ಯಕ್ಷಗಾನದಲ್ಲಿ ಶೇಣಿ ಗೋಪಾಲ ಕೃಷ್ಣರ ಪಾತ್ರಗಳಲ್ಲಿ ಭೀಷ್ಮನ ಪಾತ್ರವನ್ನು ನಾನು ಬಹಳ ಇಷ್ಟ ಪಡುತ್ತೇನೆ. ಒಂದು ಕಡೆಯಲ್ಲಿ ಭೀಷ್ಮನಾಗಿ ಅವರು ಹೇಳುತ್ತಾರೆ, ಸಾಯುವ ಕಾಲಕ್ಕೆ ಈ ಮೊಮ್ಮಕ್ಕಳ ಹೆಗಲ ಮೇಲೆ ವಿಶ್ರಾಂತಿಯನ್ನು ಪಡೆದೇನು ಎಂದು ಬಗೆದೆ ಕೃಷ್ಣಾ . ಆದರೆ ಈ ಮೊಮ್ಮಕ್ಕಳ ಜಗಳವನ್ನು ಪರಿಹರಿಸಲು ಸಾಧ್ಯವಾಗದೇ ಹೋಯಿತು. ಕುರುಕ್ಷೇತ್ರದ ಯುದ್ದದ ಬಗೆಯಲ್ಲಿ ಮರುಗಿದ ಭೀಷ್ಮನ ಮನದಾಳದ ಮಾತಿದು. ಯಾವುದೇ ಮನೆಯನ್ನಾಗಲೀ ರಾಜ್ಯವನ್ನಾಗಲೀ ಬಾಧಿಸುವ ಮೊದಲ ಶತ್ರುವೆಂದರೆ ಅದು ಒಳಜಗಳ. ಅಂತರಶತ್ರುಗಳು ಪರಮ ಶತ್ರುಗಳಾಗಿಬಿಡುತ್ತಾರೆ. ಮನುಷ್ಯನ ಸಾದ್ಯಂತ ಜೀವನದಲ್ಲೂ ಮನುಷ್ಯನ ಉತ್ಕರ್ಷದಲ್ಲೂ ಆತನ ಅಂತಃ ಶತ್ರುವಿನ ಪಾತ್ರ ಬಹಳ ದೊಡ್ಡದು. ಒಳಗಿನ ಶತ್ರುವನ್ನು ಗೆದ್ದವನಿಗೆ ಮಾತ್ರ ಉತ್ಕರ್ಶದಲ್ಲಿ ಸಾಯುಜ್ಯ ಪದವಿಯನ್ನು ಸೇರುವುದಕ್ಕೆ ಸಾಧ್ಯ. ಅದು ನಮ್ಮ ದೇಶಕ್ಕೂ ಅನ್ವಯ.
ಭೀಷ್ಮ ಕೌರವ ಪಕ್ಷದಲ್ಲೇ ಯಾಕೆ ಹೋರಾಡಿದ. ಆತನೇ ಹೇಳುವಂತೆ, ಹಸ್ತಿನಾವತಿಯ ಸಿಂಹಾಸನ ರಕ್ಷಣೆ. ಇದು ಆತ ತಂದೆ ಶಂತನುವಿನಿಂದ ಮಲ ಮಾತೆ ಸತ್ಯವತಿಯಿಂದ ಪಡೆದ ಹೊಣೆಗಾರಿಕೆ. ಜೀವ ಇರುವತನಕ ತಾನು ಸಿಂಹಾಸನದ ವಿಧೇಯ ಸೇನಾಪತಿಯಾಗುತ್ತೇನೆ. ಅದರ ಆಧಿಪತ್ಯಕ್ಕೆ ವಿಘ್ನ ಬರುವಲ್ಲಿ ಅದರ ವಿರುದ್ಧ ಹೋರಾಡುತ್ತೇನೆ. ಇದು ಜೀವನದಾದ್ಯಂತ ಆತ ಪಾಲಿಸಿಕೊಂಡು ಬಂದ ತತ್ವವಾದರೆ, ಕೊನೆಯಲ್ಲಿ ಮಹಾಭಾರತ ಯುದ್ದ....