Thursday, May 15, 2025

ಬ್ರಾಹ್ಮಣ ಜನ್ಮ

 

 

ಬ್ಯಾಂಕ್ ಒಂದರ ಲೆಕ್ಕ ಪರಿಶೋಧನೆಗೆ ಹೋಗುತ್ತಿರುವಾಗ ಒಂದು ಕಡೆಯಲ್ಲಿ ಬ್ಯಾಂಕ್ ಅಧಿಕಾರಿಯೊಬ್ಬರು ನನ್ನ ಜತೆಗೆ ಇರುತ್ತಿದ್ದರು. ಮಧ್ಯ ವಯಸ್ಸಿನ ವ್ಯಕ್ತಿ. ಊರಿಂದ ಊರಿಗೆ ಹೋಗುವ ವೃತ್ತಿಯಲ್ಲಿ ಅವರ ಜೀವನಾನುಭವ ಬಹಳಷ್ಟು ಇತ್ತು. ಸ್ವತಃ ಬ್ರಾಹ್ಮಣರಾದ ಅವರು ನನಗೆ ಬಹಳಷ್ಟು ಅತ್ಮೀಯರಾಗಿಬಿಟ್ಟರು. ವಾಚಾಳಿಯಾಗಿ ಏನಾದರೊಂದು ವಿಷಯ ಮಾತನಾಡುತ್ತಲೇ ಇರುವ ನಾನು ಅವರಿಗೆ ಇಷ್ಟವಾದ ಬಗೆ ಹೇಗೋ ಗೊತ್ತಿಲ್ಲ. ಹಲವು ಸಲ ನನ್ನ ಅಧಿಕ ಮಾತುಗಳು ನನಗೆ ಅಧಿಕ ಪ್ರಸಂಗವಾಗಬಹುದೇ ಎಂಬ ಆತಂಕ ನನಗೆ ಇರುತ್ತಿತ್ತು. ಎಷ್ಟು ಕಡಿಮೆ ಎಂದರೂ ಕೆಲವೊಮ್ಮೆ ಮಾತಿಗೆ ಮಾತು ಬೆಸೆಯುತ್ತಾ ಇರುವುದು ನನ್ನ ಜೀವನೋತ್ಸಾಹದ ಒಂದು ಕಾರಣ. ಹಾಗಾಗಿ ಉಳಿದವರು ಏನು ತಿಳಿಯುತ್ತಾರೋ ಎನ್ನುವುದಕ್ಕಿಂತ ನನ್ನ ಮನಸ್ಸು ನಿರಾಳವಾಗುತ್ತದಲ್ಲಾ ಎಂಬ ಧೋರಣೆಯಲ್ಲಿ ಮಾತನಾಡುತ್ತಾ ಇರುವುದು ನನ್ನ ಸ್ವಭಾವ. ಇದೇ ಸ್ವಭಾವ ಅವರಿಗೆ ಇಷ್ಟವಾಗಿಬಿಟ್ಟಿತು. ಕೆಲಸದ ನಡುವೆ ನಾವು ಮಾತನಾಡದ ವಿಷಯಗಳೇ ಇರುತ್ತಿರಲಿಲ್ಲ. ಸ್ವತಃ ಬ್ರಾಹ್ಮಣರಾದ ಕಾರಣ ಅತೀ ಹೆಚ್ಚು ವೈದಿಕ ವಿಚಾರಗಳೇ ನಮ್ಮ ನಡುವೆ ಹರಿದಾಡುತ್ತಿತ್ತು. 

ಮೊನ್ನೆ ಒಂದು ದಿನ ಅವರಲ್ಲಿ ಹಾಸ್ಯಕ್ಕಾಗಿ ಕೇಳಿದೆ. "ಮತ್ತೊಂದು ಜನ್ಮ ಎಂದು ನಿಮಗೆ ಇದ್ದರೆ, ನೀವು ಬ್ರಾಹ್ಮಣರಾಗಿ ಹುಟ್ಟಲು ಬಯಸುತ್ತಿರಾ? " ಇದು ಕೇವಲ ಹಾಸ್ಯವಲ್ಲ  ಎಂದು ಅವರು ನೀಡಿದ  ಉತ್ತರದಲ್ಲೇ ವ್ಯಕ್ತವಾಗುತ್ತಿತ್ತು. ಅವರೇ ಹೇಳಿದರು ಬಹಳ ಗಂಭೀರ ಪ್ರಶ್ನೆ ಮಾರಾಯರೆ ಎಂದ ಅವರು ಹೇಳಿದ ಸಾರಾಂಶ ಹೀಗಿತ್ತು. 

