Monday, January 15, 2024

ಪ್ರಾಣಮಯ ಶ್ರೀರಾಮ


ಲೋಕಾಭಿರಾಮಂ ರಣರಂಗ ಧೀರಂ ರಾಜೀವ ನೇತ್ರಂ ರಘುವಂಶ ನಾಥಂ

ಕಾರುಣ್ಯ ರೂಪಂ ಕರುಣಾಕರಂತಂ  ಶ್ರೀರಾಮ ಚಂದ್ರಂ ಶರಣಂ ಪ್ರಪದ್ಯೆ


ಕಳೆದವರ್ಷ ಹೆಚ್ಚು ಕಡಿಮೆ ಇದೇ ಹೇಮಂತ ಋತುವಿನ ಸಮಯದಲ್ಲಿ  ನಾವು ಅಯೋಧ್ಯೆಗೆ ಭೇಟಿ ನೀಡಿದ್ದ ಆ ಭಾವನಾತ್ಮಕ ಘಳಿಗೆಗಳ ನೆನಪುಗಳು ಈಗ ಮರುಕಳಿಸುತ್ತಿವೆ. ಮೊನ್ನೆ ಶ್ರೀರಾಮ ಪ್ರಸಾದ ರೂಪದ ಮಂತ್ರಾಕ್ಷತೆ ಕೈ ಸೇರಿದಾಗ ನಿಜಕ್ಕೂ ನಾನು ಭಾವುಕನಾದೆ. ಆ ಮಧುರ ನೆನಪುಗಳು ಸ್ಮರಣೆಗೆ ಬಂದು ಒಂದರೆ ಘಳಿಗೆ ರಾಮನಲ್ಲದೇ ಬೇರೆ ಏನೂ ಯೋಚಿಸದಂತೆ ಹೃದಯ ಶ್ರೀರಾಮ ಮಯವಾಗಿಬಿಟ್ಟಿತು. ಆಯೋಧ್ಯೆಗೆ ಮತ್ತೊಮ್ಮೆ ಹೋಗಬೇಕೆಂಬ ತುಡಿತ ಹುಟ್ಟಿಕೊಂಡಿತು. ಅದು ಎಂದು ಸಫಲವಾಗುವುದೋ ಆ ರಾಮನೇ ಬಲ್ಲ. 

ಅಯೋಧ್ಯೆ....ಅರ್ಥದಲ್ಲಿ ಅದು ಯೋಧನಿಲ್ಲದ ಊರು. ಅಲ್ಲಿ ರಾಮನೊಬ್ಬನೇ ಯೋಧ ಹೀಗೆ ಅವರವರ ಭಾವಕ್ಕೆ ಅಯೋಧ್ಯೆ ಕಂಡವರಿದ್ದಾರೆ. ಯೋಧನಿಲ್ಲದ ಊರಿನಲ್ಲಿ ಹೋರಾಟದ ಫಲರೂಪವಾಗಿಯೇ ರಾಮ ಮಂದಿರ ನಿರ್ಮಾಣವಾಗುವುದು ಅದೊಂದು ವಿಪರ್ಯಾಸ. ಬಹುಶಃ ಈ ಹೋರಾಟವೆಂಬುದು ರಾಮ ತೋರಿಸಿಕೊಟ್ಟ ಹಾದಿಯಂತೆ ಭಾಸವಾಗುತ್ತದೆ. ಆಯೋಧ್ಯೆಯಲ್ಲಿ ನಾವು ಕಾಲಿಟ್ಟ ಘಳಿಗೆ ಇನ್ನೂ ನೆನಪಿದೆ. ಸೂರ್ಯ ಅಯೋಧ್ಯೆಯ ಮೇಲ್ಮೈಯನ್ನು ಸವರಿ ಪಡುವಣದಲ್ಲಿ ವಿಶ್ರಮಿಸುವುದಕ್ಕೆ ತೆರಳುತ್ತಿದ್ದ. ಅದೊಂದು ಸುಂದರ ಘಳಿಗೆ. ಹಿತವದ ತಣ್ಣನೆಯಗಾಳಿ ಮೈಗೆ ಸವರಿದಂತೆ ರಾಮನ ತಣ್ಣನೆಯ ಮೂರ್ತಿ ಮೈಗೆ ಬಂದು ತಬ್ಬಿಕೊಂಡಂತೆ ಭಾಸವಾಯಿತು. ಈಗ ಆ ಮಧುರ ನೆನಪು ಮೈ ಮನ ಅರಳುವಂತೆ ಮಾಡಿತು.  ಅಯೋಧ್ಯೆಯಲ್ಲಿ ನಾವು ಉಳಿದುಕೊಂಡ ಸ್ಥಳ  ನಗರದ ಮಧ್ಯೆ ಹಳ್ಳಿಯಂತೆಯೇ  ಇತ್ತು. ಹಳೆಯದಾದ ಒಂದು ಕಟ್ಟಡ...ಅಲ್ಲಲ್ಲಿ ಕೆಲವು ಮರಗಳು ಅದರ ಬುಡದಲ್ಲಿ ಕಟ್ಟೆಗಳು ಹಳ್ಳಿಯ ಸೊಗಡಿನ ಓಡಾಡುವ ಜನಗಳು , ಎಲ್ಲಕ್ಕಿಂತಲೂ ಮಿಗಿಲಾಗಿ ಆವರಿಸಿಕೊಂಡ ದಿವ್ಯ ಮೌನ. ಅದರ ನಡುವೆ ಹಕ್ಕಿಗಳ ಕಲರವ ಅದರ ಜತೆಗೆ ನಮ್ಮೆಲ್ಲರ ಮಾತು ನಗುವಿನ ಸಡಗರ.  ಇಲ್ಲ ಈ ಅಯೋಧ್ಯೆಯ ಘಳಿಗೆಗಳನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಆ ಗಂಭೀರ ಮೌನದಲ್ಲಿ ಶ್ರೀರಾಮನ ಆಗಮನದ ಸ್ವಾಗತ ಗಾನವಿರಬಹುದೇ?  ಈಗ ಆ ಗಾನದ ಫಲಶ್ರುತಿಯಾದಂತೆ ರಾಮನ ಪ್ರಾಣ ಪ್ರತಿಷ್ಠೆ ಆಗುತ್ತಿದೆ. ಈ ವರ್ತಮಾನ  ಅದೊಂದು ದಿವ್ಯ ಘಳಿಗೆಯಾಗಬಹುದು. 

