Sunday, February 26, 2023

ಸಂಪನ್ನ ಕಾಶೀಯಾನ

ಮಂತ್ರ ಹೀನಂ ಕ್ರಿಯಾ ಹೀನಂ ಭಕ್ತಿ ಹೀನಂ ಸುರೇಶ್ವರ

ಯತ್ಪೂಜಿತಂ ಮಯಾ ದೇವ ಪರಿಪೂರ್ಣಂ ತದಸ್ತುಮೇ

ಅಪರಾಧ ಸಹಸ್ರಂಚ ಕ್ರಿಯತೆಹರ್ನಿಶಂ ಮಯಾ

ದಾಸೋಯ ಮಿತಿ ಮಾಂ ಮತ್ವ ಕ್ಷಮಸ್ವ ಪರಮೇಶ್ವರ


        ನಾವು ಮಾಡುವ ಎಲ್ಲ ಸತ್ಕಾರ್ಯಗಳಲ್ಲಿ ಹಲವು ನ್ಯೂನ್ಯತೆಗಳು ಇದ್ದೇ  ಇರುತ್ತವೆ. ರಾತ್ರಿ ಹಗಲೆನ್ನದೆ ಅಪರಾಧವನ್ನು ಮಾಡಿದರೂ  ಪರಮಾತ್ಮ ಪದತಲದಲ್ಲಿ ಎಲ್ಲವನ್ನು ಸಮರ್ಪಿಸಿ ಕ್ಷಮಸ್ವ ಪರಮೇಶ್ವರಃ ಎಂದು ಪ್ರಾರ್ಥಿಸುತ್ತೇವೆ. 

        ಹಲವು ಏಳುಬೀಳು ನೋವು ನಲಿವು ಎಲ್ಲವನ್ನು ಅನುಭವಿಸುತ್ತಾ ಮುಗಿಸಿದ ಕಾಶೀಯಾತ್ರೆಯಲ್ಲಿ ಮನಸ್ಸು ಧನ್ಯತೆಯನ್ನು ಕಂಡಿತು.  ನಾವೇನೋ ಅಸಾಮಾನ್ಯವಾಗಿದ್ದುದನ್ನು ಸಾಧಿಸಿದ್ದೇವೆ ಎಂಬ ಅಹಂಕಾರವೂ ದೂರವಾದರೆ ಈ ಕಾಶೀ ಯಾತ್ರೆ ಸಾರ್ಥಕತೆಯನ್ನು ಕಂಡಂತೆ.


        ಒಂದು ಹಸುವನ್ನು ಕಂಡರೆ ವ್ಯಕ್ತಿರೀತ್ಯಾ ಅದನ್ನು ಕಾಣುವ ದೃಷ್ಟಿಕೋನ ವಿಭಿನ್ನವಾಗಿರುತ್ತದೆ. ಒಬ್ಬ ಹಸುವನ್ನು ನೋಡಿ ಇದನ್ನು ಸಾಕಿದರೆ ಇದು ಹಾಲನ್ನು ಕೊಡಬಹುದು. ಓರ್ವ  ಉತ್ತಮ ಹಾಲು ಸಿಗಬಹುದು ಎಂದು ಕೊಂಡರೆ ಇನ್ನೋರ್ವ ಹಸು ಸಾಕುವುದು ಆರೋಗ್ಯಕ್ಕೆ ಒಳ್ಳೆಯದು, ಅದರ ಸೆಗಣಿಯಿಂದ ತೊಡಗಿ ಹಾಲು ಮೊಸರು ಯಥೇಚ್ಛವಾಗಿ ಸೇವಿಸಬಹುದು ವ್ಂದು ಇನ್ನೊಬ್ಬನ ಗ್ರಹಿಕೆ. ಅದರಿಂದ ಒಂದಷ್ಟು ಆದಾಯವನ್ನು ಗಳಿಸಬಹುದು ಎಂದು ಒಬ್ಬನಿಗೆ ಕಂಡರೆ,   ಮತ್ತೊಬ್ಬನಿಗೆ ಈ ಹಸುವನ್ನು ಮಾರಾಟ ಮಾಡಿದರೆ ದುಡ್ಡು  ಬರುತ್ತದೆ ಎಂದುಕೊಂಡರೆ, ಮತೆ ಕೆಲವರು ಅದನ್ನು ಸಾಕುವುದೆಂದರೆ ಅದರ ಸೆಗಣಿ, ಗಲೀಜು ಅದರ ಕೆಲಸ ಯಾರಿಗೆ ಬೇಕು ಎಂದು ತಾತ್ಸಾರದಿಂದ ಕಾಣುತ್ತಾನೆ. ಇನ್ನೊಬ್ಬ ಈ ಹಸುವನ್ನು ಕಟುಕರಿಗೆ ಮಾರಿದರೆ ಒಂದಷ್ಟು ಮಾಂಸ ಸಿಗಬಹುದು. ಹೀಗೆ ಒಂದು ಹಸು ಹಲವು ಭಾವನೆಯನ್ನು ಮನೋಭಾವಕ್ಕೆ ಹೊಂದಿಕೊಂಡು ಹುಟ್ಟು ಹಾಕಬಹುದು. ಅದರೆಂತೆ ಪವಿತ್ರವಾದ ಕಾಶಿಯಾತ್ರೆ ಒಬ್ಬೊಬ್ಬರ ಮನೋಭಾವಕ್ಕೆ ಹೊಂದಿಕೊಂಡು ಅದನ್ನು ಕಂಡರೀತಿಯೇ ಬೇರೆ ಯಾಗಿತ್ತು. ಇದು ಪ್ರವಾಸದುದ್ದಕ್ಕು ಅನುಭವಕ್ಕೆ ಬಂದು ಕಾಶೀಯಾತ್ರೆ ಅದು ಕೇವಲ ಕಾಶಿಯಾತ್ರೆಯಲ್ಲ ವ್ಯಕ್ತಿತ್ವದರ್ಶನಕ್ಕೂ ಕಾರಣವಾಗಿ ಮುಂದಿನ ಹಲವು ಘಟನೆಗಳು ಅನುಭವಗಳು ಅದಕ್ಕೆ ಸಾಕ್ಷಿಯಾಯಿತು. 

        ಪೆಬ್ರವರಿ ಹದಿನೈದಕ್ಕೆ ನಿಗದಿಯಾದ ಯಾತ್ರೆಯ ಆರಂಭ ಮುಂಚಿತವಾಗಿ ಆರಂಭವಾಗಿ ಒಂದಷ್ಟು ಗಡಿಬಿಡಿಯಾಗಿದ್ದು ಸತ್ಯ. ಆದರೂ ಅದಕ್ಕಿಂತ ಇದು ಒಳ್ಳೆದು ಅಂತ ಎಲ್ಲರೂ ಸಿದ್ದವಾಗಿದ್ದೆವು. ಜೂಮ್ ಮೀಟಿಂಗ್ ನಲ್ಲಿ ಕಂಡ ವ್ಯಕ್ತಿಗಳು ಪ್ರತ್ಯಕ್ಷವಾಗಿ ಪರಿಚಯಿಸಿಕೊಂಡದ್ದು ಮಾತ್ರವಲ್ಲ, ಹೊಸ ವ್ಯಕ್ತಿ ಪರಿಚಯಕ್ಕೆ ರಾಷ್ಟ್ರ ಜಾಗೃತಿ ಅಭಿಯಾನ ಸಾಕ್ಷಿಯಾಯಿತು. ಪ್ರವಾಸದ ಬೋನಸ್ ಎಂಬಂತೆ ಕೊಲ್ಕೊತ್ತಾ ವಿಮಾನಯಾನ ಹೊಸದಾಗಿ ಸೇರಿಕೊಂಡಿತ್ತು. ಒಂದಷ್ಟು ಹೆಚ್ಚು ಹೊತ್ತು ವಿಮಾನಯಾನ ಎಂಬುದು ಬಿಟ್ಟರೆ ಇದರಲ್ಲಿ ವಿಶೇಷವೇನೂ ಇರಲಿಲ್ಲ. ಕೊಲ್ಕೊತ್ತ ವಿಮಾನ ನಿಲ್ದಾಣವನ್ನು ನಡುರಾತ್ರಿಯ ಮಂಪರು ಕಣ್ಣಿನಲ್ಲಿ ಅಷ್ಟೋ ಇಷ್ಟು ನೋಡಿ ಉಪಹಾರ ಇಲ್ಲದೇ ಬ್ಯಾಗಿನಲ್ಲಿದ್ದುದನ್ನು ಆಷ್ಟು ಬೇಗ ತಿನ್ನುವುದಕ್ಕೆ ಸಾಧ್ಯವಿಲ್ಲದೇ ಇದ್ದರೂ ಸಹ,  ಅದನ್ನೇ ತಿನ್ನುವ ಅನಿವಾರ್ಯತೆ ಒದಗಿದ್ದಕ್ಕೆ ಯಾರನ್ನೂ ಹೊಣೆಮಾಡುವ ಹಾಗಿರಲಿಲ್ಲ. ಇದು ಯಾತ್ರೆ ಆರಂಭದಲ್ಲಿ ಒದಗಿ ಬಂದ ಸತ್ವ ಪರೀಕ್ಷೆ ಎಂದು ಪರಿಗಣಿಸುವ ಮನಸ್ಸು ಅದೇಕೊ ಸೃಷ್ಟಿಯಾಗಿತ್ತು.  ಕೊಲ್ಕೊತ್ತಾದ ಚಳಿಯ ವಿಚಿತ್ರ ಅನುಭವ ಅದರ ನಡುವೆ ವ್ಯಯಕ್ತಿಕ ಸಮಸ್ಯೆಗಳು ಬೇರೆ. 