ನಿಜಕ್ಕಾದರೆ ಬ್ರಾಹ್ಮಣನಾದವನು ಮತ್ತೊಂದು ಜನ್ಮದ ಬಗ್ಗೆ ಯೋಚಿಸುವುದಿಲ್ಲ. ಇನ್ನು ಮತ್ತೊಂದು ಜನ್ಮವೆತ್ತುವ ವಿಷಯವೇ ಉದ್ಭವಿಸುವುದಿಲ್ಲ. ಜನ್ಮ ಎತ್ತುವುದೆಂದರೆ ದುರಿತಗಳು ಅಂದರೆ ಪಾಪ  ಪರಿಹಾರವಾಗದೆ ಉಳಿದಿದೆ. ಆ ದುರಿತ ಕ್ಷಯಕ್ಕೆ   ಮತ್ತೊಂದು ಜನ್ಮ ಎತ್ತಿ ಅದನ್ನು ಪರಿಹರಿಸಿಬಿಡಬೇಕು. ವಾಸ್ತವದಲ್ಲಿ ಬ್ರಾಹ್ಮಣನಾಗುವುದೆಂದರೆ ಮತ್ತೊಮ್ಮೆ ಹುಟ್ಟುವ ಪ್ರಮೇಯವೇ ಉದಿಸುವುದಿಲ್ಲ. ತಾತ್ವಿಕವಾಗಿ ಬ್ರಾಹ್ಮಣನಾಗುವುದು ಎಂದರೆ ಮತ್ತೊಮ್ಮೆ ಹುಟ್ಟಿ ಬರದ ಲೋಕಕ್ಕೆ ಹೋಗುವುದು. ಭಗವಂತನಲ್ಲಿ ಐಕ್ಯವಾಗಿ ಸಾಯುಜ್ಯ ಪದವಿಯನ್ನು ಏರುವುದೆಂದರೆ ಅಲ್ಲಿ ಮತ್ತೆ ಹುಟ್ಟುವ ಪ್ರೆಮೇಯವೂ ಇರುವುದಿಲ್ಲ.

ಅವರು ತಿಳಿದಂತೆ ನಾನು ಆ ಪಾರಮಾರ್ಥಿಕ ಅರ್ಥದಿಂದ ಕೇಳಲಿಲ್ಲ. ಬದಲಿಗೆ ವ್ಯಾವಹಾರಿಕ ಪ್ರಪಂಚದಲ್ಲಿನ ವಾಸ್ತವಿಕ ವಿಚಾರದಲ್ಲಿ ಕೇಳಿದ್ದೆ. ಅವರು ಹೇಳಿದರು ಮತ್ತೆ ಹುಟ್ಟುವ ಬಯಕೆ ಇಲ್ಲ. ಹಾಗೊಂದು ವೇಳೆ ಬ್ರಾಹ್ಮಣನಾಗಿ ಹುಟ್ಟಬೇಕೆ? ಹಲವು ಸಲ ಅನ್ನಿಸುತ್ತದೆ , ಹುಟ್ಟುವುದೇ ಬೇಡ ಹುಟ್ಟಿದರೂ ಬ್ರಾಹ್ಮಣನಾಗಿ ಹುಟ್ಟಿಸಬೇಡ. ಬದುಕಿನ ಪ್ರತೀ ಹಂತದಲ್ಲೂ ಅವರಿಗಾದ ಅನುಭವದ ವ್ಯತಿರಿಕ್ತ ಪರಿಣಾಮವೇ ಇದಕ್ಕೆ ಕಾರಣ. ದೇವರೆ ಮತ್ತೆ ಹುಟ್ಟು ಬೇಡ, ಹುಟ್ಟಿಸಿದರೂ ಬ್ರಾಹ್ಮಣನಾಗಿ ಬೇಡ.  ಬಾಲ್ಯದಲ್ಲೇ ಜನಿವಾರವನ್ನು ಹಾಕಿದ ಉಡುಪಿನ ಮರೆಯಲ್ಲೇ ಇರಿಸುವಂತಹ ಘಟನೆಗಳು. ಅಂಗಿಯೊಳಗಿನ ಜನಿವಾರ ಮತ್ತೂ ಮತ್ತೂ ಚುಚ್ಚುತ್ತಾ ಇರುವ ಸನ್ನಿವೇಶಗಳು ನೆನಸುವಾಗ ಛೇ ಹುಟ್ಟಿದೆವಲ್ಲಾ ಅಂತ ಅನಿಸುತ್ತದೆ.  ಈಗೀಗ ಬನಿಯನು, ಅಂಗಿ ಅದರ ಮೇಲೆ ಕೋಟು ಶಲ್ಯ ಹೀಗೆಲ್ಲ ಇದ್ದರೂ  ಒಳಗೆ ಮರೆಯಲ್ಲಿದ್ದ ಜನಿವಾರ ಯಾರಿಗೋ ಚುಚ್ಚಿ ಬಿಡುತ್ತದೆ.  ಈತನಿಗೆ ಒಳಗೆ ಜನಿವಾರ ಇದೆ ಎನ್ನುವುದೇ ಅಸಹನೆಗೆ ಕಾರಣವಾಗುತ್ತದೆ. ಅದಕ್ಕಿರುವ ಕ್ಷುಲ್ಲಕ ಕಾರಣ ಕೇಳುವಾಗ,  ಚೂಡಿ ದಾರದ ಶಾಲು ದುಪ್ಪಟ್ಟ ಕಿಂತಲೂ ಈ ಮೂರೆಳೆ ಜನಿವಾರ ಗಂಭೀರವೆನಿಸುತ್ತದೆ. 

