Wednesday, January 17, 2024

ಕಂಪನ ..


ರಾಜಕಾರಿಣಿಯೊಬ್ಬರ ಕಂಪನ ....ಈಗಿನವರ ಭಾಷೆಯಲ್ಲಿ ವೈಬ್  ಅಂದರೆ  ವೈಬ್ರೇಶನ್ ....ಇದರ ಬಗ್ಗೆ ಯಾಕೋ ಒಂದೆರಡು ಅನಿಸಿಕೆ ಹೇಳಬೇಕೆಂದೆನಿಸಿದೆ. ಕಾರಣ ರಾಜಕೀಯ ನಾಯಕರೊಬ್ಬರು ಹೇಳಿದ ಮಾತು ಇದರ ಬಗ್ಗೆ ಹೇಳುವ ಪ್ರಚೋದನೆಯನ್ನು ನೀಡಿದ್ದಂತು ಸತ್ಯ. ನಾಯಕರ ಮಾತಿನ ಬಗ್ಗೆ ವಿಮರ್ಷೆಯಾಗಲೀ ಟೀಕೆ ಲೇವಡಿಯಾಗಲೀ ಒಂದೂ ಇಲ್ಲ.  ಅದರ ಸರಿ ತಪ್ಪನ್ನು ಹೇಳುವಷ್ಟು ತಿಳುವಳಿಕೆ ನನಗಿಲ್ಲ. ಮತ್ತೆ ಸುಮ್ಮನೆ ವಿವಾದಗಳಿಗೆ ಪುಷ್ಟಿಕೊಡುವುದಕ್ಕಿಂತ ನನ್ನ ಒಂದೆರಡು ಅನಿಸಿಕೆಗಳಿಗಷ್ಟೇ ಸೀಮಿತ. 

ನಾಯಕರಿಗೆ ಅಯೋಧ್ಯೆಗೆ ಹೋದಾಗ ಟೆಂಟ್ ನಲ್ಲಿರುವ ರಾಮನ ಗೊಂಬೆಯನ್ನು ನೋಡಿ ಅದು ಯಃಕಶ್ಚಿತ್ ಗೊಂಬೆಯಾಗಿ ಕಂಡು ಯಾವುದೇ ಕಂಪನ ಉಂಟಾಗಲಿಲ್ಲ. ಯಾಕೆ ಕಂಪನ ಉಂಟಾಗಲಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ . ಅದನ್ನು ಮುಕ್ತ ಮನಸ್ಸಿನಿಂದ ಗೌರವಿಸುವ. ಪ್ರಜಾಪ್ರಭುತ್ವದ ಸಂಕೇತವದು. ಈ ಕಂಪನ ಎಂಬುದು ಅದೊಂದು ಮನಸ್ಸಿನ ಪ್ರೇರಕ ಶಕ್ತಿ. ಮನಸ್ಸಿನ ಅಂತರಂಗದ ಭಾವನೆ. ಅದು ಕನಸಿನ ಸುಪ್ತಾವಸ್ಥೆಯಲ್ಲೂ ಜಾಗೃತವಾಗಿರುತ್ತದೆ. ನಿದ್ರೆಯಲ್ಲಿರುವಾಗ ಹೆತ್ತ ತಾಯಿ ಬಂದು ಮೈದಡಿವಿದಾಗ ಉಂಟಾಗುವಂತೆ, ಅದೊಂದು ವೈಬ್.  ಹಾಗಂತ ಬೇರೊಬ್ಬರ ತಾಯಿ ಬಂದು ಮೈದಡಿವಿದರೆ ಅಲ್ಲಿ ಆ ಕಂಪನ ಉಂಟಾಗುವುದಕ್ಕೆ ಸಾಧ್ಯವಿಲ್ಲ. 