        ಬೆಂಗಳೂರಲ್ಲಿ ಇಲ್ಲಿಂದ ಕೊಲ್ಕೊತ್ತಾ ಹೋಗುವ ನಮ್ಮಮ್ಮ ಬೋರ್ಡಿಂಗ್ ಪಾಸ್ ಕಳೆದುಕೊಂಡು ಸಾಕಷ್ಟು ತೊಂದರೆ ಅನುಭವಿಸುವಂತೆ ಮಾಡಿತ್ತು. ಅದು ವರೆಗೆ ತೀರ ಅಪರಿಚಿತರಂತೆ ಇದ್ದ ಸಹಪ್ರಯಾಣಿಕರೊಬ್ಬರು ಎಲ್ಲೊ ಹೋಗಿ ಕಾಡಿ ಬೇಡಿ ಬೋರ್ಡಿಂಗ್ ಪಾಸ ಮತ್ತೊಮ್ಮೆ ಮುದ್ರಿಸಿ ತಂದು ಕೊಟ್ಟರು. ಕೃತಜ್ಞತೆ ಸಲ್ಲಿಸುತ್ತಾ ನಾನು ಹೇಳಿದೆ, ಮಗನಾಗಿ ನಾನು ಮಾಡಬೇಕಿದ್ದನ್ನು ನೀವು ಮಾಡಿದಿರಿ. ಆಗ ಅವರು ಹೇಳಿದ ಮಾತು ಮುಂದಿನ ಪ್ರವಾಸದ ದಿಕ್ಸೂಚಿಯನ್ನು ತೋರಿಸಿದಂತಿತ್ತು. ಇದು ರಾಷ್ಟ್ರಿಯ ಸ್ವಯಂ ಸೇವಕ ಸಂಘ ಕಲಿಸಿದ್ದು. ತೊಟ್ಟ  ಬ್ಯಾಜ್ ತೋರಿಸುತ್ತಾ ಅವರು ಹೇಳಿದರು, ಇದು ಇರುವುದೇ ಇದಕ್ಕೆ. ಎಲ್ಲರೂ ನಮ್ಮವರು ಎಂಬ ಭಾವನೆಯನ್ನು ತರಿಸುತ್ತದೆ.  ಸಮಸ್ಯೆ ಇಷ್ಟಕ್ಕೆ ಮುಗಿಯಲಿಲ್ಲ. ಪತ್ನಿಯನ್ನು ಸೇರಿಸಿ ಒಂದಿಬ್ಬರಲ್ಲಿ  ವಿಮಾನ ಯಾನಕ್ಕೆ ಅಗತ್ಯವಿದ್ದ  ಅಸಲೀ ಪರಿಚಯ ದಾಖಲೆ, ( Original ID Proof)  ಇಲ್ಲವಾಗಿತ್ತು. ಬರೀ ಜೆರಕ್ಸ್ ಪ್ರತಿ ತೋರಿಸಿದರೆ ಅಲ್ಲಿ ಒಳಗೆ ಬಿಡಲಿಲ್ಲ. ಬ್ಯಾಜ್ ತೋರಿಸಿದರೂ ಕೇಳಲಿಲ್ಲ. ಮತ್ತೂ ಬೆಂಗಳೂರಲ್ಲಿ ಹೇಗೋ ಗೇಟ್ ದಾಟಿದರೂ ಕೊಲ್ಕೊತ್ತದಲ್ಲಿ ಮಾತ್ರ ಒಳಗೆ ಬಿಡಲಿಲ್ಲ. ಆಗಲೂ ಸಹ ಪ್ರಯಾಣಿಕ ಸಹಾಯಕ್ಕೆ ಬಂದರು. ಇನ್ನು ತೊಂದರೆ ಬೇಡ ಎಂದುಕೊಂಡು ಮೊಬೈಲ್ ನಲ್ಲಿ ಡಿಜಿ ಲಾಕರ್ ಹಾಕಿ ಐಡಿ ಪ್ರೂಫ್ ಸಮಸ್ಯೆಯನ್ನು  ಪರಿಹರಿಸಿಕೊಂಡೆವು. ಇದೆಲ್ಲ ಒಂದು ರೀತಿಯ ಮೊದಲ ಸತ್ವ ಪರೀಕ್ಷೆ. ಅಲ್ಲಿಂದ ಸುಲಭವಾಗಿ ಲಕ್ನೋ ಸೇರುವಾಗ ಮಧ್ಯಾಹ್ನದ ಹೊತ್ತಾಗಿತ್ತು. ಬೆಳಗಿನ ಉಪಾಹಾರ ತಡವಾಗಿಬಿಟ್ಟಿತು. 

        ಕೆಲವು ಕಡೆ ಅದ್ಭುತ ಎನ್ನಿಸುವ ವಿಶಿಷ್ಟ  ಅನುಭವಗಳು ರೋಮಾಂಚನ ತರಿಸಿದರೆ, ಕೆಲವಂತೂ ಅತೀವ ಕಠಣವಾದ ಅನುಭವವನ್ನು ತೋರಿಸಿಕೊಟ್ಟಿತು. ಮೊದಲ ದಿನದ ಬೆಳಗ್ಗಿನ ಉಪಹಾರವೇ ತಡವಾಗಿ ಮಧ್ಯಾಹ್ನ ಸೇವಿಸುವಂತೆ ಮಾಡಿದರೆ, ಮಧ್ಯಾಹ್ನ ಸಿಗಬೇಕಾದ ಊಟ ಸಾಯಂಕಾಲ ಆಯೋಧ್ಯೆಗೆ ತಲುಪಿದ ಮೇಲೆ ಸಿಕ್ಕಿತು. ಬೆಳಗ್ಗಿನ ಉಪಹಾರ ಬಸ್ಸಿನಲ್ಲೇ ಕುಳಿತು ಸೇವಿಸುವ ಅನಿವಾರ್ಯತೆ ಒದಗಿದರೂ  ಪ್ರಯಾಣಿಕರ ಹಸಿವು ನಿರ್ವಾಹವಿಲ್ಲದೆ ಹೊಂದಿಕೊಂಡಿತು. ಏನು ಬಂದರೂ ಹೊಂದಿಸಿಕೊಳ್ಳುವ ಮನೋಭಾವ ಗಟ್ಟಿಯಾಗತೊಡಗಿತು. ಹಾಗೆ ಹೀಗೆ ತಡವಾಗಿ ಅಯೋಧ್ಯೆಯನ್ನು ತಲುಪಿ ಲಕ್ನೋ ಪೈಜಾ ಬಾದ್  ರಾಷ್ಟ್ರೀಯ ಹೆದ್ದರಿಯಲ್ಲಿ ಪ್ರಯಾಣಿಸುತ್ತಿದ್ದ ಬಸ್ ನಿಂತುಬಿಟ್ಟಿತು. ಅಯೋಧ್ಯೆಯ ಒಳ ಹೋಗುವುದಕ್ಕೆ ಅನುಮತಿ ಇದ್ದರೂ ಮೊದಲಿಗೆ ಸಾಧ್ಯವಾಗಲಿಲ್ಲ. ವಾಸ್ತವದಲ್ಲಿ ಯಾವುದೇ ಹೊರಗಿನ ವಾಹನಗಳಿಗೆ ಆಯೋಧ್ಯೆಯಲ್ಲಿ ಪ್ರವೇಶವಿಲ್ಲ. ಅದಕ್ಕೆ ಕಾರಣಗಳು ಹಲವು. ಅದೇನಿದ್ದರೂ ನಂತರ ಬಹಳ ಮುತುವರ್ಜಿಯಿಂದ ಅನುಮತಿ ದೊರೆತು ಅಯೋಧ್ಯೆಯ ಒಳಗೆ ಹೋಗುವಂತಾಯಿತು. ಅಲ್ಲಿ ಸೀತಾ ರಸೋಯಿ ಘರ್ ನಲ್ಲಿ ನಮಗೆಲ್ಲ ಊಟ ಮತ್ತು ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. 

        ನಾವೆಲ್ಲ ಸೇರಿ ಇನ್ನೂರ ಎಪ್ಪತ್ತೈದು ಮಂದಿ ಇದ್ದು ಆರು ಬಸ್ ಗಳು ಆ ಕಿರಿದಾದ ರಸ್ತೆಯೊಳಗೆ ಹೋಗಿ ಸ್ಥಳೀಯರಿಗೆ ಒಂದಿಷ್ಟು ತೊಂದರೆಯಾದಂತೆ ಭಾಸವಾಗಿದ್ದು ಬಿಟ್ಟರೆ ಮತ್ತೆಲ್ಲವೂ ಸಸೂತ್ರವಾಗಿತ್ತು. ಎಲ್ಲಿನೋಡಿದರೂ ಗನ್ ಹಿಡಿದ ಪೋಲೀಸರು. ಮೊದಲಿಗೆ ವಿಚಿತ್ರ ಎನಿಸಿದರೂ ಅದು ಇಂದಿನ ವಾಸ್ತವದ ಪರಿಸ್ಥಿತಿಯ ಚಿತ್ರಣವಾಗಿತ್ತು. 

