Saturday, November 29, 2025

ಗಾಯತ್ರಿ ಪುರಶ್ಚರಣ


 


ಇತಿ ತೇ ಜ್ಞಾನಮಾಖ್ಯಾತಂ ಗುಹ್ಯದ್ಗುಹ್ಯತರಂ ಮಯಾ|

ವಿಮೃಶ್ಯೈ  ತದಶೇಷೇಣ ಯಥೇಚ್ಛಸಿ ತಥಾ ಕುರು||

(ಹೀಗೆ ನಿನಗೆ ರಹಸ್ಯಕ್ಕಿಂತಲೂ ರಹಸ್ಯವಾದ ಜ್ಞಾನವನ್ನು ನನ್ನಿಂದ ವಿರಸಲ್ಪಟ್ಟಿದೆ. ಇದನ್ನು ಪೂರ್ಣವಾಗಿ ವಿಮರ್ಶಿಸಿ ವಿವೇಚಿಸಿ ನಿನ್ನಿಚ್ಛೆಯಂತೆ ಆಚರಿಸು. )

ಇದು ಭಗವದ್ಗೀತೆಯ ಅಂತ್ಯದಲ್ಲಿ ಹೇಳಿರುವ ಶ್ಲೋಕಗಳಲ್ಲಿ ಒಂದು. ಭಗವಂತನು ಅದುವರೆಗೆ ಗೀತೆಯ ಸಾರವನ್ನು ಅರ್ಜುನನಿಗೆ ಬೋಧಿಸಿ ಆನಂತರ ವಿವೇಚನೆ ಮಾಡಿ ಇದನ್ನು ಅನುಸರಿಸು ಅಂತ ಹೇಳುತ್ತಾನೆ. ಭಗವಂತ ಸ್ವತಃ ಹೇಳಿದರೂ ಅದನ್ನು ಅರಿತು ವಿವೇಚಿಸುವ ಅವಕಾಶವನ್ನು ಅರ್ಜುನನಿಗೆ ಕೊಡುತ್ತಾನೆ. ಅಂದರೆ ಪ್ರತಿಯೊಂದು ಕಾರ್ಯವನ್ನು ಅರಿತು ವಿವೇಚಿಸಿ ಮಾಡಬೇಕು ಎನ್ನುವುದೇ ಸಾರ.  ಯಾವುದೇ ಕಾರ್ಯವೂ ಅರಿತು ವಿವೇಚಿಸಿ ಮಾಡಿದಾಗ ಅದು ಅರ್ಥ ಪೂರ್ಣವಾಗುತ್ತದೆ.  ಇಲ್ಲದೇ ಇದ್ದರೆ ಅದು ಕೇವಲ ಕಾಟಾಚಾರದ ಕೆಲಸವಾಗಿ ಪರಿಣಾಮಕಾರಿಯಾಗದೇ ಉಳಿಯುತ್ತದೆ. ಕಾಟಾಚಾರದಲ್ಲಿ ಮಾಡುವ ಕೆಲಸದಲ್ಲಿ ಚಿತ್ತ ವೃತ್ತಿಯಲ್ಲಿ ನಿರತವಾಗಿ ಅದು ಏಕಾಗ್ರತೆಯನ್ನು ಕೊಡದೇ ಕಾರ್ಯರೂಪದಲ್ಲಿ ಅದು ಪರಿಣಾಮಕಾರಿಯಾಗುವುದಿಲ್ಲ. ನಾವು ಯಾವುದಕ್ಕಾಗಿ ಸಂಕಲ್ಪಿಸಿ ಮಾಡುತ್ತೇವೆ ಅದು ಫಲಕಾರಿಯಾಗುವುದಿಲ್ಲ. ದೇವರನ್ನು ಪ್ರಾರ್ಥಿಸುವ ಮೊದಲು ದೇವರನ್ನು ಅರಿತು ಆನಂತರ ಪ್ರಾರ್ಥಿಸಿದರೆ ಪ್ರಾರ್ಥನೆಯಲ್ಲಿ ಏಕಾಗ್ರತೆ ಬರುತ್ತದೆ. ನಮ್ಮ ಎಷ್ಟೋ ಕಾರ್ಯಗಳು ಯಾರೋ ಹೇಳಿದ್ದಾರೆ, ಯಾರದೋ ಆದೇಶ ಇದೆ ಅಂತ ನಾವು ಮಾಡುವಾಗ ಆ ಕಾರ್ಯದ ಆಳ ವಿಸ್ತಾರವನ್ನು ತಿಳಿದಿರುವುದಿಲ್ಲ. ಅದರ ಪಾವಿತ್ರ್ಯತೆಯನ್ನು ತಿಳಿಯದೆ ತೋಚಿದಂತೆ ಮಾಡುವುದರಿಂದ ಅದು ಕೇವಲ ಕಾಟಾಚಾರ ಮತ್ತು ಢಂಬಾಚಾರವಾಗುತ್ತದೆ.  ಹಾಗಾಗಿ ಗಾಯತ್ರೀ ಪುರಶ್ಚರಣದ ಈ ದಿವ್ಯ ಕಾರ್ಯದಲ್ಲಿ ಗಾಯತ್ರಿ ಮಂತ್ರದ ಬಗ್ಗೆ ಪ್ರಾಥಮಿಕ ಅರಿವನ್ನು ಯಥಾ ಶಕ್ತಿ ಯಥಾ ಜ್ಞಾನದಿಂದ ವಿವರಿಸುವ ಒಂದು ಪ್ರಯತ್ನ ಇದು. 

ಗಾಯತ್ರಿ ಮಂತ್ರ ವಾಸ್ತವದಲ್ಲಿ ಇದು ಗಾಯತ್ರಿ ಮಂತ್ರ ಎನ್ನುವುದು ಕೇವಲ ವಾಡಿಕೆಯಲ್ಲಿ ಬಂದ ಹೆಸರಾಗಿದೆ. ಇದು ಮೂಲತಃ ಸವಿತೃ ಮಂತ್ರ.  ಉದಾಹರಣೆಗೆ..ಗಣಪತಿ ಸ್ತುತಿ ಇದೆ, ಗಣಾನಾಂತ್ವಾ ಗಣಮತಿಂ ಹವಾ ಮಹೆ ಎನ್ನುವ ಮಂತ್ರ ಅಥವಾ ಗಜಾನನಂ ಭೂತ ಗಣಾಧಿ ಸೇವಿತಂ ಎನ್ನುವ ಶ್ಲೋಕ ಯಾವ ದೇವರಸ್ತುತಿ ಎಂದು ಅರ್ಥವಾಗುತ್ತದೆ. ಅದೇ ರೀತಿ ಸರ್ವ ಮಂಗಲ ಮಾಂಗಲ್ಯೆ..ಇದು ದೇವಿ ಸ್ತುತಿ ಎಂದು ಹೇಳಬಹುದು. ಯಾಕೆಂದರೆ ಅಲ್ಲಿ ಆಯಾಯಾ ದೇವರ ಹೆಸರು ಉಲ್ಲೇಖವಾಗುತ್ತದೆ. ಆದರೆ " ಓಂ ಭೂರ್ಭುವಸ್ವಃ ತತ್ಸ ವಿತುರ್ ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋಯೋನಃ ಪ್ರಚೋದಯಾತ್| " ಇಲ್ಲಿ ಗಾಯತ್ರಿ ದೇವಿಯ ಅಥವಾ ಇನ್ನು ಯಾವುದೇ ಸ್ತ್ರೀ ದೈವದ ಹೆಸರೇ ಉಲ್ಲೇಖಿಸಲ್ಪಡುವುದಿಲ್ಲ. ತತ್ ಸವಿತಾ  ಜಗತ್ತನ್ನು ಸೃಷ್ಟಿಸಿದ ತಂದೆಯೇಅಂತ ಸೂರ್ಯನ ಉಲ್ಲೇಖವಾಗುವುದರಿಂದ ಇದನ್ನು ಮೂಲತಃ  ಸವಿತೃ ಮಂತ್ರ ಅಂತಲೇ ಕರೆಯುವುದು. ವಾಡಿಕೆಯಲ್ಲಿ ಇದು ಗಾಯತ್ರೀ ಮಂತ್ರವಾಗಿ ಪರಿಗಣಿಸಲ್ಪಟ್ಟಿತು. 

ಬ್ರಹ್ಮ ಋಷಿ ವಿಶ್ವಾಮಿತ್ರ ಈ ಮಂತ್ರದ ದೃಷ್ಟಾರ. ಹಾಗಾಗಿ ಗಾಯಂತ್ರಿ ಮಂತ್ರದ ಜಪಾನುಷ್ಠಾನದಲ್ಲಿ ವಿಶ್ವಾಮಿತ್ರನನ್ನು ಸ್ಮರಿಸುವುದು ನಿಯಮ. ಈ ಮಂತ್ರದ ದೃಷ್ಟಾರನಾದ ಬಳಿಕ ಕೌಶಿಕ ವಿಶ್ವಾಮಿತ್ರನಾದ. ಮಿತ್ರ ಅಂದರೆ ಸೂರ್ಯನನ್ನು ಉದ್ದೇಶಿಸಿ ಹೇಳುವುದು. ಮಿತ್ರ ಎಂದರೆ ಜ್ಞಾನವನ್ನು ಕೊಡುವವನು.  ಮಿತಿ ಅಂದರೆ ಜ್ಞಾನ ಬೆಳಕಿನ ಮೂಲಕ ಅಂದರೆ ಜ್ಯೋತಿ ಸ್ವರೂಪದ ಮೂಲಕ ಅರಿವನ್ನು ಒದಗಿಸುವುದೇ ಈ ಮಂತ್ರದ ತಾತ್ಪರ್ಯ. ಭಗವಂತ ಎಂದರೆ ಜ್ಯೋತಿ ಸ್ವರೂಪ. ಆದು ಈ ಮಂತ್ರದಲ್ಲಿ ವ್ಯಕ್ತವಾಗುತ್ತದೆ. ಜಗತ್ತಿನ ಎಲ್ಲ ಜ್ಯೋತಿಗೂ ಮೂಲ ಸ್ವರೂಪ ಭಗವಾನ ಭಾಸ್ಕರ. ದ್ವಾದಶಾದಿತ್ಯರರಲ್ಲಿ ಎರಡು ಜನ ಮೂಲ ಸ್ವರೂಪಗಳು. ಒಂದು ಸೂರ್ಯ ಇನ್ನೊಂದು ವರುಣ ದೇವ. ಸೂರ್ಯ ಹಗಲಿನ ದೇವತೆಯಾದರೆ ವರುಣ ರಾತ್ರಿಯ ದೇವತೆ. ಹಾಗಾಗಿ ಮುಂಜಾನೆ ಸೂರ್ಯನಿಗೆ ಅರ್ಘ್ಯ ಸಮರ್ಪಿಸಿದರೆ ಸಾಯಂ ಸಂಧ್ಯೆಯಲ್ಲಿ ವರುಣನಿಗೆ ಅರ್ಘ್ಯ ಸಲ್ಲಿಸುವುದು. ಸಮದ್ರವನ್ನೇ ಆರಿಸಿ ಹೀರಿಕೊಳ್ಳುವ ಸೂರ್ಯನಿಗೆ ಒಂದು ಬೊಗಸೆ ಅರ್ಥ್ಯದಿಂದ ಪರಿಣಾಮ ಏನು ಎಂದು ಯೋಚಿಸಿದರೆ ಗಾಯತ್ರಿ ಮಂತ್ರದ ಮಹತ್ವ ಅರಿವಾಗುತ್ತದೆ.  ಹೀಗೆ ಈ ಮಂತ್ರದ ವೈಶಿಷ್ಟ್ಯತೆ ಸಾಕಷ್ಟು ಇದೆ. ಇದನ್ನು ಅಧ್ಯಯನ ಮಾಡಿ ತಿಳಿದುಕೊಳ್ಳಬಹುದು.  ನನ್ನದೇನೂ ಇಲ್ಲವೂ ನಿನ್ನದೇ ಎನ್ನುವುದರ ಸಂಕೇತವೇ ಈ ಅರ್ಘ್ಯ ಸ್ಸಲ್ಲಿಕೆ. ಇದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ. ಹಾಗಾಗಿ ಸಂಧ್ಯಾ ವಂದನೆ  ಆಚರಿಸುವ ಉದ್ದೇಶ ಕೇವಲ ನಮ್ಮ ದುರಿತವನ್ನು ಕಳೆಯುವುದು ಹೊರತು ಇಲ್ಲಿ ಯಾವುದೇ ಬಯಕೆಗಳು ಹರಕೆಗಳು ಇರುವುದಿಲ್ಲ. ಇದರ ಸಂಕಲ್ಪದಲ್ಲಿ ಮಮೋಪಾತ್ತ ದುರಿತಕ್ಷಯದ್ವಾರ  ಸಂಕಲ್ಪಿಸಿ ಹೇಳುವುದು ಕ್ರಮ. ಸಂಧ್ಯಾವಂದನೆ ಬೇರೆ ಯಾವುದೇ ಫಲಾಪೇಕ್ಶೆಯಲ್ಲಿ ಮಾಡದೇ ಇದು ನಿತ್ಯ ಆಚರಿಸಲೇಬೇಕಾದ ಕರ್ಮ ಎನಿಸಲ್ಪಡುತ್ತದೆ. 

ಓಂ ಭೂರ್ ಭುವ ಸ್ವಃ ಅಂದರೆ ಇದು ಮೂರು ವ್ಯಾಹೃತಿ ಅಂತ ಕರೆಯಲಾಗುತ್ತದೆ. ಓಂ ಕಾರದ ಬೀಜಾಕ್ಷರದಿಂದ ತೊಡಗಿ, ಭೂ.. ಅಂದರೆ ಭೂಮಿ, ಭುವಃ ಅಂದರೆ ಆಕಾಶ, ನಂತರ ಸ್ವಃ ಅಂದರೆ ಸ್ವರ್ಗ...ಇದು ಒಂದು ಜ್ಯೋತಿಸ್ವರೂಪನಾದ ಭಗವಂತನಲ್ಲಿ ಬೇಡಿಕೊಳ್ಳುವುದು.. ಭೂಮಿ ಆಕಾಶ ಸ್ವರ್ಗದಲ್ಲಿ ತತ್ ಸವಿತಾ ..ಅಂದರೆ ಆ ಸೂರ್ಯನಲ್ಲಿ ತಂದೆಯನ್ನು ಕಂಡು ಹೇಳುವುದು, ವರೇಣ್ಯಂ ಅಂದರೆ ಅತ್ಯಂತ ಶ್ರೇಷ್ಠವಾದ ಭರ್ಗೋ ಅಂದರೆ ಜ್ಯೋತಿ ಸ್ವರೂಪ ಆ ಜ್ಯೋತಿಯನ್ನೆ ದೇವ ಎಂದು ಪರಿಗಣಿಸಿ ಆ ಪರಬ್ರಹ್ಮನ ಕುರಿತಾಗಿ ತನ್ನ ಶ್ರೇಯಸ್ಸಿಗಾಗಿ ಆ ಜ್ಞಾನವನ್ನು ಪ್ರಚೋದಿಸು ಅಂತ ಈ ಮಂತ್ರದ ತಾತ್ಪರ್ಯ. ಪ್ರಚೋದಯಾತ್ ಎನ್ನುವುದಕ್ಕೆ ಆ ಜ್ಯೋತಿ ಸ್ವರೂಪಕ್ಕೆ ನಮಸ್ಕರಿಸುತ್ತೇನೆ ಅಂತಲೂ ಇದೆ. .  ಸೂರ್ಯನ ಬೆಳಕಿನಲ್ಲಿ ಭಗವಂತನು ಅಡಗಿದ್ದಾನೆ. ಆ ಬೆಳಕನ್ನು ಸರಿಸಿ ಭಗವಂತನ ಸ್ವರೂಪವನ್ನು ತೋರಿಸು ಅಂತಲೂ ಈ ಮಂತ್ರದ ವಿಶ್ಲೇಷಣೆ ಇದೆ. ಭಗವಂತ ಎಂದರೆ ಜ್ಞಾನಸ್ವರೂಪ ಆ ಜ್ಞಾನದ  ದರ್ಶನವೇ ಈ ಗಾಯತ್ರೀ ಮಂತ್ರ. ಧಿಯಃ ಯಃ ನಃ ಪ್ರಚೋದಯಾತ್ ಆ ಧೀಶಕ್ತಿ ನನ್ನ ಮನಸ್ಸಿನಲ್ಲಿ ಇಳಿದು ನನ್ನ ಮನಸ್ಸಿನಲ್ಲಿ ಒಳ್ಳೆಯದು ಏನಿದೆಯೋ ಅದಕ್ಕೆ ಪ್ರಚೋದನೆಯಾಗಲಿ. 

  ಗಾಯತ್ರೀ ಮಂತ್ರದ ವಿಶೇಷತೆ ಎಂದರೆ ದೈವದ ಸ್ವರೂಪವನ್ನು ಪೂರ್ಣವಾಗಿ ನಮ್ಮ ಕಲ್ಪನೆಗೆ ಬಿಟ್ಟು ನಮ್ಮ ಆತ್ಮಸ್ವರೂಪವನ್ನೇ ನಾವು ಜಾಗೃತಗೊಳಿಸಿ ಅದರಲ್ಲೇ ಭಗವಂತನನ್ನು ಕಾಣುವುದಾಗಿದೆ. ಸಮುದ್ರದ ಮುಂದೆ ನಿಂತು ಸಮುದ್ರವನ್ನು ನೋಡಿದಂತೆ. ಕೇವಲ ನಮ್ಮ ದೃಷ್ಟಿಗೆ ಎಷ್ಟು ಸಾಧ್ಯವೋ ಅಷ್ಟು ಮಾತ್ರ ನಮ್ಮಿಂದ ನೋಡಬಹುದು. ಪೂರ್ಣವಾದ ಸಮುದ್ರವನ್ನು ನೋಡುವುದಕ್ಕೆ ನಮಗೆ ಸಾಧ್ಯವಾಗುವುದಿಲ್ಲ. ಆದರೆ ಮನಸ್ಸಿನಿಂದ ಗ್ರಹಿಸಬಹುದು.  ಅದಕ್ಕೆ ಜ್ಞಾನ ಬೇಕು. 

