Sunday, December 17, 2023

ದೇವರು ಒಂದು ಸಮಸ್ಯೆ

 

"ದೇವರು ಎಂಬುದು ನಮ್ಮ ಅಹಂಕಾರವನ್ನು ದೂರ ಮಾಡುವುದಕ್ಕಿರುವ ಸಾಧನ. "

ಹಿಂದೆ ನಮ್ಮಜ್ಜನಲ್ಲಿ‌  ಅವರ ಜತೆ ಪೌರೋಹಿತ್ಯ ದ ಜೊತೆಯಲ್ಲಿ ಇರುವಾಗ ಒಂದು ಪ್ರಶ್ನೆ ಕೇಳಿದ್ದೆ. ಯಾವುದೇ ಪೂಜೆ ಹವನ ಸತ್ಕಾರ್ಯದಲ್ಲಿ  ಮೊದಲು ಗಣಪತಿ ಪೂಜೆ ಮಾಡುವುದು ಸಂಪ್ರದಾಯ. ತೆಂಗಿನ ಕಾಯಿ ಅಕ್ಕಿ ಇಟ್ಟು ಗಣಪತಿ ಅವಾಹನೆ ಮಾಡಿ  ಗಣಪತಿ ಪೂಜೆ ಮಾಡುವುದು ಶಾಸ್ತ್ರ ವಿಧಿ. ಗಣಪತಿ ಪೂಜೆಯಲ್ಲಿ ಮೂರ್ತಿ ಪ್ರತಿಷ್ಠೆ ಯಾಕಿಲ್ಲ? ಶಾಸ್ತ್ರೀಯವಾದ ಉತ್ತರ ಏನೋ, ಅದರೆ ಅವರು ಒಂದು ಸರಳವಾದ ಉತ್ತರ ಹೇಳಿದರು. ದೇವರು ಯಾವುದೇ ಆದರೂ ಅದು ವಿಸರ್ಜನೆಯಾಗಬೇಕು. ಅದರ ಆವಾಹನೆ ಅವಧಿ ಸೀಮಿತವಾಗಿರುತ್ತದೆ. ಅದರಿಂದ ಆಚೆಗೆ ಅದರ ಪ್ರಭಾವ ಶಕ್ತಿಯನ್ನು ತಡೆದುಕೊಳ್ಳುವ ಶಕ್ತಿ ಮನುಷ್ಯ‌ಮಾತ್ರರಿಗೆ ಸಾಧ್ಯವಿಲ್ಲ. ‌ಅದೊಂದು ಸಮಸ್ಯೆಯಾಗಿ ಪೀಡಿಸುತ್ತದೆ. 