ಶ್ರೀರಾಮನನ್ನು ಕಾಣುವಾಗ ತ್ರೇತಾಯುಗದಲ್ಲೂ ಕಂಪನ ಉಂಟಾಗದವರು ಇದ್ದರು.  ರಾವಣ, ವಾಲಿ, ಕಬಂಧ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಆದರೂ ಕೊನೆಯ ಕ್ಷಣದಲ್ಲಿ ರಾವಣನಿಗೂ ವಾಲಿಗೂ ಕಂಪನ ಉಂಟಾಗಿತ್ತು ಶ್ರೀರಾಮನನ್ನು ಕಾಣುವಾಗ. ಅದಕ್ಕಾಗಿ ಅವರು ಜನ್ಮಾಂತರದಿಂದ ಕಾದು ಕುಳಿತಿದ್ದರು. ರಾವಣ ಹಲವು ಜನ್ಮ ವೆತ್ತಿ ಕೊನೆ ಕ್ಷಣದಲ್ಲಿ ಶ್ರೀರಾಮನಲ್ಲಿ  ಸಾಕ್ಷಾತ್ ಶ್ರೀಮನ್ನಾರಾಯಣನ್ನು ಕಂಡು ತನಗೆ ಇದುವೆ ಸಾಕ್ಷಾತ್ಕಾರ ರೂಪವೆಂದುಕೊಂಡು ಮೋಕ್ಷಪದಕ್ಕೆ ಏರಿದ.  ರಾವಣ ದುಷ್ಟನಾದರೂ ಕೊನೆಯ ಕ್ಷಣದಲ್ಲೂ ರಾಮ ದರ್ಶನದಲ್ಲಿ ಮೋಕ್ಷವನ್ನು ಕಂಡ. ಅದು ಆತನಿಗಾದ ಕಂಪನ. ಅದು ಅವನ ಭಾವನೆ. ರಾವಣನಿಗೆ ಮೊದಲು  ಉಂಟಾಗದೇ ಇದ್ದ ಕಂಪನ ಹಲವರಿಗೂ ಉಂಟಾಗದೇ ಇರಬಹುದು. ಅದು ಮನಸ್ಸಿನ ಸ್ವಭಾವ.  ಅದೇ ರಾಮಾಯಣದಲ್ಲಿ ಅಹಲ್ಯ, ಶಬರಿಯಂತಹ ವ್ಯಕ್ತಿತ್ವಗಳು ರಾಮ ದರ್ಶನಕ್ಕಾಗಿ ಕಾದು ಕಾದು ಕೊನೆಗೆ ಒಂದು ದಿನ ರಾಮನನ್ನು ಕಂಡು ಆ ಕಂಪನವನ್ನು ಅನುಭವಿಸಿದ್ದಿದೆ. ಹತ್ತು ತಲೆ ಇದ್ದು ವಿದ್ಯೆಯಿಂದ ಹಿಡಿದು ಎಲ್ಲವೂ ಇದ್ದ ರಾಣನಿಗೆ ಉಂಟಾಗದೇ ಇದ್ದ ಕಂಪನ ಎನೇನೂ ಇಲ್ಲದ ಅಹಲ್ಯ ಶಬರಿಯಲ್ಲಿ ಉಂಟಾಯಿತು. ಅದಕ್ಕೆ ಅರ್ಹತೆಯಲ್ಲಿ ಯೋಗವಿರಬೇಕು. ಯೋಗ್ಯತೆ ಇರಬೇಕು.

ರಾಮಾಯಣದ ಒಂದು ಕಥೆಯಾದರೆ ಇತಿಹಾಸದ ಪುಟ ತೆಗೆದು ನೋಡಿದರೆ ಅಯೋಧ್ಯೆಗೆ ಧಾಳಿ ಇಟ್ಟವರಿಗೂ ಈ ಕಂಪನ ಉಂಟಾಗಲೇ ಇಲ್ಲ.  ಒಂದು ವೇಳೆ ಕಂಪನ ಉಂಟಾಗಿದ್ದರೆ....ಈ ಕರಾಳ ಇತಿಹಾಸಗಳು ಬರೆಯಲ್ಪಡುತ್ತಿರಲಿಲ್ಲ ಎಂಬುದು ಸತ್ಯ.   ಹಾಗೆ ಕಂಪನ ಉಂಟಾಗಬೇಕಿದ್ದರೆ ಅದಕ್ಕೆ ತಕ್ಕಂತಹ ಮನೋಭಾವ ಇರಬೇಕು. ಇರದಿದ್ದರೆ......ಆದಕೆ ಯಾರೂ ಕಾರಣರಲ್ಲ. ಆದರೆ ಅಲ್ಲೇ ಉಳಿದವರಿಗೆ ಸಿಗುವ ಕಂಪನಗಳನ್ನು ಲೇವಡಿ ಮಾಡುವುದು ಆಕ್ಷೇಪಿಸುವುದು ತಪ್ಪು. 