ಅವರ ಜೀವನಾನುಭವ ಬಹಳಷ್ಟು ದೊಡ್ಡದು. ಸದಾ ಊರಿಂದ ಊರಿಗೆ ಸಂಚರಿಸಬೇಕಾದ ಅನಿವಾರ್ಯತೆ. ಒಂದೊಂದು ಊರಲ್ಲಿ ಒಂದೊಂದು ಬಗೆಯ ಅನುಭವವಾದರೆ, ವೃತ್ತಿಯಲ್ಲಿ ಯೋಗ್ಯತೆ ಇದ್ದರೂ ಸಿಗಬೇಕಾದ ಮಾನ್ಯತೆ ಕೇವಲ ಜನಿವಾರದ ದೆಸೆಯಿಂದ ಸಿಗದಂತೆ ಆಗುವಾಗ ಹೀಗೆ ಹುಟ್ಟಬಾರದಿತ್ತು ಎಂದು ಹಲವು ಸಲ ಅವರಿಗೆ ಅನಿಸಿತ್ತು. ಬ್ಯಾಂಕ್ ನ ಕೇಂದ್ರ ಅಥವಾ ವಿಭಾಗಿಯ ಕಛೇರಿಯ ಉನ್ನತ ಸ್ಥಾನದಲ್ಲಿರಬೇಕಾದವರು, ಇಂದು ಒಂದು ಶಾಖೆಯಲ್ಲಿ ಸಾಮಾನ್ಯ ಅಧಿಕಾರಿಯಾಗಿ ನಿರಂತರ ವೃತ್ತಿ ಮಾಡುವ ಅನಿವಾರ್ಯತೆ ಬಂದರೆ ಅದಕ್ಕೆ ಕಾರಣ ಅಂತರಂಗದ ಯಜ್ಞೋಪವೀತವಾದರೂ ಅದು ಬಹಿರಂಗದ ಸತ್ಯ. 

ಮೊದಲಿಗೆ ಅವರು ಹಾಗೆಂದರೂ ಕೊನೆಯಲ್ಲಿ ಅವರು ಹೇಳಿದರು, ವ್ಯಾವಹಾರಿಕ ಸತ್ಯಗಳು ಏನೇ ಇರಲಿ...ಆದರೆ ಸಾರ್ಥಕತೆಯ ವಿಚಾರ ಬರುವಾಗ  ಈ ಜನ್ಮವೇ ಅತ್ಯಂತ ಶ್ರೇಷ್ಠ ಎನಿಸುತ್ತದೆ.  ಯಾರಿಗೂ ದ್ರೋಹವೆಸಗದ, ಯಾರಿಂದಲೂ ಕಿತ್ತು ತಿನ್ನದ ಜೀವನ, ಮತ್ತೊಬ್ಬರ ಭಡ್ತಿಗೆ ಅಡ್ಡಿಯಾಗದ ವೃತ್ತಿ ಜೀವನ ಎಲ್ಲವೂ ಒಂದು ಬಗೆಯಲ್ಲಿ ತೃಪ್ತಿ ತಂದಿದೆ. ಭಗವಂತ ಅಂದರೆ ಏನು ಎಂದು ದರ್ಶನ ಒದಗಿಸುವ ನಿತ್ಯ ಧಾರ್ಮಿಕ ವಿಧಿಗಳು ಎಲ್ಲವೂ ತೃಪ್ತಿ ಒದಗಿಸಿದೆ. ಸಹಜವಾದ ಸರಳ ಬ್ರಾಹ್ಮಣ್ಯ ಸ್ಥಾನ ಹೆಚ್ಚಿಗೆ ಏನನ್ನು ಬಯಸದೆ ಇರುವಾಗ ಅಲ್ಲಿ ಸಿಗುವ ತೃಪ್ತಿ ಎಲ್ಲವೂ ಸಮಾಧಾನ ತಂದಿದೆ. ಸಾರ್ವಜನಿಕವಾಗಿ ಎದುರಾಗುವ ಪರಿಸ್ಥಿತಿಗಳು ಸಹಜವಾಗಿ ಕೀಳರಿಮೆಯನ್ನು ಹುಟ್ಟು ಹಾಕಿದರೂ,  ಸಮಾನವಾಗಿ ಅಂತರಂಗದಲ್ಲಿ ಸ್ವಾಭಿಮಾನದ ಪ್ರಚೋದನೆಯನ್ನು ಜಾಗೃತವಾಗಿಸುತ್ತದೆ. 

ನೈಷ್ಠಿಕವಾಗಿ ಪರಿಶುದ್ದ ಜೀವನ ನಡೆಸುವ ಬ್ರಾಹ್ಮಣನಿಗೆ ಮತ್ತೆ ಹುಟ್ಟುವ ಪ್ರಮೇಯವೇ ಇರುವುದಿಲ್ಲ. ಬದುಕಿನ ಪ್ರತಿ ಹೆಜ್ಜೆಯಲ್ಲೂ ಎಲ್ಲವನ್ನು ಕಳೆದುಕೊಂಡು ಮುಕ್ತವಾಗಿ ಮುಕ್ತಿ ಪದಕ್ಕೆ ಸೇರುವಾಗ ಮತ್ತೊಂದು ಜನ್ಮವಿದ್ದರೆ ಬ್ರಾಹ್ಮಣನಾಗಿ ಗಳಿಸುವುದಕ್ಕೆ ಏನೂ ಇರುವುದಿಲ್ಲ. ಹಾಗಾಗಿ ಆ ಬಯಕೆಯ ಅಸ್ತಿತ್ವವೇ ಇರುವುದಿಲ್ಲವಾದ ಕಾರಣ ನನ್ನ ಪ್ರಶ್ನೆ ಅವರ ಎದುರು ಅರ್ಥವನ್ನು ಕಳೆದುಕೊಂಡದ್ದು ಸತ್ಯ. 

