಯಲ್ಲಿ ಹೇಳುವುದಾದರೆ ನಮ್ಮ ಕ್ಲೈಂಟ್ (client) , ತಿಂಗಳ ಜಿ ಎಸ್ ಟಿ ಪಾವತಿಸುವಂತೆ ಕರೆ ಮಾಡಿದೆ. ಪ್ರತೀ ತಿಂಗಳು ನಾನು ಹೇಳುವ ಮೊದಲೇ ಕೃತ್ಯ ನಿಷ್ಠೆಯಿಂದ ಪಾವತಿಸುತ್ತಿದ್ದರು. ಮಾತ್ರವಲ್ಲ ಅವರು ಅನ್ಯ ಧರ್ಮಿಯರು.   ಹಿಂದುವಲ್ಲದವರನ್ನು ಅನ್ಯಧರ್ಮಿಯರು ಅಂತ ನನ್ನ ವೈಯಕ್ತಿಕ ನೆಲೆಯಲ್ಲಿ ಕರೆಯಬೇಕು. ಆದರೆ ವಾಡಿಕೆಯಲ್ಲಿ ಹಾಗಿಲ್ಲ ಎಂಬುದು ಮತ್ತೊಂದು ಸಂಗತಿ.  ನಮ್ಮ ಹತ್ತಿಪ್ಪತ್ತು ವರ್ಷಗಳ ವ್ಯಾವಹಾರಿಕ ಸಂಭಂಧ. ಬಹುಶಃ ನಾನು ಬೆಂಗಳೂರಿಗೆ ಬಂದಂದಿನಿಂದ ಇವರು ನನ್ನ ಗ್ರಾಹಕರು. ನನ್ನಿಂದ ಹಲವಾರು ಸರಕಾರಿ ಸಂಬಂಧೀ ಕೆಲಸಗಳನ್ನು ಮಾಡಿಸುತ್ತಾರೆ. ಹಾಗಾಗಿ ಅವರ ಜಿಎಸ್ ಟಿ ಕೆಲಸವನ್ನು ನಾನೇ ಮಾಡುತ್ತಿದ್ದೇನೆ.   ಒಳ್ಳೆಯ ವ್ಯಕ್ತಿ. ಹಾಗಾಗಿಯೇ ಈ ದೀರ್ಘಕಾಲೀನ ವ್ಯವಹಾರ ಮುಂದುವರೆದಿದೆ. ಅವರೇ ಹೇಳುವಂತೆ ನನ್ನ ಮೇಲೆ ಅವರಿಗೆ ಅಪರಿಮಿತ ವಿಶ್ವಾಸವಿದೆ. ನನಗೆ ಕೊಡುವ ಸೇವಾ ಶುಲ್ಕದಲ್ಲಿ ಯಾವುದೇ ಚರ್ಚೆ ತಕರಾರು ಇಲ್ಲದೇ ಪಾವತಿಸುತ್ತಿದ್ದಾರೆ.   ಅವರದೊಂದು ಮಾಂಸಾಹಾರಿ ಹೋಟೆಲು.  ಮೊನ್ನೆ  ಕರೆ ಮಾಡಿದಾಗ ಹೇಳಿದರು, " ಸರ್,  ಹಬ್ಬಗಳ ಸರಣಿ...ಸಹಜವಾಗಿ ನಮಗೆ ವ್ಯಾಪಾರ ಬಹಳ ಕಡಿಮೆ ಇದೆ. ಅದನ್ನು ಹೇಗಾದರೂ ನಿಭಾಯಿಸಬಹುದು, ಆದರೆ ಈ ದೇಣಿಗೆಯ  ಹಾವಳಿ ತುಂಬಾ ಇದೆ ಸರ್, ಗಲ್ಲಿ ಗಲ್ಲಿಯಲ್ಲಿ ಗಣೇಶ ಕೂರಿಸುತ್ತಾರೆ, ದಸರ ದೀಪಾವಳಿ ಅಂತ ಮಾಡುತ್ತಾರೆ. ಬಂದು ಹಣ ಕೇಳುತ್ತಾರೆ. ನನ್ನ ಧರ್ಮ ಬೇರೆ, ಆದರೂ ನನಗೆ ಕೊಡಬಾರದು ಅಂತೇನಿಲ್ಲ. ದೇವರು ಹೇಗಿದ್ದರೂ ಅದು ದೇವರ ಕೆಲಸ ಅಂತ ಕೊಡಬಹುದು. ಆದರೆ, ಅವರು ಐದು ಸಾವಿರ ಹತ್ತು ಸಾವಿರ ಅಂತ ಕೇಳಿದರೆ ನಾನು ಹೇಗೆ ಕೊಡುವುದು.? ಮೊದಲೇ ವ್ಯಾಪಾರ ಕಡಿಮೆ. ನನ್ನ ಸಾಮಾರ್ಥ್ಯಕ್ಕೆ ಅನುಸಾರವಾಗಿ ಅಷ್ಟೋ ಇಷ್ಟೋ ಕೊಟ್ಟರೆ ಹೋಗಲಿ ಅನ್ನಬಹುದು ಆದರೆ ಇಷ್ಟೇ ಕೊಡಬೇಕು ಅಂತ ದೌರ್ಜನ್ಯ ಮಾಡಿದರೆ ಹೇಗೆ? ನೋಡಿ ಜಿಎಸ್ ಟಿ ಕಟ್ಟೋದಕ್ಕೆ ನಾನು ಸಾಲ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಇದೆ. " 

ಗಣೇಶ ಹಬ್ಬಕ್ಕೂ ಇಮಾಂ ಸಾಬಿಗೂ ಎತ್ತಣಿಂದ ಸಂಬಂಧ ಅಂತ ಹಳೆಯ ಮಾತು ಇದೆ. ಇದು ಅದೇ ತರಹ. ನಾವು ಧರ್ಮದಿಂದ ದೂಷಿಸಬಹುದು. ಆದರೆ ನಮ್ಮ ಧರ್ಮಾಚರಣೆಗೆ ಅನ್ಯ ಧರ್ಮೀಯರಿಂದ ದೇಣಿಗೆ ಸಂಗ್ರಹಿಸುವುದು ತಪ್ಪು.  ಹೋಗಲಿ ಕೇಳಿದರೂ..ಇಷ್ಟೇ ಕೊಡಬೇಕು ಎಂದು ದಬ್ಬಾಳಿಕೆ ಮಾಡುವುದು ಎಷ್ಟು ಸರಿಯಲ್ಲ.  ದೈವ ವಿಶ್ವಾಸ  ನಂಬಿಕೆ ಎಂಬುದು ತೀರ ವೈಯಕ್ತಿಕ ವಿಚಾರ. ಒಬ್ಬನನ್ನು ಅವನ ವೈಯಕ್ತಿಕ ವಿಚಾರವನ್ನು ಹೇಳಿ ಅವನನ್ನು ಅಪರಾಧಿಯನ್ನಾಗಿಯೋ ಅಥವಾ ದೂರೀಕರಿಸುವುದು ಸರಿಯಲ್ಲ. ಇದು ನನ್ನ ಅಭಿಮತ. ವ್ಯಕ್ತಿಗತ ವಿಚಾರಗಳು ಸ್ವಭಾವಗಳು ಪರ ಪೀಡನೆಯಾಗದೇ ಇದ್ದರೆ ಅವರನ್ನು ದೂರ ಮಾಡುವುದರಲ್ಲಿ ಅರ್ಥವಿಲ್ಲ. ವೈಯಕ್ತಿಕ ವಿಚಾರ ಭಿನ್ನತೆ ಹಲವು ಇರುತ್ತದೆ. ಒಂದು ಮರ ಹಣ್ಣೇ ಕೊಡುವುದಿಲ್ಲ ಎಂದು ಅದನ್ನು ಕಡಿಯುವುದು ಸರಿಯೇ? ಏನು ಮಾಡೋಣ ಇದು ಪ್ರಕೃತಿ. ನಾವೂ ಅದರ ಅಂಗ. ಒಬ್ಬ ಕಳ್ಲನೋ ಕಾಮುಕನೋ ಅದು ಆತನ ವ್ಯಕ್ತಿಗತವಾಗಿದ್ದರೂ ಅದು ಪರಪೀಡನೆಯಾಗುತ್ತದೆ. ಅಂಥವರನ್ನು ದೂರ ಮಾಡಬೇಕು ಸರಿ.  ಅದರೆ ಒಬ್ಬ ವೈಯಕ್ತಿಕವಾಗಿ ಹಲವು ದೌರ್ಬಲ್ಯಗಳನ್ನು ಅನುಭವಿಸಬಹುದು. ಆತನ ವಿಶ್ವಾಸಗಳು ನಂಬಿಕೆಗಳು ನಡವಳಿಕೆಗಳು ಬೇರೆಯೇ ಇರಬಹುದು. ಅದನ್ನು ಆಕ್ಷೇಪಿಸುವುದು ಸರಿಯಲ್ಲ.  ವೈಚಾರಿಕ ಭಿನ್ನತೇ ದ್ವೇಷಕ್ಕೆ ಕಾರಣವಾಗಬಾರದು. ದೇವರು ಧರ್ಮ ಏನೆಂದು ತಿಳಿಯದೇ ಅದಕ್ಕಾಗಿ ಹೋರಾಡುತ್ತಾರೆ.  ಆ ಅಜ್ಞಾನವೇ ದ್ವೇಷಕ್ಕೆ ಕಾರಣವಾಗುತ್ತದೆ.  ದೇವರನ್ನು ನಂಬಿದಷ್ಟು ಅದು ಏನೆಂಬುದನ್ನು ನಂಬುವುದಿಲ್ಲ. ದೇವರಿಗಿಂತಲೂ ನಮ್ಮ ಅಹಂಭಾವವೇ ಮುಖ್ಯವಾಗುತ್ತದೆ ಹೊರತು ದೇವರು ಧರ್ಮ ಮುಖ್ಯವಾಗುವುದಿಲ್ಲ. ಅಹಂಕಾರವನ್ನು ತ್ಯಜಿಸಿದಲ್ಲಿ ಮಾತ್ರವೇ ಭಗವಂತನನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಭಗವದ್ಗೀತೆಯ ತತ್ವಮಸಿ ಎಂಬ ತತ್ವ ಅದು. ನಮ್ಮಲ್ಲಿರುವ ಉದಾತ್ತ ತತ್ವಗಳು  ಗ್ರಂಥದಿಂದ ಹೊರಗೆ ಬರುವುದಿಲ್ಲ.

ಇತ್ತೀಚೆಗೆ ನಮ್ಮ ಬೀದಿಯಲ್ಲಿ ಗಣೇಶನನ್ನು ಕೂರಿಸುವುದಕ್ಕೆ ದೇಣಿಗೆ ಸಂಗ್ರಹಕ್ಕೆ ಹುಡುಗರು ಬಂದಿದ್ದರು. ನಾನು ಹೇಳಿದೆ,  ಹೀಗೆ ರಸ್ತೆಯಲ್ಲಿ ದೇವರನ್ನು ಕೂರಿಸುವುದರಲ್ಲಿ ನನಗೆ ನಂಬಿಕೆ ಇಲ್ಲ. ನನ್ನನ್ನು ವಿಚಿತ್ರವಾಗಿ ನೋಡಿದರು. ಒಬ್ಬ ದೈವ ದ್ವೇಷಿಯಂತೆ ಕಂಡಿತು. ಧರ್ಮ ವಿರೋಧಿ ಅನ್ನಿಸಿದರೂ ಅನ್ನಿಸಿರಬಹುದು. ಮನೆಯಲ್ಲಿ ಎರಡು ಹೊತ್ತು ನೂರೆಂಟು ಗಾಯತ್ರೀ ಜಪ ಮಾಡುವವನು ನಾನು ಅದು ಅವರಿಗೆಲ್ಲಿ ಆರಿವಾಗಬೇಕು? ಅವರವರ ಚಿಂತನೆಯ ರೀತಿಯಲ್ಲಿ ನಂಬಿದರೆ ಮಾತ್ರ ಅವರು ದೈವ ಭಕ್ತರು ಎನಿಸಿಕೊಳ್ಳುತ್ತಾರೆ.  ಇಲ್ಲಿ ದೇವರನ್ನು ನಂಬುವುದು ಎಂದರೆ ಅದು ಪ್ರದರ್ಶನಕ್ಕೆ ಯೋಗ್ಯವಾಗಿರಬೇಕು. ಯಾರದರೂ ನಮ್ಮನ್ನು ಗಮನಿಸುತ್ತಾರೆ ಎಂದಿದ್ದರೆ, ನಮ್ಮದು ಒಂದೆರಡು ನಮಸ್ಕಾರ ಪ್ರದಕ್ಷಿಣೆ ಹೆಚ್ಚಿರುತ್ತದೆ. ನಮ್ಮ ದಾನ ಧರ್ಮಗಳು ದೊಡ್ಡದಾಗಿರುತ್ತದೆ. ಯಾರೋ ನೊಡುತ್ತಾರೆ ಎಂದು ನಾವು ನಮಸ್ಕಾರ ಮಾಡಿದರೆ, ಆ ನಮಸ್ಕಾರದ ಪುಣ್ಯ ಫಲ ಯಾರಿಗೆ ಸಲ್ಲಬೇಕು?  ಮಾಡುವವನಿಗೋ ನೋಡುವವನಿಗೋ? ಈ ಸೂಕ್ಷ್ಮ ಅರ್ಥವಾಗಬೇಕಾದರೆ ತಲೆಯಲ್ಲಿ ಬುದ್ದಿಯ ವಾಸವಿರಬೇಕು. 

ದೇವರ ಬಗ್ಗೆ ಹೇಳಿದರೆ ದೇವರು ಶಾಪ ಕೊಟ್ಟುಬಿಡುತ್ತಾನೆ ಎಂದು ಭಯ ಹುಟ್ಟಿಸಿಬಿಡುತ್ತಾರೆ. ಭಯದಿಂದ ದೇವರ ಭಕ್ತಿ ಪ್ರಚೋದನೆಗೊಂಡರೆ ಅದು ಭಕ್ತಿ ಹೇಗಾಗುತ್ತದೆ. ಭಯ ಎಂಬುದು ತಾತ್ಕಾಲಿಕ.  ಭಯ ಕರಗಿದಾಗ ನಂಬಿಕೆಯೂ ಕಳೆದು ಹೋಗಬಹುದು. ನಾವು ಯಾವುದೋ ಭ್ರಮೆಗೊಳಗಾಗಿ ಯಾವುದನ್ನೂ ಮಾಡಬರದು. ಭ್ರಮೆ ಕರಗಿದಾಗ ಆ ಕಾರ್ಯದ ಮಹತ್ವವೂ ಹೋಗಿಬಿಡುತ್ತದೆ.  ಉದಾಹರಣೆಗೆ ನಾಳೆ ರೋಗಬರುತ್ತದೆ ಸಾಯುತ್ತೇನೆ ಅಂತ ಭ್ರಮೆಯಲ್ಲಿ ಯೋಗಾಭ್ಯಾಸ ಮಾಡಬಾರದು.  ಯೋಗಾಭ್ಯಾಸ ಅದು ಭ್ರಮಾತ್ಮಕ ಕ್ರಿಯೆಯಲ್ಲ. ಅದು ದೇಹದ ಹಸಿವನ್ನು ನೀಗಿಸುವಂತೆ ಜೀವನದ ಸಹಜ ಕ್ರಿಯೆಯಾಗಬೇಕು. ಹಾಗಾಗಿ ಅದನ್ನು ಸಹಜಯೋಗ ಎನ್ನುವುದು. ಬದುಕಿನ ಪ್ರತಿಯೊಂದು ಕರ್ಮವೂ ಭ್ರಮೆಯಿಂದ ಮಾಡಬಾರದು. 

ದೇವರು ಎಂಬುದು ಒಂದು ದಿವ್ಯ ಅನುಭವ. ಆ ದೇವರು ಎಲ್ಲೂ ಕಾಣುವುದಿಲ್ಲ. ನಾವು ಕಾಣಬೇಕು. ವಿವೇಕಾನಂದರು ಹೇಳಿದ್ದಾರೆ, ದೇವರು ಎಲ್ಲೂ ವ್ಯಕ್ತವಾಗುವುದಿಲ್ಲ. ನಾವು ಈ ಪ್ರಕೃತಿಯನ್ನು ಸೇವಿಸುವುದರಲ್ಲಿ ಎಲ್ಲರ ಸೇವೆ ಮಾಡುವುದರಲ್ಲಿ ಭಗವಂತನಿದ್ದಾನೆ. ಪ್ರತಿಯೊಬ್ಬರಲ್ಲು ಆತ್ಮ ರೂಪದಲ್ಲಿ ದೇವರು ಇರುತ್ತಾನೆ. ಆತನ ಸೇವೆ ಮಾಡುವುದೆಂದರೆ ದೇವರ ಸೇವೆ ಮಾಡಿದಂತೆ. ಇಂತಹ ಉದಾತ್ತ ತತ್ವಗಳನ್ನು ಪ್ರತಿಪಾದಿಸುವ ನಮ್ಮ ಧರ್ಮದಲ್ಲಿ ಹೀಗೆ ನಮ್ಮ ಆಚರಣೆಗೆ ಪರಧರ್ಮೀಯರನ್ನು ಪೀಡಿಸುವುದೆಂದರೆ ಅದು ಅಕ್ಷಮ್ಯ.  ಅಹಂ ಬ್ರಹ್ಮಾಸ್ಮಿ ಅಂತ ಶಂಕರಾಚಾರ್ಯರು ಬೋಧಿಸಿದರೂ ಎಲ್ಲರಲ್ಲು ಬಹ್ಮನ ಅಸ್ತಿತ್ವವನ್ನು ಕಾಣದೇ ಶಂಕರಾಚಾರ್ಯರನ್ನು ಗುರು ಅಂತ ಪೂಜಿಸುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲೋಂದು ಭಾವವಿದೆ, ಯಾರಿಗೋ ವಂಚನೆ ಮಾಡಿದ್ದು, ಅಥವಾ ಕಸಿದು ಕಿತ್ತು ಪಡೆದ ಅಪರಾಧಗಳ  ಪ್ರಾಯಶ್ಚಿತ್ತ ಅದನ್ನು ದೇವರಿಗೆ ಅರ್ಪಿಸಿವುದರಲ್ಲಿದೆ. ಹೇಗೋ ಅನ್ಯಾಯದಿಂದ ಸಂಪತ್ತನ್ನು ಸಂಪಾದಿಸಿ ದೇವರ ಹುಂಡಿಗೆ ಹಾಕಿದರೆ ನಾವು ಪಾಪದಿಂದ ಮುಕ್ತರಾಗುತ್ತೇವೆ. ಆದರೆ ದೇವರಿಗೆ ಅರ್ಪಿಸುವುದು ಪವಿತ್ರವಾಗಿರಬೇಕಾದರೆ ಅದು ಯಾರನ್ನೂ ಹಿಂಸಿಸದೆ, ಸತ್ಯ ನ್ಯಾಯದಿಂದ ಸಂಪಾದಿಸಿರಬೇಕು. ಈ ಪರಿಜ್ಜಾನ ಮೂಡುವ ತನಕ ಎಷ್ಟು ದೊಡ್ಡ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದರೂ ಮೂರ್ತಿಯ ಗಾತ್ರದಷ್ಟೇ ನಮ್ಮ ಪಾಪವೂ ಬೆಳೆಯಬಹುದೇ ಹೊರತು ಪುಣ್ಯ ಸಂಚಯನ ಸಾಧ್ಯವಿಲ್ಲ. 


Thursday, October 16, 2025

ನಮಗೊಂದೇ ಭಾಷೆ

  ಸಂಸ್ಕೃತ ಭಾಷೆ ಬ್ರಾಹ್ಮಣ ಭಾಷೆ ಅಂತ ಒಂದು ಯಾರೋ ಪುಣ್ಯಾತ್ಮನೊಬ್ಬ ಬರೆದಿರುವುದನ್ನು ಓದಿದೆ. ಬಹುಶಃ ವೈದಿಕ ಪೂಜಾವಿಧಾನಗಳಲ್ಲಿ ಇದರ ಬಳಕೆ ಹೆಚ್ಚು ಇರುವುದರಿಂದ ಮತ್ತು ಯಾರಿಗೂ ಸುಲಭದಲ್ಲೇ ಅರ್ಥವಾಗದೇ ಇರುವುದರಿಂದ ಒಂದು ರೀತಿಯ ಮತ್ಸರದಲ್ಲಿ ಹೀಗೆ ಅಪಾದಿಸುವುದುಂಟು. ಏನಿದ್ದರೂ ಬ್ರಾಹ್ಮಣರನ್ನು ದೂಷಿಸಿದರೆ ಯಾವ ಪರಿಣಾಮವೂ ಇರುವುದಿಲ್ಲ ಎಂಬ ನಿರ್ಭಯತ್ವದ ಭಾವ ಇದೆ.  ಕನ್ನಡದ ಬಗ್ಗೆ ಅಭಿಮಾನದಲ್ಲಿ ಹೀಗೆ ಹೇಳಿದರೆ ಆ ಅಭಿಮಾನ ತಪ್ಪು ಎನ್ನುವ ಹಾಗಿಲ್ಲ. ಆದರೆ ವಿವೇಚನೆಯಿಂದ ಕಂಡರೆ ಇದರ ಮಿಥ್ಯಾಂಶ ಅರಿವಿಗೆ ಬರುತ್ತದೆ. ಕನ್ನಡ ಶಬ್ದ ಕೋಶದಲ್ಲಿ ಅಥವಾ ನಾವು ಆಡುವ ಕನ್ನಡ ಭಾಷೆಯಲ್ಲಿ  ಸಂಸ್ಕೃತ ಶಬ್ದಗಳನ್ನು ತೆಗೆದು ಹಾಕಿದರೆ ಅಲ್ಲಿ ಎಷ್ಟು ಕನ್ನಡ ಶಬ್ದಗಳು ಉಳಿಯಬಹುದು ಅಂತ ನೋಡಿದರೆ ಕೆಲವೇ ಕೆಲವು ಉಳಿಯಬಹುದು. ಇದು ಕನ್ನಡ ಸಂಸ್ಕೃತ ವಿದ್ವಾಂಸರಒಬ್ಬರು ಹೇಳಿದ ಮಾತು. ಹಾಗಿದ್ದರೆ ಕೇವಲ ಸಂಸ್ಕೃತದ ದ್ವೇಷ ಮಾತ್ರ ಇಲ್ಲಿ ಕಾಣಬಹುದು. ನಮ್ಮ ಭಾಷೆ ಉಳಿಯಬೇಕಾದರೆ ಮತ್ತೊಂದು ಭಾಷೆಯನ್ನು ನಾಶ ಮಾಡಿ ಉಳಿಸಬಹುದು ಎಂದು ತಿಳಿದರೆ ಅದು ಮೂರ್ಖತನವಾದೀತು. ಭಾಷೆ ಉಳಿಯಬೇಕಿದ್ದರೆ ಅದನ್ನು ಪರಿಶುದ್ದವಾದ ಉಪಯೋಗದಲ್ಲಿ ಉಳಿಸುವ ಪ್ರಯತ್ನ ಮಾಡಬೇಕು. ತಮಿಳು ನಾಡಿನಲ್ಲಿ ಹಿಂದಿ ಭಾಷೆ ನಿಷೇಧ ಮಾಡುವ ಸಮಾಚಾರ ಕೇಳಿಬಂತು. ಇದು ಕೂಡ ಇದೇ ಮಾದರಿಯಾಗಿರುತ್ತದೆ. ಯಾರೋ ಭಾಷೆಯನ್ನು ಮಾತನಾಡುವ ವ್ಯಕ್ತಿಗಳು ಮಾಡಿದ್ದಕ್ಕೆ ಭಾಷೆಯನ್ನು ದ್ವೇಷಿಸುವುದಾದರೆ ಸ್ವತಃ ತಮಿಳು ಕೂಡ ದ್ವೇಷಕ್ಕೆ ಕಾರಣವಾಗಬಹುದು. 

ಬಳಕೆಯಲ್ಲಿ ಭಾಷೆ ಉಳಿಯಬೇಕು. ಆದರೆ ಇದೇ ಮಾತನ್ನು ಬೆಂಗಳೂರಿನ ಕನ್ನಡಕ್ಕೆ ಹೋಲಿಸಿದರೆ ವಿಚಿತ್ರವೆನಿಸುತ್ತದೆ. ಇಲ್ಲಿಯ ಭಾಷೆಯ ಬಳಕೆ ಹೇಗಿರುತ್ತದೆ ಎಂದರೆ " ನನಗೆ ಮನೆಯಲ್ಲಿ ಕುಕ್ಕಿಂಗ್ ಗೆ ಸಾಮಾನು ಮುಗಿದಿತ್ತು, ಹಾಗೆ ಬ್ಯಾಗ್ ಹಿಡಿದು ಮಾರ್ಕೆಟ್ ಗೆ ಹೋದೆ. ವೆಜಿಟೇಬಲ್ ಪರ್ಚೇಸ್ ಮಾಡಿದೆ. ಗ್ರೋಸರಿ ಪರ್ಚೇಸ್ ಮಾಡಿದೆ." ಹೀಗೆ ಇರುತ್ತದೆ. ಕೇವಲ ಕ್ರಿಯಾ ಪದಕ್ಕೆ ಮಾತ್ರ ಕನ್ನಡ ಸೀಮಿತವಾಗುತ್ತದೆ. ದಿನಸಿ ತರಕಾರಿ ಕೊಂಡುಕೊಂಡೆ ಅಂತ ಹೇಳದೆ ಆಡಿದ ಮಾತಿನಲ್ಲಿ ಕನ್ನಡವಲ್ಲದ ಯಾವೂದೋ  ಪಿರಂಗಿ ಭಾಷೆ ಉಪಯೋಗಿಸುವುದಕ್ಕೆ ಸಾಧ್ಯವಿದ್ದರೆ, ನಮ್ಮ ಭಾರತದದ ಹಿಂದಿ ಯಾಕೆ ಬೇಡವಾಗುತ್ತದೆ?  ಅಲ್ಲಿನ ವ್ಯಕ್ತಿಗಳು ಕಾರಣವೆ?  ಹಾಗೆ ವ್ಯಕ್ತಿಗಳನ್ನು ದ್ವೇಷಿಸುವುದಿದ್ದರೆ ಹಿಂದಿ ಮಾತನಾಡುವ ಮಂದಿಗಿಂತಲೂ ,  ಮೂರು ಶತಮಾನ ನಮ್ಮ ಸ್ವಾತಂತ್ರ್ಯವನ್ನು ಕಸಿದು ಗು್ಲಾಮರನ್ನಾಗಿ ಮಾಡಿದ ಇಂಗ್ಲೀಷರನ್ನು  ದ್ವೇಷಿಸುವುದರಲ್ಲಿ ಹೆಚ್ಚು ಅರ್ಥವಿದೆ.  ಇನ್ನು ಸಂಸ್ಕೃತದ ದ್ವೇಷವೂ ಅದೇ ರೀತಿ. ಯಾವುದೋ ಕಾಲದಲ್ಲಿ ಹೇಗೋ ಇತ್ತು ಎನ್ನುವುದಕ್ಕೆ ಈಗಿನ ಬ್ರಾಹ್ಮಣರನ್ನು ದ್ವೇಷಿಸಬೇಕು ಎನ್ನುವ ಕಾರಣದಿಂದ  ಸಂಸ್ಕೃತವೂ...ದ್ವೇಷಕ್ಕೆ ಕಾರಣವಾಗುತ್ತದೆ. ಹಾಗೆ ನೋಡಿದರೆ... ಬುದ್ದ ಮತ್ತು ಜೈನರು ಸಂಸ್ಕೃತವನ್ನು ಹೆಚ್ಚು ಬಳಕೆ ಮಾಡಿರುತ್ತಾರೆ. ಹಾಗಾಗಿ ಜೈನರನ್ನು ಬುದ್ದರನ್ನು ದ್ವೇಷಿಸಿದರೆ ನಮ್ಮ ದೇಶವನ್ನು ನಾವು ಅಭಿಮಾನ ಪ್ರೀತಿಯಿಂದ ಕಂಡಂತಾಗುವುದಿಲ್ಲ.  

ನಿಜಕ್ಕಾದರೆ ಭಾಷೆಯನ್ನು ದ್ವೇಷಿಸುವುದಲ್ಲ. ಯಾವುದೋ ಭಾಷೆ ಉಪಯೋಗ ಶೂನ್ಯವಾಗಬೇಕಾದರೆ ಮೊದಲು ನಮ್ಮ ಭಾಷೆಯನ್ನು ಪರಿಶುದ್ದಿಗೊಳಿಸಬೇಕು. ಅದನ್ನೇ ಶುಭ್ರವಾಗಿ ಬಳಸಬೇಕು. ನಮ್ಮಲ್ಲಿರುವ ಕೆಟ್ಟಗುಣವನ್ನು ಕಳೆಯಬೇಕಾದರೆ ಉಳಿದ ವ್ಯಕ್ತಿಗಳನ್ನು ನಾವು ದ್ವೇಷಿಸಿ ದೂರ ಮಾಡುವುದರಲ್ಲಿ ನಮ್ಮ ಕೆಟ್ಟಗುಣ ಬದಲಾಗಲು ಸಾಧ್ಯವಿಲ್ಲ. ನಾನು ಬ್ಯಾಗ್ ಹಿಡಿದುಕೊಂಡು ಶಾಪಿಂಗ್ ಗೆ ಹೋದೆ ಅಂತ ಹೇಳುವಾಗ ಶುದ್ಧವಾದ ಕನ್ನಡಕ್ಕೆ ಯಾವ ನ್ಯಾಯ ಸಲ್ಲುತ್ತದೆ.? 

ಇತ್ತೀಚೆಗೆ ನನ್ನ ಮಗನ ಸಹಪಾಠಿಯೊಬ್ಬ ನನ್ನ ಲೇಖನಗಳನ್ನು ಓದಿ , ಆತ ಅಭಿಪ್ರಾಯ ಹೇಳಿದ. " ಸಾರ್, ನಿಮ್ಮ ಲೇಖನ ಚೆನ್ನಾಗಿದೆ. ಆದರೆ ಆ ಶಬ್ದಗಳು ನಿಮಗೆ ಎಲ್ಲಿ ಸಿಗ್ಗುತ್ತದೆ ? ಅರ್ಥ ಮಾಡಿಕೊಳ್ಳುವುದು ತುಂಬ ಕಷ್ಟ ವಾಗುತ್ತದೆ. " ನಾನೇನು ಕನ್ನಡ ವಿದ್ವಾಂಸನೇನೂ ಅಲ್ಲ. ನನಗೆ ತಿಳಿದ ಸೀಮಿತ ಜ್ಞಾನದಲ್ಲೇ ಬರೆದ ಕನ್ನಡವನ್ನು ಅರ್ಥವಿಸುವುದಕ್ಕೆ ಕಷ್ಟವಾಗುತ್ತದೆ ಎಂದಾದರೆ ಕನ್ನಡ ಕನ್ನಡವಾಗಿ ಉಳಿದಿದೆ ಎನ್ನುವುದಕ್ಕೆ ಯಾವ ಆಧಾರವಿದೆ? ನಮ್ಮ ಭಾಷೆ ಉಳಿಯಬೇಕು. ಅದು ಇನ್ನೊಂದು ಭಾಷೆಯ ನಾಶದಲ್ಲಿ ನಮ್ಮ ಭಾಷೆ ಉಸಿರಾಡಬಾರದು. ಅಥವಾ ಉಳಿದ ಭಾಷೆ ನಿರ್ನಾಮವಾದರೆ ನಮ್ಮ ಭಾಷೆ ಉಳಿಯುತ್ತದೆ ಎಂದು ಭಾವಿಸಿದರೆ ಅದು ಅರಣ್ಯದ ನ್ಯಾಯವಾಗುತ್ತದೆ. ಒಂದು ಗಿಡ ಬೆಳೆಯಬೇಕಾದರೆ ಸುತ್ತಮುತ್ತಲಿನ ಹಲವು ಗಿಡವನ್ನು ನಾಶ ಮಾಡಬೇಕು.  ಇದು ಕಾಡಿನ ನ್ಯಾಯ.  ಬೀದಿಯಲ್ಲಿದ್ದ ಎರಡು ಅಂಗಡಿಯಲ್ಲಿ ,ಮತ್ತೊಂದು  ಅಂಗಡಿ ಮುಚ್ಚಿದರೆ ತನ್ನ ಅಂಗಡಿಗೆ ಹೆಚ್ಚು ವ್ಯಾಪಾರವಾಗುತ್ತದೆ ಎಂದು ಬಯಸಿದರೆ ಅದು ಸಾಧುವಾಗಲಾರದು. ಬದಲಿಗೆ ನಮ್ಮ ಅಂಗಡಿಯಲ್ಲಿ ಜನೋಪಯೋಗಿಯಾಗುವಂತೆ ಪ್ರಾಮಾಣಿಕವಾಗಿ ವ್ಯಾಪಾರ ಮಾಡಬೇಕು. ಹೊರತು ಮತ್ತೊಂದು ಅಂಗಡಿ ಮುಚ್ಚಿಸುವುದಲ್ಲ. ಮತ್ತೊಬ್ಬನನ್ನು ಅರೆ ಹೊಟ್ಟೆ ಮಾಡಿ ನಾವು ಹೊಟ್ಟೆ ತುಂಬಿಸಿಕೊಂಡರೆ ಅದು ನ್ಯಾಯವಾಗುವುದಿಲ್ಲ. ಜಗಳ ಮಾಡಿ ಪರಸ್ಪರ ಬೈದಾಡಿಕೊಂಡು ಗೆಲ್ಲುವುದಕ್ಕೆ ಹೊರಟೆರೆ ಆ ಬೈಗುಳಗಳಲ್ಲಿ ಕೆಟ್ಟಭಾಷೆಯೇ ಬಳಕೆಯಾಗುತ್ತದೆ. ಅದು ಸುಸಂಸ್ಕೃತ ಭಾಷೆಯಾಗುವುದಿಲ್ಲ. 