ಅದು ಕೇವಲ ಹಸ್ತಿನಾವತಿಯ ವೈರಿ ಎಂದು ಪರಿಗಣಿಸುವ ಹಾಗಿರಲಿಲ್ಲ. ಈ ದಾಯಾದಿ ಕಲಹ, ಅಣ್ಣ ತಮ್ಮಂದಿರು ಹೀಗೆ ಹೊಡೆದಾಡಿಕೊಂಡರೆ...ರಾಜ್ಯದ ಸಿಂಹಾಸನದ ಗತಿಯೇನಾಗಬೇಕು.? ಭೀಷ್ಮನಾಗಿ ಶೇಣಿಯವರು ಒಂದು ಕಡೆಯಲ್ಲಿ ಹೀಗೆ ಹೇಳಿಬಿಡುತ್ತಾರೆ. ಹಸ್ತಿನಾವತಿಗೆ ಹೊರಗಿನ ಶತ್ರು ಭಯವಿರಲಿಲ್ಲ. ಇಲ್ಲಿಯ ಅಣ್ಣತಮ್ಮಂದಿರ ಮನೆಯೊಳಗಿನ ಕಲಹವೇ ಸಾಕು. ಹಾಗಾಗಿ ಇಲ್ಲಿ ಈ ಜಗಳದಿಂದ ಸಿಂಹಾಸನ ರಕ್ಷಣೆ ಅನಿವಾರ್ಯವಾಗಿತ್ತು. ಕುರುಕ್ಷೇತ್ರದಲ್ಲಿ ಆತ ಹೋರಾಡಿದ ಹತ್ತು ದಿನಗಳಲ್ಲಿ ಆತ ಪರೋಕ್ಷವಾಗಿ ಪಾಂಡವ ರಕ್ಷಕನಾಗಿಯೇ ಹೋರಾಡಿದ. ಒಬ್ಬನೇ ಒಬ್ಬ ಪಾಂಡವನ ಕೂದಲೂ ಸಹ ಕೊಂಕಲಿಲ್ಲ. ಇದು ಅಂತರಂಗದ ಸತ್ಯ. ಜತೆಯಲ್ಲಿ ಕೌರವನನ್ನು ರಕ್ಷಿಸಿದ. ಹಾಗಾದರೆ ಆತ ಹೋರಾಡಿದ್ದು ಯಾರ ಜತೆ? ಪಾಂಡವರ ಪಕ್ಷದಲ್ಲೂ ದ್ರುಪದನಂತಹ ಹಸ್ತಿನಾವತಿ ಶತ್ರುಗಳಿದ್ದರು. ಈ ಅಣ್ಣ ತಮ್ಮಂದಿರ ಜಗಳದಲ್ಲಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ಸಮಯ ಸಾಧಕ ಶತ್ರುಗಳಿದ್ದರು. ಅವರಿಂದ ಹಸ್ತಿನಾವತಿಯ ರಕ್ಷಣೆ ಆಗಬೇಕಿತ್ತು. ಮತ್ತೆ ಅಣ್ಣ ತಮ್ಮಂದಿರ ಜಗಳ ಆನಂತರ. ಹಸ್ತಿನಾವತಿಯ ಸಿಂಹಾಸನದಲ್ಲಿ ಒಬ್ಬ ಪರಮ ಧರ್ಮಿಷ್ಠ ಅಧಿಕಾರಕ್ಕೆ ಏರಬೇಕು. ಅದುವರೆಗೆ ತನಗೆ ವಿಶ್ರಾಂತಿ ಇಲ್ಲ, ಎಂದು ಬಗೆದವನು ಭೀಷ್ಮ. ಹಾಗಾಗಿ ಹೊರಗಿನ ಎಲ್ಲಾ ಶತ್ರುಗಳನ್ನು ಜಯಿಸಿ ನೀವಾರಿಸಿಕೊಳ್ಳಬಲ್ಲ ಭೀಷ್ಮನಿಗೆ ಈ ಒಳಗಿನ ಶತ್ರುಗಳನ್ನು ಜಯಿಸುವುದು ಕೊನೆಯವರೆಗೂ ಸಾಧ್ಯವಾಗಲಿಲ್ಲ. ಇಡೀ ಹಸ್ತಿನಾವತಿಯೇ ಅದರಲ್ಲಿ ಹೊತ್ತಿ ಉರಿದು ಹೋಯಿತು.