Saturday, May 10, 2025

ಕ ದನ ವಿ ರಾಮ

  

           




  ಮಹಾಭಾರತ....ಎಂದೊಡನೆ ನನಗೆ ಮೊದಲು ನೆನಪಾಗುವುದು  ಭೀಷ್ಮನ ಪಾತ್ರ. ಮಹಾಭಾರತದಲ್ಲಿ ಭೀಷ್ಮ ಎಂಬ ಮಾಹಾನ್ ವ್ಯಕ್ತಿತ್ವ ವಿಮರ್ಶೆಗೆ ಒಳಗಾದಷ್ಟು ಬೇರೆ ಪಾತ್ರ ವಿಮರ್ಶೆಗೆ ಒಳಗಾಗಿಲ್ಲ. ಅತ್ಯಂತ ಶ್ರೇಷ್ಠ ಪಾತ್ರ ಶ್ರೀಕೃಷ್ಣನದು ಅದು ಬಿಟ್ಟರೆ ಅಲ್ಲಿ ಕಾಣುವುದು ಶ್ರೀಕೃಷ್ಣನ ಪರಮ ಭಕ್ತ, ಭಾಗವತೋತ್ತಮ ಧರ್ಮಿಷ್ಠ ಭೀಷ್ಮ.   ತಂದೆ ತಾಯಿ  ಜನ್ಮದಿಂದ ಇಟ್ಟ ಹೆಸರಿಗಿಂತಲೂ ತನ್ನ ಧೀಮಂತ ವ್ಯಕ್ತಿತ್ವದಿಂದ ಕರೆಸಲ್ಪಟ್ಟ ಹೆಸರಿನಿಂದಲೇ ಚಿರಸ್ಥಾಯಿ ಪದವಿಯನ್ನು ಪಡೆದ ಭೀಷ್ಮನ ವ್ಯಕ್ತಿತ್ವದ ಚರಿತ್ರೆ ಅರಿಯಲು ಪ್ರಯತ್ನಿಸಿದರೆ ಸಾಕು ಇಡೀ ಮಹಾಭಾರತ ಓದಿದಂತೆ. ಪರಮ ಧರ್ಮಿಷ್ಠ ನಾಗಿ, ಭಕ್ತ ಶೀರೋಮಣಿಯಾಗಿ ಧರ್ಮದ ಆಳ ಅಗಲವನ್ನು ತಿಳಿದ ಮಹಾಜ್ಞಾನಿಯಾಗಿ, ತನ್ನ ಜೀವನ ಸಂಧ್ಯೆಯಲ್ಲಿ ಧರ್ಮಕ್ಕೆ ಪ್ರತಿರೂಪ ಎನಿಸಿದ ಯುಧಿಷ್ಠಿರನಿಗೂ ಧರ್ಮೋಪದೇಶವನ್ನು ಮಾಡಿದ ಭೀಷ್ಮನ ಜೀವನ ಹಲವು ರೀತಿಯಲ್ಲಿ ವಿಮರ್ಶೆಗೆ ಒಳಗಾಗಿದೆ. ಇಂತಹ ವ್ಯಕ್ತಿ ಶ್ರೇಷ್ಠ ಮಹಾಭಾರತ ಯುದ್ದದಲ್ಲಿ ಯಾಕೆ ಕೌರವನ ಸೇನೆಯ ರಕ್ಷಕನಾದ? ಯಾಕೆ ಕೌರವನ ಪಕ್ಷವಹಿಸಿದ? ಶ್ರೀಕೃಷ್ಣನೂ ಭೀಷ್ಮನಲ್ಲಿ ಇದೇ ಪ್ರಶ್ನೆ ಕೇಳುತ್ತಾನೆ. ಧರ್ಮಿಷ್ಠ ಸತ್ಯವಂತ ಹೀಗೆಲ್ಲಾ ಯೋಗ್ಯತೆಗಳು ಹೌದು ಎಂದಾದರೆ ಧರ್ಮಾತ್ಮರಾದ ಪಾಂಡವರ ಜತೆಗೆ , ಅದರಲ್ಲೂ ಸ್ವಂತ ಮೊಮ್ಮಕ್ಕಳ ಜತೆಗೆ ಸೇರಬೇಕಿತ್ತು. ಇಷ್ಟಿದ್ದರೂ ಆತ ಜೀವನದ ಅಂತ್ಯದಲ್ಲೂ ಕುರು ಸೇನಾನಿಯಾಗಿಯೆ ತನ್ನ ಕಥೆಯನ್ನು ಅಂತ್ಯಗೊಳಿಸಿದ ಕಾರಣವಾದರೂ ಏನು? ಇದು ಹಲವು ರೀತಿಯಲ್ಲಿ ವಿಮರ್ಶೆಗೆ ಒಳಾಗಾಗಿದೆ. 