ಇನ್ನು ಇಪ್ಪತ್ತನಾಲ್ಕು ಅಕ್ಷರಗಳು ಗಾಯತ್ರೀ ಮಂತ್ರದಲ್ಲಿ ಇದೆ. ಇವುಗಳ ಬಗ್ಗೆ ಹಲವು ವ್ಯಾಖ್ಯಾನಗಳು ಅಧ್ಯಯನದಲ್ಲಿ ವೇದ್ಯವಾಗುತ್ತದೆ. ಗಾಯತ್ರೀ ಮಂತ್ರದ ಒಂದೊಂದು ಅಕ್ಷರದ ಉಚ್ಚಾರಣೆಯ ಪರಿಣಾಮ ನಮ್ಮ ದೇಹದಲ್ಲಿ ಮನಸ್ಸಿನಲ್ಲಿ ಹಲವು ಪರಿಣಾಮವನ್ನು ಉಂಟು ಮಾಡುತ್ತದೆ. ಹನ್ನೊಂದು ಇಂದ್ರಿಯಗಳು, ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯದ ಮೇಲೆ ಇದು ನಿಯಂತ್ರಣ ಸಾಧಿಸುತ್ತದೆ.  ನಮ್ಮ ದೇಹದ ನಾಡಿಯ ಮೇಲೆ ಪರಿಣಾಮ ಬೀರುತ್ತದೆ. ನಾಡಿಯಲ್ಲಿ ಚೈತನ್ಯ ಪ್ರಚೋದಿಸಲ್ಪಡುತ್ತದೆ. ನಮ್ಮ ದೇಹದಲ್ಲಿ 72000 ನಾಡಿಗಳು ಇವೆ. ಅಂದರೆ ಒಂದು ಸಾವಿರ ಸಂಖ್ಯೆಯಲ್ಲಿ  ಗಾಯತ್ರೀ  ಜಪ ಮಾಡಿದಾಗ  ಇಪ್ಪತ್ತನಾಲ್ಕು ಸಾವಿರ  ನಾಡಿ ಶಕ್ತಿಯನ್ನು ಪಡೆದು ಕೊಂಡು ಜಾಗೃತವಾಗುತ್ತದೆ.  ಮೂರು ಹೊತ್ತು ಒಂದು ಸಾವಿರದಂತೆ ದಿನಕ್ಕೆ ಮೂರು ಸಾವಿರ ಮಂತ್ರ ಜಪವನ್ನಷ್ಟೆ ಮಾಡುವುದಕ್ಕೆ ಮನುಷ್ಯ ದೇಹಕ್ಕೆ ಸಾಮಾರ್ಥ್ಯವಿರುತ್ತದೆ. ಅದಕ್ಕಿಂತ ಹೆಚ್ಚಿಗೆ ಜಪವನ್ನು ಮಾಡಿದರೆ ಆ ಶಕ್ತಿಯನ್ನು ತಾಳಿಕೊಳ್ಳುವುದಕ್ಕೆ ಮನುಷ್ಯನಿಗೆ ಸಾಧ್ಯವಿಲ್ಲ. ಇದು ಹಲವು ಸಲ ಚಿತ್ತ ವಿಕಲ್ಪಕ್ಕೆ ಇನ್ನಿತರ ತೊಂದರೆಗೂ ಕಾರಣವಾಗಬಲ್ಲುದು. ಇದಕ್ಕೆ ಹಲವು ಸಾಕ್ಷಿಗಳು ಇವೆ.  ಹಾಗಾಗಿ ಗಾಯತ್ರಿ ಮಂತ್ರದ ಜಪವನ್ನು ದಿನಕ್ಕೆ ಮೂರು ಸಾವಿರಕ್ಕಿಂತ ಅಧಿಕ ಹೇಳುವುದು ಅಷ್ಟು ಸೂಕ್ತ ಅಲ್ಲ ಅಂತ ವಿದ್ವಾಂಸರು ಹೇಳುತ್ತಾರೆ

ಇನ್ನು ಈ ಗಾಯತ್ರಿ ಮಂತ್ರದ ಅರ್ಥವನ್ನು ಅರಿತು ನಾವು ಇದರ ಜಪವನ್ನು ಮಾಡಿದರೆ ನಮಗೆ ಅದರ ಮಹತ್ವದ ಅರಿವಾಗಿ ಅದರಲ್ಲಿ ಏಕಾಗ್ರತೆ ಒದಗಿ ಬರುತ್ತದೆ ಮಾತ್ರವಲ್ಲ ಅದು ಕೇವಲ ಕಾಟಾಚಾರದ ಜಪವಾಗಿರುವುದಿಲ್ಲ. ವಾಸ್ತವದಲ್ಲಿ ನಮ್ಮ ಸಂಧ್ಯಾವಂದನೆಯಂತಹ ನಿತ್ಯ ಕರ್ಮಗಳು ದಿನಾ ಚರ್ವಿತ ಚರ್ವಣವಾಗುವುದರಿಂದ ಮತ್ತು ಅದರ ಬಗ್ಗೆ ವಿವೇಚನೆ ಇಲ್ಲದಿರುವುದರಿಂದ ಅದು ಕೇವಲ ಕಾಟಾಚಾರವಾಗಿರುತ್ತದೆ. ಆದರೂ ನಿತ್ಯ ಸಂಧ್ಯಾವಂದನೆಯಲ್ಲಿ ಹತ್ತು ನಿಮಿಷ ಧ್ಯಾನ ಪ್ರಕ್ರಿಯೆಯನ್ನು ಸೇರಿಸಿದರೆ ಅದು ಪ್ರತಿನಿತ್ಯ ಹೊಸ ಅನುಭವವನ್ನು ಕೊಡುವುದರಿಂದ ಚರ್ವಿತ ಚರ್ವಣವಾಗುವುದಿಲ್ಲ. 

  ಸಾಮಾನ್ಯವಾಗಿ ನಿತ್ಯ ಸಂಧ್ಯಾವಂದನೆಯಲ್ಲಿ ನೂರ ಎಂಟು ಸಲ ಗಾಯತ್ರಿ ಜಪ ಮಾಡಬೇಕು ಎನ್ನುವುದಿದೆ. ಆದರೆ ಸಮಯದ ಅಭಾವದಿಂದ ಇನ್ನಿತರ ಕಾರಣಗಳಿಂದ ಕೇವಲ ಹತ್ತು ಸಲವಾದರೂ ಹೇಳಬೇಕು ಎನ್ನುವುದು ನಿಯಮ. ಆದರೆ ಇದು ಹೇಗಾಗಿದೆ ಎಂದರೆ,  ಹತ್ತಕ್ಕಿಂತ ಒಂದು ಬಾರಿಯೂ ಹೆಚ್ಚಿಗೆ ಹೇಳದೆ ಇರುವಂತಹ ಕಾಟಾಚಾರ ಬಳಕೆಯಲ್ಲಿದೆ. ಇದರಿಂದ ಏನು ಸತ್ಫಲ ಸಿಗಬಹುದು?  ಇನ್ನು ಸಂಧ್ಯಾವಂದನೆ ಆಚರಿಸುವ ರೀತಿಯೂ ಅದೇ ರೀತಿಯಲ್ಲಿ   ಎನೋ ಒಂದು ಬೆಳಗ್ಗೆ ಹತ್ತು ನಿಮಿಷದ ಕೆಲಸ ಅಂತ ಸೀಮಿತ ಗೊಳಿಸುತ್ತಾರೆ. ಮುಖ್ಯವಾಗಿ ಏಕಾಗ್ರತೆ ಇಲ್ಲ. ಸ್ವಚ್ಚ ಮನಸ್ಥಿತಿ ಇಲ್ಲ. ಕೇವಲ ಯಾಂತ್ರಿಕ ಕ್ರಿಯೆ. ಸ್ನಾನ ಮಾಡಿ,  ಮಡಿಯಲ್ಲಿ ಯಾರನ್ನುಮುಟ್ಟದೇ ಶುಭ್ರವಾಗಿ , ಮನಸ್ಸಿನಿಂದಲು ಅಷ್ಟೇ ಶುಭ್ರವಾಗಿ ಯಾವುದೇ ಮನೋವಿಕಾರವಿಲ್ಲದೇ ಇದನ್ನು ಮಾಡಬೇಕು. ಮಡಿ ಎಂದರೆ ಭಗವಂತನಿಗೆ ಸಮೀಪವಾಗುವದು ಎಂದರ್ಥ. ಮಡಿ ಕೇವಲ ದೇಹದಿಂದ ಮಾತ್ರವಲ್ಲ ಮನಸ್ಸಿನಿಂದಲೂ ಮಡಿಯಾಗಬೇಕು. ಏಕಾದಶ ಇಂದ್ರಿಯಗಳಿಂದಲೂ ನಾವು ಪರಿಶುದ್ದರಾಗಬೇಕು.  ಮನುಷ್ಯನ ಜನ್ಮವೇ ಪರಿಶುದ್ದಿಯೆಡೆಗೆ ಸಾಗುವ ಅರ್ಥವಿರುವುದರಿಂದ ಮಡಿ ಎಂಬುದಕ್ಕೆ ವಿಶೇಷ ಮಹತ್ವ ಸನಾತನ ಧರ್ಮ ಸಂಸ್ಕೃತಿಯಲ್ಲಿದೆ. ಸಂಧ್ಯಾವಂದನೆ ಇದು ಶ್ರದ್ಧೆಯಿಂದ ಮಾಡುವ ಕೆಲಸ. ಆದರೆ ನಮ್ಮ ಜೀವನ ಶೈಲಿ ಹೇಗಾಗಿದೆ ಎಂದರೆ,  ಸಂಧ್ಯಾವಂದನೆ ಸಮಯ ಇರುವಾಗ ಮಾಡುವ ಕರ್ಮವಾಗಿದೆ. ಜನಿವಾರ ಅವಶ್ಯ ಇರುವಾಗ ಧರಿಸುವ ಆಭರಣವಾಗಿದೆ.  ಅದನ್ನು ಆಭರಣ ಅಂತ ಉಪಮೆ ಕರಿಸುವುದು ತಪ್ಪು.  ತೆಗೆಯಲೇ ಬಾರದು ಅದೂ ಭಾರವಾಗುವುದಾದರೆ ಬ್ರಾಹ್ಮಣ್ಯ ಎಂಬ ಶಬ್ದಕ್ಕೆ ಅರ್ಥ ಎಲ್ಲಿಯದು? ಇನ್ನು ಸಂಧ್ಯಾವಂದನೆ ಆಚರಿಸುವಾಗಲೂ ಯಾರಲ್ಲೋ ಮಾತನಾಡುತ್ತ ಮೊಬೈಲ್ ಗೆ ಅಥವಾ ಇನ್ನಿತರ ಕರೆಗಳಿಗೆ ಕಿವಿಗೊಡುತ್ತ ಬಿಡುವಾದಾಗ ಮಾಡುವ ಕಾರ್ಯ ಸಂಧ್ಯಾವಂದನೆಯಾಗಿದೆ. ಬೆಳಗ್ಗೆ ಎಚ್ಚರವಾದ ತಕ್ಷಣ ಯಾರಲ್ಲೂ ಮಾತನಾಡದೆ ಪರಿಶುದ್ದನಾಗಿ ಸಂಧ್ಯೆಯನ್ನು ಮಾಡಬೇಕು. ಅದು ಆದ್ಯ ಕರ್ತವ್ಯ.  ದಿನದ ಇಪ್ಪತ್ತನಾಲ್ಕು ಘಂಟೆಗಳಲ್ಲಿ ಹತ್ತು ನಿಮಿಷ ಕೇವಲ ಇದಕ್ಕಾಗಿ ಮೀಸಲಿಡಲಾಗದ ಸ್ಥಿತಿಯಲ್ಲಿ ಸಂಧ್ಯಾವಂದನೆ ಮಾಡುವುದಾದರೆ  ಇದು ಶ್ರದ್ಧೆ ಎನಿಸುವುದಿಲ್ಲ. ಪ್ರಾಣಾಯಾಮ ಅಂತ ಮೂಗಿನಲ್ಲಿ ಕೈ ಹಿಡಿದು ಮಂತ್ರ ಉಚ್ಚರಿಸಿದರೆ ಅದು ಪ್ರಾಣಾಯಾಮವಾಗುವುದಿಲ್ಲ ಎಂಬ ಪರಿಜ್ಞಾನ ನಮ್ಮಲ್ಲಿರಬೇಕು. ಆಚಮನ ಪ್ರಾಣಾಯಾಮದ ವಿಧಾನ ಮತ್ತು ಅದರ ಅರ್ಥವನ್ನು ಮೊದಲು ತಿಳಿಯಬೇಕು. ಅದರ ಉದ್ದೇಶವನ್ನು ಅರ್ಥವಿಸಿಕೊಳ್ಳಬೇಕು. ಇವೆರಡೂ ಅಂತರಂಗವನ್ನು ಶುದ್ಧಿಗೊಳಿಸುವ ಕ್ರಿಯೆಗಳು.  ಗಡಿಬಿಡಿಗೆ ಹೆಗಲ ಮೇಲೆ ಜನಿವಾರ ಅಲ್ಲದೆ ಒಂದು ಶಲ್ಯ ಇರಲೇಬೇಕು. ಇಲ್ಲವಾದರೆ ಅದು ಅಪರ ಕ್ರಿಯೆಯಾಗಿಬಿಡುತ್ತದೆ. ಹಾಗಾಗಿ ಸಂಧ್ಯಾವಂದನೆಯ ಮಹತ್ವ ತಿಳಿಯದೇ ಸಂಧ್ಯಾವಂದನೆ ಮಾಡಿದ ಹಾಗೆ ಗಾಯತ್ರೀ ಜಪವೂ ತನ್ನ ಮಹತ್ವವನ್ನು ಕಳೆದುಕೊಳ್ಳಬಹುದು. ಬ್ರಾಹ್ಮಣ ಎಂದರೆ  ಪರಬ್ರಹ್ಮದ ಅನ್ವೇಷಣೆ.  ಬ್ರಾಹ್ಮಣ  ಅದರ ಅನ್ವೇಷಣೆಯಲ್ಲೇ ಸಾಗುವವನು ಎಂದು ತಿಳಿಯಲಾಗುತ್ತದೆ. 

ಯಾವುದೇ ಕಾರ್ಯವಾದರೂ ನಾವು ಅದರ ಮಹತ್ವವನ್ನು ಅರಿತು ಶ್ರಧ್ದೆಯಿಂದ ಆಚರಿಸಬೇಕು. ಜ್ಞಾನಸ್ವರೂಪವೇ ಭಗವಂತ ಸ್ವರೂಪ. ಅದನ್ನೇ ಜ್ಞಾನೊದಯ ಅಂತ ಕರೆಯುತ್ತಿದ್ದರು. ಇದನ್ನು ತಿಳಿಯದೇ ಮಾಡಿದರೆ ಅದು ಕೇವಲ ಕಾಟಾಚಾರವಾಗುತ್ತದೆ. ಬ್ರಾಹ್ಮಣ ಎಂದರೆ ಕೇವಲ ಬ್ರಾಹ್ಮಣನಾಗಿ ಜನ್ಮದಿಂದ ಬರುವ ಪದವಿಯಲ್ಲ. ಆಚರಣೆಯಿಂದ ಲಭ್ಯವಾಗುವಂತಹ ಪದವಿ. ಜನ್ಮದಿಂದ ಕ್ಷತ್ರಿಯನಾಗಿ ತನ್ನ ಸಾಧನೆಯಿಂದ ಬ್ರಹ್ಮ ಪದವಿಗೇರಿದ ವಿಶ್ವಾಮಿತ್ರನೇ ಇದಕ್ಕೆ ಸಾಕ್ಷಿ. ನನ್ನ ಪ್ರಕಾರ ಮನುಷ್ಯನಾದವನು ನಾಲ್ಕು ವಿಷಯಗಳಲ್ಲಿ ಕಾಟಾಚಾರವನ್ನು ತೋರಬಾರದು. ಒಂದು ಸಂಧ್ಯಾವಂದನೆ ಜತೆಯಲ್ಲಿ   ಯೋಗಾಭ್ಯಾಸ ಇವೆರಡೂ ಮನಸ್ಸನ್ನೂ ಬದುಕನ್ನೂ ರೂಪಿಸುವ ವಿಷಯಗಳು ಇನ್ನು ಮೂರನೆಯದು ಪಿತೃ ಕಾರ್ಯ ಪ್ರತಿಯೊಬ್ಬನೂ ಅದರಲ್ಲಿ ಬ್ರಾಹ್ಮಣನೆನಿಸಿದನು ಪಿತೃಗಳಿಗೆ ಪಿಂಡದಾನವನ್ನು ಮಾಡಬೇಕು. ಮತ್ತು ತಿನ್ನುವ ಆಹಾರ ಮತ್ತು ಅದನ್ನು ತಯಾರಿಸುವುದು. ಇವುಗಳು ಕೇವಲ ಕಾಟಾಚಾರವಾದರೆ ಮನುಷ್ಯನ ಬದುಕಿಗೆ ಅರ್ಥವೇ ಇರುವುದಿಲ್ಲ. 

ಮನು ಎಂದರೆ ಮನನ.. ಮನಸ್ಸಿನ ಒಳಗಿನ ಅರಿವು. ಮನುಷ್ಯನಿಗೆ ಮಾತ್ರವೇ ಈ ಯೋಚನೆಯ ಶಕ್ತಿ ಇರುತ್ತದೆ. ಮನು ಇದರ ಬಗ್ಗೆ ತಿಳಿಯದೇ ಮೂರ್ಖರಂತೆ ಮನುವಿನ  ಬಗ್ಗೆ ವಿಚಿತ್ರ ವ್ಯಾಖ್ಯಾನಗಳನ್ನು ಮಾಡುತ್ತಾರೆ. ಮನು ಎಂದರೆ ತಿಳಿದುಕೊ ಅಂದರೆ ಇದು ಜ್ಞಾನದ ಸಂಕೇತ. ಎಲ್ಲಿ ಅರಿವು ಇರುತ್ತದೋ ಅಲ್ಲಿ ಭಗವಂತನಿದ್ದಾನೆ. 