        ಅಯೋಧ್ಯೆಯ ಸೀತಾ ರಸೋಯಿ ಘರ್ ನಲ್ಲಿ ಅದ್ಭುತ ಎನ್ನಿಸುವಂತ ಆತಿಥ್ಯ ಲಭ್ಯವಾಯಿತು. ಒಂದಷ್ಟು ಅನ್ನ ದಾಲ್ ರಸಂ ಜತೆಗೆ ಪೂರಿ ಕಚೋರಿ ಜತೆ ಸೇವಿಸಲು ಅಲ್ಲಿನ ಸಹಜ ಖಾದ್ಯ ಆಲೂ ಸಬ್ಜಿ ಇತ್ತು. ಎಲ್ಲವೂ ಬಹಳ ರುಚಿಕರವಾಗಿತ್ತು. ಎಲ್ಲಕ್ಕಿಂತ ಮೇಲೆ  ಅಲ್ಲಿನ ಮಂದಿಯ ಸ್ನೇಹ ಉಲ್ಲೇಖಿಸಲೇ ಬೇಕು.  ಆಪ್ತ ಸಂಭಂಧಿಗಳಂತೆ ಒತ್ತಾಯ ಪೂರ್ವಕವಾಗಿ ಬಡಿಸಿದ ರೀತಿ ಆಹಾರ ತಿನ್ನದೇ ಹೊಟ್ಟೆ ತುಂಬಿದ ಅನುಭವವನ್ನು ನೀಡಿತು. ಅಲ್ಲಿ ಸಾಯಂಕಾಲದ ಬೈಟಕ್ ವ್ಯವಸ್ಥೆಯಾಗಿತ್ತು. ಒಂದಷ್ಟು ಹಾಡು ಪ್ರವಚನ ಎಲ್ಲರೂ ವಿಶ್ರಾಂತಿಯ ಮನೋಭಾವದಲ್ಲಿದ್ದರು. ರಾತ್ರೆಯಾಗುತ್ತಿದ್ದಂತೆ ಅಯೋಧ್ಯೆಯ ಚಳಿ ಹೆಚ್ಚಾಗತೊಡಗಿತು. ಮಲಗುವುದಕ್ಕೆ ಹಾಸಿಗೆ ಶೌಚಾಲಯ ಸಾಕಷ್ಟು ಸಂಖ್ಯೆಯಲ್ಲಿದ್ದರೂ ವಿಪರೀತ ಚಳಿ ತಡೆದುಕೊಳ್ಳುವುದಕ್ಕೆ ಕಷ್ಟವಾಗಿತ್ತು. ಜತೆಯಲ್ಲಿ ತೆಗೆದು ಕೊಂಡು ಹೋದ ಶಾಲು ಮತ್ತು ಸ್ವೆಟರ್ ಮಾತ್ರ ಚಳಿಯನ್ನು ದೂರಮಾಡುವುದಕ್ಕಿದ್ದರೂ ಸುಸ್ತಾದುದರಿಂದ ಎಲ್ಲರೂ ನಿದ್ದೆಗೆ ಜಾರಿದ್ದರು. ಮರುದಿನ ಮುಂಜಾನೆ ಸರಯೂ ನದಿಯಲ್ಲಿ ತೀರ್ಥ ಸ್ನಾನಕ್ಕೆ ವ್ಯವಸ್ಥೆಯಾಗಿತ್ತು. 

        ಸೀತಾ ರಸೋಯಿ ಘರ್!  ಇಲ್ಲಿ ತೀರ ಹಳ್ಳಿಯ ವಾತಾವರಣ. ಉತ್ತರ ಭಾರತದ ಹಳ್ಳಿಯ ದರ್ಶನ ನಿಜಕ್ಕೂ ರೋಮಾಂಚನ ಉಂಟು ಮಾಡಿತ್ತು. ರಾಮ ಜನ್ಮ ಭೂಮಿಯಲ್ಲಿ ರಾಮ ಸೇನೆಯ ಪ್ರತೀಕವಾಗಿದ್ದ ಮಂಗಗಳು ಅಧಿಕ ಸಂಖ್ಯೆಯಲ್ಲಿದ್ದು ಸಾಕಷ್ಟು ತೊಂದರೆಯ ಅನುಭವವಾಯಿತು. ಅಯೋಧ್ಯಯಲ್ಲಿ ಮುಂಜಾನೆ ನಾಲ್ಕುಗಂಟೆಗೆ ಎಂದಿನಂತೆ ಎಚ್ಚರವಾಯಿತು. ಸುತ್ತಲು ಮಂಜು ಮುಸುಕಿತ್ತು ತಾಪಮಾನ ಆರು ಏಳು ಡಿಗ್ರಿಯಷ್ಟು ಇತ್ತು. ಆ ತಣ್ಣನೆಯ ವಾತಾವರಣದಲ್ಲಿ ತಣ್ಣಿರ ಸ್ನಾನದ ವೈಶಿಷ್ಟ್ಯವೇ ಅದ್ಭುತ. ಅಯೋಧ್ಯಯಲ್ಲಿ ಮುಂಜಾನೆ ನಾಲ್ಕುಗಂಟೆಗೆ ಎಂದಿನಂತೆ ಎಚ್ಚರವಾಯಿತು. ಸುತ್ತಲು ಮಂಜು ಮುಸುಕಿತ್ತು ತಾಪಮಾನ ಆರು ಏಳು ಡಿಗ್ರಿಯಷ್ಟು ಇತ್ತು. ಆ ತಣ್ಣನೆಯ ವಾತಾವರಣದಲ್ಲಿ ತಣ್ಣಿರ ಸ್ನಾನದ ವೈಶಿಷ್ಟ್ಯವೇ ಅದ್ಭುತ. ಎಲ್ಲಿ ಹೋದರೂ ಮುಂಜಾನೆಯ ನನ್ನ ದಿನಚರಿ ಇಲ್ಲಿಯೂ ಸಹಜವಾಗಿ ನಡೆಯಿತು. ಉದ್ದನೆಯ ಜಗಲಿಯ   ಒಂದು ಮೂಲೆಯಲ್ಲಿ ಕುಳಿತು ಜಪ ಧ್ಯಾನ ಯೋಗಾಭ್ಯಾಸದಲ್ಲಿ ನಿರತನಾದೆ. ಆಯಾಸವಿಲ್ಲದ ಸೂರ್ಯನಮಸ್ಕಾರ ಹೊಸ ಚೈತನ್ಯವನ್ನು ತುಂಬಿದಂತೆ ಅಯೋಧ್ಯೆಯ ತಣ್ಣನೆಯ ಗಾಳಿ ದೇಹದೊಳಗೆಲ್ಲ ವ್ಯಾಪಿಸಿತು.   ಆ ದಿವ್ಯ ಅನುಭವಕ್ಕೆ ಎಣೆಯಿಲ್ಲದ ರೋಮಾಂಚನವನ್ನು ಅನುಭವಿಸಿದೆ. ಪ್ರಾಣಾಯಾಮದ ಗಾಢವಾದ ಸ್ಥಿತಿಗೆ ತಲುಪಿದಾಗ ಆ ಚಳಿಯಲ್ಲು ದೇಹ ಹಿತವಾಗಿ ಬೆವರಿದಾಗ ಆಗುವ ಅನುಭವ ವರ್ಣನಾತೀತ.  ಇಷ್ಟಾದರೂ ನಾನು ಏಕಾಂತ ಧ್ಯಾನದಲ್ಲಿರುವಾಗ ಪರಸರ ಜ್ಞಾನ ಎಂಬುದು ಹಲವರಿಗೆ ಇರುವುದಿಲ್ಲ. ಅಲ್ಲೂ ನಿಶ್ಚಲನಾಗಿ ಧ್ಯಾನದಲ್ಲಿ ಕುಳಿತ ನನ್ನಲ್ಲಿ ಬಂದು ಬಾತ್ ರೂಮ್ ಎಲ್ಲಿ ಎಂದು ವಿಚಾರಿಸಿದರು. ಅದೂ ಸ್ವಚ್ಛವಾಗಿದ್ದ ಜಾಗದಲ್ಲಿ ಚಪ್ಪಲಿ ಹಾಕಿಕೊಂಡು ಬಂದು ದೊಡ್ಡ ದನಿಯಲ್ಲಿ ವಿಚಾರಿಸುವಾಗ ಒಂದಷ್ಟು ಸಾಮಾನ್ಯ ಪ್ರಜ್ಞೆ ಇರಬೇಕಿತ್ತು. ತೀರ್ಥ ಯಾತ್ರೆ ಎಂಬುದು ಅಧ್ಯಾತ್ಮಿಕತೆಯ ಒಂದು ಮಗ್ಗುಲು. ಆದರೂ ಆಧ್ಯಾತ್ಮಿಕತೆಯ ಬಗ್ಗೆ ಇವರಿಗೆ ಗೌರವವೂ ಇಲ್ಲ, ಅದರ ಅರಿವೂ ಇಲ್ಲ. ಒಂದು ವೇಳೆ ಅನ್ಯ ಧರ್ಮದವರು ಹೀಗೆ ಅವರ ಪ್ರಾರ್ಥನೆ ಸಲ್ಲಿಸುತ್ತಿದ್ದರೆ ಇವರೆಲ್ಲರ ವರ್ತನೆ ಹೀಗಿರುತ್ತಿತ್ತೆ ಎಂಬ ಜಿಜ್ಞಾಸೆ ಹುಟ್ಟಿಕೊಂಡಿತು. 