ಯಕ್ಷಗಾನದಲ್ಲಿ ಶೇಣಿ ಗೋಪಾಲ ಕೃಷ್ಣರ ಪಾತ್ರಗಳಲ್ಲಿ ಭೀಷ್ಮನ ಪಾತ್ರವನ್ನು ನಾನು ಬಹಳ ಇಷ್ಟ ಪಡುತ್ತೇನೆ. ಒಂದು ಕಡೆಯಲ್ಲಿ ಭೀಷ್ಮನಾಗಿ  ಅವರು ಹೇಳುತ್ತಾರೆ, ಸಾಯುವ ಕಾಲಕ್ಕೆ ಈ ಮೊಮ್ಮಕ್ಕಳ ಹೆಗಲ ಮೇಲೆ ವಿಶ್ರಾಂತಿಯನ್ನು ಪಡೆದೇನು ಎಂದು ಬಗೆದೆ ಕೃಷ್ಣಾ . ಆದರೆ ಈ ಮೊಮ್ಮಕ್ಕಳ ಜಗಳವನ್ನು ಪರಿಹರಿಸಲು ಸಾಧ್ಯವಾಗದೇ ಹೋಯಿತು. ಕುರುಕ್ಷೇತ್ರದ ಯುದ್ದದ ಬಗೆಯಲ್ಲಿ ಮರುಗಿದ ಭೀಷ್ಮನ ಮನದಾಳದ ಮಾತಿದು. ಯಾವುದೇ ಮನೆಯನ್ನಾಗಲೀ ರಾಜ್ಯವನ್ನಾಗಲೀ ಬಾಧಿಸುವ ಮೊದಲ ಶತ್ರುವೆಂದರೆ ಅದು ಒಳಜಗಳ. ಅಂತರಶತ್ರುಗಳು ಪರಮ ಶತ್ರುಗಳಾಗಿಬಿಡುತ್ತಾರೆ. ಮನುಷ್ಯನ ಸಾದ್ಯಂತ ಜೀವನದಲ್ಲೂ ಮನುಷ್ಯನ ಉತ್ಕರ್ಷದಲ್ಲೂ ಆತನ ಅಂತಃ ಶತ್ರುವಿನ ಪಾತ್ರ ಬಹಳ ದೊಡ್ಡದು. ಒಳಗಿನ ಶತ್ರುವನ್ನು ಗೆದ್ದವನಿಗೆ ಮಾತ್ರ ಉತ್ಕರ್ಶದಲ್ಲಿ ಸಾಯುಜ್ಯ ಪದವಿಯನ್ನು ಸೇರುವುದಕ್ಕೆ ಸಾಧ್ಯ. ಅದು ನಮ್ಮ ದೇಶಕ್ಕೂ ಅನ್ವಯ. 