ಮೇಲೆ ಹೇಳಿದ ವಿಷಯಗಳು ಕೇವಲ ನನ್ನ ಜ್ಞಾನಕ್ಕೆ ಸೀಮಿತವಾದ ವಿಚಾರಗಳು. ಈ ಜ್ಞಾನಕ್ಕೆ ಮಿಗಿಲಾಗಿ ಇನ್ನೂ ಇವೆ. ಹೇಳಿದ ವಿಚಾರಗಳಲ್ಲಿ ತಪ್ಪು ಇದ್ದರೂ ಅದರ ಹಿಂದೆ ಇರುವ ಭಾವ ಒಂದೇ ನಾವು ಭಗವಂತನನ್ನು ಅರಿತು ಆರಾಧಿಸುವುದರಲ್ಲಿ ಹೆಚ್ಚು ಪರಿಣಾಮವಿದೆ. ನಮ್ಮ ಹೆತ್ತ ಅಪ್ಪ ಅಮ್ಮನನ್ನು ಅರಿತು ನಾವು ಅವರಲ್ಲಿ ನಡೆದುಕೊಳ್ಳುವಂತೆ ಅದರಲ್ಲಿ ಬದುಕಿನ ಸಾರ್ಥಕತೆ ಇರುತ್ತದೆ. 


ಓಂ ಶಾಂತಿಃ ಶಾಂತಿಃ ಶಾಂತಿಃ


 


Wednesday, November 26, 2025

ಭಗವಂತನ ಅರಿವು



ಭಕ್ತ ಪ್ರಹ್ಲಾದನ ಕಥೆ ಪುರಾಣದಲ್ಲಿ ಕೇಳಿರಬಹುದು. ಹರ ಎನ್ನುವದರಲ್ಲೂ ಹರಿಯನ್ನೇ ಕಾಣುವ ಪ್ರಹ್ಲಾದನ ನಿರ್ಭೇದ ಭಕ್ತಿ ಒಂದು ಕಡೆ. ಹರನೊಬ್ಬನೇ ಹರಿ ಇಲ್ಲ ಎನ್ನುವ ಹಿರಣ್ಯ ಕಶಿಪುವಿನ ವಿಕಲ್ಪದ ಭಕ್ತಿ ಇನ್ನೊಂದೆಡೆ.  ಭಗವಂತನ ಪೂರ್ಣ ಅರಿವು ಪ್ರಹ್ಲಾದನನ್ನು ಭಕ್ತನ ಪದವಿಗೇರಿಸಿದರೆ, ಹಿರಣ್ಯ ಕಶಿಪುವಿನ ಅಪೂರ್ಣ ಭಕ್ತಿ ನರಸಿಂಹನ ಶಿಕ್ಷೆಗೆ  ಬಲಿಯಾಗುವಂತೆ ಮಾಡಿತು. ಹಿರಣ್ಯ ಕಶಿಪುವಾಗಲಿ , ಹಿರಣ್ಯಾಕ್ಷನಾಗಲೀ ಅಪ್ರತಿಮ ಭಕ್ತಿಯನ್ನು ತೋರಿದವರು. ಅಖಂಡ ತಪಸ್ಸನ್ನು ಮಾಡಿದವರು. ಆದರೆ ಅವರು ಭಗವಂತನನ್ನು ಪೂರ್ಣವಾಗಿ ತಿಳಿಯುವಲ್ಲಿ ಸೋತು ಹೋದರು. ಹರನೊಬ್ಬನೇ ಅಂತ ಹೇಳಿದ ಈ ದಾನವ ಹರನಲ್ಲಿ ಹರಿಯೂ ಇದ್ದಾನೆ ಎಂಬುದನ್ನು ತಿಳಿಯದೇ ಹೋದ. ತಪಸ್ಸು ಹಲವು ದಾನವರು ಮಾಡಿ ದೈವದ ಅನುಗ್ರಹವನ್ನು ಗಳಿಸಿರಬಹುದು. ಆದರೆ ಪರಿಣಾಮ ಮಾತ್ರ ವಿಭಿನ್ನ. 

ವಿಶ್ವಾಮಿತ್ರ ಪಾಯಸವನ್ನು ತಲೆಯಲ್ಲಿಟ್ಟು ಅದು ಆರದಂತೆ ನೋಡಿ ಸಾಕ್ಷಾತ್ಕರವನ್ನು ಪಡೆದ. ಆತನಿಗೆ  ಸವಿತೃ ಮಂತ್ರದ ದರ್ಶನವಾಯಿತು. ಅದೇ ಗಾಯತ್ರಿ ಮಂತ್ರವಾಯಿತು. ವಿಶ್ವಾ ಮಿತ್ರನಿಗೆ  ಇಂದ್ರಿಯದಿಂದ ಅಂದರೆ ಕಣ್ಣಿನಿಂದ ದರ್ಶನ ಎನ್ನುವುದಕ್ಕಿಂತ ಆತನಿಗೆ ಅಂತೀದ್ರಿಯಕ್ಕೆ ದರ್ಶನವಾಯಿತು. ಜ್ಯೋತಿ ಸ್ವರೂಪದ ಆ ಶಕ್ತಿಯನ್ನು ಆತ ಅರ್ಥವಿಸಿಕೊಂಡ. ಭಗವಂತನ ಅಸ್ತಿತ್ವ ಇರುವುದೇ ಭಗವಂತನನ್ನು ಅರಿಯುವಲ್ಲಿ. 

ನಾವು ಯಾವುದೇ ವ್ಯಕ್ತಿಯನ್ನಾಗಲೀ ವಿಷಯವನ್ನಾಗಲಿ ಸರಿ ತಿಳಿದು ಅಧ್ಯಯನ ಮಾಡಿ ನಂಬುವುದರಲ್ಲಿ ಅರ್ಥವಿದೆ. ಆ ನಂಬಿಕೆ ಶಾಶ್ವತವಾಗಿ ವಿಶ್ವಸನೀಯವಾಗಿರುತ್ತದೆ.  ಆದರೆ ಸರಿಯಾದ ಜ್ಞಾನವಿಲ್ಲದೇ ಅರಿವಿಲ್ಲದೇ ನಂಬಿದಾಗ ನಮ್ಮ ತಿಳುವಳಿಕೆಯು ಅಪೂರ್ಣವಾಗಿ ನಿರ್ಧಾರಗಳಿಗೆ ಇನ್ನೊಬ್ಬರನ್ನು ಆಶ್ರಯಿಸಬೇಕಾಗುತ್ತದೆ.  ಧರ್ಮ ದೇವರ ವಿಚಾರವೂ ಬಂದಾಗ ಇದೇ ಮಾತು ಅನ್ವಯವಾಗುತ್ತದೆ. ಭಗವದ್ಗೀತೆಯ ಕೊನೆಯಲ್ಲಿ ವಿಮೃಶ್ಯೇಷೇಣ ಯಥೇಚ್ಚಸಿ ತಥಾ ಕುರು , ವಿವೇಚಿಸಿ ನಿನ್ನಿಷ್ಟದಂತೆ ಮಾಡು ಅಂತ ಭಗವಂತನು ಹೇಳಿರುವಾಗ ವಿವೇಚನೆ ಅರಿವು ಎಂಬುದರ ಮೌಲ್ಯ ತಿಳಿದು ಬರುತ್ತದೆ. ಇಂದು ಅಪೂರ್ಣವಾದ ಅರಿವು ಬಹಳ ಅಪಾಯಕಾರಿ ಪೃವೃತ್ತಿಯನ್ನು ಹುಟ್ಟು ಹಾಕಿದೆ. ದೇವರು ಧರ್ಮದ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲ ತಮಗೆ ತೋಚಿದಂತೆ ಮೂರ್ಖತನದ ವ್ಯಾಖ್ಯಾನವನ್ನು ಹಲವರು ಮಾಡುವುದನ್ನು ಕಾಣುತ್ತಿದ್ದೇವೆ. ಪ್ರತೀ ನಾಸ್ತಿಕತೆ ಹುಟ್ಟುವುದು ಅದು ಎಂಬಲ್ಲಿಂದ. ಅದು ಎಂಬುದನ್ನು ನಂಬಿದರೆ ಅಲ್ಲಿ ನಾಸಿಕತೆ ಇರುವುದೇ ಇಲ್ಲ. ನಾಸ್ತಿಕತೆಯಲ್ಲೂ ಆಸ್ತಿಕತೆಯನ್ನು ಇಲ್ಲ ಎನ್ನುವುದಕ್ಕೆ ಸಾಧ್ಯವಿಲ್ಲ. 

ಪರಮಾತ್ಮನನ್ನು ಅರಿಯಬೇಕಾದರೆ ನಮ್ಮ ಆತ್ಮವನ್ನು ಅರಿಯಬೇಕು. ಕರ್ಮದಿಂದಲೇ ಈ ಅರಿವನ್ನು ಪಡೆಯುವುದಕ್ಕೆ  ಸಾಧ್ಯ. ಮೊದಲಿಗೆ ಕರ್ಮದ ಅರಿವನ್ನು ಗಳಿಸಿ ಆ ಮೂಲಕ ಜ್ಞಾನವನ್ನು ಪಡೆಯಬೇಕು. ನಾವು ಕರ್ಮಭೃಷ್ಟರಾದರೆ ಪರಮಾತ್ಮನನ್ನು ತಿಳಿಯುವುದಕ್ಕೆ ಸಾಧ್ಯವಿಲ್ಲ. ಕರ್ಮವೂ ಜ್ಞಾನದ ಉದ್ದೇಶದಿಂದ ಕೂಡಿರಬೇಕು. ಇಲ್ಲವಾದರೆ ಅಲ್ಲಿ ಸತ್ಪಲ ಇರುವುದಿಲ್ಲ. ಅರಿವಿಲ್ಲದೇ  ಜ್ಞಾನದ ಉದ್ದೇಶವಿಲ್ಲದ ಕರ್ಮವು ಕೇವಲ ಕಾಟಾಚಾರವಾಗುತ್ತದೆ. ಯಾರೋ ಹೇಳಿದ್ದಾರೆ , ಯಾರೋ ಅನುಸರಿಸುತ್ತಾರೆ ಎಂದು, ನಮ್ಮ ಅರಿವಿಗೆ ಯಾರನ್ನೋ ಆಶ್ರ್ಯಯಿಸಿ ಮಾಡುವುದು ಸರಿಯಲ್ಲ. ಮೊದಲಿಗೆ ಕರ್ಮವನ್ನು ಅರಿಯಬೇಕು. 

ಅಂಗಡಿಗೆ ತೀರಾ ಕಡು ಬಡವ ಭಿಕ್ಷುಕನ ರೀತಿ ಬಂದು ಅಲ್ಲಿದ್ದ ಯಾವುದೋ ಒಂದು ವಸ್ತು ಬೇಕು ಎಂದರೆ ಅಂಗಡಿಯವನು ಅದನ್ನು ಕೊಡುವ ಮೊದಲು ಗಟ್ಟಿಯಾಗಿ ಅದರ ಬೆಲೆ ಹೇಳುತ್ತಾನೆ. ಯಾಕೆಂದರೆ, ಅಷ್ಟು ಹಣ ಆತನಲ್ಲಿದೆಯೇ? ಅದನ್ನು ಕೊಂಡು ಕೊಳ್ಳೂವುದಕ್ಕೆ ಆತ ಸಮರ್ಥನೆ?  ಒಂದು ವ್ಯವಹಾರ ಮಾಡುವಾಗ ಗ್ರಾಹಕನ ಬಗ್ಗೆ  ಅರಿವು ಇರಬೇಕಾದದ್ದು ಆತನ ವ್ಯವಹಾರ ಧರ್ಮ. ಪ್ರತೀ ವ್ಯವಹಾರದಲ್ಲೂ ನಾವು ಇದೇ ರೀತಿ ವ್ಯವಹರಿಸುತ್ತೇವೆ.  ಅದೇ ರೀತಿ ನಾವು ಮಿತ್ರರಾಗಿ ಯಾವುದೇ ವ್ಯಕ್ತಿಯನ್ನು ಅಂಗೀಕರಿಸುವಾಗ, ವಿವಾಹ ಮುಂತಾದ ಸಂಬಂಧಗಳನ್ನು ತೊಡಗಿಸುವಾಗ ಸಂಬಂಧಿಸಿದ ವ್ಯಕ್ತಿಗಳ ಪೂರ್ವಾಪರ ತಿಳಿಯುವುದಕ್ಕೆ ಪ್ರಯತ್ನಿಸುತ್ತೇವೆ. ಅದೇ ರೀತಿ ನಾವು ದೇವರನ್ನು ಅರಿತು ಪೂಜಿಸಿದಾಗ ಅದರಲ್ಲಿ ಹೆಚ್ಚು ಶ್ರದ್ಧೆ ಭಕ್ತಿಯನ್ನು ಹೊಂದುವುದಕ್ಕೆ ಸಾಧ್ಯವಾಗುತ್ತದೆ. ಯಾರೋ ಹೇಳಿದರು ಅಥವಾ ಯಾರೋ ಯಾವುದೋ ರೀಯಲ್ಲಿ ಮಾಡಿದರು ಎಂದು ಅದನ್ನು ಅನುಸರಿಸುವುದಕ್ಕಿಂತ ನಿರ್ದಿಷ್ಟವಾಗಿ ದೋಷರಹಿತವಾಗಿ  ಅರಿತು ಮಾಡುವಾಗ  ಅದು ಹೆಚ್ಚು ಅರ್ಥಪೂರ್ಣವಾಗುತ್ತದೆ. ಅದನ್ನೇ ಭಗವದ್ಗೀತೆಯ ಕೊನೆಯಲ್ಲಿ ಹೇಳಿದ್ದು ವಿವೇಚಿಸಿ ನಿನ್ನಿಷ್ಟದಂತೆ ನಿರ್ಧರಿಸು. 

ಪರಮಾತ್ಮನನ್ನು ಅರಿತಾಗ ಆತನ ಅಸ್ತಿತ್ವ ಮತ್ತೂ ಸಮೀಪವಾಗುತ್ತದೆ. ಹಿಂದೆ ಭಗವಂತನ ದರ್ಶನಕ್ಕಾಗಿ ಆತನನ್ನು ಕಾಣುವುದಕ್ಕಾಗಿ ವರ್ಷಾನುಗಟ್ಟಲೆ ಋಷಿಗಳು ತಪಸ್ಸನ್ನು ಮಾಡುತ್ತಿದ್ದರು. ಕಾಡು ಮೇಡು ಗುಹೆ ಗಹ್ವರ ಎಲ್ಲ ಕಡೆ ಅಲೆದರು.  ಯಾವುದೋ ಒಂದು ಕಾಲದಲ್ಲಿ ಕೆಲವರಿಗೆ ಭಗವಂತ ಪ್ರತ್ಯಕ್ಷವಾಗುತ್ತಿದ್ದ. ಬೌತಿಕವಾಗಿ ದೇವರನ್ನು ಕಾಣುತ್ತಾರೋ ಇಲ್ಲವೋ ಪ್ರಶ್ನೆಯಲ್ಲ. ಆದರೆ ಅವರಿಗೆ ಭಗವಂತನ ಪ್ರತ್ಯಕ್ಷ ಅನುಭವವಾಗುತ್ತಿತ್ತು. ನಮ್ಮ ಕರ್ಮದ ರೀತಿಯಲ್ಲಿ ಅದು ನಮಗೂ ಸಾಧ್ಯವಾಗಬಹುದು. ಅದಕ್ಕೆ ಕರ್ಮವನ್ನು ಅರಿತು ಆಚರಿಸಬೇಕು ಅಂತ ಜ್ಞಾನಿಗಳು ಹೇಳುತ್ತಾರೆ. ಇದೇ ಕಾರಣದಿಂದ  ಭಗವಂತನನ್ನು ಜ್ಞಾನ ಸ್ವರೂಪ ಎಂದು ಹೇಳುತ್ತಾರೆ. ಜ್ಞಾನ ಎಂದರೆ ಪರಮಾತ್ಮ. ಹರಿಯೋ ಹರನೋ ಅಥವಾ ಇನ್ನಾವುದೋ ರೂಪದಲ್ಲಿ ಭಾವದಲ್ಲಿ ಇರಬಹುದು. ಅದನ್ನು ಒಂದೇ ಅಂತ ಅರಿಯುವುದರಲ್ಲಿ ಭಗವಂತನ ದರ್ಶನ ಸಾಧ್ಯವಾಗುತ್ತದೆ.  ಭಗವಂತನನ್ನು ಕಾಣ ಬೇಕಿದ್ದರೆ ಕರ್ಮಶುದ್ಧಿಯಿಂದ ಮಾತ್ರ ಸಾಧ್ಯ. ಆಗ ಎಲ್ಲೋ ಇದ್ದ ಭಗವಂತ ನಮ್ಮ ದೇಹದಲ್ಲೇ ನಮ್ಮ ಮನಸ್ಸಿನಲ್ಲೇ ಕಾಣ ಬರುತ್ತಾನೆ. ಅದನ್ನೇ ಜ್ಞಾನ ಎನ್ನುವುದು. ಇದು ಆತನನ್ನು ಅರಿಯುವುದರಿಂದ ಮಾತ್ರ ಸಾಧ್ಯ. 