ಅಜ್ಜನ ಉತ್ತರಕ್ಕೆ ವಿವರಣೆ ಕೊಡುವ ಅಥವಾ ಅದನ್ನು ಚರ್ಚಿಸುವ ತಿಳುವಳಿಕೆ ನನಗಿಲ್ಲ. ಆ ವಯಸ್ಸಿನಲ್ಲಿ ಅದನ್ನು ಅರ್ಥವಿಸುವ ಸಾಮಾರ್ಥ್ಯವೂ ಇಲ್ಲ. ಆದರೆ ದೇವರೂ ಒಂದು ಸಮಸ್ಯೆಯಾಗಿ ಬಿಡುತ್ತದೆ ಎಂಬುದು ಹಲವು ಅರ್ಥ ಆಯಾಮಗಳಿಗೆ ಎಡೆ ಮಾಡಿಕೊಡುತ್ತದೆ. ಯಾವುದೇ ವಿಷಯ ನಮಗೆ ಅದರ ಅರಿವಿಲ್ಲದೆ ಇದ್ದರೆ ಅದು ಪ್ರಶ್ನೆಯಾಗಿ ಸಮಸ್ಯೆಯಾಗಿಬಿಡುತ್ತದೆ.  ಸಮಸ್ಯೆಯನ್ನು  ಪರಿಹರಿಸಿಕೊಳ್ಳುವುದು ಸಹಜವಾಗಿ ಬದುಕಿನ ಗುರಿಯಾಗಿಬಿಡುತ್ತದೆ. ಹಲವು ಸಮಸ್ಯೆಗಳು ಪರಿಹರಿಸಿಕೊಂಡರೂ ಕೆಲವು ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಬಿಡುತವೆ. ಅದರಲ್ಲಿರುವ ಒಂದು ಸಮಸ್ಯೆಯೇ ದೇವರು ಎಂದು ಅಜ್ಜ ಹೇಳಿದುದರಲ್ಲಿ ಅತಿಶಯ ಏನೂ ಇರುವುದಿಲ್ಲ. ಯಾಕೆಂದರೆ ದೇವರು ಇದೊಂದು ಅರ್ಥಮಾಡಿಕೊಳ್ಳಲಾಗದ ಸಮಸ್ಯೆ.  ಬದುಕಿನುದ್ದಕ್ಕೂ ಇದರ ಬಗ್ಗೆ ಯೋಚಿಸಿದಷ್ಟೂ ಇದನ್ನು ಅರ್ಥವಿಸುವುದರಲ್ಲಿ ಎಡವಿಬೀಳುತ್ತೇವೆ. ಯಾವುದು ದೇವರು? ಕಣ್ಣಿಗೆ ಕಾಣದ ರೂಪವಿಲ್ಲದ ಭಾವವಿಲ್ಲದ ಗುಣಾವಗುಣಗಳಿಗೆ ಅತೀತವಾದ ಯಾವುದೂ ಅಲ್ಲದ ಯಾವುದೋ ಒಂದು ಆಗಿರುವ ಈ ವಿಸ್ಮಯ ವಸ್ತು ಎಲ್ಲೋ ಇದೆ ಎಂಬ ಅನುಭವದಲ್ಲಿ ಅದೊಂದು ಅರಿಯಲಾಗದ ಸಮಸ್ಯೆಯಾಗಿ ಬಿಡುತ್ತದೆ. ಯಾರದೋ ಒಂದು ವಸ್ತುವನ್ನು ಮನೆಯಲ್ಲಿಯೋ ಬಗಲಲ್ಲಿಯೋ ಇಟ್ಟುಕೊಂಡು ನಮ್ಮೊಂದಿಗೆ ಅವರೇ ಇದ್ದಾರೆ ಎಂದುಕೊಂಡು ತೃಪ್ತಿ ಪಡುವಂತೆ, ದೇವರನ್ನು ಯಾವುದೋ ರೂಪದಲ್ಲಿ ಕಂಡುಕೊಂಡು ಸಮಸ್ಯೆಯನ್ನು ಪರಿಹರಿಸುವ ತೃಪ್ತಿಯೊಂದಿಗೆ ಇದ್ದರೂ ಅಂತರಾತ್ಮ ಹೇಳುತ್ತದೆ. ಅದಲ್ಲ ಇನ್ನೊಂದು ಇದೆ ಮತ್ತೆ ಸಮಸ್ಯೆಯಾಗಿಯೇ ಉಳಿದು ಬಿಡುತ್ತದೆ. ಹಾಗಾಗಿ ಅಜ್ಜ ಹೇಳಿದ ಸರಳ ಉತ್ತರದಲ್ಲಿ ಅಗಾಧವಾದ ಅರ್ಥವನ್ನು ಅರ್ಥವಿಸಿಕೊಂಡಿದ್ದೇನೆ.  