ಈ ದ್ವೇಷ ಎಂಬುದು ಕೇವಲ ಭಾಷೆಗೆ ಮಾತ್ರ ಸೀಮಿತವಾಗಿಲ್ಲ. ನಾವು ಬೆಳೆಯುವುದಕ್ಕೆ ಪ್ರಕೃತಿಯನ್ನು ನಾಶ ಮಾಡುತ್ತೇವೆ. ನಮ್ಮ ಧರ್ಮ ಉಳಿಸುವುದಕ್ಕೆ ಮತ್ತೊಂದು ಧರ್ಮವನ್ನು ದ್ವೇಷಿಸಿ ನಾಶ ಮಾಡುತ್ತೇವೆ. ಇತ್ತೀಚೆಗೆ ಒಬ್ಬರು ಮುಸ್ಲಿಂ ವ್ಯಕ್ತಿ ನನ್ನ ಬಳಿಗೆ ಬಂದಿದ್ದರು. ಅವರ ತೆರಿಗೆಗೆ ಮತ್ತು ಸರಕಾರಿ ಕೆಲಸಕ್ಕೆ ಸಂಭಂಧಿಸಿದ ಹಲವು ಕೆಲಸಗಳನ್ನು ನಾನೇ ಮಾಡಿಕೊಡುತ್ತೇನೆ. ನನ್ನ ಮೇಲೆ ಅದು ಯಾಕೋ ಅವರಿಗೆ ಅತೀವ ವಿಶ್ವಾಸ. ಒಂದು ಸಲ ಬಂದವರು ಹೇಳಿದರು, "ದೇವರನ್ನು ಭಕ್ತಿಯಿಂದ ನಂಬುವವರು ಮೋಸ ಮಾಡುವುದಿಲ್ಲ.  ನಿಮ್ಮಲ್ಲಿ ನನಗೆ ತುಂಬ ವಿಶ್ವಾಸ  ಇದೆ. " ಅವರು ದೇವರು ಅಂತ ಹೇಳಿದ ದೇವರು ಅದು ಒಬ್ಬನೇ.  ಅವರ ದೇವರು  ನನ್ನ ದೇವರು ಎಂಬ ಭೇದವಿಲ್ಲ.  ಇಲ್ಲಿ ನಂಬಿಕೆಯ ವಿಧ ಮಾತ್ರ ವೆತ್ಯಾಸ. ಮತ್ತೊಂದು ಧರ್ಮವನ್ನು ನಾಶ ಮಾಡಿ ನಮ್ಮ ಧರ್ಮವನ್ನು ಉಳಿಸುತ್ತೇವೆ ಎಂದು ತಿಳಿದರೆ ಅಲ್ಲಿ ದ್ವೇಷ ಮಾತ್ರ ಇರುತ್ತದೆ. ಎಲ್ಲಿ ದ್ವೇಷದ ಕಲ್ಮಶ ವಿರುತ್ತದೋ ಅಲ್ಲಿ ಪರಿಶುದ್ದತೆ ಇರುವುದಕ್ಕೆ ಸಾಧ್ಯವಿಲ್ಲ. ದೇವರ ಅಸ್ತಿತ್ವವೂ ಇರುವುದಿಲ್ಲ.  


ಪ್ರಾಣಿಗಳಲ್ಲಿ ಮನುಷ್ಯನಿಗೆ ಇರುವ ಮುಖ್ಯ ಪ್ರತ್ಯೇಕ ವೈಶಿಷ್ಟ್ಯವೆಂದರೆ ಮಾತಾಡುವ ಅರ್ಹತೆ. ಅದಕ್ಕೆ ಮುಖ್ಯ ಉಪಾಧಿ ಎಂದರೆ ಅದು ಭಾಷೆ. ಈ ಭಾಷೆ ದ್ವೇಷಕ್ಕೆ ಕಾರಣವಾಗುವುದಾದರೆ, ಆ ಅರ್ಹತೆಯನ್ನು ಕಲ್ಪಿಸಿದ ಭಗವಂತನ ಕಾರುಣ್ಯವನ್ನು ದೂಷಿಸಿದಂತೆ. ಈ ಅರ್ಹತೆಗೆ ನಾವು ಯೋಗ್ಯರಾಗಿರುವುದಿಲ್ಲ. ಮನುಷ್ಯನ ಜೀವನದ ಮೂಲ ಭೂತ ಆಧಾರವಾಗಿ ಭಗವಂತನನ್ನು ಕಾಣುವ ಓಂ ಕಾರ ಭಾಷೆ ಯಾವುದು? ಹೋಗಲಿ ಭಾಷಾಭಿಮಾನದ ಅತಿರೇಕದಲ್ಲಿ , ಗಣೇಶನನ್ನು ಕೂರಿಸಿ ಹೇಳುವ  "ಗಣಪತಿ ಬಪ್ಪ ಮೋರೆಯಾ "  ದ ಭಾಷೆ ಯಾವುದು?  ಇವುಗಳೆಲ್ಲ ನಮ್ಮ ದ್ವಂದ್ವ ನಿಲುವಿನ ಅಪಸವ್ಯಗಳು. ಸಸ್ಯಾಹಾರಿ ಮಾಂಸ ಬೇಡ ರಸ ಮತ್ರ ಆದೀತು ಅಂತ ಹೇಳುವ ನ್ಯಾಯ. ಯಾವುದೋ ಭಾಷೆಯ ಬಗ್ಗೆ ದ್ವೇಷದಲ್ಲಿ ವಿಮರ್ಶಿಸುವಾಗ ಮೊದಲು ನಮ್ಮ ಮಾತುಗಳನ್ನು ನಾವು ಪರಿಶುದ್ದಿಗೊಳಿಸಬೇಕು. ಇಷ್ಟಕ್ಕೂ ನಮಗೆ ಕೇವಲ ಮಾತನಾಡುವ ಅರ್ಹತೆ ಇದೆ, ಆದರೆ ಇದನ್ನು ಕಳೆದುಕೊಂಡ ಮೂಗನಿಗೆ ಯಾವ ಭಾಷೆ ...ಆತ ಕನ್ನಡದಲ್ಲೂ , ಅತ್ತ ತಮಿಳುನಾಡಿನಲ್ಲೂ ಆತನ ಭಾಷೆ ಒಂದೇ ಆಗಿರುತ್ತದೆ. ಮನಸ್ಸಿನಲ್ಲಿ ಕನ್ನಡವೋ ತಮಿಳೋ ಇರಬಹುದು..ಆದರೆ ಅದು ವ್ಯಕ್ತವಾಗುವುದು ಅರ್ಥವಾಗುವುದು ಎದುರು ಕೇಳುವವನ ಭಾಷೆಯನ್ನು ಅನುಸರಿಸಿರುತ್ತದೆ. ಅಲ್ಲಿ ಭಾಷಾಭೇದವೇ ಇರುವುದಿಲ್ಲ. ಭಾಷೆಯಿಂದ ನಾವು ವಿಶಾಲವಾಗಬೇಕು. ನಮ್ಮ ಜ್ಞಾನ ವೃದ್ದಿಗೆ ಅದು ಉಪಯೋಗಿಸಲ್ಪಡಬೇಕು. ಇಲ್ಲವಾದರೆ ನಾವು ನಮ್ಮ ಭಾಷೆಯಲ್ಲಿರುವುದನ್ನು ಮಾತ್ರವೇ ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಒಂದು ರೀತಿಯ ಬಾವಿಯೊಳಗಿನ ಮಂಡೂಕದ ಬದು. ನಮ್ಮ ಮಂಗಳೂರಿಗೆ ಹೋದರೆ ಇದನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಹಲವು ಭಾಷೆಗೆ ಸಹಕಾರಿಯಾಗಿ ಇಲ್ಲಿ ತುಳು ಭಾಷೆ ನೆಲದ ಭಾಷೆ. ಅದರಲ್ಲಿ ಕನ್ನಡವೂ ಇದೆ ಹಿಂದಿ ಕೊಂಕಣಿ ಇಂಗ್ಲೀಷ್ ಎಲ್ಲ ಇದ್ದರೂ ತುಳು ತನ್ನ ಸ್ವಂತಿಕೆಯನ್ನು ಬಿಟ್ಟಿಲ್ಲ. ಅದನ್ನೇ ಮಾತನಾಡಬೇಕು ಎಂದು ಅಲ್ಲಿ ದೌರ್ಜನ್ಯ ಮಾಡುವುದಿಲ್ಲ. ಜನ ನಮ್ಮದೇ ಭಾಷೆ ಅಂತ ಅಭಿಮಾನದಲ್ಲೇ ಮಾತನಾಡುತ್ತಾರೆ. ಅದು ತಿಳಿಯದವರಲ್ಲಿ ಹೃದಯದ ಆತ್ಮೀಯತೆ ಇರುವುದಿಲ್ಲ.  ಅಲ್ಲಿಯ ಸ್ನೇಹ ಆದರ ಬೇಕಾದರೆ ಯಾವುದೇ ಬಲವಂತ ವಿಲ್ಲದೇ ಆ ಭಾಷೆಯನ್ನು ಕಲಿತು ಅಲ್ಲಿನವರಾಗಿದ್ದರೆ ನಿಮಗೆ ಅರಿಯದೆ ಅಲ್ಲಿನವರ ಹೃದಯದಲ್ಲಿ ಸ್ಥಾನ ಪಡೆಯಬಹುದು. ಹೀಗೆ ಭಾಷೆ ಎಂಬುದು ಸ್ನೇಹಕ್ಕೆ ಕಾರಣವಾಗಬೇಕು.  ಎಷ್ಟು ಭಾಷೆ ಇದ್ದರೂ ನಮಗೊಂದೇ ಭಾಷೆ ಇರಬೇಕು. ಅದು ಮನುಷ್ಯತ್ವದಿಂದ ಕೂಡಿರಬೇಕು. 

                           


Monday, October 6, 2025

ಅಮ್ಮನ ಮಡಿಲೂ, ರಾಮನ ಅಳಿಲೂ,

 



ಅಮ್ಮ....ಮಕಾರದ ರೂಪಾಂತರದ ಎರಡಕ್ಷರದ ಶಬ್ದ. ಓಂಕಾರದ ಅಂತ್ಯದ ಮಕಾರಕ್ಕೂ ಅಮ್ಮದ ಮಕಾರಕ್ಕೂ ಪರಬ್ರಹ್ಮ ಸ್ವರೂಪದ ಸಾಮ್ಯತೆ ಇದೆ.  ಎರಡರಲ್ಲೂ ಎಲ್ಲಾ ಜೀವಜಾಲಕ್ಕೂ ಒಂದು ದಿವ್ಯವಾದ ಸಂಬಂಧವಿದೆ. ಈ ಸಂಬಂಧವಿಲ್ಲದ ಜೀವಿಗಳು ಭೂಮಿಯಲ್ಲಿ ಇರುವುದು ಸಾಧ್ಯವಿಲ್ಲ. ಅಮ್ಮನಂತಹ ಸ್ಥಾನ ಎಲ್ಲ ಜೀವಜಾಲದ ಮೂಲ ಪ್ರೇರಣೆ. ಇದನ್ನೇ ಮಾತೃ ಸಂಭಂಧ. ಇದುವೇ ಮೂಲ ಸಂಬಂಧ.  ಯಾವ ಜೀವದಲ್ಲಿ  ನೋಡಿದರೂ ಅಲ್ಲೊಂದು ಪ್ರೀತಿ ಪ್ರೇಮಕ್ಕಿಂತ ಅತೀತವಾಗಿ ಭಾವನಾತ್ಮಕ ಸಂಬಂಧವಿದೆ. ಅಮ್ಮನ ಶಿಕ್ಷೆ ರಕ್ಷೆಗೆ ಸಮನಾದ ಒಂದು ಭಾವಕ್ಕೆ ಆ ಕ್ರಿಯೆಗೆ ಸಮ ತೂಗಿಸಬಲ್ಲ   ಭಾವನೆ ಮತ್ತೊಂದು ಇರುವುದಕ್ಕೆ ಸಾಧ್ಯವಿಲ್ಲ.  ಹೆತ್ತ ಅಮ್ಮ ಮುದ್ದಿಸಿದಷ್ಟೇ ಸಲೀಸಾಗಿ ಹೊಡೆದು ಶಿಕ್ಷಿಸಬಲ್ಲಳು.  ಶಿಕ್ಷೆಕೊಟ್ಟರೂ ಅಲ್ಲಿ ದ್ವೇಷವಿಲ್ಲ. ಆ ಶಿಕ್ಷೆಯ ಮತ್ತೊಂದು ಪಕ್ಕದಲ್ಲಿ ರಕ್ಷೆಯೂ ಇರುತ್ತದೆ.   ಅಂ ಎನ್ನುವ ಅಂಕಾರವೇ ಆ ರೀತಿಯಲ್ಲಿರುತ್ತದೆ. ಅದನ್ನೆ ಮಮಕಾರ ಎನ್ನುವುದು. ಬಹುಶಃ ಯವುದೇ ಪ್ರಾಣಿಯೂ ಈ ಮಮಕಾರದ ಪರಿಧಿಯಿಂದ ಆಚೆಗೆ ಇರುವುದಕ್ಕೆ ಸಾಧ್ಯವಿಲ್ಲ. ಮಮ ಎಂದರೆ ನನ್ನದು ಎಂದರ್ಥ. ಹಾಗಾಗಿ ಅಮ್ಮನ ಪ್ರೀತಿಗೆ ಮತ್ತೂಂದು ಅನ್ವರ್ಥವೇ ಮಮಕಾರ. ಅಲ್ಲಿ ಇರುವ ನನ್ನದು ಎಂಬ ಪರಿಪೂರ್ಣ ಭಾವನೆ, ಆಕೆಯಲ್ಲಿರುವ ನನ್ನ ಕಂದ ನನ್ನ ದೇಹದ ಭಾಗ ಎಂಬ ಭಾವ ಬೇರೆ ಎಲ್ಲೂ ಕಾಣುವುದಕ್ಕೆ ಸಾಧ್ಯವಿಲ್ಲ. ಮನುಷ್ಯ ಬದುಕು ಕಟ್ಟಿಕೊಳ್ಳುವುದು ಈ ಮಮಕಾರವೆಂಬ ಸ್ವಾರ್ಥವಲ್ಲದ ನನ್ನದು ಎಂಬ ಭಾವನೆಯ ನೆರಳಲ್ಲಿ. ಬಹುಶಃ ಅಮ್ಮನ ಈ ’ನನ್ನದು’  ಎಂಬ ಭಾವನೆಯ ಪ್ರೇರಣೆ ಇಲ್ಲ ಎಂದು ಇರುತ್ತಿದ್ದರೆ ಈ ಜೀವಜಾಲದ ಪೋಷಣೆ ರಕ್ಷಣೆ ಸಾಧ್ಯವಿರುತಿರಲಿಲ್ಲ. ಅದು ಅಮ್ಮನ ನಿಸ್ವಾರ್ಥದ ಮಮಕಾರ. ಅಮ್ಮನ ಅಕ್ಕರೆಯ ಪ್ರೀತಿಯಲ್ಲಿ ಯಾವ ಸ್ವಾರ್ಥವೂ ಇರುವುದಿಲ್ಲ. ಸ್ವಾರ್ಥವಿದ್ದರೆ ಅದು ಅಮ್ಮನ ಪ್ರೀತಿ ಎಂದೆನಿಸುವುದೇ  ಇಲ್ಲ. ಜಗತ್ತಿನಲ್ಲಿ ಎಲ್ಲಾ ಪ್ರೀತಿಯಲ್ಲಿ ಸೂಕ್ಷ್ಮವಾಗಿಯಾದರೂ ಒಂದು ಸ್ವಾರ್ಥ ವಿರುತ್ತದೆ. ಆದರೆ ಅಮ್ಮನ ಪ್ರೀತಿಯಲ್ಲಿ...ಮಮಕಾರ ಬಿಟ್ಟು ಬೇರೆ ಸ್ವಾರ್ಥವಿರುವುದಕ್ಕೆ ಸಾಧ್ಯವಿಲ್ಲ. ಕಾರಣ.. ಇಷ್ಟೆ ತನ್ನ ದೇಹದ ಭಾಗದ ನೇರ ಸಂಭಂಧ ಅಮ್ಮನಿಗೆ  ಆ ಮಗುವಿನೊಂದಿಗೆ ಇರುತ್ತದೆ. 


        ವರ್ಷ ಋತುವಿನ ಬಿಡದ ಮಳೆ ಕಳೆದು ಶರದೃತುವಿಗೆ ನವರಾತ್ರಿಯ ಸಂಭ್ರಮ ಸ್ವಾಗತಿಸುವಾಗ ಅಬ್ಬ ಮಳೆಯಿಂದ ಬಿಡುಗಡೆಯಾದ ಅನುಭವ. ಪ್ರತೀ ಸಲವೂ ನವರಾತ್ರಿ ಬರುವಾಗ ಹಲವು ನಿರೀಕ್ಷೆಯ ಜತೆಗೆ ಊರಿಗೆ ಹೋಗುವ ಸಿದ್ದತೆಯೊಂದು ಇರುತ್ತದೆ. ಮೊದಲಿನಿಂದಲೂ ಮಳೆಕಳೆದು ಚಳಿಗಾಲಕ್ಕೆ ಸನಿಹವಾಗುವಾಗ ಈ  ನವರಾತ್ರಿಯನ್ನು ಹೊತ್ತು ಬರುವ ಈ ಶರದೃತು  ಎಂದರೆ ಒಂದು ಸಂಭ್ರಮ. ಹನಿ ಹನಿ ಮಂಜಿನಲ್ಲಿನ ಈ ಹಬ್ಬ ಅಂದಿಗೂ ಇಂದಿಗೂ ಅದೇ ಸೌಂದರ್ಯ.  ನಮ್ಮೂರಲ್ಲಿ ಉಳಿದೆಲ್ಲ ಹಬ್ಬಗಳು ಮನೆಯಲ್ಲಿ ಆಚರಿಸಿದರೆ...ನವರಾತ್ರಿಗೆ ಯಾವ ದೇವಸ್ಥಾನಕ್ಕೆ ಹೋಗುವುದು ಎಂದು ಯೋಚಿಸುತ್ತೇವೆ. ಯಾಕೆಂದರೆ ಎಲ್ಲಾ ಹಬ್ಬಗಳು ಒಂದೆರಡು ದಿನ ಇದ್ದರೆ ಈ ನವರಾತ್ರಿ ಒಂದು ಪಕ್ಷದಷ್ಟೂ ವಿಸ್ತರಿಸಿ ಪಾಡ್ಯದಿಂದ ಅರಳುವ ಚಂದ್ರನ ಜತೆಗೆ ಮನಸ್ಸೂ ಅರಳುತ್ತಾ ಸಾಗುತ್ತದೆ. ಒಂದು ರೀತಿಯಲ್ಲಿ ಮನಸ್ಸು ಮಳೆಯಲ್ಲಿ ತೊಯ್ದು ಶುದ್ದವಾದಂತೆ ಶುದ್ದ ಮನಸ್ಸಿನಲ್ಲಿ ದೈವ ಸಾನ್ನಿಧ್ಯ ನೆರವೇರುತ್ತದೆ.  ದೈವತ್ವದ ಈ  ಅನುಭವವಾಗಬೇಕಾದರೆ ಆ ಅವಧಿಯಲ್ಲಿ ಒಂದಾದರೂ ಕ್ಷೇತ್ರದರ್ಶನ ಮಾಡಬೇಕು ಎಂಬುದು ಹಲವರ ಹಂಬಲ. ಇಲ್ಲಿ  ಪ್ರತಿಯೊಬ್ಬರೂ ಪರಸ್ಪರ ಭೇಟಿಯಾಗುವಾಗ   ಈ ಸಲ ನವರಾತ್ರಿಗೆ ಎಲ್ಲಿಗೆ ಎಂದು ಕೇಳುವುದು ಸಹಜ.   ಆದರೆ ನನ್ನಲ್ಲಿ ಕೇಳುವಾಗ ಪ್ರಶ್ನೆಯೊಂದಿಗೆ ಉತ್ತರವೂ ಸಿದ್ಧವಾಗಿರುತ್ತದೆ. ಈ ಸಲ ನವರಾತ್ರಿಗೆ ಆವಳ ಮಠಕ್ಕೆ ಹೋಗುವುದಿಲ್ಲವಾ? ಉತ್ತರದ ಜತೆಗೆ ಪ್ರಶ್ನೆ ಬರುವುದು ಹೀಗೆ. ಯಾಕೆಂದರೆ ಈ ಮಠದ ಜತೆಗೆ ಇರುವ ಅವಿನಾಭಾವ ಸಂಬಂಧ ಎಂದರೆ ಅತಿಶಯವಲ್ಲ. 

ಆವಳ ಮಠ...ನಮ್ಮೂರಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ.  ನಮ್ಮೂರಿನಲ್ಲಿ ಹಲವು ದುರ್ಗಾ ಪರಮೇಶ್ವರಿ ದೇವಾಲಯಗಳಂತೆ ಇದು ಒಂದು. ಆದರೆ ನನಗೆ ಇದೆಲ್ಲಕ್ಕಿಂತ ಮಿಗಿಲಾದ ಸಂಭಂಧವೆಂದರೆ ಇದು ಬಾಲ್ಯದ ಹಲವು ನೆನಪುಗಳೊಂದಿಗೆ ಬೆಸುದುಕೊಂಡ ಪವಿತ್ರ ಕ್ಷೇತ್ರ. ಇಲ್ಲಿ ಭಕ್ತಿಯೊಂದಿಗೆ ಆ ನೆನಪುಗಳು ಮರುಕಳಿಸುವಾಗ ಹೃದಯ ಭಾರವಾಗುತ್ತದೆ. ಮತ್ತೆ ತರಲಾಗದ ನೆನಪುಗಳು ಅದು ಕೇವಲ ವೈಯಕ್ತಿಕ ಅನುಭವಕ್ಕೆ ಸೀಮಿತವಾಗುತ್ತದೆ. ಹೆಚ್ಚಾಗಿ ನನಗೆ ಜನಸಂದಣಿಯ ದೇವಸ್ಥಾನಗಳು ಭಕ್ತಿಯನ್ನು ಪ್ರಚೋದಿಸುವುದಿಲ್ಲ. ಅಲ್ಲಿ ಹೋದಾಗ ಭಕ್ತಿಯ ಜತೆಗೆ ಭಾವನೆಗಳು ಹಂಚಿ ಚದುರಿ ಹೋಗಿಬಿಟ್ಟು ಮನಸ್ಸು  ಖಾಲಿಯಾಗಿ ಕೇವಲ ಯಾಂತ್ರಿಕವಾಗುತ್ತದೆ. ಭಾವನೆಗಳು ಇಲ್ಲದಿದ್ದರೆ ನಂತರದ ಕ್ರಿಯೆಗಳು ಯಾಂತ್ರಿಕ. ಈ ಯಾಂತ್ರಿಕತೆಯಿಂದ ದೂರಾಗಿ ಸಹಜ ಅನುಭವವನ್ನು ತುಂಬಿಕೊಡುವ ಕ್ಷೇತ್ರವೆಂದರೆ ಅದು ಬಾಲ್ಯದಿಂದ ಬೆಸೆದುಕೊಂಡ ಆವಳ ದುರ್ಗಾಪರಮೇಶ್ವರಿ ದೇವಸ್ಥಾನ. ಇಲ್ಲಿನ ಪರಿಸರದ ಪ್ರತಿಯೊಂದು ಭಾಗದಲ್ಲೂ ಹಲವು ನೆನಪುಗಳಿವೆ.

ಮೊನ್ನೆ ಮೊನ್ನೆ ಕಳೆದ ನವರಾತ್ರಿಯ ಕೊನೆಯ ಎರಡು ದಿನ ಅಲ್ಲಿಯೇ ಕಳೆಯುವ ಅವಕಾಶ ಒದಗಿಬಂತು. ಮೊದಲು ಬಹುತೇಕ ಕೇವಲ ಎಣ್ಣೇ ದೀಪದ ಬೆಳಕಿನಲ್ಲೇ ಕಳೆದು ಹೋಗುತ್ತಿದ್ದ ನವರಾತ್ರಿ ಈಗ ದೇವಸ್ಥಾನ ಮೂಲೆ ಮೂಲೆಯಲ್ಲೂ ವಿದ್ಯುದ್ದೀಪ ಝಗಮಗಿಸುತ್ತದೆ. ವಿಶಾಲವಾದ ದೇವಸ್ಥಾನದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಾದರೆ ಪುಟ್ಟ ಕೈ ದೀಪವನ್ನು ಹಿಡಿದು ಕೊಂಡು ಹೋಗುತ್ತಿದ್ದೆವು. ಹಲವು ಸಲ ಒಬ್ಬರೇ ಸುತ್ತಾಡುವುದಕ್ಕೆ ಭಯವಾಗುವಷ್ಟು ಕತ್ತಲೆ ಆವರಿಸಿರುತ್ತಿತ್ತು. ರಾತ್ರಿ ದೀಪದ ಬೆಳಕಿನಲ್ಲಿ ತರಕಾರಿ ಹೆಚ್ಚುವುದು ದೇವರ ಪ್ರಸಾದ ಸಿದ್ದ ಪಡಿಸುವ ಅನುಭವ ಈಗ ಊಹಿಸುವುದಕ್ಕೂ ಸಾಧ್ಯವಿಲ್ಲ.  ನನಗೆ ಇನ್ನೂ ನೆನಪಿದೆ ದೇವಸ್ಥಾನ ಸುತ್ತಲೂ ಗೋಡೆಗೆ ಅಂಟಿಸಿದ ಕಲ್ಲಿನ ದೀಪಕ್ಕೆ ಎಣ್ಣೆ ಬತ್ತಿ ಹಾಕಿ ಉರಿಸುತ್ತಿದ್ದೆವು. ಈಗ ಆಜಾಗದಲ್ಲಿ ವಿದ್ಯುತ್ ದೀಪ ಬೆಳಗುತ್ತದೆ.  

ಬಾಲ್ಯದಲ್ಲಿ ಎರಡು ವರ್ಷ ಇಲ್ಲಿ ದೇವರ ಸೇವೆ ಮಾಡಿದ್ದೆ. ಆಗ ದೇವಸ್ಥಾನದಲ್ಲಿ ಅಧುನಿಕ ಸೌಕರ್ಯ ಒಂದೂ ಇರಲಿಲ್ಲ. ಹೊರ ಜಗತ್ತಿಗೆ ಯಾವ ಸಂಪರ್ಕವೂ ಇಲ್ಲದ ಪ್ರದೇಶವಾಗಿತ್ತು ಮೈಲಿ . ದೂರದ ಬಾಯಾರು ಪದವಿನಲ್ಲಿ  ಬಸ್ಸು ಇಳಿದು ಅರ್ಧ ತಾಸು ನಡೆದುಕೊಂಡು  ದೇವಸ್ಥಾನಕ್ಕೆ ಬರಬೇಕಿತ್ತು. ಗುಡ್ಡ ತೋಟ ಗದ್ದೆ ದಾಟಿ ಹಸಿರಿನ ನಡುವೆ ಬರುವ ಒಂದು ಅನುಭವ ವಿಶೇಷವಾಗಿತ್ತು. ಆಗ ವಾಹನಗಳನ್ನು ಕಾಣುವುದಕ್ಕಲ್ಲ ಕೇವಲ  ಸದ್ದು ಕೇಳಬೇಕಾದರೆ ಅರ್ಧ ತಾಸು ನಡೆದು ಹೋಗಬೇಕಿತ್ತು. ಹೀಗಾಗಿ ಯಾವ ಸದ್ದು ಗದ್ದಲವಿಲ್ಲದ ಪರಿಸರವಾಗಿ ಒಂದು ರೀತಿಯ ಶಾಂತ ಪ್ರದೇಶವಾಗಿತ್ತು. ಈಗ ದೇವಸ್ಥಾನದ ಅಂಗಳದವರೆಗೂ ವಾಹನ ಬರುತ್ತದೆ. ಒಂದೂ ವಾಹನ ಕಾಣದ ಕಾಲ ಒಂದಾದರೆ, ಈಗ ನವರಾತ್ರಿಯಲ್ಲಿ  ಆಯುಧ ಪೂಜೆಗೆ ವಾಹನ ಸಾಲುಗಟ್ಟಿ ನಿಂತಿರುತ್ತದೆ.


ಬಾಲ್ಯದಲ್ಲಿ ಮನೆಯಿಂದ ದೂರವಾಗಿ ಒಂದೆರಡು ವರ್ಷ ಹಗಲು ರಾತ್ರಿ ಇಲ್ಲೇ ಕಳೆದಿದ್ದೆ. ದೇವರ ನೈವೇದ್ಯ ಬಿಟ್ಟರೆ ಬೇರೆ ಏನೂ ಇರುತ್ತಿರಲಿಲ್ಲ.ಆಗ ಪೂಜೆಗೆ ಇರುತ್ತಿದ್ದ ಗೋಪಣ್ಣನ ಜತೆ ಮೂರು ಹೊತ್ತು ಸ್ನಾನ ಮಾಡಿ ದೇವರ ಸೇವೆ ಮಾಡುತ್ತಿದ್ದೆ. ಮೂರು ಹೊತ್ತು ಗುಂಪೆ ಪರ್ವತದ ತಡಿಯಿಂದ ಹರಿದು ಬರುವ ತಣ್ಣೀರಿಗೆ ತಲೆಕೊಟ್ಟು ಸ್ನಾನ ಮಾಡುತ್ತಿದ್ದೆ .  ಈಗಲೂ ನಾನು ನಿತ್ಯ ತಣ್ಣೀರ ಸ್ನಾನ ಮಡುತ್ತಿದ್ದರೆ ಅದಕ್ಕೆ ಕಾರಣ ನಿತ್ಯವೂ ಇಲ್ಲಿ ಸ್ನಾನ ಮಡುತ್ತಿದ್ದ ತೀರ್ಥ ಸ್ನಾನವೇ ಕಾರಣ. 