ಇಂದು ಧರ್ಮವನ್ನು ಅರಿಯದೇ ಧರ್ಮವನ್ನು ಅನುಸರಿಸುತ್ತಿದ್ದೇವೆ. ದೇವರು ಎಂದರೇನು ತಿಳಿಯದೇ ದೇವರನ್ನು ಅರ್ಥವಿಸದೇ ದೇವರನ್ನು ನಂಬುತ್ತೇವೆ. ಇದೇ ಇಂದು ಪರಸ್ಪರ ದ್ವೇಷಕ್ಕೆ ಕಾರಣವಾಗಿದೆ. ಅಪ್ಪ ಅಮ್ಮನಿಗೆ ಒಂದೆರಡು ಮಕ್ಕಳು ಇದ್ದರೆ , ಮಕ್ಕಳು ಪರಸ್ಪರ ವಿಶ್ವಾಸದಲ್ಲಿ ಜತೆಗೆ ಇರುವುದನ್ನು ಆ ಅಪ್ಪ ಅಮ್ಮ ಬಯಸುತ್ತಾರೆ. ಹೊರತು ಮಕ್ಕಳ ಪರಸ್ಪರ ದ್ವೇಷವನ್ನಲ್ಲ. ಹತ್ತು ಮಕ್ಕಳಲ್ಲಿ ಒಬ್ಬ ಮಗುವಿಗೆ ನೋವಾದರೂ ಹೆತ್ತ ಅಪ್ಪ ಅಮ್ಮ ಸಹಿಸುವುದಕ್ಕೆ ಸಾಧ್ಯವಿಲ್ಲ. ಅಂತಹ ಅಪ್ಪ ಅಮ್ಮನಲ್ಲಿ ದೇವರನ್ನು ಕಾಣುತ್ತೇವೆ. ಆದರೆ ಅದೇ ದೇವರಿಗೆ ಏನು ಬೇಕು ಎಂಬುದನ್ನು ಮರೆಯುತ್ತೇವೆ. ಮಕ್ಕಳು ಪರಸ್ಪರ ದ್ವೇಷ ವೈಷಮ್ಯದಿಂದ ಇದ್ದರೆ ಅಪ್ಪ ಅಮ್ಮನ ಅನುಗ್ರಹ ಹೇಗೆ ಪಡೆಯಬಹುದು? ಅದೇ ರೀತಿ ಭಗವಂತನ ಅನುಗ್ರಹ. ನಾವು ಪರಸ್ಪರ ದ್ವೇಷಿಸುತ್ತಿದ್ದರೆ ಭಗವಂತನ ಮಕ್ಕಳು ನಾವು,  ದೈವಾನುಗ್ರಹಕ್ಕೆ ಪಾತ್ರರಾಗುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಧರ್ಮ ಎನ್ನುವುದು ದ್ವೇಷಕ್ಕೆ ಕಾರಣವಾಗಬಾರದು.  ಭಗವಂತನನ್ನೂ ಧರ್ಮವನ್ನೂ ಸರಿಯಾಗಿ ಅರಿತು ಅನುಸರಿಸಬೇಕು. ದೇವರು ಎಂದರೇನು ಮೊದಲು ಅರ್ಥವಿಸಬೇಕು. ಗುಡಿಯಲ್ಲಿ ಪ್ರಾರ್ಥನಾ ಮಂದಿರಲ್ಲಿ ಇರುವುದು ದೇವರಲ್ಲ. ಅದು ದೇವರ ಪ್ರತೀಕ ಮಾತ್ರ. ಹಾಗೆ ನೋಡಿದರೆ ದೇವರು ಸರ್ವಾಂತರ್ಯಾಮಿ. ಎಲ್ಲದರಲ್ಲೂ ಎಲ್ಲರಲ್ಲೂ ದೇವರು ಇದ್ದಾನೆ ಎಂದು ತಿಳಿವಾಗ ಅಲ್ಲಿ ವೈಷಮ್ಯಕ್ಕೆ ಆಸ್ಪದವಿರುವುದಿಲ್ಲ. ಪ್ರತೀ ಜೀವಿಗಳಲ್ಲು ಆತ್ಮ ರೂಪದಲ್ಲಿ ಪರಮಾತ್ಮನ ಅಸ್ತಿತ್ವ ಇದೆ. ಅಹಂ ಬ್ರಹ್ಮಾಸ್ಮಿ ಅಂತ ಪ್ರತಿಪಾದಿಸಿದರೂ ನಮ್ಮ ಧರ್ಮವನ್ನು ಹೀಗಳೆಯುವುದನ್ನು  ಇಲ್ಲಿ ವಿಷ ಬೀಜಬಿತ್ತುವುದನ್ನು ತಡೆಯುವುದರಲ್ಲಿ ವಿಫಲರಾಗುತ್ತೇವೆ. 

ಮಾವಿನ ಮರದಲ್ಲಿ ಮಾವು ಆದಂತೆ, ಕಲ್ಪ ವೃಕ್ಷದಲ್ಲಿ ತೆಂಗು ಬೆಳೆದಂತೆ ಅದು ಧರ್ಮ. ಮಾವಿನ ಮರದಲ್ಲಿ ತೆಂಗು ಬೆಳೆಯುವುದಿಲ್ಲ. ನಾವಾಡುವ ಮಾತಿನಲ್ಲಿ ವರ್ತನೆಯಲ್ಲಿ ಒಂದು ಧರ್ಮವಿದೆ. ನಮ್ಮ ಹಸಿವು ನೀರಡಿಕೆ ದೇಹದ ಭಾಷೆಗಳಲ್ಲಿ ಒಂದು ಧರ್ಮವಿದೆ. ಧರ್ಮವೆಂದರೆ ಅದು ನಿಯತಿ. ಧರ್ಮ ದ್ವೇಷವನ್ನು ನಾಶವನ್ನೂ ಬಯಸುತ್ತದೆ ಎಂದಾದರೆ ಅದು ಧರ್ಮವಲ್ಲ. ಧರ್ಮದ ಮರ್ಮವನ್ನೂ ನಾವು ತಿಳಿಯದೇ ಆಚರಿಸುತ್ತಿದ್ದೇವೆ. ನಮ್ಮ ಧರ್ಮ ಶ್ರೇಷ್ಠ ಅಂತ ಹುಂಬತನದಿಂದ ವರ್ತಿಸುತ್ತೇವೆ. ನಮ್ಮ ಧರ್ಮದ ಬಗ್ಗೆ ಅಭಿಮಾನ ಅರಿವು ಇರಬೇಕು. ಆದರೆ ಅದು ಮತ್ತೊಂದು ಧರ್ಮವನ್ನು ಗೌರವಿಸುವ ಅರಿವಿನಲ್ಲೂ ಇರುತ್ತದೆ. ರೈತನೊಬ್ಬ ಮುಂಜಾನೆ ಎದ್ದು ಹೊಲಕ್ಕೆ ಉಳುಮೆಗೆ ಹೋಗುವಾಗ ಆಕಾಶದಲ್ಲಿರುವ ಸೂರ್ಯನನ್ನು ನೋಡಿ ನಮಸ್ಕರಿಸುತ್ತಾನೆ. ಆತನಿಗೆ ಮಂತ್ರವಾಗಲಿ ಶ್ಲೋಕವಾಗಲಿ ತಿಳಿದಿರುವುದಿಲ್ಲ. ಅದೇ ರೀತಿ ಮಂತ್ರವನ್ನು ಶ್ಲೋಕವನ್ನು ತಿಳಿದವನು ಅರ್ಘ್ಯವನ್ನು ಅರ್ಪಿಸಿ ಸೂರ್ಯನನ್ನು ಆರಾಧಿಸಬಹುದು. ಆದರೆ ರೈತನ ನಮಸ್ಕಾರಕ್ಕೂ  ವೇದೋಕ್ತವಾಗಿ ಬಿಡುವ ಅರ್ಘ್ಯಕ್ಕೂ ಯಾವುದೇ ವೆತ್ಯಾಸವಿಲ್ಲ. ಎರಡೂ ಸೂರ್ಯನ ಆರಾಧನೆ. ಮೊದಲು ದೇವೆರು ಎಂಬುದನ್ನು ನಾವು ಅರ್ಥವಿಸಬೇಕು. ಯಾವುದೋ ಒಂದು ನಮಗರಿವಿಲ್ಲದ ಶಕ್ತಿಗೆ ನಾವು ಇಟ್ಟ ಹೆಸರೆ ದೇವರು. ನಮಗೆ ಹುಟ್ಟಿದ ಮಗುವನ್ನು ಪ್ರೀತಿಯಿಂದ ಹಲವು ಹೆಸರುಗಳಲ್ಲಿ ಕರೆವಂತೆ ಭಗವಂತನಿಗೆ ಹಲವು ಹೆಸರು ಇದೆ. ಹಲವರು ಹಲವು ಹೆಸರಿಂದ ಕರೆದರೂ ಅಲ್ಲಿರುವ ಶಕ್ತಿ ಒಂದೇ. 



ಸತ್ಯವನ್ನು ಹೇಳುವುದಕ್ಕು ಸತ್ಯವನ್ನು ಅರಿಯುವುದಕ್ಕೂ ವೆತ್ಯಾಸವಿದೆ. ಸತ್ಯವನ್ನು ನಾವು ಅರಿಯಬೇಕು. ಸತ್ಯದ ಮೌಲ್ಯಮಾಪನವನ್ನು ಮಾಡಬೇಕು. ಅದೇ ರೀತಿ. ದೇವರನ್ನು ಕಾಣುವುದಕಿಂತಲೂ ದೇವರನ್ನು ಅರಿಯುವುದರಲ್ಲಿ ಹೆಚ್ಚು ಸತ್ವವಿದೆ. ಆಗ ದೇವರ ಸಾನ್ನಿಧ್ಯ ಸಾಮೀಪ್ಯ ಒದಗಿ ಬರುತ್ತದೆ.  ನಮ್ಮಲಿ ವಿಪುಲವಾದ ದೊಡ್ಡ ಸಂಪತ್ತು ಇರಬಹುದು. ಯಾವುದೋ ಬಂಗಾರದ ವಸ್ತು ಇರಬಹುದು. ಆದರೆ ಆ ಸಂಪತ್ತಿನ ಅಥವ ಬಂಗಾರದ ಮೌಲ್ಯ ತಿಳಿಯದೇ ಇದ್ದರೆ ಅದು ಇದ್ದರೆ ಏನೂ ಪ್ರಯೋಜನವಿಲ್ಲ. ಮಂಗನ ಕೈಯಲ್ಲಿ ಮಾಣಿಕ್ಯ ಇದ್ದಂತೆ. ಶುಭ್ರವಾದ ವಸ್ತ್ರ ನಮ್ಮಲ್ಲಿದ್ದರೆ ಅದನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದಕ್ಕೆ ನಾವು ಅಸಮರ್ಥರಾದರೆ ಅದು ಇದ್ದೇನು ಪ್ರಯೋಜನ. ಆ ಶುಭ್ರವಸ್ತ್ರವೂ ಮೌಲ್ಯ ರಹಿತವಾಗಿ ಅದರ ಬೆಲೆಯನ್ನು ಕಳೆದುಕೊಳ್ಳುತ್ತದೆ. ಸಂಪತ್ತಿನ  ಅರಿವಿದ್ದಾಗ ಮಾತ್ರ ಸಂಪತ್ತಿನ ಮೌಲ್ಯ ಅರಿವಾಗುತ್ತದೆ.  ದೇವರು ಧರ್ಮವೂ ಅದರ ಅರಿವಿದ್ದರೆ ಮಾತ್ರ ಅದರ ಮೌಲ್ಯ ಲಭ್ಯವಾಗುತ್ತದೆ. 

ದೇವರನ್ನು ಪೂಜಿಸಿ ಪ್ರಾರ್ಥಿಸುವುದಕ್ಕಿಂತ ಮೊದಲು ದೇವರನ್ನು ಅರಿಯುವ ಜ್ಞಾನದ ಅವಶ್ಯಕತೆ ಇದೆ. ಇಂದಿನ ಕಾಲಕ್ಕೆ ಅದು ಅನಿವಾರ್ಯ. ಓಂ ಶಾಂತಿಃ ಶಾಂತಿಃ ಶಾಂತಿಃ ಎಂಬ ಶಾಂತಿ ಮಂತ್ರದ ತಾತ್ಪರ್ಯವೂ ಜ್ಞಾನವೇ ಆಗಿದೆ.  ಶಂ ಎಂದರೆ ಆನಂದ ತಿ ಜ್ಞಾನ ಅಂತ ಅಂದರೆ ಅಂತಿಮ ತುದಿ. ಆನಂದ ತುತ್ತ ತುದಿಯಲ್ಲಿ ಸಿಗುವ ಜ್ಞಾನದಲ್ಲಿ ಶಾಂತಿ ಇದೆ. ಈ ಜ್ಞಾನಕ್ಕೆ ನಮ್ಮ ಸನಾತನ ಧರ್ಮ ಕೊಡುವ ಮಹತ್ವ ಅದು. ಮಂತ್ರ ರೂಪದಲ್ಲಿ ನಾವು ಭಗವಂತನನ್ನು ಬೇಡಿಕೊಳ್ಳುವುದೆಂದರೆ ಹೇ ಭಗವಂತ ನಿನ್ನನ್ನು ಅರಿಯುವ ಬುದ್ದಿಯನ್ನು ಶಕ್ತಿಯನ್ನು ಕೊಡು ಎಂದು ಬೇಡುತ್ತೇವೆ. ಜ್ಞಾನವೇ ಭಗವಂತ. .


Sunday, November 16, 2025

ಅಶ್ವ ಮೇಧ

 


ಅಂದು ಬೆಳಗಿನ ಉಪಾಹಾರಕ್ಕೆ ಸಿದ್ದ ಮಾಡುತ್ತಿದ್ದೆ. ಅದಾಗಲೇ ನಿತ್ಯದ  ಯೋಗಾಭ್ಯಾಸ ಮುಗಿಸಿ ಯಾವುದೋ ನಶೆ ಹಿಡಿದವನಂತೆ ಇದ್ದೆ. ಕಾರಣ ಎಂದೂ ಇಲ್ಲದ ಅದ್ಭುತ ಅನುಭವದ ಗುಂಗಿನಲ್ಲೇ ಇದ್ದೆ. ಇದೇನು ವಿಶೇಷವಲ್ಲ. ಅಂದು ಏನು ಮಾಡಬೇಕು ಎಂಬ ಯೋಚನೆ ಮೊದಲೇ ಯೋಚಿಸಿಲ್ಲ. ಆದರೆ ಅಡುಗೆ ಕೋಣೆ ಹೊಕ್ಕಿದಾಕ್ಷಣ  ಉಪ್ಪಿಟ್ಟು ಮಾಡಿ ದೊಡ್ಡಪ್ಪ ಅಂತ ಮಗಳು ಗೋಗರೆದಾಗ ಸರಿ ಅದನ್ನೇ ಮಾಡೋಣ ಎಂದುಕೊಂಡೆ. ಯಾಕೆಂದರೆ ಒಬ್ಬರಾದರೂ ಗ್ರಾಹಕರು ಇದ್ದರೆ ಕದಮುಚ್ಚಿದ ಅಂಗಡಿಯನ್ನಾದರೂ ತೆರೆದು ಸಾಮಾಗ್ರಿ ಕೋಡೋಣ ಎಂಬ ಪ್ರಚೋದನೆ ಎಂಥವನಿಗಾದರೂ ಬಂದೆ ಬರುತ್ತದೆ. ಅದಕ್ಕೆ ಕೇವಲ ವ್ಯವಹಾರದ ಲಾಭವಲ್ಲ. ಅದು ಮನಸ್ಸಿಗೆ ಕೊಡುವ ತೃಪ್ತಿಯೇ ಬೇರೆ. ಪಾಜಕ ಕೆಲಸವನ್ನು ಹವ್ಯಾಸವಾಗಿಯೋ ಅನಿವಾರ್ಯ ವೃತ್ತಿಯಾಗಿಯೋ ಮಾಡಿಕೊಂಡವರಿಗೆ ಇದರ ಆಳ ಬಹಳ ಅರ್ಥವಾಗುತ್ತದೆ. ಒಬ್ಬರಾದರೂ ಹಪ ಹಪಿಕೆಯಲ್ಲಿ ನಿರೀಕ್ಷಿಸುತ್ತಾರೆ ಎಂದಾಕ್ಷಣ ನಾವು ಮಾಡುವ ವೃತ್ತಿಯಲ್ಲಿ ಹೆಚ್ಚು ಬದ್ದತೆ ತಾನಾಗಿ ಮೂಡಿಬರುತ್ತದೆ. ಬೇರೆ ಯಾವುದೋ ತಿಂಡಿಯನ್ನು ಇದಕ್ಕಿಂತಲೂ ರುಚಿಯಾದ ನನಗಿಷ್ಟವಾದ ತಿಂಡಿಯನ್ನು ಮಾಡಬಹುದಿತ್ತು, ಆದರೆ ಅದು ಕೇವಲ ನನಗಷ್ಟೇ ಸಂತೃಪ್ತಿಯನ್ನು ಕೊಡಬಹುದು. ಆದರೆ ಆಕೆಯ ಉಪ್ಪಿಟ್ಟಿನ ಬಹಯಕೆ ಹಾಗೇ ಉಳಿದುಬಿಟ್ಟರೆ ಅಲ್ಲಿ ನನಗಿಷ್ಟವಾದ ತಿಂಡಿ ಯಾವುದೇ ಆಗಿರಲಿ ಅದು ಪೂರ್ಣ ತೃಪ್ತಿಯನ್ನು ಒದಗಿಸಲಾರದು. ಎಂತಹ ಗಡಿಬಿಡಿಯ ಹೊತ್ತಿನಲ್ಲೂ ಆಕೆಯ ಆಶೆಗಳನ್ನುಸಹಜವಾಗಿ ಪೂರೈಸುವವ ನನಗೆ ಉಪ್ಪಿಟ್ಟು ಉತ್ತಮ ಅಂತ ಅನ್ನಿಸಿಬಿಟ್ಟಿತು.  ಅಯಾರಾದರೂ ನಮ್ಮ ಕೃತಿಯ ನಿರೀಕ್ಷೆಯಲ್ಲಿ ಇದ್ದರೆ ಅದನ್ನು ಪೂರೈಸುವುದರಲ್ಲಿ ಒಂದು ಬಗೆಯ ತೃಪ್ತಿ. ಒಬ್ಬ ಪಳಗಿದ ಅಡುಗೆಯವನು ದಿನವಿಡೀ ಕೆಲಸ ಮಾಡಿ ಸುಸ್ತಾದರೂ ಯಾರದರೂ ಒಬ್ಬ ಬಂದು ಇಷ್ಟವಾದ ತಿಂಡಿಯ ಬಯಕೆಯನ್ನು ಹೇಳಿದರೆ ನಡುರಾತ್ರಿಯಾದರೂ ಅದನ್ನು ಮಾಡಿಕೊಟ್ಟು ಬಿಡುವ ಎಂಬ ಉತ್ಸಾಹ ಪುಟಿದೆದ್ದುಬಿಡುತ್ತದೆ. ಮೊದಲೇ ಬೆಳಗ್ಗಿನ ಅತ್ಯುತ್ಸಾಹದಲ್ಲಿದ್ದ ನನಗೆ ಮತ್ತೆ ಕೇಳಬೇಕೆ. 