ಜೀವನದಲ್ಲಿ ನಾವು ಬಹಳಷ್ಟನ್ನು ಗಳಿಸುತ್ತೇವೆ. ಸಂಪತ್ತು ಬಂಧುಗಳು ಸ್ನೇಹಿತರು ಶತ್ರುಗಳು...ಆದರೆ ಇದಾವುದನ್ನೂ ನಾವು ಉಳಿಸಿಕೊಳ್ಳುವುದಿಲ್ಲ. ಇದೆಲ್ಲವನ್ನು ಕಳೆದುಕೊಳ್ಳುತ್ತೇವೆ. ನಾವು ನಾವಾಗಿಯೇ ಉಳಿದುಬಿಡುತ್ತೇವೆ.  ಗಳಿಕೆ ಎಂದರೆ ಅದೊಂದು ಸಮಸ್ಯೆ.  ಸಮಸ್ಯೆಯನ್ನು ಕಳೆದುಕೊಳ್ಳಬೇಕು. ಬದುಕಿನ ತತ್ವ ಎಂದರೆ ಕಳೆದುಕೊಳ್ಳುವುದು. ಕಳೆದು ಕಳೆದು ಕ್ಷಯವನ್ನು ಅನುಭವಿಸುತ್ತಾ ಮೋಕ್ಷಗಮ್ಯವಾಗುದರಲ್ಲಿರುವ ತತ್ವವೆಂದರೆ ಅದು ಕಳೆದುಕೊಳ್ಳುವುದು. ಲೌಕಿಕ ಚಿಂತನೆಯಲ್ಲಿ ಎಲ್ಲವನ್ನೂ ಗಳಿಸುವತ್ತ ಗಮನಹರಿಸಿದರೆ ಗಳಿಸುತ್ತಾ ಗಳಿಸುತ್ತಾ  ಒಂದನ್ನು ಕೂಡಿಟ್ಟರೆ ಅದರಲ್ಲಿ ಮತ್ತೊಂದು ನಮಗರಿವಿಲ್ಲದೇ ನಾವು ಕಳೆದುಕೊಂಡುಬಿಡುತ್ತೇವೆ. ಗಳಿಸಿದ್ದನ್ನು ಕೂಡಿಡಬೇಕಿದ್ದರೆ ಮತ್ತೊಂದು ಕಳೆದುಕೊಳ್ಳಲೇಬೇಕು. ನಮಗೆ ಕೂಡಿಡಲು ಸೀಮಿತವಾದ ಜಾಗಮಾತ್ರ ಇರುತ್ತದೆ.  ಕ್ಷಯ ಎಂಬುದು ಬದುಕಿನ ಸಾರ್ವತ್ರಿಕ ತತ್ವ. ಎಲ್ಲವನ್ನು ಕಳೆದ ಮೇಲೆ ಸಿಗುವ ಒಂದು ಬಗೆಯ ಗಳಿಕೆ ಅದು ನಿರ್ದಿಷ್ಟವಾಗಿ ಅರಿವಿಲ್ಲದೇ ಇದ್ದರೂ ಎನೋ ಒಂದು ಗಳಿಸುತ್ತೇವೆ ಎಂಬ ನಂಬಿಕೆಯೇ ಬದುಕಿನ ಚೈತನ್ಯವಾಗಿರುತ್ತದೆ. ವರ್ತಮಾನದ ಒಂದೊಂದು ಘಳಿಗೆಗಳನ್ನು ಭೂತಕ್ಕೆ  ಸಲ್ಲಿಸಿ ಭವಿಷ್ಯದ ಅಂಗವನ್ನು ಗಳಿಸುತ್ತಾ ಸಾಗುವಾಗ ನಾವು ಕಳೆಯುವುದರ ಅರಿವೂ ಇರುವುದಿಲ್ಲ,  ಗಳಿಸಿದ ಅರಿವೂ ಇರುವುದಿಲ್ಲ ಮಾತ್ರವಲ್ಲ ವರ್ತಮಾನ ನಮ್ಮ ಕೈಯಲ್ಲಿಯೂ ಉಳಿಯುವುದಿಲ್ಲ. 