ನಮ್ಮ ವರ್ತಮಾನ ಭಾರತದ ಸದ್ಯದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ನಾವು ಯಾವುದರಲ್ಲಾದರೂ ಗೆಲುವು ಸಾಧಿಸಿ ವಿಜಯತೋತ್ಸವವನ್ನು ಆಚರಿಸಬಹುದು. ಆದರೆ ನಮ್ಮ ಒಳಗಿನ ಶತ್ರುಗಳು ವಿಜ್ರಂಭಿಸುವಾಗ ಈ ವಿಜಯೋತ್ಸವ ಅರ್ಥವನ್ನು ಕಳೆದುಕೊಳ್ಳುತ್ತದೆ. ಎಲ್ಲರೂ ಒಗ್ಗಟ್ಟಾಗಿ ಒಂದೇ ಮಂತ್ರವನ್ನು ಪಠಿಸಿ ಸೋಲಾಗಲಿ ಗೆಲುವಾಗಲಿ ಒಂದೇ ಭಾವದಿಂದ ಸ್ವೀಕರಿಸಬೇಕಾದ ಅನಿವಾರ್ಯತೆಯಲ್ಲಿ ಹೀಗೆ ಒಳಗಿನ ಶತ್ರುಗಳ ಸೆರಗಿನ ಮರೆಯ ನಗುವಿಗೆ ಸಾಕ್ಷಿಯಾಗಬೇಕಾಗಿರುವುದು ದೊಡ್ಡ ದುರಂತ. ವಿಕಟ ವಿಡಂಬನೆ ಇದು.
ಯುದ್ದ ಆರಂಭದಲ್ಲಿ ಶಾಂತಿ ಮಂತ್ರ ಜಪಿಸಿ ಮಹಾ ಶಾಂತಿದೂತರು ಎನಿಸಿಕೊಂಡವರು ಈಗ ಮರೆಯಲ್ಲಿ ನಿಂತು ಇದೇ ವಿಕಟ ಹಾಸವನ್ನು ಮರೆಯುತ್ತಿದ್ದಾರೆ. ನಿನ್ನೆ ಪಾಕಿಸ್ಥಾನ ಕದನ ವಿರಾಮವನ್ನು ಬಯಸಿತ್ತು. ಮೊದಲಿಗೆ ಕರೆ ಬಂದದ್ದು ಅಲ್ಲಿನ ಸೇನಾನಿಯಿಂದ. ಹೊರತು ಅಮೇರಿಕದ ದೊಡ್ಡಣ್ಣನಿಂದ ಅಲ್ಲ. ಹಾಗಿದ್ದರೂ ಅಮೇರಿಕದ ದೊಡ್ಡಣ್ಣ ಎದುರು ವಿಶ್ವಗುರು ಎನಾದ ಹೀಗೆ ಚಿತ್ರವಿಚಿತ್ರ ವಿಮರ್ಶೆ ಮೆರೆದು ತಾವು ದೊಡ್ಡ ಪಂಡಿತರಂತೆ ಬಿಂಬಿಸುವ ಈ ಮನೋಭಾವ ನಮ್ಮದೇಶದ ಒಳಗಿನ ದೊಡ್ಡ ಶತ್ರು. ನಮ್ಮ ಅಣ್ಣತಮ್ಮದಿಂದಿರ ಜಗಳದಿಂದ ನಮ್ಮನ್ನು ರಕ್ಷಿಸುವುದಕ್ಕೆ ಯಾವ ಭೀಷ್ಮನೂ ಇಲ್ಲ ಎಂಬುದನ್ನು ಇವರು ಮರೆತಂತಿದೆ. ಯಾವುದೇ ಕ್ಷಣದಲ್ಲಿ ಬಂದು ಬೀಳಬಲ್ಲ ಮಿಸೈಲ್ ನ ನೆರಳಲ್ಲೇ ನಾವಿದ್ದೇ ವೆ ಎಂಬುದನ್ನು ಇವರು ಮರೆತಂತಿದೆ. ಇಲ್ಲದಿದ್ದರೆ ಈ ಶಿಖಂಡೀತನದ ಅಟ್ಟ ಹಾಸಕ್ಕೆ ಬೇರೆ ಎನು ಹೇಳುವುದಕ್ಕೆ ಸಾಧ್ಯ? ಒಂದು ವೇಳೆ ಈ ಕದನ ವಿರಾಮದ ಬೇಡಿಕೆಯನ್ನು ಮನ್ನಿಸದೇ ಇರುತ್ತಿದ್ದರೆ...ಆಗ ಎದುರಾಗುವ ವಿಮರ್ಶೆ ಬೇರೆ ರೀತಿಯದಾಗಿರುತ್ತಿತ್ತು. ಇಂತಹ ಕುತಂತ್ರಿಗಳಿಗೆ ವಿಮರ್ಶೆ ಬಿಟ್ಟು ಬೇರೆ ಎನೂ ಸಾಧ್ಯವಿಲ್ಲ. ತಮ್ಮ ಅಪ್ಪ ಅಮ್ಮ ಭಂಧು ಮಿತ್ರರು, ಬೆಚ್ಚಗಿನ ಮನೆ ಎಲ್ಲವನ್ನು ಬಿಟ್ಟು ಹೋರಾಡುವ ಆ ಸೈನಿಕರ ಪರಿಶ್ರಮವನ್ನು ಒಂದಿಷ್ಟೂ ಕಲ್ಪಿಸಿಕೊಳ್ಳದ ಈ ಒಳಗಿನ ಶತ್ರುಗಳು ಸದ್ಯದಲ್ಲಿ ಭಾರತದ ದೊಡ್ಡ ಶತ್ರುಗಳು. ಆ ಮನೋಭಾವಕ್ಕೆ ಹೇಸಿಗೆ ಅನಿಸುತ್ತದೆ. ಹಾಗಾಗಿ ಇವತ್ತು ಪ್ರೇಂಡ್ ಲಿಸ್ಟ್ ನಲ್ಲಿದ್ದ ಒಬ್ಬ ಹಿತ ಶತ್ರುವಿನ ಪೋಸ್ಟ್ ನೋಡಿ ಮೊದಲು ಬೆಳಗ್ಗೆ ಎದ್ದಕೂಡಲೆ ಆತನನ್ನು ಅನ್ ಫ್ರೆಂಡ್ ಮಾಡಿಬಿಟ್ಟೇ. ಅದಕ್ಕಿಂತ ಹೆಚ್ಚಿಗೆ ನಾನಾದರೂ ಏನು ಮಾಡಬಲ್ಲೆ? ಇಂತಹವರ ಪರಿಸರದಿಂದ ದೂರಾಗಿರುವುದೇ ಸೂಕ್ತ.