ಭೀಷ್ಮ ಕೌರವ ಪಕ್ಷದಲ್ಲೇ ಯಾಕೆ ಹೋರಾಡಿದ. ಆತನೇ ಹೇಳುವಂತೆ, ಹಸ್ತಿನಾವತಿಯ ಸಿಂಹಾಸನ ರಕ್ಷಣೆ. ಇದು ಆತ ತಂದೆ ಶಂತನುವಿನಿಂದ ಮಲ ಮಾತೆ ಸತ್ಯವತಿಯಿಂದ ಪಡೆದ ಹೊಣೆಗಾರಿಕೆ. ಜೀವ ಇರುವತನಕ ತಾನು ಸಿಂಹಾಸನದ ವಿಧೇಯ ಸೇನಾಪತಿಯಾಗುತ್ತೇನೆ. ಅದರ ಆಧಿಪತ್ಯಕ್ಕೆ  ವಿಘ್ನ ಬರುವಲ್ಲಿ ಅದರ ವಿರುದ್ಧ ಹೋರಾಡುತ್ತೇನೆ. ಇದು ಜೀವನದಾದ್ಯಂತ ಆತ ಪಾಲಿಸಿಕೊಂಡು ಬಂದ ತತ್ವವಾದರೆ, ಕೊನೆಯಲ್ಲಿ ಮಹಾಭಾರತ ಯುದ್ದ....ಅದು ಕೇವಲ ಹಸ್ತಿನಾವತಿಯ ವೈರಿ ಎಂದು ಪರಿಗಣಿಸುವ ಹಾಗಿರಲಿಲ್ಲ. ಈ ದಾಯಾದಿ ಕಲಹ, ಅಣ್ಣ ತಮ್ಮಂದಿರು ಹೀಗೆ ಹೊಡೆದಾಡಿಕೊಂಡರೆ...ರಾಜ್ಯದ ಸಿಂಹಾಸನದ ಗತಿಯೇನಾಗಬೇಕು.? ಭೀಷ್ಮನಾಗಿ ಶೇಣಿಯವರು ಒಂದು ಕಡೆಯಲ್ಲಿ ಹೀಗೆ ಹೇಳಿಬಿಡುತ್ತಾರೆ. ಹಸ್ತಿನಾವತಿಗೆ ಹೊರಗಿನ ಶತ್ರು ಭಯವಿರಲಿಲ್ಲ. ಇಲ್ಲಿಯ ಅಣ್ಣತಮ್ಮಂದಿರ ಮನೆಯೊಳಗಿನ ಕಲಹವೇ ಸಾಕು. ಹಾಗಾಗಿ ಇಲ್ಲಿ ಈ ಜಗಳದಿಂದ ಸಿಂಹಾಸನ ರಕ್ಷಣೆ ಅನಿವಾರ್ಯವಾಗಿತ್ತು. ಕುರುಕ್ಷೇತ್ರದಲ್ಲಿ ಆತ ಹೋರಾಡಿದ ಹತ್ತು ದಿನಗಳಲ್ಲಿ ಆತ ಪರೋಕ್ಷವಾಗಿ ಪಾಂಡವ ರಕ್ಷಕನಾಗಿಯೇ ಹೋರಾಡಿದ. ಒಬ್ಬನೇ ಒಬ್ಬ ಪಾಂಡವನ ಕೂದಲೂ ಸಹ ಕೊಂಕಲಿಲ್ಲ.  ಇದು ಅಂತರಂಗದ ಸತ್ಯ. ಜತೆಯಲ್ಲಿ ಕೌರವನನ್ನು ರಕ್ಷಿಸಿದ. ಹಾಗಾದರೆ ಆತ ಹೋರಾಡಿದ್ದು ಯಾರ ಜತೆ? ಪಾಂಡವರ ಪಕ್ಷದಲ್ಲೂ  ದ್ರುಪದನಂತಹ ಹಸ್ತಿನಾವತಿ ಶತ್ರುಗಳಿದ್ದರು. ಈ ಅಣ್ಣ ತಮ್ಮಂದಿರ ಜಗಳದಲ್ಲಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ಸಮಯ ಸಾಧಕ  ಶತ್ರುಗಳಿದ್ದರು. ಅವರಿಂದ ಹಸ್ತಿನಾವತಿಯ ರಕ್ಷಣೆ ಆಗಬೇಕಿತ್ತು. ಮತ್ತೆ ಅಣ್ಣ ತಮ್ಮಂದಿರ ಜಗಳ ಆನಂತರ. ಹಸ್ತಿನಾವತಿಯ ಸಿಂಹಾಸನದಲ್ಲಿ ಒಬ್ಬ ಪರಮ ಧರ್ಮಿಷ್ಠ ಅಧಿಕಾರಕ್ಕೆ ಏರಬೇಕು. ಅದುವರೆಗೆ ತನಗೆ ವಿಶ್ರಾಂತಿ ಇಲ್ಲ, ಎಂದು ಬಗೆದವನು ಭೀಷ್ಮ. ಹಾಗಾಗಿ ಹೊರಗಿನ ಎಲ್ಲಾ ಶತ್ರುಗಳನ್ನು ಜಯಿಸಿ ನೀವಾರಿಸಿಕೊಳ್ಳಬಲ್ಲ ಭೀಷ್ಮನಿಗೆ ಈ ಒಳಗಿನ ಶತ್ರುಗಳನ್ನು ಜಯಿಸುವುದು ಕೊನೆಯವರೆಗೂ ಸಾಧ್ಯವಾಗಲಿಲ್ಲ. ಇಡೀ ಹಸ್ತಿನಾವತಿಯೇ ಅದರಲ್ಲಿ ಹೊತ್ತಿ ಉರಿದು ಹೋಯಿತು. 

ನಮ್ಮ ವರ್ತಮಾನ  ಭಾರತದ ಸದ್ಯದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ನಾವು ಯಾವುದರಲ್ಲಾದರೂ ಗೆಲುವು ಸಾಧಿಸಿ ವಿಜಯತೋತ್ಸವವನ್ನು ಆಚರಿಸಬಹುದು. ಆದರೆ ನಮ್ಮ ಒಳಗಿನ ಶತ್ರುಗಳು ವಿಜ್ರಂಭಿಸುವಾಗ ಈ ವಿಜಯೋತ್ಸವ ಅರ್ಥವನ್ನು ಕಳೆದುಕೊಳ್ಳುತ್ತದೆ. ಎಲ್ಲರೂ ಒಗ್ಗಟ್ಟಾಗಿ ಒಂದೇ ಮಂತ್ರವನ್ನು ಪಠಿಸಿ ಸೋಲಾಗಲಿ ಗೆಲುವಾಗಲಿ ಒಂದೇ ಭಾವದಿಂದ ಸ್ವೀಕರಿಸಬೇಕಾದ ಅನಿವಾರ್ಯತೆಯಲ್ಲಿ ಹೀಗೆ ಒಳಗಿನ ಶತ್ರುಗಳ ಸೆರಗಿನ ಮರೆಯ ನಗುವಿಗೆ ಸಾಕ್ಷಿಯಾಗಬೇಕಾಗಿರುವುದು ದೊಡ್ಡ ದುರಂತ. ವಿಕಟ ವಿಡಂಬನೆ ಇದು. 