ದೇವೆರು ಎಂದರೆ ಕಣ್ಣಿಗೆ ಇಡುವ ಕನ್ನಡಕದಂತೆ. ಕಣ್ಣಿನ ಎದುರೇ ಇದ್ದರೂ ಅದು ಇಲ್ಲದ ಭ್ರಮೆಯನ್ನು ಸೃಷ್ಟಿಸುತ್ತದೆ. ಗಾಜಿನ ಬಣ್ಣ ಬದಲಾದಂತೆ ಕಾಣುವ ದೃಷ್ಟಿಯೂ ಬದಲಾಗುತ್ತದೆ. ನಮ್ಮಲ್ಲೇ ಇದ್ದರೂ ನಮ್ಮಲ್ಲಿ ಇಲ್ಲದ ಭ್ರಮೆಯನ್ನು ಸೃಷ್ಟಿಸುತ್ತದೆ.  ಮನಸ್ಸಿನಲ್ಲಿದ್ದ ದೇವರನ್ನು ನಾವು ಅರಿಯಬೇಕಾದರೆ ಎಲ್ಲವನ್ನೂ ಕಳೆದುಕೊಳ್ಳಬೇಕು. 

ಮೊದಲು ಋಷಿಗಳು ತಪಸ್ಸಿಗೆ ಕಾಡಿಗೆ ಹೋಗುತ್ತಿದ್ದರು. ಯಾಗ ಯಜ್ಞ ಪೂಜೆ ಹವನದಲ್ಲಿ ಕಾಣಿಸದ ದೇವರನ್ನು ಕಾಣುವುದಕ್ಕೆ ಕಾಡಿನಲ್ಲಿ ಹೋಗಿ ಏಕಾಂತದ ತಪಸ್ಸಿಗೆ ಕುಳಿತು ಬಿಡುತ್ತಿದ್ದರು. ಯಾಗ ಯಜ್ಞದಲ್ಲಿ ಸಿಗದ ಏಕಾಗ್ರತೆ ಕಾಡಿನ ಏಕಾಂತದಲ್ಲಿ ಸಿಗುತ್ತದೆ. ಯಾವ ನೈವೇದ್ಯ ಪೂಜೆ ಇಲ್ಲದೆ ಕೇವಲ ತಪಸ್ಸಿನಿಂದ ದೇವರನ್ನು ಕಾಣುತ್ತಾರೆ. ದೇವರು ಬಾಹ್ಯವಾದ ಯಾವ ಆಡಂಬರದಲ್ಲು ಇರುವುದಿಲ್ಲ, ಕೇವಲ ಅಂತರಂಗದ ಭಾವದಲ್ಲಿ ಆತನ ಅಸ್ತಿತ್ವ ಇರುತ್ತದೆ. ಪೂಜೆ ಪುನಸ್ಕಾರಗಳಲ್ಲಿ ಸಿಗದ ಏಕಾಗ್ರತೆ ಸುಮ್ಮನೆ ಕುಳಿತು ನಾಮಸ್ಮರಣೆ ಧ್ಯಾನದಿಂದ ದೇವರನ್ನು ಕಾಣುವುದಕ್ಕೆ ಸಾಧ್ಯವಿದೆ. ಇದರ ಅರ್ಥ ಪೂಜೆ ಪುನಸ್ಕಾರಗಳು ಅವಶ್ಯಕತೆ ಇಲ್ಲ ಎಂದಲ್ಲ, ಅವೆಲ್ಲ ಸಾಗುವ ಹಾದಿಯ ಪೂರಕ ಮಾಧ್ಯಮಗಳು ಅಷ್ಟೆ. ಬುಡದಲ್ಲಿ ವಿಸ್ತಾರವಾಗಿ ಹಬ್ಬಿದ ಮರ ಬೆಳೆದು ಬೆಳೆದು ತುದಿಯಲ್ಲಿ ಸಪುರವಾದಂತೆ ಕೊನೆಯಲ್ಲಿ ಉಳಿಯುವುದು ಒಂದೇ ತಪಸ್ಸು ಮಾತ್ರ.  ಪರೋಕ್ಷವಾಗಿ ಆಡಂಬರ ಇದ್ದಲ್ಲಿ ದೇವರ ಅಸ್ತಿತ್ವ ಇರುವುದಕ್ಕಿಂತಲೂ ಸರಳವಾಗಿ ಇರುವಲ್ಲಿ ದೇವರ ಅಸ್ತಿತ್ವ ಗಾಢವಾಗಿ ಅನುಭವಕ್ಕೆ ಬರುತ್ತದೆ. ಬದುಕಿನ ಸಂಧ್ಯೆಯ ರುಗ್ಣಾವಸ್ಥೆಯಲ್ಲಿ ಮಲಗಿದಾಗ ಎಲ್ಲವನ್ನು ಕಳೆದುಕೊಂಡು ಕೇವಲ ಪರಮಾತ್ಮ ಸಾನ್ನಿಧ್ಯ ಮಾತ್ರ ಉಳಿಸಿಕೊಂಡಿರುತ್ತೇವೆ. 