ಉಪ್ಪಿಟ್ಟು ತಯಾರಿ ನನ್ನದೇ ಒಂದು ವಿಧಾನ ಇದೆ. ಯಾವುದೇ ತಿಂಡಿಯಾದರೂ ಅತ್ಯಂತ ತ್ವರಿತವಾಗಿ ಮಾಡುವ ಶೈಲಿ ನನ್ನದು. ಸಾಮಾನ್ಯವಾಗಿ  ಒಂದು ಘಂಟೆಗೆ ಊಟ ಮಾಡಬೇಕಿದ್ದರೆ ಅರ್ಧ ಘಂಟೆ  ಮೊದಲು ಅಡುಗೆ ತಯಾರಿಗೆ  ತೊಡಗುತ್ತೇನೆ. ಯಾವುದೇ ಮಾಡುವುದಿದ್ದರೂ ಅದಕ್ಕೊಂದು ಸಣ್ಣ ಯೋಜನೆ ಮೊದಲೇ ಸಿದ್ದವಾಗಿಬಿಡುತ್ತದೆ. ಹಾಗೇ ಉಪ್ಪಿಟ್ಟನ್ನು ಮಾಡುತ್ತಿದ್ದೆ. ಮೇಲುನೋಟಕ್ಕೆ ಉಪ್ಪಿಟ್ಟು ಒಂದು ಯಕಃಶ್ಚಿತ್ ಸಾಮಾನ್ಯ ಉಪಾಹಾರ.  ಹೆಚ್ಚಿನ ಮನೆಗಳಲ್ಲಿ ಏನೂ ಮಾಡಲು ಸಾಧ್ಯವಗದೇ ಇದ್ದಾಗ, ಅಥವಾ ತುಂಬ ಕೆಲಸ ಇದ್ದಾಗ ಮಾಡಬಹುದಾದ ಉಪಾಹಾರ ತಿಂಡಿ. ಆದರೆ ನಮ್ಮಲ್ಲಿ ಇದು ಕೇವಲ ಉಪ್ಪಿಟ್ಟಲ್ಲ. ಮಾತ್ರವಲ್ಲ ಹಾಗೆ ಕಾಟಾಚಾರಕ್ಕೆ ಉಪ್ಪಿಟ್ಟು ಅಂತ ಮಾಡಿದರೆ ಅದನ್ನು ಯಾರೂ ಇಷ್ಟಪಡುವುದಿಲ್ಲ. ಉಪ್ಪಿಟ್ಟು ಎಂದಾಕ್ಷಾಣ ಉಪ್ಪಿಟ್ಟಾ... ಅಂತ ರಾಗ ಎಳೆಯುವವರೇ ಹೆಚ್ಚು. ನಮ್ಮಲ್ಲಿ ಉಪ್ಪಿಟ್ಟು ಮಾಡಿದರೆ ಅದರ ಒಂದು ಕಾಳು...ಬಿಡದೇ ನೆಕ್ಕಿ ತಿನ್ನುವುದು ಈ ಉಪ್ಪಿಟ್ಟಿನ ವೈಶಿಷ್ಟ್ಯತೆ . ಹಾಗಾಗಿ ಆಕೆ ಉಪ್ಪಿಟ್ಟು ಮಾಡಿ ಅಂತ ತನ್ನ ಬಯಕೆ ವ್ಯಕ್ತ ಪಡಿಸಿದ್ದಳು. ನಾವು ಮಾಡಿದ ತಿಂಡಿ ತಿನಸು ಹೆತ್ತವರಿಗೆ ಹೆಗ್ಗಣ ಮುದ್ದು ಅಂತ ಹಲವು ಸಲ ಹೇಗಿದ್ದರೂ ಇಷ್ಟವಾಗುವುದುಂಟು. ಆದರೆ ನಾವು ಮಾಡಿದ್ದು ಇನ್ನೊಬ್ಬರಿಗೆ ಇಷ್ಟವಾಗುವುದಿದ್ದರೆ ಅದರಲ್ಲಿರುವ ಖುಷಿಯೇ ಬೇರೆ.  ಆದರೆ ವಾತಾವರಣ ಒಂದೇ ರೀತಿ ಇರುವುದಿಲ್ಲ. ಕೆಲವರು ಎಷ್ಟು ಹೊತ್ತಾದರೂ ಕಾಯುವುದಕ್ಕೆ ಸಿದ್ದವಿದ್ದರೆ ಇನ್ನು ಕೆಲವರು ಇದಕ್ಕೆ ವಿಪರೀತವಾಗಿಬಿಡುತ್ತಾರೆ.  

ತಯಾರಿಸುವ ಊಟ ಉಪಹಾರಕ್ಕೆ ಯಾರಾದರೂ ಆತುರದಿಂದ ಕಾಯುತ್ತಿದ್ದರೆ ಅಡುಗೆ ಮಾಡುವವರಿಗೂ ಒಂದು ರೀತಿಯ ಒತ್ತಡವೂ ಇರುತ್ತದೆ. ಆದರೆ ಎಲ್ಲರೂ ಒಂದೇ ರೀತಿ ಆಗುವ ತನಕ ಕಾಯುವುದಿಲ್ಲ. ಕೆಲವರು ಮಾಡುವವರು ಏನೇ ಮಾಡಲಿ ತಾನು ಮಾತ್ರ ಇದ್ದುದನ್ನು ತಿಂದು ಹೋಗಿಬಿಡುತ್ತೇನೆ ಎಂಬ ಮನೋಭಾವ ಇರುತ್ತದೆ.  ಅಡುಗೆಯವರು ಏನೂ ಮಾಡಲಿ ಅದರಬಗ್ಗೆ ತೆಲೆಕೆಡಿಸಿಕೊಳ್ಳುವುದಿಲ್ಲ.  ಮಾಡುವ ತಿಂಡಿಯ ಬಗ್ಗೆ ನಿರಾಸಕ್ತಿಯೋ ಅಥವಾ ಅದರ ಬಗ್ಗೆ ಕಾಳಜಿ ಗೌರವ ಇರುವುದಿಲ್ಲ.  ಮಾಡುವವರಿಗೆ ಇದು ಮತ್ತೊಂದು ರೀತಿಯ ಒತ್ತಡವನ್ನು ತರುತ್ತದೆ.  ಮಾಡುವವರ ಬಗ್ಗೆ ಮಾಡುವುದರ ಬಗ್ಗೆ ಗೌರವ ಇದ್ದರೆ ಎಂತಹಾ ಸ್ಥಿತಿಯಲ್ಲೂ ತಿಂಡಿ ಆಗುವ ತನಕ ತಾಳ್ಮೆಯಿಂದ ಕಾಯುತ್ತಾರೆ. ಮೊದಲೆಲ್ಲ ಹೀಗೆ ಒತ್ತಡವಿದ್ದರೆ ನಾನು ಸಿಡಿಮಿಡಿಗೊಳ್ಳುತ್ತಿದ್ದೆ. ಹಲವು ಸಲ ಇದು ಕಲಹಕ್ಕೂ ಕಾರಣವಾಗುತ್ತಿತ್ತು. ಈಗ ಆ ಮನೋಭಾವ ಸಾಕಷ್ಟು ಬದಲಾಗಿದೆ. ನಾನು ಮಾಡುವ ತಿಂಡಿಯ ಬಗ್ಗೆ ಅಡುಗೆಯ ಬಗ್ಗೆ ಆಸಕ್ತಿ ಗೌರವ ಇದ್ದವರು ಕಾಯುತ್ತಾರೆ ಎಂದು ಯೋಚಿಸುತ್ತೇನೆ.  ಅದರ ಬಗ್ಗೆ ಆಸಕ್ತಿ ಗೌರವ ಇಲ್ಲದವರು ಹೋಗಲಿ ಬಿಡಿ ಎಂದುಕೊಂಡು ನಿರಾತಂಕವಾಗಿ ಶಾಂತ ಚಿತ್ತದಿಂದ ನನ್ನ ಕಾರ್ಯದಲ್ಲಿ ಮಗ್ನನಾಗಿಬಿಡುತ್ತೇನೆ. ಇದು ಮನಸ್ಸಿಗೆ ಹೆಚ್ಚು ನೆಮ್ಮದಿಯನ್ನು ಕೊಡುತ್ತದೆ. ಕಾರಣ ಯೋಗಾಭ್ಯಾಸದಿಂದ ಬದಲಾದ ಜೀವನ ಶೈಲಿ. 

ಈದಿಗ ಜೀವನ ಬಹುಪಾಲು ಅವಧಿಯನ್ನು ಯೋಗಜೀವನದಲ್ಲಿ ಕಳೆದ ಸಂತೃಪ್ತಿ ಇದೆ. ಹಾಗೊಮ್ಮೆ ಬದುಕಿನತ್ತ ತಿರುಗಿ ಸಿಂಹಾವಲೋಕನ ಮಾಡಿಕೊಂಡಾಗ ನಾನು ಸ್ವತಃ ಬದಲಾಗಿದ್ದೇನೋ ಇಲ್ಲ ಯೋಗಜೀವನ ನನ್ನನ್ನು ಬದಲಿಸಿದೆಯೋ ಎನ್ನುವುದಕ್ಕೆ ಸ್ಪಷ್ಟ ಉತ್ತರ ಸಿಗುವುದಿಲ್ಲ. ಆದರೂ ಯೋಗಾಭ್ಯಾಸ ಸಾಕಷ್ಟು ಬದಲಾವಣೆಯನ್ನು ತಂದಿದೆ ಎಂಬುದಷ್ಟು ಸತ್ಯ.  ಮುಂಜಾನೆ ನಸುಕಿನಲ್ಲಿ ಪರಿಸರವೆಲ್ಲ ನಿದ್ರಾವಶದಲ್ಲಿರುವಾಗ ತಪ್ಪದೇ ಎಚ್ಚರಗೊಳ್ಳುತ್ತೇನೆ. ಮನಸ್ಸಿನ ತುಡಿತವೇ ಇದಕ್ಕೆ ಕಾರಣ. ನೀರವ ವಾತಾವರಣದಲ್ಲಿ ಧ್ಯಾನ ಮಗ್ನನಾಗಿ ವ್ಯಕ್ತವಾಗದ ಅನುಭವವನ್ನು ಪಡೆಯುವಲ್ಲಿ ಮನಸ್ಸಿನಲ್ಲಿ ಕಾತುರತೆ ತುಂಬಿರುತ್ತದೆ. ಮನೆಯ ಹೊರ ಜಗಲಿಯಲ್ಲಿ ಭಗವಂತನ ಪ್ರಾರ್ಥನೆಗೆ ಕುಳಿತುಬಿಟ್ಟರೆ ಆ ಸಮಯ ಮತ್ತೆ ಸಿಗದು ಎಂಬ ಭಾವ. ನಿರ್ಮಾನುಷ್ಯವಾದ ರಸ್ತೆ ಹೊರಗಡೆ. ಅದೆಷ್ಟು ಮೌನ ಆವರಿಸುತ್ತದೆ ಎಂದರೆ ಮೈಲು ದೂರದಲ್ಲಿ ಆಗುವ ಸಣ್ಣ ಸದ್ದೂ ಕೇಳಿಸುತ್ತದೆ. ಅಕ್ಕ ಪಕ್ಕದ ಮನೆಯಲ್ಲಿ ನಿದ್ರಿಸಿದವರ ಗೊರಕೆ ಏದುಸಿರಿನ ಸದ್ದೂ ಕೇಳಿಸುತ್ತದೆ. ಹೀಗಿದ್ದರೂ ಯಾರೋ ಒಂದಿಬ್ಬರು ಎದ್ದುಬಿಡುತ್ತಾರೆ . ದೊಡ್ಡದಾಗಿ ಮಾತನಾಡುತ್ತಾರೆ. ಇಲ್ಲ ವಸ್ತುಗಳನ್ನು ಎತ್ತಿಡುವುದೋ , ವಾಹನವನ್ನು ಚಲಾಯಿಸುವುದೋ ಏನೋ ಸದ್ದುಗಳು ನನ್ನಏಕಾಗ್ರತೆಗೆ ಪರೀಕ್ಷೆಯನ್ನು ಒಡ್ಡುತ್ತವೆ.  ಆರಂಭದ ದಿನಗಳಲ್ಲಿ ಈ ಚಲವಲನ ಮತ್ತು ಸದ್ದು ಗದ್ದಲಕ್ಕೆ ಸಿಟ್ಟು ಬರುತ್ತಿತ್ತು. ದೊಡ್ಡದಾಗಿ ಮಾತನಾಡುತ್ತ ಸದ್ದು ಗದ್ದಲಕ್ಕೆ ಕಾರಣರಾದವರ ಮೇಲೆ ರೇಗಿಬಿಡುವ ಮನಸ್ಸಾಗುತ್ತಿತ್ತು. ಒಂದಿಷ್ಟೂ ಸಾಮಾನ್ಯ ಜ್ಞಾನವೂ ಇಲ್ಲದ ಜನಗಳು. ಕೊನೇ ಪಕ್ಷ ಎಲ್ಲರೂ ನಿದ್ರಿಸಿರುತ್ತಾರೆ ಎಂಬುದನ್ನು ಮರೆತ ಇವರ ಬಗ್ಗೆ ಸಿಟ್ಟು ಬರುತ್ತಿತ್ತು. ಮುಂಜಾನೆ ಏಳುವುದಲ್ಲ..ಮೊದಲು ನಾವು ಏನು ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಮೊದಲಿಗೆ ಎಲ್ಲರೂ ನಿದ್ದೆಯಲ್ಲಿದ್ದಾರೆ ಎಂಬ ಪ್ರಜ್ಞೆ ಇರಬೇಕು. ಆದರೆ ನಮ್ಮಲ್ಲಿ ಮೂರ್ಖತನ ಇದ್ದೇ ಇರುತ್ತದೆ. ನಾವು ನಮಗೆ ನಿದ್ದೆ ಬರದೇ ಇರುವುದರ ಬಗ್ಗೆ ಚಿಂತಿಸುವಾಗ ಉಳಿದವರ ನಿದ್ರೆಯ ಬಗ್ಗೆ ಯೋಚಿಸುವುದಿಲ್ಲ.  ನನ್ನ ಏಕಾಗ್ರತೆಗೆ ಈ ಎಲ್ಲಾ ಸದ್ದುಗಳು ಪರೀಕ್ಷೆ ಒಡ್ಡಿದಾಗ ಮೊದಲೆಲ್ಲ ಬಹಳಷ್ಟು ವ್ಯಾಕುಲತೆ ಅನುಭವಿಸುತ್ತಿದ್ದೆ. ಉದ್ವಿಗ್ನನಾಗುತ್ತಿದ್ದೆ.  

ಮನಸ್ಸಿನ ಉದ್ವಿಗ್ನತೆಯನ್ನು ಯಾರು ಜಯಿಸುತ್ತಾನೋ ಆತನಿಗೆ ಯಾವ ಪರೀಕ್ಷೆಯೂ ಇರುವುದಿಲ್ಲ. ಉದ್ವಿಗ್ನ ಉದ್ರೇಕ ಎದುರಾದಾಗ ಅರೇ ನಾನೇಕೆ ಮುಂಜಾನೆ ಏಳುತ್ತಿದ್ದೇನೆ?  ಎಂದು ನನಗೆ ನಾನೇ ಪ್ರಶ್ನಿಸುತ್ತೇನೆ. ಯಾವುದೋ ಸದ್ದಿನ ಬಗ್ಗೆ, ಯಾರದೋ ಮನೋಭಾವದ ಕುರಿತು ಯೋಚಿಸುವುದರಲ್ಲಿ ನನ್ನ ಅಮೂಲ್ಯ ಘಳಿಗೆಗಳು ಕಳೆದು ಹೋಗುತ್ತವೆ. ಯಾರೋ ನಮ್ಮ ಏಕಾಗ್ರತೆಗೆ ತೊಂದರೆ ಕೊಡುತ್ತಾರೆ ಎಂದಾಕ್ಷಣ ಅವರಲ್ಲಿ ಹೋಗಿ ಹೇಳಬಹುದು. ಕೆಲವರು ಅದನ್ನು ಮನ್ನಿಸಿ ನಮಗಾಗಿ ಸದ್ದು ಗದ್ದಲಮಾಡದೇ ಬಲವಂತವಾಗಿ ನಿಶ್ಯಬ್ದರಾಗಿ ಇರಬಹುದು. ಅದರಿಂದ ನಮ್ಮ ಮನಸ್ಸಿಗೆ ಮತ್ತಷ್ಟು ಅಸಹನೆಯಾಗುತ್ತದೆ. ನಮ್ಮಿಂದಾಗಿ ಅವರಿಗೂ ತೊಂದರೆ. ನಮ್ಮ ಕಾರ್ಯದ ಬಗ್ಗೆ ಅವರಿಗೆ ಗೌರವ ಇದ್ದರೆ ಅವರಾಗಿಯೇ ಸುಮ್ಮನೆ ಕುಳಿತುಬಿಡಬಹುದು. ಗೌರವ ಇಲ್ಲ ಎಂದಿದ್ದರೆ ಅವರಿಂದ ಬಲವಂತವಾಗಿ ಗೌರವವನ್ನು ಬಯಸಿ ಕಿತ್ತುಕೊಳ್ಳುವುದು ನಮ್ಮ ಮೂರ್ಖತನ. ಸದ್ದು ಗದ್ದಲ ಅವರ ಮೂರ್ಖತನವಾದರೆ, ಇನ್ನೊಬ್ಬರ ಮೂರ್ಖತನ ಅಳೆಯುವಲ್ಲಿ ನಮ್ಮ ಮೂರ್ಖತನ ನಮಗೆ ಅರಿವಾಗುವುದಿಲ್ಲ.  ಹಾಗಾಗಿ ಈಗ ಯಾರೋ ಮಾಡಿದ ಸದ್ದು ಗದ್ದಲಕ್ಕೆ ನನ್ನ ಮನಸ್ಸು ವಿಚಲಿತವಾಗುವುದಿಲ್ಲ. ಆ ಸದ್ದು ನನ್ನ ಹೃದಯದ ಬಡಿತದ ಸದ್ದಿನ ಎದುರು ಕರಗಿ ಹೋಗುತ್ತದೆ. ಯಾರೋ ಮಾಡಿದ ಸದ್ದಿನ ಬಗ್ಗೆ ಯೋಚಿಸುವುದು ವ್ಯರ್ಥ. ಹಲವು ಸಲ ಮೊದಲ ತಿಂದ ಆಹಾರ ಪಚನವಾಗದೇ ನಮ್ಮ ಹೊಟ್ಟೆಯೇ ಸದ್ದು ಮಾಡಬಹುದು. ಹಾಗಾಗಿ ನಿಶ್ಯಬ್ದ ಇದ್ದರೆ ಮನಸ್ಸು ಅನುಭವಿಸುತ್ತದೆ. ಇಲ್ಲಾ ಅದರಿಂದ ದೂರವಾಗುವುದಕ್ಕೆ ಪ್ರಯತ್ನಿಸುತ್ತದೆ. ಪ್ರತಿಭಟನೆಯಂತೂ ಇಲ್ಲ. ಪ್ರತಿಭಟನೆ ಇದ್ದರೆ ಅದು ನಮ್ಮ ಮನಸ್ಸಿನ ಉದ್ವಿಗ್ನತೆಗೆ ಕಾರಣವಾಗಬಹುದು. 

