Monday, December 4, 2023

ಪ್ರಜ್ಞಾಹೀನ


                ಮೊನ್ನೆ  ಕೆಲವು ಘಟನೆಗಳು ಸಾಮಾನ್ಯ ಎಂಬಂತೆ ನಡೆದು ಹೋಯಿತು. ಆದಿನ ಸಾಯಂಕಾಲ‌ ಮನೆಯವರನ್ನು ಮಂಗಳೂರು ರೈಲು ಹತ್ತಿಸಲು ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಹೋಗಿದ್ದೆ. ರೈಲು ಇನ್ನೂ ಬಂದಿರಲಿಲ್ಲ. ಹಾಗೆ ಅಲ್ಲಿದ್ದ ಆಸನಗಳಲ್ಲಿ ಕುಳಿತುಕೊಂಡೆವು. ಮೆಜೆಸ್ಟಿಕ್ ರೈಲು ನಿಲ್ದಾಣ ಮೊದಲಿನಂತಲ್ಲ. ಬಹಳ ಸ್ವಚ್ಛ ವಾಗಿತ್ತು. ಹೆಚ್ಚೆಂದರೆ ನಮ್ಮ ಮನೆಗಿಂತಲೂ ಸ್ವಚ್ಛವಾಗಿತ್ತು ಆದರೂ. ಕಸ ಗುಡಿಸುವಾಕೆ ಕಸಗುಡಿಸುತ್ತಾ ಬಂದಳು. ಆಗ ಅಲ್ಲೇ ಕಂಬದ ಸಂದಿಯಲ್ಲಿ ಯಾರೋ ಕಾಫಿ ಕುಡಿದು ಲೋಟವನ್ನು ಮುದ್ದೆ ಮಾಡಿ ಸಿಕ್ಕಿಸಿ ಇಟ್ಟಿದ್ದು ಗಮನಿಸಿದೆ. ಗುಡಿಸುವಾಕೆ ಅದನ್ನು ಕಷ್ಟಪಟ್ಟು ತೆಗೆದು ಸ್ವಚ್ಛ ಮಾಡಿ ತೆಗೆದಕೊಂಡು ಹೋದಳು. ಆಕೆ ಅತ್ತ ಹೋದ ಮೇಲೆ ಒಂದಿಬ್ಬರು ಅಲ್ಲಿ ಕುಳಿತವರು ಚಿಪ್ಸ್ ತಿನ್ನುತ್ತಾ ಖಾಲಿ ಕವರ್ ಅಲ್ಲೇ ಎಸೆದರು. ಕಂಬಕ್ಕೆ ಒಂದರಂತೆ‌ ಕಸದ ಬುಟ್ಟಿ ಇಟ್ಟಿದ್ದರೂ ಎಲ್ಲೆಂದರಲ್ಲಿ ಕಸ ಎಸೆದ ವರ್ತನೆ ಅಸಹ್ಯವಾಗಿ ಕಂಡಿತು. ಆಗತಾನೆ ಕಸ ಗುಡಿಸಿ ಹೋದರೂ ಅದರ ಬಗ್ಗೆ ಗೌರವ ಇಲ್ಲದ ಅನಾಗರಿಕರು. ನಾವು ಸಮಸ್ಯೆಗಳನ್ನು ಸೃಷ್ಟಿ ಮಾಡುವ ಸಂಖ್ಯೆ ಹೆಚ್ಚಿರುತ್ತಾರೆ. ಅದರೆ ಪರಿಹರಿಸಿಕೊಳ್ಳುವರು...ಕೇವಲ ಕೆಲವು ಜನಗಳು.