        ಅಯೋಧ್ಯೆಯ ದರ್ಶನವೆಂದರೆ ಅದು ಭಾವನಾತ್ಮಕ ಘಳಿಗೆಗಳನ್ನು ಸೃಷ್ಟಿಸಿತ್ತು. ರಾಮ ಜನ್ಮ ಭೂಮಿ ಮಾತ್ರವಲ್ಲ ಸುತ್ತಮುತ್ತಲಿನ ಎಲ್ಲ ಪ್ರದೇಶಗಳನ್ನು ಅಗೆದು ಹಾಕಿ ಪುನರ್ ನವೀಕರಣದ ಕಾಮಗಾರಿ ನಡೇಯುತ್ತಿತ್ತು. ಮುಂಜಾನೆಯ ಸೂರ್ಯ ರಶ್ಮಿಯ ಜತೆಗೆ ರಾಮ ಮಂದಿರ, ಹನುಮಾನ್ ಮಂದಿರ, ದಶರಥ ಅರಮನೆ ಹೀಗೆ ಹಲವು ಸ್ಥಳ ದರ್ಶನ ರೋಮಾಂಚನವನ್ನು ತಂದಿತ್ತು. ರಾಮ ಜನ್ಮ ಭೂಮಿಯನ್ನು ಕಾಣುವಾಗ ಹೃದಯ ತುಂಬಿ ಬಂತು. ಅಲ್ಲಿನ ಗಾಳಿಯನ್ನು ಸೇವಿಸಿದ ನಾವು , ಅಲ್ಲಿಯ ಮಣ್ಣನ್ನು ತುಳಿದ ನಾವು ನಿಜಕ್ಕೂ ಪುಣ್ಯವಂತರು. ಕಾಶೀದರ್ಶನದ ಮೊದಲ ಮೆಟ್ಟಲು ಅಯೋಧ್ಯೆಯಲ್ಲಿ ಏರಿದ ಅನುಭವ . ರಾಮ ಜನ್ಮ ಭೂಮಿಯ ವಿವಾದಿತ ಸ್ಥಳವನ್ನು ಕಾಣುವಾಗ ಚರಿತ್ರೆಯ ಪುಟಗಳು ತೆರೆದಂತೆ ಭಾಸವಾಯಿತು.  ಹಲವು ಭಾವನೆಗಳ ತುಮುಲ ಅನುಭವಕ್ಕೆ ಬಂತು.  ನಿಜಕ್ಕೂ ಅಯೋಧ್ಯೆಯ ದರ್ಶನ ಪೂರ್ವ ಜನ್ಮದ ಸುಕೃತ ಫಲ. ಇನ್ನು ರಾಮ ಮಂದಿರ ಪೂರ್ಣವಾಗಿ ಅಯೋಧ್ಯೆ ಪುನರ್ನಿರ್ಮಾಣವಾದ ನಂತರ ಬೇಟಿಕೊಡಬೇಕು ಪ್ರಚೋದನೆಯನ್ನು ಮೂಡುವಂತೆ ಮಾಡಿತು. ರಾಮ ಜನ್ಮ ಭೂಮಿ ಕೇವಲ ಭೂಮಿಯಲ್ಲ. ಅದೊಂದು ಭಾವನಾತ್ಮಕ ಸಂಭಂಧದ ಪ್ರತೀಕ. ರಾಮ ಜನ್ಮ ಭೂಮಿ ರಾಮ ಧನ್ಯ ಭೂಮಿ.

        ಆಯೋಧ್ಯೆಯಿಂದ ತಡವಾಗಿ ಹೋರಟವರು ಬೇಲಾ ಪ್ರತಾಪ್ ಘರ್ ನ ಸಾಯಿ ನದೀ ತೀರದ  ಭೇಲಾ ದೇವಿ ದೇವಾಲಯದ ಸುಂದರ ಪರಿಸರದಲ್ಲಿ ಮಧ್ಯಾಹ್ನದ ಭೋಜನ. ಮಜ್ಜಿಗೆ ಅನ್ನ, ಶುದ್ದ ಪಶುವಿನ ಮಜ್ಜಿಗೆ ಬಿಸಿಲಿನ ಝಳಕ್ಕೂ ಹಸಿವಿಗೂ ಹಿತವಾದ ಅನುಭವ ನೀಡಿತು. ಉತ್ತರ ಭಾರತದಲ್ಲಿ ಅಕ್ಕಿಯ ಅನ್ನ ತಿನ್ನುವವರು ಕಡಿಮೆ. ನಾವು ಕೇವಲ ಅನ್ನ ತಿಂದು ಹಸಿವು ನೀಗಿಸುವುದು ಅವರಿಗೆ ವಿಚಿತ್ರ ಅನ್ನಿಸುತ್ತದೆ. ಪೂರಿ ಕಚೋರಿ ಇಲ್ಲದ ಭೋಜನ ಅದೆಂತಹ ಭೋಜನ? ಇಲ್ಲಿನ ಹಾಗೆ ನೆಲದಲ್ಲಿ ಚಕ್ಕಳ ಮಕ್ಕಳ ಹಾಕಿ ಕುಳಿತು ತಿನ್ನುವುದು ಅಲ್ಲಿ ವಾಡಿಕೆ ಇಲ್ಲ ಅನ್ನಿಸುತ್ತದೆ. ನಿಂತೇ ತಿನ್ನುವ ಹರಕೆ ತೀರಿಸುವ ಇವರಿಗೆ ಭೋಜನ ಎಂಬುದು ಕೇವಲ ’ಖಾನಾ’  ವಾಗಿ ಬದಲಾಗುತ್ತದೆ. ಅಲ್ಲಿಂದ ಊಟ ಮುಗಿಸಿ ಹೊರಟವರು ಅಲಹಾಬಾದ್ ನ ಪ್ರಯಾಗ್ ರಾಜ್ ಗೆ ಸೇರುವಾಗ ಸಾಯಂಕಾಲ ಕಳೆದಿತ್ತು. ನಮಗಾಗಿ ಆದಿನದ ಗಂಗಾ ಪೂಜೆ ಗಂಗಾರತಿಯನ್ನು ಅರ್ಧ ತಾಸು ವಿಳಂಬಿಸಿದ್ದರು. ಸ್ಥಳಿಯ ನಗರದ ಮಹಾಪೌರ (ಮೇಯರ್) ಒಬ್ಬರು ಸುಲಕ್ಷಣವಾದ ಮಹಿಳೆ, ಉತ್ತರ ಪ್ರದೇಶದ ಉಪ ಮುಖ್ಯ ಮಂತ್ರಿ ಇನ್ನು ಕೆಲವು ಮುಖಂಡರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಹೀಗೆ ಒಂದು ಹಬ್ಬದ ವಾತಾವರಣ. ಗಂಗಾರತಿ ಒಂದು ಅದ್ಭುತ ಕಾರ್ಯಕ್ರಮ. ಸಾಮಾನ್ಯವಾಗಿ ಇಲ್ಲಿ ಮಾಡುವಂತೆ ಷೋಡಷೋಪಚಾರ ಪೂಜೆ. ಅದೇ ಮಂತ್ರಗಳು ವಿಭಿನ್ನವಾಗಿ ಉಚ್ಚರಿಸಲ್ಪಟ್ಟವು. ಕಲಶ ಪೂಜೆ, ಶಂಖ ಪೂಜೆ ಘಂಟೆ ದೀಪ ಪೂಜೆ ಆನಂತರ ಆವಾಹನ, ಸ್ನಾನ, ಅರ್ಘ್ಯ,  ನೈವೇದ್ಯ ಮಂಗಳಾರತಿ ಹೀಗೆ ಪೂಜೆಯ ಕ್ರಮಗಳು ಇಲ್ಲಿನ ಹಾಗೆ ಆದರೂ ತುಂಬ ಭಿನ್ನ. ಧ್ವನಿ ವರ್ಧಕದಲ್ಲಿ ಮೊಳಗುವ ಸಂಗೀತಕ್ಕೆ ಶ್ರುತಿ ಲಯಬದ್ದವಾಗಿ ನೃತ್ಯ ರೂಪಕದಂತೆ ಗಂಗಾರತಿ ನಡೆಯುತ್ತದೆ.  ಅರ್ಚಕ ವಟು ಪುತ್ರರು ಬಣ್ಣ ಬಣ್ಣದ ಮಿರು ಮಿರುಗುವ  ಕಚ್ಚೆ ಅಂಗಿ ತೊಟ್ಟು ಪೂಜೆ ನೆರವೆಸಿದರು. ಆ ರಾತ್ರಿ ಹಲವರ್ ತ್ರಿವೇಣಿ ಸಂಗಮದಲ್ಲಿ ಮುಳುಗು ಹಾಕಿ ಕೃತಾರ್ಥರಾದರು. ಆನಂತರ ಭೋಜನ ಪೂರಿ ಅನ್ನದಾಲ ಮೊಸರನ್ನ ಸಿಹಿ ಹೀಗೆ ಅಲ್ಲಿನ ಮಟ್ಟಿಗೆ ಭರ್ಜರಿ ಭೋಜನ. ಎಲ್ಲಾ ನಾಯಕರು ಕೊನೆಯ ತನಕ ನಮ್ಮ ಜತೆಗಿದ್ದು ನಮ್ಮನ್ನು ಬೀಳ್ಕೊಟ್ಟ ಘಳಿಗೆ ಅತ್ಯಂತ ಹೃದ್ಯವಾಗಿತ್ತು. ಹರಿಯುವ ಗಂಗೆಯಷ್ಟೇ ಪರಿಶುದ್ದ ಇಲ್ಲಿ ಸಿಕ್ಕಿದ ಆತಿಥ್ಯ. 