ಕದನ ವಿರಾಮವನ್ನು ಬೇಡಿ ಕರೆದವರೇ ಅದನ್ನು ಉಲ್ಲಂಘಿಸಿ ಕೃತಘ್ನತೆ ಮೆರೆದರೆ ...ಅದಕ್ಕೆ ಕಾರಣ ಅವರ ಅಪ್ರಾಮಾಣಿಕತೆ. ಕದನ....ಕ ತೆಗೆದರೆ ದನ... ಅಂದರ ಪಶುವಿನ ಸೌಮ್ಯತೆ, ಪಶುವಿನ ತ್ಯಾಗ, ಪಶುವಿನ ಮಾತೃ ಸಮಾನ ಅನುಗ್ರಹ ಇದರ ಮೌಲ್ಯವನ್ನು ತಿಳಿಯದವರು ಕದನ ಮಾಡಿ ಸದ್ಭಾವನೆಗೆ ಸವಾಲಾಗಿ...ಕೊನೆಗೆ ಅದರಲ್ಲೇ ವಿ - ರಾಮವನ್ನು ಬಯಸಿ ಒಂದು ತತ್ವಕ್ಕೆ ದ್ರೋಹ ಮಾಡುವವರ ವರ್ತನೆಯನ್ನು ಖಂಡಿಸುವುದರ ಹೊರತಾಗಿ ಮರೆಯಲ್ಲೆ ನಗುವುದು ನಿಜಕ್ಕೂ ದೊಡ್ಡ ದುರಂತ. ದನ ಮತ್ತು ರಾಮ ದನ ಪರಮ ಸಾಧ್ವೀ ರೂಪವಾದರೆ ....ರಾಮ ಧೀರೋತ್ತವ್ಯಕ್ತಿತ್ವದ ರೂಪ. ರಾಮನನ್ನೂ ಗೌರವಿಸದೇ ರಾಮ ಕಾರ್ಯವನ್ನು ತೆಗಳುವಾಗ ಹೀಗೆ ಕದನ ವಿರಾಮದ ಅರ್ಥಕ್ಕೆ ದ್ರೋಹ ಬಗೆದರೆ ಅದು ಅತಿಶಯವಲ್ಲ. ರಾಮ ರಾವಣನೊಂದಿಗಿನ ಹೋರಾಟದಲ್ಲಿ ಮಂಗಗಳ ಸಹಾಯವನ್ನು ಪಡೆದ ಎಂದು ಹೀಯಾಳಿಸುವವರಿದ್ದಾರೆ. ಸಾವಿರ ಸಾವಿರ ರಕ್ಕಸರನ್ನು ನಿಂತ ನಿಲುವಿಗೆ ಸಂಹರಿಸಿದ ರಾಮನಿಗೆ ದೂರದಲ್ಲಿರುವ ರಾವಣ ಲೆಕ್ಕವೇ ಅಲ್ಲ. ಅಯೋಧ್ಯೆಯಲ್ಲಿ ನಿಂತುಕೊಂಡೆ ಆತನನ್ನು ಸಂಹರಿಸುವ ಶಸ್ತ್ರಾಸ್ತ್ರಗಳು ರಾಮನ ಬಳಿ ಇತ್ತು. ಆದರೂ ರಾಮ ಯಾಕೆ ಲಂಕೆಯ ಬಳಿಗೆ ಬರಬೇಕಾಯಿತು? ಯಾಕೆ ಮಂಗಗಳ ಸಹಾಯ ಪಡೆಯಬೇಕಿತ್ತು? ಅವುಗಳೆಲ್ಲ ನಿಮಿತ್ತ. ಅದನ್ನು ವಿಮರ್ಶಿಸುವ ಅರ್ಹತೆಯಾಗಲಿ ತಿಳಿವಳಿಕೆಯಾಗಲೀ ಇಲ್ಲ. ಕದನ ವಿರಾಮದ ಧೂರ್ತ ನಾಟಕವನ್ನು ಆಡಿದ ಪಾಕಿಸ್ಥಾನವನ್ನು ವಿಮರ್ಶಿಸುವ ಯೋಗ್ಯತೆ ಇಲ್ಲದವರು.....ವಿಕೃತ ಮನೋಭಾವದಲ್ಲಿ ನಮ್ಮನ್ನು ವಿಮರ್ಶಿಸುತ್ತಾರೆ. ಇದ್ದಕ್ಕಿಂತ ದೊಡ್ಡ ಶತ್ರುಗಳು ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕಿಲ್ಲ. ಮೊದಲು ಇಂತಹ ಮನೋಭಾವ ಬದಲಾಗಬೇಕು. ಗಡಿಯಲ್ಲಿ ಹಾರಿದ ಒಂದು ಮಿಸೈಲಿನ ಒಂದು ತುಂಡು ಇವರ ತಲೆಯ ಮೇಲೆ ಬಿದ್ದರೆ ಭಾರತ ಒಂದಷ್ಟು ಸುರಕ್ಷಿತ.
No comments:
Post a Comment