ನನ್ನಲ್ಲಿನ ಯೋಗ ಜೀವನಕ್ಕೆ ಈಗ ಹೆಚ್ಚುಕಡಿಮೆ ಯೌವನಾವಸ್ಥೆ. ಎರಡು ದಶಕಗಳು ಕಳೆದುವು. ಈಗ ಅದೂ ಪ್ರೌಢವಾಗಿದೆ. ಬದುಕಿನಲ್ಲಿ ಯೌವನ ಎಂದರೆ  ತನಗೆ ಬೇಕಾಗಿರುವುದನ್ನು ತಾನು ಸಂಪಾದಿಸಿ ಸ್ವಾವಲಂಬಿಯಾಗುವುದು. ಹೀಗಿ ಯೋಚಿಸುವಾಗ ನನಗೆ ಬೇಕಾದ ಮೌನವನ್ನು ನಿಶ್ಯಬ್ದವನ್ನು ನಾನು ಸಂಪಾದಿಸಿಕೊಳ್ಳಬಲ್ಲೆ ಎಂಬ ಆತ್ಮವಿಶ್ವಾಸ ಜಾಗೃತವಾಗುತ್ತದೆ. ಶಂ ಎಂದರೆ ಸಂಸ್ಕೃತದಲ್ಲಿ ಆನಂದ ಎನ್ನುವುದನ್ನು ಕೇಳಿದ್ದೆನೆ.  ಆ ಆನಂದವೇ ಶಾಂತಿಗೆ ಕಾರಣವಾಗುತ್ತದೆ. ಎಚ್ಚರ ನಿದ್ರೆ ಮತ್ತು ಸ್ವಪ್ನ ಈ ಮೂರು ಅವಸ್ಥೆಗಳು. ಹಾಗಾಗಿ ಮೂರು ಬಾರಿ ಉಚ್ಚರಿಸುವ ಓಂ ಶಾಂತಿ.. ಎಂಬ ಶಾಂತಿ ಮಂತ್ರ ಎಚ್ಚರದಲ್ಲು ಸ್ವಪ್ನ ನಿದ್ರಾವಸ್ಥೆಯಲ್ಲೂ ನಮಗೆ ಆನಂದವಿರಲಿ ಎಂದು ಬಯಸುವುದು. ನಮ್ಮ ಆನಂದ ನಮ್ಮ ಕೈಯಲ್ಲೇ  ಇದೆ. ಅದನ್ನು ಇನ್ನೊಬ್ಬರು ಕಸಿಯುವುದಕ್ಕೆ ಸಾಧ್ಯವಿಲ್ಲ. ಹೀಗೆ ತಿಳಿದಾಗ ಯಾವ ಸದ್ದು ಗದ್ದಲವೂ ಪರಿಣಾಮ ಬೀರುವುದಿಲ್ಲ. ಮನಸ್ಸು ಉದ್ವಿಗ್ನವಾಗುವುದಿಲ್ಲ.  ಹಾಗಾಗಿ ಅಡುಗೆ ಮಾಡುವಾಗ ಹೇಗೆ ನಿರ್ವಿಕಲ್ಪ ಭಾವದಿಂದ ಆನಂದವನ್ನು ಅನುಭವಿಸುತ್ತೇನೋ ಅದೇ ರೀತಿ ಮುಂಜಾನೆ ಧ್ಯಾನದಲ್ಲೂ ಅದೇ ರೀತಿ ಆನಂದವನ್ನು ಅನುಭವಿಸುತ್ತೇನೆ. ಯಾರಲ್ಲೂ ಬೇಡಿಕೆಯೂ ಬೇಡ ಆಗ್ರಹವೂ ಬೇಡದ ಒಂದು ವೈರಾಗ್ಯ. ಯೋಗದಲ್ಲಿ ವೈರಾಗ್ಯ ಅಥವ ಸನ್ಯಾಸ ಎಂದರೆ ಎಲ್ಲವನ್ನೂ ಬಿಟ್ಟು ಪಲಾಯನ ಮಾಡುವುದಲ್ಲ. ಎಲ್ಲವೂ ಇದ್ದುಕೊಂಡೇ ಅದರಿಂದ ದೂರವಾಗಿ ನಿರ್ವಿಕಲ್ಪ ಭಾವದಿಂದ ಇದ್ದು ಬಿಡುವುದು. ಸಿಕ್ಕಿದರೆ ಅನುಭವಿಸುವುದು,  ಸಿಗದಿದ್ದರೆ ಅದಕ್ಕೆ ಹತಾಶರಾಗದೇ ಅದನ್ನು ಬಯಸದೇ ತಟಸ್ಥವಾಗಿರುವುದು. ಇದು ಮನಸ್ಸಿನ ಆತಂಕವನ್ನು ದೂರ ಮಾಡುತ್ತದೆ. 

ಯೋಗ  ಎಂದರೆ ಚಿತ್ತವೃತ್ತಿಯಿಂದ ದೂರ ಇರುವುದು. ಮನಸ್ಸು ಬುದ್ಧಿಯ ನಿಯಂತ್ರಣದಲ್ಲಿರುವುದು. ಮನಸ್ಸು ಎಂದರೆ ಮರ್ಕಟನಂತೆ. ಅದನ್ನು ಎಷ್ಟು ಅವಧಿ ನಾವು ಕಟ್ಟಿ ಹಾಕುತ್ತೇವೆಯೋ ಅಷ್ಟು ಹೊತ್ತು ನಾವು ಆನಂದವನ್ನು ಅನುಭವಿಸಬಹುದು. ನಮ್ಮ ಆತ್ಮ ರಥಿಕನಾದರೆ, ನಮ್ಮ ಪಂಚೇದ್ರಿಯಗಳು ಆ ರಥದ ಕುದ್ರೆಗಳು. ಬುದ್ದಿ ಸಾರಥಿಯ ಸ್ಥಾನದಲ್ಲಿರುತ್ತದೆ. ವಿಚಲಿತಕ್ಕೆ ಕಾರಣವಾಗುವ ಇಂದ್ರಿಯ ಅನುಭವವನ್ನು ನಿಯಂತ್ರಣದಲ್ಲಿರಿಸುವುದೇ ಜೀವನ ಯಜ್ಞ.  ಇಂದ್ರಿಯಗಳೇ  ಈ ಯಜ್ಞದ ಅಶ್ವಗಳು. ಅದನ್ನುನಿಯಂತ್ರಿಸಿದರೆ ಬದುಕೆಂಬ ಅಶ್ವಮೇಧದ ಪೂರ್ಣಾಹುತಿಯನ್ನು ಕೊಡುವ ಸಾಮಾರ್ಥ್ಯ ನಮ್ಮಲ್ಲಿ ಮೂಡುತ್ತದೆ. ಇದುವೆ  ಬದುಕಿನ ಅಶ್ವಮೇಧ. 




Friday, November 7, 2025

ಆವಳ ಮಠಾನ್ನು ಜವಣ ಗಮ್ಮತ

  "ಆವಳ ಮಠಾನ್ನು ಜವಣ ಗಮ್ಮತ.." ಮೊದಲು ನಮ್ಮೂರಲ್ಲಿ ಜನಜನಿತವಾದ ಮಾತು. ಅಂದರೆ ಆವಳ ಮಠದಲ್ಲಿ ಊಟ ಚೆನ್ನಾಗಿತ್ತು ಎಂದರ್ಥ. ಕರಾಡ ಬ್ರಾಹ್ಮಣರ ಮರಾಠ ಭಾಷೆ ಅದು. ಜವಣ ಹೇಳಿದರೆ ಕೊಂಕಣಿ ಭಾಷೆಯಂತೆ ಊಟ. ಆದರೆ ಹಲವರ ಕಲ್ಪನೆಯಲ್ಲಿ ಅದು ಕೇವಲ ಊಟ ಅಲ್ಲ. ಭರ್ಜರಿ ಭೂರಿ ಭೋಜನ. ಜವಣ ಅಂತ ಹೇಳಿದ ಕೂಡಲೇ ಹಲವರ ಬಾಯಲ್ಲಿ ಈಗಲೂ ನೀರು ಒಸರಿಬಿಡುತ್ತದೆ.  ಆ ದೇವಸ್ಥಾನದ ಮಹಿಮೆ ಅದು ಎಂದುಕೊಂಡರೂ, ನಮ್ಮ ವಿಪ್ರ ವೃಂದ ಊಟಕ್ಕೆ ಕೊಡುವ ಪ್ರಾಮುಖ್ಯತೆ ಅದು. ಪೂಜೆಯಂತೆ  ಊಟವೂ ಒಂದು ಸೇವೆಯಂತೆ.‌ ನಮ್ಮೂರಿನ ಹಲವು ದೇವಸ್ಥಾನದಂತೆ ನಮ್ಮ ಆವಳ ಮಠದ ಊಟಕ್ಕೂ ಒಂದು ವೈಶಿಷ್ಟ್ಯತೆ ಇದೆ. ಹೇಳಿ ಕೇಳಿ ಇದು ದುರ್ಗಾಪರಮೇಶ್ವರಿ ಸನ್ನಿಧಾನ, ಅಂದರೆ ಸಾಕ್ಷಾತ್ ಅನ್ನ ಪೂರ್ಣೆಯ ಕ್ಷೇತ್ರ. ಹಾಗಿರುವಾಗ ಅಲ್ಲಿ ಅನ್ನ ಎಂದರೆ ಅದು ನೈವೇದ್ಯ. ಇಲ್ಲಿ ಬಾಳೆ ಎಲೆಗೆ ಬಡಿಸುವಾಗಲೂ ಕೇಳುವುದು, ನೈವೇದ್ಯ ಬೇಕೆ? ಅಂತ  ಕೇಳುತ್ತಾರೆ. ಇಲ್ಲಿ ನಿತ್ಯದಲ್ಲೂ ಮಧ್ಯಾಹ್ನ ಮತ್ತು ರಾತ್ರಿಯ  ಮುಖ್ಯ ನೈವೇದ್ಯವೇ ಅನ್ನ. ಹಾಗಾಗಿ ಇಲ್ಲಿ‌ ಪ್ರತಿನಿತ್ಯವೂ ಊಟ ಇರಲೇಬೇಕು. 


ಸಾಂಪ್ರದಾಯಿಕವಾಗಿ , ಕೊಪ್ಪರಿಗೆಯಲ್ಲಿ ತಯಾರಿಸುವ ಇಲ್ಲಿನ ನೈವೇದ್ಯದ ಸುವಾಸನೆಯೇ ಹಸಿವನ್ನು ಕೆರಳಿಸಿ ಬಿಡುತ್ತದೆ.  ಉತ್ಸವಾದಿಗಳಲ್ಲಿ ವಿಶೇಷವಾಗಿ ಸಿದ್ದಪಡಿಸುವ ಊಟದ ವೈಶಿಷ್ಟ್ಯತೆ ಒಂದಾದರೆ,   ಇಲ್ಲಿನ ನಿತ್ಯದ ಅಡುಗೆಯ ರುಚಿಯೇ ಹಲವು ಸಲ ಅದರ ಸರಳತೆಯಿಂದ ಬೇರೆ ರೀತಿಯಲ್ಲಿ ಇಷ್ಟವಾಗುತ್ತದೆ. ಕೇವಲ ಚಟ್ನಿ ತಂಬುಳಿ ಅಥವಾ ತುಂಬ ಸರಳವಾದ ಸಾರು ಇವುಗಳ ರುಚಿಗೆ ಮಾರು ಹೋಗದವರಿಲ್ಲ. ಆಡಂಬರದ ಭೂರಿ ಭೋಜನಕ್ಕಿಂತಲೂ ಈ ಸರಳ ಸಾತ್ವಿಕ ಆಹಾರವನ್ನು ಸವಿಯುವುದೆಂದರೆ ಅದು ನಿಜವಾಗಿಯೂ ಅನ್ನ ಪೂರ್ಣೆಯ ಪ್ರಸಾದ. ಇದರ ವೈಶಿಷ್ಟವೆಂದರೆ ಹೊಟ್ಟೆ ತುಂಬ ಉಂಡರೂ ದೇವಸ್ಥಾನದ ಹೊರಾವರಣ ದಾಟಿ ಮುಂದೆ ಬರಬೇಕೆಂದರೆ ಅದು ಕರಗಿ ಬಿಟ್ಟಿರುತ್ತದೆ. ಒಂದಿಷ್ಟೂ ಕರುಳಿಗೆ ಶ್ರಮವೆನಿಸದ ಈ ಅನ್ನ ನೈವೇದ್ಯವೂ ಒಂದು ಮಹಿಮಾನ್ವಿಶೇಷವಾಗಿರುತ್ತದೆ. 

ದೇವಸ್ಥಾನದಲ್ಲಿ ಬಲಿವಾಡು ಸೇವೆ ಅತ್ಯಂತ ಮಹತ್ವ.  ಅಕ್ಕಿ ತೆಂಗಿನಕಾಯಿ  ಕಾಣಿಕೆಯನ್ನು ಸಲ್ಲಿಸಿ ಅನ್ನ ಪ್ರಸಾದ ಸ್ವೀಕರಿಸುವುದೆಂದರೆ ಅದೊಂದು ಮಹತ್ವದ ಸರಳ ಸೇವೆ. ಮೊದಲೆಲ್ಲ ದೇವಸ್ಥಾನದ ಪರಿಸರದಲ್ಲಿ ಅಥವಾ ತೋಟದಲ್ಲಿ ಸಿಗುವ ಗೆಡ್ಡೆ ಗೆಣಸು ಸೊಪ್ಪು ತರಕಾರಿಗಳೇ ಇಲ್ಲಿ ಅಡುಗೆಗೆ ಬಳಸುತ್ತಿದ್ದರು. ಹಲವು ಸಲ ಬರುವ ಭಕ್ತರಿಗೆ ಇಂತಹ ಅಡುಗೆ ಮತ್ತು ಅದರ ರುಚಿ ಸ್ವಾದಕ್ಕೆ ಅಚ್ಚರಿಯಾಗುತ್ತಿತ್ತು. ಈ ಗೆಡ್ಡೆಗೆಣಸಿನಲ್ಲೂ ಹಸಿರೆಲೆ ಚಿಗುರಲ್ಲಿ  ಈ ಬಗೆಯ ರುಚಿ ಸಾಧ್ಯವಾ ಅಂತ ಅಚ್ಚರಿಪಡುತ್ತಿದ್ದರು. ಮೊದಲೆಲ್ಲ ಇಲ್ಲಿ ಸಾಂಪ್ರದಾಯಿಕ ತರಕಾರಿಗಳೇ ಅಡುಗೆಗೆ ಉಪಯೋಗಿಸುತ್ತಿದ್ದರು. ಇಲ್ಲೇ ಪರಿಸರದಲ್ಲಿ ಅಥವಾ ದೇವಸ್ಥಾನದ ಭಕ್ತರ ಮನೆಗಳಲ್ಲಿ ಬೆಳೆಸುತ್ತಿದ್ದ ಕುಂಬಳ ಬಾಳೆ, ತೊಂಡೆ ಬೆಂಡೆ ಹೀಗೆ ಇವುಗಳನ್ನು ಮೀರಿ ವಾಣಿಜ್ಯ ತರಕಾರಿಗಳಾದ ಬಟಾಟೆ ಟೊಮೆಟೊಗಳನ್ನು ಇಲ್ಲಿ ಕಾಣುವುದಕ್ಕೆ ಸಾಧ್ಯವಿರಲಿಲ್ಲ. ಯಾಕೆಂದರೆ ಆ ಕಾಲದಲ್ಲಿ ಇದು ಸುಲಭದಲ್ಲಿ ಲಭ್ಯವೂ ಇರಲಿಲ್ಲ, ಮತ್ತೊಂದು ಇದಕ್ಕೆ ಅನಾವಶ್ಯಕ ವೆಚ್ಚ.  ಮಾತ್ರವಲ್ಲ ಆ ಕಾಲದ ಜನರಿಗೆ ಇದರಲ್ಲಿ ಯಾವ ವೈಶಿಷ್ಟ್ಯವೂ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಹಲವು ಕಾರಣಗಳಿಂದ ಅದು ಅನಿವಾರ್ಯವೂ ಹೌದು. ನವರಾತ್ರಿಯ ಒಂಭತ್ತು ದಿನಗಳಲ್ಲಿ ಬೇರೆ ಬೇರೆ ಮನೆತನದವರು ಆ ಒಂದು ದಿನದ ಖರ್ಚು ವೆಚ್ಚಗಳನ್ನು ನೋಡಿ ಬೇಕಾದ ಅಕ್ಕಿ ತೆಂಗಿನ ಕಾಯಿ ತರಕಾರಿ ಒದಗಿಸುತ್ತಿದ್ದರು. ಈಗಲೂ ಅದೇ ಪದ್ಧತಿ ಅಷ್ಟೋ ಇಷ್ಟು ಇದ್ದರೂ  ಈಗ ತರಕಾರಿಗಾಗಿ ಸಾಕಷ್ಟು ಹಣವನ್ನು ವ್ಯಯಿಸುವ ಅನಿವಾರ್ಯತೆ ಇದೆ. ಕಾರಣ ಈಗ ಕೃಷಿ ಮಾಡುವ ಹೊಲ ತೋಟದ ವಿಸ್ತಾರ ಕಡಿಮೆಯಾಗಿದೆ. ಮನೆ ಮನೆಗಳಲ್ಲಿ ತರಕಾರಿ ಬೆಳೆಯುವ ಪರಿಸ್ಥಿತಿ ಎಂದೋ ದೂರಾಗಿದೆ. ಆದರೂ ಇಲ್ಲಿನ ಊಟದ ಮಹತ್ವ ಮೊದಲಿಗಿಂತಲೂ ಅಧಿಕವಾಗಿದೆ. ಹಾಗಾಗಿ ಇಲ್ಲಿ ಬರುವವರ ಭಕ್ತವೃಂದವೇ ಕಾರಣ.  ಬಾಲ್ಯದಲ್ಲಿ ಈ ದೇವಸ್ಥಾನಕ್ಕೆ ಹೋಗಬೇಕಾದರೆ ಸುತ್ತಲಿನ ಹೊಲ ಗದ್ದೆ ತೋಟ ಹಾದು ಹೋಗಬೇಕಿತ್ತು. ಆಗ ಈ ಗದ್ದೆಯ ಹಸುರಿನ ನಡುವೆ ಹೆಜ್ಜೆ ಹಾಕಿ ನಡೆದುಕೊಂಡು ಹೋಗುವುದೇ ಒಂದು ಸಂಭ್ರಮ. 