ಆನಂತರ  ರೈಲು ಹೊರಡುವಾಗ ಹೋಗುವವರಿಗೆ ವಿದಾಯ ಹೇಳಿ ನಾನೂ ಹೊರಟೆ. ರೈಲು ನಿಧಾನವಾಗಿ ಹೊರಟಿತು. ಹಾಗೆ ಪ್ಲಾಟ್ ಫಾರಂ ನಲ್ಲಿ ಹೊರಟ ರೈಲಿನ ಜೊತೆ ಹೆಜ್ಜೆ ಹಾಕುತ್ತಾ ಮುಂದೆ ಬರುತ್ತಿದ್ದೆ. ಒಬ್ಬಾತ ಏನೋ ಖರೀದುಸುವುದಕ್ಕೆ ರೈಲಿನಿಂದ‌ ಇಳಿದವನು ರೈಲು ಹೊರಟಿರುವುದನ್ನು ನೋಡಿ ಗಾಬರಿಯಿಂದ ಓಡಿದೆ. ಆದರೆ ರೈಲು ಅಷ್ಟೊತ್ತಿಗೆ ವೇಗ ಪಡೆದಾಗಿತ್ತು. ರೈಲಿನ‌  ಹಿಂದಿನ ಭೋಗಿಯಲ್ಲಿ ಲೈಟ್ ಹಿಡಿದು ಸಿಗ್ನಲ್ ಕೊಡುವಾತನಲ್ಲಿ ಬೊಬ್ಬಿಟ್ಟು ಗೋಗರೆದ, ರೈಲು ಮುಂದೆ ನಿಲ್ಲಬಹುದು ಎಂದುಕೊಂಡು ಹಿಂದೆ ಪ್ಲಾಟ್ ಫಾರಂ ತುದಿಯ ತನಕವೂ ಓಡಿದ, ರೈಲು ಆತನನ್ನು ಅಣಕಿಸುವಂತೆ ಮುಂದೆ ಮುಂದೆ ಹೋಗಿ ಮತ್ತೂ ವೇಗ ಪಡೆಯಿತು. ಆತನ ಮನೆ ಮಂದಿ ರೈಲಿನಲ್ಲಿ ಈತ ಇಲ್ಲಿ ಏಕಾಂಗಿ. ಆತ ಕೆಲವು ಘಳಿಗೆಗೆ ಸ್ವಯಂ ಪ್ರಜ್ಞೆ ಕಳೆದದ್ದು ಗಂಭೀರ ಸಮಸ್ಯೆಗೆ ಕಾರಣವಾಯಿತು. 