        ಪ್ರಯಾಗದಿಂದ ನಮ್ಮ ಪ್ರಯಾಣ ಬೀಹಾರ್ ನಲ್ಲಿರುವ ಗಯಾ.....ಪಿತೃಗಳ ತವರೂರು ಎಂದರೂ ಸರಿಯೆ. ಗಯಾದಲ್ಲಿ ಉಪಾಹಾರಕ್ಕೆ ಇಡ್ಲಿ ದೋಸೆ ಸಿಕ್ಕಿದ್ದು ಅಪರೂಪ ಎನ್ನುವಂತಿತ್ತು. ಸ್ನಾನ ಜಪ ಮುಗಿಸಿ ಉಪಾಹಾರ ಸೇವಿಸಿ ಹರಿಪಾದ ದರ್ಶನ ಮಾಡಿದೆವು. ಹರಿಪಾದಕ್ಕೆ  ಶಿರ ತಾಗಿಸಿ ಪಾವನವಾದ ಅನುಭವ. ಇಲ್ಲಿ ಬೇರೆ ಏನೂ ವೈಶಿಷ್ಟ್ಯವಿಲ್ಲ. ಹಲವರು ತಮ್ಮ ಪಿತೃಗಳಿಗೆ ತರ್ಪಣ ಅರ್ಪಿಸಿದರು. ಮಧ್ಯಾಹ್ನ  ಭೋಜನ ಮುಗಿಸಿದಾಗಲೇ ಸಾಯಂಕಾಲವಾಗಿತ್ತು. ಅಂತೂ ಅಲ್ಲಿಂದ ಬಹಳ ತಡವಾಗಿತ್ತು.  ಅಲ್ಲೇ ಇದ್ದ ಬುದ್ದಗಯ ವೀಕ್ಷಣೆ ಮುಗಿದಾಗ ರಾತ್ರಿ ಹತ್ತು ಘಂಟೇ ಕಳೆದರೂ ರಾತ್ರಿಯ ಭೋಜನ ಅಲ್ಲಿನ ಡೆಲ್ಟಾ ಇಂಟರ್ನೇಶನಲ್ ಹೋಟೇಲಿನಲ್ಲಿ ಸಿಧ್ಧವಾಗಿತ್ತು. ಅಲ್ಲಿ ಸಣ್ಣ ಸಭೆ ಗಾಯನ ಮುಗಿಸಿ ಅಲ್ಲಿ ರಾತ್ರಿ ಭೋಜನ. ಬಹುಶಃ ಪ್ರವಾಸದಲ್ಲಿ ಅತ್ಯಂತ ರುಚಿಕಟ್ಟಾದ ಭೋಜನ.  ರಾತ್ರಿ ಬಹಳವಾಗಿರುವುದರಿಂದ ನಾನು ಒಂದೆರಡು ತುತ್ತು ಸೇವಿಸಿದೆ. ಮಧ್ಯರಾತ್ರಿ ಗಯಾಕ್ಕೆ ವಿದಾಯ ಹೇಳಿ ವಾರಣಾಸಿಯತ್ತ ನಮ್ಮ ಪಯಣ ಸಾಗಿತ್ತು. 

        ಮುಂಜಾನೆ ಸೂರ್ಯೋದಯದಲ್ಲಿ ವಾರಣಾಶಿ ಗಡಿಯನ್ನು ತಲುಪಿದೆವು. ಇಲ್ಲಿ ಪ್ರಯಾಣಕ್ಕೆ ಒಂದಷ್ಟು ವಿಘ್ನ ತಲೆದೋರಿತು. ಬರುವಾಗ ರಸ್ತೆಯುದ್ದಕ್ಕೂ ವಾಹನ ದಟ್ಟನೆ ಅಧಿಕವಾಗಿ ಅಲ್ಲಲ್ಲಿ ರಸ್ತೆ ತಡೆ ಉಂಟಾಗಿತ್ತು. ಕೊನೆಗೂ ನಗರದ ಅಂಚಿನ ಅಮಾರ ಚೌಕ್ ತಲಪಿದೆವು. ಅಲ್ಲಿಂದ ಮುಂದೆ ಸ್ಥಳೀಯ ಪೋಲೀಸರು ನಮ್ಮ ವಾಹನ ಮುಂದೆ ಹೋಗದಂತೆ ತಡೆದರು. ವಾಸ್ತವದಲ್ಲಿ ಅದಿನ ಹೊರಗಿನ ಯಾವುದೇ ವಾಹನ ನಗರ ಪ್ರವೇಶಿಸದಂತೆ ಜಿಲ್ಲಾಧಿಕಾರಿಯ ಆದೇಶವಿತ್ತು. ಆನಂತರ ಅಧಿಕೃತ ಅನುಮತಿ ಸಿಗುವುದು  ತಡವಾಗಿ ಅಲ್ಲಿ ಸುಮಾರು ಮೂರು ತಾಸು ನಿಲ್ಲುವಂತಾಗಿದ್ದು ಬಹಳ ಕಷ್ಟ ಪಡುವಂತಾಯಿತು. ಶೌಚಾಲಯಕ್ಕೆ ಹೋಗಬೇಕಾದವರಿಗೆ ಬೆಳಗಿನ ಔಷಧಿ ಸೇವಿಸುವವರಿಗೆ ಬಹಳ ತೊಂದರೆಯಾಯಿತು. ನನ್ನೊಂದಿಗೆ ಸಹ ಪ್ರಯಾಣಿಕರಾಗಿದ್ದ ಕಿರಣ್ ಸ್ವಾಮೀಜಿ ಉತ್ಸಾಹಿ ತರುಣನ ಜತೆಗೂಡಿ ಅಲ್ಲೊಂದು ಸಣ್ಣ ವಿದ್ಯಾಕೇಂದ್ರದ ಕಛೇರಿಯಲ್ಲಿ ಶೌಚಾಲಯ ಉಪಯೋಗಿಸುವದಕ್ಕೆ ಅನುಮತಿ ಕೇಳಿದಾಗ ಆತ ಒಪ್ಪಿಕೊಂಡದ್ದು ಬಹಳ ಆಶ್ಚರ್ಯ ತರಿಸಿತು. ಆತ ಗಲೀಜು ಮಾಡದಂತೆ ಸ್ವಚ್ಛತೆ ಪಾಲಿಸುವಂತೆ ಕೇಳಿಕೊಂಡ ನಂತರ ಬಹಳಷ್ಟು ಜನ ಅಲ್ಲಿ ದೇಹ ಬಾಧೆಯನ್ನು ತೀರಿಸುವುದಕ್ಕೆ ಅನುಕೂಲವಾಯಿತು. ನಿಜಕ್ಕೂ ಈ ಅಪರಿಚಿತನ ಆತಿಥ್ಯಕ್ಕೆ ಧನ್ಯವಾದಗಳನ್ನು ತಿಳಿಸಬೇಕು. ಇದೊಂದು ಕಾಶೀ ವಿಶ್ವನಾಥನ ಅನುಗ್ರಹವೆಂದೇ ತೋರಿತು.  ಇಲ್ಲಿ ಒಂದಷ್ಟು ಮುಂದಾಲೋಚನೆ ಇರಬೇಕಿತ್ತು. ಬಹುಶಃ ನಗರದಲ್ಲಿ ಸಾರ್ವಜನಿಕ ಶೌಚಾಲಯವಿದ್ದರೂ ಸ್ವಲ್ಪ ಸುಧಾರಿಸಬಹುದಿತ್ತು. ವಾರಣಾಶಿಯಲ್ಲಿ ಇದು ಎಲ್ಲೂ ಕಂಡು ಬರಲಿಲ್ಲ.  ನಮ್ಮ ಬಸ್ಸು ಪ್ರವೇಶಕ್ಕೆ ವಿಶೇಷ ಅನುಮತಿ ದೊರೆತ ನಂತರ ನಮಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾದ ಗುಜರಾತಿ ಕೈವಲ್ಯ ಆಶ್ರಮಕ್ಕೆ ಬಂದು ತಲುಪಿದೆವು. 

        ನಗರದ ಮಧ್ಯ ಭಾಗದಲ್ಲೇ ಇದ್ದ ಕೈವಲ್ಯಾಶ್ರಮದಲ್ಲಿ  ಶೌಚಾಲಯ ಸ್ನಾನ ಮತ್ತು ವಿಶ್ರಾಂತಿಗೆ ಸಕಲ ಸಿದ್ಧತೆಯೂ ಇತ್ತು. ಆದಿನ ಪೆಬ್ರವರಿ 18, ಶಿವರಾತ್ರಿ. ನನ್ನ ವಿವಾಹದಿನ ಎಂಬುದು ಮತ್ತೊಂದು ವಿಶೇಷ. ಎರಡೂ ಒಟ್ಟುಕೂಡಿ ಬಂದ ಒಂದು ಸುಯೋಗ ಎನ್ನಬೇಕು. ಧರ್ಮಪತ್ನಿಯೊಂದಿಗೆ ಗಂಗಾರತಿ ಮತ್ತು ಕಾಶೀ ವಿಶ್ವನಾಥನ ದರ್ಶನದ ಭಾಗ್ಯ ಜನ್ಮಾಂತರದ ಪುಣ್ಯ ಎನ್ನಬೇಕು. ಶಿವರಾತ್ರಿಯ ದಿನವಾದುದರಿಂದ ನಗರ ಎಚ್ಚರವಾಗಿತ್ತು. ರಸ್ತೆ ಎಲ್ಲವೂ ಸಿಂಗರಿಸಿತ್ತು. ಮನೆ ಮನೆ ಎಲ್ಲವೂ ಸಡಗರ ಸಂಭ್ರಮದಿಂದ ಕೂಡಿತ್ತು. ಶಿವರಾತ್ರಿಯ ಜಾಗರಣೆಯಲ್ಲಿ ನಿದ್ದೆ ಇಲ್ಲದೇ ಇರುವುದು ಅನುಭವಕ್ಕೆ ಬರಲಿಲ್ಲ. ಸಾಯಂಕಾಲ ಗಂಗಾರತಿ ವೀಕ್ಷಣೇ ಚಿತೋಹಾರಿಯಾಗಿತ್ತು. ಸುಮಾರು ಸಂಖ್ಯೆಯಲ್ಲಿ ಜನಸ್ತೋಮ ನೆರೆದಿತ್ತು.  ಸುತ್ತು ಮುತ್ತಲಿನ ರಸ್ತೆಗಳಲ್ಲೆಲ್ಲ ಸಂಗೀತ ನೃತ್ಯ ಕಾರ್ಯಮಗಳು, ವಿಪರೀತ ಜನಸಂದಣಿ. ನಮ್ಮ ಜತೆಗಿದ್ದ ಸಹ ಪ್ರಯಾಣಿಕರಲ್ಲಿ ಮೂರು ಜನ ಮಹಿಳೆಯರ ಚಿನ್ನದ ಒಡವೆಯನ್ನು ಕಳ್ಳರು ಅಪಹರಿಸಿದ್ದರು. ಇದೊಂದು ಬಹಳ ನೋವು ತರಿಸಿದ ಕಹಿ ಘಟನೆಯಾಗಿ ದಾಖಲಾಯಿತು. 