ಬಹಿರಂಗವಾಗಿ ನಾವು ನಾರಾಯಣ ಶಂಕರ ಗಣಪತಿ ದುರ್ಗೆ ಹೀಗೆ ನಮಗೆ ತೋಚಿದಂತೆ, ನಮ್ಮ ಭಾವದಲ್ಲಿ ಸೀಮಿತವಾಗಿ ಪರಮಾತ್ಮನ ನಾಮಸ್ಮರಣೆ ಉಚ್ಚರಿಸುತ್ತೇವೆ. ಬಹಿರಂಗದಲ್ಲಿ ವಿವಿಧ ಭಾವವಿದ್ದರೂ ಅಂತರಂಗದಲ್ಲಿ ಒಂದೇ ಭಾವ, ನಾವು ಯಾರನ್ನು ಶಂಕರ ಎನ್ನುತ್ತೇವೆಯೋ ನಾರಾಯಣ ಎನ್ನುವಾಗಲು ಅದೇ ಭಾವವನ್ನೇ ಕೂಗುತ್ತೇವೆ. ಬಹಿರಂಗದಲ್ಲಿ ವೆತ್ಯಾಸ ಇದ್ದರೂ ಅಂತರಂಗದಲ್ಲಿ ಅವೆಲ್ಲವೂ ಒಂದೇ ಆಗಿರುತ್ತದೆ. ಆದರೆ ಇವೆಲ್ಲವನ್ನು ಸ್ಮರಿಸುವಾಗ ಸಿಗದ ಏಕಾಗ್ರತೆ ಕೇವಲ ಓಂ ಕಾರದ ಉಚ್ಚಾರದಲ್ಲಿ ಸಿಗುತ್ತದೆ ಎಂದರೆ ದೇವರು ಸರಳವಾದ ಕ್ರಿಯೆಗೆ ಸ್ಪಂದಿಸುತ್ತಾನೆ.   ಆಡಂಬರ ಅಧಿಕವಾದಂತೆ ಏಕಾಗ್ರತೆ ಕುಂಠಿತಗೊಳ್ಳುತ್ತದೆ. ಇದು ನನ್ನ ಅನುಭವ.  ಸರಳತೆಯಲ್ಲಿ  ದೇವರು  ತನ್ನ ಅಸ್ತಿತ್ವವನ್ನು ತೋರಿಸಿಬಿಡುತ್ತಾನೆ. ಅವನು ಕಾಣುತ್ತಾನೆ ಎನ್ನುವುದಕ್ಕಿಂತ ನಮ್ಮ ಭಾವ ಸೂಕ್ಷ್ಮವಾದಷ್ಟೂ ಪ್ರಖರವಾಗುತ್ತದೆ. 