ರೈಲು ನಿಲ್ದಾಣದಿಂದ ಹೊರಟು ಸಿಟಿ ಬಸ್ಸು ನಿಲ್ದಾಣಕ್ಕೆ ಬಂದೆ. ಮಲ್ಲೇಶ್ವರಂ ಕಡೆ ಹೋಗುವ ಬಸ್ಸು ಇನ್ನೂ ಬಂದಿರಲಿಲ್ಲ. ಬಹಳಷ್ಟು ಮಂದಿ ಕಾಯುತ್ತಿದ್ದರು.  ಸುಮಾರು ಹದಿನೈದು ನಿಮಿಷ ಕಾಯಬೇಕಾಯಿತು. ಹದಿನೈದು ನಿಮಿಷದ ದೀರ್ಘ ಅವಧಿಯಾದುದರಿಂದ ಕೊನೆಗ ಸಾಕಷ್ಟು ಜನ ಜಂಗುಳಿಯಾಯಿತು. ಸರಕಾರಿ ಬಸ್ಸುಗಳೆಂದರೆ ಈಗಿನ ಮಳೆಯಂತೆ. ಅದರಲ್ಲೂ ಬೆಂಗಳೂರಿನ  ಬಿ ಎಂ ಟಿ ಸಿ ...ಯಾವಾಗ ಬರುತ್ತದೆ ಎಂದು ಊಹಿಸುವುದು ಕಷ್ಟ. ಇನ್ನು ಬಂದರೂ ಎರಡು ಮೂರು ಒಟ್ಟಿಗೆ ಬರುತ್ತವೆ. ನಾವು ಯಾಕಾಗಿ ಓಡುತ್ತೇವೆ ಎಂಬ ಪ್ರಜ್ಞೆ ಅದನ್ನು ಓಡಿಸುವವರಿಗೆ ಇರುವುದಿಲ್ಲ. ಹಾಗಾಗಿ ಕೊನೆ ಎರಡು ಬಸ್ಸು ಒಟ್ಟಿಗೆ ಬಂತು. ನಾನು ಹಿಂದಿನ ಬಸ್ಸಲ್ಲಿ ಹೋಗಿ ಮೊದಲು ಕುಳಿತೆ. ಹಾಗೆ ಹೊರಗೆ ನೋಡುತ್ತೇನೆ. ಎದುರಿನ ಬಸ್ಸು ಬಿಟ್ಟು ಸಾಕಷ್ಟು ಜನ ಈ ಬಸ್ಸಿಗೆ ಮುತ್ತಿಕೊಂಡರು. ಅಷ್ಟು ಹೊತ್ತಿನ ಕಾಯುವಿಕೆ ಹಲವರ ಸಹನೆಯನ್ನು ಕೆಡಿಸಿತ್ತು. ಅಷ್ಟೂ ಜನ ಹತ್ತುವಾಗ ಒಬ್ಬ ಗುಂಪಿನಿಂದ ಆಚೆಗೆ ಸರಿದು ಹೋದ. ಈ ಬಸ್ಸು ಜನರಿಂದ ತುಂಬಿ ಬಸ್ಸು ಗಡಿಬಿಡಿಯಿಂದ ಆಗಲೇ ಹೊರಟಿತು. ಇನ್ನೇನು ಬಸ್ಸು ಸ್ವಲ್ಪ ಮಂದೆ ಚಲಿಸಿರಬಹುದು.  ಒಬ್ಬ ಪಿಕ್ ಪಾಕೆಟ್ ಆಯಿತು ಎಂದು ಕಿರುಚಿದ, ಉಳಿದವರೆಲ್ಲರೂ ಮನೆಯೊಳಗೆ ಹಾವು ಎಂದು ಒಬ್ಬ ಕಿರುಚುವಾಗ ಉಳಿದವರು ಹೆದರಿ ಕುಪ್ಪಳಿಸುವಂತೆ.....ಎಲ್ಲರೂ ಕಳ್ಲ ಅಲ್ಲೇ ಇದ್ದಾನೆ ಎಂಬಂತೆ ತಮ್ಮ ಜೇಬು ಮುಟ್ಟಿ ನೋಡಿದರು. ಕಿರುಚಿದವ ಜೋರು ಅಳತೊಡಗಿದ. ಪಾಪ ಆತನ ಪರ್ಸ್ ಯಾರೋ ಎಗರಿಸಿದ್ದರು.  ಆತನ ಕಿರುಚಾಟಕ್ಕೆ  ಬಸ್ಸು ನಿಂತಿತು. ಆತ ಇಳಿದು ಹೋದ.  ಆಗ ಒಬ್ಬಾತ ಯಾಕೆ ಗುಂಪಿನಿಂದ ದೂರ ಸರಿದು ಹೊದ ಅಂತ ತಿಳಿಯಿತು. ಛೇ ಬಹಳ ನಿರಾಶೆಯಾಯಿತು. ಒಬ್ಬ ಕಳ್ಳ ನನ್ನ ಕಣ್ಣೆದುರೇ ಸರಿದು ಹೋದ. ಪಾಪ ಬಡಪಾಯಿಯೊಬ್ಬ ಪ್ರಜ್ಞೆ ಕಳೆದುಕೊಂಡ, ಅದು ಆತನ ಬದುಕಿನ ಮರೆಯಲಾಗದ ಘಟನೆಗೆ ಕಾರಣವಾಯಿತು. 

No comments:

Post a Comment