        ವಾರಣಾಸಿ ಕ್ಷೇತ್ರದಲ್ಲೂ ಮುಂಜಾನೆ ಸಂಧ್ಯಾವಂದನೆ ಧ್ಯಾನ ಯೋಗಕ್ಕೆ ಅವಕಾಶ ಒದಗಿಸಿಕೊಂಡೆ. ನಿಜಕ್ಕೂ ಅದೊಂದು ದಿವ್ಯ ಅನುಭೂತಿಯ ಅನುಭವ. ಬದುಕಿನಲ್ಲಿ ಅತ್ಯಂತ ವಿರಳವಾಗಿ ಲಭ್ಯವಾಗುವ ಯೋಗವಿದು. 

         ನನ್ನಮ್ಮ ಮತ್ತು ಚಿಕ್ಕಮ್ಮ ರಾತ್ರಿ ವಿಶ್ರಾಂತಿಯನ್ನು ಬಯಸಿದ್ದರಿಂದ ಅವರನ್ನು ಬಿಟ್ಟು ಗಂಗಾತೀರಕ್ಕೆ ಬಂದೆವು. ಆನಂತರ ಮಧ್ಯರಾತ್ರಿ ಗಂಗೆಯಲ್ಲಿ ಮುಳುಗಿ ಪಾವನನಾದೆ.  ಪಿತೃಗಳನ್ನು ನೆನೆದು ಬೊಗಸೆಯಲ್ಲಿ ಗಂಗಾಜಲವನ್ನು ಹಿಡಿದು ಮೂರು ಸಲ ತರ್ಪಣವನ್ನು ಬಿಟ್ಟೆ.   ಕೊರೆಯುವ ಚಳಿಯಲ್ಲಿ ಗಂಗಾ ಸ್ನಾನ ಮಾಡಿದನಂತರ ಏನೋ ಹುರುಪು ನವ ಚೈತನ್ಯ ಶರೀರದಾದ್ಯಂತ ಪಸರಿಸಿತು.  ಜನ್ಮಾಂತರದ ಪಾಪವಿಮೋಚನೆಯಾದಂತೆ ಭಾವನಾತ್ಮಕವಾಗಿ ಹೃದಯ ಹಗುರವಾಯಿತು. ವಿಶ್ವನಾಥನ ದರ್ಶನ ಮತ್ತು ಗಂಗಾ ಸ್ನಾನ ಜನ್ಮದ ಮಹತ್ತರ ಸಾಧನೆಯಂತೆ ಭಾಸವಾಯಿತು. ಒಂದರ್ಥದಲ್ಲಿ ಕಾಶೀ ಯಾತ್ರೆ ಸಂಪನ್ನವಾಯಿತು. 

        ಇಲ್ಲಿಗೆ ನಮ್ಮ ಕಾಶಿ ಯಾತ್ರೆ ಪೂರ್ಣವಾಗುವ ಹಂತಕ್ಕೆ ತಲುಪಿದೆವು. ಅಲ್ಲಿಂದ ನಂತರ ಪೂರ್ವ ನಿಗದಿಯಂತೆ ಬೆಂಗಳೂರಿಗೆ ಹಿಂತಿರಗಬೇಕು. ವಿಮಾನ ಟಿಕೆಟ್ ಎಲ್ಲವೂ ಸಿದ್ಧವಾಗಿತ್ತು. ನಮ್ಮೊಂದಿಗಿದ್ದ ಸಹ ಪ್ರಯಾಣಿಕರು  ಎಲ್ಲರೂ ಮರುದಿನ ಬೆಳಗ್ಗೆ  ದೆಹಲಿ ಅಮೃತ ಸರಕ್ಕೆ ಪ್ರಯಾಣಿಸುವವರಿದ್ದರು.  ವಯೋವೃದ್ದರಾದ ನನ್ನ ಅಮ್ಮ ಹಾಗೂ ಅವರ ಸಹೋದರಿ ಚಿಕ್ಕಮ್ಮ ಇವರನ್ನು ಕಾಶಿ ಕರೆದುಕೊಂಡು ಹೋಗುವ ಮಹತ್ತರ ಜವಾಬ್ದಾರಿ ನೆರವೇರಿತು. ಇಲ್ಲಿಂದ ಹೊರಡುವಾಗ ಜೀವದಲ್ಲಿ ಬರುವ ನಿರೀಕ್ಷೆ ಇರಲಿಲ್ಲ. ವಾಸ್ತವದಲ್ಲಿ ಕಾಶಿಯಾತ್ರೆ ಎಂದರೆ ಹಾಗೆ. ಆದರೂ ಭಗವಂತನ ಅನುಗ್ರಹ ಕಾಶೀಯಾತ್ರೆ ಬಹುತೇಕ ಸುಖಕರ ಎನ್ನಬೇಕು. ಬದುಕಿನಲ್ಲಿ ಮರೆಯಲಾಗದ ಘಳಿಗೆಗಳು. 

        ಕಾಶೀ ಯಾತ್ರೆ ಹಲವು ಸುಂದರ ಘಟನೆಗೆ ಸಾಕ್ಷಿಯಾದಂತೆ ಮರೆಯಲಾಗದ ಕಹಿ ಘಟನೆಯನ್ನು ಒದಗಿಸಿದ್ದು ವಾಸ್ತವದ ಸತ್ಯ. ಅದರಲ್ಲು ಕೊನೆಯದಿನ ವಾರಣಾಶಿಯಲ್ಲಿ ಬೆಳಗಿನ ಉಪಾಹಾರಕ್ಕೆ ಜನರು ಮುಗಿಬಿದ್ದದ್ದು ಸಹನೆಯನ್ನು ಮರೆತ ಅನಾಗರಿಕ ವರ್ತನೆ ತಲೆತಗ್ಗಿಸುವಂತೆ ಮಾಡಿತ್ತು. ಮನುಷ್ಯ ಹಸಿವಾದಾಗ ಮೃಗಗಳಿಗಿಂತ ಕಡೆಯಾಗಿ ವರ್ತಿಸಿಬಿಡುತ್ತಾನೆ. ಮೃಗ ಕೇವಲ ಹಸಿವಿಗಾಗಿ ಧಾಳಿ ಮಾಡಿದರೆ ಮನುಷ್ಯನ ವರ್ತನೆ ಇಷ್ಟಕ್ಕೇ ನಿಲ್ಲುವುದಿಲ್ಲ. ಅದೂ ಪರಮಾತ್ಮನ ಸನ್ನಿಧಿಯಲ್ಲಿ. ಇನ್ನೂರಕ್ಕಿಂತಲೂ ಹೆಚ್ಚಿನ ಜನ ಬೆಳಗಿನ ತಿಂಡಿಗೆ ಏಕಾ ಎಕಿ ಮುಗಿಬಿದ್ದು, ಸ್ಥಳೀಯ ನಿರ್ವಾಹಕರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಅವರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್ ವೀಡೀಯೊ ಮಾಡಿ ಹರಿಬಿಟ್ಟದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಯಿತು.  

        ಹೊಟ್ಟೆ ತುಂಬಿದ ಕ್ರೂರ ಮೃಗ ಸುಮ್ಮನೆ ಇರುತ್ತದೆ. ಹಸಿವಾದರೆ ಮಾತ್ರ ತಿನ್ನುವುದಕ್ಕೆ ಹಪ ಹಪಿಸುತ್ತದೆ. ಆದರೆ ಮನುಷ್ಯನ ಹಸಿವು ದಾಹ ಹೊಟ್ಟೆ ತುಂಬಿದ ನಂತರವು ಸುಮ್ಮನಿರುವುದಿಲ್ಲ. ಆತ ಮೃಗಗಳಿಗಿಂತ ಕ್ರೂರಿಯಾಗುತ್ತಾನೆ. ಇಲ್ಲಿ ಯಾರತಪ್ಪು?  ಯಾರದ್ದು ಸರಿ ? ಈ ವಿಮರ್ಶೆಯಲ್ಲಿ ಬುದ್ಧಿವಂತನಂತೆ ವರ್ತಿಸುವಾಗ ತಾನು ಮಾಡಿದ ತಪ್ಪು ಮರೆತುಬಿಡುತ್ತಾನೆ. ಗಂಗೆಯಲ್ಲಿ ಸ್ನಾನ ಮಾಡುವುದು ಪಾಪಗಳನ್ನು ಮಾಡುವುದಕ್ಕೆ ಪರವಾನಿಗೆಯಂತೆ ಭಾವಿಸುತ್ತಾನೆ. ಗಂಗೆಯಲ್ಲಿ ಮುಳುಗುವುದಕ್ಕೆ ಇದೆ ಎಂದು ಪಾಪ ಕೃತ್ಯಗಳನ್ನು ಮಾಡುವ ಮನೋಭಾವ ನಿಜಕ್ಕೂ ಹೀನಾಯ.  ಕೇವಲ ಗರ್ಭಗುಡಿಗೆ ಮುಖ ಮಾಡಿ ಶಿವಲಿಂಗಕ್ಕೆ ನಮಸ್ಕಾರ ಮಾಡುವಾಗ ಪರಮ ಭಕ್ತನಂತೆ ಅಭಿನಿಯಿಸುತ್ತಾನೆ. ಆನಂತರ ಭಗವಂತನ  ಸಿ ಸಿ ಕ್ಯಾಮೆರ ನಮ್ಮ ಹಿಂದೆ ಸುತ್ತುತ್ತಾ ಇದೆ ಎಂಬುದನ್ನೆ ಮರೆಯುತ್ತಾನೆ. ಎಂತಹ ಶೋಚನೀಯ ಅವಸ್ಥೆ?  ಯಾತ್ರೆಯುದ್ದಕ್ಕು ಇಂತಹ ಅನುಭವ. ಕಾಶೀ ಯಾತ್ರೆಯ ಮಹತ್ವ ಏನು ಎಂಬುದರ ಅರಿವಿಲ್ಲ. ಜನ್ಮಾಂತರದಲ್ಲಿ ತಪಸ್ಸು ಮಾಡಿದರೂ ಸಿಗದ ಭಾಗ್ಯ ಇದು.  ರಿಕ್ಷಾ ಒಂದರಲ್ಲಿ ಸುತ್ತಾಡುವಾಗ ರಿಕ್ಷಾದ ಚಾಲಕನಲ್ಲಿ ಕೇಳಿದೆ...ಹೇಗಿದೆ ನಿನ್ನ ಜೀವನ? ಎಷ್ಟು ಕಮಾಯಿಸುತ್ತಿಯಾ? ಆತ ಹೇಳಿದ ಒಂದು ಮಾತು ನಿಜಕ್ಕೂ ಅರ್ಥಪೂರ್ಣ ಎನಿಸಿತು. " ಇಧರ್ ಭಗವಾನ್ ಹೈ.   ಭಗವಾನ್ ಹೈ ತೋ ಹಮಾರೆಕೋ ದಂಧಾ ಹೈ. ದಂಧಾ ಹೈ ತೋ ಹಂ ಕಮಾ ರಹೇ ಹೈಂ. ಭಗವಾನ್ ನಹೀತೋ ಇಸ್ ವಾರಣಾಶಿ ಮೆ  ಔರ್ ಕ್ಯಾ ಹೈ?"  ಮನುಷ್ಯ ತನ್ನ ಅಸ್ತಿತ್ವವನ್ನುಗುರುತಿಸಬೇಕು. ಭಗವಂತನಿಗೆ ಎಲ್ಲವೂ ತಿಳಿದಿದೆ, ನಾನು ನಿನ್ನನ್ನು ಮರೆತಿಲ್ಲ ಎಂಬುದನ್ನು ಆತನಿಗೆ ತೋರಿಸಿಕೊಡಬೇಕು. ಬೇರೆ ಎನೂ ಬೇಡ. 

