Saturday, December 2, 2023

ಸ್ವಾಭಿಮಾನ

        ಬೀರೂರಿನಿಂದ  ಶಿವಮೊಗ್ಗಕ್ಕೆ ಹೋಗುವ ಕರ್ನಾಟಕ ಸಾರಿಗೆ  ಬಸ್ಸಿನಲ್ಲಿ ಮುಂದಿನ ಭಾಗದಲ್ಲಿ ಕುಳಿತಿದ್ದೆ. ಪಕ್ಕದ ಸೀಟಿನಲ್ಲಿ ಅರುವತ್ತರ ವೃದ್ಧೆಯೊಬ್ಬಳು ಬಂದು ಕುಳಿತಳು. ಜತೆಗೆ ಪುಟ್ಟ ಹುಡುಗನೊಬ್ಬ ಇದ್ದ. ಕಂಡಕ್ಟರ್ ಟಿಕೇಟ್ ಗಾಗಿ ಹತ್ತಿರ ಬಂದ. ವೃದ್ದೆ ತರೀಕೆರೆ ಅಂತ ಹೇಳಿ ಕೈಯಲ್ಲಿದ್ದ ನೋಟೊಂದನ್ನು  ಕೊಟ್ಟಳು. ಆತ ಆಧಾರ್ "ವೋಟರ್ ಇಲ್ವೇನಮ್ಮ?" ಎಂದು ಗೊಣಗುತ್ತಾ ಹಣ ಪಡೆದು ಟಿಕೇಟ್ ಕೊಟ್ಟ. ನಾನು ಆಕೆಯಲ್ಲಿ ಕೇಳಿದೆ " ಅದೇನು ಇಲ್ಲ ಆಧಾರ್ ಇದ್ರೆ ಫ್ರೀಯಾಗಿ ಹೋಗಬಹುದಿತ್ತಲ್ವ?" 


    " ಹೌದು, ಆದರೆ ನನಗೆ ಫ್ರೀ  ಬೇಡ. ವಯಸ್ಸು ಇಷ್ಟಾಯಿತು. ಇದುವರೆಗೆ ನನಗೆ ಬೇಕಾದ್ದನ್ನು ದುಡಿದು ಮಾಡ್ತಾ ಇದ್ದೇನೆ. ಒಂದು ಬಸ್ಸಿನ ದುಡ್ಡೂ ಕೊಡುವಷ್ಟೂ ದುಡಿದು ಸಂಪಾದಿಸುವದಕ್ಕೆ ಸಾಧ್ಯವಿಲ್ಲದೇ ಇದ್ದರೆ ಈ ಜನ್ಮ ಏನಕ್ಕೆ ಬೇಕು? ಇಷ್ಟು ವರ್ಷ ದುಡ್ದುಕೊಡದೇ ಹೋಗಿಲ್ಲ ಈಗ ಯಾಕೆ ಹೋಗಬೇಕು? ಉಚಿತ ಎಲ್ಲವೂ ಸಿಗಬಹುದು ಆದರೆ,  ಒಂದು ತುತ್ತು ಅನ್ನ ಅದನ್ನು ಸ್ವಂತ ದುಡಿಮೆಯಿಂದ ತಿನ್ನುವುದಕ್ಕೆ ಸಾಧ್ಯವಿಲ್ಲದೇ ಇದ್ದರೆ ಈ ಮನುಷ್ಯ ಜನ್ಮ ಯಾಕೆ ಬೇಕು?   "