ಕಂಪನ ಉಂಟಾಗಬೇಕಿದ್ದರೆ, ಆಡಂಬರದ ಅವಶ್ಯಕತೆ ಇಲ್ಲ. ಪಂಚತಾರಾ ಹೋಟೇಲುಗಳನ್ನು ನಾಚಿಸುವಂತಹ ದೇವಾಲಯದ ಆವಶ್ಯಕತೆ ಇಲ್ಲ. ಸಣ್ಣ ಗುಡಿಯಾದರೂ ಅಲ್ಲಿ ಕಂಪನ ಪಡೆಯುವವರಿದ್ದಾರೆ. ನಮ್ಮ ಊರಿಗೆ ಅಂದರೆ ಕರಾವಳಿ ಭಾಗಕ್ಕೆ ಹೋದರೆ ದೇವಾಲಯ ಬಿಡಿ, ಗುಳಿಗನ ಕಲ್ಲು ಇರುತ್ತದೆ. ಅಲ್ಲಿ ಗುಡಿಯೂ ಇರುವುದಿಲ್ಲ, ಏನೂ ಇರುವುದಿಲ್ಲ. ಕೇವಲ ಒಂದು ಕಲ್ಲು ಮಾತ್ರಾ ಇರುತ್ತದೆ. ಆದರೆ ಮನುಷ್ಯನ ಭಾವನೆಗಳಿಗೆ ಪರಿಧಿ ಇಲ್ಲ. ಅಲ್ಲಿ ಆ ಕಲ್ಲಿನ ಬುಡಕ್ಕೆ ಹೋದಾಗ ಕಂಪನ ಮಾತ್ರವಲ್ಲ ಭಯ ಪಡುವವರೂ ಇದ್ದಾರೆ. ಅದು ತಪ್ಪು ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಅಯೋಧ್ಯೆಯ ಡೇರೆಯಲ್ಲಿದ್ದ  ರಾಮನ ಮೂರ್ತಿ ಕಂಪನ ತರಿಸಿದದೇ ಇದ್ದರೆ ಅದಕ್ಕೆ ಆ ಮೂರ್ತಿಯನ್ನು ಹೊಣೆ ಮಾಡುವುದು ಅಜ್ಞಾನ ಎನ್ನಬೇಕಷ್ಟೆ.  

ಹಳೆಯ ಕಾಲದ ಹಳ್ಳಿಯ ಮನೆಗಳಿಗೆ ಹೋದರೆ, ನಮ್ಮ ಅಜ್ಜನೋ ಮುತ್ತಜ್ಜನೋ ನಿತ್ಯ ಕುಳಿತುಕೊಳ್ಳುವ ಸ್ಥಳವಿರುತ್ತದೆ. ಮನೆಯ ಚಾವಡಿಯಲ್ಲಿ ಒಂದು ಇಸೀಚೇರ್ ಹಾಕಿ ಕಾಲು ಮೇಲೆ ಹಾಕಿ ಅವರು ಕುಳಿತುಕೊಳ್ಳುತ್ತಿದ್ದರು. ಅವರ ಮರಣಾನಂತರ ಆ ಆರಾಮಾಸನದ ಬಳಿಗೆ ಹೋಗುವಾಗ ಮನೆಯವರಿಗೆ ಕಂಪನ ಉಂಟಾಗಬಹುದು. ಅದು ಅವರ ಮನಸ್ಸಿನ ಅಂತರಂಗದ ಪ್ರೇರಣೆ. ಬದುಕು ನಡೆದು ಬಂದ ಅನುಭವ. 

ಇಪ್ಪತ್ತು ವರ್ಷದ ಹಿಂದೆ ಮಲ್ಲೇಶ್ವರಂ ನ ಯೋಗ ಕೇಂದ್ರಕ್ಕೆ ಯೋಗಾಭ್ಯಾಸ ಕಲಿಯಲು ನಿತ್ಯ ಮುಂಜಾನೆ ಹೋಗುತ್ತಿದ್ದೆ. ಯೋಗಾಭ್ಯಾಸದ ಮಧುರ ಅನುಭವವನ್ನು ಪಡೆದಿದ್ದೆ.   ಇತ್ತೀಚೆಗೆ  ಇಪ್ಪತ್ತು ವರ್ಷ  ಕಳೆದನಂತರ ಮೊನ್ನೆ ಯಾವುದೋ ಕಾರಣಕ್ಕೆ ಅಲ್ಲಿ ಹೋದಾಗ ಅದೇ  ಮಧುರ ಅನುಭವದ ಸ್ಮರಣೆಯಲ್ಲಿ ಆ ಕಂಪನವನ್ನು ಅನುಭವಿಸಿದ್ದೆ. ಯಾಕೆಂದರೆ ಅದು ಯೋಗಾಭ್ಯಾಸದ ಅನುಭವ.  ನನಗಾದ ಅನುಭವ ಉಳಿದವರಿಗೆ ಆಗುವ ಭರವಸೆ ಇರುವುದಿಲ್ಲ. ಅದು ಭಾವನಾತ್ಮಕ ಸಂಭಂಧದಗಳು. ಅದು ಅನುಭವದಿಂದಲೇ ಬರಬೇಕು. 