        ಕಾಶೀ ಯಾತ್ರೆ ಉದ್ದಕ್ಕೂ ಹಲವರು ಹಸಿವು ನಿದ್ರೆ ವಿಶ್ರಾಂತಿ ಇಷ್ಟಕ್ಕೇ ತಲೆಕೆಡಿಸಿಕೊಂಡರು. ಭಗವಂತನ ದರ್ಶನಕ್ಕೆ  ಹೋಗುವಾಗ ಸಾಧ್ಯವಾದರೆ ಉಪವಾಸದಲ್ಲಿರಬೇಕು. ಮನುಷ್ಯನಿಗೆ ಒಂದು ಹೊತ್ತುಆಹಾರ ತಿಂದೂ ಜೀವ ಉಳಿಸಿಕೊಳ್ಳಬಹುದು. ಆದರೆ ಹಲವರು  ಆಹಾರ ಕಂಡಾಗ ಮೃಗಗಳಂತೆ ವರ್ತಿಸಿದರು. ಸಿಕ್ಕಿದ ಆಹಾರ ಸರಿಯಾಗಿಲ್ಲ ಎಂದು ಅಸಹನೆ ತೋರಿದರು. ಆಹಾರ ಕೊಟ್ಟವನ ಎದುರೇ ಇದು ನಾಯಿಯೂ ತಿನ್ನಲ್ಲ ಎಂದರೆ ಕೊಟ್ಟವನಿಗೆ ಹೇಗಾಗಬೇಕು? ಹೇಳಿ ಕೇಳಿ ಉತ್ತರ ಭಾರತ. ಅಲ್ಲಿ ಅನ್ನ ಸಿಗುವುದಿಲ್ಲ. ಆದರೂ ಸಹ ಅಲ್ಲಲ್ಲಿ ಅದರ ವ್ಯವಸ್ಥೆಯಾಯಿತು.  ಬಂದವರಿಗೆಲ್ಲ ಬಿರಿಯಾನಿ ಹಂಚುವುದಕ್ಕೆ ಇದು ರಾಜಕೀಯ ಪಕ್ಷದ ಸಮಾವೇಶವಲ್ಲ. ಇಲ್ಲಿ ಯಾವ ಸ್ವಾರ್ಥವು ಇರುವುದಿಲ್ಲ. ಇಲ್ಲಿ ಕೇವಲ ಸಾತ್ವಿಕ ಆಹಾರ. ಇದು ಮನಸ್ಸನ್ನು ಸತ್ವಯುತಗೊಳಿಸಿ ಸಾತ್ವಿಕನನ್ನಾಗಿಸುತ್ತದೆ. ಆದರೆ ನಮಗೆ ಅಸುರೀ ಪ್ರವೃತ್ತಿಯೇ ಪ್ರಧಾನವಾದರೆ ಇವುಗಳ ಮಹತ್ವ ಅರಿವಾಗುವುದಿಲ್ಲ. ನಾವು ತಿನ್ನುವುದೇ ಮುಖ್ಯ ಧ್ಯೇಯವಾದರೆ ಆ ಹಸಿವಿಗೆ ಪರಿಹಾರವಿಲ್ಲ. ಯಾತ್ರೆಯ ಮೊದಲೇ ಹೇಳಿದಂತೆ ಎಲ್ಲರಿಗೂ ಸಮಾನತೆ ಮತ್ತು ಪ್ರಸಾದ ಭೋಜನ. ಪ್ರಸಾದವೆಂದರೆ ಏನು ಎಂದು ತಿಳಿಯದವರು ಪ್ರಸಾದದಲ್ಲೂ ಕಲ್ಲು ಹೆಕ್ಕಿದರು. ಪ್ರಸಾದ ಅದು ಭಗವಂತನ ಆಯ್ಕೆ. ತನಗೆ ಇಂತಹುದೇ ಬೇಕು ಎನ್ನುವ ಆಯ್ಕೆ ಅಲ್ಲಿರುವುದಿಲ್ಲ. ನಮಗೆ ಯೋಗವಿದ್ದರೆ ಪ್ರಹ್ಲಾದನಿಗೆ ವಿಷವೂ ಅಮೃತವಾದಂತೆ ಪ್ರಸಾದ ಅಮೃತವಾಗುತ್ತದೆ. ಇಲ್ಲವಾದರೆ ನಾವು ಅಮೃತ ಕೈಗೆತ್ತಿದರೂ ಅದು ವಿಷವಾಗಬಹುದು.  ಈ ಪರಿಮಿತಿಯನ್ನು ತಿಳಿಯದವರು ಒಂದಷ್ಟು ಮಂದಿ ಇದ್ದರು.  ಎಲ್ಲ ಕಳೆಹುಲ್ಲುಗಳು ಎಲ್ಲೆಂದರಲ್ಲಿ ಯಥೇಚ್ಛವಾಗಿ ಬೆಳೆಯುತ್ತದೆ. ಆದರೆ ಗರಿಕೆ ಹುಲ್ಲು ಕೆಲವು ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ಬೆಳೆಯುತ್ತದೆ. ಹಾಗೆ ಮನುಷ್ಯನ ಮನಸ್ಸು. ಕೆಟ್ಟ ಭಾವನೆಗಳು ಕೆಟ್ಟವರ್ತನೆಗಳು ಎಲ್ಲೆಂದರಲ್ಲಿ ವ್ಯಕ್ತವಾಗುತ್ತದೆ. ಸದ್ಭಾವನೆ ಸನ್ಮನಸ್ಸು ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ವ್ಯಕ್ತವಾಗುತ್ತದೆ. ಕಾಶೀ ಯಾತ್ರೆ ಎಂಬುದು ಜನ್ಮಾಂತರದ ಯೋಗ. ಅದು ಲಭ್ಯವಾಗಬೇಕಾದರೆ ಭಗವಂತ ಹಲವಾರು ಪರೀಕ್ಷೆಯನ್ನು ಒಡ್ಡುತ್ತಾನೆ. ಸ ಹಾಗಾಗಿ ಅದರಲ್ಲಿ ಹಲವು ಕಷ್ಟ ನಷ್ಟಗಳನ್ನು ಅನುಭವಿಸಬೇಕು. ಸಹಯಾತ್ರಿಗಳೂ ಒಂದು ರೀತಿಯಲ್ಲಿ ಪರೀಕ್ಷೆಯ ಅಂಗವಾಗಿಬಿಡುತ್ತಾರೆ. ಸತ್ಯ ಹರಿಶ್ಚಂದ್ರನಿಗೆ ಪರೀಕ್ಷೆ ಒಡ್ಡಿದವರು ಯಾರು? ಕಾಶಿಯಲ್ಲೇ ಯಮರಾಜ ವೀರ ಬಾಹುವಾಗಿ ಪರೀಕ್ಷೆಗೆ ನಿಂತ.  ಕಥೆ ಕೇಳುವುದಕ್ಕೆ ರೋಚಕವಾಗಿರುತ್ತದೆ. ಅದರ ತಾತ್ಪರ್ಯದ ಬಗ್ಗೆ ನಮಗೆ ನಿರ್ಲಕ್ಷ್ಯ.   ಪರಮಾರ್ಥ ಸಿದ್ಧಿಸಲು ಇದು  ಪರೀಕ್ಷೆ. ಇಲ್ಲಿ ಕೇವಲ ಸಮ ಚಿತ್ತದಿಂದ ಅದನ್ನು ಎದುರಿಸಬೇಕು. ನಮಗೆ ಎದುರಾಗುವ ಕಷ್ಟನಷ್ಟಗಳಿಗೆ ಯಾರೋ ನಿಮಿತ್ತರಾಗಬಹುದು. ಅದೆಲ್ಲವೂ ಪರಮಾತ್ಮ ಸ್ವರೂಪಗಳು. ಹೀಗೆ ಸಮಾಧಾನ ಮಾಡಿ ಸಂಯಮದಿಂದ ಶಾಂತ ಚಿತ್ತದಿಂದ ಕಾಶೀಯಾತ್ರೆಯನ್ನು ಮಾಡಬೇಕು. ಆದರೆ ಇಂತಹ ದಿವ್ಯ ಉದ್ದೇಶಗಳಿಗೆ ಅರ್ಥವೇ ಇಲ್ಲದಂತೆ ಮನುಷ್ಯನ ವರ್ತನೆ ಯಾತ್ರೆಯುದ್ದಕ್ಕೂ ಅನುಭವಕ್ಕೆ ಬಂತು. ಕಾಶಿ ಯಾತ್ರೆ ಎಂಬುದು ಕಾಸಿನ ವಿಹಾರ ಯಾತ್ರೆಯಲ್ಲ. ಅದು ವಿಶಾಲ ಯಾತ್ರೆ.  ಮನಸ್ಸಿನಲ್ಲಿ ದೇಹದಲ್ಲಿ ಕಲ್ಮಷವಿಟ್ಟು ಪರಮಾತ್ಮನ ದರ್ಶನ ಮಾಡಿದರೆ ಏನು ಫಲ? ಎಲ್ಲಿ ಮನಸ್ಸು ಭಾವನಾರಹಿತವಾಗಿ ಉದ್ವೇಗಕ್ಕೆ ಒಳಗಾಗದೆ ಇರುವುದೋ ಅಲ್ಲಿ ಭಗವಂತನ ಸಾನ್ನಿಧ್ಯವಿರುತ್ತದೆ. ಇದು ಭಗವದ್ಗೀತೆಯ ಮಾತು.     