ಯುದ್ದ ಆರಂಭದಲ್ಲಿ ಶಾಂತಿ ಮಂತ್ರ ಜಪಿಸಿ ಮಹಾ ಶಾಂತಿದೂತರು ಎನಿಸಿಕೊಂಡವರು ಈಗ ಮರೆಯಲ್ಲಿ ನಿಂತು ಇದೇ ವಿಕಟ ಹಾಸವನ್ನು ಮರೆಯುತ್ತಿದ್ದಾರೆ. ನಿನ್ನೆ  ಪಾಕಿಸ್ಥಾನ ಕದನ ವಿರಾಮವನ್ನು ಬಯಸಿತ್ತು. ಮೊದಲಿಗೆ ಕರೆ ಬಂದದ್ದು ಅಲ್ಲಿನ ಸೇನಾನಿಯಿಂದ. ಹೊರತು ಅಮೇರಿಕದ ದೊಡ್ಡಣ್ಣನಿಂದ ಅಲ್ಲ. ಹಾಗಿದ್ದರೂ ಅಮೇರಿಕದ ದೊಡ್ಡಣ್ಣ ಎದುರು ವಿಶ್ವಗುರು ಎನಾದ ಹೀಗೆ ಚಿತ್ರವಿಚಿತ್ರ ವಿಮರ್ಶೆ ಮೆರೆದು ತಾವು ದೊಡ್ಡ ಪಂಡಿತರಂತೆ ಬಿಂಬಿಸುವ ಈ ಮನೋಭಾವ ನಮ್ಮದೇಶದ ಒಳಗಿನ ದೊಡ್ಡ ಶತ್ರು. ನಮ್ಮ ಅಣ್ಣತಮ್ಮದಿಂದಿರ ಜಗಳದಿಂದ ನಮ್ಮನ್ನು ರಕ್ಷಿಸುವುದಕ್ಕೆ ಯಾವ ಭೀಷ್ಮನೂ ಇಲ್ಲ ಎಂಬುದನ್ನು ಇವರು ಮರೆತಂತಿದೆ. ಯಾವುದೇ ಕ್ಷಣದಲ್ಲಿ ಬಂದು ಬೀಳಬಲ್ಲ ಮಿಸೈಲ್ ನ ನೆರಳಲ್ಲೇ ನಾವಿದ್ದೇ ವೆ ಎಂಬುದನ್ನು ಇವರು ಮರೆತಂತಿದೆ. ಇಲ್ಲದಿದ್ದರೆ ಈ ಶಿಖಂಡೀತನದ ಅಟ್ಟ ಹಾಸಕ್ಕೆ ಬೇರೆ ಎನು ಹೇಳುವುದಕ್ಕೆ ಸಾಧ್ಯ? ಒಂದು ವೇಳೆ ಈ ಕದನ ವಿರಾಮದ ಬೇಡಿಕೆಯನ್ನು ಮನ್ನಿಸದೇ ಇರುತ್ತಿದ್ದರೆ...ಆಗ ಎದುರಾಗುವ ವಿಮರ್ಶೆ ಬೇರೆ ರೀತಿಯದಾಗಿರುತ್ತಿತ್ತು. ಇಂತಹ ಕುತಂತ್ರಿಗಳಿಗೆ ವಿಮರ್ಶೆ ಬಿಟ್ಟು ಬೇರೆ ಎನೂ ಸಾಧ್ಯವಿಲ್ಲ. ತಮ್ಮ ಅಪ್ಪ ಅಮ್ಮ ಭಂಧು ಮಿತ್ರರು, ಬೆಚ್ಚಗಿನ ಮನೆ ಎಲ್ಲವನ್ನು ಬಿಟ್ಟು ಹೋರಾಡುವ ಆ ಸೈನಿಕರ ಪರಿಶ್ರಮವನ್ನು ಒಂದಿಷ್ಟೂ ಕಲ್ಪಿಸಿಕೊಳ್ಳದ ಈ ಒಳಗಿನ ಶತ್ರುಗಳು ಸದ್ಯದಲ್ಲಿ ಭಾರತದ ದೊಡ್ಡ ಶತ್ರುಗಳು. ಆ ಮನೋಭಾವಕ್ಕೆ ಹೇಸಿಗೆ ಅನಿಸುತ್ತದೆ. ಹಾಗಾಗಿ ಇವತ್ತು ಪ್ರೇಂಡ್ ಲಿಸ್ಟ್ ನಲ್ಲಿದ್ದ ಒಬ್ಬ ಹಿತ ಶತ್ರುವಿನ ಪೋಸ್ಟ್ ನೋಡಿ ಮೊದಲು ಬೆಳಗ್ಗೆ ಎದ್ದಕೂಡಲೆ ಆತನನ್ನು ಅನ್ ಫ್ರೆಂಡ್ ಮಾಡಿಬಿಟ್ಟೇ. ಅದಕ್ಕಿಂತ ಹೆಚ್ಚಿಗೆ ನಾನಾದರೂ ಏನು ಮಾಡಬಲ್ಲೆ? ಇಂತಹವರ ಪರಿಸರದಿಂದ ದೂರಾಗಿರುವುದೇ ಸೂಕ್ತ. 