  ಪ್ರತಿ ನಿತ್ಯ   ನೈವೇದ್ಯಕ್ಕೆ ಸಿದ್ದ ಪಡಿಸುವುದು, ಪಂಚಕಜ್ಜಾಯಕ್ಕೆ ನೆರವಾಗುವುದು, ಅನ್ನ ನೈವೇದ್ಯಕ್ಕೆ ಬೆಂಕಿ ಹಾಕಿ ಅದನ್ನು ಅಣಿಗೊಳಿಸುವುದು, ದೇವರ ಪೂಜೆಗೆ ಹೂವು ಮತ್ತೀತರ ವಸ್ತುಗಳನ್ನು ಅಣಿಗೊಳಿಸುವುದು...ಹೀಗೆ ಆ ವಯಸ್ಸಿನಲ್ಲಿ ಸಾಧ್ಯವಾಗುವ ಕೆಲಸಗಳನ್ನು ಮಾಡುತ್ತಿದ್ದೆ. ಈಗ ಅಲ್ಲಿಗೆ ಹೋದಾಗ ಅಲ್ಲಿ ಕೇವಲ ಲಂಗೋಟಿ ತುಂಡು ಬೈರಾಸಿನಲ್ಲಿ  ಓಡಾಡಿದ ಆ ದಿನಗಳು ನೆನಪಾಗಿಬಿಡುತ್ತವೆ. ರಾತ್ರಿ ಎಷ್ಟೋ ಸಲ ನಾನು ಒಬ್ಬನೇ ಆ ದೇವಸ್ಥಾನದಲ್ಲಿ ಮಲಗಿದ್ದೆ. ಈಗ ಅದನ್ನು ಕಲ್ಪಿಸುವುದೂ ಕಷ್ಟವಾಗುತ್ತದೆ. ಯಾವ ಜನಸಂಚಾರವೂ ಇಲ್ಲದ ಆ ಕಾಲದಲ್ಲಿ ಅಲ್ಲಿ ಹಗಲು ಕಳೆಯುವುದೂ ಒಂದು ವಿಚಿತ್ರ ಅನುಭವ. ಮಧ್ಯಾಹ್ನದ ಪೂಜೆ ಮುಗಿಸಿ ಊಟಕ್ಕೆ ಚಟ್ನಿಯೋ ಸಾರು ಪಲ್ಯ ಸಿದ್ದ ಪಡಿಸಿ ಊಟ ಮಾಡುತ್ತಿದ್ದೆವು. ಆಗ ಭೀಮ ಗಾತ್ರದ ರುಬ್ಬುವ ಕಲ್ಲಿನಲ್ಲಿ ತೆಂಗಿನ ಕಾಯಿ ಅರೆದು ಅಡಿಗೆ ಮಾಡಿದ ಅನುಭವ,  ಈಗ ನನ್ನ ಹೊಟ್ಟೆಗೆ ಬೇಕಾದದ್ದನ್ನು ಮಾಡಿ ತಿನ್ನುವ ಸ್ವಾವಲಂಬೀ ಗುಣವನ್ನು ಬೆಳೆಸುವುದಕ್ಕೆ ಆಗಿನ ಆ  ಶಿಕ್ಷಣ ಕಾರಣವಾಗಿದೆ. ಈಗಲೂ ನನ್ನ ಹಸಿವಿಗೆ ನಾನೇ ಬೇಯಿಸಿ ತಿನ್ನುವ ಪ್ರವೃತ್ತಿ ಇದೆ. ಇದನ್ನು ಒದಗಿಸಿದ್ದು ಬಾಲ್ಯದ ನನ್ನ ಈ ದೇವಸ್ಥಾನದ ಜೀವನ. ಆಗ ಪೂಜೆಗಿದ್ದ ಗೋಪಣ್ಣ ಪ್ರೀತಿಯಿಂದ ಹೇಳಿ,  ಕೆಲವೊಮ್ಮೆ ಗದರಿ ಬೇಕಾದ ರೀತಿಯಲ್ಲಿ ನನ್ನಿಂದ ಕೆಲಸವನ್ನು ಮಾಡಿಸಿ ಒಂದು ರೀತಿಯಲ್ಲಿ ಆ ದೇವರಿಗೆ ನನ್ನಿಂದ ಒಂದಷ್ಟು ಸೇವೆ ಲಭ್ಯವಾಗುವ ಹಾಗೆ ಮಾಡಿದ್ದರು. ಈಗ ಅವರಿಲ್ಲ. ಆದರೆ ಅಲ್ಲಿಗೆ ಹೋದಾಗ ಆ ನೆನಪೆಲ್ಲ ಮರುಕಳಿಸುತ್ತದೆ. ದೇವಸ್ಥಾನ ಗೋಪುರದಲ್ಲಿ ಉಂಡದ್ದು ನಿದ್ದೆ ಮಾಡಿದ್ದು ಆಟ ಆಡಿದ್ದು ಕನಸು ಕಂಡದ್ದು  ಆ ದಿನಗಳನ್ನು ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ. 


ಬೆಳಗ್ಗೆ ನಿದ್ದೆ ಬಿಟ್ಟು ಎದ್ದ ಕೂಡಲೇ ಸ್ನಾನ ಮಾಡಿ ದೇವಸ್ಥಾನದ ಒಳಗೆ ಹೋಗಿ ರುದ್ರ ಮಂತ್ರ ಪಠಿಸುವುದು, ನನ್ನಿಂದ ಆದ ಚಾಕರಿಯನ್ನು ಮಾಡುವುದು ಹೀಗೆ ಹಗಲು ಇರುಳೆನ್ನದೆ ಕಳೆದ ದಿನಗಳು ಇಂದು ದೇವರ ಭಕ್ತಿಯಲ್ಲದ ಇನ್ನೊಂದು ಬಾಂಧವ್ಯವನ್ನು ಸ್ಮರಣೆಗೆ ತರುತ್ತದೆ. ಮಧ್ಯಾಹ್ನದ ವಿಪರೀತ ಕಾಡುವ ಹಸಿವಿನಲ್ಲಿ ಅಲ್ಲಿ ಬಡಿಸಿದ  ನೈವೇದ್ಯ ಜತೆಗೆ ಚಟ್ನಿ ತಂಬುಳಿ ಸಾರಿನ ಸರಳವಾದ ಊಟ ಅದರ ರುಚಿ ಇನ್ನೂ ಮಾಸಿಲ್ಲ. ಈಗಲೂ ಹಸಿವಾಗುವಾಗ ಮಠದ ಊಟದ ರುಚಿ ನೆನಪಿಗೆ ಬಂದು ಅದಕ್ಕೆ ಸರಿಸಾಟಿಯಾದ ಆಹಾರ ಮತ್ತೊಂದು ಇಲ್ಲ ಎಂಬ ಭಾವನೆ ಬರುತ್ತದೆ. ಮಠದ ಬಾಲ್ಯದ ಜೀವನದ ನೆನಪಿಗಾಗಿ ಈಗಲೂ ಬಾಳೆಕಾಯಿ ಪಲ್ಯ,  ಚಟ್ನಿ ತಂಬುಳಿ ಮಾಡಿ ಊಟ ಮಾಡುತ್ತೇನೆ.  ಮೊದಲು ಮಠದಲ್ಲಿ ಒಂದು ತರಕಾರಿಯನ್ನೂ ಆಂಗಡಿಯಿಂದ ತರುತ್ತಿದ್ದ ಸಂಭವ ಇರುತ್ತಿರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ತೋಟಕ್ಕೆ ಹೋಗಿ ಅಲ್ಲಿದ್ದ ಬಾಳೆಕಾಯಿ ಅಥವ ಸೊಪ್ಪು ತರಕಾರಿ ತಂದು ಅಡುಗೆ ಮಾಡಿ ಊಟ ಮಾಡುತ್ತಿದ್ದೆವು. ಆಲುಗಡ್ಡೆ ಟೊಮೆಟೊ ಕಂಡ ನೆನಪೇ ಇರುತ್ತಿರಲಿಲ್ಲ. ಈಗ ನವರಾತ್ರಿ ಇದಿಲ್ಲದೆ ಅಡುಗೆಯೇ ಇಲ್ಲ ಎಂಬಂತಹ ಬದಲಾವಣೆ ಆಗಿ ಹೋಗಿದೆ. ನಿಜಕ್ಕೂ ಆಗಿನ ದೇವಸ್ಥಾನದ ಆ ಊಟ ಅಮೃತ ಸದೃಶ.  ಯಾವ ಕಲ್ಮಶವೂ ಇಲ್ಲದ ಪರಿಶುದ್ದ ಆಹಾರ. 


ದೇವಾಲಯ ಈಗ ಆಧುನಿಕತೆಯ ಸ್ಪರ್ಶದಲ್ಲಿ ನಳನಳಿಸುತ್ತದೆ. ಮೊದಲು ಇದ್ದ ಸೆಗಣಿ ಸಾರಿಸಿದ ನೆಲ ಮಣ್ಣಿನ ವಾಸನೆ ಈಗ ಇಲ್ಲ. ಎಲ್ಲೆಂದರಲ್ಲಿ ನಳ್ಳಿ ತಿರುಗಿಸಿದರೆ ನೀರು , ಅಧುನಿಕ ಅಡುಗೆ ಪಾತ್ರೆ ಸಜ್ಜೀಕರಣ ಇವುಗಳ ನಡುವೆ ಹಳೆಯ ನೈವೇದ್ಯದ ಘಂ ಎನ್ನುವ ಸುವಾಸನೆ ಕಳೆದು ಹೋಗಿದೆ. ಆದರೆ ಆ ನೆನಪುಗಳು ಇನ್ನೂ ಹಸಿರಾಗಿಇದೆ. ಇಂದಿನ ತಲೆಮಾರಿಗೆ ಅದನ್ನು ವರ್ಣಿಸಿದರೂ ಅರ್ಥವಾಗದ ಆನುಭವಗಳ ಮಾರ್ದವತೆ ಕೇವಲ ಕಥೆಯ ಸನ್ನಿವೇಶಗಳಂತೆ ಭಾಸವಾಗಬಹುದು. 


ಪ್ರತೀ ಸಲ ನವರಾತ್ರಿ ಬರುವಾಗ ಇಲ್ಲಿ ಒಂದೆರಡು ದಿನವಾದರೂ ಇದ್ದು ದೇವರ ಸೇವೆಯ ಜತೆಗೆ ಹಿಂದಿನ ನೆನಪುಗಳಿಗೆ ಒಂದಷ್ಟು ತೀರ್ಥ ಸಿಂಪಡಿಸಿ ಅದನ್ನು ಹಸಿರಾಗಿ ಇರುವಂತೆ ಮಾಡುವ ನಿರೀಕ್ಷೆ ಇರುತ್ತದೆ.  ಆದರೆ ಅದು ಸಾಧ್ಯವಾಗುವುದಿಲ್ಲ. ಆದರೂ ಈ ಬಾರಿ ಎರಡು ದಿನ ದೇವರ ಸೇವೆಯಲ್ಲಿ ಕಳೆದೆ.  ಮರುಭೂಮಿಯ ಓಯಸಿಸ್ ನ  ನೀರಹನಿಯ ಅನುಭವಗಳಂತೆ ಒಂದಷ್ಟು ಹಳೆಯ ನೆನಪುಗಳು ಹಾದು ಹೋಯಿತು. ಅಮ್ಮನ ಎದೆಹಾಲಿನ ನೆನಪು ಬದುಕಿನಾದ್ಯಂತೆ ಇರುವಂತೆ  ಈ ಅಮ್ಮನ ಮಡಿಲಿನ ನೆನಪುಗಳು ಎದೆಹಾಲಿನ ಮಾರ್ದವತೆಯನ್ನು ಒದಗಿಸಿದವು. 


ಎರಡು ದಿನ ಸಮೀಪ ಸಂಬಂಧಿ ಶ್ರೀ ಲಕ್ಷ್ಮೀನಾರಾಯಣ ಭಟ್ಟರ ಮನೆಯಲ್ಲಿ ಉಳಿದುಕೊಂಡಿದ್ದೆ. ಮನೆಯ ಹತ್ತಿರವೇ ನಾಗಬನ ಇದ್ದು ಒಂದು ರೀತಿಯಲ್ಲಿ ಅರಣ್ಯದ ವಾತಾವರಣ ಕಲ್ಪಿಸಿತ್ತು. ನಾನು ಉಳಿದುಕೊಳ್ಳುವ ಜಾಗದಲ್ಲಿ ಮುಂಜಾನೆಯ ಶಾಂತ ಪರಿಸರದದ ಮೌನವನ್ನು ಅನುಭವಿಸುವುದಕ್ಕೆ ಬಯಸುವವನು. ಅದಕ್ಕೆ ಇಲ್ಲಿ ಮುಕ್ತ ಅವಕಾಶವಿತ್ತು. ಮುಂಜಾನೆ ನಾಲ್ಕು ಘಂಟೆಗೆ ಎದ್ದು ಸಂಧ್ಯಾವಂದನೆಗೆ ಕುಳಿತಾಗ ಆ ಮೌನವೇ ಭಗವಂತನ ರೂಪದಲ್ಲಿ ಪ್ರತ್ಯಕ್ಷವಾದಂತೆ ಭಾಸವಾಯಿತು. ಭಗವಂತನಿಗೆ ರೂಪವಿಲ್ಲ ಭಾವವಿಲ್ಲ, ಗುಣವಿಲ್ಲ...ಆದರೆ ಇಲ್ಲಿ ಸುತ್ತಲ ಪರಿಸರದ ಮೌನವೇ ದೈವದ ಅರಿವನ್ನು ಒದಗಿಸಿ ಭಗವಂತನ ಅಸ್ತಿತ್ವವನ್ನು ಹೃದಯಕ್ಕೆ ರವಾನಿಸಿತ್ತು.  ನಾನು ಎಲ್ಲೇ ಉಳಿದುಕೊಂಡರೂ ಮುಂಜಾನೆ ಯೋಗಾಭ್ಯಾಸಕ್ಕೆ ಅನುಕೂಲವನ್ನು ಮೊದಲು ಬಯಸುತ್ತೇನೆ. ಮನೆಯ ಮೇಲೆ ಅದಕ್ಕೆ ಮುಕ್ತವಾದ ವಾತಾವರಣ , ನಿಜಕ್ಕೂ ನಾನು  ಆ ಮನೆಯವರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ನನಗೆ ಮುಕ್ತವಾಗಿ ಸರ್ವಸ್ವತಂತ್ರವಾಗಿ ಇರುವುದಕ್ಕೆ, ನನ್ನದೇ ಮನೆ ಎನ್ನುವ ಭಾವನೆ ಬರುವುದಕ್ಕೆ ಸಹೃದಯದ ಸೌಕರ್ಯವನ್ನು ಒದಗಿಸಿದ್ದರು. 


ಮನೆಯಲ್ಲಿ ನಿತ್ಯ ಕರ್ಮದ ರೂಪದಲ್ಲಿ ಮಾಡುವ ದೇವರ ಪೂಜೆ ಪುನಸ್ಕಾರಗಳು ಸಂಧ್ಯಾವಂದನೆ ನಿತ್ಯ ವಿಧಿಗಳು ನಿತ್ಯದ ಬದುಕಿಗೆ ಚೈತನ್ಯವನ್ನು ಒದಗಿಸಿದರೆ, ಹೀಗೆ ಅಲಭ್ಯವಾದ ಅವಕಾಶಗಳು ಸಿಕ್ಕಿ ಒಂದು ದೇವಸ್ಥಾನದಲ್ಲಿ ಉಳಿದುಕೊಂಡು ಅಲ್ಲಿಯವನಾಗಿ ಇರುವುದು ವರ್ಷದಾದ್ಯಂತೆ ಚೈತನ್ಯವನ್ನು ಒದಗಿಸುತ್ತವೆ. ಯಾವುದೇ ಮಾನಸಿಕ ಒತ್ತಡವಿಲ್ಲದೆ ಸರ್ವವೂ ದೇವರ ಕ್ರಿಯೆಯಲ್ಲಿ ದೇವರಿಗೆ ಸಮರ್ಪಿಸುವುದು ನಿಷ್ಕಾಮ ಕರ್ಮಕ್ಕೆ ಪ್ರೇರಣೆಯಾಗುತ್ತದೆ. ದೈವಕಾರ್ಯದಲ್ಲಿ ಯಾವ ವೃತ್ತಿಯನ್ನಾಗಲಿ ಭೇದವಿಲ್ಲದೆ ಶುದ್ದ ವೈರಾಗ್ಯದಿಂದ ಮಾಡುವಾಗ ಅಲ್ಲೊಂದು ಆತ್ಮ ತೃಪ್ತಿ ಇರುತ್ತದೆ. ಆವಳದ ಈ ದೇವಸ್ಥಾನದಲ್ಲಿ ಎರಡು ದಿನ  ಅದನ್ನು ಯಥೇಚ್ಛವಾಗಿ ಅನುಭವಿಸಿದೆ. ಎರಡು ದಿನ ಅಮ್ಮನ ಮಡಿಲಲ್ಲಿ ರಾಮನ ಅಳಿಲಾದ ಧನ್ಯತೆಯನ್ನು ಹೊತ್ತು ವಿದಾಯವನ್ನು ಹೇಳಿ ಅಲ್ಲಿನ ಅರ್ಚಕರು ನನಗಾಗಿ ಹೃದಯ ತುಂಬಿ ಪ್ರಾರ್ಥಿಸುವಾಗ ಒಂದು ಘಳಿಗೆ ನನಗೆ ಧನ್ಯತೆಯಲ್ಲಿ ಮಾತು ಹೊರಡದೆ ಹೃದಯ ಭಾರವಾಯಿತು. ಇನ್ನೂ ಮುಂದಕ್ಕೆ ಇದಕ್ಕಿಂತಲ್ಲೂ ಹೆಚ್ಚು ಸೇವೆಯನ್ನು ಒದಗಿಸುವ ಚೈತನ್ಯ ಲಭ್ಯವಾಗಲಿ ಎಂಬ ಮನದಾಶೆ ಮನದಾಳದಲ್ಲಿ ಸ್ಥಿರವಾಗಿ ಬೇರುಬಿಟ್ಟಿತು. 






Thursday, September 25, 2025

ನಮ್ಮದಲ್ಲ

ಇತ್ತೀಚೆಗೆ ಬಿಡುಗಡೆಯಾದ ಸಂಶಯಂ ಎನ್ನುವ ಮಲಯಾಳಂ ಸಿನಿಮಾ ನೋಡಿದೆ. ಮಾರ್ಮಿಕ ಕಥಾ ಹಂದರ ಭಾವಾನಾತ್ಮಕ ಸಂಭಂಧಗಳ ಸರಳ ಸುಂದರ ಕಥೆಯ ಚಲನ ಚಿತ್ರವಿದು. ಹೊಸದಾಗಿ ಮದುವೆಯಾದ ನಾಯಕ ನಾಯಕಿಗೆ ಬಹಳ ಕಾಲ ಮಕ್ಕಳಾಗದೇ ಕೊನೆಗೆ ಆಕೆ ಗರ್ಭವತಿಯಾಗಿ ಮಗುವನ್ನು ಪಡೆಯುತ್ತಾಳೆ. ಎರಡು ವರ್ಷ ಕಳೆದ ನಂತರ ಆಕೆಗೆ ಆ  ಮಗು ತನ್ನದಲ್ಲ ಎಂಬ ಸಂಶಯ ಬರುತ್ತದೆ. ಆಕೆ ಪ್ರಸವಿಸಿದ ಅದೇ ಅಸ್ಪತ್ರೆಯಲ್ಲಿ ಆ ಸಮಯ ಐದಾರು ಮಕ್ಕಳ ಜನನವಾಗಿರುತ್ತದೆ. ಹಾಗಾಗಿ ಅಲ್ಲಿ ಅದಲು ಬದಲಾಗಿರುವ ಸಾಧ್ಯತೆ ಇರುತ್ತದೆ.  ಅಲ್ಲಿಂದ ಆ ಮಗುವಿನ ಅಪ್ಪ ಅಮ್ಮ ಯಾರು? ಎಂಬ ಹುಡುಕಾಟ.  ಕೊನೆಯಲ್ಲಿ ಆಕೆ ಹೆತ್ತ ಮಗುವಿನ ಪತ್ತೆಯಾಗುತ್ತದೆ. ನ್ಯಾಯಾಲಯದಲ್ಲಿ ಮೊಕದ್ದಮೆಯೂ ದಾಖಲಾಗುತ್ತದೆ.  ಡಿ ಎನ್ ಎ ಪರೀಕ್ಷೆ ಮಾಡಿದಾಗ ಈಕೆಯ ಸಂಶಯ ನಿಜವಾಗಿ ನಿಜವಾದ ಮಗುವನ್ನು ಪಡೆಯುವಂತೆ ನ್ಯಾಯಲಯ ತೀರ್ಪುಕೊಡುತ್ತದೆ. ಅಲ್ಲಿಂದಲೇ ನಿಜವಾದ ಸಮಸ್ಯೆ ಎದುರಾಗುವುದು. ಆ  ಮಗುವನ್ನು ಬದಲಾಯಿಸುವುದು ಹೇಗೆ? ಅದರ ಮತ್ತೊಂದು ಅಪ್ಪ ಅಮ್ಮ ಅದನ್ನು ಕೊಡುವುದಕ್ಕೆ ಸಿದ್ದರಿರುವುದಿಲ್ಲ. ಮೇಲಾಗಿ ಅವರು ಮುಸ್ಲಿಂ ...ಹೀಗೆಲ್ಲ ಸಮಸ್ಯೆಗಳಿದ್ದರೂ ನ್ಯಾಯಾಲಯದ ತೀರ್ಪು ಗೌರವಿಸಲೇ ಬೇಕು. ಮಗುವನ್ನು ಬದಲಾಯಿಸುವಾಗ ...ತಾಯಂದಿರೇನೋ ಬದಲಿಸಿಕೊಳ್ಳಬಹುದು. ಆದರೆ ಆ ಮಗುವಿಗೆ ಇದರ ಅರಿವು ಇರಬಹುದೇ? ಅದಾಗಲೇ ತನ್ನ ಅಮ್ಮ ಇದೇ ಅಂತ ಭಾವನಾತ್ಮಕವಾಗಿ ಆ ಮಗು ತಿಳಿಯದೇ ಸಂಬಂಧ ಬೆಳೆಸಿರುತ್ತದೆ. ಅದಕ್ಕೆ ನ್ಯಾಯಾಲಯವಾಗಲಿ ಈ ಅಮ್ಮಂದಿರ ಭಾವನೆಯಾಗಲೀ ಪರಿವೆ ಇರುವುದಿಲ್ಲ. ಇಲ್ಲಿ ಮಗುವಿನ ಮಾನಸಿಕ ನೆಲೆಗೆ ಗೌರವ ಎಲ್ಲಿಂದ ಬರಬೇಕು? ತನ್ನದಲ್ಲದ ಅಮ್ಮನನ್ನು ಅಮ್ಮನೇ ಅಂತ ಅದು ಮಾನಸಿಕವಾಗಿ ಒಪ್ಪಿಕೊಂಡಿರುತ್ತದೆ. ದೈಹಿಕ ಸಂಬಂಧಗಳಿಗಿಂತಲೂ ಮಾನಸಿಕ ಸಂಭಧಗಳು ಭಾವನೆಗಳಿಗೆ ಹೆಚ್ಚು ಮೌಲ್ಯ. ಆದರೆ ಅದು ನಾನು ಹೆತ್ತ ಮಗುವಲ್ಲ ಯಾರೋ ಹೆತ್ತ ಮಗು ಎಂದು ಮನಸ್ಸಿಗೆ ಭಾವನೆ ಬಂದಾಗ ಮಗುವನ್ನು ಒಪ್ಪಿಕೊಂಡು ಆ ಮಗುವಿನಂತೆ ಸಂಭಂಧ ಬೆಸೆಯುವುದಕ್ಕೆ ಅಮ್ಮನಿಗೆ ಸಾಧ್ಯವಾಗುವುದಿಲ್ಲ. 

ವಾಸ್ತವದ ಸ್ಥಿತಿ ಮತ್ತು ಸತ್ಯ ಹೇಗೆ ಇರಲಿ ಮನಸ್ಸಿಗೆ ಹೀಗೆ ಎಂಬ ಭಾವನೆ ಬಂದು ಬಿಟ್ಟರೆ ಅಲ್ಲಿ ದೇಹ ಸಹಕರಿಸುವುದಿಲ್ಲ. ಅದು ನನ್ನದಲ್ಲ ಈ ಭಾವನೆ ಒಂದೇ ಸಾಕಾಗುತ್ತದೆ. ಅದು ಅಮ್ಮನಿಗಾದರೂ ಮಗುವಿಗಾದರೂ ಅಷ್ಟೇ. 

ಮೊದಲು ಊರ ಮನೆಯಲ್ಲಿ ನಾಯಿಯನ್ನು ಸಾಕುತ್ತಿದ್ದೆವು. ನಾಯಿಗೆ ಊಟ ಹಾಕುವುದಕ್ಕೆ ಒಂದು ಹಳೆಯ ತಟ್ಟೆ ಇರುತ್ತಿತ್ತು. ಆ ತಟ್ಟೆ ಎಷ್ಟೇ ಶುಚಿಯಾಗಿರಲಿ, ಅದನ್ನು ಕಾಲಿಂದ ತಳ್ಳಿ ಅದಕ್ಕೆ ಅನ್ನ ಆಹಾರ ಹಾಕುತ್ತಿದ್ದೆವು. ಇಲ್ಲಿ ಆ ಪಾತ್ರೆ ನಾಯಿ ಉಂಡ ಪಾತ್ರೆ ಎಂಬುದಷ್ಟೇ ಮುಖ್ಯವಾಗುತ್ತಿತ್ತು. ಅದು ಮನುಷ್ಯರು ಕೈಯಿಂದ ಮುಟ್ಟುವಂತಹುದಲ್ಲ. ಮನಸ್ಸಿನ ಭಾವನೆ ಅದೊಂದು ವಿಚಿತ್ರ ಕಲ್ಪನೆ. ನಮ್ಮದು ಅಥವಾ ನಮ್ಮದಲ್ಲ ಈ ಭಾವನೆಗಳ ವೆತ್ಯಾಸದಲ್ಲಿ ನಮ್ಮ ಪ್ರವೃತ್ತಿ ಇರುತ್ತದೆ.  

ಕೆಲವೊಮ್ಮೆ ಯಾವುದೇ ಕಾರ್ಯ ಕೆಲಸಗಳು ಇದೇ ಬಗೆಯಲ್ಲಿ ವರ್ಗೀಕರಿಸಲ್ಪಡುತ್ತದೆ. ಅದು ಸತ್ಕಾರ್ಯ ಅಥವ ದುಷ್ಕಾರ್ಯ, ಇಲ್ಲಿ ಕಾರ್ಯ ಮುಖ್ಯವಾಗುವುದಿಲ್ಲ. ಅದು ಮಾಡುವ ವ್ಯಕ್ತಿ ಅಥವಾ ಸನ್ನಿವೇಶ ಮುಖ್ಯವಾಗುತ್ತದೆ. ಒಂದು ಒಳ್ಳೆಯ ಸತ್ಕಾರ್ಯ...ನಮಗೆ ಆಗದೇ ಇದ್ದವರು ಮಾಡಿದಾಗ ಅದನ್ನು ಒಪ್ಪಿಕೊಳ್ಳುವುದಕ್ಕೆ ಮನಸ್ಸು ಸಿದ್ದರಿರುವುದಿಲ್ಲ. ಅದೇ ಬಗೆಯಲ್ಲಿ ಯಾವುದೇ ಕೆಟ್ಟ ಕೆಲಸವನ್ನು ನಮ್ಮ ಇಷ್ಟವಿದ್ದವರು ಮಾಡುವಾಗ ಅದನ್ನು ಕೆಟ್ಟದ್ದು ಎಂದು ಹೇಳುವುದರಲ್ಲಿ ಆತ್ಮವಂಚನೆ ಎದುರಾಗುತ್ತದೆ. ಅದು ಕೆಲಸದ ಮೇಲಿನ ಭಾವವಲ್ಲ. ಕೇವಲ ಮನುಷ್ಯ ಸಂಬಂಧದ ಮೇಲಿನ ಭಾವ.  ಕಾರ್ಯ ಒಂದೇ ಇರುತ್ತದೆ, ಮಾಡುವ ವ್ಯಕ್ತಿ ಬೇರೆ ಬೇರೆಯಾಗಿರುತ್ತದೆ. 

ಅಷ್ಟಾಂಗ ಯೋಗದಲ್ಲಿ ಒಂದು ನಿಯಮವಿದೆ ಅಹಿಂಸೆ. ಅಂದರೆ ಹಿಂಸೆಯನ್ನು ಮಾಡದೇ ಇರುವುದು. ಇಲ್ಲಿ ಹಿಂಸೆ ಎಂಬುದು ಮನಸ್ಸಿನ ಹಿಂಸಾತ್ಮಕ ಮನೋಭಾವವನ್ನು ಹೊಂದಿದೆ. ಅಹಿಂಸೆ ಎನ್ನುವುದು ಮಾಂಸಾಹಾರಿಯಾಗುವುದರಲ್ಲಿ ಇಲ್ಲ. ಮೇಲ್ನೋಟಕ್ಕೆ ನೋಡುವಾಗ ಸಸ್ಯಹಾರಿಯಾಗುವುದರಲ್ಲಿ ಅಹಿಂಸಾ ಗುಣವಿರುತ್ತದೆ. ಆದರೆ ವಾಸ್ತವದಲ್ಲಿ ಮಾಂಸಾಹಾರಿಯಾಗಿದ್ದರೂ ಅಹಿಂಸಾ ಗುಣವನ್ನು ಅಳವಡಿಸಿಕೊಳ್ಳಬಹುದು. ಹಿಂಸೆ ಅದು ಮನಸ್ಸಿನ ಭಾವದಲ್ಲಿರುತ್ತದೆ ಹೊರತು ಕೃತ್ಯದಲ್ಲಿ ಇರುವುದಿಲ್ಲ. ಯಾರಿಗೂ ಮನಸ್ಸಿನಿಂದಲೂ ಹಿಂಸಾತ್ಮಕ ಚಿಂತನೆಯಿಂದ ನೋವಾಗದಂತೆ ವರ್ತಿಸುವುದು ಅಹಿಂಸಾ ಗುಣವಾಗಿರುತ್ತದೆ. ಹಿಂಸೆ ಎಂಬುದು ಪ್ರವೃತ್ತಿಗಿಂತಲೂ ಮನೋಭಾವದಿಂದ ಕೂಡಿರುತ್ತದೆ. ಹಿತೈಷಿಗಳು  ಪ್ರೀತಿಯಿಂದ ಕೆಟ್ಟದಾಗಿ ಗದರಿದರೂ ಅದು ಬೈಗುಳವಾಗುವುದಿಲ್ಲ. ಅಥವಾ ದ್ವೇಷದಿಂದ ಶತ್ರುಗಳು ವ್ಯಂಗ್ಯವಾಗಿ ಹೊಗಳಿದರೂ ಅದು ಸ್ತುತಿಯಾಗುವುದಿಲ್ಲ.  ಮನೋಭಾವ ಎಂಬುದು ಪ್ರವೃತ್ತಿಗೆ ಪೂರಕವಾಗಿರುವುದಿಲ್ಲ. ಅದು ವ್ಯಕ್ತಿರಿಕ್ತವಾಗಿರುತ್ತದೆ. 

ಯಾವುದೋ ಒಂದು ಹಾಡು ಯಾರಿಗೋ ಇಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಮೊತ್ತೊಬ್ಬರಿಗೆ ಇಷ್ಟವಾಗುವುದಿಲ್ಲ. ಹಾಡಿನ ಭಾವಾರ್ಥವಾಗಲಿ, ಹಾಡಿನ ಸಂದೇಶವಾಗಲಿ, ಹಾಡಿನ ರಾಗ ತಾಳವಾಗಲೀ ಕಾರಣವಾಗದೇ ಯಾರೋ ಇಷ್ಟ ಪಟ್ಟಿದ್ದಾರೆ ಎನ್ನುವುದಕ್ಕೆ ಅದನ್ನು ಹಾಡುವುದಕ್ಕೆ ಕೇಳುವುದಕ್ಕೆ ಬಯಸುವುದಿಲ್ಲ. ಕೇವಲ ಮನಸ್ಸಿನ ಭಾವ ಮಾತ್ರ. ಯಾವುದೋ ಹಾಡು ಯಾರೋ ದ್ವೇಷಿಸಿದ ಮಾತ್ರಕ್ಕೆ ಅದು ಕೆಟ್ಟ ಹಾಡಾಗುವುದಿಲ್ಲ.  ನಮ್ಮ ಮೆಚ್ಚಿನ ನಟ ಕೆಟ್ಟ ಸಿನಿಮಾದಲ್ಲಿ ನಟಿಸಿದರೂ ಅದು ಕೆಲವು ಸಲ ಇಷ್ಟವಾಗುತ್ತದೆ. ಅಭಿಮಾನದಲ್ಲಿ ಕೆಟ್ಟದ್ದು ಎಂಬುದು ಮುಚ್ಚಿ ಹೋಗುತ್ತದೆ.  ಹೆತ್ತ ತಾಯಿಗೆ ಹೆಗ್ಗಣ ಮುದ್ದು ಎಂದಾಗುವುದು ಇದೇ ಭಾವದಲ್ಲಿ. ಯಾವುದೋ ಒಂದು ನಮಗೆ ಇಷ್ಟವಾಗುತ್ತದೆ. ಮತ್ತೊಬ್ಬರಿಗೆ ಇಷ್ಟವಾಗಲಿಲ್ಲ ಎನ್ನುವುದಕ್ಕೆ ನಮ್ಮ ಇಷ್ಟವೆಂಬುದು ಮೌಲ್ಯರಹಿತವಾಗುವುದಿಲ್ಲ. ಮತ್ತೊಬ್ಬರ ಮನಸ್ಸನ್ನಷ್ಟೇ ಪರಿಗಣಿಸಿ ನಮ್ಮ ಇಷ್ಟವನ್ನು ನಾವು ಗೌರವಿಸಿಬಿಡುವುದರಲ್ಲಿ ಆತ್ಮ ತೃಪ್ತಿ ಇರುತ್ತದೆ. ನಲ್ಲ ಪ್ರೀತಿಯಿಂದ ಕೊಟ್ಟ ಒಂದು ಸಣ್ಣ ಹೂವು ಅವ್ಯಕ್ತವಾದ ಪರಿಮಳವನ್ನು ಬೀರಿದಂತೆ ಇಲ್ಲಿ ಪ್ರೀತಿ ಮಾತ್ರ ಗೌರವಿಸಲ್ಪಡುತ್ತದೆ. ಪ್ರೀತಿ ಎಂಬ ಭಾವ ಮಾತ್ರ ಪ್ರೇಮಿಯದಾಗಿರುತ್ತದೆ. 