        ಆಕೆ ಹೇಳಿದ್ದನ್ನು ಕೇಳಿ ಗಾಬರಿಯಾಗುವ ಸರದಿ ನನ್ನದು.  ಸ್ವಂತ ದುಡಿಮೆಯ ರುಚಿ ಅದನ್ನು ಅನುಭವಿಸುವ ಆಕೆಯ ಸ್ವಾಭಿಮಾನ ಇಷ್ಟುವರ್ಷ ಅದನ್ನೇ ಪಾಲಿಸಿಕೊಂಡು ಬಂದ ನಿಷ್ಠೆ ಈಗ ಯಾವುದೋ ಕಾರಣಕ್ಕೆ ಉಚಿತವಾಗಿ ಸಿಗುತ್ತದೆ ಎಂದು ಅದನ್ನು ಅನುಭವಿಸುವುದಕ್ಕೆ ಅಕೆಯ   ಈ ಅಭಿಮಾನ ಅಡ್ಡಬಂತು. ಸರಳವಾಗಿ ಆಕೆ ಹೇಳಿದ್ದಳು. ನಮಗೆ ಬೇಕಾಗಿರುವುದನ್ನು ನಾವು ದುಡಿದು ಸಂಪಾದಿಸಬೇಕು. ಅದು ಸಾಧ್ಯವಿಲ್ಲದೇ ಇದ್ದರೆ ಅದೊಂದು ಜೀವನವಲ್ಲ. ದುಡಿಯುವುದಕ್ಕೆ ಆರಂಭಿಸುವಾಗ ನನ್ನದೇ ಒಂದು ಐದು ರೂಪಾಯಿ ನೋಟು ನನ್ನ ಕೈಗೆ ಸಿಕ್ಕಿದಾಗ ಆಗ ನಾನು ಅನುಭವಿಸಿದ ಸಂತೋಷ ನೆನಪಾಯಿತು. ನನ್ನದಲ್ಲದ ವಸ್ತುವನ್ನು ನಮಗೆ ಅನುಭವಿಸುವ ಹಕ್ಕು ನಮಗಿಲ್ಲ.  ಭಿಕ್ಷುಕನಿಗೆ ಅನುಕಂಪದಿಂದ ಕೊಡುವ ಭಿಕ್ಷೆಯೂ ಆತನನ್ನು ಸಾಲಗಾರನನ್ನಾಗಿ ಮಾಡುತ್ತದೆ. ಆತ ತೀರಿಸಲಿ ಬಿಡಲಿ...ಆತ ಅದರಿಂದ ಋಣ ಮುಕ್ತನಾಗುವುದಕ್ಕೆ ಸಾಧ್ಯವಿಲ್ಲ. ಉಚಿತವಾಗಿ ಎಲ್ಲವೂ ಸಿಗಬಹುದು, ಆದರೆ ಸ್ವಾಭಿಮಾನ ಅದು ಉಚಿತವಾಗಿ ಸಿಗುವುದಕ್ಕೆ ಸಾಧ್ಯವಿಲ್ಲ. ಇಂದು ಎಲ್ಲವೂ ಉಚಿತವಾಗಿ ಸಿಗಬಹುದು. ಅದನ್ನು ಅನುಭವಿಸುತ್ತಾ ಇರುವಾಗ ಮುಂದೊಂದು ದಿನ ಅದು ಸಿಗದಂತಹ ಪರಿಸ್ಥಿತಿ ಬರಬಹುದು. ಯಾಕೆಂದರೆ ಅದಕ್ಕೂ ಒಂದು ಪರಿಮಿತಿ ಇರುತ್ತದೆ. ಆಗ ಅದು ಸಿಗದೇ ಇದ್ದಾಗ ಕದಿಯುವುದಕ್ಕೆ ಕಸಿಯುವುದಕ್ಕೆ ತೊಡಗಬಹುದು. ಯಾಕೆಂದರೆ ದುಡಿಮೆಯನ್ನೇ ಮರೆತಿರುವಾಗ ಮತ್ತೆ ಪಡೆಯುವ ಬಗೆ ಹೇಗೆ? 

        ಮೊನ್ನೆ ಯಾರೋ ಒಬ್ಬರು ಹೇಳಿದರು.  ಮಹಿಳೆಯರ ಉಚಿತ ಪ್ರಯಾಣದ ಬಗ್ಗೆ ಆಕ್ಷೇಪಿಸಿದರೆ ಅದು ಸ್ತ್ರೀಯರಿಗೆ ಅವಮಾನ ಮಾಡಿದಂತೆ.  ಮಾನ ಎಂಬುದು ಕೇವಲ ಸ್ತ್ರೀಯರಿಗೆ ಸೀಮಿತವಾಗಿರುತ್ತದೆ ಎಂಬುದನ್ನು ಸುಸಂಸ್ಕೃತ ಸಮಾಜ ಒಪ್ಪುವುದಿಲ್ಲ. ಸ್ತ್ರೀಯಾಗಲೀ ಪುರುಷನಾಗಲೀ ಮಾನ ಅದು ಸಮಾನವಾಗಿರುತ್ತದೆ. ಯಾರು ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ. ಅದು ಅವರವರು ಉಳಿಸಿಕೊಂಡು ಅವರಿಗೆ ಅವರೇ ಮೌಲ್ಯವನ್ನು ತರುವಂತೆ. ಹೆಣ್ಣು ಪ್ರಕೃತಿ ಸಹಜ ಅಬಲೆಯಾಗಿರಬಹುದು, ಆದರೆ ಆಕೆ ಬುದ್ಧಿವಂತೆಯಾಗಿರುತ್ತಾಳೆ. ಅದು ಅನಿವಾರ್ಯ. 

ಅತೀ ಕೆಟ್ಟದ್ದನ್ನು ಸಹ  ಉಚಿತವಾಗಿ ಕೊಡಿ....ಅದಕ್ಕೆ ಹಾತೊರೆಯುತ್ತಾರೆ. ಒಳ್ಳೆ ಮೌಲ್ಯಯುತವಾದದ್ದನ್ನು ಯಾರೂ ಬಯಸುವುದಿಲ್ಲ


No comments:

Post a Comment