ನಾವಲ್ಲಿದ್ದ ಕೆಲವೇ  ಕ್ಷಣಗಳಲ್ಲಿ ಮಂದಿರದ ಸುತ್ತ ಮುತ್ತಲೆಲ್ಲ ಓಡಾಡಿ ರೋಮಾಂಚನ ಪಡೆದಿದ್ದೇವೆ. ಆಗಿನ್ನು ಸುತ್ತಮುತ್ತಲಿನ ಕಟ್ಟಡಗಳು ಭಗ್ನಾವಶೇಷಗಳಾಗಿ ನವೀಕರಣಕ್ಕೆ ಸಜ್ಜಾಗುತ್ತಿದ್ದವು.  ಮುಂಜಾನೆಯ ಸರಯೂ ನದಿಯ ದೃಶ್ಯವಂತೂ ಭಾವನೆಗಳ ಪೂರವನ್ನೆ ಶರೀರದಾದ್ಯಂತ ಅಭಿಷೇಕವನ್ನು ಮಾಡಿತ್ತು. ಇಲ್ಲೇ... ಇಲ್ಲೇ ಇದೇ ಹರಿಯುವ ಸರಯೂ ನದಿಯಲ್ಲಿ ರಾಮ ತನ್ನ ದೇಹದ ಮಾಲಿನ್ಯವನ್ನು ಕಳೆದಿರಬಹುದು. ಆ ಮಾಲಿನ್ಯವನ್ನು ಕಳೆದ ರಾಮನ ದೇಹ ಶುದ್ದವಾದರೆ, ಆ ಮಾಲಿನ್ಯವನ್ನು ತೊಳೆದ ಸರಯೂ ಪಾವನ ರೂಪ ಪಡೆದಿರಬಹುದು.  ಸರಯೂ ನೀನೆಷ್ಟು ಧನ್ಯೆ? ನಿನ್ನ ಮಡಿಲಲ್ಲಿ ಕುಳಿತ ನಾನೆಷ್ಟು ಧನ್ಯ?  ಆ ಸರಯೂ ಅಯೋಧ್ಯೆಯ ಪುಣ್ಯ ಭೂಮಿಯನ್ನು ತಬ್ಬಿಕೊಂಡಿದ್ದರ ಕಾರಣವಿರಬಹುದು ನದಿ ಬಿಟ್ಟು ಬಿಡಲಾಗದಂತೆ ಮಂದವಾಗಿ ಹರಿಯುತ್ತಿತ್ತು.  ಸರಯೂ ತೋಳಲ್ಲಿ ಸೆರೆಯಾದ ಅಯೋಧ್ಯೆ ಅದೆಷ್ಟು ಸುಂದರ?  ರಾಮನ ಅಸ್ತಿತ್ವವನ್ನು ತನ್ನ ತೋಳಿನಲ್ಲಿ ಬಂಧಿಸಿ ಇಂದು  ಆ ಸಂದೇಶವನ್ನು ನಮಗೆ ಈಗ ರವಾನಿಸುತ್ತದೆ. 