Saturday, September 20, 2025

ದಾದಾ ಫಾಲ್ಕೆ ಮೋಹನ್ ಲಾಲ್

ಭರತಂ‌ , ವಾನ ಪ್ರಸ್ಥಂ  ಎಂಬ ಮಲಯಾಳಂ ಸಿನಿಮಾ ನೋಡಿದವರಿಗೆ ಮೋಹನ್ ಲಾಲ್ ಎಂಬ ದೈತ್ಯ ಪ್ರತಿಭೆಯ ಅರಿವಾಗಬಹುದು. ಈ  ಎರಡೂ ಸಿನಿಮಾಗಳಲ್ಲಿನ ಶ್ರೇಷ್ಠ ಅಭಿನಯಕ್ಕಾಗಿ  ಪಡೆದ  ಮೋಹನ್ ಲಾಲ್ ಎರಡೂಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಅಪರೂಪದ ನಟ. ಇವೆರಡೂ ಸಿನಿಮಾಗಳು ಕೇವಲ‌ ಪ್ರತಿಭಾ ನಿದರ್ಶನ ಎನ್ನಬೇಕು.‌ಪಟ್ಟಿ ಮಾಡುತ್ತಾ ಹೋದರೆ ಯಾವುದು ಉತ್ತಮ‌ ಎಂಬ ಆಯ್ಕೆ ಸುಲಭ ಸಾಧ್ಯವಲ್ಲ. 

       ಕಿರೀಟಂ, ಚೆಂಗೋಲ್, ಕಿಲುಕ್ಕಂ  ವಂದನಂ ದಶರಥಂ, ಸದಯಂ, ಪವಿತ್ರಂ, ಪಿಂಗಾಮಿ, ಸನ್ಮನಸ್ಸುಳ್ಳವರ್ಕು ಸಮಾಧಾನಂ, ನಾಡೋಡಿಕ್ಕಾಟು, ಕಳಿಪ್ಪಾಟಂ, ಮಿಥುನಂ, ಚಂದ್ರಲೇಖ, ತನ್ಮಾತ್ರ ಹೀಗೆ ಹೇಳುತ್ತಾ ಹೋದರೆ ಅದಕ್ಕೆ  ಅಂತ್ಯವಿಲ್ಲ ಎಂದನಿಸುತ್ತದೆ. ಎಲ್ಲವೂ ಅತ್ಯುತ್ತಮ‌ ನಟನೆಗೆ ಸಾಕ್ಷಿಯಾದ ಚಿತ್ರಗಳು. ದಶಕಗಳ ಹಿಂದೆ ಇವುಗಳನ್ನು ನೋಡಿ ವಾರಗಳ ಕಾಲ‌ ಅದರ ನಶಾವಲಯಲ್ಲಿ ಹುದುಗಿ ಹೋದದ್ದು ಇನ್ನೂ ನೆನಪಲ್ಲಿದೆ. ಅಭಿನಯವೆಂದರೆ ಅದು ಮಾದರಿಯಾಗಬಲ್ಲ ನಟನಾ ಕೌಶಲವನ್ನು  ಹೊಂದಿದ ಪ್ರತಿಭಾವಂತ ಈ‌ ನಟನೆಗೆ ಮಾರು ಹೋಗದವರಿಲ್ಲ.  ಸರ್ವಾಂಗವೂ ಅಭಿನಯಕ್ಕೆ ಅರ್ಪಿಸಿಕೊಂಡ ಅದ್ಭುತ ನಟನಾಶೈಲಿಗೆ ಸಹಜವಾಗಿ ಚಲನಚಿತ್ರದ ಅತ್ಯುನ್ನತ ದಾದಾ ಸಾಹೆಬ್ ಪ್ರಶಸ್ತಿ ಒಲಿದು ಬಂದಿದೆ. ಈತನ ಪ್ರತಿಭೆಗೆ ಎಂದೋ ಇದು ಸಿಗಬೇಕಿತ್ತು, ಈಗ ಸಿಕ್ಕಿದೆ. ನಿಜಕ್ಕೂ ಲಾಲೇಟ್ಟ ಇದಕ್ಕೆ ಅರ್ಹ‌ ವ್ಯಕ್ತಿ ಎ‌ನ್ನುವುದಕ್ಕೆ ಎರಡು ಮಾತಿಲ್ಲ. 

       ಮಲಯಾಳಂ‌ ಚಿತ್ರರಂಗ ಎಂದರೆ‌ ಪ್ರತಿಭಾ ಸಂಪತ್ತಿನ  ಗಡಣವೇ  ತುಂಬಿದ ಕ್ಷೇತ್ರ. ಇಲ್ಲಿ ನೈಜ ಅಭಿನಯಕ್ಕೆ ಕಠಿಣ ಸ್ಪರ್ಧೆ ಸದಾ ಎದುರಾಗುತ್ತಿದೆ.‌ ಅಂತಹ ಕ್ಷೇತ್ರದಲ್ಲಿ ತನ್ನ ಪ್ರತಿಭೆಗೆ ಹಸರಾದ ಸಂಪೂರ್ಣ ನಟ ಮೋಹನ್ ಲಾಲ್ ಎಂಬುದರಲ್ಲಿ ಎರಡು ಮಾತಿಲ್ಲ. 

       ಎಲ್ಲಾ ಚಿತ್ರರಂಗಗಳೂ ಇಂದು ಸಂಕ್ರಮಣ ಸ್ಥಿತಿಯನ್ನು ಎದುರಿಸುತ್ತದೆ.‌ಇಂದು ಇರುವ ಸ್ಥಿತಿ ನಾಳೆ ಇಲ್ಲ. ಥಿಯೇಟರ್ ಗಳಿಗೆ ಜನ‌ಬರುತ್ತಿಲ್ಲ. ಮನೆಯಲ್ಲೇ ಕುಳಿತು ಅಚ್ಚ ಹೊಸ ಮತ್ತು ತೀರಾ ಹಳೆಯ ನೋಡಬಲ್ಲ ಅವಕಾಶ. ಬೆರಳೆಣಿಕೆಯಲ್ಲಿ ಹೊರ ಬರುವ ಸಿನಿಮಾಗಳು ಹೀಗೆ ಇಂದು ಸಿನಿಮಾ ಎಂದರೆ ಮೊದಲಿನ ಆಕರ್ಷಣೆಯನ್ನು ಕಳೆದುಕೊಂಡಿದೆ. ಅದರಲ್ಲೂ ವರ್ಷಕ್ಕೆ ಹಲವು ಸಿನಿಮಾಗಳನ್ನು ಕೊಡುತ್ತಿದ್ದ ಸೂಪರ್ ಸ್ಟಾರ್ ನಟರು, ಲೀಡ್ ರೋಲ್ ಗಳಿಗಷ್ಟೇ   ಸೀಮಿತವಾಗಿರುವುದರಿಂದ    ಇಂದು ಮೂಲೆ ಸೇರಿ ಹೆಸರಿಗಷ್ಟೇ ಸ್ಟಾರ್ ಅಗಿದ್ದಾರೆ. ಹೆಸರಾಂತ ನಟರ ಹೊಸ ಸಿನಿ‌ಮ ಬಿಡುಗಡೆಯಾಗಿ ಜಮಾನವೇ ಕಳೆದುಹೋಗಿದೆ. ಇಂತಹ ಪರಿಸ್ಥತಿಯಲ್ಲೂ ಮೋಹನ್ ಲಾಲ್ ಹೊಸ ಸಿನಿಮಾಗಳು ಬಿಡಗಡೆಯಾಗಿ ದುಡ್ಡು ಬಾಚುತ್ತಿವೆ ಎಂದರೆ ಮೋಹನ್ ಲಾಲ್ ವರ್ಚಸ್ಸು ಇನ್ನೂ ಹಸಿರಾಗಿರುವುದಕ್ಕೆ, ಎಂತಹಾ ಪಾತ್ರವನ್ನೂ ಲೀಲಾಜಾಲವಾಗಿ ಮಾಡಬಲ್ಲ ಆತನ ಪ್ರತಿಭೆಯೇ ಸಾಕ್ಷಿ.  ಎಂದಿನಂತೆ ಈ ವರ್ಷವೂ ಆತನ ಸಿನಿಮಾಗಳು ಹಿಟ್ ಆಗುತ್ತಿವೆ ಎಂದರೆ... ದಾದಾ ಸಾಹೇಬ್ ಗರಿ ಎಲ್ಲೋ ಅಕಾಶದಲ್ಲಿ ವಿಹರಿಸುತ್ತಾ ಈಗ ಮೋಹನ್ ಲಾಲ್ ತಲೆಯಲ್ಲಿ ಬಂದು ಕುಳಿತಿದೆ. 


         ಒಬ್ಬ ನಟ ಪರಿ ಪೂರ್ಣ ಎಂದಾಗಬೇಕಾದರೆ ಕೇವಲ ಸ್ಟಾರ್ ಗಿರಿ ಸಾಲದು. ಹುಚ್ಚು ಅಭಿಮಾನ ಸಾಲದು. ಯಾವುದೇ ಪಾತ್ರ, ಅದು ಕಥಾನಯಕ ಅಥವಾ ಖಳ ಪಾತ್ರವೇ ಅಗಲಿ   ಇಮೇಜ್ ತೊರೆದು  ಲೀಡ್  ರೋಲ್ ಗೆ ಅಡರದೆ ಪಾತ್ರೋಚಿತ ನಟನೆ ಮಾಡಬಲ್ಲವನಾಗಿರಬೇಕು.‌ಹಾಗಾಗಿಯೇ ಈ ಪರಿಪಕ್ವ ನಟನ ಸಿನಿಮಾ ಎಂದರೆ ಈಗಲು ಜನಾಕರ್ಷಣೆಯನ್ನು ಗಳಿಸಿದ ಇಂತಹ ನಟನಿಗೆ ಈಗ ಪಾಲ್ಕೆ ಗರಿ ಒಲಿದು ಬಂದಿರುವುದು ಕೇವಲ ಅದೃಷ್ಟವೋ ವಶೀಲಿ ಬಾಜಿಯೋ ಖಂಡಿತಾ ಅಲ್ಲ. ಇದು ದೈವದತ್ತ ಪ್ರತಿಭೆಗೆ ಒಲಿದ ಪುರಸ್ಕಾರ.‌ಇದು ಇನ್ನೂ ಹುದುಗಿರುವ ಪ್ರತಿಭೆಗೆ ಪ್ರೇರಣೆಯಾಗಲಿ ಎಂಬುದಷ್ಟೇ ಈ ಸಹಜ ನಟನ ಸಹಜಾಭಿಮಾನಿಗಳ ಆಶಯ.





Saturday, September 6, 2025

ಧರ್ಮ‌ಪರಿಷ್ಕಾರ

    ಹಿಂದೂ ಧರ್ಮದಲ್ಲಿ ಯಾರೂ ಗಂಭೀರವಾಗಿ ಯೋಚಿಸದ ಒಂದು ಗುಣವಿದೆ. ಅದು ಸಂಪೂರ್ಣ ಗ್ರಾಹ್ಯ ಸ್ವಭಾವ ಎಂದರೆ, ಪರಧರ್ಮವನ್ನು ಗ್ರಹಿಸುವ ಮತ್ತು ಗೌರವಿಸುವ ಗುಣ. ಹಾಗಾಗಿ ಇದು ಸಹಸ್ರ ಶತಮಾನಕ್ಕಿಂತ ಹಳೆಯದಾದ ತತ್ವಗಳನ್ನು ಉಳಿಸಿಕೊಂಡು ಸತತವಾಗಿ ಪರಿಷ್ಕಾರಕ್ಕೆ ಒಳಗಾಗಿದೆ. ಹಲವು ಸಲ ಈ ಪರಿಷ್ಕಾರಗುಣ ಈ ಧರ್ಮವನ್ನು ತಾತ್ಸಾರದಿಂದ ಕಾಣುವಂತೆ ಮಾಡಿದೆ. ಅದು ಸಹಜ ಹಲವು ಸಲ ನಮ್ಮ ಸದ್ಗುಣ ಸನ್ಮನಸ್ಸೂ ತಾತ್ಸರಾಗಳಿಗೆ ತುತ್ತಾಗಿ ಅವಗಣಿಸಲ್ಪಡುವುದು ಸಹಜವಾಗಿದೆ.ಅದರಂತೆ ನಮ್ಮ ಮೂರ್ಖ ರಾಜಕಾರಿಣಿಗಳ ಹಲವು ಚಿಂತಕರ ಪ್ರವೃತ್ತಿಯೂ ಇದೇ ಬಗೆಯಲ್ಲಿರುತ್ತದೆ. ಅವರಿಗೆ ಗ್ರಾಹ್ಯ ಗುಣಗಳ ಅರಿವೇ ಇಲ್ಲ.

       ಎಲ್ಲಿ ಧರ್ಮಗಳು ಪರಸ್ಪರ ಸಮಾನವಾಗಿ...ಈ ಸಮಾನವಾಗಿ ಎಂಬುದನ್ನು ಒತ್ತಿ ಹೇಳಬೇಕಿದೆ, ಅದು ಸಮಾನವಾಗಿ ಗೌರವಿಸಲ್ಪಡುವುದೋ ಅಲ್ಲಿ ಧರ್ಮಗಳ‌ ತತ್ವ ಜೀವಂತವಾಗಿ ಆನಷ್ಠಾನದಲ್ಲಿರುರುತ್ತದೆ.. ಆದರೆ ಮೂರ್ಖರಿಗೆ ಇದು ಅರ್ಥವಾಗುವುದಿಲ್ಲ. ಹಾಗಾಗಿ ತಿದ್ದುಪಡಿ ಸಮಾನತೆ ಎಲ್ಲವನ್ನೂ ಹಿಂದೂ ಧರ್ಮದಲ್ಲಿ ಅರೋಪಿಸಿಬಿಡುತ್ತಾರೆ. ಇವರ ಬಗೆಯಲ್ಲಿ ಹಿಂದೂ ಧರ್ಮ‌ಮಾತ್ರ ಬದಲಾಗಿ ಪರಿಷ್ಕರಿಸಬೇಕಾದ ಗುಣಗಳನ್ನು ಹೊಂದಿದೆ.ಆದರೆ ಪ್ರತಿಯೊಂದು ಧರ್ಮದಲ್ಲೂ ಧನಾತ್ಮಕ ಋಣಾತ್ಮಕ ಗುಣಗಳಿವೆ. ಅದನ್ನು ಒಪ್ಪಿಕೊಳ್ಳುವ ಪ್ರಾಮಣಿಕತೆ ಇರಬೇಕು ಅಷ್ಟೇ. ಆದರೆ ಧಾರ್ಮಿಕ ನಿರಪೇಕ್ಷತೆಗೆ ಪಕ್ಷಪಾತ ಶಾಪವಾಗಿ ಪರಿಣಮಿಸುವಾ ಹಿಂದೂ ಧರ್ಮ ಗುರಿಯಾಗುತ್ತದೆ.

         ಪರಧರ್ಮವನ್ನು ಗೌರವಿಸುವಾಗ ನಮ್ಮ ದರ್ಮದ ಶ್ರೇಷ್ಠ ತೆಯನ್ನು ಬಿಂಬಿಸಬೇಕು ಎನ್ನವ ಸಾಮನ್ಯ ಜ್ಞಾನವೂ ಇಲ್ಲದೇ ಹಿಂದೂ ಧರ್ಮವನ್ನು ಅವಗಣಿಸುವ ಈ ಭ್ರಷ್ಟ ಜಾತ್ಯಾತೀತ ತತ್ವದ ಢಾಂಭಿಕತನವನ್ನು ಅರಿಯಬೇಕು. ಅನ್ಯ ಧರ್ಮದ ಆಚರಣೆಯಲ್ಲಿ ನಮ್ಮ ಧರ್ಮವನ್ನು ಒತ್ತೆ ಇಡುವಾಗ ಅನ್ಯ ಧರ್ಮವನ್ನು ಇಲ್ಲೂ ಒತ್ತೆ ಇರಿಸಿಕೊಳ್ಳಬಹುದಾದ ಸಮಾನ ಸೌಹಾರ್ದತೆಯನ್ನು ಅಳವಡಿಸುವುದು ಧಾರ್ಮಿಕ ಅವಕಾಶವಾಗಬೇಕು. ಆದರೆ ಪರಮ ಸ್ವಾರ್ಥದ ಪಕ್ಷಪಾತದಲ್ಲಿ ಇದನ್ನೆಲ್ಲ‌ ಚಿಂತಿಸುವ ಮನೋಭಾವದ ಕೊರತೆಯಾಗಿದೆ. ಇದನ್ನು ಪರಮ‌ ಮೂರ್ಖತನ ಎನ್ನಬೇಕು. ಬಲವಂತದಿಂದ ಕುಂಕುಮ‌ ತಿಲಕ ಇರಿಸಿದರೂ ಬಲವಂತದಿಂದ ಟೋಪಿ ಧರಿಸಿದರೂ ಅದು ಧಾರ್ಮಿಕ ಆಷರಣೆಯಾಗುವುದಿಲ್ಲ. ಕೇವಲ ಆಷಾಢಭೂತಿತನದ ಮೂರ್ಖತನವಾಗುತ್ತದೆ

Tuesday, August 26, 2025

ದೈವಾಗಮನ....


. ಯಾವುದೇ ಹಬ್ಬ ಹರಿದಿನ ಬರಲಿ ನಮ್ಮ ಮನೆಯ ರಸ್ತೆಯಲ್ಲಿ ಮೊದಲ ದಿನವೇ  ಒಂದು ಸಡಗರ ಆರಂಭವಾಗುತ್ತದೆ. ಅದೇನು ನಮ್ಮ ರಸ್ತೆಗೆ ಮಾತ್ರ ಸೀಮಿತವಲ್ಲ. ಎಲ್ಲ ಕಡೆಯೂ ಇರುತ್ತದೆ. ರಾತ್ರಿಯಾಗುತ್ತಿದ್ದಂತೆ ಮನೆಯ ಎದುರು ಗುಡಿಸಿ ನೀರು ಹಾಕಿ ಸ್ವಚ್ಛ ಮಾಡುತ್ತಾರೆ. ಮತ್ತೆ ರಂಗೋಲಿ ಹಾಕುತ್ತಾರೆ. ಇದು ಹಬ್ಬ ಹರಿದಿನ ಅಂತ ಅಲ್ಲ ಹಲವು ಸಲ ದಿನ ನಿತ್ಯವೂ ಇದೂ ಕೆಲವು ಕಡೆ ಇರುತ್ತದೆ. ವಿಚಿತ್ರವೆಂದರೆ ಮೊದಲ ದಿನ ರಾತ್ರಿ ಈ ಕೆಲಸ ಮಾಡುವುದು ಒಂದು ಅಪಭ್ರಂಶ ಎಂಬಂತೆ ನನಗೆ ಭಾಸವಾಗುತ್ತದೆ. ಸಂಪ್ರದಾಯದ ಪ್ರಕಾರ ರಾತ್ರಿ ಪೊರಕೆ ಉಪಯೋಗಿಸುವ ಹಾಗಿಲ್ಲ. ಆದರೂ ನಗರದ ಜೀವನ ಕ್ರಮದಲ್ಲಿ ಕೆಲವನ್ನು ಪಾಲಿಸುವುದು ಸಾಧ್ಯವಾಗುವುದಿಲ್ಲ ಎನೋ ಸತ್ಯ. ಆದರೆ ಅದರ ಬಗ್ಗೆ ಗಮನ ಹರಿಸಿ ಒಂದಿಷ್ಟು ಪ್ರಯತ್ನ ಮಾಡಬಹುದು. ಹೋಗಲಿ ರಾತ್ರಿ ರಂಗೋಲಿ ಹಾಕುವುದು ಮಾತ್ರ ವಿಚಿತ್ರ ಎನಿಸುತ್ತದೆ.  ಇದು ಬೆಂಗಳೂರಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯ. ಹಲವು ಸಲ ಇದನ್ನು ಕಾಣುವಾಗ ಯಾವ ಉದ್ದೇಶಕ್ಕೆ ರಂಗೋಲಿ ಹಾಕುತ್ತಾರೆ ಎಂದು ಆಶ್ಚರ್ಯವಾಗುತ್ತದೆ. 

ನಮ್ಮ ಸಂಪ್ರದಾಯ ಪರಂಪರೆಯಲ್ಲಿ ಬಳಕೆಯಲ್ಲಿ ಬರುವ ಹಲವು ಪವಿತ್ರ ಕಾರ್ಯಗಳಿಗೆ ಅಂತರಾರ್ಥ ಇರುತ್ತದೆ.  ಮಾಡುವ ಕಾರ್ಯ ಹೊರ ನೋಟಕ್ಕೆ ಒಂದು ಕಂಡರೆ ಅದರ ಒಳನೋಟ ಬೇರೆಯೇ ಇರುತ್ತದೆ. ಅದನ್ನು ಮನಗಂಡು ನಾವು ಅದನ್ನು ಗೌರವಿಸಿ ನಡೆದು ಕೊಂಡರೆ ನಾವು ಮಾಡುವ ಆಚರಿಸುವ ಕಾರ್ಯಗಳಿಗೆ ಅರ್ಥ ಒದಗಿಬರುತ್ತದೆ. ಸಂಪ್ರದಾಯವನ್ನು ಮೀರಿ ಯಾವುದನ್ನು ಮಾಡಿದರೂ ಯಾರೇನೂ ಪ್ರಶ್ನಿಸುವುದಕ್ಕಿಲ್ಲ. ಮಾಡುವ ಸ್ವಾತಂತ್ರ್ಯ ಇದ್ದೇ ಇರುತ್ತದೆ. ಶೌಚಾಲಯದಲ್ಲಿ ಕುಳಿತು ಊಟವನ್ನೂ ಮಾಡಬಹುದು. ಮಾಡುವವರ ಸ್ವಾತಂತ್ರ್ಯ ಅಷ್ಟೇ. 

ರಂಗೋಲಿ ಹಾಕುವ ಕ್ರಮ ಎಂದರೆ ಮುಂಜಾನೆ ಸೂರ್ಯ ಉದಿಸುವ ಮೊದಲು ಹಾಕಬೇಕು.  ಸೂರ್ಯೋದಯದಲ್ಲಿ ಭಗವಂತನ ಆಗಮಿಸುತ್ತಾನೆ. ಸೂರ್ಯ ಕಿರಣಗಳೊಂದಿಗೆ ಸುಂದರವಾದ ರಂಗೋಲಿ ಹಾಕಿದರೆ ಅದು ಮುಂಜಾನೆ ಆಗಮಿಸುವ ಸಂಚರಿಸುವ  ಭಗವಂತನಿಗೆ ಅಥವಾ ಒಳ್ಳೆಯ ಶಕ್ತಿಗೆ, ಧನಾತ್ಮಕ ಚಿಂತನೆಗಳಿಗೆ ಸ್ವಾಗತ ಕೋರಿದಂತೆ. ಆದರೆ ರಾತ್ರಿ ರಂಗೋಲಿ ಹಾಕಿದರೆ..ರಾತ್ರಿ  ಋಣಾತ್ಮಕ ಪ್ರತೀಕವಾದ ಬೂತ ಪ್ರೇತ ದೆವ್ವ ಎಂಬ ಅಸುರೀಭಾವಗಳು ಸಂಚರಿಸುವುದನ್ನು ಸ್ವಾಗತಿಸಿದಂತೆ. ಭಗವಂತನ ಬದಲು ಪ್ರೇತ ಪಿಶಾಚಿಗಳನ್ನು ಮನೆಯೊಳಗೆ ಆಹ್ವಾನಿಸಿದಂತಾಗುತ್ತದೆ. ಆದರೆ ಇದನ್ನೆ ತಾಳ್ಮೆಯಿಂದ ಅರ್ಥವಿಸುವ ಗೋಜಿಗೆ ಹೋಗುವುದಿಲ್ಲ. ಒಟ್ಟು ಆಚರಿಸಬೇಕು. ಮೊದಲ ರಾತ್ರಿಯೇ ಹಾಕುವುದರಿಂದ ಮುಂಜಾನೆ ಬೇಗನೆ ಏಳುವ ಅವಶ್ಯಕತೆ ಇರುವುದಿಲ್ಲ. ಇಷ್ಟಕ್ಕೂ ನಾವು ರಂಗೋಲಿ ಹಾಕುವ ಉದ್ದೇಶವಾದರೂ ಏನು ಎಂಬುದು ತಿಳಿದಿರಬೇಕು.  ಹೀಗಾಗಿಯೇ ನಾವೇಷ್ಟು ಉತ್ಕೃಷ್ಟ ಕೆಲಸಗಳನ್ನು ಮಾಡಿದರೂ ಅಸುರೀ ಭಾವ ತಾಂಡವವಾಡುತ್ತದೆ. ನಮ್ಮ ಮನಸ್ಸು ಸದಾ ಅಶಾಂತಿಯಿಂದ ತುಂಬಿರುತ್ತದೆ ಮನೆ ಮನಗಳಲ್ಲಿ ಶಾಂತಿ ಸಮಾಧಾನ ಎಂಬುದು ಗಗನ ಕುಸುಮವಾಗುತ್ತದೆ. ನಾವು ನಾಗರೀಕರಾಗುವುದು ಎಂದರೆ ಪರಂಪರೆಯಲ್ಲಿ ಬಂದ ವಿಶಿಷ್ಟ ಶ್ರೇಷ್ಠ ಪದ್ದತಿಗಳನ್ನು ವಿರೋಧಿಸುವುದೇ ಆಗಿರುತ್ತದೆ. ಅದನ್ನು ವಿರೋಧಿಸಿ ನಡೆದುಕೊಂಡರೆ ನಾವು ನಾಗರೀಕರಾಗಿದ್ದೇವೆ ಎಂದು ಅರ್ಥವಿಸಬೇಕು. 


Saturday, August 9, 2025

ಪುರ್ಸಾದ


ಮೊನ್ನೆ ನಮ್ಮ ಬೀದಿಯಲ್ಲಿ ದೇವಿಯ ಉತ್ಸವ ಆಯಿತು.  ಯಾರೋ ಅಲ್ಲಿದ್ದವರು ಪ್ರಸಾದ ಆತನ ಭಾಷೆಯಲ್ಲಿ ಹೇಳುವುದಾದರೆ ಪುರ್ಸಾದ ತಂದು ಕೊಟ್ಟನು.  ಹೇಳುವುದು ಹೇಗೆ ಹೇಳಿದರೂ ಅದರಲ್ಲಿ ಅಭ್ಯಂತರವಿಲ್ಲ. ಕೇಳುವವನಿಗೆ ಅರ್ಥವಾದರೆ ಸಾಕು. ನಾನು ನನಗೆ ಬೇಡ ಅಂತ ಹೇಳಿದೆ. ಅಬ್ಬಾ ಏನು ದುರಹಂಕಾರ ಎನ್ನಬಹುದು. ಇಲ್ಲಾ ನಾಸ್ತಿಕ ಎನ್ನಬಹುದು. ನಾಸ್ತಿಕತೆಯಲ್ಲು ಆಸ್ತಿಕತೆ ಇದೆ ಅಂತ ಪ್ರತಿಪಾದಿಸುವವನು ನಾನು. ಪ್ರಸಾದ ತಂದವನು ವಿಚಿತ್ರವಾಗಿ ನೋಡಿದ.  ಇದು ಪುರ್ಸಾದ ಅಂತ ರಾಗ ಎಳೆದ. ನನಗೆ ಬೇಡ. ಈ ಜಗತ್ತಿನಲ್ಲಿ ಸಿಗುವ ಎಲ್ಲವೂ ಭಗವಂತನ ಪ್ರಸಾದ ಅಂತ ನಾನು ಹೇಳಿದೆ. ಭೂಮಿಯ ಹನಿ ಹನಿ ನೀರೂ ಭಗವಂತನ ಪ್ರಸಾದ ಅಂತ ವಿಶಾಲ ಭಾವದಲ್ಲಿ ತಿಳಿವಾಗ ಈ ಪ್ರಸಾದ ಬೇಡ ಅಂತ ಹೇಳುವುದಕ್ಕೆ ಕಾರಣ ಉಂಟು. ದೇವರು ಎಂದರೆ ಪವಿತ್ರತೆಯ ಸಂಕೇತ. ಅಲ್ಲಿ ಅದರ ಲೋಪ ಬಹಳಷ್ಟು ಸಂಭವಿಸಿದ್ದು ಮಾತ್ರವಲ್ಲ ಮನಸ್ಸಿಗೆ ಬಹಳಷ್ಟು ವಿಷಮ ಅಂತ ಅನ್ನಿಸಿದೆ. 

ಇಲ್ಲಿಯ ಚಿತ್ರಗಳನ್ನು ಒಮ್ಮೆ ಗಮನಿಸಿದರೆ ಸಾಕು,  ನನ್ನ ಭಾವನೆಗಳಿಗೆ ಒಂದಿಷ್ಟು ಅರ್ಥ ಕಾಣಬಹುದು. ಅದೇನೋ ಪ್ರಸಾದ ಅಂತ ಬೇಯಿಸುತ್ತಾರೆ, ಇದು ನಮ್ಮ ಮನೆಯಂಗಳದಲ್ಲಿ ತಯಾರಿಸಿದ  ನೈವೇದ್ಯದ ಚಿತ್ರಗಳು.  ಬೆಂಗಳೂರಿನ ಹಲವು ಉತ್ಸವಗಳ ಕಥೆ ಇದುವೇ ಆಗಿರುತ್ತದೆ. ಇಲ್ಲಿ ತೆರೆದ ಪ್ರದೇಶದಲ್ಲಿ ಬೇಯಿಸುತ್ತಾರೆ. ಸ್ಥಳಾಭಾವ ಇರಬಹುದು. ಇನ್ನು ನೈವೇದ್ಯ ಅಂತ ಮಾಡುವಾಗ ನಮ್ಮೂರ ಕಡೆ ದೇವರಿಗೆ ನೈವೇದ್ಯವಾಗುವುದಕ್ಕೆ  ಅಥವಾ ಪ್ರಸಾದ ಅಂತ ಸ್ವೀಕರಿಸುವಾಗ ಈರುಳ್ಳಿ ಬೆಳ್ಳುಳ್ಳಿ ಹಾಕುವ ಕ್ರಮ ಇಲ್ಲ. ಅದು ಹೇಗೂ ಇರಲಿ. ಆಯಾಯ ಪ್ರದೇಶದ ಸಂಸ್ಕಾರ. ಆದರೆ ದೇವರಿಗೆ ಅಂತ ಮಾಡುವಾಗ ಒಂದಷ್ಟು ಶುಚಿತ್ವ ಅದಕ್ಕೂ ಮೇಲೂ ಪಾವಿತ್ರ್ಯತೆ ಅನ್ನುವುದು ಇರಬೇಕು. ಇದನ್ನು ಸಿದ್ದ ಪಡಿಸುವವರೂ ಹಾಗೆ ಸ್ನಾನ ಮಾಡುವ ಕ್ರಮ ಇದೆಯೋ ಇಲ್ಲವೋ ಅಂತ ನೋಡುವಾಗ ಅನ್ನಿಸುತ್ತದೆ. ಬಾಯಲ್ಲಿ ಧೂಮ ಮಾಡುತ್ತಾ ಸಿದ್ದ ಪಡಿಸುವ ಆಹಾರದ ರುಚಿಯನ್ನು ನೋಡುತ್ತಾ ಮಾಡುವುದನ್ನು ನೋಡಿದರೆ ಪ್ರಸಾದವಾದರೂ ಸೇವಿಸುವ ಮನಸ್ಸು ಹೇಗಾಗಬಹುದು. 