ಇಷ್ಟೆಲ್ಲ ಯಾಕೆ ಹೇಳಬೇಕಾಯಿತೆಂದರೆ, ಅಯೋಧ್ಯೆಗೆ ನಾನೂ ಹೋದವನು, ನಾನು ಹೋದಾಗ ಅಯೋಧ್ಯೆಯಲ್ಲಿ ಎಲ್ಲವೂ ಅಪೂರ್ಣ ಸ್ಥಿತಿಯಲ್ಲಿತ್ತು. ಆದರೆ ಆ ಮಣ್ಣಿನಲ್ಲಿ ಆ ವಾತಾವರಣದಲ್ಲಿ ರಾಮನ ಅಸ್ತಿತ್ವವನ್ನು ಕಂಡವನು ನಾನು. ಶ್ರೀ ರಾಮ ಓಡಾಡಿದ ನೆಲವದು. ಆ ಭಾವ ಬಂದಕೂಡಲೇ ದೇಹದಲ್ಲಿ ಅವ್ಯಕ್ತವಾದ ಒಂದು ಕಂಪನ ಉಂಟಾಗುತ್ತದೆ. ಅದು ರಾಮನ ಮೇಲಿನ ವಿಶ್ವಾಸದ ಸಂಕೇತ. ರಾಮ ಕೇವಲ ಒಂದು ದೇವರಾಗಿ ಅಲ್ಲ ಅದೊಂದು ದಿವ್ಯ ಚೇತನವಾಗಿ ಸದಾ ಕಂಪನವನ್ನು ಒದಗಿಸುವ ಶಕ್ತಿ. ದೂರದ ಅಯೋಧ್ಯೆ ಎಲ್ಲಿ ಬಂತು, ಅಯೋಧ್ಯೆಯನ್ನು ನೆನಸಿ ಇಲ್ಲಿ ದೇಹ ಕಂಪಿಸುತ್ತದೆ. 

ಈಗ ಈ ನಾಯಕರ ಮಾತು ಅದಕ್ಕೆ ಯಾವುದೋ ಕಾರಣವಿರಬಹುದು. ವೈಬ್ರೇಶನ್  ಪ್ರತಿಯೊಬ್ಬರಿಗೂ ಪ್ರತ್ಯೇಕವಿರುತ್ತದೆ.  ಚುನಾವಣೆಯಲ್ಲಿ ಗೆಲ್ಲದೇ ಇದ್ದರೆ ಒಂದು ಕಂಪನ, ಗೆದ್ದು ಮಂತ್ರಿಯಾಗದೇ ಇದ್ದರೆ ಇನ್ನೊಂದು ಕಂಪನ, ಮತ್ತೊಬ್ಬರ ಹೀಯಾಳಿಕೆಯಲ್ಲಿ ಸಿಗುವ ಆತ್ಮಾನಂದದ ಕಂಪನ ಅನುಭವಿಸುವ ರಾಜಕಾರಿಣಿಗಳ ಮಾತುಗಳಿಗೆ ನಮ್ಮ ನಡುವೆ ಯಾವ ಮೌಲ್ಯವೂ ಇರುವುದಿಲ್ಲ. ನಮಗೆ ಕಂಪಿಸುತ್ತಿರುವುದಕ್ಕೆ ನಾವು ಆತ್ಮಾನಂದವನ್ನು ಪಡೆಯೋಣ, ಈ ಕಂಪನ ಉಂಟಾಗದೇ ಇದ್ದವರ ಬಗ್ಗೆ ಕಂಪನ ಬೇಡ....ಕೇವಲ ಒಂದು ಅನುಕಂಪ ಸಾಕು. ತಪ್ಪು ಒಪ್ಪಿನ ವಿಮರ್ಶೆಯ ಅವಶ್ಯಕತೆ ಇಲ್ಲ. ಅವರವರ ಭಾವ ಅದು ಅವರಿಗೇ ಬಿಟ್ಟದ್ದು.  ನಮ್ಮ ದೃಷ್ಟಿಕೋನದಲ್ಲಿ ರಾಮ ಕಾಣುತ್ತಾನೆ ಈ ವಿಶ್ವಾಸ ನಮ್ಮಲ್ಲಿದ್ದರೆ ಸಾಕು. 



No comments:

Post a Comment