ಅ ಅಯೋಧ್ಯೆಯ ಮಣ್ಣಿನಕಣಗಳಲ್ಲಿ ಹೆಜ್ಜೆ ಇಡುವಾಗ ರಾಮ ಹನುಮನ ನೆನೆಯದಿರೆ ಆ ಭಾವನೆಗಳಿಗೆ ಅರ್ಥವೇ ಒದಗಲಾರದು. ಹನುಮಾನ್ ಗುಡಿ ಅಯೋಧ್ಯೆಯ ರಕ್ಷಣೆಯ ಹೊಣೆಯನ್ನು ತ್ರೇತಾಯುಗದಲ್ಲೇ ಹೊತ್ತುಕೊಂಡಿತ್ತು. ಅದರ ಪ್ರತೀಕವೆಂಬಂತೆ ಈ ಶತಮಾನದಲ್ಲಿ ನಡೆದ ಹೋರಾಟದ ಫಲಶ್ರುತಿಯೆಂಬಂತೆ ಈಗ ಶ್ರೀ ರಾಮನ ಪ್ರಾಣ  ಫಲರೂಪ ಪಡೆಯುತ್ತಿದೆ.  ಶ್ರೀರಾಮ ಎಂಬುದು ಕೇವಲ ಅಯೋಧ್ಯೆಗೆ ಮಾತ್ರ ಸೀಮಿತವಲ್ಲ. ಆದರೂ ಅಯೋಧ್ಯೆ ಎಂಬ ಹೆಸರು ಅಲ್ಲಿಗೆ ಭೇಟಿಗೆ ಕೊಟ್ಟಾಗಿನಿಂದ ರೋಮಾಂಚನ ಉಂಟುಮಾಡಿ ಪ್ರಚೋದನೆಗೊಳಿಸುತ್ತದೆ. ರಾಮ ಎಲ್ಲೆಲ್ಲೂ ಇರುವ ಸರ್ವಾಂತರ್ಯಾಮಿ ವ್ಯಕ್ತಿತ್ವ.  ವಾಲ್ಮೀಕಿಯಲ್ಲಿ ಆ ಮರ ಈ ಮರ ಎನ್ನುವ  ಬೀಜಾಕ್ಷರಗಳಿಂದ ರಾಮಮಂತ್ರ, ಹಾಗೆಯೇ     ರಾಮಾಯಣಕ್ಕೆ ಕಾರಣ ಎನ್ನುವ ಎರಡು ವ್ಯಕ್ತಿಗಳು, ಒಂದು ಮಂಥರೆ, ಇನ್ನೊಂದು ರಾವಣ.  ರಾವಣನಲ್ಲಿ ಇರುವ ’ರಾ ’ ಮಂಥರೆಯಲ್ಲೂ ಇರುವ ’ಮ’ ಎಲ್ಲೆಲ್ಲೂ ರಾಮನ ಅಸ್ತಿತ್ವವನ್ನೇ ಹೇಳುತ್ತದೆ. ದುಷ್ಟ ಮನೋವೃತ್ತಿಯಲ್ಲೂ ರಾಮನಿದ್ದರೂ ಅದರಿಂದಲೂ ರಾಮನ ವ್ಯಕ್ತಿತ್ವ ಪುಟಗೊಂಡಿದ್ದು ರಾಮನೆಂಬುದು  ಚೈತನ್ಯವಾಗುವ ಕಥೆ.  ರಾಮ ಅಯೋಧ್ಯೆಯಲ್ಲೇ ಇರಲಿ ಅದರೆ ಅದು ದೇಹದ ಹೃದಯದಂತೇ  ಇಡೀ ದೇಶಕ್ಕೆ ಹೃದಯವಾಗಿರುತ್ತದೆ. ಇದು ಶುದ್ದ ಭಾವನೆಯ ಪ್ರತೀಕ. ಮನೆಯಲ್ಲಿ ಎಲ್ಲೆಡೆ ದೇವರಿದ್ದರೂ ದೇವರ ಕೋಣೆಯೊಂದು ಯಾಕೆ ಬೇಕು? ದೇವಾಲಯದ ಪ್ರತೀ ಅಂಚಿನಲ್ಲೂ ದೇವರ ಅಸ್ತಿತ್ವ ಇರುವಾಗ ಗರ್ಭಗುಡಿ ಏಕೆ? ಇದು ಕೇವಲ ಭಾವನೆಯ ಪ್ರತೀಕ. ಮನುಷ್ಯ ಹುಟ್ಟುವಾಗ ಹುಟ್ಟಿಕೊಳ್ಳುವ ಭಾವನೆ ಅವನೊಂದಿಗೇ ಸಮಾಧಿಯಾಗಿ ಇಲ್ಲವಾಗುತ್ತದೆ. ಆದರೂ ಮನುಷ್ಯನ ಅಸ್ತಿತ್ವ ಇರುವುದು ಈ ಭಾವನೆಗಳಲ್ಲಿ. 