ಇಲ್ಲಿ ತಯಾರಿಸಿದ ಅದೇನೋ ಅನ್ನ, ಬಹುಶಃ ಮೊಸರನ್ನ ಇರಬೇಕು. ಮೊದಲ ದಿನ ತಯಾರಿಸಿಟ್ಟು ಹೋಗಿದ್ದರು. ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಮುಚ್ಚಿ ಹೋಗಿದ್ದರು ಏನೋ ಸತ್ಯ.  ಆದರೆ ಮುಂಜಾನೆ ನಾನು ಮುಂಜಾನೆ ನೋಡುವಾಗ ನಾಯಿ ಬೆಕ್ಕು ಹೆಗ್ಗಣ ಅಲ್ಲೇ ಓಡಾಡುತ್ತಿದ್ದವು. ಇನ್ನು ನಾಯಿ ಕೇವಲ ಮೂಸುತ್ತದೆ ಎಂದು ವಿಶ್ವಾಸ ಇಟ್ಟರೆ ಅದು ಮೂರ್ಖತನವಾಗಬಹುದು. ಅದು ತನ್ನ ಸಹಜ ಸ್ವಭಾವವನ್ನು ಹುಟ್ಟುಗುಣವನ್ನು ಬಿಟ್ಟು ಬಿಟ್ಟರೆ ಅದು ಶ್ವಾನವಾಗುವುದಿಲ್ಲ.  ಮರುದಿನ ಅದನ್ನೇ ಪ್ರಸಾದ ಅಂತ ಕೊಡುವಾಗ ಅಯ್ಯೋ ಪಾಪ ಎನಿಸಿತು. ನಮ್ಮಮ್ಮ ಹೇಳಿದರು ಹಾಗೇ ಅಂತ ಇಲ್ಲಿ ಯಾವುದನ್ನು ಬಿಡುವುದಕ್ಕೆ ಸಾಧ್ಯವಿದೆ? ಅದನ್ನೆಲ್ಲ  ನೋಡಿದರೆ ತಿನ್ನುವುದಕ್ಕೆ ಯಾವುದೂ ಸೂಕ್ತವಲ್ಲ. ನೋಡಿದರೂ ನೋಡದಂತೆ ಇರಬೇಕು. ಹಲವು ಸಲ ನಮ್ಮ ಬಳಿಗೆ ಬರುವಾಗ ಸ್ವಚ್ಛವಾಗಿರುವ ಭಾವನೆ ಬಂದರೆ ಸಾಕು. ಮತ್ತೆ ದೇವರು ಎಂದರೆ ಅದು ನಮ್ಮ ಮನಸ್ಸಿನ ಭಾವನೆಗೆ ಸೀಮಿತವಾಗಿರುತ್ತದೆ. ಹಾಗಂತ ... ಹೀಗಾಗಿದೆ ಅಂತ ದೇವರು ಬಂದು ಹೇಳುವುದಿಲ್ಲ. ತನಗೇನು ಬೇಕೋ ಅಂತ ಯಾವ ದೇವರು ಹೇಳುವುದಿಲ್ಲ. ದೇವರು ಇರುವುದೇ ಭಕ್ತನ ಎಣಿಕೆಯಲ್ಲಿ. ಹಾಗಾಗಿ ತಾನೇನು ತನ್ನ ಮನಸ್ಸು ಪ್ರವೃತ್ತಿ ಏನು, ಅದಕ್ಕೆಹೊಂದಿಕೊಂಡು ದೇವರು ಇರುತ್ತಾನೆ. ಯಾಕೆಂದರೆ ನಮ್ಮ ಎಣಿಕೆಯಂತೆ ನಮ್ಮ ಮಕ್ಕಳೇ ಇರುವುದಿಲ್ಲ. ಹಾಗಾಗಿ ದೇವರಲ್ಲಿ ಅದನ್ನು ಕಂಡು ಅದನ್ನೇ ದೇವರಿಗೆ ಸಲ್ಲಿಸುವುದು.

ಆಹಾರ ತಯಾರಿಸಿದ ಪಾತ್ರೆಗಳನ್ನು ರಾತ್ರೆ ಹಾಗೇ ಬಿಟ್ಟು ಹೋಗಿದ್ದರು. ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಉಳಿದ ಅನ್ನ ಆಹಾರ ಹಾಗೇ ಉಳಿದಿತ್ತು. ಅದನ್ನು ತಿನ್ನುವುದಕ್ಕೆ ಬಂದ ನಾಯಿ ಆ ಪಾತ್ರೆಯ ಒಳಗೆ ಇಳಿದು ತಿನ್ನುತ್ತಿತ್ತು. ಮರುದಿನ ಅದೇ ಪಾತ್ರೆಯಲ್ಲಿ ಪ್ರಸಾದ ಸಿದ್ಧವಾಗುತ್ತಿತ್ತು. ಇದನ್ನು ಕಣ್ಣಾರೆ ಕಂಡ ಮೇಲೆ  ಯಾವ ದೇವರ ಪ್ರಸಾದವಾದರೂ ತಿನ್ನುವ ಧೈರ್ಯ ಆ ಭಗವಂತನಿಗೂ ಒದಗಿಸುವುದಕ್ಕೆ ಸಾಧ್ಯವಿಲ್ಲ. ಇನ್ನು ಈ ಆಹಾರ ತಿಂದರೆ ಆಗುವ ದೊಡ್ಡ ಉಪಕಾರವೆಂದರೆ ಭಗವಂತನ ಬಳಿಗೆ ಬೇಗನೇ ಹೋಗಿ ತಲಪಬಹುದು.  

             ದೇವರ ಪ್ರಸಾದ ಸೇವಿಸಿ ಪ್ರಾಣ ವಿಷ ಪ್ರಾಶಾನವಾಗಿ ಆಸ್ಪತ್ರೆ ಸೇರಿದ , ವೈಕುಂಠ ದರ್ಶನ ಮಾಡಿದ ನಿದರ್ಶನ ಹಲವಿದೆ. ಈ ರೀತಿ ಪ್ರಸಾದ ಸಿದ್ದವಾದರೆ ಸೇರುವ ಅವಧಿ ಕಡಿಮೆಯಾಗಿಬಿಡುತ್ತದೆ. ಹಾಗಾಗಿ ಕಾನೂನು ಇದೆ. ಪ್ರಸಾದ ವಿತರಣೆಯ ಮೊದಲು ಸಂಬಂಧ ಪಟ್ಟ ಇಲಾಖೆ ಮೊದಲು ಪರೀಕ್ಷೆ ಮಾಡಬೇಕು. ದೇವರ ನೈವೇದ್ಯ ದೇವರಿಗೆ ಅರ್ಪಣೆಯಾಗುವ ಮೊದಲು ರುಚಿ ನೋಡಬಾರದು. ಆದರೆ ನಮ್ಮ ಭಾವನೆಗಳಿಗೆ ಆಚರಣೆಗಳಿಗೆ ಮೌಢ್ಯದ ಲೇಪನ ಬಳಿದು ನಂಬಿಕೆಯನ್ನು ಮೊದಲೇ ನಾಶಮಾಡುವ ಸನ್ನಿವೇಶದಲ್ಲಿ ಪ್ರಸಾದ ಎಂಜಲಾಗಿ ಅರ್ಪಿಸುವ ಅನಿವಾರ್ಯತೆಯನ್ನು ನಾವೇ ಸೃಷ್ಟಿ ಮಾಡುತ್ತಿದ್ದೇವೆ. ಒಳ್ಳೆ ಶ್ರದ್ಧೆಯಿಂದ ಪರಿಶುದ್ದವಾಗಿ ನೈವೇದ್ಯ ಸಿದ್ದ ಪಡಿಸುವವರಿಗೆ  ನಿಯಮ ಭಾವನೆಗೆ ಧಕ್ಕೆಯನ್ನು ತಂದು ಕೊಡುತ್ತದೆ. ಆದರೆ ಅದಾವುದರ ಪರಿವೆ ಇಲ್ಲದೇ ಈ ರೀತಿ ಪ್ರಸಾದ ಸಿದ್ಧಪಡಿಸುವವರು ಉಳಿದ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಾರೆ. 

ದೇವರು ಎಂದರೆ ಅದು ಪವಿತ್ರ ಸ್ಥಾನ. ಎಲ್ಲವನ್ನೂ ನುಂಗಿ ತಾನು ಸ್ವಚ್ಛವಾಗಿರುವ ಅಗ್ನಿಯಂತೆ. ಅಗ್ನಿ ಎಲ್ಲವನ್ನೂ ಸುಡುತ್ತದೆ. ಹವಿಸನ್ನೂ ಸುಟ್ಟಂತೆ ಕಸ ಮಾಲಿನ್ಯವನ್ನೂ ಸುಟ್ಟು ಬಿಡುತ್ತದೆ, ಆ ಪಾವಿತ್ರ್ಯತೆ ನಮ್ಮ ಭಾವದಲ್ಲಿರಬೇಕು. ಜೀವನ ಎಂದರೆ ಎಲ್ಲ ದುರಿತವನ್ನೂ ಕಳೆದು ಪರಿಶುದ್ದತೆಯ ಕಡೆಗೆ ಹೋಗುವ ಯಾನ. ಅದೊಂದು ಸಂಕ್ರಮಣದ ಕಡೆಗೆ ಚಲಿಸುವ ಪ್ರಯಾಣ, ಹಾಗಾಗಿ ದೇವರಿಗೆ ಸಂಬಂಧಿಸಿದ್ದೆಲ್ಲವೂ ಪರಿಶುದ್ದವಾಗಿ ಇರಬೇಕು ಎಂದು ತಿಳಿಯುತ್ತೇವೆ. ಸ್ನಾನ ಪಾನ ಎಲ್ಲವೂ ಇದರ ಸಂಕೇತ. ದೇವರು ಎಂಬುದು ಅಪವಿತ್ರವಾದರೆ ನಮ್ಮನ್ನು ಪವಿತ್ರಗೊಳಿಸುವ ಬೇರೆ ಯಾವ ಶಕ್ತಿಯೂ ಇರುವುದಿಲ್ಲ.  ಮೈ ತೊಳೆಯುವ ಮಾರ್ಜಕವೇ ಕೊಳೆ ಹಿಡಿದು ಮಲಿನವಾದರೆ ಇನ್ನು ನಮ್ಮ ಮೈ ಸ್ವಚ್ಛವಾಗುವ ಬಗೆಯಾದರೂ ಹೇಗೆ? ಮಣ್ಣು ಹೇಗಿದ್ದರೂ ಮಣ್ಣೇ. ಮಣ್ಣಲ್ಲಿ ಮಣ್ಣಾಗಿ ಹೋಗುವ ಈ ದೇಹ ಮನಸ್ಸು ಆತನಕ ಪವಿತ್ರವಾಗಿ ಇರಬೇಕು. ಅದು ಆ ಭಗವಂತನ ಇಚ್ಚೆಗೆ ಆತ ಪ್ರಸಾದಿಸಿದ ಈ ಜನ್ಮಕ್ಕೆ ನಾವು ಸಲ್ಲಿಸುವ ಕೃತಜ್ಞತೆ.

Saturday, August 2, 2025

ಮುಖವಾಡ

 

"ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಮೊದಲ ವ್ಯಕ್ತಿಗಳೆಂದರೆ ಹೆತ್ತ ಅಪ್ಪ ಅಮ್ಮ"


ಒಬ್ಬ ಗಣ್ಯ ಅಪರಾಧಿಗೆ ಶಿಕ್ಷೆಯಾದಾಗ ವಾರ್ತಾ ಮಾಧ್ಯಮಗಳು ಹಲವು ಗಣ್ಯ ವ್ಯಕ್ತಿಗಳ ಅಭಿಪ್ರಾಯ ಕೇಳುವುದು ಸಾಮಾನ್ಯವಾಗಿದೆ. ಅಭಿಪ್ರಾಯ ಏನೇ ವ್ಯಕ್ತವಾಗಲೀ ಇದರಲ್ಲೊಂದು ಅಂತರ್ಗತ ಭಾವವನ್ನು ಹುಡುಕಬಹುದು. ಒಂದಿಷ್ಟು ಗಣ್ಯವ್ಯಕ್ತಿಗಳೂ ಸಹ ಆತ್ಮಾವಲೋಕನ ಮಾಡಿಕೊಳ್ಳಬಹುದಾದ ಸೂಕ್ಷ ಅವಕಾಶ ಇದು. ನಮ್ಮ ವ್ಯವಸ್ಥೆ ಹೇಗಿದೆ ಎಂದರೆ, ಇಲ್ಲಿ ಸಿಕ್ಕಿಬಿದ್ದವನು ಮಾತ್ರಾ ಅಪರಾಧಿ. ಸಿಕ್ಕಿ ಹಾಕದ ಅಪರಾಧಿಗಳು ಮುಖವಾಡ ಹೊತ್ತು ನಮ್ಮ ನಡುವೆ ಸಂಭಾವಿತರಾಗಿಬಿಡುತ್ತಾರೆ. ಒಬ್ಬ ಕಳ್ಳ ಸಿಕ್ಕಿಬಿದ್ದಾಗ ಮತ್ತೊಬ್ಬ ಕಳ್ಳನೂ ಹಿಡಿದು ಬಡಿದಂತೆ ಮುಖವಾಡಗಳು ಬೇಕಾ ಬಿಟ್ಟಿಯಾಗಿ ಬಿಕರಿಯಾಗಿಬಿಡುತ್ತವೆ. 

ನಿನ್ನೆ ನಡೆದ ಪ್ರಕರಣ ನಿಜಕ್ಕೂ ಒಂದು ಅವಿಸ್ಮರಣೀಯ ಪ್ರಕರಣ. ಒಬ್ಬನಿಗೆ ಶಿಕ್ಷೆಯಾಯಿತು ಏನೋ ನಿಜ. ಆದರೆ ಅದು ಹಲವು ಚಿಂತನೆಗಳಿಗೆ ಅವಕಾಶ ಕೊಡುತ್ತದೆ.  ದೂರು ಕೊಟ್ಟ ಆ ಅವಿದ್ಯಾವಂತ ಹೆಣ್ಣನ್ನು ಇಲ್ಲಿ ಮೊದಲು ಅಭಿನಂದಿಸಬೇಕು. ಅಚಲವಾಗಿ ನಿಂತ ಆಕೆಯ ಎದೆಗಾರಿಕೆಯೊಂದೇ ಈ ಶಿಕ್ಷೆಯ ಪರಿಣಾಮಕ್ಕೆ ಮೂಲ ಕಾರಣ. ಆಕೆ ಅನುಭವಿಸಿದ ನೋವು ಎಂತಹುದಿರಬಹುದು? ಯಾರಾದರೊಬ್ಬರು ನಮ್ಮ ಮೈಯನ್ನು ನಮ್ಮ ಅನುಮತಿಯಿಲ್ಲದೇ  ಸ್ಪರ್ಶಿಸಿದರೆ ಹಲವು ಸಲ ನಮಗೆ ಅಸಹ್ಯವಾಗಿಬಿಡುತ್ತದೆ. ನಮ್ಮ ಮೈ ಯಾರು ಮುಟ್ಟಬೇಕೋ ಬೇಡವೋ ಅದನ್ನು ನಿರ್ಧರಿಸುವ ಸ್ವಾತಂತ್ರ್ಯ ನಮ್ಮದೇ ಆಗಿರುವಾಗ , ಒಂದು ಲೈಂಗಿಕ ದೌರ್ಜನ್ಯ ಸಹಿಸಿ ಮತ್ತದನ್ನು ಪ್ರತಿಭಟಿಸುವುದು ನಿಜಕ್ಕೂ ಆತ್ಮಾಭಿಮಾನದ ಪ್ರಶ್ನೆ.   ಆಕೆಯ ನೋವು ಅವಮಾನ  ಇವುಗಳಿಗೆಲ್ಲ ಈ ಶಿಕ್ಷೆ ತೃಪ್ತಿಯನ್ನಂತೂ ಕೊಡುವುದಕ್ಕೆ ಸಾಧ್ಯವಿಲ್ಲ. ಕೇವಲ ಸಾಂತ್ವನ ಮಾತ್ರ. ಯಾಕೆಂದರೆ ಬದುಕು ಎಂಬುದೇ ಹಾಗೆ. ಅದು ಮುರುಟಿ ಹೋದರೆ ಯಾವ ಧೈರ್ಯ ಸ್ಥಿತ ಪ್ರಜ್ಞತೆ ಇದ್ದರೂ ಸಂತುಲನೆಗೆ ತರುವುದಕ್ಕೆ ಸಾಧ್ಯವಾಗುವುದಿಲ್ಲ.  ಕಳೆಯಿತೋ ಹೋಯಿತು ಎನ್ನುವ ಹಾಗೆ ಇರುತ್ತದೆ.  ಆದರೆ ಎನೂ ಆಗಲಿಲ್ಲ ಬದುಕು ಅಷ್ಟೇ ಅಲ್ಲ ಎಂಬುದನ್ನು ಪರಿಸರ ತೋರಿಸಿಕೊಡುವ ಅನಿವಾರ್ಯತೆ ಇದೆ. 

  ಹುಲಿ ಹಸಿವಿನಿಂದ ಒಂದು ಜಿಂಕೆಯ ಮೇಲೆ ಬಿದ್ದಾಗ ಹುಲಿಯ ಹಸಿವಿನ ಬಗ್ಗೆ ಅನುಕಂಪ ಮೂಡುವುದಿಲ್ಲ. ಆದರೆ ಜಿಂಕೆಯ ಅಸಹಾಯಕತೆಯಬಗ್ಗೆ ಮನಸ್ಸು ಮರುಗುತ್ತದೆ. ಆದರೆ ಮನುಷ್ಯನ ಈ ವಿಕೃತಿಯ ಹುಲಿಯಂತೆ  ಹಸಿವು ಕಾರಣವಲ್ಲ. ವಿಪರ್ಯಾಸವೆಂದರೆ ಶಿಕ್ಷೆ ಏನೋ ಸಿಕ್ಕಿತು. ನ್ಯಾಯಾಂಗ ಬಲಿಷ್ಠವಾಗಿ ಜಯವನ್ನು ಗಳಿಸಿತೇನೋ ಸತ್ಯ. ಆದರೆ ಇದೇ ನ್ಯಾಯ ಪರ್ಯಾಪ್ತವಲ್ಲ. ಸಿಕ್ಕಿಹಾಕಿಕೊಳ್ಳದ ಇದಕ್ಕಿಂತಲೂ ಕ್ರೂರವಾದ ಅಪರಾಧಿಗಳು ಏಷ್ಟೋ ಇದ್ದಾರೆ. ಇವುಗಳು ಪಾಠ ಅಂತ ನಾವು ತಿಳಿದುಕೊಂಡರೂ ಈ ಪಾಠ ಯಾರು ಕಲಿಯುತ್ತಾರೋ ಎಂಬುದು ಅಷ್ಟೇ ವಿಡಂಬನೆಯಾಗಿಬಿಡುತ್ತದೆ. ಆ ಹೆಣ್ಣು ಧೈರ್ಯದಿಂದ ದೂರು ಕೊಟ್ಟ ಕಾರಣ ಶಿಕ್ಷೆಯ ತನಕ ಪ್ರಕರಣ ಬಂದು ಅಂತ್ಯ ಕಂಡಿತು. ಇಲ್ಲವಾದರೆ? ಹಾಗಾಗಿ ದೂರು ಕೊಡುವ ಅವಕಾಶ ಹಕ್ಕು ಇದ್ದರೂ ಅದನ್ನು ಉಪಯೋಗಿಸುವ ಅರ್ಹತೆ ಮಾತ್ರ ಲಭ್ಯವಾಗುವುದು ಅಪರೂಪ. ನಮ್ಮ ವ್ಯವಸ್ಥೆ ಹಾಗಿದೆ. ಸಿಕ್ಕಿದ ಜಯ, ಸಾಬೀತಾದ ಅಪರಾಧವೂ ಹಲವು ಸಲ ದೌರ್ಜನ್ಯಕ್ಕೆ ಒಳಗಾದವರ ಮುಂದಿನ ಬದುಕನ್ನು ಕಮರಿಸಿಬಿಡುತ್ತದೆ. ಸುತ್ತ ಮುತ್ತಲಿನ ಬಂಧು ಬಳಗವೂ ದೂರವಾಗುವ ಸಂಭವ ಇರುತ್ತದೆ. ಯಾಕೆಂದರೆ ಈ ಮರ್ಯಾದೆ ಎಂಬ ಪ್ರಶ್ನೆಯೇ ಹಾಗೆ , ಆದ ಘಟನೆ ಹತ್ತು ಜನರಿಗೆ ತಿಳಿಯದೇ ಇರಲಿ ಎಂಬ ಆತಂಕದಲ್ಲೇ ಮರೆಯಾಗಿಬಿಡುತ್ತದೆ. 

ಅಪರಾಧಿಗೆ ಶಿಕ್ಷೆಯಾಯಿತು. ಒಂದು ಹೆಣ್ಣು ದೌರ್ಜನ್ಯಕ್ಕೆ ಒಳಗಾದರೂ ಅಪರಾಧಿಯ ಪರ ವಾದಿಸಿದ್ದು ಒಂದು ಸುಶಿಕ್ಷಿತ ಹೆಣ್ಣೇ ಎಂದು ತಿಳಿಯುವಾಗ ವಿಚಿತ್ರ ಎನಿಸುತ್ತದೆ. ಇದೇ ದೌರ್ಜನ್ಯ ವಾದಿಸುವವರಿಗೆ ಅಥವ ಅವರ ಸಂಭಂಧಿಕರಿಗೆ ನಡೆದಲ್ಲಿ ಅವರ ಈ ವಾದ ಯಾವ ರೂಪವನ್ನು ಪಡೆಯಬಹುದು. ವಾದ ಗೆಲ್ಲುವುದಕ್ಕೆ ಒದಗಿಸುವ ಸಮರ್ಥನೆ ನೋಡುವಾಗ ಅಯ್ಯೋ ಮನುಷ್ಯ ಯಾವ ವೇಷವನ್ನು ಹಾಕಬಲ್ಲ ಎಂದನಿಸುತ್ತದೆ. ಪ್ರಾಣಿಗಳೂ ಅದೂ ಗೋಸುಂಬೆಯಾದರೂ ರೂಪ ಬದಲಿಸುವುದಿಲ್ಲ. ಆದರೆ ಮನುಷ್ಯ ಮಾತ್ರ ತನ್ನ ರೂಪವನ್ನು ಬದಲಿಸುತ್ತಾ ಇರುತ್ತಾನೆ.  ಯಾರಿಗೋ ಒಬ್ಬರಿಗೆ ಶಿಕ್ಷೆಯಾಗುವಾಗ ಆಗುವ ಸಂತೋಷ, ಶಿಕ್ಷೆಯಿಂದ ತಪ್ಪಿಸ್ಕೊಳ್ಳುವ ಮುಖವಾಡ ಧಾರಿಗಳನ್ನು ನೋಡುವಾಗ ಆ ಸಂತೋಷ ಉಳಿಯುವುದಿಲ್ಲ. ನ್ಯಾಯ ಜಯ ಸಾಧಿಸಿದೆ ಎಂದನಿಸುವುದಿಲ್ಲ.  ಶಿಕ್ಷೆ ಪ್ರಾಯಶ್ಚಿತ್ತ ಅಂತ ತಿಳಿಯುವವರಿದ್ದಾರೆ. ಆದರೆ ಈ  ಅಪರಾಧಿಯ ಮುಖವನ್ನು ನೋಡುವಾಗ ಹಾಗೆ ಅನಿಸುವುದೇ ಇಲ್ಲ. ಸಭ್ಯನಂತೆ ಮುಖವಾಡ ಧರಿಸುವಾಗ ಇವರಿಗೆ ಯಾವ ಶಿಕ್ಷೆ ಸಿಕ್ಕಿದರೂ ಇವರು ಬದಲಾಗುವುದಿಲ್ಲ ಎಂದನಿಸುತ್ತದೆ. 

ಒಬ್ಬ ಅಪರಾಧಿ ಹೇಗೆ ಹುಟ್ಟಿಕೊಳ್ಳುತ್ತಾನೋ ಎಂಬುದು ವಿಚಿತ್ರ ಸಂಗತಿ. ಯಾವ ತಾಯಿಯೂ ತಾನು ಅಪರಾಧಿಗೆ ಜನ್ಮ ಕೊಡಬೇಕು ಎಂದು ಬಯಸುವುದಿಲ್ಲ. ಅದು ಮಹಿಷಾಸುರನ ತಾಯಿಯಂಥವರಿಂದ ಮಾತ್ರ ಸಾಧ್ಯ. ಆದರೂ ಹುಟ್ಟಿದ ನಂತರ ಅಪರಾಧಿಗಳಾಗುತ್ತಾರೆ. ತಂದೆ ತಾಯಿ ಕಾರಣವೋ ಪರಿಸರ ಕಾರಣವೋ ಅಂತು ಅಪರಾಧ ಉಳಿದವರ ಬದುಕನ್ನು ನಾಶಮಾಡಿಬಿಡುತ್ತದೆ. ಉಳಿದವರ ಬದುಕು ಮಾತ್ರವಲ್ಲ...ಒಬ್ಬ ಅಪಾರಾಧಿ ಸೆರೆ ಮನೆಯತ್ತ ಮುಖ ಮಾಡಿದಾಗ ಅನಿಸುವುದು ಛೇ ಹೆತ್ತ ಅಪ್ಪ ಅಮ್ಮನಿಗೆ ಹೇಗೆ ಅನಿಸಬಹುದು ಅಂತ ಯೋಚನೆ ಬಂದು ಬಿಡುತ್ತದೆ. ಯಾಕೆಂದರೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಮೊದಲ ವ್ಯಕ್ತಿಗಳೆಂದರೆ ಹೆತ್ತ ಅಪ್ಪ ಅಮ್ಮ. ಇದೇ ಕಾರಣಕ್ಕೆ ಹಲವು ಸಲ ಈ ತಪ್ಪನ್ನು ಮುಚ್ಚಿಡುವುದಕ್ಕೆ ಹೆತ್ತಕರುಳು ಯತ್ನ ಮಾಡುತ್ತದೆ. ಆದರೆ ಒಂದು ಕರುಳಿನ ನೋವು ಮತ್ತೊಂದು ಕರುಳಿನ ನೋವನ್ನು ಅರಿಯುವುದೇ ಇಲ್ಲ. 


Tuesday, July 22, 2025

ತೆರಿಗೆ

        ಮೊನ್ನೆ ಟಿವಿ ಚರ್ಚೆಯಲ್ಲಿ ಯಾರೋ ಒಬ್ಬರು ಹೇಳಿದ ನೆನಪು  " ಯಾವುದೇ ಸರಕಾರ ಇದ್ದರೂ ಯು ಪಿ ಐ ಪಾವತಿ ವಿಧಾನ ಬರುತ್ತಿತ್ತು. ಬದಲಾವಣೆ ಅಭಿವೃದ್ದಿ ಜಗದ ನಿಯಮ. ಇದಕ್ಕೆ ಯಾರೂ ಕಾರಣರಲ್ಲ. ಮೋದಿ ಕಡಿದು ಗುಡ್ಡೆ ಹಾಕಿದ್ದು ಏನೂ ಇಲ್ಲ." ಆಗ ಸರಿ ಅಂತ ತೋಚಿರಬಹುದು. ಹೌದಲ್ವ...ಎಷ್ಟೋ ಬದಲಾಗಿದೆ, ಹಾಗೇ ಇದು..ಆದರೆ ಇವತ್ತು ಅದೇ ಯುಪಿಐ ಬಗ್ಗೆ...ಅದನ್ನು ಬಳಕೆ ತಂದದ್ದೇ ಮೋದಿ. ಅದರಿಂದಲೇ ಹೀಗೆಲ್ಲ ಆಯಿತು ಅಂತ.  ಇದರಲ್ಲಿ ವಿಶೇಷವೇನೂ ಇಲ್ಲ.ಯಾವುದೇ ಆದರೂ ನಮಗೆ ಅನುಕೂಲವಾದರೆ ಅದರೆ ಪ್ರಯೋಜನ ಪಡೆಯುತ್ತೇವೆ. ಸಮಸ್ಯೆ ಎದುರಾದಾಗ ಎಲ್ಲ ತಪ್ಪುಗಳನ್ನು ಅದರ ಮೇಲೆ ಹಾಕಿಬಿಡುತ್ತೇವೆ. ಯಾವುದನ್ನೇ ಆದರೂ ಉಪಯೋಗಿಸುವಾಗ ವಿವೇಚನೆ ಎಂಬುದು ಅತೀ ಮುಖ್ಯ. ನಮ್ಮ ನಿರ್ಧಾರಗಳು ನಮ್ಮ ನಡೆಗಳು ವಿವೇಚನ ರಹಿತವಾದರೆ ನಮ್ಮ ತಪ್ಪುಗಳು ಗೋಚರಿಸುವ ಬದಲು ಮತ್ತೊಬ್ಬರು ಅಪರಾಧಿಗಳಾಗಿಬಿಡುತ್ತಾರೆ. 


ಮೊದಲಿನಿಂದಲೂ ನಮಗೆ ತೆರಿಗೆ ಕಟ್ಟುವುದೆಂದರೆ ಅದು ನಷ್ಟದ ಬಾಬ್ತು. ನನ್ನ ವೃತ್ತಿಯಲ್ಲಿ ಈಗ ಬಹುಪಾಲು ಜನರು ತೆರಿಗೆ ಕಟ್ಟುವ ಅರಿವಿನಿಂದ  ಕಾಳಜಿಯಿಂದ ಬರುವುದಿಲ್ಲ. ತೆರಿಗೆ ಎಂಬ ಭೂತವನ್ನು ಹೇಗೆ ಕಟ್ಟಿಹಾಕಬಹುದು ಎಂಬ ಯೋಚನೆಯಲ್ಲೇ ಬರುತ್ತಾರೆ. ನಾವು ಓಡಾಡುವ ರಸ್ತೆ, ವಿದ್ಯುತ್ ನೀರಾವರಿ ಇವುಗಳೆಲ್ಲ ಕೇವಲ ಉಚಿತವಾಗಿ ಪ್ರಕೃತಿಯಿಂದ ಸಿಗುವುದು ಅಂತ ತಿಳಿಯುತ್ತೇವೆ. ಹೆಚ್ಚೇಕೆ...ಸರಕಾರ ಕೊಡುವ ಉಚಿತ ಯೋಜನೆಗಳು ನಾವು ಕಟ್ಟಿದ ತೆರಿಗೆಯಿಂದಲೇ ಬರುತ್ತದೆ ಎಂಬುದನ್ನೂ ಮರೆತು ಬಿಡುತ್ತೇವೆ. ಹಾಲು ಎಲ್ಲಿಂದಲೂ ಬರಲಿ ಹಸುವಿನ ಪರಿವೆ ನಮಗೇಕೆ? 

ಮಾರಾಟ ತೆರಿಗೆ ಅದೇನು ಈಗ ಹೊಸತಲ್ಲ. ಆದರೆ ಈಗ ಅದರೆ ಹರಿತ ಅನುಭವಕ್ಕೆ ಬರುತ್ತದೆ. ಯಾರೋ ಇದ್ದವರು ತೆರಿಗೆ ಕಟ್ಟುತ್ತಾರೆ ಎಂಬ ಅನಾಸಕ್ತಿ ಇದುವರೆಗೆ ಇತ್ತು. ಈಗ ಏಲ್ಲೋ ಬಂದ ಕೊರೋನ ನಮ್ಮ ಮನೆಬಾಗಿಲಿಗೆ ಬಂದಹಾಗೆ ಹೌಹಾರಿ ಬಿಡುತ್ತಾರೆ. ಕೊನೆ ಪಕ್ಷ ನಾವು ತೆರಿಗೆ ಕಟ್ಟುವ ನಮ್ಮಿಂದಲೂ ಸರಕಾರ ತೆರಿಗೆ ಕೇಳುತ್ತದೆ ಎಂಬ ಸ್ಥಿತಿಗೆ ನಾವು ಬಂದೆವಲ್ಲಾ ಎಂದು ತಿಳಿದುಕೊಳ್ಳುವ ಅದರಿಂದ ಒದಗಿದ ಘನತೆಯ ಬಗ್ಗೆ ಯೋಚಿಸುವುದಿಲ್ಲ. ನಮ್ಮ ಘನಗೆಗೆ ವಿನಾಕಾರಣ ಖರ್ಚುಮಾಡುವ ನಮಗೆ ತೆರಿಗೆ ಮಾತ್ರ ನಷ್ಟದ ಬಾಬತ್ತಾಗಿ ಕಾಣುತ್ತದೆ. 

ಮಾರಾಟ ತೆರಿಗೆ ಒಂದು ಇಪ್ಪತ್ತು ವರ್ಷದ ಹಿಂದಕ್ಕೆ ಹೋಗಿ ನೋಡಿದರೆ ಆಗಲೂ ಇತ್ತು , ಎಳು ಲಕ್ಷ ವ್ಯಾಪಾರವಹಿಟು ಮಾಡಿದರೆ ಮಾರಾಟ  ತೆರಿಗೆಯ ವ್ಯಾಪ್ತಿಯಲ್ಲಿ ಖಡ್ಡಾಯ ನೊಂದನಿ ಮಡಿಸಿ ಸರಕಾರಕ್ಕೆ ತೆರಿಗೆ ಪಾವತಿಸಬೇಕು ಈಗ ಅದೇ ಪರಿಮಿತಿ 40  ಲಕ್ಷ ತಲುಪಿದೆ. 