ಯಾವುದೆ ವಸ್ತು ಅಥವ ವ್ಯಕ್ತಿಯ ಬಗೆಗಿನ ಅರಿವು ಅದರಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ. ಒಬ್ಬರನ್ನು ಸಂಪೂರ್ಣ ಅರಿತಿದ್ದರೆ ಅವರ ಮೇಲಿನ ಪ್ರೀತಿ ಮತ್ತು ವಿಶ್ವಾಸವನ್ನು ಗಾಢವಾಗಿಸುತ್ತದೆ. ಅದೇ ರೀತಿ ಜ್ಞಾನ ಭಕ್ತಿಯ ದೃಢತೆಯನ್ನು ಹೆಚ್ಚಿಸುತ್ತದೆ.  ಅರಿವಿನಿಂದ ಅಥವಾ ಜ್ಞಾನದಿಂದ ಬರುವ  ಭಕ್ತಿ  ಶಾಶ್ವತವಾಗಿರುತ್ತದೆ. ಇನ್ನಿತರ ಪ್ರಭಾವದಿಂದ ಪ್ರಚೋದಿಸಲ್ಪಡುವ ಭಕ್ತಿ ತಾತ್ಕಾಲಿಕವಾಗಿರುತ್ತದೆ. ಹಾಗಾಗಿ ದೇವರು ಎಂಬ ಸಂಪೂರ್ಣ ಜ್ಞಾನ ಪರಮಾತ್ಮನ ಮೇಲಿನ ಭಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲಿ ಭಕ್ತಿ ಹೆಚ್ಚು ಸುರಕ್ಷಿತವಾಗಿರುತ್ತದೆ. ಮನಸ್ಸು ವಿಚಲಿತವಾಗುವುದಿಲ್ಲ. 

ಮನಸ್ಸು ಸ್ವಚ್ಛವಾಗಿದ್ದಷ್ಟು ಏಕಾಗ್ರತೆ ಸುಲಭವಾಗುತ್ತದೆ. ದೈವಾನುಭವಕ್ಕೆ ಈ ಏಕಾಗ್ರತೆ ಅತ್ಯವಶ್ಯ. ಮನಸ್ಸು ಸ್ವಚ್ಛವಾಗಿರಬೇಕು.  ಮನಸ್ಸಿನ ಸ್ವಚ್ಛತೆ ಅದು ನಮ್ಮ ಸ್ವ ಪ್ರಯತ್ನದಲ್ಲೇ ಇರುತ್ತದೆ. ಒಂದು ಮಾರ್ಜಕ ಅಥವಾ ಸಾಬೂನು ಮಲೀನವಾಗಿದ್ದರೆ ಸ್ವಚ್ಛಮಾಡುವುದಕ್ಕೆ ಇನ್ನೊಂದು ಸಾಬೂನಿನ ಅವಶ್ಯಕತೆ ಬೇಕಾಗುವುದಿಲ್ಲ. ನೀರಲ್ಲಿ ಕರಗುತ್ತಾ ಕರಗುತ್ತಾ ಸಾಬೂನು ತಾನೆ ಸ್ವಚ್ಛವಾಗುತ್ತದೆ. ಹಾಗೆ ಮನಸ್ಸು ಪರಮಾತ್ಮನ ಧ್ಯಾನದಲ್ಲಿ ಮನಸ್ಸು ಸ್ವಯಂ ಸ್ವಚ್ಛವಾಗುತ್ತದೆ.  ಧ್ಯಾನದಲ್ಲಿ ಎಲ್ಲವೂ ನಷ್ಟವಾಗುತ್ತದೆ. ಪರಿಸರ,  ಅಸ್ತಿತ್ವ , ನಮ್ಮದು ಎನಿಸಿಕೊಳ್ಳುವ ಪ್ರತಿಯೊಂದೂ ನಷ್ಟವಾಗುತ್ತದೆ. ಮುಖ್ಯವಾಗಿ ನಾನು ಎಂಬ ಅಹಂ ಕಳೆದುಹೋಗುತ್ತದೆ.  ಇಲ್ಲಿ ನಷ್ಟವಾಗುವಾಗ ಧ್ಯಾನದಲ್ಲಿ ಸಿಗುವ ಲಾಭ ಇದೆಲ್ಲವನ್ನು ಮೀರಿಸಿಬಿಡುತ್ತದೆ. ಹಾಗಾಗಿ ದೇವರು ಎಂದರೆ ಅದು ನಮ್ಮ ಅಹಂ ನ್ನು ಕಳೆಯುವ ಒಂದು ಸಾಧನ. ಜಗತ್ತಿನಲ್ಲಿ ಎಲ್ಲವೂ ನಮ್ಮದಾಗಿರಬಹುದು. ಅಥವಾ ನಮ್ಮ ಅಹಂಕಾರದಲ್ಲಿ ಎಲ್ಲವೂ ನಮ್ಮದು ಎಂದು ಕೊಳ್ಳಬಹುದು. ಆದರೆ ನಮ್ಮದಲ್ಲದ ಒಂದು ಒಂದು ಭಾವವೇ ದೇವರು. ದೇವರು ಎಂದರೆ ನಮ್ಮ ಅಹಂಕಾರವನ್ನು ದೂರ ಮಾಡುವ ವಸ್ತು.  ಇಲ್ಲಿ ನಾನು  ನನ್ನದು ಏನು ಅಲ್ಲ. ನನ್ನದಲ್ಲದ ಒಂದು ವಿಷಯವೇ ದೇವರು ಎಂಬ ಭಾವ ಬರುತ್ತದೆ.  ಕಾಮ ಕ್ರೋಧ ಮದ ಮೋಹ ಲೋಭ ಮತ್ಸರ ಎಂಬ ಷಡ್ವೈರಗಳು  ಬಾಧಿಸುವಾಗ  ಪರಮಾತ್ಮನ ನೆನಪೂ ದೂರವಾಗುತ್ತದೆ.  ಈ ಅಹಂಕಾರದಿಂದ ದೂರವಾಗಬೇಕು.     ಅಂತಿಮವಾಗಿ ನನ್ನದಲ್ಲದ ದೇವರೂ ಅದು ನನ್ನದು ಎಂದು ಪ್ರಚೋದನೆಯಾದರೆ ನಮ್ಮೊಳಗಿನ ಪರಮಾತ್ಮನ ಅಸ್ತಿತ್ವ ಅರಿವಿಗೆ ಬರುತ್ತದೆ. ನಾನು ಬೇರೆಯಲ್ಲ ದೇವರು ಬೇರೆಯಲ್ಲ ಎಂಬ ಅದ್ವೈತ ಭಾವ  ಪ್ರಚೋದನೆಗೊಳ್ಳುವಾಗ ಮನಸ್ಸಿನ ಅಹಂಕಾರ ದೂರವಾಗಿರುತ್ತದೆ.  