ಕದನ ವಿರಾಮವನ್ನು ಬೇಡಿ ಕರೆದವರೇ ಅದನ್ನು ಉಲ್ಲಂಘಿಸಿ ಕೃತಘ್ನತೆ ಮೆರೆದರೆ ...ಅದಕ್ಕೆ ಕಾರಣ ಅವರ ಅಪ್ರಾಮಾಣಿಕತೆ. ಕದನ....ಕ ತೆಗೆದರೆ ದನ... ಅಂದರ ಪಶುವಿನ ಸೌಮ್ಯತೆ, ಪಶುವಿನ ತ್ಯಾಗ, ಪಶುವಿನ    ಮಾತೃ ಸಮಾನ ಅನುಗ್ರಹ ಇದರ ಮೌಲ್ಯವನ್ನು ತಿಳಿಯದವರು ಕದನ ಮಾಡಿ ಸದ್ಭಾವನೆಗೆ ಸವಾಲಾಗಿ...ಕೊನೆಗೆ ಅದರಲ್ಲೇ ವಿ - ರಾಮವನ್ನು ಬಯಸಿ ಒಂದು ತತ್ವಕ್ಕೆ ದ್ರೋಹ ಮಾಡುವವರ ವರ್ತನೆಯನ್ನು ಖಂಡಿಸುವುದರ ಹೊರತಾಗಿ ಮರೆಯಲ್ಲೆ ನಗುವುದು ನಿಜಕ್ಕೂ ದೊಡ್ಡ ದುರಂತ. ದನ ಮತ್ತು ರಾಮ ದನ ಪರಮ ಸಾಧ್ವೀ ರೂಪವಾದರೆ ....ರಾಮ ಧೀರೋತ್ತವ್ಯಕ್ತಿತ್ವದ ರೂಪ. ರಾಮನನ್ನೂ ಗೌರವಿಸದೇ ರಾಮ ಕಾರ್ಯವನ್ನು ತೆಗಳುವಾಗ ಹೀಗೆ ಕದನ ವಿರಾಮದ ಅರ್ಥಕ್ಕೆ ದ್ರೋಹ ಬಗೆದರೆ ಅದು ಅತಿಶಯವಲ್ಲ. ರಾಮ ರಾವಣನೊಂದಿಗಿನ ಹೋರಾಟದಲ್ಲಿ ಮಂಗಗಳ ಸಹಾಯವನ್ನು ಪಡೆದ ಎಂದು ಹೀಯಾಳಿಸುವವರಿದ್ದಾರೆ. ಸಾವಿರ ಸಾವಿರ ರಕ್ಕಸರನ್ನು ನಿಂತ ನಿಲುವಿಗೆ ಸಂಹರಿಸಿದ ರಾಮನಿಗೆ ದೂರದಲ್ಲಿರುವ ರಾವಣ ಲೆಕ್ಕವೇ ಅಲ್ಲ. ಅಯೋಧ್ಯೆಯಲ್ಲಿ ನಿಂತುಕೊಂಡೆ ಆತನನ್ನು ಸಂಹರಿಸುವ ಶಸ್ತ್ರಾಸ್ತ್ರಗಳು ರಾಮನ ಬಳಿ ಇತ್ತು. ಆದರೂ ರಾಮ ಯಾಕೆ ಲಂಕೆಯ ಬಳಿಗೆ ಬರಬೇಕಾಯಿತು? ಯಾಕೆ ಮಂಗಗಳ ಸಹಾಯ ಪಡೆಯಬೇಕಿತ್ತು? ಅವುಗಳೆಲ್ಲ ನಿಮಿತ್ತ. ಅದನ್ನು ವಿಮರ್ಶಿಸುವ ಅರ್ಹತೆಯಾಗಲಿ ತಿಳಿವಳಿಕೆಯಾಗಲೀ ಇಲ್ಲ. ಕದನ ವಿರಾಮದ ಧೂರ್ತ ನಾಟಕವನ್ನು ಆಡಿದ ಪಾಕಿಸ್ಥಾನವನ್ನು ವಿಮರ್ಶಿಸುವ ಯೋಗ್ಯತೆ ಇಲ್ಲದವರು.....ವಿಕೃತ ಮನೋಭಾವದಲ್ಲಿ ನಮ್ಮನ್ನು ವಿಮರ್ಶಿಸುತ್ತಾರೆ. ಇದ್ದಕ್ಕಿಂತ ದೊಡ್ಡ ಶತ್ರುಗಳು ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕಿಲ್ಲ. ಮೊದಲು ಇಂತಹ ಮನೋಭಾವ ಬದಲಾಗಬೇಕು. ಗಡಿಯಲ್ಲಿ ಹಾರಿದ ಒಂದು ಮಿಸೈಲಿನ ಒಂದು ತುಂಡು ಇವರ ತಲೆಯ ಮೇಲೆ ಬಿದ್ದರೆ ಭಾರತ ಒಂದಷ್ಟು ಸುರಕ್ಷಿತ. 

    
ಶಾಂತಿ ಮಂತ್ರವನ್ನು ಓದಿದದವರು...ಈಗ ಮರೆಯಲ್ಲಿ ನಗುತ್ತಿದ್ದಾರೆ. ಅವರಿಗೆ ಬೇಕಾಗಿರುವುದು ಇಂತಹ ಜಗಳವೇ ಹೊರತು ಶಾಂತಿಯಲ್ಲ.  ಅವರಿಗೆ ಪರಮ ಶಾಂತಿ ಸಿಗುವ ತನಕ ಈ ಕದನಕ್ಕೆ ವಿರಾಮವಿಲ್ಲ.