ನಾಣ್ಯ ರಾಶಿಹಾಕಿ ಕೈಗೆ ಸಿಕ್ಕಿದ ಹಣವನ್ನು ಬಾಚಿಕೊಳ್ಳಿ ಎಂದರೆ ನಾವು ನಮ್ಮ ಹತ್ತೂ ಬೆರಳುಗಳನ್ನು ಎಷ್ಟು ಸಾಧ್ಯವೋ ಅಷ್ಟು ನಾಣ್ಯವನ್ನು ವಶಪಡಿಸಿಕೊಳ್ಳುತ್ತೇವೆ. ಕೈಬೆರಳ ಸಂಧಿಯಿಂದಿ ನಾಣ್ಯ ಹೊರಬರದಂತೆ ಪ್ರಯತ್ನ ಮಾಡುತ್ತೇವೆ. ತೆರಿಗೆ ಸಂಗ್ರಹ ಎಂದರೆ ಹೆಚ್ಚು ಕಮ್ಮಿ ಇದೇ ವಿಧಾನವನ್ನು ಹೋಲುತ್ತದೆ. ಸರಕಾರ ತನ್ನ ಬೆರಳುಗಳನ್ನು ಅರಳಿಸಿ ಎಷ್ಟು ಅಷ್ಟು ತೆರಿಗೆ ಸಂಗ್ರಹಿಸುವುದಕ್ಕೆ ನೋಡುತ್ತದೆ. ಅದನ್ನು ತಪ್ಪು ಎನ್ನುವುದಕ್ಕೆ ಸಾಧ್ಯವೆ? ಅದು ಸಂವಿಧಾನದ ಗೌರವ ಇದ್ದವರಿಗೆ ಇಂತಹ ಮಾತುಗಳು ಬರುವುದಿಲ್ಲ. ತೆರಿಗೆ ಎಂಬುದು ಸುಮ್ಮನೇ ಬರುವುದಿಲ್ಲ. ಅದರೆ ಹಿಂದೆ ಹಲವರ ಪರಿಶ್ರಮ ಇರುತ್ತದೆ. ಅದು ಸಂವಿಧಾನಕ್ಕೆ ಅನುಗುಣವಾಗಿ ಇರುತ್ತದೆ. ಕೇಂದ್ರ ಅಥವಾ ರಾಜ್ಯ ಸರಕಾರವನ್ನು ದೂರುವಾಗ ಈ ಸಂವಿಧಾನವನ್ನು ತಿಳಿದಿರಬೇಕು. 

ಈ ವರ್ಷ ಆದಾಯ ತೆರಿಗೆ ಮಿತಿ ಹನ್ನೆರಡು ಲಕ್ಷ ಇದೆ. ಹಾಗಂತ ನಾವು ಮಿತಿ ಮೀರಿ ಆದಾಯ ತೋರಿಸಿದರೆ ಈವರೆಗೆ ನಾವು ಏನು ಮಾಡುತ್ತಿದ್ದೀರಿ ಅಂತ ಸರಕಾರ ಕೇಳುವುದಿಲ್ಲ ಎಂದು ಏನು  ಭರವಸೆ ಇದೆ. ಇಲ್ಲಿ ವಿವೇಚನೆ ಅತೀ ಮುಖ್ಯ. ತೆರಿಗೆ ಕಟ್ಟುವುದಕ್ಕೆ ಹಿಂಜರಿಯುವಾಗ ನಲ್ವತ್ತು ಲಕ್ಷ ಕೇವಲ ಸಣ್ಣ ಮೊತ್ತ ಎಂದಾಗುವುದಿಲ್ಲ. ಆಷ್ಟು ಸಂಪಾದಿಸುವವನು ತೆರೆಯ ಮರೆಗೆ ಹೇಗೆ ಸರಿದು ಹೋಗಬಲ್ಲ. ತೆರಿಗೆ ಕಟ್ಟುವುದನ್ನು ಕಟ್ಟಲೇ ಬೇಕು. ಅದನ್ನೆಂದೂ ಕಳಚಿ ಹಾಕುವುದಕ್ಕೆ ಸಾಧ್ಯವಿಲ್ಲ. ಆದರೆ ಒಂದು ಇಷ್ಟು ಕಷ್ಟ ಪಟ್ಟು ತೆರಿಗೆ ಕಟ್ಟುವಾಗ, ಅದೇ ತೆರಿಗೆ ಹಣವನ್ನು ಯಾವುದೇ ನಾಚಿಕೆ ಮರ್ಯಾದೆ ಇಲ್ಲದೆ ದುಂದು ವೆಚ್ಚ ಮಾಡುವ ಮಂತ್ರಿ ಹಾಸಕರನ್ನು ಕಾಣಬಹುದು. ಈ ತೆರಿಗೆ ಹಣ ಜನಸಾಮಾನ್ಯರನ್ನು ಹಿಂಡಿ ಬಂದ ಹಣ ಎಂಬ ಸಾಮಾನ್ಯ ಪ್ರಜ್ಞೆಯನ್ನಾದರೂ ಈ ಸರಕಾರದ ಅಂಗಗಳು ಅರಿಯಬೇಕಿದೆ.  

Sunday, July 6, 2025

ಪ್ರೇಮ ಪ್ರಣಯ

 


        ಮುಂಜಾನೆ ಚರವಾಣಿಯ ಎಚ್ಚರಿಸುವ ಸದ್ದಿಗೆ ಸುಖವಾದ ನಿದ್ದೆ ಇನ್ನು ಇರಲಾರೆ  ಎಂದುಕೊಂಡು ದೂರಾಗಿ ಬಿಟ್ಟಿತು. ಇನ್ನು ರಾತ್ರಿ ಕಾಣುವ ಎಂದುನಿದ್ದೆ  ವಿದಾಯ ಹೇಳಿದಾಗ  ಹಾಗೇ ನಿದ್ದೆ ಬಿಟ್ಟು ಎದ್ದು ಕುಳಿತ ದಿವಾಕರ.  ಯಥಾವತ್ ಎಂದಿನಂತೆ ಕರಾಗ್ರೆ ವಸತೇ ಲಕ್ಷ್ಮಿ ಎಂದು ದೇವರನ್ನು ಪ್ರಾರ್ಥಿಸಿ ಚರವಾಣಿ ತೆಗೆದು ಬಂದ ಸಂದೇಶಗಳ ಕಡೆಗೆ ಗಮನಹರಿಸಿದರೆ ಅತ್ತಿಗೆ ಮೀನಾಕ್ಷಿಯ  ಸಂದೇಶ ಸಾಯಂಕಾಲ ಬರುತ್ತಿಯಾ ಅಂತ ಸಂಕ್ಷೇಪ ಬೇಡಿಕೆ. ಯಾವಾಗಲೂ ಅತ್ತಿಗೆ ಹುಸಿ ಗದರಿಕೆಯಲ್ಲೇ ಬೈದು ಆತ್ಮೀಯ ಸಲುಗೆಯನ್ನು ತೋರಿಸಿ ಕರೆ ಮಾಡುವ ಹೊರತು  ಹೀಗೆ ಸಂದೇಶ ಅದೂ ಸಂಕ್ಷಿಪ್ತ ಸಂವಹನ ಎಂದಿಗೂ ಇರುವುದಿಲ್ಲ. ಹಾಗಾಗಿ ಅತ್ತಿಗೆಯ ಈ ಒಸಗೆ ಒಂದು ರೀತಿಯ ಕುತೂಹಲ ಒಂದಷ್ಟು ಆತಂಕವನ್ನು ಸೃಷ್ಟಿ ಮಾಡಿತ್ತು.  ಅತ್ತಿಗೆ ಯಾಕಾಗಿ ಕರೆದಿರಬಹುದು. ಎಲ್ಲವೂ ಮೊನ್ನೆ ಮೊನ್ನೆಯ ತನಕ ಸರಿಯಾಗಿ ಇತ್ತು. ಮೊನ್ನೆ  ಹೋಗಿದ್ದಾಗ ಅತ್ತಿಗೆ ಎಂದಿನಂತೆ ಖುಶಿಯಲ್ಲೇ ಇದ್ದರು. ಇದ್ದಕ್ಕಿದ್ದಂತೆ ಏನಾಯಿತು ಇವರಿಗೆ?  ಇಂದು ಹೇಗಿದ್ದರೂ ವಾರಾಂತ್ಯ ಸಾಯಂಕಾಲ ಒಂದು ಘಳಿಗೆ ಹೋಗಿ ಬರೋಣ ಎಂದು ಕೊಂಡು ನಿತ್ಯ ಚಟುವಟಿಕೆಯತ್ತ ಮನಸ್ಸು ತಿರುಗಿಸಿದ. ಆದರೂ ಮನೆಯ ಮೂಲೆಯಲ್ಲಿ ಆತಂಕ ಮಾತ್ರ ಜೀವಂತವಾಗಿತ್ತು.  ಹಾಗೆ ಒಂದು ಸಲ ಕರೆ ಮಾಡಿದ್ದ ಅತ್ತಿಗೆ ಅದೇ ಸಲುಗೆಯಲ್ಲಿ ಸಾಯಂಕಾಲ ಬಾ ಕಣೋ ಅಂತ ಮಾತು ಜಾರಿಸಿ ಬಿಟ್ಟರು.  ಅಣ್ಣ ಅತ್ತಿಗೆಯ ಮನೆ ರಾಜಾಜೀನಗರದ ಮಂಜುನಾಥನಗರದಲ್ಲಿತ್ತು. ವಾರಾಂತ್ಯದಲ್ಲಿ ಹೋಗಿಬರುತ್ತಿದ್ದರೂ ಇತ್ತೀಚೆಗೆ ಕೆಲಸದ ಒತ್ತಡದಿಂದ ಹೋಗುವ ಅವಧಿ ತಿಂಗಳಿಗೂ ಮೀರಿತ್ತು. ಬನ ಶಂಕರಿಯ ತನ್ನ ಮನೆಯಿಂದ ಹೋಗಬೇಕೆಂದರೆ ವಾಹನದಲ್ಲಿ  ಕನಿಷ್ಠ ಒಂದೆರಡು ತಾಸು ತೆಗೆದುಕೊಳ್ಳುತ್ತಿತ್ತು. ಮೆಟ್ರೋ ಬಂದನಂತರ ಸುಲಭ ಎಂದುಕೊಂಡರೂ ಕೆಲಸದ ಒತ್ತಡ ಎಲ್ಲವನ್ನೂ ಮೀರಿಸಿ ಹೋಗದೇ ಬಹಳ ಸಮಯವಾಗಿತ್ತು.

            ಕಛೇರಿಗೆ ಹೋಗಿ ಕೆಲಸದಲ್ಲಿ ನಿರತನಾದರೂ ಅತ್ತಿಗೆಯ ಕರೆಯ ಬಗ್ಗೆ ಮನಸ್ಸು ಯೋಚಿಸುತ್ತಿತ್ತು. ಕಛೇರಿಯ ಕೆಲಸದ ಒತ್ತಡದ ನಡುವೆ ಒಂದು ಸಲ ಅಲ್ಲಿಗೆ ಹೋಗೋಣವೆಂದರೂ ಸಾಧ್ಯವಾಗದು. ದಿವಾಕರ ಆತಿಗೆಯ ಬಗ್ಗೆ ಯೋಚಿಸಿದ. ಆತ ಇಂದು ಈ ನೆಲೆಗೆ ಬರಬೇಕಾದರೆ ಮೊದಲ ಮೆಟ್ಟಿಲಿಗೆ ಆಧಾರವಾದದ್ದು ಅತ್ತಿಗೆಯ ಹೆಗಲು.   ದಿವಾಕರನ ಅಪ್ಪ ಅಮ್ಮನಿಗೆ ಎರಡು ಮಕ್ಕಳು. ದಿವಾಕರನ ಅಣ್ಣ ಶಂಕರ  ವಿದ್ಯಾಭ್ಯಾಸ ಮುಗಿಸಿ ಬ್ಯಾಂಕ್ ನಲ್ಲಿ ಕೆಲಸಗಳಿಸಿಕೊಂಡ.  ಕೆಲಸದಲ್ಲಿ ಬೆಂಗಳೂರಿಗೆ ಸೇರಿದನಂತರ ಆತನಿಗೆ ಮದುವೆಯಾಯಿತು.  ಮದುವೆಯಾಗಿ ಬೆಂಗಳೂರಿಗೆ ಸೇರಿಕೊಂಡನಂತರ ಶಂಕರ, ದಿವಾಕರನನ್ನು ಬೆಂಗಳೂರಿಗೆ ಕರೆಸಿದ. ಕಾಲೇಜು ವಿದ್ಯಾಭ್ಯಾಸದಿಂದ ತೊಡಗಿ ಎಲ್ಲವನ್ನೂ ಅಣ್ಣ ನಿಭಾಯಿಸಿದ್ದು ಅತ್ತಿಗೆಯ ಸಂಪೂರ್ಣ ಸಹಕಾರದಿಂದ. ಹಾಗಾಗಿ ಅತ್ತಿಗೆ ಎಂದರೆ ಮಾತೃಸಮಾನವಾಗಿ ಆಕೆ ಏನು ಹೇಳಿದರೂ ಶಿರಸಾವಹಿಸುವ ದಿವಾಕರನಿಗೆ ಅತ್ತಿಗೆಯ ಕರೆ ನಿಜಕ್ಕೂ ಗಾಬರಿಯನ್ನು ತಂದಿತ್ತು. ಸದ್ಭಾವನೆ ಸಚ್ಚಿಂತನೆ ಸನ್ಮನಸ್ಸು ಇವುಗಳಿಗೆ ಮನುಷ್ಯ ರೂಪದಲ್ಲಿ ದೇವರು ಅನುಗ್ರಹಿಸುತ್ತಾನೆ ಎನ್ನುವುದಕ್ಕೆ ಅತ್ತಿಗೆ ಪ್ರತಿರೂಪವಾಗಿ ಎದುರು ನಿಂತುಬಿಡುತ್ತಾಳೆ. ಆಕೆ ನಮ್ಮ ಮನೆಗೆ ಆಗಮಿಸುವ ಮೊದಲು ನಿರೀಕ್ಷೆಗಿಂತಲೂ ಆತಂಕ ಹೆಚ್ಚಾಗಿತ್ತು. ಮದುವೆ ಮಕ್ಕಳು ಸಂಸಾರ ಪ್ರಸ್ತುತ ಸಮಯದಲ್ಲಿ ಸಮಸ್ಯೆಗಳನ್ನು ತಂದರೂ ಮನುಷ್ಯ ಅದರಿಂದ ವಿಮುಖನಾಗಲಾರ. ಇವುಗಳು ಬದುಕಿನ ಅನಿವಾರ್ಯ ಘಟಕ. ಅಲ್ಲಿ ಯಶಸ್ಸು ಕಾಣುವಲ್ಲಿ ನಿಜಕ್ಕೂ ಭಗವಂತನಿಗೆ ಶರಣಾಗುತ್ತಾನೆ. ಬದುಕಿನಲ್ಲಿ ಬೆಳೆ ಬೆಳೆಯುತ್ತದೋ ಗೊತ್ತಿಲ್ಲ ಆದರೆ ಕಳೆ ಹುಟ್ಟದೇ ಇರಲಿ ಎಂಬುದು ಹಾರೈಕೆ. ಅತ್ತಿಗೆಯ ಪ್ರವೇಶ, ಆನಂತರ ಬೆಂಗಳೂರಲ್ಲಿ ಸಿಕ್ಕಿದ ಆಶ್ರಯ ದಿವಾಕರನಿಗಿಂತ ಹೆಚ್ಚು ನಿರಾಳವಾದದ್ದು ಅಮ್ಮ.  ಹಾಗಾಗಿಯೇ ಇಂದಿಗೂ ಅಮ್ಮ ಊರಿನ ಮನೆಯನ್ನು ಬಿಟ್ಟು ಅತ್ತಿಗೆಯ ಜತೆಯಲ್ಲೇ ಇರುವುದಕ್ಕೆ ಬಯಸುತ್ತಾರೆ. ಪ್ರಸ್ತುತ ಇದು ಅಚ್ಚರಿಯೆನಿಸಬಹುದು. ಆದರೆ ಇದು ವಾಸ್ತವದ ಅನುಭವ ದಿವಾಕರನಿಗೆ.

            ವ್ಯಾಸಂಗ ಉದ್ಯೋಗದ ನಡುವಿನ ಪಯಣ ಅತ್ಯಂತ ಕಠಿಣ. ಪ್ರವಾಹ  ಸೆಳೆಯುವ ಭರದಲ್ಲಿ ಗುರಿಯ ಅರಿವೇ ಇರುವುದಿಲ್ಲ.ಆಣ್ಣ ಅತ್ತಿಗೆಯ ಆಸರೆ ಗುರಿಯನ್ನು ಕಾಣುವ ವಿಶ್ವಾಸ ತರಬೇಕಿದ್ದರೆ ಅತ್ತಿಗೆಯ ಸನ್ಮನಸ್ಸು ಹಿರಿದಾಗಿತ್ತು. ಶಿಕ್ಷಣದ ನಂತರ ಖಾಸಗೀ ಬ್ಯಾಂಕ್ ಒಂದರಲ್ಲಿ ಕೆಲಸ ಸಿಕ್ಕಿದಾಗ ಬದುಕಿನಲ್ಲಿ ಇದು ಧಾರಾಳವೆನಿಸಿ ದಿವಾಕರ ಬೇರೆ ಮನೆ ಮಾಡಿದ. ಬೆಂಗಳೂರಿನ ಜೀವನವೇ ಹಾಗೆ ಅಕ್ಕ ಪಕ್ಕದಲ್ಲಿದ್ದರೂ ಅಪರಿಚಿತರಾಗುತ್ತೇವೆ. ಇಲ್ಲ ಅಪರೂಪದ ಅತಿಥಿಗಳಾಗಿಬಿಡುತ್ತೇವೆ.

            ಎರಡು ದಿನ ಬಿಡುವು ಸಿಗದೆ ಇದ್ದರೂ ಇಂದು ತುಸು ಬೇಗನೆ ಬ್ಯಾಂಕ್ ಸಮಯವಾದ ಕೂಡಲೇ ಮನೆಗೆ ಹೋಗದೇ ಬನಶಂಕರಿಯಿಂದ ಮದಾವಾರಕ್ಕೆ ಹೋಗುವ  ಮೆಟ್ರೋ ಹತ್ತಿದ. ಮೆಟ್ರೋದಲ್ಲಿ ಸೀಟು ಸಿಗದೆ ನಿಂತುಕೊಂಡು ಆಕಡೆ ಈಕಡೆ ನೋಡಿದ. ಪ್ರಯಾಣಿಸುವ ನೂರರಲ್ಲಿ ತೊಂಭತ್ತೈದು ಮಂದಿಯೂ ಮೊಬೈಲ್ ನೋಡುವುದರಲ್ಲೇ ಮಗ್ನವಾಗಿದ್ದರು. ಮನುಷ್ಯನಿಗೆ ಬದುಕುವುದಕ್ಕೆ ಸಮಯದ ಕೊರತೆ ಇದೆ. ಇನ್ನೂ ಹೆಚ್ಚು ವರ್ಷ ಬದುಕಬೇಕೆಂಬ ಹಂಬಲದಲ್ಲಿ ಇದ್ದ ಸಮಯವೇ ಸಾಲದು ಎಂಬ ಬಯಕೆ ಇರುತ್ತದೆ. ಆದರೆ ಅದೇ ಬದುಕಿನಲ್ಲಿ ಇರುವ ಸಮಯದ ಬೆಲೆ ತಿಳಿದಿರುವುದಿಲ್ಲ. ಸಮಯ ಕಳೆಯುವುದು ಹೇಗೆ ಟೈಂ ಪಾಸ್ ಆಗುವುದಿಲ್ಲ  ಎಂಬ ತುಡಿತದಲ್ಲೇ ಪ್ರತೀ ಕ್ಷಣವನ್ನು ಕಳೆದು ಬಿಡುತ್ತಾನೆ. ಅದಕ್ಕೆ ಹೊಸ ಅವಕಾಶ ಎಂದರೆ ಈ ಮೊಬೈಲ್. ಹಾಗಾಗಿ ಮೆಟ್ರೋದಲ್ಲಿ ಬಹುತೇಕ ಮಂದಿ ಈ ಟೈಂ ಪಾಸ್ ಗೆ ಮೊಬೈಲ್ ತಿಕ್ಕಿ ತಿಕ್ಕಿ ನೋಡುವುದಕ್ಕೆ ತೊಡಗಿಬಿಡುತ್ತಾರೆ. ಹತ್ತಿರ ಕುಳಿತವರು ನಿಂತವರ ಬಗ್ಗೆ ಪ್ರಜ್ಞೆ ಇರುವುದಿಲ್ಲ. ಅಶಕ್ತರಿಗೆ ಅಂತ ಆಸನ ಮೀಸಲು ಇರುತ್ತದೆ. ಆದರೆ  ಅಶಕ್ತರು ವಯಸ್ಕರು ಹತ್ತಿರ ಹೋಗಿ ತಡವಿ ಗೋಗರೆ ಎಚ್ಚರಿಸುವ ವರೆಗೆ ಇಹಲೋಕದ ಪರಿವೆಯೇ ಇರುವುದಿಲ್ಲ.  ಕೃಷ್ಣ ರಾಜೇಂದ್ರ ಮಾರುಕಟ್ಟೆಗೆ ತಲುಪಿದಾಗ ಒಂದು ಕಡೆ ಕುಳಿತುಕೊಳ್ಳುವುದಕ್ಕೆ ಅವಕಾಶ ಸಿಕ್ಕಿತು. ಕುಳಿತು ತುಸು ಹೊತ್ತಿನಲ್ಲೇ ತೂಕಡಿಕೆ ಆರಂಭವಾಯಿತು.

            ಮೆಟ್ರೋ ರಾಜಾಜೀನಗರ ತಲುಪಿದ್ದೇ ತಿಳಿಯಲಿಲ್ಲ. ಗಡಬಡಿಸಿ ಎದ್ದವನಿಗೆ ರಾಜಾಜಿನಗರ ದಾಟಿ ರೈಲು ಮುಂದಕ್ಕೆ ಬಂದು ಇಸ್ಕಾನ್ ದೊಡ್ಡದಾಗಿ ಕಂಡಿತು. ಛೇ ಅಂತ ಅನಿಸಿತು. ಇನ್ನೇನು ಮೈಸೂರ್ ಸ್ಯಾಂಡಲ್ ನಿಲ್ದಾಣದಲ್ಲಿ ಇಳಿದು ಪಕ್ಕದ ಪ್ಲ್ಯಾಟ್ ಫಾರಂ ಗೆ ಬಂದು ಹಿಂತಿರುಗಿ ಹೋಗುವ ರೈಲಿಗೆ ಕಾದು ಕುಳಿತ. ಛೇ ಎಚ್ಚರವಿದ್ದರೆ ಇಷ್ಟೊತ್ತಿಗೆ ಅಣ್ಣನ ಮನೆಯಲ್ಲಿರುತ್ತಿದ್ದೆ. ಅದೇ ಅತ್ತಿಗೆಯ ಸ್ಪೆಷಲ್ ಕಾಫಿ ಕುಡಿಯುತ್ತಾ ಹರಟೆ ಶುರುವಾಗುತ್ತಿತ್ತು. ನಿದ್ದೆಯನ್ನು ಶಪಿಸಿಕೊಂಡು ಯಾವುದೋ ಲೋಕದಲ್ಲಿ ಇದ್ದವನಿಗೆ ಬೆನ್ನಿಗೆ ಒಂದು ಬಲವಾದ ಗುದ್ದು ಬಿದ್ದಾಗ ಗಾಬರಿಯಲ್ಲಿ ಹಿಂದೆ ತಿರುಗಿ ನೋಡಿದ.

            ನೋಡಿದರೆ ಹಾಯ್ ಚಿಕ್ಕಪ್ಪ ಎಂದು ಲಾವಣ್ಯ ಸಲುಗೆಯಿಂದ ನಗುತ್ತಾ ನಿಂತಿದ್ದಳು. ಜತೆಗೆ ಇನ್ನೊಬ್ಬಾಕೆ ಹುಡುಗಿ ಇದ್ದಳು. ಲಾವಣ್ಯ ಅಣ್ಣನ ಮಗಳು. ಬ್ಯಾಲ್ಯದಿಂದಲೇ ದಿವಾಕರನ ಹೆಗಲು ಹತ್ತಿ ಬೆಳೆದವಳು. ಅದೊಂದು ಸಮಯ ಆತನ ಬದುಕಿನ ಸುವರ್ಣ ಯುಗದಂತೆ. ಲಾವಣ್ಯ ಪುಟ್ಟ ಮಗುವಾದಂದಿನಿಂದ ದಿವಾಕರ  ದಿನದ ಬಹಳಷ್ಟು ಸಮಯವನ್ನು ಆಕೆಯೊಂದಿಗೆ ಕಳೆದಿದ್ದ. ಪುಟ್ಟ ಮಗುವನ್ನು ತಾನೇ ಸ್ವತಃ ಸ್ನಾನ ಮಾಡಿಸಿ ಊಟಮಾಡಿಸಿ ಆಕೆಯ ಉಡುಪು ಶೃಂಗಾರ ಎಲ್ಲವನ್ನು ಮಾಡಿಸುತ್ತಿದ್ದ ದಿನಗಳು. ಆಕೆಯೂ ಹಾಗೆ ಚಿಕ್ಕಪ್ಪ ಎನ್ನುವ ಪ್ರೀತಿ ಸಲುಗೆ ಈಗಲೂ ಇತ್ತು. ಹಲವು ಸಲ ಈಕೆಯನ್ನು ಅಗಲಿರಲಾಗದೇ ಆಗಾಗ ಬರುತ್ತಿದ್ದ.  ಈಗ ಬೆಳೆದು ದೊಡ್ಡವಳಾಗಿದ್ದಾಳೆ. ಕಾಲೇಜು ಮೆಟ್ಟಲು ಹತ್ತಿದ್ದಾಳೆ. ಆದರೆ ದಿವಾಕರನಿಗೆ ಆಕೆ ಇನ್ನೂ ಚಿಕ್ಕ ಮಗಳಂತೆ ಭಾಸವಾಗುತ್ತದೆ. ಮಕ್ಕಳು ಬೆಳೆದು ದೊಡ್ಡ ಆದಂತೆ ಅಂತರ ಹೆಚ್ಚುತ್ತಾ ಹೋಗುತ್ತದೆ. ಮಕ್ಕಳ ಪ್ರಪಂಚ ಮನೆಯಿಂದ ವಿಸ್ತಾರವಾಗಿ ಬೆಳೆದಂತೆ ನಮ್ಮ ಅಸ್ತಿತ್ವ ಸಣ್ಣದಾಗುತ್ತಾ ಹೋಗುವುದು ಸಹಜ.  ಈಗ ತನ್ನ ಮಗುವಿಗೆ ಕೊಡದ ಪ್ರೀತಿಯನ್ನು ಆಗ ಆಕೆಗೆ ಕೊಟ್ಟಿದ್ದ. ಆತನ ಸಂಸಾರದಲ್ಲಿ ಬಹಳ ದಿನದಿಂದ ನಂತರ ಮೊದಲಿಗೆ ಬಂದ ಪುಟ್ಟ ಅತಿಥಿ ಆಕೆ. ಹಾಗಾಗಿ ಆ ಅಕ್ಕರೆ ಪ್ರೀತಿ ಸಲುಗೆ ಬದುಕಿನ ವಿಶಿಷ್ಟ ಅನುಭವಾಗಿತ್ತು

            ಲಾವಣ್ಯ, ಮುದ್ದಿನ ಹುಡುಗಿ. ಚಿಕ್ಕಪ್ಪ ಎಂದರೆ ಸಲುಗೆ ಮಾತ್ರವಲ್ಲ ಅದಕ್ಕಿಂತ ಹೆಚ್ಚು ಗೌರವ. ತುಲನೆಗೆ ಸಿಗದ ಪ್ರೀತಿ,   ಏನಿದ್ದರೂ ಚಿಕ್ಕಪ್ಪನೊಂದಿಗೆ ಹಂಚಿಕೊಳ್ಳುವ ನಿರ್ಭೆಡೆಯ ಆತ್ಮೀಯತೆ.  ಲಾವಣ್ಯ ಮನೆಯಲ್ಲಿ ಎಲ್ಲರ ಜತೆಯೂ ಪ್ರೀತಿ ಸಲುಗೆಯಿಂದ ಬೆರೆಯುವವಳು. ನೇರ ನಡೆ. ದಿಟ್ಟತನ ಇದಕ್ಕಿಂತ ಹೆಚ್ಚಾಗಿ ಮನೆಯವರೊಂದಿಗೆ ಬೆರೆಯುವ ಆತ್ಮೀಯತೆ ಆಕೆಯನ್ನು ಪ್ರತೀ ಕ್ಷಣ ಸ್ಮರಿಸುವಂತೆ ಮಾಡುತ್ತದೆ. ಸದಾ ನಗುತ್ತಾ ಗೆಲುವಾಗಿ ಇರುವುದು ಮಾತ್ರವಲ್ಲ ಮನೆಯ ಪ್ರತಿಯೊಬ್ಬರಿಂದಲೂ ಅದನ್ನು ನಿರೀಕ್ಷೆ ಮಾಡಿಬಿಡುತ್ತಾಳೆ. ಜಗಳದಲ್ಲೂ ಆತ್ಮೀಯತೆ ಅಳುವಿನಲ್ಲೂ ಆತ್ಮೀಯತೆ. ಪ್ರೀತಿಸುವ ಪರಿ ಉಳಿದವರಿಗೆ ಪಾಠವಾಗಿ ಬಿಡುತ್ತದೆ. ಹಿರಿಯರಲ್ಲಿ ಹಲವು ಭಿನ್ನಾಭಿಪ್ರಾಯ ಕಲಹ ಇದ್ದರೂ ಈಕೆಯ ಅಸ್ತಿತ್ವ ಎಲ್ಲರನ್ನೂ ಒಂದು ಗೂಡಿಸುತ್ತದೆ.  ಮಕ್ಕಳು ಸಂಸಾರದ ಸಮೃದ್ಧಿಯ ಸಂಕೇತ. ಸಂಸಾರದಲ್ಲಿ ಆತ್ಮಿಯತೆ ಪ್ರೀತಿ ಐಕ್ಯತೆ ಇವುಗಳೆಲ್ಲ ಒದಗಿ ಬರಬೇಕಾದರೆ ಅಲ್ಲಿ ಉತ್ತಮ ಮಕ್ಕಳು ಅನಿವಾರ್ಯ. ಹಲವು ಸಲ ಅವರನ್ನು ನೋಡಿ ಕಲಿಯುವ ಅವರಿಗಾಗಿ ಎಲ್ಲವನ್ನು ಮರೆಯುವ ಅನಿವಾರ್ಯತೆ ಸಂಸಾರ ಬಂಧನವನ್ನು ಬಿಗಿಯಾಗಿಸುತ್ತದೆ. ಲಾವಣ್ಯ ಇರುವಲ್ಲಿ ಇದೆಲ್ಲವೂ ಸಹಜ ಎಂಬಂತೆ ಭಾಸವಾಗುತ್ತದೆ. 