ಹಸಿವಿನ ಶಮನಕ್ಕೆ ನಮ್ಮಲ್ಲಿ ವಿಶೇಷ ಮಹತ್ವವಿದೆ. ಹಾಗೆ ನೋಡಿದರೆ ನಮಗೆ ಬಾಧಿಸುವ ಪ್ರತೀ ಬಾಧೆಯ ಶಮನವೂ ನಮ್ಮ ಸಂಸ್ಕೃತಿಯಲ್ಲಿ ಪ್ರಾಧಾನ್ಯತೆಯನ್ನು ಪಡೆದಿದೆ. ರೋಗ ಬಾಧೆಯಾಗಿರಬಹುದು, ದಾಹ ಬಾಧೆಯಾಗಿರಬಹುದು ಇವುಗಳನ್ನು ಶಮನ ಮಾಡುವುದನ್ನು ದಾನರೂಪದಲ್ಲಿ ಸೇವಾ ರೂಪದಲ್ಲಿ ಕಂಡುಕೊಂಡ ಸಂಸ್ಕೃತಿ ನಮ್ಮದು. ಮಲಯಾಳಂ ನಲ್ಲಿ ಒಂದು ಮಾತಿದೆ ಅತ್ತಾಯ ಪಟ್ಟಿನಿಕ್ಕಾರ್ ಉಂಡೋ ಅಂತ . ಇದನ್ನು ರಾತ್ರಿ ಮನೆಯ  ಹೊರಗಿನ ಬಾಗಿಲು ಹಾಕುವಾಗ ಕೇಳುವ ಸಂಪ್ರದಾಯ. ಅಂದರೆ ಹೊರಗೆ ಯಾರಾದರೂ ಹಸಿವಾದವರು ಇದ್ದಾರೆಯೇ ? ನಮ್ಮ ಹಸಿವನ್ನು ನೀಗಿಸುವ ಮೊದಲು ಬೇರೆ ಹಸಿವಿನಿಂದ ಬಳಲುವವರ ಬಾಧೆಯನ್ನು ಮೊದಲು ಪರಿಹರಿಸಬೇಕು. ಇದು ನಮ್ಮ ನಮ್ಮ ಸಂಸ್ಕಾರ. ಹಾಗಾಗಿಯೇ ನಮ್ಮ ದೇವಸ್ಥಾನಗಳಲ್ಲಿ  ಹೊತ್ತು ಹೊತ್ತಿಗೆ ಪ್ರತಿ ನಿತ್ಯವೂ ಭೋಜನ ಪ್ರಸಾದವಿರುತ್ತದೆ.  ತೀರಾ ಹಿಂದುಳಿದ ಒಂದು ಸಣ್ಣ ಹಳ್ಳಿಯ ಈ ದೇವಸ್ಥಾನದಲ್ಲೂ ಇದು ಹಿಂದಿನಿಂದಲೂ ಆಚರಣೆಯಲ್ಲಿ ಇದೆ. 

ಸುಮಾರು ಅರ್ಧ ಶತಮಾನಗಳ ಕಾಲ ಇಲ್ಲಿನ ಭೋಜನ ಪ್ರಸಾದವನ್ನು ಸ್ವೀಕರಿಸಿದ್ದೇನೆ. ಪ್ರತಿ ಬಾರಿಯೂ ಇಲ್ಲಿ ಒಂದು ಹಿಡಿಯಷ್ಟಾದರೂ ಪ್ರಸಾದವನ್ನು ಸ್ವೀಕರಿಸುವಲ್ಲಿ ಸಿಗುವ ತೃಪ್ತಿಯನ್ನು ಅನುಭವಿಸಿದ್ದೇನೆ. ಬುದ್ದಿ ಬಲಿಯುವ ಮೊದಲಿನ ಬಾಲ್ಯದಲ್ಲಿ ಇಲ್ಲಿ ಉಂಡ ಊಟದಂತೆ ಅದು ಈಗಲೂ ಅದೇ ಅನುಭವನ್ನು ನೀಡುತ್ತ ಬಂದಿದೆ. ಈಗಲೂ ಇಲ್ಲಿನ ನೈವೇದ್ಯವನ್ನು ಉಂಡಮೇಲೆ ಅದೇ ಬಗೆ ತೃಪ್ತಿಯನ್ನು ಅನುಭವಿಸುವಾಗ ಆವಳ ಮಠದ ಊಟ ಗಮ್ಮತ್ತಾಗಿದೆ ಎನ್ನುವಲ್ಲಿ ಯಾವ ಅತಿಶಯವೂ ಇರುವುದಿಲ್ಲ. ಅದು ಇಲ್ಲಿ ಸಹಜವಾದ ಕ್ಷೇತ್ರಗುಣ. ದಿವ್ಯ ಪ್ರಸಾದದ ಮಹಿಮೆ ಅಂದಿನಿಂದ ಇಂದಿನವರೆಗೂ ಅದರ ಅನುಭವ ಅವರ್ಣನೀಯ.  ಎಲ್ಲ ವೈಶಿಷ್ಟ್ಯಗಳಂತೆ ಇಲ್ಲಿನ ಅನ್ನ ಪ್ರಸಾದದ ಊಟವೂ ಒಂದು ದೊಡ್ಡ ಆಕರ್ಷಣೆ. ಒಂದು ಹೊತ್ತು ಗೋಪುರದಲ್ಲಿ ಕುಳಿತು ಉಂಡು ತೃಪ್ತರಾಗುವುದೆಂದರೆ ಅದು ಪೂರ್ವ ಜನ್ಮದ ಸುಕೃತದ ಫಲ. 

ಬಾಲ್ಯದ ದಿನಗಳಲ್ಲಿ ದೇವಸ್ಥಾನ ಎಂದು ಕಲ್ಪನೆಗೆ ಬಂದರೆ ಚಿತ್ತಭಿತ್ತಿಯಲಿ ಮೊದಲು ಚಿತ್ರಣವಾಗುವುದು ನಮ್ಮ ಆವಳ ಮಠ. ದೇವಸ್ಥಾನ ಎಂದು ಹಿರಿಯರು ತೋರಿಸಿದ್ದೇ ಇಲ್ಲಿಯ ಗರ್ಭಗುಡಿ ಗೋಪುರಗಳನ್ನು. ಪ್ರಸಾದವೆಂದರೆ ಇಲ್ಲಿನ ಸರಳ ಸಾತ್ವಿಕ ಅನ್ನ ನೈವೇದ್ಯವನ್ನು. ಇಂದಿಗೂ ಆ ಪಾವಿತ್ರ್ಯತೆ ಆ ಗೌರವ ಹಾಗೇ ಉಳಿದುಕೊಂಡಿದೆ ಎಂದರೆ ಅದು ನಡೆದುಕೊಂಡು ಬಂದ ರೀತಿಯಲ್ಲಿದೆ. ತಲೆ ಮಾರು ಬದಲಾಗಿರಬಹುದು. ಇಲ್ಲಿನ ವ್ಯವಸ್ಥೆಗಳು ಹಾಗೆ ಹೀಗೆ ಅಂತ ಬದಲಾಗಿರಬಹುದು. ಆದರೆ ಅನ್ನ ಪ್ರಸಾದದ ಪಾವಿತ್ರ್ಯತೆ ಅದು ಬದಲಾಗಿಲ್ಲ. 

ಈಗ ಕಾಲ ಬಹಳಷ್ಟು ಬದಲಾಗಿದೆ. ನಮ್ಮ ಕಣ್ಣೆದುರೇ ಎರೆಡೆರಡು ತಲೆ ಮಾರು ಸಂದು ಹೋಗಿದೆ. ಹಾಗಂತ ಸಂದು ಹೋದವರು ಬಿಂಬಿಸಿ ಹೋದ ನೆನಪುಗಳು ಹಾಗೇ ಉಳಿದಿವೆ. ಅನ್ನ ಪ್ರಸಾದದ ಮುಷ್ಠಿಯೊಳಗಿನ ತುತ್ತುಗಳಂತೆ ಅವುಗಳೂ ಅಸಂಖ್ಯ. ತಿನ್ನುವ ಪ್ರತಿ ಧಾನ್ಯದಲ್ಲೂ ತಿನ್ನುವಾತನ ಹೆಸರು ಇರುತ್ತದೆಂಬ ನುಡಿಯಂತೆ, ಇಲ್ಲಿ ತಿನ್ನುವ ಪ್ರತಿ ತುತ್ತಿನಲ್ಲಿ ಸಂದು ಹೋದ ನೆನಪುಗಳು ಬರೆಯಲ್ಪಟ್ಟಿದೆ. ತಿಂದ ಅನ್ನ ಕರಗಿ ಹೋದರೂ ನೆನಪು ಅದೆಂದಿಗೂ ಮಾಸುವುದಿಲ್ಲ. ಮೊದಲು  ಒಂದು ಹೊತ್ತಿನ ಊಟ ಮಾಡುವುದಕ್ಕೂ ತತ್ವಾರ ಇತ್ತು. ಆಗ ಇಂತಹ ದೇವಾಲಯಗಳು ಅಷ್ಟೋ ಇಷ್ಟೋ ಹಸಿವನ್ನು ನೀಗಿಸುತ್ತಿತ್ತು. ಇಂದು ಅಂತಹ ಪರಿಸ್ಥಿತಿ ಬಹಳ ಕಡಿಮೆ. ಆದರೆ ವಿಪರ್ಯಾಸವೆಂದರೆ ಇಂದು ದೇವಸ್ಥಾನದ ಇಂತಹ ವ್ಯವಸ್ಥೆಗಳ ವ್ಯವಹಾರ ಬಹಳ ಪರಿಶ್ರಮದಿಂದ ಕೂಡಿರುತ್ತದೆ. ನಿತ್ಯ ಪೂಜೆ ಅಥವಾ ಇನ್ನಿತರ ಕೆಲಸಗಳ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದೆಂದರೆ ಹಲವಾರು ತ್ಯಾಗಗಳಿಗೆ ಸಿದ್ದರಾಗಬೇಕಾಗಿದೆ. ನಿತ್ಯ ಪೂಜೆಯನ್ನು ಒಪ್ಪಿಕೊಂಡ ಅರ್ಚಕನಿಗೆ ತನ್ನ ಸ್ವಂತ ಕುಟುಂಬದ ಹಲವು ಕಾರ್ಯಗಳಿಗೆ ಗಮನಹರಿಸುವುದಕ್ಕೆ ಅದಕ್ಕೆ ಸಮಯವನ್ನು ವಿನಿಯೋಗಿಸುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಇದಕ್ಕೆ ರಜೆ ಇಲ್ಲ. ಮೂರು ಹೊತ್ತು ಪೂಜೆ ಅದಕ್ಕೆ ಹೊಂದಿಕೊಂಡ ಕಾರ್ಯಗಳು ನಡೆಯಬೇಕಾಗಿರುವುದು ದೇವತಾ ಕಾರ್ಯದ ಅಗತ್ಯವಾಗಿರುತ್ತದೆ. ಹಾಗಾಗಿ ಇದನ್ನು ಒಪ್ಪಿಕೊಳ್ಳುವವರೂ ಇರುವುದಿಲ್ಲ. ಯಾವುದೋ ಸಂಬಂಧಗಳಿಂದ ಶ್ರಧ್ದಾ ಭಕ್ತಿಯಿಂದ ಅದನ್ನು ಕರ್ತವ್ಯ ಎಂಬಂತೆ ನಿರ್ವಹಿಸುವ ಕಾರಣ ಸೂಕ್ತವಾಗಿ ಇವುಗಳು ನಿರಂತರ ನಡೆದುಕೊಂಡು ಹೋಗುತ್ತವೆ. ಇದು ಆದಾಯದ ಮೂಲವಾಗಿ ಪರಿಗಣಿಸಲ್ಪಡುವುದೇ ಇಲ್ಲ. ಹೆಚ್ಚಿನ ಕಡೆಗಳಲ್ಲಿ ತಟ್ಟೆಕಾಸು ಎಂಬ ಪ್ರತೀತಿ ಇದೆ. ಅದು ಅರ್ಚಕರ ಆದಾಯ. ಆದರೆ ಇಲ್ಲಿ ಬರುವ ಎಲ್ಲಾ ಸಂಗ್ರಹವೂ ನಿಷ್ಕಾಮ ಕರ್ಮದ ಪ್ರತೀಕವಾಗಿ ದೇವಸ್ಥಾನದ ಭಂಡಾರವನ್ನು ಸೇರುತ್ತದೆ. ಈ ಕ್ಷೇತ್ರದ ವೈಶಿಷ್ಟ್ಯತೆಗಳಲ್ಲಿ ಇದೂ ಒಂದು. ಎಲ್ಲರೂ ಸೇರಿಕೊಂಡು ಎಲ್ಲರೂ ಒಂದಾಗಿ ಕೇವಲ ದೈವಾನುಗ್ರಹದ ಫಲಾಪೇಕ್ಷೆಯನ್ನು ಮಾತ್ರ ಬಯಸಿ ನಡೆಸಿಕೊಡುವ ಸೇವೆಯಲ್ಲಿ ಒಂದು ಧನ್ಯತೆ ಇದೆ. ಈ ಧನ್ಯತೆಗೆ ಒಂದು ಬಳಗವೇ ಇದೆ. 