ಕಾಶಿಯಲ್ಲಿ ಎಲ್ಲಿ ಅಗೆದರೂ ಸಿಗುವುದು ಗಂಗೆಯ ನೀರು. ಸಾರ್ವಜನಿಕ ಕೊಳವೆಯಲ್ಲೂ ಹರಿಯುವುದು ಗಂಗೆಯ ನೀರು, ಹಾಗಿದ್ದರೂ ಗಂಗೆಯಲ್ಲೇ ಹೋಗಿ ಮುಳುಗುವುದು ಯಾಕೆ? ಮನುಷ್ಯ ಭಾವನೆಯೊಂದಿಗೆ ಬದುಕು ಸವೆಸುವುದು. ಹಸಿವಿದ್ದರೂ ಶಮನವಾದರೂ ಭಾವನೆಗಳು ಜತೆಗೇ ಇರುತ್ತವೆ.  ಗಂಗೆ ಕಾಶಿಯಲ್ಲಿ ಹರಿದರೂ ಅಂತರಗಂಗೆಯಾಗಿ ದೇಶವ್ಯಾಪಿಸುವಂತೆ, ರಾಮ ಅಯೋಧ್ಯೆಯಲ್ಲಿದ್ದರೂ ದೇಶವ್ಯಾಪಿ ಮಾತ್ರವಲ್ಲ ಸರ್ವ ಜೀವವ್ಯಾಪಿಯಾಗುತ್ತಾನೆ. ದೇಹದಲ್ಲಿ ಎಲ್ಲಿ ವ್ಯಾಧಿಯಾದರೂ ಔಷಧಿ ಕೊಡುವುದು ಹೊಟ್ಟೆಗೆ. ಹಾಗೆ ಅಯೋಧ್ಯೆ ಎಂಬುದು ಎಲ್ಲವೂ ಆಗಿಬಿಡುತ್ತದೆ.  ಶಶಾಂಕನಾಗಿರುವ ಚಂದ್ರ ರಾಮನ ಜತೆಯಾಗಿ ಶ್ರೀ ರಾಮಚಂದ್ರನಾಗಿ ತನ್ನ ಕಳಂಕವನ್ನು ಕಳೆದು ಶುಭ್ರವಾದಂತೆ ರಾಮನಾಮ ವ್ಯಾಪಕವಾಗಿ ನಾವೂ ಪರಿಪೂರ್ಣ ಶುದ್ದಿಯಿಂದ ಪವಿತ್ರರಾಗುತ್ತೇವೆ. 

        ಭಗವಂತ ಅವತಾರ ರೂಪಿಯಾಗಿ ಮನುಷ್ಯನಾಗುತ್ತಾನೆ. ಹೆತ್ತ ಅಪ್ಪ ತಾನು ಸ್ನಾನ ಧ್ಯಾನ ಮಾಡಿ ಮಗನಿಗೆ ಪ್ರೇರಕವಾದಂತೆ ರಾಮ ತನ್ನ ನಡೆಯಿಂದ ಪರಿಪೂರ್ಣ ಮನುಷ್ಯನಾಗಿ ರಾಜಾ ರಾಮನಾಗಿ, ಪುರುಷೋತ್ತಮನಾ ಆದರ್ಶ ರೂಪ. ಈ ಆದರ್ಶಗಳು ಸರ್ವ ಪ್ರೇರಕ ಶಕ್ತಿಯಾಗಿ ರಾಮನ ಆದರ್ಶ ಸರ್ವತ್ರವಾಗಲಿ. 


ಜೈ ಶ್ರೀರಾಮ








No comments:

Post a Comment