            ಲಾವಣ್ಯನನ್ನು ಕಂಡ ಕೂಡಲೇ ದೀವಾಕರ ನಗುತ್ತಾ ಒಂದು ಕೈಯನ್ನು ಭುಜದ ಮೇಲೆ ಹಾಕಿ ಆಕೆಯನ್ನು ಬರಸೆಳೆದು ಎದೆಗೆ ಒತ್ತಿಕೊಂಡ.  ಒಂದು ತೊಟ್ಟು ಕಂಬನಿ ಆಕೆಯ ಅರಳಿದ ಕೇಶಾರಾಶಿಯ ಮೇಲೆ ಬಿದ್ದು ಮುತ್ತಿನಂತೆ ಪ್ರತಿಫಲಿಸಿತು.  ಎನು ಲವ್ವಿ?  ಲವ್ವಿ...! ಒಂದು ಕರೆಸಾಕು ಆಕೆ ಮುದುಡಿ ಮೊಗ್ಗಾಗಿ ತೋಳಿನಾಳಕ್ಕೆ ಸೇರಿ ಬಿಡುತ್ತಾಳೆ. ಚಿಕ್ಕಪ್ಪ ಎಂದರೆ ಆಕೆಗೆ ಎಲ್ಲಿಲ್ಲದ ಸಲುಗೆ. ಯಾವ ಸಮಯದಲ್ಲೂ ತನ್ನ ಪರವಾಗಿ ಒದಗಿ ಬರುವ ವ್ಯಕ್ತಿ ಅಂತ ಇದ್ದರೆ ಅದು ಚಿಕ್ಕಪ್ಪ ಎಂಬ ಅಭಿಮಾನ. ಮೊದಲು ಮನೆಯಲ್ಲಿ ಎಲ್ಲರೂ ಆಕೆಯನ್ನು ಬೈಯುವುದೊ ಅಥವಾ ನೋಯಿಸುವುದೋ ಮಾಡಿದರೆ ಚಿಕ್ಕಪ್ಪನ ಬಳಿಯಲ್ಲಿ ಎಲ್ಲದಕ್ಕೂ ಸಾಂತ್ವನ ಸಿಕ್ಕಿಬಿಡುತ್ತದೆ. ದಿವಾಕರನೂ ಅಷ್ಟೇ,   ಆಕೆ ಎಂದರೆ ಭಾವನೆಗಳಿಗೆ ಶರಣಾಗುತ್ತಾನೆ. ಪ್ರತಿ ಸಲ ತಬ್ಬಿ ಹಿಡಿಯುವಾಗ ತೊಟ್ಟು ಕಂಬನಿ ಒಸರದೇ ಇದ್ದರೆ ಅದು ಅಪ್ಪುಗೆಯೇ ಆಗುವುದಿಲ್ಲ.  ಅಲ್ಲಿ ಕಂಬನಿ ಎಂಬುದು  ತೃಪ್ತಿಯ ಸಂಕೇತ.  ಆಕೆಯ ಎಲ್ಲ ದೌರ್ಬಲ್ಯಗಳನ್ನು ದಿವಾಕರ ಒಪ್ಪಿಕೊಳ್ಳುವುದು ಆಕೆಯ ಮೇಲಿನ ಪ್ರೀತಿಗಾಗಿ.  ದೌರ್ಬಲ್ಯಗಳನ್ನು ಒಪ್ಪಿಕೊಂಡು ಜತೆಗಿದ್ದರೆ ಅಲ್ಲಿ ಪ್ರೀತಿ ಇದೆ ಎಂದು ಅರ್ಥ.   ಯಾವ ಸಮಸ್ಯೆಯಾದರೂ ಕ್ಷಣ ಮಾತ್ರದ ಪರಿಹಾರ ದಿವಾಕರನ ಬಳಿ ಇರುತ್ತದೆ. ಎಷ್ಟೇ ಕೆಲಸದ ಒತ್ತಡವಿದ್ದರೂ, ಯಾವುದೇ ದುಗುಡ ದುಮ್ಮಾನದಲ್ಲಿದ್ದರೂ ಆಕೆ ಬಂದು ಚಿಕ್ಕಪ್ಪಾ ಇಂಥದ್ದು ಬೇಕು ಎಂದರೆ ಇಲ್ಲ ಎನ್ನದೇ ಮಾಡುವ ವ್ಯಕ್ತಿ ಎಂದರೆ ಅದು ದಿವಾಕರ. ಹಲವು ಸಲ ಆಕೆ ಹೇಳುತ್ತಿರುತ್ತಾಳೆ-

            ಎಲ್ಲರ ಜತೆಯಲ್ಲೂ ಒಂದಲ್ಲ ಒಂದು  ಸಮಸ್ಯೆ ಅಥವಾ ಹಿಂಸೆಯನ್ನು ಸೂಕ್ಷ್ಮವಾಗಿಯಾದರೂ ಅನುಭವಿಸಿದ್ದೇನೆ. ಆದರೆ ಚಿಕ್ಕಪ್ಪನ ಜತೆಯಲ್ಲಿ ಇಂತಹ ಯಾವುದೇ ಅನುಭವ ಆಗುವುದಿಲ್ಲ. ಎಲ್ಲಾ ಮುಕ್ತವಾಗಿರುತ್ತದೆ. ಯಾಕೆಂದರೆ ಚಿಕ್ಕಪ್ಪ ಬೈದದ್ದೇ ಇಲ್ಲ. ಎಂದೂ ಸಿಟ್ಟು ತೋರಿಸದ ಚಿಕ್ಕಪ್ಪನಲ್ಲಿ ಸಲುಗೆ ಸಹಜವಾಗಿ ಬೆಸೆದಿರುತ್ತದೆ.

             ಅದೇಕೋ ದಿವಾಕರನಿಗೆ ಎಂದಿಗೂ ಆಕೆಯನ್ನು ಬೈಯಬೇಕು ಎಂದನಿಸುವುದಿಲ್ಲ. ಅಕೆಯ ಮೇಲೆ ಸಿಟ್ಟಾಗುವುದಿಲ್ಲ. ಎಲ್ಲವನ್ನು ಮಗಳು ಎಂದುಕೊಂಡು ನಿರ್ವಿಕಾರವಾಗಿ ಸ್ವೀಕರಿಸಿ ಬಿಡುತ್ತಾನೆ.  ಹಾಗಾಗಿಯೇ ಚಿಕ್ಕಪ್ಪನ ಮಾತು ಆಕೆಗೆ ವೇದವಾಕ್ಯವಾಗುತ್ತದೆ. ಎನಿದ್ದರೂ ಆಕೆಗೆ ಎನಾದರೂ ಹೇಳಬೇಕಿದ್ದರೆ...ಆಗ ಎಲ್ಲರ ದೃಷ್ಟಿ ದಿವಾಕರನ  ಚಿಕ್ಕಪ್ಪ ಸ್ಥಾನದತ್ತ ಬರುತ್ತದೆ.  ಎಲ್ಲಾ ಕಡೆ ಸಂಗ್ರಹವಾಗುವ ಆಕೆಯ ನೋವುಗಳು ಚಿಕ್ಕಪ್ಪನ ಬಳಿಯಲ್ಲಿ ಕರಗಿಬಿಡುತ್ತವೆ.

            ಹೀಗೆ ಹೊರಗೆ ಸಿಕ್ಕಿದರೆ ಚಿಕ್ಕಪ್ಪನಲ್ಲಿ ಏನಾದರೂ ಒಂದಕ್ಕೆ ದುಂಬಾಲು ಬೀಳುತ್ತಾಳೆ. ಅದು ಐಸ್ಕ್ರೀಂ ಪಿಜಾ ಅಥವಾ ಕೊನೆಯಲ್ಲಿ ಒಂದು ತುಂಡು ಕ್ಯಾಡ್ ಬರಿಯಾದರೂ ಪ್ರಸಾದವಾಗದಿದ್ದರೆ ಚಿಕ್ಕಪ್ಪನ ಸಮಾಗಮ ಅಪೂರ್ಣವಾಗುತ್ತದೆ. ಇಂದೂ ಹಾಗೇ ಇರಬಹುದೋ ಎನೋ ಅಂದುಕೊಂಡು ಕೈ ಬ್ಯಾಗ್ ನಲ್ಲಿ ಮೊದಲೇ ತೆಗೆದಿರಿಸಿದ್ದ ಕ್ಯಾಡ್ ಬರಿಯನ್ನು ಕೈಯಲ್ಲಿರಿಸುತ್ತಾನೆ. ಮುಖವರಳಿಸಿ ಥ್ಯಾಂಕ್ಸ್ ಎನ್ನುತ್ತಾ ಚಿಕ್ಕಪ್ಪನನ್ನು ತಬ್ಬಿ ಹಿಡಿವಾಗ ದಿವಾಕರ ಪರಿಸರವನ್ನು ಮರೆತು ಬಿಡುತ್ತಾನೆ.

            ಈಕೆ ಲಲ್ಲೆ ಹೊಡೆಯುತ್ತಿದ್ದರೆ ಜತೆಗಿದ್ದ ಗೆಳತಿ ಕಂಬ ನುಂಗಿದಂತೆ ಸುಮ್ಮನೇ ನಿಂತುಬಿಡುತ್ತಾಳೆ. ದಿವಾಕರ ಆಕೆಯನ್ನು ನೋಡುವಾಗ . ಈಕೆ ಭವಂತಿ ನನ್ನ ಗೆಳತಿ ಅಂತ ಪರಿಚಯಿಸುತ್ತಾಳೆ. ದಿವಾಕರನಿಗೆ ಎಲ್ಲೋ ನೋಡಿದ ನೆನಪು. ಮತ್ತೆ ಮೊದಲು ನಮ್ಮ ಬೀದಿಯಲ್ಲೇ ಇದ್ದ ಹುಡುಗಿ ಅವಳು. ಲಾವಣ್ಯನೊಂದಿಗೆ ಕಾನ್ವೆಂಟ್ ನಿಂದ ಹೈಸ್ಕೂಲ್ ವರೆಗೂ ಸಹಪಾಠಿಯಾಗಿದ್ದವಳು. ಆಕೆಯನ್ನು ನೋಡದೆ ಬಹಳ ಸಮಯವಾಗಿತ್ತು. ದೀರ್ಘ ಕಾಲದ ಸ್ನೇಹವನ್ನು ಕಣ್ಣಾರೆ ಕಾಣುತ್ತಾನೆ.

         "   ಎಲ್ಲಿಗೆ ಹೊಗಿದ್ದು ಅಂತ ಕೇಳುತ್ತಾನೆ."

            " ಚಿಕ್ಕಪ್ಪ ಅವಳಿಗೆ ಬೋರ್ ಆಯ್ತು ಅಂತ ಮಾಲ್ ಗೆ ಒಂದು ಸುತ್ತು ಹೋಗೋಣ ಅಂತ ಬಂದೆವು. ಈಗ ವಾಪಾಸ್ ಹೋಗುತ್ತಿದ್ದೇವೆ. ಇವಳನ್ನು ಬಿಟ್ಟು ಮನೆಗೆ ಹೋಗುವ ಅಂತ ಇದ್ದೆ. ಅಷ್ಟ್ರಲ್ಲಿ ನಿಮ್ಮನ್ನು ನೋಡಿದೆ."

            ಹಾಗೆ ದೊಡ್ಡದಾಗಿ ಮಾತನಾಡುತ್ತಾ ಮೇಟ್ರೋ ಹತ್ತಿ ರಾಜಾಜಿನಗರದಲ್ಲಿ ಇಳಿದು ಬಿಡುತ್ತಾರೆ. ಅಲ್ಲಿ ಗೆಳತಿಗೆ ವಿದಾಯ ಹೇಳಿ ಮನೆಯ ಕಡೆಗೆ ಇಬ್ಬರೂ ಹೆಜ್ಜೆ ಹಾಕುತ್ತಾರೆ. ಆಗಲೇ ಸಾಯಂಕಾಲ ಕಳೆದು ಕತ್ತಲಾವರಿಸುತ್ತದೆ.  ದಾರಿಯುದ್ದಕ್ಕೂ  ಗೆಳತಿ ಭವಂತಿಯ  ಕಥೆ ವಟ ವಟ ಅಂತ ಹೇಳುತ್ತಾಳೆ. ಭವಂತಿ ಮೊದಲು ನಮ್ಮ ಮನೆಯ ರಸ್ತೆಯಲ್ಲೇ  ಮನೆ. ತಾಯಿ ಇಲ್ಲದೇ  ತಂದೆಯ ಆರೈಕೆಯಲ್ಲಿ ಬೆಳೆದ ಹೆಣ್ಣು ಮಗಳು. ಹರಯಕ್ಕೆ ಬರುತ್ತಾ ತಾಯಿಯನ್ನು ಕಳೆದುಕೊಂಡ ಭವಂತಿಗೆ ಸರಿಯಾದ ಸಮಯದಲ್ಲೇ ತಾಯಿಯ ಅವಶ್ಯಕತೆ ಇರುವ ಸಮಯದಲ್ಲೇ ತಾಯಿಯ ಅಗಲಿಕೆ ಅನುಭವಿಸುವಂತಾಗುತ್ತದೆ.  ಬುದ್ಧಿ ಹೇಳುವುದಕ್ಕೆ ನಿಯಂತ್ರಿಸುವುದಕ್ಕೆ ತಾಯಿಯ ಸ್ಥಾನ ಅತ್ಯಂತ ಅನಿವಾರ್ಯ ಎಂಬಂತಹ ಸಮಯ ಹದಿ ಹರಯ.  ಹೆಚ್ಚು ಕಮ್ಮಿ ಮನೆಯಲ್ಲಿ ಆಕೆ ಓರ್ವಳೇ ಇರುತ್ತಾಳೆ. ದುಡಿಯುವುದಕ್ಕೆ ಮನೆಯಿಂದ ಹೊರ ಹೋಗುವ ಅಪ್ಪ ಮನೆಗೆ ಬರುವಾಗ ತಡವಾಗಿರುತ್ತದೆ. ಇರುವ ಅಲ್ಪ ಸ್ವಲ್ಪ ಸಮಯದಲ್ಲಿ ತಂದೆ ಯಾವುದನ್ನೆಲ್ಲ ಗಮನಿಸಬಹುದು? ಅಪ್ಪ ಅಮ್ಮನ ನಿಯಂತ್ರಣ ಇಲ್ಲದೇ ಇದ್ದರೂ ಭವಂತಿ ಬಹಳ ಬುದ್ದಿವಂತೆ. ವಯಸ್ಸಿನಲ್ಲಿ ಇರುವ ಚಂಚಲತೆ ಇವುಗಳಿಂದ ದೂರವಾಗಿದ್ದಳು. ಆದರೂ ಹೊರಜಗತ್ತು ಆಕೆಗೆ ಪರೀಕ್ಷೆಯನ್ನು ಒಡ್ಡುತ್ತಿತ್ತು.

            ಭವಂತಿಯ ಕಥೆಯನ್ನು ಕೇಳುತ್ತಿದ್ದಂತೆ ಮನೆ ಸಮೀಪಿಸುತ್ತದೆ. ಮನೆಯ ಒಳಗೆ ಬರುತ್ತಿದ್ದಂತೆ ಟೀವಿ ಸದ್ದು ಜೋರಾಗಿ ಕೇಳುತ್ತಿರುತ್ತದೆ. ಅಮ್ಮ ಧಾರವಾಹಿ ನೋಡುತ್ತಿದ್ದರು.  ಸಾಯಂಕಾಲ ಒಂದಷ್ಟು ದ್ವೇಷ ಕಲಹವನ್ನು ನೋಡದೆ ಇದ್ದರೆ ಅಮ್ಮನಿಗೆ ಏನೋ ಕಳೆದು ಹೋದ ಅನುಭವ. ಅಮ್ಮನ ಬಳಿ ಕುಳಿತು ಎಂದಿನಂತೆ ಅದೂ ಇದೂ ಮಾತನಾಡಿದ. ಆದರೆ ಅಂತಹ ಆತಂಕದ ವಿಚಾರ ಯಾವುದನ್ನೂ ಅಮ್ಮ ಹೇಳದಿರುವಾಗ ಅತ್ತಿಗೆ ಕರೆದ ಉದ್ದೇಶವಾದರೂ ಏನು ಎಂದು ಅಚ್ಚರಿಯಾಗಿತ್ತು . ಅತ್ತಿಗೆ ಯಾವುದೋ ಕೆಲಸದಲ್ಲಿ ಮಗ್ನವಾಗಿದ್ದರು. ಬಟ್ಟ ಬದಲಿಸಿ ಬಂದ ಲಾವಣ್ಯ ಚಿಕ್ಕಪ್ಪನೊಂದಿಗೆ ಮತ್ತೆ ಹರಟೆಗೆ ತೊಡಗಿದಳು.

            ಅತ್ತಿಗೆಯಲ್ಲೇ ಕೇಳೋಣವೆಂದುಕೊಂಡು ಅಡುಗೆ ಮನೆಯತ್ತ ಹೋದ. ಜತೆಯಲ್ಲೇ ಲಾವಣ್ಯ ಕೂಡ ಹೆಗಲಿಗೆ ಜೋತುಬಿದ್ದುಕೊಂಡು ಬಂದಳು. ಚಿಕ್ಕಪ್ಪನಿಗೆ ಇಷ್ಟವಾದ ಆಡುಗೆಯನ್ನು ಮಾಡುವಂತೆ ಅಮ್ಮನಿಗೆ ದುಂಬಾಲು ಬಿದ್ದಳು. ಚಿಕ್ಕಪ್ಪನೊಂದಿಗೆ ಊಟ ಮಾಡದೇ ಬಹಳ ದಿನವಾಗಿತ್ತು. ಹಾಗೆ ಹರಟುತ್ತಿರ ಬೇಕಾದರೆ ಊಟದ ಸಮಯವಾಗಿ ಬಿಟ್ಟಿತು. ಅಣ್ಣನೂ ಕೆಲಸ ಮುಗಿಸಿ ಬಂದು ಬಿಟ್ಟರೆ ಎಲ್ಲರೂ ಕುಳಿತು ಊಟ ಮಾಡಿದರು. ಮರುದಿನ ಕಛೇರಿಯಲ್ಲಿ ಕೆಲಸವಿದ್ದುದರಿಂದ ದಿವಾಕರನಿಗೆ ಹೊರಡಲೇ ಬೇಕಿತ್ತು. ಹಾಗೆ ಹೊರಡುವಾಗ ಅತ್ತಿಗೆ ಬಳಿಗೆ ಬಮ್ದು ಕೇಳಿದ ಏನು ಸಂಗತಿ?

            ಅತ್ತಿಗೆ ಪಿಸುಗುಡುತ್ತಾ ಹೇಳಿದಳು, "  ಹಾಗೆಲ್ಲ ಹೇಳುವಂಥದ್ದು ಅಲ್ಲ ಮಾರಾಯ. ಹೀಗೆ ಗಡಿಬಿಡಿಯಲ್ಲಿ ಬಂದರೆ ಹೇಗೆ? "

            ದಿವಾಕರನಿಗೆ ಮತ್ತೂ ಆತಂಕ ಹೆಚ್ಚಿತು. ಇಂದು ಹೋಗಲೇ ಬೇಕಿತ್ತು, ಹೊರಡುವಾಗ  ಹೇಳಿದ " ನಾಡಿದ್ದು ಬೆಳಗ್ಗೆ ಬರುತ್ತೇನೆ. ಆದರೂ ವಿಷಯ ಎಂತದ್ದು ಅತ್ತಿಗೆ?"

ಅತ್ತಿಗೆ ಆಗಲೂ ಹೇಳಲಿಲ್ಲ. " ನಾಡಿದ್ದು ಬಾ ಕುಳಿತುಕೊಂಡು ಮಾತನಾಡೋಣ"  ಅಂತ ಸಾಗ ಹಾಕಿದರು

            ದಿವಾಕರನಿಗೆ ಆತಂಕ ಹಾಗೇ ಉಳಿದು ಬಿಟ್ಟಿತು. ಆದರೂ ಹೊರಡುವಾಗ ಅಮ್ಮನಲ್ಲಿ ಮೆತ್ತಗೆ ಕೇಳಿದ. ಅಮ್ಮ ಯಾರಿಗೂ ಕೇಳದಂತೆ ಹೇಳಿದರು " ಅದೆಂತದೋ ಲವ್ ಲೆಟರ್ ."

            ದಿವಾಕರ ನಿಜಕ್ಕೂ ಯೋಚನೆಯಲ್ಲಿ ಬಿದ್ದ. ಮನಸ್ಸು ತಳಮಳಿಸಿತು. ಛೆ ಕೆಲಸದ ಒತ್ತಡ ಇಲ್ಲದೇ ಇರುತ್ತಿದ್ದರೆ ಇಂದು ಉಳಿದು ಬಿಡುತ್ತಿದ್ದ. ಒಂದಷ್ಟು ಗಂಭೀರದ ವಿಷಯವಾಗಿದ್ದುದರಿಂದಲೇ ಅತ್ತಿಗೆ ಮಾತನಾಡಲಿಲ್ಲ. ಕೊನೆಯಲ್ಲಿ ಹೊರಡಬೇಕಿದ್ದರೆ ಮನೆಗೆ ಕೊಡುವುದಕ್ಕೆ ತಿಂಡಿಯನ್ನು ಕೊಟ್ಟು ಅದರ ಜತೆಗೆ ಒಂದು ಹಳದಿ ಬಣ್ಣದ ಕಾಗದವನ್ನು ಯಾರಿಗೂ ತಿಳಿಯದಂತೆ ಇಟ್ಟುಬಿಟ್ಟರು.

            ದಿವಾಕರನ ಅರ್ಧ ಕುತೂಹಲ ಇಳಿದರೂ ಆತಂಕ ಮಾತ್ರ ಮತ್ತೂ ಹೆಚ್ಚಿತು. ಬೀಳ್ಕೊಟ್ಟು ರಾಜಾಜಿನಗರ ಮೆಟ್ರೋ ಬಳಿಗೆ ವೇಗವಾಗಿ ನಡೆಯುತ್ತಾ ಬಂದ ದಿವಾಕರ. ಜೇಪಲ್ಲಿದ್ದ ಹಳದಿ ಬಣ್ಣ ಕಂಪನವನ್ನು ಸೃಷ್ಟಿ ಮಾಡುತ್ತ ಹೋಯಿತು. ಮೆಟ್ರೋ ಸ್ಟೇಶನ್ ಪ್ಲಾಟ್ ಫಾರಂ ನ ಕಟ್ಟೆಯ ಮೇಲೆ ಕುಳಿತುಕೊಂಡವನೇ ಮೊಬೈಲ್ ಸದ್ದು ಮಾಡಿತು. ಮನೆಯಾಕೆಯ ಕರೆ. ಆಕೆಗೆ ಬರುತ್ತಾ ಇದ್ದೇನೆ ಎಂದು ತಿಳಿಸಿ ಜೇಬಲ್ಲಿಡಬೇಕಾದರೆ ವಾಟ್ಸಾಪ್ ಹೊಸ ಸಂದೇಶವನ್ನು ಸ್ವೀಕರಿಸಿದ ಸದ್ದು ಮಾಡಿತು. ಅತ್ತಿಗೆಯ ಸಂದೇಶವಿತ್ತು.

            ಆ ಪತ್ರ ಲಾವಣ್ಯನ  ಪುಸ್ತಕದ ನಡುವಿನಿಂದ ಸಿಕ್ಕಿದ್ದನ್ನು ಹೇಳಿದ್ದರು. ಸಿಕ್ಕಿ ಅದಾಗಲೇ ಎರಡು ದಿನ ಕಳೆದಿತ್ತು. ಇನ್ನು ಆ ಪತ್ರ ಬರೆದು ಎಷ್ಟು ದಿನವಾಗಿತ್ತೋ ತಿಳಿಯದು.  ಆಕೆಯ ಕೋಣೆ ಸ್ವಚ್ಚಗೊಳಿಸಬೇಕಾದರೆ ಆಕೆಯ ಪುಸ್ತಕದ ನಡುವಿನಿಂದ ಜಾರಿದ ಪತ್ರ ಅತ್ತಿಗೆಯ ಗಮನ ಸೆಳೆದು ಇನ್ನಿಲ್ಲದ ತಳಮಳವನ್ನು ಸೃಷ್ಟಿ ಮಾಡಿತ್ತು. ಪತ್ರ ಓದಿದ ನಂತರ ದಿವಾಕರನ ಅಣ್ಣನಿಗೂ ತಾಯಿಗೂ ವಿಷಯ ತಿಳಿಸಿದರೂ ಯಾರಿಗೂ ಆಕೆಯಲ್ಲಿ ವಿಚಾರಿಸುವುದಕ್ಕೆ ಧೈರ್ಯ ಸಾಲದಾಯಿತು. ಹೇಗೆ ಕೇಳುವುದು? ಇನ್ನು ಕೇಳಿದ ಪ್ರಶ್ನೆಗೆ ಅವಳ ಉತ್ತರ ಹೇಗಿರಬಹುದು? ಯಾವ ಉತ್ತರ ಆಕೆ ನೀಡಬಹುದು? ಇನ್ನು ಆ ಉತ್ತರಕ್ಕೆ ಅಪ್ಪ ಹೇಗೆ ಪ್ರತಿಕ್ರಿಯೆ ಕೊಡಬಹುದು? ಸ್ವಭಾವತಃ ದಿವಾಕರನ ಅಣ್ಣ ಒಂದಿಷ್ಟು ಉದ್ರಿಕ್ತ ಸ್ವಭಾವದವನು. ಮಗಳು ಲಾವಣ್ಯ ಒಳ್ಳೆಯ ವಿದ್ಯಾವಂತೆಯಾಗಬೇಕೆಂದು ಎಲ್ಲ ಅಪ್ಪಂದಿರಂತೆ ಬಯಸಿದವನು. ಹಲವಾರು ನಿರೀಕ್ಷೆ ಇಟ್ಟುಕೊಂಡವನು. ಇನ್ನೂ ಕಾಲೇಜಿನ ಪ್ರಥಮ ವರ್ಷದಲ್ಲಿರುವ ಎಳೆಪ್ರಾಯದ ಹುಡುಗಿ ಹೀಗೆ ಪ್ರೇಮದ ಸೆಳೆತಕ್ಕೆ ಸಿಲುಕುತ್ತಾಳೆ ಎಂದು ನಿರೀಕ್ಷೆ ಇರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಲಾವಣ್ಯ ಹಾಗೆ ಮಾಡಲಾರಳು ಎಂಬು ಅತಿಯಾದ ವಿಶ್ವಾಸ ಇತ್ತು. ಯಾಕೆಂದರೆ ಲಾವಣ್ಯ ಮನೆಯವರೊಂದಿಗೆ ಅಪ್ಪ ಅಮ್ಮ ಅಜ್ಜಿ ಹೀಗೆ ಎಲ್ಲರೊಂದಿಗೂ ಯಾವುದೇ ಮುಚ್ಚು ಮರೆ ಇಲ್ಲದೆ ವ್ಯವಹರಿಸುತ್ತಿದ್ದಳು ಇದನ್ನು ಬಚ್ಚಿಡುತ್ತಾಳೆ ಎಂದರೆ ನಮ್ಮ ಮಕ್ಕಳು ನಮಗರಿವೆ ಇಲ್ಲದೆ   ನಮ್ಮ ವೃತ್ತದ ಪರಿಧಿಯಿಂದ ಹೊರಗೆ ಜಿಗಿದು ಬಿಟ್ಟಳೇ ಎಂಬ ಆತಂಕ. ಆಕೆಯ ಉತ್ತರ ಯಾವುದಾದರೂ ಅದನ್ನು ಅರಗಿಸಿಕೊಳ್ಳದ ಪರಿಸ್ಥಿತಿ. ಯಾರು ಹೇಗೆ ಆಕೆಯನ್ನು ವಿಚಾರಿಸಬಹುದು. ಈ ಆತಂಕದಿಂದಲೇ ಆಕೆಯಲ್ಲಿ ಇದನ್ನು ವಿಚಾರಿಸದೇ ಎಂದಿನಂತೆ ವ್ಯವಹರಿಸಿದ್ದರು. ಆದರೆ ಎರಡು ಮೂರು ದಿನ...ಅತ್ತಿಗೆ ನಿದ್ದೆಯಿಲ್ಲದೆ ತಳಮಳಿಸಿದ್ದು ಆ ಒಂದು ಸಂದೇಶದಿಂದ ಸ್ಪಷ್ಟವಾಯಿತು.

            ಮೆಟ್ರೋದಲ್ಲಿ ಹತ್ತಿಕುಳಿತವನಿಗೆ ಹೆಚ್ಚು ಜನ ಇಲ್ಲದೇ ಇದ್ದುದರಿಂದ ಕುಳಿತುಕೊಳ್ಳುವುದಕ್ಕೆ ಜಾಗ ಸಿಕ್ಕಿತು. ಹಾಗಾಗಿ ಮೆಲ್ಲಗೆ ಹಳದಿ ಕಾಗದ ಕೈಗೆತ್ತಿಕೊಂಡು ನೋಡಿದ. ಆ ಹಳದಿ ಕಾಗದ....ಗೊತ್ತಿದೆ ಮನೆಯಲ್ಲಿದ್ದ ಪ್ಯಾಡ್ ನಿಂದ ಕಿತ್ತು ತೆಗೆಯಲಾಗಿತ್ತು.  ಸಾಮಾನ್ಯವಾಗಿ ಮನೆಯಲ್ಲಿ ಅದು ಇದೂ ಅಂತ ಗೀಚುವುದಕ್ಕೆ ಒಂದು ಪ್ಯಾಡ್ ಇಟ್ಟಿದ್ದರು. ಅದರಿಂದಲೇ ಹರಿದು ಕಾಗದವನ್ನು ಬರೆದಿದ್ದಳು. ನಿಧಾನವಾಗಿ ತೆಗೆದು ನೋಡಿದ.

            ಅವಸರವಸರದಲ್ಲಿ ಬರೆದಂತೆ ಕೈ ಬರಹವಿತ್ತು. ಸೊಟ್ಟಗೆ ವಕ್ರವಾಗಿ ಎಲ್ಲೇಲ್ಲಿಯೋ ಅಕ್ಷರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಂತೆ ಕಂಡಿತು. ಮುಖ್ಯವಾಗಿ ಇಂದಿನ ಮಕ್ಕಳಂತೆ ಕನ್ನಡ ಬರಹದಲ್ಲಿ ಲಾವಣ್ಯ ಸ್ವಲ್ಪ ಹಿಂದೆ. ಆಕೆಗೆ ಆಂಗ್ಲದಷ್ಟು ಸಲೀಸಾಗಿ ಕನ್ನಡ ಬರೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಅಕ್ಷರ ಮಾತ್ರವಲ್ಲ ಬೆರೆದ ಒಕ್ಕಣೆಯೂ ವ್ಯಾಕರಣ ಬದ್ದವಾಗಿರಲಿಲ್ಲ. ಸಾಮಾನ್ಯವಾಗಿ ಈ ರೀತಿಯ ಪತ್ರಗಳು ಮುದ್ದಾಗಿ ಸುಂದರವಾಗಿ ಇರುತ್ತವೆ. ಸುಂದರ ಅಕ್ಷರಗಳು ಆಸಕ್ತಿಯಿಂದ ಬರೆಯುತ್ತಾರೆ. ಆದರೆ ಇದು ತೀರಾ ಆನಾಸಕ್ತಿಯಿಂದ ಗೀಚಿದಂತೆ ಇತ್ತು. ಬರೆಯುವಾಗ ಇದ್ದ ಭಯ ಆತಂಕ ಅಲ್ಲಿನ ಒಕ್ಕಣಿಗೆಯಲ್ಲೂ ಬರೆದ ಶೈಲಿಯಲ್ಲೂ ವ್ಯಕ್ತವಾಗುತ್ತಿತ್ತು.

            ಪತ್ರದಲ್ಲಿ ಹೇಳಿದ್ದನ್ನೇ ಪದೇ ಪದೇ ಬರೆಯಲಾಗಿತ್ತು. ಒಂದೇ , ಯಾರೋ ಹುಡಗನಿಗೆ ಬರೆದ ಪತ್ರವದು ಎಂದು ಮೇಲ್ನೋಟಕ್ಕೆ ತಿಳಿದು ಬಿಡುತ್ತಿತ್ತು. ಎಲ್ಲೂ ಹೆಸರು ಹಾಕಿರಲಿಲ್ಲ. ಎಲ್ಲೂ ಹೆಸರನ್ನಾಗಲೀ ವ್ಯಕ್ತಿಯನ್ನಾಗಲಿ ಉಲ್ಲೇಖಿಸಲಿಲ್ಲ.ನೇರ ವಿಷಯವನ್ನು ಬರೆದಿದ್ದಳು. ...ನನಗೆ ಈಗ ಯೋಚಿಸುವುದಕ್ಕೆ ಆಗುತ್ತಿಲ್ಲ. ಮನೆಯಲ್ಲಿ ತಿಳಿದರೆ ಗಲಾಟೆಯೆ ಆಗಿಬಿಡುತ್ತದೆ. ನೀನು ತುಂಬ ಇಷ್ಟ ಆದರೆ...ಅದನ್ನು ಹೇಳುವುದಕ್ಕೆ ಆಕೆಯಲ್ಲಿ ಒಂದು ಭಯವಿದ್ದಂತೆ ಭಾಸವಾಗಿತ್ತು. ಹೀಗೆ ಹೇಳಿದ್ದನ್ನೇ ಪದೇ ಪದೇ ಹೇಳಿದ್ದನ್ನು ನೋಡಿದರೆ ಲಾವಣ್ಯ....ತನ್ನ ಲವ್ವಿ...ನಿಜಕ್ಕೂ ಲವ್ ನಲ್ಲಿ ಸಿಕ್ಕಿಕೊಂಡಳೇ ಎಂದು ದಿವಾಕರನಿಗೆ ಅಚ್ಚರಿಯಾಗಿಬಿಟ್ಟಿತು. ಆದರೂ ಇಂದು ಅಷ್ಟು ಮಾತನಾಡಿದ ಲಾವಣ್ಯ ಇದರ ಒಂದು ವಿಷಯವನ್ನೂ ಯಾಕೆ ಹೇಳಿಲ್ಲ? ತನ್ನಲ್ಲಿ ಎಲ್ಲವನ್ನು ಹೇಳುತ್ತಿದ್ದ ಲವ್ವಿ ಈಗ ಮುಚ್ಚಿಡುವ ಹಂತವನ್ನು ದಾಟಿಬಿಟ್ಟಳೇ? ಯಾಕೋ ಮನಸ್ಸು ಹಿಂಡಿದಂತಾಯಿತು. ಇನ್ನೂ ಆಕೆ ಪುಟ್ಟ ಬಾಲೆ ಅಂತ ತಿಳಿದಿದ್ದ ಅದೇ ಭಾವನೆಯಲ್ಲಿದ್ದ ದಿವಾಕರನಿಗೆ ಆಕೆ ದೂರವಾದಂತೆ ಭಾಸವಾಗಿ ಅದನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ.  ಈಗ ಆತನಿಗಿದ್ದ ಆತಂಕ ಒಂದೇ ....ತಾನೀಗ ಏನು ಮಾಡಬಹುದು? ಇಷ್ಟಾದರೂ...ಅತ್ತಿಗೆ ಈ ಪತ್ರ ಎತ್ತಿ ಮೂರುದಿನವಾದರೂ ಲಾವಣ್ಯನಿಗೆ ಪತ್ರ ಕಳೆದು ಹೋದ ಬಗ್ಗೆ ಯಾಕೆ ಆತಂಕವಿಲ್ಲ? ಆಕೆ ಅದನ್ನು ಹುಡುಕುವ ಪ್ರಯತ್ನ ಮಾಡಲಿಲ್ಲವೇಕೆ? ಅಮ್ಮನಲ್ಲಿ ಕೇಳಬೇಕಿತ್ತಲ್ಲ?