Sunday, November 2, 2025

ದೇವರು ಎಂಬ ವಿಶ್ವಾಸ



 " ದೇವರು ಧರ್ಮವನ್ನು ಏನೆಂದು ತಿಳಿಯದೇ ಅದಕ್ಕೆ ಹೋರಾಡುತ್ತೇವೆ. "


ಮೊನ್ನೆ ನಮ್ಮ ಗ್ರಾಹಕರೊಬ್ಬರನ್ನು, ನಮ್ಮ ವೃತ್ತಿ ರೀತಿಯಲ್ಲಿ ಹೇಳುವುದಾದರೆ ನಮ್ಮ ಕ್ಲೈಂಟ್ (client) , ತಿಂಗಳ ಜಿ ಎಸ್ ಟಿ ಪಾವತಿಸುವಂತೆ ಕರೆ ಮಾಡಿದೆ. ಪ್ರತೀ ತಿಂಗಳು ನಾನು ಹೇಳುವ ಮೊದಲೇ ಕೃತ್ಯ ನಿಷ್ಠೆಯಿಂದ ಪಾವತಿಸುತ್ತಿದ್ದರು. ಮಾತ್ರವಲ್ಲ ಅವರು ಅನ್ಯ ಧರ್ಮಿಯರು.   ಹಿಂದುವಲ್ಲದವರನ್ನು ಅನ್ಯಧರ್ಮಿಯರು ಅಂತ ನನ್ನ ವೈಯಕ್ತಿಕ ನೆಲೆಯಲ್ಲಿ ಕರೆಯಬೇಕು. ಆದರೆ ವಾಡಿಕೆಯಲ್ಲಿ ಹಾಗಿಲ್ಲ ಎಂಬುದು ಮತ್ತೊಂದು ಸಂಗತಿ.  ನಮ್ಮ ಹತ್ತಿಪ್ಪತ್ತು ವರ್ಷಗಳ ವ್ಯಾವಹಾರಿಕ ಸಂಭಂಧ. ಬಹುಶಃ ನಾನು ಬೆಂಗಳೂರಿಗೆ ಬಂದಂದಿನಿಂದ ಇವರು ನನ್ನ ಗ್ರಾಹಕರು. ನನ್ನಿಂದ ಹಲವಾರು ಸರಕಾರಿ ಸಂಬಂಧೀ ಕೆಲಸಗಳನ್ನು ಮಾಡಿಸುತ್ತಾರೆ. ಹಾಗಾಗಿ ಅವರ ಜಿಎಸ್ ಟಿ ಕೆಲಸವನ್ನು ನಾನೇ ಮಾಡುತ್ತಿದ್ದೇನೆ.   ಒಳ್ಳೆಯ ವ್ಯಕ್ತಿ. ಹಾಗಾಗಿಯೇ ಈ ದೀರ್ಘಕಾಲೀನ ವ್ಯವಹಾರ ಮುಂದುವರೆದಿದೆ. ಅವರೇ ಹೇಳುವಂತೆ ನನ್ನ ಮೇಲೆ ಅವರಿಗೆ ಅಪರಿಮಿತ ವಿಶ್ವಾಸವಿದೆ. ನನಗೆ ಕೊಡುವ ಸೇವಾ ಶುಲ್ಕದಲ್ಲಿ ಯಾವುದೇ ಚರ್ಚೆ ತಕರಾರು ಇಲ್ಲದೇ ಪಾವತಿಸುತ್ತಿದ್ದಾರೆ.   ಅವರದೊಂದು ಮಾಂಸಾಹಾರಿ ಹೋಟೆಲು.  ಮೊನ್ನೆ  ಕರೆ ಮಾಡಿದಾಗ ಹೇಳಿದರು, " ಸರ್,  ಹಬ್ಬಗಳ ಸರಣಿ...ಸಹಜವಾಗಿ ನಮಗೆ ವ್ಯಾಪಾರ ಬಹಳ ಕಡಿಮೆ ಇದೆ. ಅದನ್ನು ಹೇಗಾದರೂ ನಿಭಾಯಿಸಬಹುದು, ಆದರೆ ಈ ದೇಣಿಗೆಯ  ಹಾವಳಿ ತುಂಬಾ ಇದೆ ಸರ್, ಗಲ್ಲಿ ಗಲ್ಲಿಯಲ್ಲಿ ಗಣೇಶ ಕೂರಿಸುತ್ತಾರೆ, ದಸರ ದೀಪಾವಳಿ ಅಂತ ಮಾಡುತ್ತಾರೆ. ಬಂದು ಹಣ ಕೇಳುತ್ತಾರೆ. ನನ್ನ ಧರ್ಮ ಬೇರೆ, ಆದರೂ ನನಗೆ ಕೊಡಬಾರದು ಅಂತೇನಿಲ್ಲ. ದೇವರು ಹೇಗಿದ್ದರೂ ಅದು ದೇವರ ಕೆಲಸ ಅಂತ ಕೊಡಬಹುದು. ಆದರೆ, ಅವರು ಐದು ಸಾವಿರ ಹತ್ತು ಸಾವಿರ ಅಂತ ಕೇಳಿದರೆ ನಾನು ಹೇಗೆ ಕೊಡುವುದು.? ಮೊದಲೇ ವ್ಯಾಪಾರ ಕಡಿಮೆ. ನನ್ನ ಸಾಮಾರ್ಥ್ಯಕ್ಕೆ ಅನುಸಾರವಾಗಿ ಅಷ್ಟೋ ಇಷ್ಟೋ ಕೊಟ್ಟರೆ ಹೋಗಲಿ ಅನ್ನಬಹುದು ಆದರೆ ಇಷ್ಟೇ ಕೊಡಬೇಕು ಅಂತ ದೌರ್ಜನ್ಯ ಮಾಡಿದರೆ ಹೇಗೆ? ನೋಡಿ ಜಿಎಸ್ ಟಿ ಕಟ್ಟೋದಕ್ಕೆ ನಾನು ಸಾಲ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಇದೆ. " 

ಗಣೇಶ ಹಬ್ಬಕ್ಕೂ ಇಮಾಂ ಸಾಬಿಗೂ ಎತ್ತಣಿಂದ ಸಂಬಂಧ ಅಂತ ಹಳೆಯ ಮಾತು ಇದೆ. ಇದು ಅದೇ ತರಹ. ನಾವು ಧರ್ಮದಿಂದ ದೂಷಿಸಬಹುದು. ಆದರೆ ನಮ್ಮ ಧರ್ಮಾಚರಣೆಗೆ ಅನ್ಯ ಧರ್ಮೀಯರಿಂದ ದೇಣಿಗೆ ಸಂಗ್ರಹಿಸುವುದು ತಪ್ಪು.  ಹೋಗಲಿ ಕೇಳಿದರೂ..ಇಷ್ಟೇ ಕೊಡಬೇಕು ಎಂದು ದಬ್ಬಾಳಿಕೆ ಮಾಡುವುದು ಎಷ್ಟು ಸರಿಯಲ್ಲ.  ದೈವ ವಿಶ್ವಾಸ  ನಂಬಿಕೆ ಎಂಬುದು ತೀರ ವೈಯಕ್ತಿಕ ವಿಚಾರ. ಒಬ್ಬನನ್ನು ಅವನ ವೈಯಕ್ತಿಕ ವಿಚಾರವನ್ನು ಹೇಳಿ ಅವನನ್ನು ಅಪರಾಧಿಯನ್ನಾಗಿಯೋ ಅಥವಾ ದೂರೀಕರಿಸುವುದು ಸರಿಯಲ್ಲ. ಇದು ನನ್ನ ಅಭಿಮತ. ವ್ಯಕ್ತಿಗತ ವಿಚಾರಗಳು ಸ್ವಭಾವಗಳು ಪರ ಪೀಡನೆಯಾಗದೇ ಇದ್ದರೆ ಅವರನ್ನು ದೂರ ಮಾಡುವುದರಲ್ಲಿ ಅರ್ಥವಿಲ್ಲ. ವೈಯಕ್ತಿಕ ವಿಚಾರ ಭಿನ್ನತೆ ಹಲವು ಇರುತ್ತದೆ. ಒಂದು ಮರ ಹಣ್ಣೇ ಕೊಡುವುದಿಲ್ಲ ಎಂದು ಅದನ್ನು ಕಡಿಯುವುದು ಸರಿಯೇ? ಏನು ಮಾಡೋಣ ಇದು ಪ್ರಕೃತಿ. ನಾವೂ ಅದರ ಅಂಗ. ಒಬ್ಬ ಕಳ್ಲನೋ ಕಾಮುಕನೋ ಅದು ಆತನ ವ್ಯಕ್ತಿಗತವಾಗಿದ್ದರೂ ಅದು ಪರಪೀಡನೆಯಾಗುತ್ತದೆ. ಅಂಥವರನ್ನು ದೂರ ಮಾಡಬೇಕು ಸರಿ.  ಅದರೆ ಒಬ್ಬ ವೈಯಕ್ತಿಕವಾಗಿ ಹಲವು ದೌರ್ಬಲ್ಯಗಳನ್ನು ಅನುಭವಿಸಬಹುದು. ಆತನ ವಿಶ್ವಾಸಗಳು ನಂಬಿಕೆಗಳು ನಡವಳಿಕೆಗಳು ಬೇರೆಯೇ ಇರಬಹುದು. ಅದನ್ನು ಆಕ್ಷೇಪಿಸುವುದು ಸರಿಯಲ್ಲ.  ವೈಚಾರಿಕ ಭಿನ್ನತೇ ದ್ವೇಷಕ್ಕೆ ಕಾರಣವಾಗಬಾರದು. ದೇವರು ಧರ್ಮ ಏನೆಂದು ತಿಳಿಯದೇ ಅದಕ್ಕಾಗಿ ಹೋರಾಡುತ್ತಾರೆ.  ಆ ಅಜ್ಞಾನವೇ ದ್ವೇಷಕ್ಕೆ ಕಾರಣವಾಗುತ್ತದೆ.  ದೇವರನ್ನು ನಂಬಿದಷ್ಟು ಅದು ಏನೆಂಬುದನ್ನು ನಂಬುವುದಿಲ್ಲ. ದೇವರಿಗಿಂತಲೂ ನಮ್ಮ ಅಹಂಭಾವವೇ ಮುಖ್ಯವಾಗುತ್ತದೆ ಹೊರತು ದೇವರು ಧರ್ಮ ಮುಖ್ಯವಾಗುವುದಿಲ್ಲ. ಅಹಂಕಾರವನ್ನು ತ್ಯಜಿಸಿದಲ್ಲಿ ಮಾತ್ರವೇ ಭಗವಂತನನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಭಗವದ್ಗೀತೆಯ ತತ್ವಮಸಿ ಎಂಬ ತತ್ವ ಅದು. ನಮ್ಮಲ್ಲಿರುವ ಉದಾತ್ತ ತತ್ವಗಳು  ಗ್ರಂಥದಿಂದ ಹೊರಗೆ ಬರುವುದಿಲ್ಲ.

ಇತ್ತೀಚೆಗೆ ನಮ್ಮ ಬೀದಿಯಲ್ಲಿ ಗಣೇಶನನ್ನು ಕೂರಿಸುವುದಕ್ಕೆ ದೇಣಿಗೆ ಸಂಗ್ರಹಕ್ಕೆ ಹುಡುಗರು ಬಂದಿದ್ದರು. ನಾನು ಹೇಳಿದೆ,  ಹೀಗೆ ರಸ್ತೆಯಲ್ಲಿ ದೇವರನ್ನು ಕೂರಿಸುವುದರಲ್ಲಿ ನನಗೆ ನಂಬಿಕೆ ಇಲ್ಲ. ನನ್ನನ್ನು ವಿಚಿತ್ರವಾಗಿ ನೋಡಿದರು. ಒಬ್ಬ ದೈವ ದ್ವೇಷಿಯಂತೆ ಕಂಡಿತು. ಧರ್ಮ ವಿರೋಧಿ ಅನ್ನಿಸಿದರೂ ಅನ್ನಿಸಿರಬಹುದು. ಮನೆಯಲ್ಲಿ ಎರಡು ಹೊತ್ತು ನೂರೆಂಟು ಗಾಯತ್ರೀ ಜಪ ಮಾಡುವವನು ನಾನು ಅದು ಅವರಿಗೆಲ್ಲಿ ಆರಿವಾಗಬೇಕು? ಅವರವರ ಚಿಂತನೆಯ ರೀತಿಯಲ್ಲಿ ನಂಬಿದರೆ ಮಾತ್ರ ಅವರು ದೈವ ಭಕ್ತರು ಎನಿಸಿಕೊಳ್ಳುತ್ತಾರೆ.  ಇಲ್ಲಿ ದೇವರನ್ನು ನಂಬುವುದು ಎಂದರೆ ಅದು ಪ್ರದರ್ಶನಕ್ಕೆ ಯೋಗ್ಯವಾಗಿರಬೇಕು. ಯಾರದರೂ ನಮ್ಮನ್ನು ಗಮನಿಸುತ್ತಾರೆ ಎಂದಿದ್ದರೆ, ನಮ್ಮದು ಒಂದೆರಡು ನಮಸ್ಕಾರ ಪ್ರದಕ್ಷಿಣೆ ಹೆಚ್ಚಿರುತ್ತದೆ. ನಮ್ಮ ದಾನ ಧರ್ಮಗಳು ದೊಡ್ಡದಾಗಿರುತ್ತದೆ. ಯಾರೋ ನೊಡುತ್ತಾರೆ ಎಂದು ನಾವು ನಮಸ್ಕಾರ ಮಾಡಿದರೆ, ಆ ನಮಸ್ಕಾರದ ಪುಣ್ಯ ಫಲ ಯಾರಿಗೆ ಸಲ್ಲಬೇಕು?  ಮಾಡುವವನಿಗೋ ನೋಡುವವನಿಗೋ? ಈ ಸೂಕ್ಷ್ಮ ಅರ್ಥವಾಗಬೇಕಾದರೆ ತಲೆಯಲ್ಲಿ ಬುದ್ದಿಯ ವಾಸವಿರಬೇಕು. 

ದೇವರ ಬಗ್ಗೆ ಹೇಳಿದರೆ ದೇವರು ಶಾಪ ಕೊಟ್ಟುಬಿಡುತ್ತಾನೆ ಎಂದು ಭಯ ಹುಟ್ಟಿಸಿಬಿಡುತ್ತಾರೆ. ಭಯದಿಂದ ದೇವರ ಭಕ್ತಿ ಪ್ರಚೋದನೆಗೊಂಡರೆ ಅದು ಭಕ್ತಿ ಹೇಗಾಗುತ್ತದೆ. ಭಯ ಎಂಬುದು ತಾತ್ಕಾಲಿಕ.  ಭಯ ಕರಗಿದಾಗ ನಂಬಿಕೆಯೂ ಕಳೆದು ಹೋಗಬಹುದು. ನಾವು ಯಾವುದೋ ಭ್ರಮೆಗೊಳಗಾಗಿ ಯಾವುದನ್ನೂ ಮಾಡಬರದು. ಭ್ರಮೆ ಕರಗಿದಾಗ ಆ ಕಾರ್ಯದ ಮಹತ್ವವೂ ಹೋಗಿಬಿಡುತ್ತದೆ.  ಉದಾಹರಣೆಗೆ ನಾಳೆ ರೋಗಬರುತ್ತದೆ ಸಾಯುತ್ತೇನೆ ಅಂತ ಭ್ರಮೆಯಲ್ಲಿ ಯೋಗಾಭ್ಯಾಸ ಮಾಡಬಾರದು.  ಯೋಗಾಭ್ಯಾಸ ಅದು ಭ್ರಮಾತ್ಮಕ ಕ್ರಿಯೆಯಲ್ಲ. ಅದು ದೇಹದ ಹಸಿವನ್ನು ನೀಗಿಸುವಂತೆ ಜೀವನದ ಸಹಜ ಕ್ರಿಯೆಯಾಗಬೇಕು. ಹಾಗಾಗಿ ಅದನ್ನು ಸಹಜಯೋಗ ಎನ್ನುವುದು. ಬದುಕಿನ ಪ್ರತಿಯೊಂದು ಕರ್ಮವೂ ಭ್ರಮೆಯಿಂದ ಮಾಡಬಾರದು. 

ದೇವರು ಎಂಬುದು ಒಂದು ದಿವ್ಯ ಅನುಭವ. ಆ ದೇವರು ಎಲ್ಲೂ ಕಾಣುವುದಿಲ್ಲ. ನಾವು ಕಾಣಬೇಕು. ವಿವೇಕಾನಂದರು ಹೇಳಿದ್ದಾರೆ, ದೇವರು ಎಲ್ಲೂ ವ್ಯಕ್ತವಾಗುವುದಿಲ್ಲ. ನಾವು ಈ ಪ್ರಕೃತಿಯನ್ನು ಸೇವಿಸುವುದರಲ್ಲಿ ಎಲ್ಲರ ಸೇವೆ ಮಾಡುವುದರಲ್ಲಿ ಭಗವಂತನಿದ್ದಾನೆ. ಪ್ರತಿಯೊಬ್ಬರಲ್ಲು ಆತ್ಮ ರೂಪದಲ್ಲಿ ದೇವರು ಇರುತ್ತಾನೆ. ಆತನ ಸೇವೆ ಮಾಡುವುದೆಂದರೆ ದೇವರ ಸೇವೆ ಮಾಡಿದಂತೆ. ಇಂತಹ ಉದಾತ್ತ ತತ್ವಗಳನ್ನು ಪ್ರತಿಪಾದಿಸುವ ನಮ್ಮ ಧರ್ಮದಲ್ಲಿ ಹೀಗೆ ನಮ್ಮ ಆಚರಣೆಗೆ ಪರಧರ್ಮೀಯರನ್ನು ಪೀಡಿಸುವುದೆಂದರೆ ಅದು ಅಕ್ಷಮ್ಯ.  ಅಹಂ ಬ್ರಹ್ಮಾಸ್ಮಿ ಅಂತ ಶಂಕರಾಚಾರ್ಯರು ಬೋಧಿಸಿದರೂ ಎಲ್ಲರಲ್ಲು ಬಹ್ಮನ ಅಸ್ತಿತ್ವವನ್ನು ಕಾಣದೇ ಶಂಕರಾಚಾರ್ಯರನ್ನು ಗುರು ಅಂತ ಪೂಜಿಸುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲೋಂದು ಭಾವವಿದೆ, ಯಾರಿಗೋ ವಂಚನೆ ಮಾಡಿದ್ದು, ಅಥವಾ ಕಸಿದು ಕಿತ್ತು ಪಡೆದ ಅಪರಾಧಗಳ  ಪ್ರಾಯಶ್ಚಿತ್ತ ಅದನ್ನು ದೇವರಿಗೆ ಅರ್ಪಿಸಿವುದರಲ್ಲಿದೆ. ಹೇಗೋ ಅನ್ಯಾಯದಿಂದ ಸಂಪತ್ತನ್ನು ಸಂಪಾದಿಸಿ ದೇವರ ಹುಂಡಿಗೆ ಹಾಕಿದರೆ ನಾವು ಪಾಪದಿಂದ ಮುಕ್ತರಾಗುತ್ತೇವೆ. ಆದರೆ ದೇವರಿಗೆ ಅರ್ಪಿಸುವುದು ಪವಿತ್ರವಾಗಿರಬೇಕಾದರೆ ಅದು ಯಾರನ್ನೂ ಹಿಂಸಿಸದೆ, ಸತ್ಯ ನ್ಯಾಯದಿಂದ ಸಂಪಾದಿಸಿರಬೇಕು. ಈ ಪರಿಜ್ಜಾನ ಮೂಡುವ ತನಕ ಎಷ್ಟು ದೊಡ್ಡ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದರೂ ಮೂರ್ತಿಯ ಗಾತ್ರದಷ್ಟೇ ನಮ್ಮ ಪಾಪವೂ ಬೆಳೆಯಬಹುದೇ ಹೊರತು ಪುಣ್ಯ ಸಂಚಯನ ಸಾಧ್ಯವಿಲ್ಲ.