        ಕಾಶೀ ಯಾತ್ರೆಯ ನಂತರ ಮನುಷ್ಯನಿಗೆ ಬೇರೆ ಆಶೆ ಇರಬಾರದು. ಕಾಶಿ ಯಾತ್ರೆ ಎಂಬುದು ಪರಮ ಯಾತ್ರೆ. ಅಲ್ಲಿಗೆ ಹೋದನಂತರ ಬೇರೊಂದು ಯಾತ್ರೆ ಮಾಡುವ ಆಯ್ಕೆಯೂ ಇರುವುದಿಲ್ಲ. ಬಯಕೆಯೂ ಇರಬಾರದು. ಜೀವನ ಯಾತ್ರೆ ಎಂದರೆ ಅದು ಕಾಶಿ ಯಾತ್ರೆ. ಇದು ಅರ್ಥವಾಗಬೇಕಾದರೆ ಹಿಂದು ಧರ್ಮದ ಆಳವನ್ನು ಅರಿಯಬೇಕು. ಅದರ ಆಚರಣೆಯ ಅಂತರಾಳವನ್ನು ಅರಿಯಬೇಕು. ಹಾಗಿದ್ದಲ್ಲಿ ಕಾಶೀ ಯಾತ್ರೆ ಅತ್ಯಂತ ಶಾಂತಚಿತ್ತದಿಂದ ನೆರವೇರಿಸುವುದಕ್ಕೆ ಸಾಧ್ಯವಾಗುತ್ತದೆ. 

        ಕಾಶಿಯ ನಿರ್ಗಮನ ಹೃದಯವನ್ನು ಭಾರವಾಗಿಸಿತು. ಭಗವಂತನ ರೂಪವನ್ನು ಸನ್ನಿಧಿಯಲ್ಲೇ ಬಿಟ್ಟು ಕಾಶಿವಿಶ್ವನಾಥನನ್ನು ಹೃದಯದಲ್ಲಿ ಸ್ಥಾಪಿಸಿ ಇನ್ನು ಪಾಪಕರ್ಮವನ್ನು ಮಾಡದಂತೆ ಪ್ರೇರೇಪಣೆ ಕೊಡು ಭಗವಂತ ಎಂದು ಬೇಡಿಕೊಂಡೆ. ಮೊದಲೆಲ್ಲ ಕಾಶಿ ಯಾತ್ರೆ ಎಂದರೆ ಜೀವನದ ಅಂತಿಮ ಯಾತ್ರೆಯಾಗಿತ್ತು. ಹೊರಟರೆ ಪುನಹ ಬರುತ್ತೇನೆ ಎಂಬ ಅಭಿಲಾಶೆ ನಿರೀಕ್ಷೆ ಇರುವುದಿಲ್ಲ. ಅಲ್ಲಿಗೆ ಸೇರುವುದೇ ಗುರಿ. ಮನುಷ್ಯನ ಬದುಕಿನ ಮಹಾ ಪ್ರಸ್ಥಾನ. ಪರಮ ಗುರಿ. ಒಂದು ವೇಳೆ ಹಿಂದಿರುಗಿ ಬಂದರೆ ಅತನಿಗೆ ಪಾಪ ಮೋಕ್ಷವಿಲ್ಲ ಎಂದರ್ಥ. ಇನ್ನೂ ಕ್ಷಯವಾಗದ ಪಾಪ ಉಳಿದುಕೊಂಡಿದೆ. ಹಾಗಾಗಿ ಕಾಶೀ ಯಾತ್ರೆ ಮುಗಿಸಿ ಬಂದ ಮೇಲೆ ಕಾಶಿ ಸಮಾರಾಧನೆ ಎಂಬುದನ್ನು ಮಾಡುವ ಸಂಪ್ರದಾಯ ವಿಧಿ ಬೆಳೆದಿರಬೇಕು.  ಕರ್ಮದ ಕೊನೆಯ ಭಾಗದಲ್ಲಿ ಒಂದು ತತ್ವವಿದೆ,   "ಪ್ರಾಯಶ್ಚಿತ್ತಾನ್ಯ ಶೇಷಾಣಿ ತಪಃ ಕರ್ಮಾತ್ಮಕಾಣಿ ತೇಷಾಂ ಶೇಷಾಣಾಂ ಕೃಷ್ಣಾನು ಸ್ಮರಣಂ ಪರಂ"  ಎನ್ನುವಂತೆ ಅಶೇಷವಾಗಿದ್ದ ಪಾಪಗಳೆಲ್ಲವೂ ನಾಮ ಸ್ಮರಣೆಯಿಂದ ಪರಿಹಾರವಾಗಲಿ.  ಇದು ನಮ್ಮ ಪ್ರಾರ್ಥನೆ ಮಾತ್ರ. ಆದರೆ ಪಾಪ ಪರಿಹಾರ ಅದು ಪರಮಾತ್ಮನ ಇಚ್ಛೆ. 

        ಬೆಂಗಳೂರಿನಲ್ಲಿ ಎದುರುಗೊಳ್ಳುವುದಕ್ಕೆ ಮುಂದಾಗಿ ತಿಳಿಸದೇ  ಮಗ  ಕಾರು ತೆಗೆದುಕೊಂಡು ಬಂದಿದ್ದ. ಬಹಳ ಸಂತೋಷವಾಯಿತು. ಕಾಶೀಯಾತ್ರೆಯ ಅವಕಾಶವನ್ನು ಒದಗಿಸಿದ ರಾಷ್ಟ್ರ ಜಾಗೃತಿ ಅಭಿಯಾನಕ್ಕೆ ಪ್ರಣಾಮಗಳು. ಇದರ ಸಾಧಕ ಬಾಧಕಗಳು ಏನಿದ್ದರೂ ಅದು ದೈವ ನಿರ್ಣಯ. ಅದನ್ನು ಮೀರುವ ಹಾಗಿಲ್ಲ. ಯೋಗ ಇದ್ದವರಿಗಷ್ಟೇ ಸೂಕ್ತ ದರ್ಶನ. ಜಾಗೃತಿ ಎಂದರೆ ನಿದ್ದೆಯಲ್ಲಿ ಇದ್ದವನನ್ನು ಎಚ್ಚರಿಸುವುದು. ಆದರೆ ಕನವರಿಸುವವನ್ನು ಎಬ್ಬಿಸುವುದಕ್ಕೆ ಸಾಧ್ಯವಿಲ್ಲ. ನಿದ್ದೆಯಲ್ಲಿದ್ದವರನ್ನು ಎಬ್ಬಿಸುವ ಪ್ರಯತ್ನವಂತು ನಡೆದಿದೆ. ಇನ್ನು ಯಾರೆಲ್ಲ ಎಚ್ಚರಗೊಂಡಿದ್ದಾರೆ ಎಂಬುದು ಅವರವರ ಮನೋಭಾವಕ್ಕೆ ಸೀಮಿತ. ಹೊಸ ಪರಿಚಯ ಹೊಸ ವರ್ತುಲ ಅದರ ಬಾಹುಳ್ಯ ವೃದ್ಧಿಸಿದ್ದು ಯಾತ್ರೆಯ ಹೆಚ್ಚುವರಿ ಗಳಿಕೆ ಎನ್ನಬೇಕು. ಯಾತ್ರೆ ನಮ್ಮದಾದರೂ ಅದರ ಹಿಂದೆ ಹಲವರ ಪರಿಶ್ರಮವಿದೆ. ಹಣದಿಂದ ಅಳೆಯಲಾಗದ ನಿಷ್ಕಾಮ ಕರ್ಮವಿದೆ. ಪೂರ್ವ ಜನ್ಮದ ಸುಕೃತ ಫಲ. 








 





No comments:

Post a Comment