            ಮನೆಗೆ ಬಂದು ಇನ್ನೇನು ಮಲಗುವ ಸನ್ನಾಹ ಆಗಬೇಕಾದರೆ ಮೊಬೈಲ್ ಸದ್ದು ಮಾಡಿತು. ನೋಡಿದರೆ ಅತ್ತಿಗೆಯ ಕರೆ. ಕರೆ ಎತ್ತಿಕೊಂಡಾಗ ಅತ್ತಿಗೆಯದು ಮತ್ತದೇ ಆತಂಕದ ಧ್ವನಿ. ಏನಾದರೂ ಮಾಡೋಣ ಅಂತ ಸಾಂತ್ವನ ಮಾಡಿ ಆರಾಮದಲ್ಲಿ ನಿದ್ದೆ ಮಾಡಿ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ. ಮಲಗಿದರೂ ಮತ್ತದೇ ಯೋಚನೆ. ಅತ್ತಿಗೆ ಒತ್ತಿ ಒತ್ತಿ ಹೇಳಿದ ಮಾತು. ದಿವಾಕರನಲ್ಲದೇ ಬೇರೆ ಯಾರೂ ಅವಳಲ್ಲಿ ಮುಕ್ತವಾಗಿ ಕೇಳುವ ಹಾಗಿಲ್ಲ. ಸಮಾಧಾನದಲ್ಲಿ ಮಾತನಾಡುವುದಿದ್ದರೆ ಅದು ದಿವಾಕರ ಮಾತ್ರ. ಹಾಗಾಗಿ ಕೊನೆಯ ಅವಕಾಶ ಎಂದರೆ ಅದು ದಿವಾಕರ ಮಾತ್ರ. ಈ ಮಾತು ಅಕ್ಷರಶಃ ಸತ್ಯ. ಆತನಿಗೆ ಲಾವಣ್ಯನ ಮೇಲೆ ಅಪರಿಮಿತ ವಿಶ್ವಾಸ. ಏನಿದ್ದರೂ ಆಕೆ ಇವುಗಳನ್ನೆಲ್ಲ ಮುಚ್ಚಿಡುವ ಸ್ವಭಾವದವಳಲ್ಲ. ಅಥವಾ ಆಕೆಯಲ್ಲಿ ಮುಕ್ತವಾಗಿ ಕೇಳುವುದಕ್ಕೆ ದಿವಾಕರನಲ್ಲೂ ಅಂಜಿಕೆ ಇರಲಿಲ್ಲ. ಏನು ಎಂದು ಕೇಳಿಬಿಡಬಹುದು. ಅದರೂ ಕೊನೆಯಲ್ಲಿ ಎಷ್ಟೇ ವಿಶ್ವಾಸವಿದ್ದರೂ...ಒಂದು ಸಣ್ಣ ಆತಂಕವಿಲ್ಲದೇ ಇರಲಿಲ್ಲ.  ಈಗ ಕೇಳಬೇಕು. ಆದರೆ ಅದಕ್ಕೆ ಒಂದು ಸಂದರ್ಭ ಒದಗಿಬರಬೇಕು. ಅದು ಆದಷ್ಟು ಬೇಗ ಒದಗಿಬರಬೇಕು. ಯಾಕೆಂದರೆ ಇಂತಹ ವಿಚಾರಗಳು ಸಮಯ ಕಳೆದಂತೆ ಹಲವು ಆಯಾಮಗಳನ್ನು ಪಡೆಯುತ್ತವೆ.

            ವಾರಾಂತ್ಯ ಶನಿವಾರ ರಾತ್ರಿಯನ್ನು ಇದಕ್ಕೆ ಮೀಸಲಾಗಿರಿಸಿ ದಿವಾಕರ ಏನೋ ಒಂದು ನಿರ್ಧಾರ ಮಾಡಿ ಹೊರಟ. ಎಂದಿನಂತೆ ರಾಜಾಜಿನಗರ ಮೆಟ್ರೋದಲ್ಲಿ ಇಳಿದು ಮನೆಗೆ ಬಂದರೆ ಆತ್ತಿಗೆ ಮತ್ತು ಅಮ್ಮ ಮಾತ್ರ ಇದ್ದರು. ಅತ್ತಿಗೆಯದ್ದು ಮತ್ತದೇ ಆತಂಕದ ಮಾತುಗಳು. ಅಮ್ಮನದ್ದು ಅದೇ ಹಳೆಯ ವರಸೆ. ಮಕ್ಕಳಿಗೆ ಸದರ ಸಲುಗೆ ಹೆಚ್ಚಾಯಿತು. ಹಾಗಾಗಿ ಇಂತಹವುಗಳೆಲ್ಲಾ ಸಹಜ ಎನ್ನುವಂತೆ ನಡೆಯುತ್ತದೆ.  ಕೇವಲ ಒಂದೆರಡು ಗೆರೆ ಬರೆದ ಒಂದು ಕಾಗದದ ತುಂಡು ಇಷ್ಟೆಲ್ಲಾ ಕೋಲಾಹಲಕ್ಕೆ ಕಾರಣವಾಗುತ್ತದಲ್ಲಾ ಎಂದು ದಿವಾಕರನಿಗೆ ಆಶ್ಚರ್ಯ. ಕೊನೆಗೆ ಅತ್ತಿಗೆಯಲ್ಲಿ ಅಮ್ಮನಲ್ಲಿ ಹೇಳಿದ,

. " ಲಾವಣ್ಯ ನಮ್ಮ ಮಗಳು. ಆಕೆಯಲ್ಲಿ ಮೊದಲು ನಾವು ವಿಶ್ವಾಸ ಇಡಬೇಕು. ಹೀಗೆ ವಿಶ್ವಾಸವೇ ಇಲ್ಲದಂತೆ ವ್ಯವಹರಿಸಿದರೆ ಅವರ ಮನಸ್ಸಿಗೂ ಒಂದು ಆತಂಕ ಇದ್ದೇ ಇರುತ್ತದಲ್ವಾ? ನಾವು ಬೆಳೆಸಿದ ಮಗಳು ನಮ್ಮ ಮನಸ್ಸಿಗೆ ನೋವು ಕೊಡಬಹುದೇ? ಆಕೆಗೂ ಇದೆಲ್ಲ ಅರಿವಿದೆ? ನಮ್ಮ ಬಗ್ಗೆ ಯೋಚನೆ ಮಾಡದೆ ಇರಲಾರಳು. ಅಂತಹ ಸ್ವಭಾವ ಆಕೆಯದಲ್ಲ. ಏನಿದ್ದರೂ ಅದನ್ನು ಸರಿಪಡಿಸುವ ತಾಳ್ಮೆಯನ್ನು ನಾವು ಮೈಗೂಡಿಸಿಕೊಳ್ಳಬೇಕು. ಲಾವಣ್ಯನ ಬಗ್ಗೆ ನನಗೆ ವಿಶ್ವಾಸವಿದೆ. ನೋಡೋಣ"

            ರಾತ್ರಿ ಟ್ಯೂಷನ್ ಮುಗಿಸಿ ಲಾವಣ್ಯ ಬಂದಳು. ಮೊನ್ನೆ ತಾನೆ ಬಂದು ಹೋದ ಚಿಕ್ಕಪ್ಪ ಪುನಃ ಯಾಕೆ ಬಂದುಬಿಟ್ಟರು ಎಂದು ಆಕೆಗೆ ಅಚ್ಚರಿ. ಅದೂ ಮನೆಯಲ್ಲಿನುಳಿದುಕೊಳ್ಳುವ ಸನ್ನಾಹ ನೋಡಿ ತುಂಬ ಸಂಭ್ರಮಿಸಿದಳು. ಮರುದಿನ ಹೇಗೂ ರಜಾದಿನ.

             ರಾತ್ರಿಯ ಊಟವಾದನಂತರ ದಿವಾಕರ ಲಾವಣ್ಯನನ್ನು ಕರೆದುಕೊಂಡು ಮನೆಯ ಮೇಲಿನ ಟೇರೆಸ್ ಗೆ ಹೋದ. ಮೊದಲೆಲ್ಲ...ರಾತ್ರಿಯ ಹೊತ್ತು ಅಕೆಯೊಂದಿಗೆ ಅಲ್ಲಿ ಕಳೆಯುತ್ತಿದ್ದ. ಅದು ಇದೂ ಹರಟೆ ಹೊಡೆದುಕೊಂಡು ಇರುತ್ತಿದ್ದರು. ಇಂದೂ ಹಾಗೆ. ಮೇಲೆ ಹೋಗಿ ಕೊನೆಯಲ್ಲಿ ಕೇಳಿದ..." ಲವ್ವಿ ಒಂದು ಮಾತು ಕೇಳಲಾ? ಇದು ಎಂತದು...?" ಎಂದು..ಹಳದಿ ಕಾಗದ ತೆರೆದು ತೋರಿಸಿದ.

            " ಆಕೆ ..ಓ ಇದು ನಿಮಗೆಲ್ಲಿ ಸಿಕ್ಕಿತು ಚಿಕ್ಕಪ್ಪಾ?" ಏನೂ ಆಗಿಲ್ಲ ಎಂಬಂತೆ ಇತ್ತು ಆಕೆಯ ಧ್ವನಿ. ಏನಾದರೂ ಒಂದು ಆತಂಕವನ್ನು ನಿರೀಕ್ಷೆಮಾಡಿದ ದಿವಾಕರನಿಗೆ ದೊಡ್ಡ ಅಚ್ಚರಿ .

            "ನಿನ್ನ ಅಮ್ಮನೇ ಕೊಟ್ಟರು ಮಾರಾಯ್ತಿ. ಎಂತ ಸಂಗತಿ ಇದು ಹೇಳು. ನೀನು ಹಾಗೆಲ್ಲ ಮುಚ್ಚಿಡುವ ಜನ ಅಲ್ಲ. ನನ್ನಲ್ಲಿ  ಹೇಳು. ಯಾವ ಆತಂಕವೂ ಬೇಡ"

            " ಏ ಚಿಕ್ಕಪ್ಪ ಎಂತ ನೀವು. ನಿಮಗೆ ಗೊತ್ತಿಲ್ಲವ. ನನ್ನನ್ನು. "  ಎಂದು ತಿವಿದು ಕೇಳಿದಾಗ ಒಂದು ಆತ್ಮಿಯತೆ ಮತ್ತೊಂದು ನಿರಾತಂಕದ ಸ್ಪರ್ಶ ಸುಖ.

            " ನನಗೆ ಗೊತ್ತುಂಟು ಲವ್ವಿ. ಆದರೂ ನಾನು ಕೇಳಬೇಕಲ್ಲ? ಇದು ಏನು ಹೇಳು?"    

            "ನೀವೆಂತ ಚಿಕ್ಕಪ್ಪ.. ತಲೆ ಬಿಸಿ ಆಯ್ತ? ಇದು ನನ್ನದು ಅಂತ ಅನ್ನಿಸ್ತದ? ನನ್ನ ಕೈ ಬರಹ ಹಾಗೆ ಉಂಟಾ? ಅದು ನಾನು ಬರೆದದ್ದಲ್ಲ. ಅಮ್ಮನಿಗೆ ಅದು ಎಲ್ಲಿ ಸಿಕ್ಕಿತು? "  ದಿವಾಕರ ಅಮ್ಮನಿಗೆ ಸಿಕ್ಕಿದ ಬಗೆಯನ್ನು. ಹೇಳಿದ. ವಾಸ್ತವದಲ್ಲಿ ಆಕೆಗೆ ಅದರ ಬಗ್ಗೆ ಎಂದೋ ಮರೆತು ಹೋಗಿತ್ತು. ನಂತರ ಆಕೆ ಅದರ ಕಥೆಯನ್ನು ಹೇಳತೊಡಗಿದಳು.

            ಅದು ಆಕೆಯ ಗೆಳತಿ ಭವಂತಿ ಬರೆದ ಕಾಗದ. ಕಳೆದ ವಾರ ಆಕೆ ಓದುವುದಕ್ಕಾಗಿ ಇಲ್ಲಿ ಮನೆಗೆ ಬಂದಿದ್ದಳು. ಇವರಿಬ್ಬರೇ ಕೋಣೆಯಲ್ಲಿರುವಾಗ ಈ ಕಾಗದ ಬರೆದಿದ್ದಳು. ಭವಂತಿಗೆ ಒಬ್ಬ ಹುಡುಗನ ಸ್ನೇಹವಿತ್ತು. ಸ್ನೇಹವೆಂದರೆ ಈಕೆಯ ಲೆಕ್ಕದಲ್ಲಿ ಅದು ಕೇವಲ ಸ್ನೇಹವಾದರೂ ಹುಡುಗ ಮಾತ್ರ ವಿಪರೀತವಾಗಿ ಪ್ರೇಮಿಸುತ್ತಿದ್ದ. ಪ್ರತಿ ಬಾರಿಯೂ ಭವಂತಿಗೆ ಪ್ರೇಮಿಸುವಂತೆ ಒತ್ತಾಯ ಮಾಡುತ್ತಿದ್ದ. ಆತನ ಒತ್ತಾಯ ಪ್ರೀತಿ ನೋಡಿ ಆಕೆಯೂ ಅದೇ ವಯಸ್ಸಿನವಳಲ್ವ...ಒಂದಿಷ್ಟು ಮೆತ್ತಗಾಗಿ ಆತನ ಬಗ್ಗೆ ಕ್ರಶ್ ಆದರೂ ಆಕೆಗೆ ಇನ್ನೂ ಓದಬೇಕು, ಇಂತಹುದರಲ್ಲಿ ಸಿಲುಕಬಾರದೆಂಬ ಭಯ ಆತಂಕವಿತ್ತು. ಎಲ್ಲಕ್ಕಿಂತ ಮೇಲಾಗಿ ಅಪ್ಪ...ಅಪ್ಪನಿಗೆ ನೋವು ಕೊಡುವುದಕ್ಕೆ ಆಕೆಗೆ ಇಷ್ಟವಿರಲಿಲ್ಲ. ಅಮ್ಮನ ಅಗಲಿಕೆಯ ನಂತರ ಅಪ್ಪ ಬಹಳಷ್ಟು ನೋವು ಅನುಭವಿಸಿ ನಿಜ ಬದುಕಿಗೆ ಮರಳಿದ್ದಾರೆ. ಇನ್ನೂ ಅಪ್ಪ ಆ ನೋವಿನಿಂದ ಚೇತರಿಸಿಕೊಂಡಿಲ್ಲ. ತಾನು ಬಿಟ್ಟರೆ ಅಪ್ಪ ಮತ್ತೆ ಏಕಾಂಗಿ. ಅಂತಹ ಅಪ್ಪನಿಗೆ , ಆ ಅಪ್ಪನ ಪ್ರೀತಿಗೆ ದ್ರೋಹ ಮಾಡುವುದು ಆಕೆಗೆ ಇಷ್ಟವಿಲ್ಲ. ಆದರೂ.. ಆದರೂ ಮನಸ್ಸಿನ ಒಂದು ಮೂಲೆಯಲ್ಲಿ ಒಂದಿಷ್ಟು ಪ್ರೇಮವಿತ್ತು. ಏನು ಮಾಡುವುದು ಎಂದು ಅದರ ಬಗ್ಗೆಯೇ ಯೋಚಿಸುತ್ತಿದ್ದಳು. ಅದನ್ನೆ ಲಾವಣ್ಯನಲ್ಲಿ ಹೇಳಿಕೊಂಡಿದ್ದಳು. ಹಾಗಾಗಿ ಆ ಕಾಗದವನ್ನು ಅವಳು ಹೇಳಿದಂತೆ ಬರೆದಿದ್ದಳು.

            ದಿವಾಕರನಿಗೆ ದೊಡ್ಡ ಹೊರೆ ಕೆಳಗಿಳಿಸಿದ ಅನುಭವವಾದರೆ, ಲಾವಣ್ಯನ ಮೇಲಿಟ್ಟ ವಿಶ್ವಾಸ ಹುಸಿಯಾಗಲಿಲ್ಲವಲ್ಲ ಎಂಬ ಸಂತೋಷ ಮತ್ತೊಂದೆಡೆ. ಇಷ್ಟು ಸಣ್ಣ ವಿಷಯವನ್ನು ಅತ್ತಿಗೆ ಕೇಳಬಹುದಿತ್ತು. ಆದರೆ ...ಅತ್ತಿಗೆಗೆ ತನ್ನ ಮೇಲೆ ವಿಶ್ವಾಸ. ತಾನಲ್ಲದೇ ಇದನ್ನು ಪ್ರಸ್ತಾಪ ಮಾಡುವ ವ್ಯಕ್ತಿ ಬೇರೆ ಇಲ್ಲ ಎಂದೇ  ದಿವಾಕರನಲ್ಲಿ ಹೇಳಿದ್ದರು.

            ದಿವಾಕರ ನಿಟ್ಟುಸಿರು ಬಿಟ್ಟು ಹೇಳಿದ " ನಿನಗೆ ಗೊತ್ತಾ ಲವ್ವಿ...ನಿನ್ನಮ್ಮ ಮೂರು ದಿನ ಆಯ್ತು ನಿದ್ದೆ ಮಾಡದೆ?"

            ಆಕೆ ಉದಾಸೀನತೆಯಿಂದ ಹೇಳಿದಳು " ಬಿಟ್ಟುಬಿಡಿ ಚಿಕ್ಕಪ್ಪ...ಅಮ್ಮ ಅಲ್ವ...ಇರಲಿ. ಈಗ ಭವಂತಿಯ ಕಥೆಗೆ ಏನು ಮಾಡುವ ಹೇಳಿ? ಆಕೆಗೆ ಏನು ಮಾಡಬೇಕು ಎಂದು ಗೊತ್ತಿಲ್ಲ. ಅದೇ ಯೋಚನೆಯಲ್ಲಿದ್ದಾಳೆ. ಮನೆಯಲ್ಲಿದ್ದರೆ ಅವನು ಪದೇ ಪದೇ ಕಾಲ್ ಮಾಡ್ತಾನೆ. ಅಪ್ಪ ಇಲ್ಲದಾಗ ಬರಬೇಕಾ ಅಂತ ಕೇಳುತ್ತಿದ್ದಾನೆ."

            ಇಂತಹ ಕಥೆಗಳೆಲ್ಲ ಇದೆ ತರಹ ಸಂಭವಿಸುತ್ತದೆ. " ನೋಡು ಲವ್ವಿ...ಮೊದಲು ನೀನು ಇಂತಹ ವಿಚಾರಗಳಿಗೆ ತಲೆ ಹಾಕಬೇಡ. ನೀನು ಇದ್ದಿ ಎಂದು ತಿಳಿದರೆ,  ಅವನು ನಿನ್ನ ಹಿಂದೆ ಬಿದ್ದಾನು. ಅಲ್ಲಿಗೆ ಬಿಟ್ಟು ಬಿಡು. ಅವಳಿಗೆ ಮೊದಲು ಓದುವುದಕ್ಕೆ ಕಾನ್ಸಂಟ್ರೇಟ್ ಮಾಡುವುದಕ್ಕೆ ಹೇಳು."

            "ಚಿಕ್ಕಪ್ಪ...ಅದೆಲ್ಲ ನಾನು ಹಲವು ಸಲ ಹೇಳಿ ಆಯ್ತು. ಆದರೆ ಅದ್ಯಾಕೋ ಆಕೆ ಆಚೆಗೆ ಹೆಚ್ಚು ವಾಲುತ್ತಾ ಇದ್ದಾಳೆ. ಲವ್ ಮಾಡುವುದು ತಪ್ಪು ಹೇಗಾಗುತ್ತದೆ ಚಿಕ್ಕಪ್ಪ. ಅಷ್ಟಕ್ಕೂ ಅದನ್ನು ಕೇವಲ ಪ್ರೆಂಡ್ ಶಿಪ್ ಅಂತ ಮಾಡಿದರೆ ತಪ್ಪುಂಟಾ. ಯಾರನ್ನು ಯಾರೂ ಪ್ರೆಂಡ್ ಶಿಪ್ ಮಾಡಿಕೊಳ್ಲಬಹುದು. ಅದರಲ್ಲಿ ತಪ್ಪಿಲ್ಲ. ಇದು ಪರಿಶುದ್ದ ಪ್ರೇಮ ಅಂತ ತಿಳಿಯಬೇಕು. "

            "ಅದೆಲ್ಲ ವಿಚಾರ ಅಲ್ಲಮ್ಮ. ಈಗ ಈ ಪ್ರಂಡ್ ಶಿಪ್ ಎಂಬುದೇ ತಪ್ಪು. ಅದು ಆರಂಭವಾಗುವುದು ಹೀಗೆ. ನಂತರ ಅದು ಕವಲು ಬದಲಾಗಿಬಿಡುತ್ತದೆ. ಪ್ರೆಂಡ್ ಶಿಪ್ ನಲ್ಲಿ ಕಾಮ ಇಲ್ಲ. ಆದರೆ..ಯೋಚಿಸು, ಪರಿಶುದ್ದ ಪ್ರೇಮದಲ್ಲು ಕಾಮ ಇಲ್ಲ. ಆದರೆ ಇದರಲ್ಲಿ ಕಾಮ ಇಲ್ಲ ಅಂತ ಹೇಗೆ ಹೇಳುತ್ತಿಯ.? ಮೊದಲಿಗೆ ಇದು ಪರಿಶುದ್ದ ಪ್ರೇಮದ ಲೇಬಲ್ ಅಂಟಿಸಿಕೊಂಡೇ ಇರುತ್ತದೆ. ಆ ಲೇಬಲ್ ಎಷ್ಟು ದಿನ ಇರುತ್ತದೆ ಹೇಳು? ಒಂದು ದಿನ ಅದೂ ಕಿತ್ತುಕೊಂಡು ಬರುತ್ತದೆ. "

" ಇದು ಹಾಗಲ್ಲ ಚಿಕ್ಕಪ್ಪ. ಆ ಹುಡುಗ ನನಗೂ ಗೊತ್ತು ಒಳ್ಳೆಯ ಹುಡುಗ. "

" ಅದು ಹೇಗೆ ಹೇಳ್ತಿಯಾ ಲವ್ವಿ? ಎಂತಹ ಪರಿಶುದ್ದ ಪ್ರೇಮವಾದರೂ ಅಲ್ಲಿ ಕಾಮ ಇದ್ದೇ ಇರುತ್ತದೆ. ಅರೋಗ್ಯ ಪೂರ್ಣ ಹಾರ್ಲಿಕ್ಸ್, ಬೋರ್ನ್ ವಿಟಾ ಇದ್ದ ಹಾಗೆ ಅದರಲ್ಲೂ  ಸಕ್ಕರೆ ಇರಲ್ವ..ಅದು ಆರೋಗ್ಯಕ್ಕೆ ಹಾನಿಕಾರಕ. ಹಾಗೇ ಈ ಪ್ರೇಮ. ಅದರಲ್ಲಿ ಒಂದಿಷ್ಟಾದರೂ ಕಾಮ ಇದ್ದೇ ಇರಬೇಕು. ಕಾಮ ಎಂದು ಇಲ್ಲದೇ ಇದ್ದರೆ ಪ್ರೇಮ ಹುಟ್ಟಿಕೊಳ್ಳುವುದಿಲ್ಲ. ಪ್ರೇಮಕ್ಕೆ ಮೂಲಭೂತವಾದ ಯಾವ ಗುಣಗಳೂ ಇರುವುದಿಲ್ಲ. ಆಕೆಗೆ ಬರೀ ಪ್ರೇಮ ಎಂದಾದರೆ...ಯಾವುದೋ ಹುಡುಗಿಯ ಮೇಲೆ ಹುಟ್ಟಬಹುದಿತ್ತು. ಆ ಹುಡುಗನಿಗೂ ಹಾಗೆ ಪ್ರೇಮ ಎಂದರೆ ಯಾವುದೋ ಹುಡುಗನ ಮೇಲೂ ಆ ಭಾವನೆ ಬರಬಹುದಿತ್ತು. ಅಲ್ಲಿ ಒಂದಿಷ್ಟಾದರೂ ಕಾಮ ಅದು ವಯೋಸಹಜವಾದರೂ ಇರಲೇ ಬೇಕು. ಕಾಮ ಎಂಬುದು ಇಂದ್ರಿಯ ಸಂವೇದನೆ. ಅದು ಹೃದಯದ ಸಂವೇದನೆಯಲ್ಲ. ಇಂದ್ರಿಯವನ್ನು ಮೀರಿ ನಿಲ್ಲುವುದೇ ಜೀವನ. ಹಾಗಾಗಿ ಭವಂತಿಗೆ ಹೇಳು...ಆ ಭಾವನೆ ಏನಿದ್ದರೂ ಅದು ತಪ್ಪಲ್ಲ. ಆದರೆ ಅದು ಅಕಾಲಿಕವಾದರೆ ತಪ್ಪು. ಮಳೆ ಬರಬೇಕು. ಆದರೆ ಅದು ಯಾವಾಗಲೋ ಬಂದರೆ ಅನಾಹುತಕ್ಕೆ ಕಾರಣವಾಗುತ್ತದೆ. "

            ಲಾವಣ್ಯನಿಗೆ ಒಂದಿಷ್ಟು ಸಮಾಧಾನವಾದ ಹಾಗೆ ಇತ್ತು. ನಿಜವಾಗಿಯು ಅಲ್ಲಿ ನಿರಾಳವಾದದ್ದು ದಿವಾಕರ.  ಒಂದು ಹಳದಿ ಕಾಗದ ಏನೆಲ್ಲ ಆತಂಕವನ್ನು ಸೃಷ್ಟಿ ಮಾಡಿತ್ತು. ಒಂದು ವೇಳೆ ಲಾವಣ್ಯನಿಗೆ ಆರೀತಿಯ ಒಂದು ಭಾವನೆ ಇರುತ್ತಿದ್ದರೆ....ಆದರೆ ಲಾವಣ್ಯನನ್ನು ಸಂಪೂರ್ಣ ತಿಳಿದಿದ್ದಲ್ಲಿ ಆ ಆತಂಕಕ್ಕೆ ಅವಕಾಶವಿರುತ್ತಿರಲಿಲ್ಲ. ಆಕೆಯ ಅಪ್ಪ ಅಮ್ಮನಲ್ಲಿ ಸೂಕ್ಷ್ಮವಾಗಿ ಇದ್ದ ಅವಿಶ್ವಾಸವೇ ಈ ಎಲ್ಲ ಆತಂಕಗಳಿಗೂ ಮೂಲ ಕಾರಣ. ಮೊದಲಿಗೆ ನಾವು ನಮ್ಮ ಮಕ್ಕಳಲ್ಲಿ ವಿಶ್ವಾಸ ಇರಿಸಬೇಕು. ನಮ್ಮಲ್ಲಿ ಆ ವಿಶ್ವಾಸ ಅವರೂ ಇಡುವಂತೆ ನಾವು ವ್ಯವಹರಿಸಬೇಕು. ಬಹಳಷ್ಟು ಸಂದರ್ಭಗಳಲ್ಲಿ ಈ ಅವಿಶ್ವಾಸವೇ ಎಲ್ಲ ಗೊಂದಲಗಳಿಗೂ ಕಾರಣವಾಗಿಬಿಡುತ್ತವೆ. ಲಾವಣ್ಯನ ಮೇಲೆ ವಿಶ್ವಾಸ ಇದ್ದುದರಿಂದ...ದಿವಾಕರ  ಮುಕ್ತವಾಗಿ ಅವಳಲ್ಲಿ ಕೇಳುವಂತಾಯಿತು. ನಿರಾತಂಕವಿಲ್ಲದೆ ಆಕೆಯಲ್ಲಿ ಕೇಳಿದ.  ಒಂದು ವೇಳೆ ಅಂತಹ ಭಾವನೆ ಇರುತ್ತಿದ್ದರೆ....ಎಂಬ ಪ್ರಶ್ನೆ ಬರಬಹುದು. ಆದರೆ ದಿವಾಕರನಿಗೆ ಅಲ್ಲಿಯೂ ಅದಕ್ಕೆ ವಿಪುಲವಾದ ಅವಕಾಶಗಳನ್ನು  ಆ ಮನೋಭಾವವೇ ಸೃಷ್ಟಿ ಮಾಡಿಕೊಡುತ್ತಿತ್ತು.

            ಕೊನೆಯಲ್ಲಿ ಲಾವಣ್ಯ ಹೇಳಿದಳು, " ಚಿಕ್ಕಪ್ಪ ನನಗೂ ಇದೇ ಬಗೆಯ ಸಂದೇಹಗಳು  ಇತ್ತು.  ಪ್ರೇಮದಲ್ಲಿ ಸಕ್ಕರೆಯಂತೆ ಒಂದಿಷ್ಟಾದರೂ ಕಾಮ ಇದ್ದೇ ಇರುತ್ತದೆ. ಯಾವಾಗಲೂ ಚಿಕ್ಕಪ್ಪ ಈ ಸಂದೇಹ ಒಳ್ಳೆಯ ಉತ್ತರ ಹೇಳಿದ್ದೀರಿ. ಅದನ್ನೇ ಭವಂತಿಗೆ ಹೇಳುತ್ತೇನೆ. ಮೊದಲು ಆಕೆ ವಿದ್ಯಾಭ್ಯಾಸ ಪೂರ್ಣ ಗೊಳಿಸಬೇಕು. ಈಗ ಅವಕಾಶ ಎಂಬುದು ಇದ್ದರೆ ಅದು ವಿದ್ಯಾಭ್ಯಾಸಕ್ಕೆ. ಅದನ್ನು ಅವಳು ಉಪಯೋಗಿಸಬೇಕು. ನಂತರ ಪ್ರೇಮವೋ ಕಾಮವೋ...ಆಯ್ಕೆಗೆ ಸಂದರ್ಭಗಳೂ ಇವೆ. ಸಮಯವೂ ಇದೆ. ಅದೇ ಅಲ್ವಾ ಸರಿ ಚಿಕ್ಕಪ್ಪಾ?"

"ಹೌದು ಲವ್ವಿ....ನಿನಗೆ ಇದೆಲ್ಲ ಸರಿಯಾಗಿ ಅರ್ಥವಾಗುತ್ತದೆ. ಹಾಗಾಗಿಯೇ ನಿನ್ನ ಮೇಲೆ ನನಗೆ ವಿಶ್ವಾಸ. ಮುಂದೆಯೂ ಹಾಗೆ. ಈ ವಿಶ್ವಾಸವೇ ನೀನು ನನಗೆ ಲವ್ವಿ....ಯಾಗುವುದಕ್ಕೆ ಕಾರಣ."

 

"ಥ್ಯಾಂಕ್ಸ್ ಚಿಕ್ಕಪ್ಪಾ" ಅಂತ ಎಂದಿನಂತೆ ಲಾವಣ್ಯ ನಗುತ್ತಾ ಹೇಳಿದಾಗ....ಈಕೆ ನನ್ನ ಲವ್ವಿ  ಎಂದುಕೊಂಡು ದಿವಾಕರ ಎದೆಯ ಮೇಲೆ ಕೈ ಇಟ್ಟು ದೀರ್ಘ ಉಸಿರನ್ನು ಎಳೆದ.