ನಮ್ಮೊಳಗಿನ ದೇವರ ಅಸ್ತಿತ್ವದ ಅರಿವಾದಾಗ ಬಾಹ್ಯವಾಗಿರುವ ಎಲ್ಲವೂ ನಾಶವಾಗುತ್ತದೆ. ಆಗ ಅಜ್ಜ ಹೇಳಿದಂತೆ ದೇವರನ್ನು ವಿಸರ್ಜಿಸಬೇಕು.  ಇಲ್ಲಿ ಎಲ್ಲವನ್ನು ಗಳಿಸುತ್ತೇವೆ. ಎಷ್ಟು ಗಳಿಸಿದರೇನು ಕಳೆದುಕೊಳ್ಳದ ಒಂದನ್ನೂ ನಾವು ಗಳಿಸುವುದಿಲ್ಲ.  ಒಂದನ್ನೂ  ನಮ್ಮಲ್ಲಿ ಉಳಿಸಿಕೊಳ್ಳಲಾಗದ ಅಸಮರ್ಥ ಸ್ಥಿತಿಯೂ ಇರುತ್ತದೆ. ಎಲ್ಲವನ್ನು ಕಳೆದುಕೊಳ್ಳುವಾಗ ನಮ್ಮಲ್ಲಿರುವುದೇನು ಎಂದು ಯೋಚಿಸಿದರೆ ಅದೊಂದೇ,  ಅದು ಪರಮಾತ್ಮ.  

No comments:

Post a Comment